ಮುನ್ನುಡಿ
ಕವಿ ಮತ್ತು ಅನುವಾದಕರಾಗಿ ಖ್ಯಾತರಾದ ಪ್ರೊ. ಧರಣೇಂದ್ರ ಕುರಕುರಿ ಈಗ ತಮ್ಮ ಎಂಬತ್ತೆರಡನೇ ವಯಸ್ಸಿನಲ್ಲಿ ಕಾದಂಬರಿಕಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಆಯ್ದ ಕವನಗಳ ಸಂಕಲನವು ೧೯೯೭ರಲ್ಲೇ ಕರ್ನಾಟಕ ವಿಶ್ವವಿದ್ಯಾಲಯದ ಪದವಿ ವರ್ಗಗಳಿಗೆ ಪಠ್ಯವಾಗಿತ್ತು. ಹಿಂದೀ ಮತ್ತು ಕನ್ನಡ ಎರಡೂ ಭಾಷೆಗಳ ಮೇಲೆ ಪ್ರಭುತ್ವ ಇರುವ ಕುರಕುರಿಯವರು ಅನುವಾದಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. ಈಚೆಗೆ ಬಸವರಾಜ ಕಟ್ಟೀಮನಿಯವರ ಕಾದಂಬರಿ ’ಜ್ವಾಲಾಮುಖಿಯ ಮೇಲೆ’ಯ ಹಿಂದೀ ಅನುವಾದಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬಂದಿದೆ. ಅಲ್ಲದೇ ತಮ್ಮ ಕಾವ್ಯ ರಚನೆಗಾಗಿ ಕೂಡ ಕರ್ನಾಟಕ ಸಾಹಿತ್ಯ ಅಕಾಡೆಮಿಯ ’ಸಾಹಿತ್ಯ ಶ್ರೀ’ ಪ್ರಶಸ್ತಿಯನ್ನು ಪಡೆದಿದ್ದಾರೆ.
ಅವರ ಈ ಇಳಿವಯಸ್ಸಿನಲ್ಲೂ ಸೃಜನಶೀಲತೆ ಬತ್ತದ ಸೆಲೆಯಾಗಿದೆ ಎಂಬುದಕ್ಕೆ ಪ್ರಸ್ತುತ ಕಾದಂಬರಿ ’ಜಾತ್ರಿ’ ಉತ್ತಮ ನಿದರ್ಶನವಾಗಿದೆ. ಕಾದಂಬರಿಯಲ್ಲಿ ಎರಡು ಜಾತ್ರೆಗಳು ಸಂಭವಿಸುತ್ತವೆ. ಎರಡು ಜಾತ್ರೆಗಳ ವಿದ್ಯಮಾನಗಳನ್ನು -ಆರಂಭ ಜರುಗುವಿಕೆ ಮತ್ತು ನಂತರದ ಪರಿಣಾಮಗಳನ್ನ ಕಾದಂಬರಿ ಚಿತ್ರಿಸುತ್ತದೆ. ಸ್ವಾತಂತ್ರ್ಯಪೂರ್ವದಲ್ಲಿ ಭೀಕರ ಬರಗಾಲ ಬಿದ್ದು ಬದುಕು ದುರ್ಭರವಾಗಿರುವಾಗ ತನ್ನ ಊರು ದಮಗಳ್ಳಿಯಲ್ಲಿ ಸಂಗಪ್ಪ ಜನರಿಗೆ ಮೇವು ಕೊಟ್ಟು ಊರವರ ಮೇಲೆ ಪ್ರಭಾವ ಬೀರುತ್ತಾನೆ. ಈತ ಮತ್ತು ಇವನ ಗೆಳೆಯ ಗಣಪತಿ ತರುಣರಿದ್ದಾಗ ಉಡಾಳರು. ಇವ ದೊಡ್ಡವನಾಗಿ ಕಮತದ ಭಾರ ಹೊತ್ತುಕೊಂಡು ಹೊಲದಲ್ಲಿ ನಟ್ಟು ಕಡಿಯುತ್ತಿರುವಾಗ ಒಂದು ನಿಧಿ ಹತ್ತುತ್ತದೆ. ಬರಗಾಲದ ಸಂದರ್ಭದಲ್ಲಿ ರೈತರಿಂದ ಸಸ್ತಾದಲ್ಲಿ ಹೊಲ ಖರೀದಿ ಮಾಡುತ್ತ ದೊಡ್ಡ ಕುಳವಾಗಿ ಬೆಳೆಯುತ್ತಾನೆ. ನೆರೆಯ ಊರು ಕೆರಿಕಲ್ಲಿನ ಪಾಂಡುರಂಗರಾಯನಿಗೆ ಗೆಳೆಯ ಸಂಗಪ್ಪ ಒಮ್ಮೆಲೇ ಹೇಗೆ ಶ್ರೀಮಂತನಾದ ಎಂದು ಆಶ್ಚರ್ಯವಾಗುತ್ತದೆ. ಅತ್ಯಂತ ಬಡತನದಲ್ಲಿದ್ದ ಪಾಂಡುರಂಗರಾಯ ಕೂಡ ದಿಢೀರನೇ ಶ್ರೀಮಂತನಾದವನು. ಒಮ್ಮೆ ಬ್ರಿಟಿಶ್ ಕಲೆಕ್ಟರ್ ಆ ಊರಿನ ಕಾಡಿಗೆ ಶಿಕಾರಿಗೆ ಬಂದಾಗ ಅವನ ಮೇಲೆ ಎರಗುತ್ತಿದ್ದ ಚಿರತೆಯನ್ನು ಕೊಂದು ಪಾಂಡುರಂಗರಾಯ ಜೀವ ಉಳಿಸುತ್ತಾನೆ. ಅಷ್ಟೇ ಅಲ್ಲದೇ ಬಂಗಲೆಯಲ್ಲಿ ಅವನ ಸೇವೆ ಮಾಡಿ ತನ್ನ ಗೆಳತಿಯನ್ನು ಅವನೊಂದಿಗೆ ರಾತ್ರಿ ಕಳೆಯಲು ಒಪ್ಪಿಸಿ ಕಳಿಸುತ್ತಾನೆ. ಅವನ ಈ ಎಲ್ಲ ಸೇವೆಗಳಿಗೆ ಸಂಪ್ರೀತನಾದ ಕಲೆಕ್ಟರ್ ಅವನ ಇಚ್ಛೆಯಂತೆ ಕೆರಿಯ ಕೆಳಗಿನ ಐದು ನೂರು ಎಕರೆ ಜಮೀನನ್ನು ಮಂಜೂರು ಮಾಡಿ ಕೊಡುತ್ತಾನೆ. ಆಗಿನಿಂದ ಅವ ಜಾಗೀರದಾರ ಪಾಂಡುರಂಗರಾಯನಾಗಿ ಬೆಳೆಯುತ್ತಾನೆ. ಇಂತಹ ಸಾಹುಕಾರಿಕೆಯ ಹಿಂದೆ ಏನೇನು ಕರಾಮತ್ತುಗಳು ನಡೆದಿರುತ್ತವೆ ಎಂಬುದನ್ನೆಲ್ಲ ನಿರೂಪಕ ಬಯಲು ಮಾಡುತ್ತಾನೆ. ದಮಗಳ್ಳಿ ಸಾಹುಕಾರ ಕಲಕಟ್ಟಿ ಶಂಕರಪ್ಪಜ್ಜನಿಂದ ಸಾಗುವಳಿಯ ಸಲಹೆ ಪಡೆದು ಬೇಸಾಯ ಆರಂಭಿಸುತ್ತಾನೆ. ಪಾಂಡುರಂಗ ಮತ್ತು ಸಂಗಪ್ಪ ಇಬ್ಬರೂ ಶ್ರೀಮಂತರಾದ ಬಳಿಕ ಅವರಿಗೆ ತಮ್ಮ ಊರುಗಳಲ್ಲಿ ಮರ್ಯಾದೆ, ಗೌರವಗಳು ಹೆಚ್ಚಾಗಿ ಹಿಡಿತ ಸಾಧಿಸುತ್ತಾರೆ.
ಕಾದಂಬರಿಯಲ್ಲಿ ಎರಡು ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಅವುಗಳನ್ನು ಶಮನಗೊಳಿಸಲು ಎರಡು ಜಾತ್ರೆಗಳು ಸಂಭವಿಸುತ್ತವೆ. ಬರಗಾಲದಲ್ಲಿ ದೇವಿಯ ಹೇಳಿಕೆಯಾಗಿ ಮೂರೂ ಊರುಗಳ ಪ್ರಮುಖರು ಜಾತ್ರೆ ಮಾಡಲು ನಿರ್ಣಯಿಸುತ್ತಾರೆ. ಮೂರೂ ಊರುಗಳವರು ಮುಡಗಿಯಂತೆ ಒಂದಾಗಿ ಶಂಕರಪ್ಪಜ್ಜನ ಹಿರಿತನದಲ್ಲಿ ಜಾತ್ರೆಯನ್ನು ಯಶಸ್ವಿಯಾಗಿ ಮುಗಿಸುತ್ತಾರೆ. ಸ್ವಾತಂತ್ರ್ಯೋತ್ತರ ಸಂದರ್ಭದಲ್ಲಿ ಈ ಊರುಗಳಿಗೆ ಕಾಲರಾ ಬೇನೆ ಬಂದಾಗ ಎರಡನೇ ತಲೆಮಾರಿನ ಸಂಗಪ್ಪನ ಮಗ ನಿಂಗಪ್ಪ ದುರಗವ್ವನ ಜಾತ್ರೆ ಮಾಡಲು ನಿರ್ಧಾರ ಮಾಡಿದರೆ ಕಾಲರಾ ಬೇನೆ ತಗ್ಗೀತು ಎಂದು ಜಾತ್ರೆಗೆ ಒತ್ತಾಸೆ ಮಾಡುತ್ತಾನೆ. ಪಾರೀಸನಂಥವರು ವೈದ್ಯರ ಸತತ ಪ್ರಯತ್ನದಿಂದ ಕಾಲರಾ ಬೇನೆ ಕಡಿಮೆಯಾದೀತು ಎಂದು ಹೇಳಿದರೆ ಅದೇನೆ ಇರಲಿ, ನಿರ್ಣಯದಂತೆ ಜಾತ್ರಿ ಮಾಡೋಣ ಎಂದು ತೊಡಗುತ್ತಾರೆ. ಕಾಲರಾ ಬೇನೆ ತಗ್ಗಿದ ಕೂಡಲೇ ಜಾತ್ರೆಯ ತಯಾರಿ ನಡೆಸುತ್ತಾರೆ. ನಿಂಗವ್ವನ ಖೂನಿ ಮಾಡಿದ ನಿಂಗಪ್ಪ ಜಾತ್ರಿ ಮಾಡುವ ನೇತೃತ್ವ ವಹಿಸಿಕೊಳ್ಳುತ್ತಾನೆ. ಗುಗ್ರಿ ಶಿವು, ಬ್ಯಾಳಿ ಬಸಲಿಂಗ, ಹಜರತಸಾಬ ಮತ್ತು ಪಾರೀಸನಂಥವರು ದೂರ ಉಳಿದು ಬಿಡುತ್ತಾರೆ. ಈ ಮೊದಲಿನ ಐಕ್ಯತೆ ಈಗ ಕಾಣುವುದಿಲ್ಲ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಉದಾರ ಮನೋಭಾವದ ಹಿರಿಯರ ಕೊರತೆ ಕಾಣಿಸುತ್ತದೆ. ಮುಖ್ಯವಾಗಿ ಎರಡು ತಲೆಮಾರಿನ ಚಿತ್ರಣ ಇಲ್ಲಿದೆ.
