ಇದು ಮುನ್ನುಡಿಯಲ್ಲ…
ಇದು ಮುನ್ನುಡಿಯಲ್ಲ, ಅಂದರೆ ನೀವು ಇದನ್ನು ಮೊದಲು ಓದಿಯೇ ಈ ಸಂಕಲನ ಪ್ರವೇಶಿಸಬೇಕೆಂದಿಲ್ಲ. ಮೊದಲು-ಕೊನೆ ಇರದ ದಾರಿಯನ್ನು ಯಾವಾಗ ಬೇಕಾದರೂ ತಲುಪಿ ಆರಾಮಾಗಿ ನಡಕೊಂಡು ಹೋಗಬಹುದು. ಪ್ರಕಾಶ ಖಾಡೆಯವರ ಈ ನಾಲ್ಕನೆಯ ಕವನ ಸಂಲನದ ರೀತಿಯೇ ಅಂಥದು.
೧೯೮೦ರ ದಶಕದಲ್ಲಿಯೇ ಪ್ರಕಾಶ ಕವನ ಬರೆಯಲು ಶುರು ಮಾಡಿದರು. ಆಗ ಕರ್ನಾಟಕ ವಿಶ್ವವಿದ್ಯಾಲಯದ ವಿದ್ಯಾರ್ಥಿ. ನಂತರ ಮೂರುವರೆ ದಶಕಗಳ ಬೀಸಿನಲ್ಲಿ ರೂಪ ಪ್ರಧಾನವಾದ ನವ್ಯ ಕಾವ್ಯ ಬಂದು ಹೋಗಿದೆ; ಆಶಯ ಪ್ರಧಾನವಾದ ಬಂಡಾಯ ಕಾವ್ಯವೂ ಬಂದು ಹೋಗಿದೆ. ಈಗ ಕನ್ನಡ ಕಾವ್ಯ ಯಾವುದೇ ಚೌಕಟ್ಟಿಗಾಗಲಿ, ಶೀರ್ಷಿಕೆಗಾಗಲಿ ಸಿಗದ ಹಾಗೆ ಅನೇಕ ನೆಲೆಗಳಲ್ಲಿ ಬದಲಾಗುತ್ತಿದೆ. ಸಾಹಿತ್ಯದ ಜಾಯಮಾನವೇ ಅದು.
ಇಲ್ಲಿಯ ಕವನಗಳಿಗೆ ಶೀರ್ಷಿಕೆ ಇಲ್ಲ, ಒಂದೇ ಪ್ರವಾಹದ ಅನೇಕ ಅಲೆಗಳಂತೆ ಈ ರಚನೆಗಳು ಕಾಣುತ್ತವೆ, ಕೇಳಿಸುತ್ತವೆ. ಆದರೆ ಒಂದು ನಿಟ್ಟಿನಿಂದ ನೋಡಿದರೆ ಇಲ್ಲಿ ಒಳ ವಿನ್ಯಾಸಗಳ ವೈವಿಧ್ಯತೆಯೂ ಇದೆ. ಹೀಗಾಗಿ ಏಕತಾನದ ಬೇಸರವಿಲ್ಲ.
ಒಂದು ಪುಟ ಮೀರದ ಈ ಕವನಗಳ ಪರಿ ಇದು; ಲಯಬದ್ಧವಾಗಿ ಹೇಳಿಕೆಗಳ ಕ್ರಮ, ನಂತರ ಒಂದು ತಿರುವು ಮತ್ತು ಕೊನೆ. ಈ ಕೊನೆಯ ನಂತರ ಮತ್ತೇ ಮೊದಲ ಸಾಲಿಗೇ ಮರಳಬೇಕು- ಮತ್ತೊಂದು ಅರ್ಥಕ್ಕಾಗಿ. ೧೨ನೇ ಶತಮಾನದ ವಚನಗಳಲ್ಲಿ ಇಂಥ ವಿನ್ಯಾಸ ನಮಗೆ ಪರಿಚಿತವೇ. ಮಾದರಿಗಾಗಿ ಈ ಕವನ ನೋಡಿ..
ಕಿತ್ತು ಹಾಕಿದ್ದೇನೆ
ಒಂದಿಷ್ಟು ಕಸವನ್ನು
ಭೂತಾಯಿಗೆ ಒಳಿತಾಗಲೆಂದು.
ಕಿತ್ತು ಹಾಕಿದ್ದೇನೆ
ಒಂದಿಷ್ಟು ಕನಸುಗಳನ್ನು
ಸವಿ ನಿದ್ದೆಗೆ ಭಂಗಬಾರದಿರಲೆಂದು,
ಕಿತ್ತಷ್ಟು ಬೆಳೆವ ಕಸಕ್ಕೆ
ಹೇಳದೆ ಬರುವ ಕನಸಿಗೆ
ತೆರೆದಷ್ಟು ಆಕಾಶ, ಉಳಿದಷ್ಟು ಪ್ರಕಾಶ.
ಈ ರಚನೆಗಳಲ್ಲಿ ನಾನು ಎಂಬುದೇ ಮುಖ್ಯ ದನಿಯಾಗಿದ್ದರೂ, ನಾವು-ಅವನು-ಅವರು-ಅವಳು-ನೀವು ಹೀಗೆ ಎಲ್ಲ ಸರ್ವನಾಮಗಳೂ ಅವತರಿಸಿ ಒಂದು ಬಗೆಯ ಸಾರ್ವಕಾಲಿಕತೆ ವ್ಯಾಪಿಸಿಕೊಂಡಂತಿದೆ. ಪ್ರಕಾಶ ಖಾಡೆ ಮೂರ್ತ ಅನುಭವ ದಾಟಿ ಅಮೂರ್ತ ಅನುಭಾವದೆಡೆಗೆ ಸಾಗುತ್ತಿರಬಹುದೇ? ಎಂಬ ನಿರೀಕ್ಷೆ! ಆತಂಕ ನನ್ನದು. ಕೊನೆಯ ಎರಡು ಕವನಗಳಲ್ಲಿ ಬರುವ ಕಲಬುರ್ಗಿ ಸರ್ ಮತ್ತು ಸಾಲು ಮರದ ತಿಮ್ಮಕ್ಕ- ನಮ್ಮನ್ನು ಮತ್ತೆ ಭೂಮಿಯ ಕಡೆಗೆ ಕರೆದುಕೊಂಡು ಬರುವಂಥವು.
*
ಇದು ಮುನ್ನುಡಿಯಲ್ಲ- ಅಂತ ಮೊದಲೇ ಹೇಳಿರುವೆ. ಅಂದರೆ ಇಲ್ಲಿ ತಕ್ಕಡಿ ವ್ಯವಹಾರವಿಲ್ಲ. ಕಾವ್ಯದ ಅನುಭವ ತಕ್ಕಡಿಯ ಪರಡಿಗಳ ಏರು ಪೇರುಗಳಿಗೆ ಮೀರಿದ್ದು. ದಾರಿಗುಂಟ ಸಾಗಿದಾಗ ನನ್ನನ್ನು ಹಕ್ಕಿಗಳಂತೆ ಸವರಿಕೊಂಡು ಹೋದ ಕೆಲವು ಸಾಲುಗಳಿವು:
ಬದುಕು ಉಣದವರ ಹಸಿವಿಗೆ
ಏನು ಕೊಟ್ಟರೂ ತುಂಬದ ಹೊಟ್ಟೆ.
ಸೂರ್ಯ ಸತ್ಯ ಚಂದ್ರ ಸತ್ಯ
ಬದುಕು ಬಂಡಿಗೆ ನೊಗ ಹೊತ್ತವರ ನೋವೆ ನಿತ್ಯ.
ನೀನು ತಂದೆ ನಾನು ಬಂದೆ
ಈಗ ನಾನೂ ತಂದೆ.
ಕಟ್ಟುವ ಕೆಲಸ ಯಾರಾದರೂ ಮಾಡಲಿ ಬಿಡಿ
ಕೆಡಹುವ ಕೆಲಸ ಕವಿ ಮಾಡಲಾರ
ಎಸೆದ ಕಲ್ಲಿಗೆ
ಗುರಿಯಷ್ಟೇ ಗೊತ್ತು
ಪೆಟ್ಟ ತಿಂದವರ ಆರ್ತನಾದ ಕೇಳದು.
