ಪ್ರಸ್ತಾವನೆ
ಕನ್ನಡ ಸಾಹಿತ್ಯದ ಮೊತ್ತ ಮೊದಲ ಗದ್ಯಗ್ರಂಥವಾದ ವಡ್ಡಾರಾಧನೆ ಜೈನಧರ್ಮದ ಗಹನ ತತ್ತ್ವಗಳನ್ನು ಸರಳ ಸುಂದರವಾದ ಕಥೆಗಳ ಮೂಲಕ ತಿಳಿಸುತ್ತದೆ. ಹತ್ತೊಂಬತ್ತು ವಿಶಿಷ್ಟ ಜೈನಕಥೆಗಳನ್ನು ಹೇಳುವ ಈ ಗದ್ಯಕಾವ್ಯವು ಪ್ರಾಚೀನತೆಯ ದೃಷ್ಟಿಯಿಂದ ಮಾತ್ರವಲ್ಲದೆ, ಸಾಹಿತ್ಯಕ, ಸಾಂಸ್ಕೃತಿಕ, ಸಾಮಾಜಿಕ, ಐತಿಹಾಸಿಕ ಅಂಶಗಳಿಂದಲೂ ಮಹತ್ತ್ವದ ಕೃತಿಯಾಗಿದೆ. ಜೈನ ಮಹಾಮುನಿಗಳ ಸಾಧನೆ-ಸಿದ್ಧಿಗಳನ್ನು ನಿರೂಪಿಸುವ ಈ ಕೃತಿಯಲ್ಲಿ ಜೈನ ಧರ್ಮದ ವಿಶಿಷ್ಟತತ್ತ್ವಗಳಾದ ಉಪಸರ್ಗ, ಪರೀಷಹ, ತಪಶ್ಚರಣೆ, ಬಾಹ್ಯಾಭ್ಯಂತರ ಪರಿಗ್ರಹ, ಇಂದ್ರಿಯನಿಗ್ರಹ, ಚಿತ್ತಸ್ಥೈರ್ಯ, ಸಮತ್ವೀಭಾವ, ಕ್ಷಮಾಗುಣ, ಸಂನ್ಯಾಸದೀಕ್ಷೆ, ಕರ್ಮಕ್ಷಯ ಸಾಧನೆ, ಪ್ರಾಯೋಪಗಮನ, ಮೋಕ್ಷಸಿದ್ಧಿ ಮುಂತಾದವುಗಳನ್ನು ವಿವಿಧ ಕಥೆಗಳ ಮೂಲಕ ಸ್ವಾರಸ್ಯಪೂರ್ಣವಾಗಿ ಹೇಳಲಾಗಿದೆ. ಇಲ್ಲಿಯ ಕಥನ ಶೈಲಿ, ಭಾಷಾಪ್ರಯೋಗ, ಸನ್ನಿವೇಶ ಚಿತ್ರಣ, ಸಂವಾದಕ್ರಮ ಮುಂತಾದವುಗಳು ಕನ್ನಡ ಸಾಹಿತ್ಯಕ್ಕೆ ಒಂದು ವಿಶಿಷ್ಟ ಕಾಣಿಕೆ ಎನ್ನ ಬಹುದು.
ವಡ್ಡಾರಾಧನೆಯ ಗ್ರಂಥಸಮಾಪ್ತಿವಾಕ್ಯದಲ್ಲಿ ಈ ಪೇೞ್ದ ಪತ್ತೊಂಬತ್ತು ಕಥೆಗಳಂ ಶಿವಕೋಟ್ಯಾಚಾರ್ಯರ್ ಪೇೞ್ದಾರ್, ವಡ್ಡಾರಾಧನೆ ಸಂಪೂರ್ಣಂ ಎಂದು ಹೇಳಲಾಗಿದೆ. ಇದರಿಂದಾಗಿ ಈ ಕೃತಿಯ ಹೆಸರು ವಡ್ಡಾರಾಧನೆ ಎಂದೂ, ಕೃತಿಕರ್ತೃ ಶಿವಕೋಟ್ಯಾಚಾರ್ಯ ನೆಂದೂ ತಿಳಿದುಬರುತ್ತದೆ. ಆದರೆ ಇದರ ಬಗೆಗೆ ವಿದ್ವಾಂಸರ ವಲಯದಲ್ಲಿ ಸಹಮತವಿಲ್ಲವಾಗಿದೆ. ಈ ಕೃತಿಯ ಕರ್ತೃ ಗ್ರಂಥದ ಮೊದಲಿಗಾಗಲಿ, ಕೊನೆಯಲ್ಲಾಗಲೀ ತನ್ನ ವಿಷಯವಾಗಿ ಏನನ್ನೂ ಹೇಳಿಕೊಂಡಿಲ್ಲ. ಆದುದರಿಂದ ಕೃತಿಯ ಹೆಸರು, ಕರ್ತೃ, ದೇಶ, ಕಾಲಗಳ ಬಗೆಗೆ ಅನೇಕ ಚರ್ಚೆಗಳು ಇಂದಿಗೂ ನಡೆಯುತ್ತಿದ್ದು ಖಚಿತವಾದ ತೀರ್ಮಾನಕ್ಕೆ ಬರಲು ಸಾಧ್ಯ ವಾಗಿರುವುದಿಲ್ಲ.
