ಗೌರವ ಸಂಪಾದಕನ ನುಡಿ
ವಿದ್ಯಾವಾಚಸ್ಪತಿ ಶ್ರೀ ಬನ್ನಂಜೆ ಗೋವಿಂದಾಚಾರ್ಯರು ಸಂಸ್ಕೃತ ಮತ್ತು ಕನ್ನಡ ಕ್ಷೇತ್ರದಲ್ಲಿ ನಡೆಸಿದ್ದ ಶಾಸ್ತ್ರ-ಸಾಹಿತ್ಯ ಸಾಧನೆ ನಮಗೆ ಬೆರಗನ್ನು ತರುತ್ತದೆ. ಇವರ ತಂದೆ ಸಂಸ್ಕೃತದ ಮಹಾವಿದ್ವಾಂಸರಾಗಿದ್ದ ವಿದ್ವಾನ್ ಪಡುಮುನ್ನೂರು ನಾರಾಯಣಾಚಾರ್ಯರು. ತಂದೆಯಿಂದ ಶಾಸ್ತ್ರ, ವೇದಾಂತಸಾಹಿತ್ಯದ ಬಳುವಳಿ. ಶ್ರೀ ಫಲಿಮಾರುಮಠದ ಶ್ರೀ ವಿದ್ಯಾಮಾನ್ಯ ತೀರ್ಥ ಶ್ರೀಪಾದಂಗಳವರಿಂದ ಶಾಸ್ತ್ರಾನುಗ್ರಹ. ಅನೇಕ ಅಲೌಕಿಕ ಶಾಸ್ತ್ರವಿಷಯಗಳಲ್ಲಿ ಸ್ವಯಮಾಚಾರ್ಯ. ವೇದ, ಉಪನಿಷತ್ತು, ದರ್ಶನ, ವ್ಯಾಕರಣ, ಪುರಾಣ, ತಂತ್ರ-ಮಂತ್ರ, ಗಣಿತ, ಸಂಗೀತ, ಛಂದಶ್ಶಾಸ್ತ್ರ, ಲಲಿತಕಲೆ, ಕಾವ್ಯ, ನಾಟಕ, ಅನುವಾದ, ಕಾವ್ಯಚಿಂತನೆ ಹೀಗೆ ಅನೇಕ ಶಾಸ್ತ್ರ-ಸಾಹಿತ್ಯ-ಕಲಾ ಪ್ರಕಾರಗಳಲ್ಲಿ ಅನನ್ಯ ಸಿದ್ಧಿ-ಸಾಧನೆ ಮಾಡಿದ ವಿದ್ವತ್ತಲ್ಲಜರು. ಸಂಸ್ಕೃತ ಸಂಶೋಧನೆಯ ಜಗತ್ತಿನಲ್ಲಂತೂ ಅವರು ಒಂಟಿಸಲಗ. ಕನ್ನಡದ ಮಣ್ಣಿನಲ್ಲಿ ನಿಂತು, ಸಂಸ್ಕೃತವೆಂಬ ಆಕಾಶವನ್ನು ತಮ್ಮ ಕಣ್ಣಲ್ಲಿ ತುಂಬಿಕೊಂಡ ಕವಿ-ದಾರ್ಶನಿಕ. ತಮ್ಮ ವಾಗ್ಮಿತೆಯಿಂದ, ಸಹಸ್ರಾರು ಅಭಿಮಾನಿಗಳನ್ನು ತಮ್ಮತ್ತ ಸೆಳೆದುಕೊಂಡ ವಶ್ಯವಾಣೀ ಚಕ್ರವರ್ತಿ. ಋಷಿಸದೃಶ ವ್ಯಕ್ತಿತ್ವ. ಪದ್ಮಶ್ರೀ ಡಾ|| ಬನ್ನಂಜೆ ಗೋವಿಂದಾಚಾರ್ಯರು ಸಂಸ್ಕೃತದಲ್ಲಿದ್ದ ಅಗಾಧ ಸಂಪತ್ತನ್ನು, ಕನ್ನಡದ ಕನ್ನಡಿಯಲ್ಲಿ ಸೆರೆಹಿಡಿದವರಲ್ಲಿ ವಿಶಿಷ್ಟರು. ಅವರು ತಮ್ಮ ಎಳೆವಯಸ್ಸಿನಲ್ಲಿಯೇ ಮಾಧ್ವಸಾಹಿತ್ಯ ಮತ್ತು ಸಂಸ್ಕೃತಸಾಹಿತ್ಯವನ್ನು ಆಪೋಷಣ ತೆಗೆದುಕೊಂಡರು.
ಬನ್ನಂಜೆ ಅವರಿಗೆ ಭಗವದ್ಗೀತೆ, ರಾಮಾಯಣ, ಮಹಾಭಾರತ ಮತ್ತು ಭಾಗವತಗಳು ಎಂದೆಂದೂ ಉಪಾದೇಯ. ಅವುಗಳ ಬಗೆಗೆ ಆಳವಾಗಿ ಚಿಂತಿಸಿದ ಭಾರತೀಯ ವಿದ್ವಾಂಸರಲ್ಲಿ ಇವರು ಅಗ್ರಗಣ್ಯರು. ಭಗವದ್ಗೀತೆಗೆ ಶಂಕರ, ಮಧ್ವ ಮತ್ತು ರಾಮಾನುಜರ ಭಾಷ್ಯಗಳನ್ನು ಅನುವಾದಿಸಿಕೊಟ್ಟು ಅದಕ್ಕೆ ಅವರು ನೀಡಿರುವ ಟಿಪ್ಪಣಿಗಳು ನಮ್ಮ ಸಂಸ್ಕೃತಿಯ ತಾತ್ತ್ವಿಕನೆಲೆ ಯನ್ನು ತಿಳಿಯಲು ಅನುವು ಮಾಡಿಕೊಟ್ಟಿವೆ. ಆದರೆ, ಅವರ ನಿಧನದಿಂದಾಗಿ ಪೂರ್ಣಗೊಳ್ಳದೆ ಅಪೂರ್ಣವಾಗಿಯೇ ಉಳಿದದ್ದು ನಮ್ಮ ದುರದೃಷ್ಟ.