ನೂರು ಸಾಸಿರ ಕಾಲ ಬದುಕಿಕೊಂಡವರ ದಾರಿಗೆ
ಮುಳ್ಳು ಹಚ್ಚಿದವರೂ ಉಳಿದಿಲ್ಲ ಎಲ್ಲೂ,
ನಿಮ್ಮ ಮನಸಲಷ್ಟು ಜಾಗ ಕೊಡಿ
ಶಾಂತಿ ಬೀಜಗಳ ಊರಿ ಸಂಭ್ರಮಿಸುವೆ.
ಗೊತ್ತಿದ್ದು ಬೆಳಕಲ್ಲಿ ಎಡವುತ್ತೇವೆ
ಎದಿರು ಬಂದವರಿಗೆ ಹಾಯಲು ಕತ್ತಲೆಯೇ ಇರಬೇಕಿಲ್ಲ
*
ಊಹೆಗೂ ನಿಲುಕದ ರೀತಿಯಲ್ಲಿ ಈ ಕವಿ ಬೆಳೆಯುತ್ತಿದ್ದಾರೆ.
ಬೆಂಗಳೂರು, ೧೪ ಸಪ್ಟಂಬರ್ ೨೦೧೮ –ಚಂಪಾ
ಪ್ರಸ್ತಾವನೆ
ಕನ್ನಡ ಕಾವ್ಯಕ್ಷೇತ್ರ ಇಂದು ಹೊಸ ಹೊರಳಿನಲ್ಲಿ ತನ್ನ ಮಗ್ಗಲು ಬದಲಿಸಿಕೊಳ್ಳುತ್ತಿದೆ. ಈ ಪ್ರಕ್ರಿಯೆಯಲ್ಲಿ ತುಂಬಾ ಗಾಢವಾಗಿ ಕಾಡುವ ಕವಿತೆಗಳನ್ನು ನೀಡುತ್ತಿರುವ ಕವಿ ಡಾ. ಪ್ರಕಾಶ ಖಾಡೆ. ಅವರ ಶಾಂತಿ ಬೀಜಗಳ ಜತನ ಕಾವ್ಯ ಸಂಕಲನವು ಹಲವು ಸಾಧ್ಯತೆಗಳನ್ನು ಹೊಸ ಕಾಲದ ಕಾವ್ಯಕ್ಕೆ ಹೊಸ ತೊರೆಯೊಂದರ ಪ್ರವೇಶ ನೀಡಿದೆ. ಡಾ. ಖಾಡೆಯವರ ಬತ್ತದ ಸಾಹಿತ್ಯದ ಒಲವಿಗೆ ಮೂಲ ಕಾರಣವೇ ಒಂದು ಅಪ್ಪ ಗಣಪತಿ ಖಾಡೆ ಮತ್ತೊಂದು ನೆಲಮೂಲ ಜಾನಪದದ ಕುರಿತ ಅದಮ್ಯ ಪ್ರೀತಿ. ಸಂಶೋಧನೆಯ ನೆಪಕ್ಕಾಗಿ ಡಾ. ಖಾಡೆ ಆಯ್ದುಕೊಂಡ ಪಿಎಚ್.ಡಿ. ವಸ್ತು ವಿಷಯವೇ ನವೋದಯ ಕಾವ್ಯದ ಮೇಲೆ ಜಾನಪದ ಪ್ರಭಾವ. ಮನೆಯಲ್ಲಿ ಪ್ರೇರಕಶಕ್ತಿಯಾದ ಅಪ್ಪನೂ ಸಹ ಜಾನಪದದ ಬಹುಮುಖ್ಯ ಸಂಪನ್ಮೂಲ. ಬಹುಶಃ ಜಾನಪದ ತನ್ನನ್ನು ತಾನು ತೆರೆದುಕೊಳ್ಳಲು ತಂದೆ ಶ್ರೀ ಗಣಪತಿ ಖಾಡೆಯವರ ಬಹುತೇಕ ಜೀವನ ಮತ್ತು ಪ್ರಕಾಶ ಖಾಡೆಯವರ ಆರಂಭಿಕ ಜೀವನವನ್ನು ಆಯ್ದುಕೊಂಡಿತೇನೋ ಹೀಗಾಗಿಯೇ ಇಬ್ಬರೂ ಜನಪದ ಕ್ಷೇತ್ರಕ್ಕೆ ಇನ್ನಿಲ್ಲದ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಕವನದ ಸಾಲುಗಳೇ ಹೇಳುವಂತೆ…
ನಡೆಯಲು ಬಂದಾಗಿನಿಂದಲೂ
ಗಡಿ ಸೀಮೆಗಳ ಅಳಿಸಿ
ಸುತ್ತಿ ಸುಳಿಯಬೇಕೆಂದಿದ್ದೇನೆ
ಎಷ್ಟೊಂದು ಬೇಲಿಗಳು
ತಲೆ ಎತ್ತಿವೆ ಇಲ್ಲಿ
ಎಂಬ ಸರಳ ಆತಂಕದ ಜೊತೆಗೆ
ನಾನು ಸತ್ಯವನ್ನು
ಸುಳ್ಳು ಮಾಡಲು ನೋಡಿದೆ
ಅದೆಷ್ಟು ಸತ್ಯಗಳು ಸುಳ್ಳಾಗಿ ಕುಳಿತಿದ್ದವು
ನಾನು ಬಿಳಿಯ ಮನಸ್ಸುಗಳ
ಕಪ್ಪಾಗಿಸಲು ನೋಡಿದೆ
ಅದೆಷ್ಟು ಮನಸ್ಸುಗಳು ಕಪ್ಪಾಗಿಯೇ ಇದ್ದವು
ಎಂದು ಗಂಭೀರ ಚಿಂತನೆಗೆ ತೊಡಗಿಸುತ್ತವೆ. ಕಾರಣ ಸಮಾಜದಲ್ಲಿ ಒಳಿತಷ್ಟೇ ಅಲ್ಲ ಕೆಡುಕು ಕೂಡಾ ಕಾಲಗಳ ಪರಿವೆಯಿಲ್ಲದೆ ಶಾಸನ ಬರೆದುಕೊಂಡು ಕುಳಿತಿದೆ ಎಂಬ ನಿಷ್ಟೂರ ಸತ್ಯ ಕವನ ಸಂಕಲನದ ಬಹುತೇಕ ಕವಿತೆಗಳಲ್ಲಿ ಸಾಬೀತಾಗುತ್ತದೆ.
ಪಂಪನ ಆದಿ ಪುರಾಣದಲ್ಲಿ ಇಡೀ ಭೂಮಂಡಲವನ್ನೇ ಗೆದ್ದು ಬಂದ ಭರತ ಕೊನೆಗೆ ತನ್ನ ಶಾಶ್ವತ ಸಾಧನೆಯ ಕುರುಹು ಉಳಿಯಲೆಂದು ಶಾಸನ ಬರೆಯಿಸಲು ಮುಂದಾಗುತ್ತಾನೆ. ಆಗಲೇ ಹಾಗೆ ಭೂಮಂಡಲ ಗೆದ್ದು ಅಳಿದು ಹೋದವರ ಸಾಲು ಸಾಲು ಸಾಧನೆ ಮಾಡಿದ ವ್ಯಕ್ತಿಗಳ ಹೆಸರು ಅಲ್ಲಿ ದಾಖಲಾಗಿ ಭರತ ತನ್ನ ಹೆಸರು ಬರೆಯಿಸಲು ಜಾಗವಿಲ್ಲದೆ, ಕೊನೆಗೆ ಒಬ್ಬ ಸಾಧಕನ ಹೆಸರು ಅಳುಕಿಸಿ ತನ್ನ ಹೆಸರು ಪ್ರತಿಷ್ಠಾಪಿಸುತ್ತಾನೆ. ಹಾಗೆ ನಾ ನಡೆವ ದಾರಿಯಲಿ ಅದೆಷ್ಟೇ ಜನ ನಡೆದು ಹೋಗಿದ್ದರೂ ಅಲ್ಲಿ ನಾ ನಡೆದು ಹೋಗುವ ಅವಶ್ಯಕತೆಯಿಲ್ಲ ಎಂದು ಹಿಂಜರಿಯದೆ ಅದೇ ದಾರಿಯಲ್ಲಿ ಅವರೆಲ್ಲರಿಗಿಂತ ಭಿನ್ನವಾಗಿ ನಾ ಹೇಗೆ ನಡೆಯಬಲ್ಲೆ ಅನ್ನೋದೆ ಕವಿತ್ವದ ಮರು ಜೀವಂತಿಕೆಯ ಮೂಲ. ಅಂತಹ ಶಾಶ್ವತ ಫಲವಂತಿಕೆ ನೀಡಬಲ್ಲ ಬೀಜಗಳನ್ನು ಬಿತ್ತಲು ಇಲ್ಲಿಯ ಕವಿ ಮನಸ್ಸು ನಿತ್ಯ ತಡಕಾಡುತ್ತದೆ ಮತ್ತು ತೊಡಗುತ್ತದೆ ಸಹ.