ಡಾ. ಡಿ.ಎಲ್. ನರಸಿಂಹಾಚಾರ್ಯರು ಮೈಸೂರಿನ ಓರಿಯಂಟಲ್ ಲೈಬ್ರರಿಯಲ್ಲಿ ಉದ್ಯೋಗಿ ಯಾಗಿದ್ದಾಗ ಈ ಗ್ರಂಥದ ಮೊದಲ ಹಸ್ತಪ್ರತಿ ಅವರ ಕಣ್ಣಿಗೆ ಬಿತ್ತು. ಅದರ ಮೊದಲ ಮೂರು ಕಥೆಗಳು ಕರ್ಣಾಟಕ ಸಾಹಿತ್ಯ ಪರಿಷತ್ ಪತ್ರಿಕೆಯಲ್ಲಿ(೧೯೩೧) ಮೊದಲು ಪ್ರಕಟವಾದವು. ೧೯೪೯ರಲ್ಲಿ ಇಡೀ ಗ್ರಂಥವು ವಿವಿಧ ಹಸ್ತಪ್ರತಿಗಳ ಆಧಾರದಲ್ಲಿ ಪ್ರಕಟವಾಯಿತು.
ಕೃತಿ ವಿಚಾರ
ವಡ್ಡಾರಾಧನೆಯನ್ನು ಮೊದಲು ಸಂಪಾದಿಸಿದ ಡಾ. ಡಿ.ಎಲ್. ನರಸಿಂಹಾಚಾರ್ಯರು ಒಟ್ಟು ಆರು ಹಸ್ತ ಪ್ರತಿಗಳನ್ನು ಪರಿಶೀಲಿಸಿದ್ದಾರೆಂದು ತಿಳಿದುಬರುತ್ತದೆ. ಅವುಗಳಲ್ಲಿ ಮೊದಲನೆಯದು ಮೈಸೂರಿನ ಓರಿಯಂಟಲ್ ಲೈಬ್ರರಿಯಲ್ಲಿರುವ ಕೆ. ೪೧೫ನೆಯ ಸಂಖ್ಯೆಯುಳ್ಳ ಓಲೆಪ್ರತಿ. ಎರಡನೆಯದು ಮೂಡುಬಿದಿರೆಯ ಜೈನಮಠಕ್ಕೆ ಸೇರಿದ್ದು, ಅದೇ ಊರಿನ ಶ್ರೀ ಎಚ್. ಲೋಕನಾಥಶಾಸ್ತ್ರಿಗಳ ಮೂಲಕ ಲಭಿಸಿದ ಓಲೆಪ್ರತಿ. ಮೂರು ಮತ್ತು ನಾಲ್ಕನೆಯದು ಸಾಲಿಗ್ರಾಮದ ಸರಾಫ್ ಪದ್ಮರಾಜಯ್ಯನವರ ಹತ್ತಿರವಿದ್ದ ಕಾಗದ ಮತ್ತು ಓಲೆಪ್ರತಿಗಳು. ಐದನೆಯದು ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲೂಕಿನ ಸರಗೂರಿನಲ್ಲಿ ದೊರೆತ ಓಲೆಪ್ರತಿ. ಇದೂ ಕೂಡಾ ಸರಾಫ್ ಪದ್ಮರಾಜಯ್ಯನವರ ಬಳಿಯಲ್ಲೇ ಲಭಿಸಿದ್ದು. ಆರನೆಯದು ಆರಾದಲ್ಲಿರುವ ಸೆಂಟ್ರಲ್ ಜೈನ್ ಓರಿಯಂಟಲ್ ಲೈಬ್ರರಿಯಿಂದ ತರಿಸಿಕೊಂಡದ್ದು. ಅಂತಿಮ ಹಂತದಲ್ಲಿ ಡಾ. ಆ.ನೇ. ಉಪಾಧ್ಯೆ ಅವರ ಮೂಲಕ ಲಭಿಸಿದ್ದು ಏಳನೆಯ ಪ್ರತಿ. ಇವುಗಳಲ್ಲಿ ಮೊದಲ ಮೂರು ಪ್ರತಿಗಳು ಸಮಾನ ಪಾಠವನ್ನು ಹೊಂದಿದ್ದು, ಒಂದು ಗುಂಪಿಗೆ ಸೇರುವಂತಹವು. ಅನಂತರದ ನಾಲ್ಕು ಪ್ರತಿಗಳು ಅನೇಕ ಸ್ಖಾಲಿತ್ಯಗಳಿಂದ ಕೂಡಿದ್ದು ಇನ್ನೊಂದು ಗುಂಪಿಗೆ ಸೇರುತ್ತವೆ. ಇವುಗಳಲ್ಲಿ ಮೊದಲ ಗುಂಪಿನ ಪ್ರತಿಗಳಲ್ಲಿರುವ ಪಾಠವು ಪ್ರಾಚೀನ ತರವಾಗಿದ್ದು ಮೂಲ ಪ್ರತಿಗೆ ಸಮೀಪತರವಾಗಿದೆ ಎಂದೂ, ಎರಡನೆಯದು ಪ್ರಾಚೀನವಾದರೂ ಮೂಲ ಪ್ರತಿಗೆ ಸ್ವಲ್ಪ ದೂರವಾಗಿದೆ ಎಂದೂ ಡಾ. ಡಿ.ಎಲ್.ಎನ್. ಅಭಿಪ್ರಾಯಪಟ್ಟಿದ್ದಾರೆ(ಪೀಠಿಕೆ ಪುಟ ೧೬).