ಬನ್ನಂಜೆ ಅವರು ಯಾವ ಕೆಲಸವನ್ನು ತೆಗೆದುಕೊಂಡರೂ ಅದರಲ್ಲಿ ತಮ್ಮ ಛಾಪನ್ನು ಉಳಿಸಿಬಿಡುತ್ತಿದ್ದರು. ಪ್ರಾಚೀನಗ್ರಂಥಗಳ ಪರಿಶೋಧನೆಯಲ್ಲಿ ಅವರು ಹೊಸಹೆಜ್ಜೆ ಇಟ್ಟಿದ್ದ ರೆಂಬುದಕ್ಕೆ ಶ್ರೀಮಧ್ವವಿಜಯ ಹಾಗೂ ‘ಶ್ರೀಮಹಾಭಾರತ ತಾತ್ಪರ್ಯನಿರ್ಣಯ ಇಂಥ ಗ್ರಂಥಗಳ ಸಂಪಾದನೆಯನ್ನೇ ಗಮನಿಸಬಹುದು.
ಶ್ರೀ ಬನ್ನಂಜೆಯವರು ಸಣ್ಣದರಲ್ಲಿ ಬದುಕಿದವರಲ್ಲ; ದೊಡ್ಡದನ್ನು ಹಿಡಿದು ದೊಡ್ಡತನ ವನ್ನು ಎತ್ತಿ ತೋರಿಸಿದವರು. ದೀರ್ಘಂ ಪಶ್ಯತ ಮಾ ಹ್ರಸ್ವಂ ಎಂಬುದು ಪ್ರಾಚೀನರ ಮಾತು. ಅದಕ್ಕೆ ಬನ್ನಂಜೆಯವರ ಜೀವನ-ಸಾಧನೆಯೇ ಒಂದು ನಿದರ್ಶನ. ಕಳೆದ ಆರು ದಶಕಗಳಿಂದ ಸಂಸ್ಕೃತಗ್ರಂಥಗಳನ್ನು ಪರಿಶೋಧಿಸುತ್ತಲೇ ಪಾಠಶುದ್ಧಿ-ಅರ್ಥಶುದ್ಧಿಗಳನ್ನು ನಿರ್ಣಯಿಸಿ ಭಾಷ್ಯ-ವ್ಯಾಖ್ಯಾನಗಳನ್ನು ರಚಿಸಿದ ಮಹಾನುಭಾವರು.
ಸಂಸ್ಕೃತದಲ್ಲಿರುವ ಅಪಾರವಾದ ವಾಙ್ಮಯ ರಾಶಿಯನ್ನು ಕನ್ನಡಕ್ಕೆ ತರಬೇಕೆಂಬ ದೀರ್ಘ ಪ್ರಯತ್ನವನ್ನು ಬನ್ನಂಜೆಯವರು ತಮ್ಮ ಆಯುಷ್ಯದ ಉದ್ದಕ್ಕೂ ಮಾಡಿಕೊಂಡೇ ಬಂದರು. ಬನ್ನಂಜೆಯವರು ಪ್ರತಿಯೊಂದು ಅನುವಾದಗಳ ಗ್ರಂಥಕ್ಕೂ ಕನ್ನಡದ ಕನ್ನಡಿಯಲ್ಲಿ ಎಂದೇ ಕರೆದದ್ದುಂಟು. ಕನ್ನಡವು ಬನ್ನಂಜೆಯವರ ಕೈಯಲ್ಲಿ ಕನ್ನಡಿಸುತ್ತಿದೆ. ಆಚಾರ್ಯರು ತಮ್ಮ ಕೃತಿಗಳ ಮೂಲಕ ಆನಂದವನ್ನೂ ಸಂಸ್ಕೃತ-ಕನ್ನಡದ ಮೂಲಕ ಭಾಷ್ಯತೀರ್ಥವನ್ನೂ ನಮಗೆ ನೀಡಿದ್ದಾರೆ. ಇವರು ಪದ್ಮಶ್ರೀ ಪುರಸ್ಕಾರ ಪಡೆದು ಕನ್ನಡ-ಸಂಸ್ಕೃತಕ್ಕೆ ಕೋಡುಮೂಡಿಸಿ ದ್ದಾರೆ. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿಯನ್ನು ಕೊಟ್ಟು ವಿಶ್ವವಿದ್ಯಾಲಯ ತನ್ನ ಗೌರವವನ್ನು ಹೆಚ್ಚಿಸಿಕೊಂಡಿದೆ. ಬನ್ನಂಜೆ ಅವರು ಇರುವಲ್ಲಿ ನೂರಾರು ಜ್ಞಾನೋಪಾಸಕ ಶಿಷ್ಯರು, ಅಭಿಮಾನಿಗಳೂ ಬಂದು ನೆರೆಯುತ್ತಾರೆ. ಇಂಥ ವಿದ್ವತ್ತಲ್ಲಜರನ್ನು ಪಡೆದಿದ್ದ ನಮ್ಮ ನಾಡು ಧನ್ಯ. ಅವರು ಈಗ ನಮ್ಮೊಂದಿಗಿಲ್ಲ. ಆದರೆ, ಅವರ ‘ಕೃತಿಶರೀರ ನಮ್ಮೊಂದಿಗಿದೆ. ಅವರು ಇನ್ನೂರಕ್ಕೂ ಮಿಗಿಲಾಗಿ ಕನ್ನಡ-ಸಂಸ್ಕೃತ ಗ್ರಂಥಗಳನ್ನು ನಮ್ಮ ನಾಡಿಗೆ ಬಿಟ್ಟು ಹೋಗಿದ್ದಾರೆ. ಈ ಇಪ್ಪತ್ತು-ಇಪ್ಪತ್ತೊಂದನೆಯ ಶತಮಾನದ ಅಪೂರ್ವ ವಿದ್ವಾಂಸರ ಪಟ್ಟಿ ಮಾಡಿದಾಗ, ಅದರಲ್ಲಿ ವಿದ್ಯಾವಾಚಸ್ಪತಿ, ಡಾ|| ಬನ್ನಂಜೆ ಗೋವಿಂದಾಚಾರ್ಯರು ಪ್ರಥಮ ಪಂಕ್ತಿಯಲ್ಲಿ ಬಂದು ನೆಲೆ ನಿಲ್ಲುತ್ತಾರೆ.