ಅಕಸ್ಮಾತ್ತಾಗಿ (’ಜsರಕಡತಾ’) ನಿಧಿ ಸಿಕ್ಕರೆ, ಲಾಟರಿ ಹತ್ತಿದರೆ ಅಥವಾ ಅಂತಹ ಅವಕಾಶಗಳು ಒದಗಿ ಬಂದರೆ ನಾವು ಏನು ಮಾಡಬಹುದು, ನಮ್ಮ ಸ್ವಭಾವ, ಸಂಸ್ಕಾರಕ್ಕೆ ತಕ್ಕ ಹಾಗೆ ನಾವು ಹೇಗೆ ವರ್ತಿಸುತ್ತೇವೆ ಇಲ್ಲವೇ ನಮ್ಮ ಧೋರಣೆಯೇ ಹೇಗೆ ಬದಲಾವಣೆಯಾಗಬಹುದು ಎಂಬುದರ ಶೋಧನೆಯನ್ನು ಕಾದಂಬರಿ ಮಾಡುತ್ತದೆ. ಅದು ಹೇಗೋ ಬಂದಿರಲಿ, ಅದನ್ನು ವಿವೇಕದಿಂದ ಬಳಸುವಂಥ ಪಾಂಡುರಂಗರಾಯ ಇದ್ದಾರೆ. ಸಂಗಪ್ಪ ಅವನ ಮಗ ನಿಂಗಪ್ಪ ಇನ್ನಷ್ಟು, ಮತ್ತಷ್ಟು ಬೇಕು ಅನ್ನುತ್ತಾ ದುರಾಸೆಗೆ ಬಿದ್ದವರೂ ಇದ್ದಾರೆ. ’ಕಾಲ ಬಂದಾಗ ಉಪ್ಪರಿಗಿ ತಿಪ್ಪಿ ಅಕ್ಕೈತಿ, ತಿಪ್ಪಿ ಉಪ್ಪರಿಗಿ ಅಕ್ಕೈತಿ.’ ಆಸ್ತಿಯ ಹಪಾಹಪಿ, ದುರಾಸೆ ಮನುಷ್ಯನನ್ನು ಎಲ್ಲಿಗೆ ಒಯ್ದು ಮುಟ್ಟಿಸಬಹುದು, ಇಂಥವರಿಂದಾಗಿ ಊರುಗಳಲ್ಲಿದ್ದ ಬಾಂಧವ್ಯ ನಾಶವಾಗಿ ಸಮಾಜ, ಊರು ಹೇಗೆ ವಿಘಟನೆ ಹೊಂದುತ್ತವೆ ಎಂಬುದನ್ನೂ ಕಾದಂಬರಿ ಚಿತ್ರಿಸುತ್ತದೆ. ಇದನ್ನು ಕಾದಂಬರಿ ದಟ್ಟ ಗ್ರಾಮೀಣ ಪರಿಸರದಲ್ಲಿ ಹಳ್ಳಿಯ ಸಮೃದ್ಧ ಮೌಖಿಕ ಪರಂಪರೆಗೆ ಹತ್ತಿರದಲ್ಲಿ ಅತ್ಯಂತ ರಸವತ್ತಾದ ಕಥೆಯ ಮೂಲಕ ನಿರ್ವಹಿಸುತ್ತದೆ. ಕಾದಂಬರಿಗೆ ಕಥೆಯೇ ಜೀವಾಳವಾಗಿದೆ. ಒಂದು ಕಾಲ್ಪನಿಕ ಪ್ರಪಂಚ ಸೃಷ್ಟಿಯಾಗುತ್ತದೆ. ಆದರೆ ಈ ಪ್ರಪಂಚ ತೆರೆದುಕೊಳ್ಳುವುದು ಉತ್ತರ ಕರ್ನಾಟಕದ ಮಲೆನಾಡಿನ ಸೆರಗಿನಲ್ಲಿರುವ ಮೂರು-ನಾಕು ಹಳ್ಳಿಗಳ ಪರಿಸರದಲ್ಲಿ. ಅಲ್ಲಿನ ಬದುಕಿನ ಭಾಷೆಯ ಲಯದಲ್ಲಿ, ಅಲ್ಲಿಯ ಸೊಗಡಿನ ಜೊತೆಗೆ ವಾಸ್ತವದ ಬೆನ್ನೆಲುಬೂ ಇದೆ. ಹಳ್ಳಿಯ ಪರಿಸರದ ಗಾಢ ಅನುಭವ ಲೇಖಕರಿಗಿದೆ.