ನೂರು ಸಾಸಿರ ಕಾಲ ಬದುಕಿಕೊಂಡವರ ದಾರಿಗೆ
ಮುಳ್ಳು ಹಚ್ಚಿದವರೂ ಉಳಿದಿಲ್ಲ ಎಲ್ಲೂ
ನಿಮ್ಮ ಮನಸಲಷ್ಟು ಜಾಗ ಕೊಡಿ
ಶಾಂತಿ ಬೀಜಗಳ ಊರಿ ಸಂಭ್ರಮಿಸುವೆ
ಇವರ ಎಲ್ಲ ಅಕ್ಷರಗಳಿಗೂ ಜನಪದವೇ ಕಸುವು ನೀಡುತ್ತದೆ. ನಗರದ ನಡುವಿದ್ದೂ ನೆಲದ ವಾಸನೆ ಕಳೆದುಕೊಳ್ಳದೆ ನಗರವಾಸಿಯಾಗೋದು ಈ ಹೊತ್ತಿನ ಬಹುತೇಕರಿಗೆ ದೊಡ್ಡ ಸವಾಲು. ಇತ್ತೀಚೆಗೆ ತಲೆ ಎತ್ತುತ್ತಿರುವ ಅರ್ಬನ್ ಫೋಕ್ ಆಗಿಯೂ ಇವರು ಪರಿವರ್ತನೆಗೊಳ್ಳುವುದಿಲ್ಲ. ಈ ಕಾರಣಕ್ಕೆ ಖಾಡೆಯವರ ಕವನಗಳು ಸಾಹಿತ್ಯ ವಲಯದಲ್ಲಿ ವಿಶಿಷ್ಟತೆ ಪಡೆದುಕೊಳ್ಳುತ್ತವೆ.
ಉರಿವ ಬಿಸಿಲ ಬಯಲಲ್ಲಿ
ಬೆಳೆದು ನಿಂತ ಬಿಳಿಜೋಳ ಹೊಲ ಕಾಯುವಲ್ಲಿ
ಅಪ್ಪನ ನಾಟಕಕ್ಕೆ ಬಣ್ಣ ಹಚ್ಚಿಕೊಂಡು
ರಂಗದ ತುಂಬೆಲ್ಲಾ ಒಡಾಡಿಕೊಂಡಲ್ಲಿ
ಧೋ ಧೋ ಸುರಿವ ಮಳೆಯಲ್ಲಿ
ತೋಯಿಸಿಕೊಂಡ ಪಾಠೀ ಚೀಲದಲ್ಲಿ
ಉಳಿದ ಹೆಸರು ಕಾಳು ಮರುದಿನ ಮೊಳಕೆಯೊಡೆಯುವಲ್ಲಿ
ಅವ್ವನದೇ ನೆನಪು…
ಎಂಬ ಕವನಗಳಲ್ಲಿ ಮತ್ತೆ ಮತ್ತೆ ಮೊಳಕೆ ಒಡೆಯುತ್ತಲೇ ಕವನಗಳು ಹಾತೊರೆಯುತ್ತವೆ. ಮೊಳಕೆಯೊಡೆಯುವುದು ಎಂದರೆ ಒಂದರ್ಥದಲ್ಲಿ ಒಂದರ ಅಳಿವಿನಂಚಿಗೆ ಅಂಟಿಕೊಂಡ ಮತ್ತೊಂದರ ಜನನ. ಅದು ತಾಯಿಯೂ ಆಗಬಹುದು ಅಥವಾ ಭೂತಾಯಿಯೂ ಆಗಬಹುದು. ಹೀಗೆ ಅಂತ್ಯ ಕಾಣುತ್ತಿರುವ ಎಲ್ಲ ವಸ್ತುಗಳ ಎಲ್ಲ ಕಡೆ ಹೊಸದರ ಮರು ಹುಟ್ಟು ಖಾಡೆಯವರ ಇಡೀ ಕಾವ್ಯದ ಒಟ್ಟು ಮೌಲ್ಯ ಎಂದರೂ ತಪ್ಪಾಗಲಿಕ್ಕಿಲ್ಲ.
ನಾ ಮೊದಲೇ ಹೇಳಿದಂತೆ ಖಾಡೆಯವರು ಮುರಿಯುವುದನ್ನಾಗಲಿ, ಮುರಿದು ಕಟ್ಟುವುದನ್ನಾಗಲಿ ಮಾಡಲಾರರು. ಕಟ್ಟುವುದಷ್ಟೇ ಅವರ ಕೆಲಸ ಅದೇ ಅವರ ಧ್ಯಾನ. ಹಾಗೆ ಕಟ್ಟುವಾಗಲೆಲ್ಲ ಹೊಸತೊಂದು ಹೊಳಹು ಲಭಿಸಿದಂತಾಗಿ ಒಂದು ಬಗೆಯ ಭಾವ ತಲ್ಲೀನತೆಯಲ್ಲಿ ತೇಲಿಸಿಬಿಡುತ್ತಾರೆ. ಅಂದರೆ
ಒಂದಷ್ಟು ಮಾತುಗಳ ಕಡ ತಂದಿದ್ದೇನೆ
ಕೇಳಿಸಿಕೊಳ್ಳುವವರು ಯಾರಾದರೂ ಸಿಕ್ಕಾರೆಂದು
ಒಂದಿಷ್ಟು ಒಳ್ಳೆಯ ಮನಸ್ಸುಗಳ ಕರೆದು ಕೂಡಿಸಿದ್ದೇನೆ
ಹೃದಯವಂತರು ಸಿಕ್ಕಾರೆಂದು
ಎಂದು ಕೊಡುಕೊಳ್ಳುವಿಕೆಯ ಭಾವುಕ ಅಲೆದಾಟಕ್ಕೆ ತೊಡಗುತ್ತಾರೆ. ಇವರಿಗೆ ಎದುರಿಗೆ ಸಿಗುವವರಿಗೆ ಬೆರಗು ನೀಡುವುದೊಂದು ಸೋಜಿಗದ ಕೆಲಸ, ಹಾಗೆ ಹುಡುಕುವಾಗಲೇ ಸಿಕ್ಕವರನ್ನು ಕುರಿತು ಹೇಳುತ್ತಾರೆ
ಯಾರೋ ಕಳಕೊಂಡವರಂತೆ
ಏನನ್ನೋ ಹುಡುಕುತ್ತ ಬಂದರು
ಇವು ನಿಮ್ಮವೇ ಎಂದು ಕೂಡಿಟ್ಟ ಮನಸ್ಸುಗಳ ತೋರಿಸಿದೆ
ಹೌದು ಹೌದೆಂದು ತಲೆಯಾಡಿದರು
ಎಲ್ಲವ ಕೊಟ್ಟು ಮೌನಕೆ ಶರಣಾದೆ
ಎನ್ನುತ್ತ ಕಟ್ಟುವುದರ ಕವಿಯ ಸಾರ್ಥಕ್ಯದೊಂದಿಗೆ ಸಂತಸಗೊಳ್ಳುತ್ತಾರೆ. ಇದುವೆ ಕಟ್ಟುವ ಕವಿಯೊಬ್ಬನ ಕ್ರಿಯೆ. ಆ ಕ್ರಿಯೆಗೆ ಖಾಡೆ ಅವರ ರಚನೆಗಳು ಹೇಳಿ ಮಾಡಿಸಿದ ಕವಿತೆಗಳು. ಈ ಎಲ್ಲ ಕವಿತೆಗಳಲ್ಲಿ ಮುಖ್ಯವಾಗಿ ಗಮನಿಸಲೇಬೇಕಾದ ಮತ್ತೊಂದು ವಿಶೇಷವೆಂದರೆ ಹೊಸ ಕಾವ್ಯದ ಹೊರಳುವಿನ ಆರಂಭದ ತುಡಿತ. ಜಾನಪದದ ವಾಸನೆ ಇದೆ ಆದರೆ ಜಾನಪದಗಳಲ್ಲ, ಭಾವಗೀತೆಯ ಲಯವಿದೆ ಆದರೆ ಭಾವಗೀತೆಯಲ್ಲ, ವಚನದ ಶಿಸ್ತಿದೆ ವಚನಗಳಲ್ಲ ಜೊತೆಗೆ ಬಂಡಾಯದ ಕಾವೂ ಇದೆ ಬಂಡಾಯವಿಲ್ಲ ಮತ್ತು ದಲಿತತ್ವದ ನೋವೂ ಇದೆ ದಲಿತ ಕಾವ್ಯವಲ್ಲ ಹಾಗಿದ್ದೂ ಒಂದು ಕಾವ್ಯದ ಶಿಸ್ತಿಗೆ ಒಳಗಾಗದೇ ಹಾಗೂ ಸಮನ್ವಯ ಕವಿ ಎಂಬಂತೆ ತೋರಿಸಿಕೊಳ್ಳದೆ ಒಂದು ಬಗೆಯ ಆನೆ ನಡಿಗೆಗೆ ಪ್ರಕಾಶ ಖಾಡೆ ಮುಂದಾಗಿದ್ದಾರೆ, ಇದು ಕನ್ನಡ ಕಾವ್ಯದ ಹೊಸ ಬಗೆಯ ದಾರಿಗೆ ಅನಂತ ಹೆಜ್ಜೆಗಳು.