ಇಂಥ ಮಾನನೀಯ, ಮಾನವೀಯ ವಿದ್ವಾಂಸರು ನಮ್ಮನ್ನು ಅಗಲಿ ಎರಡು ವರ್ಷ ಗಳಾದುವು. ಅವರ ನೆನಪಿನಲ್ಲಿ ‘ಶ್ರೀ ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನವು ‘ಗೋವಿಂದಾಲೋಕ, ‘ಗೋವಿಂದಮಣಿದರ್ಪಣ, ‘ಬನ್ನಂಜೆಯವರೊಡನೆ ಉಪ-ವಾಸ ಮತ್ತು ‘ಃಚಿಟಿಟಿಚಿಟಿರಿe ಖeಜಿಟeಛಿಣioಟಿs ಎಂಬ ಸಾರ್ಥಕ ನಾಲ್ಕು ಕೃತಿಗಳನ್ನು ಸಿದ್ಧಪಡಿಸಿದೆ. ಡಾ|| ವೀಣಾ ಬನ್ನಂಜೆ ನಾಲ್ಕು ಕೃತಿಗಳ ಒಟ್ಟು ಕಲ್ಪನೆಯನ್ನು ರೂಪಿಸಿದ್ದಾರೆ. ಪ್ರತಿಷ್ಠಾನದ ಸದಸ್ಯರು ಅವರ ಸಂಕಲ್ಪನೆಗೆ ಕೈಜೋಡಿಸಿದ್ದಾರೆ. ತತ್ಪರಿಣಾಮ ಈ ನಾಲ್ಕು ಕೃತಿಗಳು ನಿಮ್ಮ ಮುಂದಿವೆ. ಕನ್ನಡದ ಜನ ಈ ಕೃತಿಗಳನ್ನು ಆದರದಿಂದ ಸ್ವೀಕರಿಸಬೇಕೆಂದು ನಾನು ಬೇಡುತ್ತೇನೆ. ಈ ನಾಲ್ಕು ಕೃತಿಗಳ ಲೇಖಕರ, ಸಂಪಾದಕರ ಮತ್ತು ಪ್ರಕಾಶಕರ ಶ್ರಮವನ್ನೂ ಶ್ರದ್ಧೆಯನ್ನೂ ಕೃತಜ್ಞತಾಪೂರ್ವಕವಾಗಿ ನಾನು ಗೌರವಿಸುತ್ತೇನೆ.
೧.೧೨.೨೦೨೨ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ
ಬೆಂಗಳೂರು ವಿಶ್ರಾಂತ ಕುಲಪತಿ
ಕ್ರತುಗಳ ಹೆಣಿಗೆ
ಬನ್ನಂಜೆ ಗೋವಿಂದಾಚಾರ್ಯ’ ಎಂಬ ಪದಗುಚ್ಛದಲ್ಲಿ ಬನ್ನಂಜೆ ಎಂಬುದು ಊರು. ಗೋವಿಂದಾಚಾರ್ಯ ಅಂದರೆ ವ್ಯಕ್ತಿಯ ಹೆಸರು ಅಂತ ಸಾಮಾನ್ಯವಾಗಿ ಗ್ರಹಿಕೆಯಾಗುತ್ತದೆ. ಆದರೆ ಬನ್ನಂಜೆ ಗೋವಿಂದಾಚಾರ್ಯ’ ಎನ್ನುವ ಶಬ್ದ ನಾಮಸೂಚಕವಾಗಷ್ಟೇ ಉಳಿದಿಲ್ಲ. ಅದೊಂದು ಅಷ್ಟಾಕ್ಷರ ಸೂತ್ರ. ಆ ಸೂತ್ರವನ್ನು ಭಾಷ್ಯೆ, ವ್ಯಾಖ್ಯೆ, ಟೀಕು, ಟಿಪ್ಪಣಿಗಳಿಂದ ವಿವರಿಸಿದಷ್ಟೂ, ಮತ್ತೂ ತನ್ನ ವ್ಯಕ್ತಿತ್ವವನ್ನು ವರ್ಚಸ್ಸನ್ನು ಹರಡಿಕೊಳ್ಳುವ ಗೂಢಾದ್ಗೂಢ ತರವಾದ ಪ್ರಜ್ಞಾಸೂತ್ರವದು. ಆ ಸೂತ್ರವನ್ನು ಅರಗಿಸಿಕೊಳ್ಳಲು ಹೊರಡುವವನ ಜೀರ್ಣಶಕ್ತಿ ಯನ್ನು ಅವಲಂಬಿಸಿ ಈ ಮಹಾಮನೀಷಿ ತಿಳಿಯುತ್ತಾ ಹೋಗುತ್ತಾರೆ, ತಿಳಿಯಾಗುತ್ತಾ ಹೋಗುತ್ತಾರೆ. ಅವರೊಂದು ವಿದಗ್ಧವಿಸ್ಮಯದ ವಿರಾಡ್ವಿಭೂತಿ. ಇಳಿದಷ್ಟೂ ಆಳವಾಗುವ, ಅಳೆದಷ್ಟೂ ಅಗಲವಾಗುವ -ಪ್ರಜ್ಞಾನಪಾರಾವಾರ, ವಾಗ್ವಿದಾಂವರ, ತತ್ತ್ವರ್ಷಿ. ಮೊಗೆದಷ್ಟೂ ಮತ್ತೆ ಮತ್ತೆ ಚಿಮ್ಮುವ ನಲ್ನುಡಿಯ ನೀರೂಟೆ. ಅರಿತಷ್ಟೂ ಅಚ್ಚರಿ ಎನಿಸುವ ಅಧ್ಯಯನದ ಆಪ್ತಾಚಲ. ಅವರದು ವಾಙ್ಮಯತಪೋಜೀವನ. ಅಕ್ಷರಾನುಸಂಧಾನ, ಅಕ್ಷರೋಪಾಸನ ಅವರ ಜೀವನವ್ರತ. ಅವರು ಗಳಿಸಿದ್ದೆಲ್ಲವೂ ಅ-ಕ್ಷರವೇ. ಅತ ಏವ, ಬನ್ನಂಜೆ ಗೋವಿಂದಾ ಚಾರ್ಯರು ವಿದ್ಯಾಶೇವಧಿ, ವಿದ್ಯಾವಾಚಸ್ಪತಿ, ವಿದ್ಯಾರತ್ನಾಕರ.