ಈ ಕೃತಿಯ ಹೆಸರಿನ ಕುರಿತೂ ಬಗೆಬಗೆಯ ವಾದಗಳು ಹುಟ್ಟಿಕೊಂಡಿವೆ. ವಡ್ಡಾರಾಧನೆ ಎನ್ನುವುದು ಪ್ರಚಲಿತವಾಗಿರುವ ಹೆಸರಾದರೂ ಕೃತಿಕಾರನು ಏನು ಹೆಸರು ಕೊಟ್ಟಿದ್ದಾನೆನ್ನುವುದು ಕುತೂಹಲದ ಪ್ರಶ್ನೆಯಾಗಿದೆ. ಗ್ರಂಥದ ಸಮಾಪ್ತಿವಾಕ್ಯದಲ್ಲಿ ವಡ್ಡಾರಾಧನೆ ಎಂದು ಹೆಸರಿದ್ದರೂ ಅದನ್ನು ಲಿಪಿಕಾರ ಬರೆದಿರಬಹುದೆಂಬ ಸಂದೇಹವಿದೆ. ಹಸ್ತಪ್ರತಿಯಲ್ಲಿರುವ ವೃದ್ಧಾರಾಧನಂ, ವಡ್ಡಾರಾಧಣಂ, ವೊಡ್ಡಾರಾಧಣಂ, ವೊಡ್ಡಾರಾಧನೆ, ಒಡ್ಡಾರಾಧನೆ, ವಡ್ಡಾರಾಧನೆ ಮುಂತಾದ ವಿವಿಧ ರೂಪಗಳಲ್ಲಿ ವಡ್ಡಾರಾಧನೆಯೇ ಪ್ರಾಚೀನತರ ರೂಪವೆಂಬುದು ಡಾ. ಡಿ.ಎಲ್.ಎನ್. ಅವರ ಅಭಿಪ್ರಾಯವಾಗಿದೆ. ಆದರೆ ಕೊಲ್ಲಾಪುರದ ಜೈನಮಠದ ಹಸ್ತಪ್ರತಿಯ ಮರದ ಪೆಟ್ಟಿಕೆಯ ಮೇಲೆ ಉಪಸರ್ಗ ಕೇವಲಿಗಳ ಕಥೆ ಎಂಬ ಒಕ್ಕಣೆ ಇರುವುದರಿಂದ ವಡ್ಡಾರಾಧನೆ ಎಂಬ ಕೃತಿನಾಮ ಚರ್ಚಾಸ್ಪದವಾಗುತ್ತದೆ.
ವಡ್ಡಾರಾಧನೆ ಎಂಬುದಕ್ಕೆ ವೃದ್ಧಾರಾಧನೆ ಎಂದರ್ಥ. ಉಪಸರ್ಗಗಳನ್ನು ಜಯಿಸಿ ಕೇವಲಜ್ಞಾನವನ್ನು ಸಾಧಿಸಿದ ಜೈನ ಸಂನ್ಯಾಸಿಗಳಿಗೆ ಉಪಸರ್ಗ ಕೇವಲಿಗಳು ಎಂದು ಕರೆಯಲಾಗುತ್ತದೆ. ವಡ್ಡಾರಾಧನೆಯಲ್ಲಿರುವ ಕಥೆಗಳು ಇಂತಹ ಮಹಾಮುನಿಗಳ ಕುರಿತಾಗಿಯೇ ಇರುವುದರಿಂದ ವಡ್ಡಾರಾಧನೆಗೆ ಇದ್ದ ಇನ್ನೊಂದು ಹೆಸರೇ ಉಪಸರ್ಗ ಕೇವಲಿಗಳ ಕಥೆ ಎಂದು ಭಾವಿಸಬಹುದು.
ಡಾ. ಆ.ನೇ. ಉಪಾಧ್ಯೆ ಅವರು ಈ ಕುರಿತು ಇನ್ನೊಂದು ಅಭಿಪ್ರಾಯಕ್ಕೆ ಬಂದಿರುವುದುಂಟು. ಕೆಲವು ಪ್ರತಿಗಳಲ್ಲಿ ವಡ್ಡಾರಾಧನೆಯ ಕವಚವೆಂಬಧಿಕಾರವು ಎಂಬ ಲಿಖಿತವಿರುವುದರಿಂದ ಪ್ರಾಕೃತ ಗಾಹೆಗಳನ್ನು ಕವಚಭಾಗ ಎಂದು ಕರೆಯುತ್ತಿದ್ದರೆಂಬ ನಿಲುವು ಅವರದು. ಈ ಗಾಹೆಗಳು ಪ್ರಾಕೃತ ಭಾಷೆಯಲ್ಲಿ ರಚಿತವಾದ ಭಗವತೀ ಆರಾಧನಾ ಎಂದು ಗ್ರಂಥದ ಆಯ್ದ ಭಾಗಗಳಾಗಿರುವುದರಿಂದ ವಡ್ಡಾರಾಧನೆ ಎಂಬುದು ಆ ಗ್ರಂಥದ ಮತ್ತೊಂದು ಹೆಸರೆಂದೂ, ವಡ್ಡಾರಾಧನೆಯ ಕವಚವು ಎಂಬುದು ಭಗವತೀ ಆರಾಧನಾ ಗ್ರಂಥವನ್ನು ನಿರ್ದೇಶಿಸುತ್ತದೆ ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಸಂಸ್ಕೃತದಲ್ಲಿ ಪುಣ್ಯಾಸ್ರವ ಕಥಾಕೋಶವೆಂಬ ಗ್ರಂಥವನ್ನು ಬರೆದ ರಾಮಚಂದ್ರ ಮುಮಕ್ಷುವು ಆ ಗ್ರಂಥದ ಶ್ರೇಣಿಕನ ಕಥೆಯ ಕೊನೆಗೆ ಭ್ರಾಜಿಷ್ಣ್ವಾರಾಧನಾ ಶಾಸ್ತ್ರೇ ಕರ್ನಾಟ ಟೀಕಾಕಥಿತ ಕ್ರಮೇಣೋಲ್ಲೇಖ ಮಾತ್ರಂ ಕಥಿತೇಯಂ ಕಥಾ ಎಂದು ಹೇಳಿರುವುದರಿಂದ ವಡ್ಡಾರಾಧನೆ ಎಂಬುದು ಈ ಕರ್ನಾಟ ಟೀಕಾಗ್ರಂಥವೇ ಆಗಿರಬೇಕೆಂದೂ, ಅದನ್ನು ಆರಾಧನಾ ಶಾಸ್ತ್ರ ಕರ್ನಾಟ ಟೀಕಾ ಎಂದು ಬೇಕಾದರೂ ಕರೆಯಬಹುದೆಂದೂ ಡಾ. ಡಿ.ಎಲ್.ಎನ್. ಹೇಳಿದ್ದಾರೆ (ಪೀಠಿಕೆ-ಪುಟ ೧೯).