ನನಗೆ ಮಾತುಗಳು ಕೇಳಬೇಕಿತ್ತು
ಮೌನವಿದ್ದವರ ಬಳಿಹೋದೆ
ನನಗೆ ಕೋಪಿಸಿಕೊಂಡವರ ನೋಡಬೇಕಿತ್ತು
ಮುಗುಳ್ನಗುವವರ ಬಳಿಹೋದೆ
ನನಗೆ ನೆತ್ತಿ ಸುಡುವ ಉರಿಬಿಸಿಲು ಬೇಕಿತ್ತು
ಹಾಲು ಚೆಲ್ಲಿದ ಬೆಳದಿಂಗಳ ಅರಸಿಹೋದೆ
ನನಗೆ ಈಗ ಅಸಮಾಧಾನವಿಲ್ಲ
ಹೋದಲ್ಲಿ ಬಂದಲ್ಲಿ ಸಮಾಧಾನದ ಗಾಳಿ ಬೀಸುತ್ತಿದೆ
ಹೀಗೆ ಹೇಳುತ್ತ ಹೇಳುತ್ತ ಒಂದು ಮಾತು ತೇಲಿ ಬಿಡುತ್ತಾರೆ. ಆ ಮಾತು ಇಡೀ ಕವನದ ಆಶಯವನ್ನೇ ಎತ್ತಿತಂದು ನಮ್ಮ ಮುಂದಿಡುತ್ತದೆ. ಅದುವೆ ಖಾಡೆಯವರ ಬಹುದೊಡ್ಡ ಭರವಸೆ. ಆ ಮಾತೆಂದರೆ ದೇವರೆಂಬುವವರು ಮನುಷ್ಯರಾಗಿದ್ದಾರೆ ಅನ್ನೋದು. ಹೀಗೆ ಅನಂತ ಭರವಸೆಗಳ ಬೆನ್ನು ಹತ್ತಿದ ಕವಿ ಕೇವಲ ಭರವಸೆಗಳನ್ನಷ್ಟೇ ಓದುಗರಿಗೆ ಬೋಧಿಸುವುದಿಲ್ಲ. ಬದಲಾಗಿ ಅಲ್ಲಲ್ಲಿ ಯೋಚಿಸೋದು ಅಥವಾ ಕವಿ ಮನಸ್ಸಿನಿಂದ ಆಘ್ರಾಣಿಸೋದು ಎಷ್ಟರ ಮಟ್ಟಿಗೆ ಸರಿ ಎನ್ನುವ ವಿಮರ್ಶೆಗೆ ಒಳಗಾಗುತ್ತಾರೆ. ಅದಕ್ಕೆ ಪೂರಕವೆಂಬಂತೆ
ನನ್ನ ಚೆಲುವನ್ನಷ್ಟೇ
ನನಗೆ ಒಪ್ಪಿಸುವ ಕನ್ನಡಿಯೇ
ಒಂದಷ್ಟು ಕಾಲ ವಿರಮಿಸು
ಮನದ ಕನ್ನಡಿಯ ಆಹ್ವಾನಿಸಿದ್ದೇನೆ
ನೋಡಿಕೊಳ್ಳಬೇಕು ಸರಿ ತಪ್ಪುಗಳ ಲೆಕ್ಕ
ಎಂದು ನನಗನ್ನಿಸುತ್ತದೆ ಇದಕ್ಕಿಂತ ಕವಿಯೊಬ್ಬ ತನ್ನನ್ನು ತಾನು ವಿಮರ್ಶೆಗೆ ಒಳಗು ಮಾಡಿಕೊಳ್ಳಲು ಸಾಧ್ಯವೆ?
ಸಂಶೋಧಕರಾಗಿ ಮೊದಲಿಂದಲೂ ತೊಡಗಿರುವ ಪ್ರಕಾಶ ಖಾಡೆ ಇಲ್ಲೆಲ್ಲೂ ಶೋಧನೆಗೆ ತೊಡಗುವುದಿಲ್ಲ. ಇಷ್ಟು ವರ್ಷಗಳಲ್ಲಿ ಮಾಡಿದ ಶೋಧನೆಯನ್ನೇ ಕವನಗಳ ರೂಪದಲ್ಲಿ ಈ ಹೊತ್ತಿಗೆ ಸೋಸಿ ಕೊಡುತ್ತಿದ್ದಾರೇನೋ ಎಂದು ಅನ್ನಿಸದೆ ಇರಲಾರದು. ಹೆಕ್ಕಿ ತೆಗೆದಿದ್ದೆಲ್ಲ ಎಷ್ಟು ದಿನ ಒಡಲಲ್ಲಿ ಕಾಳಾಗಿಯೇ ಉಳಿಯುವುದು? ಅದು ಅಹಾರವಾಗಿ ಸಾರ್ಥಕ್ಯಗೊಳ್ಳಲೇ ಬೇಕು. ಹಾಗೆ ಹೆಕ್ಕಿ ತೆಗೆದ ಸಾಹಿತ್ಯಿಕ ಕೆಲಸವೂ ಕೂಡಾ ಒಡಲೊಳಗೆ ಎಷ್ಟು ದಿನ ಅವಿತು ಕುಳಿತೀತು? ಅನುಭವದ ಮೂಸೆಯಲಿ ಹೊರಬರಲೇ ಬೇಕು. ಹಾಗೆ ಪರಿಪಕ್ವ ಅನುಭವದ ಮೂಸೆಯಿಂದ ಹೊರಬರುವುದೇ ಶಾಂತಿ ಬೀಜಗಳ ಬಿತ್ತುವ ಸಂಕಲ್ಪದ್ದು ಅದು ಜಗತ್ತನ್ನು ನೋಡುತ್ತಾ ನೋಡುತ್ತಾ ತನ್ನೊಳಗೆ ತನ್ನನ್ನು ತಾನು ಆತ್ಮವಿಮರ್ಶೆಗೊಳಪಡಿಸುತ್ತ ಆತ್ಮಾನುಸಂಧಾನಕ್ಕೆ ತನ್ನನ್ನು ತಾನು ತೊಡಗಿಸಿಕೊಳ್ಳುವುದು. ಅಂತೆ ಬುದ್ಧ ಶಾಂತಿ ಮಂತ್ರವ ಎಲ್ಲೆಡೆ ಮೊಳಗಿಸಲು ಮುಂದಾಗಿದ್ದು ಖಾಡೆ ಈ ಹಾದಿಯಲ್ಲಿ ಸ್ಪಷ್ಟವಾಗಿ ಸಾಗಲು ಮುಂದಾಗುತ್ತಾರೆ. ಉದಾಹರಣೆ ಎಂಬಂತೆ ಈ ಸಾಲುಗಳು ಹೀಗೆ ಧ್ವನಿಸುತ್ತವೆ..