ಸ್ವಾಧ್ಯಾಯದ ಸ್ವಸ್ತಿಪಂಥದಲ್ಲಿ ಶಾಸ್ತ್ರಾದಿಗಳ ಬೋಧವನ್ನು ಶೋಧವನ್ನು ಮೋದವನ್ನು ಕಂಡುಕೊಂಡವರು ಆಚಾರ್ಯರು. ಏಕೋಭಾವದಿಂದ, ಏಕಲಕ್ಷ್ಯದಿಂದ ಏಕನಿಷ್ಠೆಯಿಂದ ಅಭ್ಯಸಿಸುವಾಗ, ಪ್ರಾಯಃ ಅವರಿಗೆ ಲಭಿಸಿದ ಎಲ್ಲ ಸಂಸ್ಕೃತ ಕನ್ನಡ ಮಹಾಗ್ರಂಥಗಳನ್ನು ಓದಿ ಮಡಚಿಟ್ಟಿದ್ದಾರೆ. ಮಡಚಿಟ್ಟಿದ್ದು ಯಾಕೆಂದರೆ ಅವರು ಯಾವತ್ತೂ ಒಂದೋದಿನ ಬಳಿಕ ಆಯಾ ಪುಸ್ತಕಗಳನ್ನು ತೆರೆದು ನೋಡಿದ್ದೇ ಇಲ್ಲ. ಅವರದು ಏಕಪಾಠ. ಒಂದು ಓದಿಗೇ ತತ್ತತ್ಕೃತಿಗಳು ಸಮಗ್ರವಾಗಿ ಸ್ಮೃತಿಕೋಶದಲ್ಲಿ ಸಂಗ್ರಹವಾಗುವಂತಹ ಬೆರಗಿನ ಅಧ್ಯಯನ. ಅದು ಬರೀ ಒಪ್ಪಿಸುವ’ ಬೆಡಗಿನ ನೆನಪಲ್ಲ. ಓದೋದುತ್ತಲೇ ಎಲ್ಲ ಮೂಲ ಚೂಲಗಳನ್ನು ಆಲೋಡಿಸಿ, ಆಲೋಚಿಸಿ, ವಿವೇಚಿಸಿ, ವಿಮರ್ಶಿಸಿ, ಶುದ್ಧಿಸಿ ಭಟ್ಟಿಯಿಳಿಸಿ ಕೊಂಡ ವ್ಯಾಸಂಗ; ಜೊಳ್ಳುಪೊಳ್ಳುಗಳನ್ನು ಜರಡಿ ಹಿಡಿದು ಝಾಡಿಸಿ, ಭದ್ರೀಕೃತವಾದ ಚಿಂತನ.
ಆಚಾರ್ಯರದ್ದು ವಿದ್ಯಾರಣ್ಯದಲ್ಲಿ ಸಲಗನ ಹೊಲಬು. ಹಾದಿ ಇದ್ದಲ್ಲಿ ಹೋಗುವುದಲ್ಲ, ಹೋದಲ್ಲಿ ಬಟ್ಟೆ ಬಯಲಾಗುತ್ತದೆ. ಪ್ರತಿವಿಷಯದಲ್ಲೂ ಅವರದ್ದೇ ಆದ ಒಳನೋಟ, ವಿಶ್ಲೇಷಣೆ, ತೀರ್ಮಾನ ಇರುತ್ತದೆ. ಅವರು ಉಪನ್ಯಾಸಗಳಲ್ಲಿ ಹೇಳುತ್ತಿದ್ದ ಮಾತು, ಈ ಶ್ಲೋಕಕ್ಕೆ ಇಷ್ಟೇ ಅರ್ಥ ಅಂತಾದರೆ, ನಿಮಗೆ ಬಜಾರಿನ ಪುಸ್ತಕದಲ್ಲೂ ಅದು ಸಿಗುತ್ತದೆ. ಡಿಕ್ಷನರಿ ನೋಡಿದರೂ ಗೊತ್ತಾಗುತ್ತದೆ. ಹೊಸ ಹೊಳಹು ಬೇಕು ಅಂದ್ರೆ ಬನ್ನಂಜೆಯನ್ನ ಕೇಳಬೇಕು. ಅದು ಅವರ ಪ್ರಖರಾಧ್ಯಯನದಿಂದ ಹೊಮ್ಮಿದ, ಗಚ್ಚುಗಾರೆಯಂತಿದ್ದ ಆತ್ಮಪ್ರತ್ಯಯ.