ಡಾ. ಎಂ.ಎಂ. ಕಲಬುರ್ಗಿಯವರು ಈ ವಾದವನ್ನೇ ಮುಂದುವರಿಸಿ ಕೃತಿಯ ಹೆಸರನ್ನು ಆರಾಧನಾ ಕರ್ನಾಟ ಟೀಕಾ ಎಂದೂ, ಕೃತಿಯ ಕರ್ತೃ ಭ್ರಾಜಿಷ್ಣು ಎಂದೂ ವಾದಿಸಿದ್ದಾರೆ. ಹರಿಷೇಣನ ಬೃಹತ್ಕಥಾ ಕೋಶದ ಪೀಠಿಕೆಯಲ್ಲಿ ಭ್ರಾಜಿಷ್ಣುವಿನ ಹೆಸರನ್ನು ಪ್ರಸ್ತಾವಿಸಿದ ಡಾ. ಆ.ನೇ. ಉಪಾಧ್ಯೆ ಅವರು ಅದೊಂದು ಅಪೂರ್ವ ಹೆಸರೆಂದೂ, ಕದಾಚಿತ್ ಅಪಪಾಠವಿರುವ ಸಂಭವವಿದೆ ಎಂದೂ ಹೇಳಿದ್ದಾರೆ. ಆದರೆ ಆದಿ ತೀರ್ಥಂಕರನ ಸಹಸ್ರ ನಾಮಾವಳಿಯಲ್ಲಿ ಭ್ರಾಜಿಷ್ಣು ಹೆಸರಿರುವುದನ್ನು ಡಾ. ಹಂಪನಾ ಅವರು ಗುರುತಿಸಿದ್ದಾರೆ. ಅಲ್ಲದೆ ಅವರು ತಮಗೆ ದೊರೆತ ಒಂದು ಓಲೆಗರಿ ಕಟ್ಟಿನ ಕೊನೆಯ ಕಥೆಯ ಪ್ರಾರಂಭದಲ್ಲಿರುವ ಮತ್ತೀ ಕಥೆಯಂ ಭ್ರಾಜಿಷ್ಣಾರಾಧನೆಯಭಿಪ್ರಾಯದೊಳ್ ಪೇೞ್ದುದು ಎಂಬ ಒಂದು ಸಾಲಿನ ಆಧಾರದಲ್ಲಿ ವಡ್ಡಾರಾಧನೆಯ ಕರ್ತೃ ಭ್ರಾಜಿಷ್ಣುವೆಂದೇ ಹೇಳಿ, ವಡ್ಡಾರಾಧನೆಯು ಆರಾಧನಾ ಕರ್ಣಾಟ ಟೀಕೆಯ ಒಂದು ಭಾಗವೆಂದು ಅಭಿಪ್ರಾಯಪಟ್ಟಿದ್ದಾರೆ.