ಕಥೆ ಹೇಳುವಲ್ಲಿ ಲೇಖಕರಿಗೆ ನಂಬಿಕೆ ಇದೆ. ಇದು ಕಟ್ಟಿದ ಕಥೆಯಲ್ಲ, ಹೇಳಿದ ಕಥೆ. ಲೇಖಕರು ಗ್ರಾಮೀಣ ಬದುಕನ್ನು ಅತ್ಯಂತ ಹತ್ತಿರದಿಂದ ಕಂಡವರಷ್ಟೇ ಅಲ್ಲ ಅನುಭವಿಸಿದವರೂ ಕೂಡ. ಗ್ರಾಮೀಣ ಪ್ರದೇಶದಲ್ಲಿ ಕಥೆ ಹೇಳುವ ಅನೇಕ ಹಿರಿಯರಿದ್ದರು. ಹಾಗೆಯೇ ಇಲ್ಲಿ ಒಬ್ಬ ಹಿರಿಯ ಹೇಳಿದ ಕಥೆಯಂತೆ ಈ ಕಾದಂಬರಿ ಓಡುತ್ತದೆ. ಇಲ್ಲಿನ ಕಥೆ ವರ್ತಮಾನದಿಂದ ಆರಂಭವಾಗಿ ಭೂತಕಾಲಕ್ಕೆ ಚಲಿಸಿ ಮತ್ತೆ ವರ್ತಮಾನಕ್ಕೆ ಬಂದು ಮುಂದುವರೆಯುತ್ತದೆ. ನಿರೂಪಕ ಆಗೀಗ ಪ್ರಸಂಗಗಳನ್ನು ಅರ್ಥೈಸುತ್ತಾನೆ. ಸ್ವಾರಸ್ಯಕರವಾಗಿ ಕಥೆ ಓದಿಸಿಕೊಂಡು ಹೋಗುತ್ತದೆ. ವಾಚನೀಯತೆ ಸಹಜವಾಗಿ ಪ್ರಾಪ್ತವಾಗಿದೆ. ಈ ಕಥೆಯ ಮೂಲಕ ಗ್ರಾಮೀಣ ಬದುಕಿನ ಚಿತ್ರಣ ಸಿಗುತ್ತದೆ. ನಿರೂಪಕ ಅಲ್ಲಿಯ ಜನರ ಸಾಚಾತನ, ಲಫಂಗಗಿರಿ, ತುಂಟಾಟ, ಉಡಾಳತನ, ನಂಬಿಕೆಗಳು, ಆಚಾರ-ವಿಚಾರಗಳು, ಕಲಹಗಳು, ಕ್ಷುದ್ರತೆಗಳು, ಸ್ವಾರ್ಥಗಳು, ಕಿತ್ತಾಟಗಳು, ಝಟಾಪಟಿಗಳು- ಹೀಗೆ ಎಲ್ಲವನ್ನೂ ತೆರೆದಿಡುತ್ತಾನೆ. ಎಲ್ಲಾ ಖುಲ್ಲಂ ಖುಲ್ಲಾ ವಿವರವಾಗಿ, ಕಥೆಯ ಸಂದರ್ಭ, ಸನ್ನಿವೇಶಗಳನ್ನು ಕಣ್ಣಿಗೆ ಕಟ್ಟುವಂತೆ, ಓದುಗನಿಗೆ ಮನವರಿಕೆ ಯಾಗುವಂತೆ ನಿರೂಪಿಸುತ್ತಾನೆ. ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದ ಸನ್ನಿವೇಶಕ್ಕೆ ಬಂದಾಗ ನಿರೂಪಕ ಅಲ್ಲಿಯ ಆಗುಹೋಗುಗಳನ್ನು ಮುಖಾಮುಖಿಗೊಳಿಸದೇ ಹೆಚ್ಚಾಗಿ ನಿರೂಪಣೆಯಲ್ಲಿ, ಹೇಳಿಕೆಯಲ್ಲಿ ಕೊನೆಗೊಳಿಸುತ್ತಾನೆ. ಆದರೆ ಸ್ವಾತಂತ್ರ್ಯದ ನಂತರ ಸಾಹುಕಾರ ಶಂಕರಪ್ಪನವರು ತಮ್ಮ ಆಸ್ತಿಯನ್ನು ಶಾಲೆಗೆಂದು ಬಿಟ್ಟು ಕೊಡುವಾಗಿನಿಂದ ಕಥೆ ಘಟನೆಗಳಿಂದ, ಪ್ರಸಂಗಗಳಿಂದ ಮತ್ತೆ ತುಂಬಿಕೊಂಡು ಕಣ್ಮುಂದೆ ಚಲಿಸುತ್ತದೆ. ತಮ್ಮಣ್ಣನೆಂಬ ಪ್ರಾಮಾಣಿಕ ಸ್ವಾತಂತ್ರ್ಯ ಹೋರಾಟಗಾರ ಅವಿರೋಧವಾಗಿ ಶಾಸಕನಾಗಿ ಆಯ್ಕೆಗೊಂಡು ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಾನೆ. ಆದರೆ ನಿಂಗಪ್ಪ ಟ್ರಸ್ಟಿನ ಅಧ್ಯಕ್ಷನಾಗಿ ಅದನ್ನು ನುಂಗಲು ಮಸಲತ್ತು ನಡೆಸುತ್ತಾನೆ. ಶಾಲೆಯ ಟ್ರಸ್ಟಿಗಳು ನಿಂಗಪ್ಪನಂಥವರ ಕೈಯಲ್ಲಿ ಸಿಕ್ಕರೆ ಆಗುವ ದುರವಸ್ಥೆಗೆ ಒಂದು ಕನ್ನಡಿ ಹಿಡಿದಂತಾಗಿದೆ. ಕೊನೆಗೆ ನಿಂಗಪ್ಪನ ಖೂನಿ ಆಗುತ್ತದೆ. ಪಾಂಡುರಂಗರಾಯರು ಕೊನೆಯುಸಿರೆಳೆಯುತ್ತಾರೆ. ಪಾಂಡುರಂಗರಾಯರಿಗೆ ಅತ್ಯಂತ ನಿಷ್ಠಳಾಗಿ ಉಳಿದುಕೊಂಡು ಬಂದ ಚೆಲುವಿ ’ಅಯ್ಯೋ…’ ಎನ್ನುತ್ತ ಅವರ ಎದೆಯ ಮೇಲೆ ಬಿದ್ದು ಪ್ರಾಣ ಬಿಡುತ್ತಾಳೆ. ಹೀಗೆ ಹಳ್ಳಿಗಳ ಏಳುಬೀಳಿನ ಕಥೆ ನಮ್ಮ ಕಣ್ಮುಂದೆ ಸಾಭಿನಯಗೊಳ್ಳುತ್ತದೆ.