ಹೂವ ಬೆಳೆದವರು
ಹೂವ ಕೀಳಲಿ ಬಿಡಿ
ಏನೂ ತಕರಾರಿಲ್ಲ
ಹೂವ ಕೀಳುವ ಕೆಲಸ ಕವಿ ಮಾಡಲಾರ
ಬಣ್ಣ ಬಳಿಯುವವನ ಕೆಲಸ
ಚೆನ್ನಾಗಿ ಮಾಡಲಿ ಬಿಡಿ
ಎಲ್ಲ ಕಲಸುಮೇಲೋಗರ ಮಾಡಿ
ಬಣ್ಣಗೆಡಿಸುವ ಕೆಲಸ ಕವಿ ಮಾಡಲಾರ
ಎಂಬ ಬುದ್ಧನ ಮುಗುಳ್ನಗುವಿನ ಭಾಷೆ ಅಲ್ಲಲ್ಲಿ ಕವಿತ್ವದ ಹುಮ್ಮಸ್ಸನ್ನು ಮುಂದುವರೆಸುತ್ತದೆ.
ಹಾರಗುದರಿ ಮ್ಯಾಲೆ ಏರಿ, ಹಿಡಿಹಿಡಿ ರೊಕ್ಕಾ ತಗದು ಹಿಡಿಹಿಡಿ ಅನ್ನಾಂವಾ ಅನ್ನೋ ಆರಂಭಿಕ ಪದ್ಯಗಳನ್ನು ದಾಟಿ ಬೇಂದ್ರೆ ಬರೆಯುತ್ತ ಬರೆಯುತ್ತ ಬರಹ ಬ್ರಹ್ಮನಾಗುತ್ತ ನಾಕುತಂತಿಯ ಆತ್ಮಶೋಧನೆಗೆ ತೊಡಗಿದಂತೆ ಡಾ. ಖಾಡೆ ಒಮ್ಮೇಲೆ ತತ್ವಜ್ಞಾನದತ್ತ ಹೊರಳುತ್ತ, ಅಲ್ಲಲ್ಲಿ ಬಂಡಾಯಗಾರರಾಗಿಯೂ ಸಮಾಜದ ಅನಿಷ್ಟಗಳನ್ನು ಎದುರಿಸಲು ಆಕ್ರೋಶಕ್ಕೂ ಒಳಗಾಗುತ್ತಾರೆ.
ನಾವು ಭಾವನೆಗಳೊಂದಿಗೆ
ಬಡಿದಾಡುತ್ತೇವೆ
ಅವರೋ ಖಡ್ಗಕ್ಕೆ ಕೈ ಹಾಕುತ್ತಾರೆ
ನಾವು ಮನಸ್ಸುಗಳೊಂದಿಗೆ
ಮುನಿಸಿಕೊಳ್ಳುತ್ತೇವೆ
ಅವರೋ ಕೊಳ್ಳಿ ಇಡುವ ಕೆಲಸ ಮಾಡುತ್ತಾರೆ
ನಾವು ಆದ ಅಪಮಾನ
ಉಂಡ ನೋವು ಮರೆತು
ಪ್ರೀತಿ ಹಂಚಿಕೊಳ್ಳುತ್ತೇವೆ
ಅವರೋ ಉರಿವ ಬೆಂಕಿಗೆ ಎಣ್ಣೆ ಸುರಿಯುತ್ತಾರೆ
ಎನ್ನುವಂತಹ ಕೆಲ ಕವನದ ಸಾಲುಗಳು ಖಾಡೆಯವರೊಳಗಿನ ಬಂಡಾಯಗಾರ ನಿತ್ಯ ಜಾಗೃತನಾಗಿದ್ದಾನೆ ಅನ್ನೋದನ್ನ ಸಂಕೇತಿಸುತ್ತವೆ.
ಬುದ್ಧಿ ತಿಳಿದಾಗಲಿಂದಲೂ
ಭೂಮಿಯನ್ನು ಅರ್ಥಮಾಡಿಕೊಳ್ಳುತ್ತಾ ಹೋಗುತ್ತಿದ್ದೇನೆ
ಎಷ್ಟೊಂದು ಅನರ್ಥಗಳು
ಘಟಿಸಿವೆ ಇಲ್ಲಿ
ಮಾತು ಬಂದಾಗಿನಿಂದಲೂ
ಸವಿ ನುಡಿಯ ಹಂಚಿ
ಮನಸುಗಳ ಅರಳಿಸಬೇಕೆಂದಿದ್ದೇನೆ
ಎಷ್ಟೊಂದು ಮಾತುಗಳು
ತೂಕ ಕಳೆದುಕೊಂಡಿವೆ ಇಲ್ಲಿ
ಎಂಬ ವಾಸ್ತವಕ್ಕೆ ಮುಖಾಮುಖಿಯಾಗಿ ವಿಸ್ಮಯವಾಗಿ ಕಾಣುತ್ತಿರುವ ಈ ಹೊತ್ತಿನ ಸಾಮಾನ್ಯ ಸಂಗತಿಗಳಿಗೆ ಎದುರುಗೊಳ್ಳುತ್ತಾ ಉತ್ತರ ಹುಡುಕಿಕೊಳ್ಳಲು ತಡಕಾಡುತ್ತಾರೆ. ಏನಿದ್ದರೂ ಬದುಕು ಬರಿದಾಗುವ ಒರತೆ ಎಂಬಲ್ಲಿಗೆ ಅವರ ಪ್ರಶ್ನೆಗೆ ಅರ್ಧ ಉತ್ತರ ಮಾತ್ರ ದೊರಕಿ ಕವಿಯನ್ನು ಮತ್ತೊಂದು ಕವಿತೆಯ ಮೂಲಕ ಉತ್ತರ ಹುಡುಕಲು ಪ್ರಯತ್ನಕ್ಕೀಡು ಮಾಡುತ್ತದೆ ನಿಜ. ಆದರೆ ಅಲ್ಲೂ ಕೂಡಾ ಅಪೂರ್ಣ ಉತ್ತರವೆ ಅವರಿಗೆ ಎದುರುಗೊಂಡು ಪ್ರಶ್ನೆಗಳುಳ್ಳ ಜೀವಂತಿಕೆ ಕವಿಯನ್ನಾಗಿಸುವಲ್ಲಿ ಸಹಕರಿಸಿದೆ.
ಇಲ್ಲಿನ ಎಲ್ಲ ಕವಿತೆಗಳು ತೂಕದ ದೃಷ್ಟಿಯಿಂದ, ಕಾವ್ಯ ಹೊರಳಬೇಕಾದ ಚಲನಶೀಲ ದೃಷ್ಟಿಯಿಂದ ಹೊಸತಾಗಿವೆ. ಹಲವು ಮಗ್ಗಲುಗಳನ್ನು ದಾಟಿ ಈ ಹೊತ್ತಿಗೆ ಬಂದು ತಲುಪಿದ ಕನ್ನಡ ಕಾವ್ಯ ಜಗತ್ತು ಹೊಸ ದಿಕ್ಕು ಹುಡುಕುವ ಮುಖ್ಯ ಲಕ್ಷಣಕ್ಕೂ ಮತ್ತು ಜಾನಪದ, ಬಂಡಾಯ, ದಲಿತ ಸಂವೇದನೆಗಳನ್ನು ಕಣ್ಮುಂದೆ ಕಂಡುಂಡು ಬಹುತೇಕ ಆ ಕಾಲಘಟ್ಟದಲ್ಲಿ ಅವುಗಳ ಒಂದು ಭಾಗವಾಗಿ ಈಗ ಅವು ತನ್ನತನ ಕಳೆದುಕೊಂಡ ಮೇಲೂ ಕವಿಯೊಬ್ಬ ತನ್ನ ಕಾವ್ಯ ಕ್ರಿಯೆಯನ್ನು ಜೀವಂತವಾಗಿರಿಸಿಕೊಳ್ಳಲು ಮೂಲ ಪ್ರೇರಕ ಶಕ್ತಿಯಾಗಿ ಒಡಮೂಡುವಲ್ಲಿ ಯಶಸ್ವಿಯಾಗಿವೆ. ಡಾ. ಖಾಡೆ ಅವರ ಕಾವ್ಯ ಖಜಾನೆ ಸಮೃದ್ಧವಾಗಲಿ.