ಕರ್ತೃ ವಿಚಾರ
ಗ್ರಂಥಸಮಾಪ್ತಿ ವಾಕ್ಯದಲ್ಲಿರುವ ಶಿವಕೋಟ್ಯಾಚಾರ್ಯರ್ ಪೇೞ್ದಾರ್ ಎಂಬುದು ಲಿಪಿಕಾರನ ಹೆಸರಿರಬಹುದೆಂಬ ಶಂಕೆಯಿಂದಾಗಿ ಕರ್ತೃವಿನ ಹೆಸರು ಚರ್ಚೆಗೊಳಗಾಗಿದೆ. ಲಭ್ಯವಾಗಿರುವ ಎರಡು ಹಸ್ತ ಪ್ರತಿಗಳಲ್ಲಿ ರೇವ ಕೋಟ್ಯಾಚಾರ್ಯನೆಂಬ ಹೆಸರಿರುವುದರಿಂದ ಕೆಲವು ವಿದ್ವಾಂಸರು ವಡ್ಡಾರಾಧನೆಯ ಕರ್ತೃ ರೇವಕೋಟ್ಯಾಚಾರ್ಯನೆಂದು ವಾದಿಸಿದ್ದಾರೆ. ಆದರೆ ಈ ಕುರಿತು ಡಾ. ಡಿ.ಎಲ್.ಎನ್. ಅವರು ಚರ್ಚೆಮಾಡಿ, ಶಿ ಮತ್ತು ರೆ ಅಕ್ಷರಗಳ ರೂಪಸಾದೃಶ್ಯದಿಂದ ಇಂತಹ ಭ್ರಾಂತಿಯುಂಟಾಗಿದೆಯೆಂದು ಹೇಳಿ, ಶಿವಕೋಟ್ಯಾಚಾರ್ಯನೇ ವಡ್ಡಾರಾಧನೆಯ ನಿಜವಾದ ಕರ್ತೃವೆಂದು ತೀರ್ಮಾನಿಸಿದ್ದಾರೆ. ಕೆ.ಬಿ. ಪಾಠಕ್ ಮತ್ತು ಅವರನ್ನು ಅನುಸರಿಸಿದ ಕನ್ನಡ ಕವಿಚರಿತೆಕಾರರಾದ ರಾ. ನರಸಿಂಹಾಚಾರ್ಯ ಅವರು ಕನ್ನಡ ವಡ್ಡಾರಾಧನೆಯ ಕರ್ತೃ ರೇವಕೋಟ್ಯಾಚಾರ್ಯನೆಂದೇ ಹೇಳಿದ್ದಾರೆ. ಶಿವಾರ್ಯ ಅಥವಾ ಶಿವಕೋಟಿ ಎಂಬವನನ್ನು ಪ್ರಾಕೃತದ ಭಗವತೀ ಆರಾಧನಾ ಗ್ರಂಥದ ಕರ್ತೃವೆಂದು ಹೇಳಿದ ಡಾ. ಆ.ನೇ. ಉಪಾಧ್ಯೆ ಅವರೂ ಅನಂತರ ವಡ್ಡಾರಾದನೆಯ ಕರ್ತೃ ಶಿವಕೋಟ್ಯಾಚಾರ್ಯನೆಂಬುದಕ್ಕೆ ಸಹಮತವನ್ನು ವ್ಯಕ್ತಪಡಿಸಿದ್ದಾರೆ.
ಡಾ. ಡಿ.ಎಲ್.ಎನ್. ಅವರ ಪ್ರಕಾರ ಮೂರು ಮಂದಿ ಶಿವಕೋಟಿಗಳಿದ್ದು, ಮೊದಲನೆ ಯವನು ಭಗವತೀ ಆರಾಧನಾವನ್ನು ರಚಿಸಿದವನು. ಇವನ ಕಾಲ ಸು.ಕ್ರಿ.ಶ. ಒಂದನೆಯ ಶತಮಾನ. ಎರಡನೆಯವನು ಸ್ವಾಮಿ ಸಮಂತಭದ್ರಾಚಾರ್ಯರ ಶಿಷ್ಯ. ಇವನು ಕಾಶಿಗೋ- ಕಂಚಿಗೋ ರಾಜನಾಗಿದ್ದನೆಂದು ತಿಳಿದುಬರುತ್ತದೆ. ಇವನ ಕಾಲವೂ ಸು.ಕ್ರಿ.ಶ. ಎರಡನೆಯ ಶತಮಾನ. ಮೂರನೆಯವನು ರತ್ನಮಾಲಾ ಕೃತಿಯ ಕರ್ತೃ, ನಾಲ್ಕನೆಯವನು ಜೈನ ಟೀಕಾಕಾರನಾದ ಕೋಟಾಚಾರ್ಯನೆಂಬವನು. ಇವರುಗಳಲ್ಲಿ ಮೂರನೆಯವನಾದ ಶಿವಕೋಟಿಯೇ ವಡ್ಡರಾಧನೆಯ ಕರ್ತೃವಾಗಿರಬೇಕೆಂದು ಅವರು ಸಾಧಾರವಾಗಿ ನಿರೂಪಿಸಿದ್ದಾರೆ.
ಕಾಲ ವಿಚಾರ
ವಡ್ಡಾರಾಧನೆಯ ಕಾಲವನ್ನು ನಿಷ್ಕರ್ಷಿಸುವುದು ತುಂಬಾ ತೊಡಕಿನ ಸಂಗತಿ. ದಿ|| ಎಂ. ಗೋವಿಂದ ಪೈ ಅವರು ವಡ್ಡಾರಾಧನೆಯ ಕಾಲವನ್ನು ಚರ್ಚಿಸುತ್ತಾ ಕ್ರಿ.ಶ. ಆರನೆಯ ಶತಮಾನಕ್ಕಿಂತ ಈಚೆಯದಲ್ಲವೆಂದು ಹೇಳಿದ್ದಾರೆ. ಇದಕ್ಕೆ ಅವರು ಕೃತಿಯ ಆಂತರಿಕ ಪ್ರಮಾಣಗಳನ್ನೇ ವಿಶೇಷವಾಗಿ ಅವಲಂಬಿಸಿದ್ದಾರೆ. ರೋಮ್ ದೇಶದ ದೀನಾರ, ಗ್ರೀಕ್ ದೇಶದ ದ್ರಮ್ಮ ಎಂಬ ನಾಣ್ಯಗಳ ಹೆಸರು, ಕಲ್ಪಿಸು, ಬಡ್ಡಿಸು, ಕಳ್ಳದ, ಕೆಂದು, ಕೇಳ್ವಿ, ಪೊೞ್ದು, ಉಳ್ಳ, ಒಡೆಯ ಮುಂತಾದ ಪದ ಪ್ರಯೋಗಗಳ ಪ್ರಾಚೀನತೆಯೇ ಅವರ ವಾದಕ್ಕೆ ಸಮರ್ಥನೆ. ಆದರೆ ಹಳೆಯ ನುಡಿಗಟ್ಟಿನಲ್ಲಿ ಪ್ರವೀಣನಾದ ಅರ್ವಾಚೀನ ಕವಿಯೂ ಇಂತಹ ಪ್ರಯೋಗ ಕುಶಲನಾಗಿರುವ ಸಂಭಾವ್ಯತೆ ಇರುವುದರಿಂದ ಇದೊಂದೇ ಕೃತಿಯ ಕಾಲ ನಿರ್ಣಯಕ್ಕೆ ಸಹಕಾರಿಯಾಗದು.