ಈ ಕಥನದ ಶಕ್ತಿ ಇರುವುದು ಅದರ ಆಡುನುಡಿಯಲ್ಲಿ. ಉತ್ತರ ಕರ್ನಾಟಕದ ಗ್ರಾಮೀಣ ಭಾಷೆ ಇಲ್ಲಿ ಜೀವಂತವಾಗಿದೆ. ಈ ಭಾಷೆಗೆ ಒಮ್ಮೆ ಹೊಂದಿಕೊಂಡು ಬಿಟ್ಟರೆ ಆಯಿತು, ಅದು ಮುಂದೆ ಲೀಲಾಜಾಲವಾಗಿ ನಮ್ಮನ್ನು ಎಳೆದುಕೊಂಡು ಹೋಗುತ್ತದೆ, ಇಲ್ಲಿ ಸಾಂದರ್ಭಿಕವಾಗಿ ಬರುವ ಗಾದೆ ಮಾತು, ನಾಣ್ಣುಡಿ, ಆಡುಪದಗಳನ್ನು ಸಂಗ್ರಹಿಸಿ ಪುಟ್ಟ ನಿಘಂಟು ರಚಿಸಬಹುದು. ಇಲ್ಲಿಯ ಮಾತಿನ ಧಾಟಿ, ಲಯ ಓದುಗನನ್ನು ಸೆರೆ ಹಿಡಿಯುತ್ತದೆ. ಒಂದು ಸಶಕ್ತವಾದ ಕಥೆಯನ್ನು ಸಶಕ್ತವಾದ ಭಾಷೆಯಲ್ಲಿ ನಿರೂಪಿಸಿದ ಧರಣೇಂದ್ರ ಕುರಕುರಿ ಅವರನ್ನು ಅಭಿನಂದಿಸುತ್ತೇನೆ.
ಧಾರವಾಡ ಮಲ್ಲಿಕಾರ್ಜುನ ಹಿರೇಮಠ
ನನ್ನೊಂದೆರಡs ಮಾತು
ಒಂದು ರೀತಿಯಿಂದ ಈ ಕಾದಂಬರಿಯು ಗಜಗರ್ಭದಂತೆ ವಿಳಂಬವಾಗಿ ಪ್ರಕಟ ವಾಗುತ್ತಿದೆ. ನಾಲ್ಕೈದು ವರ್ಷಗಳ ಹಿಂದೆಯೇ ಕಾದಂಬರಿಯ ವಸ್ತುವನ್ನು ನಿಗದಿಗೊಳಿಸಿಕೊಂಡು ಒಂದು ಚೌಕಟ್ಟನ್ನು ಕೊಟ್ಟು ಇಟ್ಟುಕೊಂಡಿದ್ದೆ. ನಂತರ ಸುಮಾರು ಅರ್ಧಕ್ಕಿಂತಲೂ ಹೆಚ್ಚು ಬರೆದು ಇಟ್ಟಿದ್ದೆ. ಆದರೆ ಅನೇಕ ವೈಯಕ್ತಿಕ ಕಾರಣಗಳಿಂದ ಮತ್ತು ಅನುವಾದ ಕಾರ್ಯಕ್ಕೆ ಒತ್ತಡ ಬರುತ್ತಿದ್ದುದರಿಂದ ಈ ಕಾರ್ಯ ಸ್ಥಗಿತಗೊಂಡಂತಾಗಿತ್ತು. ದೂರದರ್ಶನದ ಒಂದು ಸಂದರ್ಶನದಲ್ಲಿ ಸಂದರ್ಶನಕಾರ ಗೆಳೆಯ ವಿಜಯಕಾಂತ ಪಾಟೀಲ ’ಸದ್ಯ ಏನು ಬರೆಯುತ್ತಿದ್ದೀರಿ?’ ಎಂದು ಕೇಳಿದ ಪ್ರಶ್ನೆಗೆ ’ಒಂದು ಕಾದಂಬರಿ ಬರೆಯುತ್ತಿದ್ದೇನೆ’ ಎಂದು ಹೇಳಿದ್ದೆ. ನಾನು ಕಾದಂಬರಿ ಬರೆಯುತ್ತಿದ್ದೇನೆ ಎಂಬ ವಿಷಯ ಗೊತ್ತಾದ ಸ್ನೇಹಿತರು ’ನಿಮ್ಮ ಕಾದಂಬರಿ ಯಾವಾಗ ಹೊರಗೆ ಬರುತ್ತದೆ? ಓದಲು ಉತ್ಸುಕನಾಗಿದ್ದೇನೆ’ ಎಂದು ಕೇಳಿಯೇ ಕೇಳುತ್ತಿದ್ದರು. ಒಂದರ ಹಿಂದೊಂದರಂತೆ ಅನುವಾದ ಕಾರ್ಯದ ಒತ್ತಡ ಬಂದದ್ದರಿಂದ ಮೌಲಿಕ ಸಾಹಿತ್ಯ ರಚನೆ ಕೆಲ ದಿನ ಸ್ಥಗಿತಗೊಂಡಂತಾಗಿತ್ತು. ನಡುನಡುವೆ ಒಂದೊಂದು ಕವಿತೆಗಳ ರಚನೆ ಮಾತ್ರ ನಡೆದಿತ್ತು. ಕೆಲ ಸ್ನೇಹಿತರು ಅನುವಾದ ಕಾರ್ಯವನ್ನು ಬದಿಗಿಟ್ಟು ಮೌಲಿಕ ಸಾಹಿತ್ಯ ರಚನೆ ಮಾಡಿ ಎಂಬ ಸಲಹೆಯನ್ನೂ ಕೊಟ್ಟರು.