–ಶ್ರೀಹರಿ ಧೂಪದ
ಕವಿಯ ಮಾತು
ಎಲ್ಲ ಕವಿತೆಗಳೇ ಹೇಳುವಾಗ ನಾನೇನು ಹೇಳಲಿ. ಇಲ್ಲಿ ಕವಿತೆಗಳೇ ಮುಖ್ಯ, ಕವಿ ನೆಪ ಮಾತ್ರ. ಕವಿತೆಗಳ ಜೊತೆಯಾಗಿಸಿಕೊಂಡಾಗ ನಿಮ್ಮಲ್ಲಿ ಹೊಸ ಭಾವಗಳು ಹುಟ್ಟಿಕೊಂಡರೆ ಅದು ಕವಿತೆಯ ಶಕ್ತಿ, ಕವಿಯ ಸಾರ್ಥಕತೆ.
ಕವಿತೆ ಕಟ್ಟಲು ಹೋಗಿಲ್ಲ, ತಾವೇ ರೂಪ, ಆಕಾರ ಪಡೆದು ಜೀವ ತುಂಬಿಕೊಂಡಿವೆ. ನಾನೇ ಮತ್ತೇ ಮತ್ತೆ ಓದಿ ಬೆರಗುಗೊಂಡಿದ್ದೇನೆ, ಇದು ಕವಿಯ ಅಹಂಕಾರದ ಮಾತಲ್ಲ, ವಿನಯದ ನುಡಿ.
ಕವಿತೆಗಳಿಗೆ ಶೀರ್ಷಿಕೆ ಬೇಕೆ? ಹಾಗೆ ಅನ್ನಿಸಲೇ ಇಲ್ಲ, ಹಾಗಾಗಿ ಕವಿತೆಯ ಮೊದಲ ಸಾಲನ್ನೇ ಶೀರ್ಷಿಕೆಯಾಗಿ ಮಾಡಿಕೊಂಡೆ. ನಿಮ್ಮಗಳ ಸುಲಭ ಓದಿಗೆ, ಇಲ್ಲಾ ಗುರುತಿಗೆ ಇರಲಿ ಎಂದು.
ಬಹಳಷ್ಟು ಕವಿತೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹಲವರ ಹುಬ್ಬೇರಿಸಿವೆ, ಇದು ಕವಿಯ ಖುಷಿಯ ಸಂಗತಿ.
ಇರುವ ಮಾನ ದಂಡಗಳ ಮುರಿದು ಕಟ್ಟಿದಾಗ ಹುಟ್ಟಿದ ಇಲ್ಲಿನ ರಚನೆಗಳು ಕನ್ನಡ ಕಾವ್ಯ ಕ್ಷೇತ್ರಕ್ಕೆ ಹೊಸ ಕಾಣ್ಕೆಯಾಗಿ ತೋರಿದರೆ ಅದೂ ಸಹ ಕವಿಯ ಸಾರ್ಥಕತೆ ಎಂದು ನಾನು ಭಾವಿಸಿದ್ದೇನೆ.
ಮೂರು ದಶಕಗಳ ಕಾಲ ನನ್ನ ಕಾವ್ಯದ ಪಯಣ, ನಾನು ಬರೆವ ಹೊತ್ತಿಗೆ ನವ್ಯ ಮರೆಯಾಗಿ, ಬಂಡಾಯ ಕಾವ್ಯದ ಬಿರಿಸು ವಿಜೃಂಭಿಸುತ್ತಿತ್ತು; ಈಗ ಎಲ್ಲ ನಿರಾಳ. ಹೊಸ ಕಾಲ, ಹೊಸ ಓದುಗ ಬಳಗ. ಅದರಲ್ಲೂ ವಿಶ್ವವ್ಯಾಪಿ ಬಹುಬೇಗ ಕಾವ್ಯ ತಲುಪುವ ಕಾಲ. ಹಾಗಾಗಿ ಉದ್ದಕ್ಕೆ ಕವಿತೆಯನ್ನು ಎಳೆದುಕೊಂಡು ಹೋಗದೇ ಹೇಳಬೇಕಾದಷ್ಟನ್ನು ಹೇಳಿ ಮತ್ತೆ ಹೊಸತಾಗುವ ಹಂಬಲ.
ಈಗಂತೂ ತುಂಬಾ ಅವಸರದ ಜಗತ್ತು. ಎಲ್ಲವನ್ನೂ ಅಂದರೆ ಮೇಘಸ್ಫೋಟ ಮಳೆ, ಪ್ರವಾಹ, ಪ್ರಳಯ ಇಂಥ ಪ್ರಾಕೃತಿಕ ಅವಘಡಗಳನ್ನೂ ಕಾಣಬೇಕಾದ ಕೆಟ್ಟ ಕಾಲ. ಜನತೆ ನೆಮ್ಮದಿ ಕೆಡಿಸುವ ಆಗಂತುಕ ವಿಷಯಗಳು, ಹಿಂಸೆ, ದುರಾಡಳಿತ, ಭ್ರಷ್ಟಾಚಾರ ಸಾರ್ವತ್ರಿಕ. ಇಂಥ ಹೊತ್ತಲ್ಲಿ ಶಾಂತಿ, ಪ್ರೀತಿ ಎಲ್ಲಿದೆ. ಇಲ್ಲಿ ಕವಿಯ ಕೆಲಸ ಬಹಳ ಮುಖ್ಯವಾಗಿದೆ. ಅದಕ್ಕೆಂದೇ,
ರಕ್ತಕಾರುವ ಭಾವಗಳ ನಾಗಾಲೋಟಕ್ಕೆ
ತತ್ತರಿಸಿ ಹೋಗದೆ ಶಾಂತಿ ಬೀಜಗಳ
ಜತನವಾಗಿಟ್ಟುಕೊಳ್ಳಬೇಕೆಂದಿದ್ದೇನೆ
ಕನ್ನಡದ ಪ್ರಖರ ಕವಿ, ನನಗೆ ಗುರುವೂ ಹೌದು, ಪ್ರೊ. ಚಂದ್ರಶೇಖರ ಪಾಟೀಲ (ಚಂಪಾ). ಸರ್, ನೀವೇ ಮುನ್ನುಡಿ ಬರೆಯಬೇಕೆಂದು ಕೋರಿದೆ. ಅವರು ಬರೆದದ್ದು ಇದು ಮುನ್ನುಡಿಯಲ್ಲ. ವಿಸ್ಮಯವಾಗಿಯೇ ಆರಂಭಿಸಿದ ಅವರ ಸಾಲುಗಳು ನನ್ನಲ್ಲೂ ಅಚ್ಚರಿ ಹುಟ್ಟಿಸಿವೆ. ಊಹೆಗೂ ನಿಲುಕದ ರೀತಿಯಲ್ಲಿ ಈ ಕವಿ ಬೆಳೆಯುತ್ತಿದ್ದಾನೆ ಎಂಬ ಅವರ ಉಸಿರು ನನ್ನ ಕವಿತೆಗಳನ್ನು ಜೀವಂತವಾಗಿರಿಸಿದೆ. ನಿಮ್ಮ ಪ್ರೀತಿಗೆ ಗುರುವೇ ನಮನ. ಪ್ರೀತಿಯಿಂದ ವಿವರ ಪ್ರಸ್ತಾವನೆ ಬರೆದುಕೊಟ್ಟ ಕವಿ ಶ್ರೀಹರಿ ಧೂಪದ ಅವರಿಗೆ, ಬೆನ್ನುಡಿಯ ಸಾಲುಗಳಿಂದ ಪ್ರೀತಿ ತೋರಿದ ಹಿರಿಯ ಮಿತ್ರರಾದ ಡಾ. ಸರಜೂ ಕಾಟ್ಕರ್ ಅವರಿಗೆ ವಂದನೆಗಳು.