ಡಾ. ಆ.ನೇ. ಉಪಾಧ್ಯೆ ಅವರು ಕೃತಿಯಲ್ಲಿರುವ ಪ್ರಾಕೃತ ಮತ್ತು ಸಂಸ್ಕೃತ ಪದ್ಯಗಳ ಆಕರಗಳನ್ನು ಹುಡುಕಿ ಕಾಲನಿರ್ಣಯಕ್ಕೆ ಬಂದಿರುವುದು ಗಮನಾರ್ಹವಾದುದು. ವಡ್ಡಾರಾಧನೆಯ ಹತ್ತೊಂಬತ್ತು ಕಥೆಗಳ ಮೊದಲಲ್ಲಿ ಇರುವ ಗಾಹೆಗಳು ಭಗವತೀ ಆರಾಧನಾ ದಲ್ಲಿವೆ. ಉಳಿದ ಕೆಲವು ಗಾಹೆಗಳು ಪ್ರಾಚೀನ ಗ್ರಂಥಗಳಿಂದ ಆಯ್ದುಕೊಂಡವುಗಳು. ಆದರೆ ಜಟಾಸಿಂಹ ನಂದಿಯ ವರಾಂಗ ಚರಿತ(ಕಾಲ ಕ್ರಿ.ಶ. ೭ನೆಯ ಶತಮಾನದ ಕೊನೆ) ಮತ್ತು ಗುಣಭದ್ರನ ಮಹಾಪುರಾಣ(ಕಾಲ ಕ್ರಿ.ಶ. ೮೯೮)ಗಳ ಶ್ಲೋಕಗಳು ವಡ್ಡಾರಾಧನೆಯಲ್ಲಿರುವು ದರಿಂದ ಅದರ ರಚನಾಕಾಲವನ್ನು ಕ್ರಿ.ಶ. ೮೯೮ಕ್ಕಿಂತ ಹಿಂದಿನದಲ್ಲವೆಂದು ನಿರ್ಧರಿಸಲಾಗಿದೆ. ಡಾ. ಆ.ನೇ. ಉಪಾಧ್ಯೆ ಅವರು ವಡ್ಡರಾಧನೆಯ ಸುಕೌಶಳಸ್ವಾಮಿಯ ಕಥೆಯಲ್ಲಿ ಇರುವ ಮಜ್ಜ ಸಹಾವಂ ಣಾಣಂ ಎಂಬ ಗಾಹೆಯ ಮೂಲವನ್ನು ದೇವಸೇನನಿಂದ ರಚಿತವಾದ ಪ್ರಾಕೃತಗ್ರಂಥ ನಯಚಕ್ರ ಅಥವಾ ನಯಲಕ್ಷಣದಲ್ಲಿದೆ ಎಂದು ಸಂಶೋಧಿಸಿರುವುದು ಅತ್ಯಂತ ಮುಖ್ಯವಾದುದು. ಈ ದೇವಸೇನನ ಕಾಲವು ಕ್ರಿ.ಶ. ೯೩೩ ಎಂದು ಸ್ಪಷ್ಟವಾಗಿರುವು ದರಿಂದ ವಡ್ಡಾರಾಧನೆಯು ಕ್ರಿ.ಶ. ೯೩೩ರಿಂದ ಈಚೆಗೆ ರಚನೆಗೊಂಡಿದೆ ಎಂಬುದು ಸ್ಥಾಪಿತ ವಾಗುತ್ತದೆ.