ಶಾಸ್ತ್ರಜ್ಞರು-ಶಾಸ್ತ್ರಾನುಸಂಧಾನನಿಮಗ್ನರು ಲೋಕದೂರರು, ಜಡರು’ ಎಂಬುದು ಲಾಗಾಯ್ತಿನಿಂದಲೂ ಇರುವ ಪ್ರಥೆ. ಆದರೆ ಬನ್ನಂಜೆಯವರು ಇದಕ್ಕೆ ಅಪವಾದ. ಇವರಂತಹ ಲೌಕಿಕರು ಲೌಕಿಕರಲ್ಲೇ ಸಿಗಲಿಕ್ಕಿಲ್ಲ. ಆದ್ದರಿಂದಲೇ, ಶಾಸ್ತ್ರಪಾಂಡಿತ್ಯೇತರವಾದ ಪತ್ರಿಕೋದ್ಯಮ, ಸಿನೆಮಾಸ್ಕ್ರಿಪ್ಟ್, ನವ್ಯಕಾವ್ಯರಚನೆಯಂತಹವುಗಳು ಆಚಾರ್ಯರಲ್ಲಿ ಮೊಳೆತು ಟಿಸಿಲೊಡೆದಿದ್ದಾವೆ. ಕನ್ನಡನವ್ಯಕಾವ್ಯದ ಶಕಪುರುಷರಾದ ಗೋಪಾಲಕೃಷ್ಣ ಅಡಿಗರು, ಬನ್ನಂಜೆಯವರ ನವ್ಯಕವಿತೆಗಳನ್ನು ಮೆಚ್ಚಿ, ಸಂಕಲನವನ್ನು ತರಲು ಆಗ್ರಹಿಸಿದ್ದರು. ನಿಶ್ಛಂದವಾದ ಕವಿತೆಗಳನ್ನು ಬರೆದಷ್ಟೇ ಸಲೀಲವಾಗಿ ವೃತ್ತಗಳನ್ನೂ ಗೇಯಗೀತಗಳನ್ನೂ ನಿಂತ ನಿಲುವಲ್ಲೇ ಬರೆಯುತ್ತಿದ್ದ ಆಶುಕವಿ. ಆಚಾರ್ಯರ ಪ್ರಾಚುರ್ಯವಿರುವುದು ವೇದವೇದಾಂತೋಪನ್ಯಾಸಕರಾಗಿ. ಕಾರಣ, ವೇದಾಂತದಂತಹ ಅಸುಲಭಗಮ್ಯವಾದ ಜಟಿಲವಿಷಯವನ್ನು ಮನಂಬುಗುವಂತೆ ಸಂವಹಿಸುವ ಅವರ ವಚೋವಿನ್ಯಾಸ. ಆಚಾರ್ಯರೇ ಹೇಳುತ್ತಿದ್ದಂತೆ, ಅವರ ಮಾತಿನ ಹದಕ್ಕೆ ಮೆರುಗಿಗೆ ಮಾಟಕ್ಕೆ ಶ್ರುತಿಯನ್ನೊದಗಿಸಿದ್ದು ಕಾವ್ಯನಾಟಕಾದಿ ಅಲಂಕಾರಶಾಸ್ತ್ರದ ಹೂರಣ. ಇಕ್ಕೈಗಳಲ್ಲಿ ಕಿಂಚಿದೂನವಿಲ್ಲದಂತೆ ಅತ್ಯಂತ ಸುಂದರವಾಗಿ ಬರೆಯುತ್ತಿದ್ದ ಆಚಾರ್ಯರದು ವಾಙ್ಮಯಲೋಕದಲ್ಲೂ ಸಮಾನಸವ್ಯಸಾಚಿತ್ವ.
ಋಷಿಕಲ್ಪರಾದ ಬನ್ನಂಜೆ ಗೋವಿಂದಾಚಾರ್ಯರ ಆತ್ಮಭಾಷೆ ಸಂಸ್ಕೃತವಾದರೆ, ಹೃದಯದ ಭಾಷೆ ಕನ್ನಡ. ದಿವ್ಯಮನೋಹರವಾದ ವೇದ-ಸಂಸ್ಕೃತ ಕೃತಿಗಳನ್ನು ನಲ್ಗನ್ನಡದಲ್ಲಿ ಸೊದೆ ಗನ್ನಡದಲ್ಲಿ ಅವರು ಅನನ್ಯವಾಗಿ ಅನುಪಮವಾಗಿ ಅನೂದಿಸಿರುವುದೇ ಇದಕ್ಕೆ ಚಿರಂತನಸಾಕ್ಷಿ. ಸಂಸ್ಕೃತಪ್ರಾಣರಾದ ಪಂಡಿತರು ಸಾಮಾನ್ಯವಾಗಿ ಇಂತಹ ಅನುವಾದ ಕೈಂಕರ್ಯಕ್ಕೆ ಕೈ ಯಿಡುವುದು ವಿರಳ. ಆಚಾರ್ಯರ ಕನ್ನಡಸಾರಸ್ವತ ಸೇವೆಯಿಂದ ನಾಡನುಡಿಯ ಸಾಹಿತ್ಯದ ಉಗ್ರಾಣ ಇನ್ನಷ್ಟು ಶ್ರೀಮಂತವಾಯಿತು.