ಕನ್ನಡ ನನ್ನ ಹೆತ್ತ ತಾಯಿ, ಹಿಂದಿ ನನಗೆ ಅನ್ನ ಹಾಕಿದ ತಾಯಿ. ಅದನ್ನು ಮರೆತರೆ ನಾನು ಕೃತಘ್ನನಾಗುತ್ತೇನೆ. ಹಾಗಾಗಿ ನಾನು ಅನ್ನದ ಋಣ ತೀರಿಸಲೇಬೇಕಾಗಿತ್ತು. ಅನುವಾದದ ಮೂಲಕ ಕನ್ನಡ ಭಾಷೆ ಮತ್ತು ಸಾಹಿತ್ಯದ ಪರಿಚಯವನ್ನು ಹಿಂದೀ ಭಾಷಿಕರಿಗೆ ಪರಿಚಯಿಸುವ ಕಾರ್ಯವೂ ಆಗುತ್ತದಲ್ಲವೆ? ಹಡೆದ ತಾಯಿ ಮತ್ತು ಪಡೆದ ತಾಯಿಯಂದಿರ ಸೇವೆಯ ಭಾಗ್ಯ ನನ್ನದು. ಇಬ್ಬರೂ ನನ್ನನ್ನು ಪೋಷಿಸಿದವರು. ಅದಕ್ಕಾಗಿ ಎರಡೂ ಭಾಷೆಯ ಓದುಗರಿಗೆ ನಾನು ಚಿರಋಣಿ.
ನಾನು ನಮ್ಮ ಹಳ್ಳಿಗಳನ್ನು ಗಾಢವಾಗಿ ಪ್ರೀತಿಸುತ್ತೇನೆ. ಅಲ್ಲಿನ ಜೀವನ, ಭಾಷೆ, ಸಂಬಂಧಗಳ ಪ್ರಭಾವ ನನ್ನ ಮೇಲೆ ಆಳವಾಗಿ ಆಗಿದೆ. ನಮ್ಮ ಜನ ಮುಗ್ಧರು. ಅಂತಲೇ ನನ್ನ ಕಾವ್ಯದಲ್ಲಿ ರೈತರ ಬದುಕು ಚಿತ್ರಿತಗೊಂಡಿದೆ. ನನ್ನ ಕವಿತೆಗಳಲ್ಲಿ ಬರುವ ಪ್ರತಿಮೆಗಳು, ಭಾಷೆ ಎಲ್ಲವೂ ಗ್ರಾಮೀಣವೆ. ನಾವು ರೈತನಿಗೆ ಅನ್ನದಾತ ಎಂದು ಹೇಳುತ್ತಲೇ ಬಂದಿದ್ದೇವೆ. ಆದರೆ ಅನ್ನದಾತನ ಬೆನ್ನು ಮೂಳೆಯನ್ನು ಮುರಿಯುವ ಹುನ್ನಾರ ನಿರಂತರ ನಡೆದಿರುವುದು ದುರಂತವೇ ಸರಿ. ಆತನ ಬದುಕು ಬವಣೆಯಿಂದ ತುಂಬಿ ಹೋಗಿದೆ. ರೈತ ಸಾಲದ ಶೂಲಕ್ಕೆ ಸಿಕ್ಕು ಆತ್ಮಹತ್ಯೆಗೆ ಶರಣಾಗುತ್ತಿರುವುದು ದುರಂತವೆ ಸರಿ. ಮಹಾತ್ಮಾ ಗಾಂಧೀಜಿ ರಾಮರಾಜ್ಯದ ಕನಸು ಕಂಡವರು. ಸ್ವಾತಂತ್ರ್ಯಾನಂತರ ನಮ್ಮ ದೇಶ ರಾಮರಾಜ್ಯದ ಕಡೆಯೆ ಪಯಣ ಬೆಳೆಸುವುದೆಂದು ಭಾರತೀಯರೆಲ್ಲರೂ ಭಾವಿಸಿದ್ದರು. ಕೆಲ ದಿನಗಳಲ್ಲೇ ವಿಘಟನೆಯ ಪ್ರವೃತ್ತಿ ಬೆಳೆಯತೊಡಗಿ ದಿಕ್ಕು ರಾಮರಾಜ್ಯದ ಪಥದಿಂದ ವಿರುದ್ಧ ದಿಶೆಯತ್ತ ತಿರುಗಿದ್ದು ಎಲ್ಲರಿಗೂ ವಿದಿತ. ಆದರೆ ಭಾರತೀಯರೆಲ್ಲ ಒಂದೇ ಎಂದು ಹೇಳುತ್ತಲೇ ರಾಜ್ಯ-ರಾಜ್ಯಗಳ ನಡುವೆ ತಿಕ್ಕಾಟಗಳು ಹೆಚ್ಚಾಗಿವೆ. ನಾನೇ ಮೇಲು ಎಂಬ ಅಹಂಭಾವ ಮೂಡುತ್ತ ಬಂದಿತು. ಅದಕ್ಕೆ ಶಿಕ್ಷಣ ಮತ್ತು ಸಾಮಾಜಿಕ ಪ್ರಜ್ಞೆಯ ಕೊರತೆಯೆ ಕಾರಣ. ಜೊತೆಗೆ ಅಧಿಕಾರ ಮತ್ತು ಹಣದ ದಾಹದ ಭ್ರಷ್ಟ ರಾಜಕಾರಣ ಎಂಬುದು ಎಲ್ಲರಿಗೂ ಗೊತ್ತು.