ಖ್ಯಾತ ಸಾಹಿತಿಗಳು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ತಂದೆ ಜಿ.ಬಿ.ಖಾಡೆ, ತಾಯಿ ಶ್ರೀಮತಿ ಗಂಗೂಬಾಯಿ ಖಾಡೆ, ಅಣ್ಣ ಅಶೋಕ ಖಾಡೆ, ವೈನಿ ಸಂಗೀತಾ ಅಶೋಕ ಖಾಡೆ, ತಮ್ಮ ಬಾಪು ಖಾಡೆ, ಶೈಲಾ ಬಾಪು ಖಾಡೆ, ಮನದನ್ನೆ ಅನ್ನಪೂರ್ಣ ಪ್ರಕಾಶ ಖಾಡೆ, ನಮ್ಮ ಕುಟುಂಬವರ್ಗದ ಭವಿಷ್ಯತ್ತಿನ ಬೆಳಕಾದ ಅನಿಕೇತ, ಪ್ರಣವ, ಅಭಿನವ, ಮಂಜು, ಉಮಾ, ಪ್ರತಿಮಾ, ದೀಪಿಕಾ, ಆಶ್ಲೇಷಾ ಅವರಿಗೆ, ಸದಾ ಜೊತೆಯಲ್ಲಿರುವ ಆತ್ಮೀಯ ಗೆಳೆಯರಾದ ಉಮೇಶ ತಿಮ್ಮಾಪುರ, ಪ್ರಕಾಶ ಡಂಗಿ, ಡಾ. ಶಿವಾನಂದ ಕುಬಸದ, ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ, ಅಮೀನ್ ಅತ್ತಾರ, ನಾಗೇಶ ನಾಯಕ, ಡಾ. ಎಸ್.ಬಾಲಾಜಿ, ಶಶಿಕಾಂತ ಯಡಹಳ್ಳಿ, ಕಿರಣ ಬಾಳಗೋಳ ಅವರಿಗೆ, ನನಗೆ ಸದಾ ಪ್ರೋತ್ಸಾಹಿಸುತ್ತಿರುವ ಬಸವೇಶ್ವರ ಬ್ಯಾಂಕ್ ಅಧ್ಯಕ್ಷರಾದ ಪ್ರಕಾಶ ತಪಶೆಟ್ಟಿ, ಡಾ. ಶೇಖರ ಮಾನೆ ಅವರಿಗೆ, ಮುಖಪುಟ ಭಾವಚಿತ್ರ ಸೆರೆಹಿಡಿದ ಅಂತಾರಾಷ್ಟ್ರೀಯ ಛಾಯಾಚಿತ್ರಕಾರರಾದ ಶಿವಶಂಕರ ಬಣಗಾರ, ಮುಖಪುಟ ವಿನ್ಯಾಸ ಗೊಳಿಸಿದ ಖ್ಯಾತ ಕಲಾವಿದರಾದ ಶಿವು ಹೂಗಾರ ಅವರಿಗೆ, ಇಲ್ಲಿ ಕೆಲ ಕವಿತೆಗಳನ್ನು ತಮಿಳಿಗೆ ಅನುವಾದಿಸಿದ ಹಿರಿಯ ಕವಿ ಕೆ.ನಲ್ಲತಂಬಿ ಹಾಗೂ ತೆಲುಗು ಭಾಷೆಗೆ ಅನುವಾದಿಸಿದ ರೋಹಿಣಿ ಸತ್ಯ, ಹಿಂದಿಗೆ ಅನುವಾದಿಸಿದ ಪ್ರೇಮಾ ನಡುವಿನಮನಿ ಅವರಿಗೆ, ನನ್ನ ಕೂಡಿ ಕಟ್ಟಿದ ಕನ್ನಡ ನಾಡಗೀತೆಗೆ ಸಂಗೀತ ನಿರ್ದೇಶನ ನೀಡಿ ಜನಪ್ರಿಯಗೊಳಿಸಿದ ಪಂಡಿತ್ ಶರಣ್ ಚೌಧರಿ ಹಾಗೂ ಇಂಪಾಗಿ ಹಾಡಿದ ಜನಪ್ರಿಯ ಹೆಸರಾಂತ ಗಾಯಕಿ ವೀಣಾ ಸೂರಿ ಹಾಗೂ ಬಳಗಕ್ಕೆ, ಈ ಕೃತಿಯನ್ನು ಯಾಜಿ ಪ್ರಕಾಶನದಿಂದ ಪ್ರಕಟಿಸುತ್ತಿರುವ ನನ್ನ ಆತ್ಮೀಯರಾದ ಗಣೇಶ ಯಾಜಿ, ಪ್ರಕಾಶಕರಾದ ಶ್ರೀಮತಿ ಸವಿತಾ ಯಾಜಿ ಮತ್ತು ಭೂಮಿಕಾ ಯಾಜಿ ಅವರಿಗೆ, ಸುಂದರವಾಗಿ ಮುದ್ರಿಸಿಕೊಟ್ಟ ಇಳಾ ಮುದ್ರಣದ ಗುರುಮೂರ್ತಿ ಮತ್ತು ಬಳಗಕ್ಕೆ ಹಾಗೂ ತುಂಬಾ ಒಲವಿಂದ ಈ ಸಂಕಲನ ಓದಲು ಎತ್ತಿಕೊಂಡ ನಿಮ್ಮ ಪ್ರೀತಿಗೆ ನಮನಗಳು.