ಆಚಾರ್ಯರ ಸಾಹಿತ್ಯಕೃಷಿಕ್ಷೇತ್ರದ ಹರಹು ಅಸೀಮವಾದುದು. ತಾಳೆಗರಿ ಹಸ್ತಪ್ರತಿಗಳಿಂದ ಮೊದಲುಗೊಂಡು, ಅವರ ಸಂಶೋಧನ ಕ್ಷಿತಿಜವೂ ಬಹುವಿಸ್ತರದ್ದು. ಅದಮ್ಯವಾದ ಕನ್ನಡ ಪ್ರೀತಿಯಿಂದ ಬನ್ನಂಜೆಯವರು ಕನ್ನಡದಲ್ಲಿ ಅಪ್ರಮೇಯವಾದ ಅನೇಕ ಮೌಲಿಕ ಗ್ರಂಥಗಳನ್ನು ರಚಿಸಿದ್ದಾರೆ. ಅದು ಕನ್ನಡ ಭಾಷೆಯ ಸೌಭಾಗ್ಯವೆಂದೇ ಹೇಳಬೇಕು. ಅಂತಹ ಭಾಗ್ಯಾಭರಣಗಳ ಪರಿಚಯಾತ್ಮಕವಾದ ಹೊತ್ತಗೆಯೇ ಈ ಗೋವಿಂದಮಣಿದರ್ಪಣ. ಬನ್ನಂಜೆ ಗೋವಿಂದಾಚಾರ್ಯರಿಂದ ರಚಿತವಾದ ಕನ್ನಡ ಕೃತಿಗಳ ಖಚಿತವಾದ ನಿಖರವಾದ ಸಂಖ್ಯೆ ಕೈಗೊಗ್ಗಿಲ್ಲ- ಸಾಕಷ್ಟು ಹುಡುಕಾಡಿಯೂ. ವೀಣಾ ಹಾಗೂ ಇತರ ಸಮಾನಹೃದಯರು ನಿರಂತರ ಪರಿಶ್ರಮದಿಂದ ಆಚಾರ್ಯರ ಕೃತಿಗಳನ್ನು ಸಂಗ್ರಹಿಸಲು ತೊಡಗಿದ ಪರಿಣಾಮ ವಾಗಿ, ಸುಮಾರು ನಲವತ್ತರ ಆಸುಪಾಸು ಗ್ರಂಥಗಳು ಲಬ್ಧವಾದವು. ಆ ಎಲ್ಲ ಕೃತಿಗಳ ಸ್ಥೂಲವಾದ ಪರಿಚಯ, ವಸ್ತು-ವಿಷಯಗಳ ಮಾಹಿತಿ, ಅನನ್ಯತೆ-ಒಟ್ಟಿನಲ್ಲಿ, ಯಾವಯಾವ ಕೃತಿಗಳಲ್ಲಿ ಏನೇನಿದೆ ಎಂಬ ಕೈಪಿಡಿಯೊಂದನ್ನು ತರುವ ಯೋಚನೆ ಬಂದಾಗ ಗೋವಿಂದ ಮಣಿದರ್ಪಣ’ ಹೊಳಪುಗೊಂಡಿತು.
ಮಾಹಿತಿಯಿಂದ ಕೂಡಿದ ಒಂದು’ ಪುಸ್ತಕವನ್ನು ಅವಲೋಕಿಸಿದರೆ, ಒಬ್ಬ ಲೇಖಕನ (ಲಬ್ಧವಿರುವ) ಬಹುತೇಕ ಎಲ್ಲ(ಕನ್ನಡ) ಕೃತಿಗಳ ಪರಿಚಯವು ಮುಷ್ಟಿಮೇಯವಾಗಬೇಕು -ಇದು ನಮ್ಮ ಉದ್ದೇಶ, ಸಂಕಲ್ಪ. ಅದಕ್ಕಾಗಿ ನಾಡಿನ ಅನ್ಯಾನ್ಯ ವಿದ್ವಾಂಸರನ್ನು ಸಂಪರ್ಕಿಸಿದೆವು. ಆಚಾರ್ಯರ ಕೃತಿಗಳನ್ನು ಕಳಿಸಿ, ಆಯಾ ಗ್ರಂಥದ ಕುರಿತು ಸಂಕ್ಷಿಪ್ತವಾಗಿಯೂ ಸಮಗ್ರ ವಾಗಿಯೂ ಪರಿಚಯಲೇಖವನ್ನು ನೀಡಲು ಕೋರಿದೆವು. ಈ ಕೋರಿಕೆಯೇ ವಸ್ತುತಃ ಆಕಾಶವನ್ನು ಕನ್ನಡಿಯಲ್ಲಿ ತೋರಿಸಬೇಕು ಎಂಬ ಒತ್ತಡದ್ದು. ಎಲ್ಲ ವಿದ್ವದ್ವರೇಣ್ಯರೂ ಆಚಾರ್ಯರ ಮೇಲಿನ ಪ್ರೀತಿಯಿಂದ, ಸಾಹಿತ್ಯಪರಿಚಾರಿಕೆಯ ವಿನೀತಭಾವದಿಂದ ಸಂತೋಷ ದಿಂದ, ನಮ್ಮ ಮನವಿಯನ್ನು ಮನ್ನಿಸಿದರು. ಇಂದಿನ ವೇಗಾಯಮಾನ ಕಾಲದೋಟದಲ್ಲಿ, ತಮ್ಮ ತಮ್ಮ ಬಾಳೊಜ್ಜೆಯ ಹೇರೊತ್ತಡಗಳ ನಡುವೆಯೂ, ಕ್ಲೃಪ್ತಕಾಲದಲ್ಲಿ ಸರ್ವರೂ ಲೇಖನಗಳನ್ನು ಬರೆದುಕೊಟ್ಟರು. ನಮ್ಮ ಸತ್ಸಂಕಲ್ಪಕ್ಕೆ ಸಾಹಿತ್ಯಸಮಿಧೆಯಾದರು. ಆ ಎಲ್ಲ ಮಹನೀಯ ಲೇಖಕರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.