ಈ ಬದಲಾವಣೆ ಏಕಾಏಕಿ ಆಗಿಲ್ಲ. ನಮ್ಮ ಊರುಗಳು ಒಂದೇ ಕುಟುಂಬದಂತೆ ಬಾಳುತ್ತಿದ್ದವು. ಒಂದು ಊರು ಮಾತ್ರವಲ್ಲ ಸುತ್ತಮುತ್ತಲಿನ ಹಳ್ಳಿಗಳೆಲ್ಲವೂ ಒಂದೇ ಕುಟುಂಬದಂತಿದ್ದವು. ಯಾವುದೇ ಜಾತಿಭೇದವಿರಲಿಲ್ಲ. ಶ್ರೀಮಂತ-ಬಡವ ಎಂಬ ತಾರತಮ್ಯವಿರಲಿಲ್ಲ. ಜೀವನ ಸುಂದರವಾಗಿತ್ತು. ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಒಂದಾಗಿದ್ದ ಭಾರತ ಈ ಎಪ್ಪತ್ತೈದು-ಎಪ್ಪತ್ತಾರು ವರ್ಷಗಳಲ್ಲಿ ಇಂದಿನ ದುಸ್ಥಿತಿಗೆ ಬರಲು ರಾಜಕಾರಣಿಗಳ ಕೊಡುಗೆ ಅಪಾರ. ಅಧಿಕಾರದಾಹ ಮತ್ತು ಹಣದ ವ್ಯಾಮೋಹ ನಮ್ಮ ರಾಜಕಾರಣಿಗಳ ಮನುಷ್ಯತ್ವವನ್ನು ನುಂಗಿ ಹಾಕಿವೆ.
ನಾನು ಕಂಡಂತೆ ನಮ್ಮ ಗ್ರಾಮೀಣ ಪ್ರದೇಶದ ಜೀವನ, ಭಾಷೆ, ಸಂಬಂಧಗಳು ಬದಲಾಗುತ್ತಿವೆ. ಸಂಸ್ಕಾರ, ಸಂಸ್ಕೃತಿಗಳೂ ಬದಲಾಗುತ್ತಿವೆ. ಕೆಲವಷ್ಟು ಲುಪ್ತವಾಗುತ್ತಿವೆ. ನನ್ನ ಬಾಲ್ಯದಲ್ಲಿ ಕೇಳಿದ ಕೆಲ ಶಬ್ದಗಳು ಇಂದಿನ ಯುವಕರಿಗೆ ಗೊತ್ತೇ ಇಲ್ಲ. ಭಾಷೆ ಮತ್ತು ಬದುಕು ನಿರಂತರ ಹರಿಯುತ್ತಿರುತ್ತವೆ. ಬದಲಾವಣೆ ಪ್ರಕೃತಿಯ ನಿಯಮ. ಹಳೆ ನೀರು ಹರಿದು ಹೋಗಿ ಹೊಸ ನೀರು ಬರುತ್ತಲೇ ಇರುತ್ತದೆ. ಆದರೆ ಈ ಬದಲಾವಣೆ ಸಕಾರಾತ್ಮಕವಾಗಿರಬೇಕೆ ಹೊರತು ನಕಾರಾತ್ಮಕವಾಗಿರಬಾರದು. ತಾಂತ್ರಿಕವಾಗಿ ಬೆಳೆದು ಇಂದು ಇಡೀ ಪ್ರಪಂಚದ ಸಂಪರ್ಕವನ್ನು ನಾವು ಹೊಂದಿದ್ದರೂ ಮಾನವೀಯ ಸಂಪರ್ಕದ ಕೊಂಡಿಗಳನ್ನು ಕಳೆದುಕೊಂಡಿದ್ದೇವೆ. ನನ್ನನ್ನು ಗಾಢವಾಗಿ ತಟ್ಟಿದ್ದು ಇತ್ತೀಚಿನ ವಿಘಟನಾ ಮನೋವೃತ್ತಿ. ಹಳೆಯ ಮೌಲ್ಯಗಳು ನನ್ನನ್ನು ಬಹಳ ಕಾಡಿವೆ. ಅದೇ ನನ್ನನ್ನು ಈ ಕಾದಂಬರಿ ಬರೆಯಲು ಪ್ರೇರೇಪಿಸಿದ್ದು. ಅದರಿಂದಾಗಿ ಈ ಕಾದಂಬರಿಯಲ್ಲಿ ಹಳೆಯ ಗ್ರಾಮೀಣ ಬದುಕಿನ ಚಿತ್ರಣವನ್ನು ಕೊಡಲು ಪ್ರಯತ್ನಿಸಿದ್ದೇನೆ. ಆ ಚಿತ್ರಣಗಳು ಪ್ರತಿಮೆಗಳಾಗಿ, ರೂಪಕಗಳಾಗಿ ಬಂದಿರಬಹುದು. ಇಲ್ಲಿನ ಪಾತ್ರಗಳು ತಮ್ಮಿಂದ ತಾವೇ ಸೃಷ್ಠಿಯಾಗಿ ತಮ್ಮ ಕಾರ್ಯಕಲಾಪಗಳ ಮೂಲಕ ಬೆಳೆದು ನಿಂತಿವೆ. ಇವು ಓದುಗರ ಹೃದಯವನ್ನು ತಟ್ಟಿದರೆ ನನ್ನ ಶ್ರಮ ಸಾರ್ಥಕವೆಂದುಕೊಳ್ಳುತ್ತೇನೆ.