೨ ಅಕ್ಟೋಬರ ೨೦೧೮ ಡಾ. ಪ್ರಕಾಶ ಗ. ಖಾಡೆ
ಪುಟ ತೆರೆದಾಗ…
ಸವಿನುಡಿ / ೫
ಇದು ಮುನ್ನುಡಿಯಲ್ಲ… / ೭
ಪ್ರಸ್ತಾವನೆ / ೧೦
ಕವಿಯ ಮಾತು / ೧೭
೧. ನನಗೆ ನದಿಯಾಗಬೇಕೆನಿಸಿತು / ೧
೨. ನಾನು ಏನನ್ನೂ ಕಳೆದುಕೊಳ್ಳಬಾರದೆಂದು / ೨
೩. ಬುದ್ಧಿ ತಿಳಿದಾಗಲಿಂದಲೂ / ೩
೪. ಕಿತ್ತು ಹಾಕಿದ್ದೇನೆ ಒಂದಿಷ್ಟು ಕಸವನ್ನು / ೪
೫. ಬೆರಗಾಗಬೇಕಿಲ್ಲ / ೫
೬. ಕಬ್ಬ ಹಿಂಡಿ ರಸವ ಪಡೆದರು / ೬
೭. ನನಗೆ ಮಾತುಗಳ ಕೇಳಬೇಕಿತ್ತು / ೭
೮. ನನಗೆ ಕನಸುಗಳಿದ್ದವು / ೮
೯. ಕತ್ತಲೆಗೆ ಬೆಳಕ ಹೊತ್ತಿಸುವುದು ಬೇಡವಾಗಿದೆ / ೯
೧೦. ಬರೆಯುವವರ ಕೊಲ್ಲುವ / ೧೦
೧೧. ನನ್ನ ಚೆಲುವನ್ನಷ್ಟೇ / ೧೧
೧೨. ನೋಟಬುಕ್ಕಿನ ಕೊನೆಯ ಪುಟಗಳು / ೧೨
೧೩. ಬೊಗಳೆ ಬಿಡುವವರ ರಗಳೆ / ೧೩
೧೪. ನಾನು ಸತ್ಯವನ್ನು ಸುಳ್ಳು ಮಾಡಲು ನೋಡಿದೆ / ೧೪
೧೫. ಮುಸುಕು ತೆರೆಯದವರೆಗೆ / ೧೫
೧೬. ಬಯಸಿ ಬಂದವರು ಬೇಡವೆಂದರು / ೧೬
೧೭. ಆಣೆ ಪ್ರಮಾಣಗಳು ಸುಳ್ಳಾದವು / ೧೭
೧೮. ಒಂದಿಷ್ಟು ಮಾತುಗಳ ಕಡ ತಂದಿದ್ದೇನೆ / ೧೮
೧೯. ಅದೇಕೋ ಖುರ್ಚಿಗಳು ಅಳುವ ಸದ್ದು / ೧೯
೨೦. ತಂದೆ / ೨೦
೨೧. ಅವ್ವನ ನೆನೆಸಿಕೊಂಡಾಗಲೆಲ್ಲ / ೨೧
೨೨. ಅಣ್ಣಾ… / ೨೩
೨೩. ಅಕ್ಷರ ಕಲಿಸಿ ಹರಸಿದ ಗುರುವೇ / ೨೪
೨೪. ಎಸೆದ ಕಲ್ಲಿಗೆ ಗುರಿಯಷ್ಟೇ ಗೊತ್ತು / ೨೫
೨೫. ರವಷ್ಟೂ ಆತಂಕವಿಲ್ಲ / ೨೬
೨೬. ಇರುವ ಇಳೆಯ ಮೇಲೆ / ೨೭
೨೭. ಕನಸು ಆಳುವ ಸಮಯ / ೨೮
೨೮. ಮೊಗ್ಗಿನ ಮೊದಲ ಸಣ್ಣ ಬೀಜದ ನೆವಕ / ೨೯
೨೯. ಈ ದಿನ ಆರಂಭವಾಗುವ / ೩೦
೩೦. ಬರುಬರುತ್ತ ದಿನಮಾನ / ೩೧
೩೧ ಸರಿ ರಾತ್ರಿ ಬೆಚ್ಚಗೆ ಮಲಗಿದ / ೩೨
೩೨. ನಾವು ಭಾವನೆಗಳೊಂದಿಗೆ / ೩೩
೩೩. ಗುರುತಿಗೆ ಬಿಡಿಸಿಟ್ಟ ಅರಳೆ / ೩೪
೩೪. ಮಳೆ ಸುರಿಯಲಿ ಇನ್ನಾದರೂ / ೩೫
೩೫. ಮಣ್ಣ ಮುದ್ದೆಗೆ / ೩೬
೩೬. ಮುಗಿಲ ಚುಂಬಿತ / ೩೭
೩೭. ಕರಿ ಹರಿವ ಮೊದಲು / ೩೮
೩೮. ಒಗ್ಗರಣೆಗೆ ಸಾಸಿವೆ ಹಾಕಲು ಮರೆತರೆ / ೩೯
೩೯. ಹೂವ ಬೆಳೆದವರು / ೪೦
೪೦. ದಂಡೆಗೆ ಹಚ್ಚುವವರೆಗೂ / ೪೧
೪೧. ಅರಿವಿಲ್ಲದ ಮನಸ್ಸು / ೪೨
೪೨. ಸೂರ್ಯ ಸ್ವಾಮಿಯ ಒಂದು ದರುಶನಕೆ / ೪೩
೪೩. ಧೂಳು ಝಾಡಿಸಿ ಗಂಟು ಬಿಚ್ಚಿ ಹರವಿ / ೪೪
೪೪. ಅಜ್ಜಿ, ಮರಾ ಹಚ್ಚಿ ಛಲೋ ಮಾಡಿದಿ / ೪೬
೪೫. ನಮ್ಮ ಕಲ್ಬುರ್ಗಿ ಸರ್ / ೪೭
೪೬. ಕವಿತೆಯ ಮುಗಿಸುವ ಮೊದಲು / ೪೮
೪೭. ಒಳಗ ಯಾರ ಅದೀರಿ / ೪೯
೪೮. ಕಾವಿಗಿಟ್ಟ ಮೊಟ್ಟೆಗಳ ಮೇಲೆ / ೫೦
೪೯. ಊರ ಬಿಡುವ ಮೊದಲು / ೫೧
೫೦. ಬತ್ತಿಯಾಗಿ / ೫೨
೫೧. ಇಳೆಯ ಹೊಸತನವೇ / ೫೩
೫೨. ಹಾಡಿ ಮಲಗಿದ / ೫೪
೫೩. ಅವರು ಅಲ್ಲಿಯೇ ಇದ್ದರು / ೫೫
೫೪. ಬಿಡದಿ ಕಾಡುವ ಮಾಯೆ / ೫೬
೫೫. ಎಲ್ಲ ಒಂದೇ ಸೂಡಲ್ಲಿ / ೫೭
೫೬. ಹೋಗಿಬಿಟ್ಟರೆಂದು ಕಾಣುತ್ತದೆ / ೫೮
೫೭. ಚೆಲ್ಲಿದ ಬಣ್ಣದ ಮೇಲೆ / ೫೯
೫೮. ವಿಜಯದ ಸಂಕೇತಗಳಿಗೆ / ೬೦
೫೯. ಅಜ್ಜನ ಕಾಲದ ಪಳೆಯುಳಿಕೆಗಳ ಹರವಿಟ್ಟು / ೬೧
೬೦. ಸಂಬಂಧಗಳು ಗಟ್ಟಿಗೊಳ್ಳುವ ಹೊತ್ತಿಗೆ / ೬೨
೬೧. ಗೆಲುವಿನ ಅನುಭವಗಳಲ್ಲಿ / ೬೩
೬೨. ಅವರು ಅಷ್ಟೊತ್ತಿನವರೆಗೂ / ೬೪
೬೩. ಹೋಗಿಬಿಟ್ಟರೆಂದು ಕಾಣುತ್ತದೆ / ೬೫
೬೪. ವಿಶ್ವದ ಬೆರಗು ಕಂಗಳು / ೬೬
೬೫. ಒಂದಿಷ್ಟು ಕಾಲ ವಿರಮಿಸಿದೆ / ೬೭
೬೬. ಮುಗಿಲ ಸೂರ್ಯನ ಬೆಳಕು / ೬೮
೬೭. ಅಳಿದ ಅವಶೇಷಗಳಡಿಯಲ್ಲಿ / ೬೯
೬೮. ದ್ವೇಷ ತುಂಬಿಕೊಂಡಿದ್ದರೆ / ೭೦
೬೯. ಅವರು ಹೃದಯವಂತರು / ೭೧
೭೦. ಇಂದಾದರೂ ಬಂದು ಬಿಡಿ ಮಹಾತ್ಮಾ / ೭೨
೭೧. ಕಾಲ ಬದಲಾಗುತ್ತಿದೆ ನಿತ್ಯವೂ / ೭೩
೭೨. ವಿಕೃತರ ಗೆಲುವು / ೭೪
೭೩. ಬಾಗಿಲು ಕೋಟೆಗೆ ಕಟ್ಟಿದ ತೋರಣ / ೭೫
೭೪. ಕವಿತೆ ಎದ್ದು ಎಲ್ಲೆಲ್ಲೋ ತಿರುಗಾಡಿ ಬಂತು / ೭೬
೭೫. ಅವರು ನಡೆಯುವದನ್ನು ಹೇಳಿಕೊಟ್ಟರು / ೭೭
೭೬. ಗೆಲುವಾಗುವ ಹೊತ್ತಿಗೆ / ೭೮
೭೭. ದಾರಿ ಮಾಡಿಕೊಟ್ಟಿದ್ದೇನೆ / ೭೯
೭೮. ಮಾಪನವ ಮೀರದೆ / ೮೦
೭೯. ಮೂಡಿ ಮುಳುಗುವ / ೮೧
೮೦. ನಡೆವ ದಾರಿಯಲ್ಲಿ ಮಾತಿಗೆ ಸಿಕ್ಕವರು / ೮೨
೮೧. ಕವಿತೆಗಿಷ್ಟು ವಿರಾಮ ನೀಡಿದ್ದೇನೆ / ೮೩
Reviews
There are no reviews yet.