ಅಕ್ಕರಗಳ ಜೋಡಣೆಯಲ್ಲಿ ಅಕ್ಕರೆಯಿಂದ ತಮ್ಮನ್ನು ತೊಡಗಿಸಿಕೊಂಡು ನಮ್ಮ ಶಿರೋಭಾರ ವನ್ನು ಇಳಿಸಿದ ಹೇಮಲತಾ ಅವರಿಗೆ ಹೃತ್ಪೂರ್ವಕ ನಮಸ್ಕಾರಗಳು.
ಅರ್ಥಪೂರ್ಣವೂ ಧ್ವನಿಪೂರ್ಣವೂ ಚಕ್ಷೂರಂಜಿತವೂ ಆದ ಮುಖಪುಟವನ್ನು ರಚಿಸಿ ಕೊಟ್ಟ, ವಿಖ್ಯಾತ ಕಲಾವಿದ ಗಂಜೀಫ ರಘುಪತಿ ಭಟ್ಟರಿಗೆ ಹಾರ್ದಾಭಿವಂದನಗಳು.
ಆಚಾರ್ಯರ ಕೃತಿಗಳ ಈಷತ್ಪ್ರತಿಫಲನವೆಂಬ ಅಭಿಪ್ರಾಯದ ಗೋವಿಂದಮಣಿದರ್ಪಣ ಎಂಬ ಶೀರ್ಷಿಕೆಯನ್ನು ಸಮರ್ಥವಾಗಿ ಮುಂಬಾಳೆಯಲ್ಲಿ(ಮುಖಪುಟ) ಮೂಡಿಸಿ, ಮುಖಪುಟ ವಿನ್ಯಾಸವನ್ನು ಆಕರ್ಷಕವಾಗಿ ಮಾಡಿಕೊಟ್ಟ ಖ್ಯಾತ ಕಲಾವಿದ ಸತೀಶ ಯಲ್ಲಾಪುರ ಅವರಿಗೆ ಹೃನ್ನಮನಗಳು.
ಲೇಖನಗಳ ಒಟ್ಟೋಣ, ಹಾಳೆಗಳ ಕಟ್ಟೋಣಗಳ ಅವಿರತಶ್ರಮವನ್ನೂ ಸುಸ್ಮಿತದ ಮಂದಮಾರುತವಾಗಿಸಿ ಅಚ್ಚುಕಟ್ಟಾಗಿ ಅಚ್ಚಿಸಿ, ಕಳೆಕಟ್ಟಿಸಿ, ತಮ್ಮ ಯಾಜಿ ಪ್ರಕಾಶನದ ಮೂಲಕ ಗೋವಿಂದಮಣಿದರ್ಪಣವನ್ನು ಲೋಕಾರ್ಪಿತಗೊಳಿಸುವಲ್ಲಿ ಹೊಣೆಯನ್ನು ಹೊತ್ತು ನಮ್ಮ ಹೆಗಲಹೊರೆಯನ್ನು ಇಳಿಸಿದ ಶ್ರೀಮತಿ ಸವಿತಾ ಯಾಜಿ ಹಾಗೂ ಗಣೇಶ ಯಾಜಿ ದಂಪತಿಗಳಿಗೆ ಸಹೃದಯಾಭಿವಂದನೆಗಳು.
ಗೋವಿಂದಮಣಿದರ್ಪಣದ ನಿರ್ಮಿತಿಯಲ್ಲಿ ಸೋತ್ಸಾಹರಾಗಿ ಸಹಕರಿಸಿ, ನಮ್ಮನ್ನು ಉಪಕೃತರನ್ನಾಗಿಸಿದ ಎಲ್ಲ ಸುಹೃದ್ಬಂಧುಗಳಿಗೆ ಸಾಂಜಲಿನತಿಶತಗಳು.
ಈ ಕೃತಿಯನ್ನು ಓದುವ ಎಲ್ಲ ಶ್ರದ್ಧೇಯವಾಚಕರಿಗೆ ಭೂಯೋ ಭೂಯೋ ನಮಾಮೋ ವಯಂ.