ಈ ಅವಧಿಯಲ್ಲಿ ನನಗೆ ಸಹಕರಿಸಿದ ಪತ್ರಕರ್ತ ಮಿತ್ರ ಆಶೋಕ ಹಾಸ್ಯಗಾರ, ಜಾತ್ರಿ ಮತ್ತು ಧಾರ್ಮಿಕ ವಿಧಿ-ವಿಧಾನಗಳ ಬಗ್ಗೆ ಮಾಹಿತಿ ಒದಗಿಸಿ ಕೊಟ್ಟ ಎಂ.ವಿ.ಶರ್ಮಾ ತದ್ದಲಸೆ, ಆರ್.ಜಿ.ಹಳ್ಳಿ ನಾಗರಾಜ, ಖ್ಯಾತ ಕಾದಂಬರಿಕಾರರಾದ ಕುಂ.ವೀರಭದ್ರಪ್ಪ, ಬೆನ್ನುಡಿ ಬರೆದು ಕೊಟ್ಟ ಡಾ. ಬಾಳಾಸಾಹೇಬ ಲೋಕಾಪುರ, ಡಾ. ರಾಘವೇಂದ್ರ ಪಾಟೀಲ, ಪ್ರೀತಿಯಿಂದ ಮುನ್ನುಡಿ ಬರೆದು ಈ ಕಾದಂಬರಿಯ ಮಹತ್ವವನ್ನು ಹೆಚ್ಚಿಸಿದ ಡಾ. ಮಲ್ಲಿಕಾರ್ಜುನ ಹಿರೇಮಠ, ಧಾರವಾಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಲಿಂಗರಾಜ ಅಂಗಡಿ, ಕವಿ ಮಿತ್ರ ವಿಜಯಕಾಂತ ಪಾಟೀಲ, ಡಾ. ಎಸ್.ಪಿ.ಪದ್ಮಪ್ರಸಾದ, ಡಾ. ಸರಜೂ ಕಾಟ್ಕರ್, ಸತೀಶ ಕುಲಕರ್ಣಿ, ಪಂಜಾಬಿ ಲೇಖಕ ಡಾ. ತರಸೇಮ ಮೀಟು, ಹಿಂದಿ ಕತೆಗಾರರಾದ ಅಖಿಲೇಶ ಶ್ರೀವಾತ್ಸವ, ಶ್ರೀಮತಿ ಆಶಾ ಶೈಲಿ, ಶ್ರೀಮತಿ ವಿಜಯ ಸತಿ ಮತ್ತು ಡಾ. ರಾಜೇಂದ್ರ ಜೈನ ಮುಂತಾದವರಿಗೆ ನನ್ನ ನೆನೆಕೆಗಳು.
ನನ್ನ ಬರವಣಿಗೆಯನ್ನು ಉತ್ಸುಕತೆಯಿಂದ ನೋಡಿ ಸಂತಸಪಡುವ ನನ್ನ ಶ್ರೀಮತಿ ಜಯಲಕ್ಷ್ಮಿಗೆ ಪ್ರಥಮ ಕೃತಜ್ಞತೆ ಸಲ್ಲಬೇಕು. ಹಾಗೆಯೇ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ನನ್ನೊಂದಿಗೆ ಸಹಕರಿಸುವ ಶ್ರೀಮತಿ ತಾರಾ ಹೆಗಡೆ ಅವರಿಗೆ ಹೃದಯಪೂರ್ವಕ ಧನ್ಯವಾದಗಳು. ಗೆಳೆಯರಾದ ಶ್ರೀ ವಿ.ವಿ.ಹೆಗಡೆ, ಪ್ರೊ. ಸತೀಶ ಹೆಗಡೆ ಹಾಗೂ ಪ್ರೊ. ಎಸ್.ಎಸ್.ಭಟ್ಟ ಅವರನ್ನು ಮರೆಯಲಾರೆ. ಅವರ ಅಭಿಮಾನಕ್ಕೆ ಹೃದಯಪೂರ್ವಕ ಧನ್ಯವಾದಗಳು.
ಯಾಜಿ ಪ್ರಕಾಶನದ ಗೆಳೆಯ ಶ್ರೀ ಗಣೇಶ ಯಾಜಿ ಮತ್ತು ಶ್ರೀಮತಿ ಸವಿತಾ ಯಾಜಿ ಈ ಪುಸ್ತಕವನ್ನು ಬಹಳ ಮುತುವರ್ಜಿಯಿಂದ ಸುಂದರವಾಗಿ ಪ್ರಕಟಿಸಿದ್ದಾರೆ ಅವರಿಗೆ ನಮನಗಳು, ಶ್ರೀ ಮೋನಪ್ಪ ಎಚ್.ಎಸ್. ಅವರು ಸುಂದರ ಮುಖಪುಟದ ಚಿತ್ರ ಬಿಡಿಸಿ ಕೊಟ್ಟು ಪುಸ್ತಕದ ಸೌಂದರ್ಯ ಹೆಚ್ಚಿಸಿದ್ದಾರೆ, ತಮ್ಮರೇಖಾಚಿತ್ರವನ್ನು ಈ ಕಾದಂಬರಿಯ ಒಳಪುಟದಲ್ಲಿ ಮುದ್ರಿಸಲು ಅನುಮತಿಸಿದ ಶ್ರೀ ಪುಂಡಲೀಕ ಕಲ್ಲಿಗನೂರ ಅವರಿಗೆ, ರಾಷ್ಟ್ರೋತ್ಥಾನ ಮುದ್ರಣಾಲಯದವರು ಅಚ್ಚುಕಟ್ಟಾಗಿ ಮುದ್ರಿಸಿದ್ದಾರೆ ಇವರಿಗೆಲ್ಲ ಶರಣು ಶರಣಾರ್ಥಿಗಳು. ಓದುಗ ಬಂಧುಗಳಿಗೆ ಈ ಕೃತಿ ಆಪ್ತವೆನಿಸಿದರೆ ನನ್ನ ಶ್ರಮ ಸಾರ್ಥಕವೆಂದುಕೊಳ್ಳುತ್ತೇನೆ. ಅವರಿಗೂ ಕೃತಜ್ಞತೆಗಳು.
ಧರಣೇಂದ್ರ ಕುರಕುರಿ
Reviews
There are no reviews yet.