ಡಾ. ಡಿ.ಎಲ್.ಎನ್. ಅವರು ಭಾಷಾ ಪ್ರಯೋಗದ ದೃಷ್ಟಿಯಿಂದ ದೀರ್ಘವಾದ ವಿವೇಚನೆ ನಡೆಸಿ ಕಾಲನಿರ್ಣಯಕ್ಕೆ ನೆರವಾಗಿದ್ದಾರೆ. ಆನ್ ಎಂಬ ದ್ವಿತೀಯಾ ವಿಭಕ್ತಿ, ಉಳ್ಳ ಎಂಬರ್ಥದ ಒಡೆಯ ತದ್ಧಿತ ಪ್ರತ್ಯಯ, ದೀನಾರವೆಂಬ ರೋಮನ್ ನಾಣ್ಯದ ಹೆಸರು, ಉಂ-ಎಂಬ ಸಮುಚ್ಚಯ ಪ್ರಯೋಗ ಇತ್ಯಾದಿಗಳನ್ನು ಗಮನಿಸಿ ವಡ್ಡರಾಧನೆಯ ರಚನಾಕಾಲವನ್ನು ಪಂಪಭಾರತಕ್ಕಿಂತ ಹಿಂದಿನ ರಚನೆ ಎಂದು ತರ್ಕಿಸಿದ್ದಾರೆ. ಈ ಗ್ರಂಥದ ಭಾಷೆಯಲ್ಲಿ ಪದಗಳ ಪ್ರಕಾರಕ್ಕೆ ಸಾಧಾರಣವಾಗಿ ಹಕಾರ ಬರುವುದಿಲ್ಲವಾದುದರಿಂದ ಈ ಮಾರ್ಪಾಟು ಉಂಟಾದ ಕ್ರಿ.ಶ. ೧೧ನೆಯ ಶತಮಾನಕ್ಕಿಂತ ಮೊದಲೇ ವಡ್ಡಾರಾಧನೆ ರಚನೆಗೊಂಡಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಎಲ್ಲ ಆಧಾರಗಳಿಂದ ವಡ್ಡಾರಾಧನೆಯ ಕಾಲವನ್ನು ಕ್ರಿ.ಶ. ೯೪೦ ಎಂದು ನಿರ್ಧರಿಸಬಹುದು.
ದೇಶ ವಿಚಾರ
ಈ ಗ್ರಂಥಕರ್ತೃವು ಕನ್ನಡನಾಡಿನ ಯಾವ ಪ್ರದೇಶದವನೆಂದು ನಿರ್ಧರಿಸುವುದೂ ಕಷ್ಟದ ಕೆಲಸ. ಇದರಲ್ಲಿ ಬರುವ ಕಾರ್ತಿಕ ಋಷಿಯ ಕಥೆಯಲ್ಲಿ ತೆಂಕನಾಡಿನ ಕಿಷ್ಕಿಂಧವೆಂಬ ಬೆಟ್ಟದ ಬಳಿಯಿರುವ ಕೋಗಳಿ ಎಂಬ ಊರಿನ ಉಲ್ಲೇಖವಿದೆ. ವಡ್ಡಾರಾಧನೆಯ ಈ ಕಥೆಯ ಮೊದಲಿಗಿರುವ ಪ್ರಾಕೃತಗಾಹೆಯಲ್ಲಿ ರೋಹೇದಯಮ್ಮಿ(ರೋಹೇದಕ) ಎಂಬ ಊರಿನ ಹೆಸರಿರುವುದರಿಂದ ಕೋಗಳಿ ಎಂಬುದು ಗ್ರಂಥಕರ್ತೃವಿನ ಸ್ಥಳವಾಗಿರಬೇಕೆಂದು ಊಹಿಸಲು ಅವಕಾಶವಿದೆ. ಈಗಿನ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ, ಹೂವಿನ ಹಡಗಲಿಗಳನ್ನು ಒಳಗೊಂಡ ಪ್ರದೇಶಕ್ಕೆ ಹಿಂದಿನ ಕಾಲದಲ್ಲಿ ಕೋಗಳಿ ನಾಡು ಎಂಬ ಹೆಸರಿತ್ತು. ಜೈನ ಧರ್ಮದ ಮುಖ್ಯಕೇಂದ್ರವಾಗಿದ್ದ ಈ ಕೋಗಳಿಯಲ್ಲಿ ಅನೇಕ ಪ್ರಾಕ್ತನ ಅವಶೇಷಗಳೂ, ಶಿಲಾಶಾಸನಗಳೂ ದೊರೆತಿವೆ.
ನೂತನ ಆಧಾರಗಳು ದೊರೆಯುವ ತನಕ ವಡ್ಡಾರಾಧನೆಯ ಕರ್ತೃವನ್ನು ಕೋಗಳಿಯ ಶಿವಕೋಟ್ಯಾಚಾರ್ಯನೆಂದೂ, ಅವನ ಕೃತಿಯ ಹೆಸರು ವಡ್ಡರಾಧನೆ ಎಂದೂ, ಅವನ ಸ್ಥಳ ಬಳ್ಳಾರಿ ಜಿಲ್ಲೆಯ ಕೋಗಳಿ ಎಂದೂ, ಕೃತಿಯ ರಚನಾಕಾಲವನ್ನು ಕ್ರಿ.ಶ. ೯೪೦ ಎಂದೂ ಹೇಳಬಹುದು.