ಶುಭಕೃತ್ ಸಂವತ್ಸರ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ
ಮಾರ್ಗಶಿರ ಮಾಸ (ಸಂಪಾದಕ ಮಂಡಳಿಯ ಪರವಾಗಿ)
ಪರಿವಿಡಿ
ಸವಿನುಡಿ / ೩
ಗೌರವ ಸಂಪಾದಕನ ನುಡಿ / ೫
ಕ್ರತುಗಳ ಹೆಣಿಗೆ / ೭
೧ ತಂತ್ರಸಾರ -ಲಕ್ಷ್ಮೀಶ ತೋಳ್ಪಾಡಿ / ೧೫
೨ ಕೃಷ್ಣನ ಉಡುಪಿ, ವಾಲ್ಮೀಕಿ ಕಂಡ ರಾಮಾಯಣ -ಕೃಷ್ಣರಾಜ ಕುತ್ಪಾಡಿ/ ೨೩
೩ ಕಾದಂಬರೀ -ಡಾ|| ಎಚ್.ವಿ.ನಾಗರಾಜರಾವ್ / ೩೦
೪ ಕನಕೋಪನಿಷತ್ -ಎಚ್.ಮಂಜುನಾಥ ಭಟ್ / ೩೮
೫ ಪುರಂದರೋಪನಿಷತ್ -ಎಚ್.ಮಂಜುನಾಥ ಭಟ್ / ೪೪
೬ ಬಾಣಭಟ್ಟನ ಆತ್ಮಕಥೆ -ಮಹಾಮಹೋಪಾಧ್ಯಾಯ ಡಾ. ಎಸ್.ರಂಗನಾಥ್ / ೫೦
೭ ಇನ್ನಷ್ಟು ಹೇಳದೆ ಉಳಿದದ್ದು -ಚಿಂತಾಮಣಿ ಕೊಡ್ಲೆಕೆರೆ / ೫೫
೮ ಅಂಕೆಯಲ್ಲಿ ಅಧ್ಯಾತ್ಮ -ಗಣೇಶ ಭಟ್ಟ, ಕೊಪ್ಪಲತೋಟ / ೬೭
೯ ಮುಂಜಾನೆಯಿಂದ ಸಂಜೆಯ ತನಕ -ಡಾ|| ಗಣಪತಿ ಭಟ್ಟ, ಕವಲಕ್ಕಿ / ೭೫
೧೦ ಪ್ರಾಚೀನ ಭಾರತದಲ್ಲಿ ಕಾಮಶಾಸ್ತ್ರ -ವಿದ್ವಾನ್ ಜಗದೀಶ ಶರ್ಮಾ, ಸಂಪ / ೮೬
೧೧ ಕೃಷ್ಣನೆಂಬ ಸೊದೆಯ ಕಡಲು -ಡಾ|| ದಿದ್ದಿಗಿ ವಂಶಿಕೃಷ್ಣ / ೮೯
೧೨ ಆವೆಯ ಮಣ್ಣಿನ ಆಟದ ಬಂಡಿ -ಬಡಗು ನರಸಿಂಹ ಭಟ್ಟ / ೯೯
೧೩ ಬನ್ನಂಜೆ ಬರೆಹಗಳು -ಪಾದೇಕಲ್ ವಿಷ್ಣುಭಟ್ಟ / ೧೦೩
೧೪ ಭಗವಂತನ ನಲ್ನುಡಿ -ಸತ್ಯನಾರಾಯಣ ಶರ್ಮಾ / ೧೧೧
೧೫ ಸಾರಸ್ವತ ಸಂಪತ್ತು -ರೋಹಿತ್ ಚಕ್ರತೀರ್ಥ / ೧೧೬
೧೬ ಋತುಗಳ ಹೆಣಿಗೆ, ಪ್ರಾಣಸೂತ್ರಗಳು, ಪುರುಷಸೂಕ್ತ, ಶ್ರೀಸೂಕ್ತ -ಡಾ|| ಮಹೇಶ ಭಟ್ಟ ಆರ್., ಹಾರ್ಯಾಡಿ / ೧೨೩
೧೭ ವಿಷ್ಣುಸಹಸ್ರನಾಮ -ವಿದ್ವಾನ್ ಡಾ|| ಟಿ.ವಿ.ಸತ್ಯನಾರಾಯಣ, ತಲಕಾಡು / ೧೩೪
೧೮ ಸಂಗ್ರಹ ಭಾಗವತ, ಸಂಗ್ರಹ ರಾಮಾಯಣ -ರಾಮಕೃಷ್ಣ ಪೆಜತ್ತಾಯ / ೧೪೧
೧೯ ಕೃಷ್ಣಮಾಲಾ-ಧ್ಯಾನಮಾಲಾ -ಡಾ|| ದಿದ್ದಿಗಿ ವಂಶಿಕೃಷ್ಣ / ೧೫೨
೨೦ ಮತ್ತೆ ರಾಮನ ಕತೆ -ಬಿ.ಎನ್.ಶಶಿಕಿರಣ / ೧೫೬
೨೧ ಮುಗಿಲ ಮಾತು -ದಿವಾಕರ ಹೆಗಡೆ / ೧೬೪
೨೨ ನೆನಪಾದಳು ಶಕುಂತಲೆ -ಅರ್ಜುನ ಭಾರದ್ವಾಜ / ೧೭೩
೨೩ ಶಿವಸ್ತುತಿ-ನರಸಿಂಹಸ್ತುತಿ ಡಾ|| ವಿ.ಬಿ.ಆರತೀ / ೧೮೦
೨೪ ಪಂಚಸೂಕ್ತಗಳು -ವಿದ್ವಾನ್ ಜಗದೀಶ ಶರ್ಮಾ, ಸಂಪ / ೧೮೮
೨೫ ನಾಕು ಹಾಡುಗಳು, ಆನಂದತೀರ್ಥರ ಭಕ್ತಿಗೀತೆಗಳು,ಕಂಕಣಾಕಾರ ಸುಳಾದಿ -ಮಂಜುನಾಥ ಕೊಳ್ಳೇಗಾಲ / ೧೯೦
೨೬ ಉಡುಪಿ ಕೃಷ್ಣ ದಾಸರು ಕಂಡಂತೆ -ಡಾ|| ಅಜಕ್ಕಳ ಗಿರೀಶ ಭಟ್ / ೨೦೪
೨೭ ಕಿಷ್ಕಿನ್ಧಾ ಕಾಂಡ -ಜೋಗಿ / ೨೧೦
೨೮ ತಲವಕಾರೋಪನಿಷತ್ -ವಿದ್ವಾನ್ ಜಗದೀಶ ಶರ್ಮಾ, ಸಂಪ / ೨೧೩
೨೯ಯಾಜ್ಞೀಯೋಪನಿಷತ್ -ವಿದ್ವಾನ್ ಜಗದೀಶ ಶರ್ಮಾ, ಸಂಪ / ೨೧೭
೩೦ ಜಯಂತೀಕಲ್ಪ -ಡಾ|| ಎ.ವಿ.ನಾಗಸಂಪಿಗೆ / ೨೨೦
೩೧ ಶ್ರೀಮದ್ಭಾಗವತ ತಾತ್ಪರ್ಯ -ಡಾ|| ಎ.ವಿ.ನಾಗಸಂಪಿಗೆ / ೨೨೫
Reviews
There are no reviews yet.