ವಡ್ಡಾರಾಧನೆಯನ್ನು ಸರಳವಾದ ಹೊಸಗನ್ನಡದಲ್ಲಿ ಅನುವಾದಿಸಿ ಅಲ್ಲಿಯ ವ್ಯಾಕರಣಾಂಶ ಗಳಿಗೆ ಟಿಪ್ಪಣಿ ನೀಡುವ ಈ ಹೊಸ ಪ್ರಯತ್ನವನ್ನು ಕನ್ನಡ ಜನತೆ ಪ್ರೀತಿಯಿಂದ ಸ್ವಾಗತಿಸುತ್ತಾರೆಂದು ಭಾವಿಸುತ್ತೇನೆ. ಮುಖ್ಯವಾಗಿ ಡಾ. ಡಿ.ಎಲ್. ನರಸಿಂಹಾಚಾರ್ಯರ ಟಿಪ್ಪಣಿಗಳನ್ನು ಆಧರಿಸಿಯೇ ಈ ಅನುವಾದವನ್ನು ಮಾಡಲಾಗಿದ್ದು(ಐದನೆಯ ಮುದ್ರಣ-೧೯೭೨), ಮೂಲಪಠ್ಯದ ಭಟಾರ, ಭಟ್ಟಾರ ಮುಂತಾದ ವಿಭಿನ್ನ ಶಬ್ದರೂಪಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಈ ಗ್ರಂಥಕ್ಕೆ ಡಾ. ಡಿ.ಎಲ್. ನರಸಿಂಹಾಚಾರ್ಯರ ಶಿಷ್ಯೋತ್ತಮರಾಗಿದ್ದ ನಾಡಿನ ಬಹುಶ್ರುತ ವಿದ್ವಾಂಸರಾದ ಡಾ. ಟಿ.ವಿ. ವೆಂಕಟಾಚಲಶಾಸ್ತ್ರೀ ಅವರು ಬೆನ್ನುಡಿಯನ್ನು ಬರೆದು ಆಶೀರ್ವದಿಸಿದ್ದಾರೆ. ಅವರಿಗೆ ಗುರುಭಾವದಿಂದ ವಂದಿಸುತ್ತೇನೆ. ಆ ಮಹಾನ್ ವಿದ್ವತ್ಚೇತನಕ್ಕೆ ನಾನು ಆಭಾರಿಯಾಗಿದ್ದೇನೆ. ಹಾಗೆಯೇ ಈ ಕಾರ್ಯವನ್ನು ಕೈಗೊಳ್ಳಲು ಅನುವು ಮಾಡಿಕೊಟ್ಟ ಪ್ರೊ. ಎ.ವಿ. ನಾವಡ ಅವರಿಗೂ, ಈ ಗ್ರಂಥವನ್ನು ಪ್ರಕಟಿಸುತ್ತಿರುವ ಹೊಸಪೇಟೆಯ ಯಾಜಿ ಪ್ರಕಾಶನದ ಶ್ರೀಮತಿ ಸವಿತಾ ಯಾಜಿ ಮತ್ತು ಶ್ರೀ ಗಣೇಶ ಯಾಜಿಯವರಿಗೂ ಹಾರ್ದಿಕ ಕೃತಜ್ಞತೆಗಳು. ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳು ಮತ್ತು ವಿದ್ವಾಂಸರು ಇದರಿಂದ ಉಪಕೃತರಾದರೆ ನನ್ನ ಶ್ರಮ ಸಾರ್ಥಕ. ನಮಸ್ಕಾರ.
ದೀಪಾವಳಿ, ೩೧.೧೦.೨೦೧೬ ಕಬ್ಬಿನಾಲೆ ವಸಂತ ಭಾರದ್ವಾಜ
ಪರಿವಿಡಿ
೧. ಸುಕುಮಾರಸ್ವಾಮಿಯ ಕಥೆ / ೧
೨. ಸುಕೌಶಳಸ್ವಾಮಿಯ ಕಥೆ / ೬೧
೩. ಗಜಕುಮಾರನ ಕಥೆ / ೯೯
೪. ಸನತ್ಕುಮಾರ ಚಕ್ರವರ್ತಿಯ ಕಥೆ / ೧೦೫
೫. ಅಣ್ಣಿಕಾಪುತ್ರನ ಕಥೆ / ೧೪೩
೬. ಭದ್ರಬಾಹು ಭಟಾರರ ಕಥೆ / ೧೪೮
೭. ಲಲಿತಘಟೆಯ ಕಥೆ / ೧೯೨
೮. ಧರ್ಮಘೋಷ ಭಟಾರರ ಕಥೆ / ೨೦೮
೯. ಸಿರಿದಿಣ್ಣನೆಂಬ ಭಟಾರರ ಕಥೆ / ೨೧೭
೧೦ ವೃಷಭಸೇನ ಭಟಾರರ ಕಥೆ / ೨೨೬
೧೧. ಕಾರ್ತಿಕ ಋಷಿಯ ಕಥೆ / ೨೩೭
೧೨. ಅಭಯಘೋಷರೆಂಬ ಮುನಿಯ ಕಥೆ / ೨೪೬
೧೩. ವಿದ್ಯುಚ್ಚೋರನೆಂಬ ರಿಸಿಯ ಕಥೆ / ೨೫೦
೧೪. ಗುರುದತ್ತ ಭಟಾರರ ಕಥೆ / ೨೭೮
೧೫. ಚಿಲಾತಪುತ್ರನ ಕಥೆ / ೩೨೭
೧೬. ದಂಡಕನೆಂಬ ರಿಸಿಯ ಕಥೆ / ೩೪೦
೧೭. ಮಹೇಂದ್ರದತ್ತಾಚಾರ್ಯರ್ ಮೊದಲಾದ ಅಯ್ನೂರ್ವರ್ ರಿಸಿಯರ್ಕಳ ಕಥೆ / ೩೫೧
೧೮. ಚಾಣಾಕ್ಯ ರಿಸಿಯ ಕಥೆ / ೩೬೦
೧೯. ವೃಷಭಸೇನರೆಂಬ ರಿಸಿಯರ ಕಥೆ / ೩೮೪
Reviews
There are no reviews yet.