ಹಾಲುಮತ ಸಂಸ್ಕೃತಿ -2
ಸಂಶೋಧನ ನಿಕಷಕ್ಕೊಡ್ಡಿದ ಸಾಮುದಾಯಿಕ ಸಂಗತಿಗಳು
ಸಾಂಪ್ರದಾಯಿಕ ಆಕರಗಳ ವ್ಯಾಪಕ ಪರಿಶೀಲನೆ ಹಾಗೂ ಉಪಯೋಗದೊಡನೆ ಪ್ರಸಕ್ತ ಸನ್ನಿವೇಶಗಳ ವಿಶ್ಲೇಷಣೆ ಕೈಕೊಂಡು ಸೈ ಅನ್ನಿಸಿಕೊಂಡವರು ಡಾ. ಎಫ್.ಟಿ.ಹಳ್ಳಿಕೇರಿ. ಈಗಿನ ಹಾಲುಮತ ಸಂಸ್ಕೃತಿ-೨ ಇದಕ್ಕೆ ಇನ್ನೊಂದು ಉದಾಹರಣೆಯೆನ್ನಬಹುದು. ಶಾಸನಗಳ ಅಧ್ಯಯನದಂಥಾ ಕ್ಲಿಷ್ಟ ಹಾಗೂ ಸಂಕೀರ್ಣ ಜಾಡಿನಲ್ಲಿ ಸಾಗಿ, ಅರ್ಥೈಸಿ ಸರಳ ವಿವರಣೆಯೊಡನೆ ಆಯಾ ಸಂಶೋಧನ ವಸ್ತುವನ್ನು ನಿರೂಪಿಸುವಲ್ಲಿ ಅವರು ಸಿದ್ಧಹಸ್ತ ರೆಂಬುದರಲ್ಲಿ ಎರಡು ಮಾತಿಲ್ಲ. ಇನ್ನು ಕಾವ್ಯಾಂತರ್ಗತ ಸಾಂಸ್ಕೃತಿಕ ಅಂಶಗಳನ್ನು ಹೆಕ್ಕಿ ಸಾಂದರ್ಭಿಕವಾಗಿ ಪರಿಶೀಲನೆಗೊಳಪಡಿಸುವುದರಲ್ಲೂ ಅವರದು ವಿಮರ್ಶಾನೋಟವಷ್ಟೇ ಅಲ್ಲ, ನಿರ್ಣಯಯುತವಾಗಿ ಸಾಧಿಸಬಲ್ಲ ಸಾಮರ್ಥ್ಯವೂ ಅವರಿಗೆ ಸಿದ್ಧಿಸಿದೆ. ಪ್ರಸ್ತುತ, ಹಾಲುಮತ ಸಂಸ್ಕೃತಿ ಅಧ್ಯಯನವೂ ಏಕಮುಖಿಯಾಗಿರದೆ, ಇತರೆ ಸಂಸ್ಕೃತಿಗಳ ಸಮನ್ವಯತೆಯೊಡನೆ ಸಾಗಿರುವುದು ಇಲ್ಲಿ ಸ್ಪಷ್ಟಪಡುವ ಅಂಶ. ಆದಿಮ ಸಂಸ್ಕೃತಿಯ ಪ್ರಸ್ತಾಪದೊಡನೆ ವರ್ತಮಾನದ ಆಗುಹೋಗುಗಳವರೆಗಿನ ಚರ್ಚೆಯನ್ನು ವ್ಯವಸ್ಥಿತವಾಗಿ ದಾಖಲಿಸಿರುವುದು ಡಾ. ಹಳ್ಳಿಕೇರಿ ಅವರ ಸಂಸ್ಕೃತಿ ಶೋಧ ಸಾಮರ್ಥ್ಯಕ್ಕೊಂದು ಉದಾಹರಣೆ.
ಒಟ್ಟು ೨೫ ಸಂಪ್ರಬಂಧಗಳ ಗುಚ್ಛವಾಗಿ ಹೊರಬಂದಿರುವ ಹಾಲುಮತ ಸಂಸ್ಕೃತಿಯು, ಶಾಸನ-ಸಾಹಿತ್ಯ-ದಾಖಲೆ-ಕ್ಷೇತ್ರಕಾರ್ಯ ಮಾಹಿತಿಗಳ ನೆಲೆಯಲ್ಲಿ ಅನನ್ಯವಾಗಿ ಅನಾವರಣ ಗೊಂಡಿರುವುದು ಬೆರಗುಗೊಳಿಸುವ ಸಂಗತಿ. ಸಂಪ್ರದಾಯ-ಆಚರಣೆ-ನಂಬಿಕೆಗಳ ವ್ಯಾಪಕ ಅಧ್ಯಯನದೊಡನೆ ಕುರುಬ ಸಮಾಜದ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಇಲ್ಲಿ ಶ್ರುತಪಡಿಸಲಾಗಿದೆ. ಸ್ತ್ರೀ ಸಮಾಜದ ಪ್ರಾತಿನಿಧಿಕ ಪ್ರತೀಕಗಳ ಬಗೆಗೂ ಗಮನ ಹರಿಸಲಾಗಿದ್ದು, ದಾನಚಿಂತಾಮಣಿ ಹಾಗೂ ಪರಮಮಾಹೇಶ್ವರಿ ಮಾತಾರತ್ನ ಕಂಚಿಯಬ್ಬೆಯನ್ನು ನಿರ್ಲಕ್ಷ್ಯಕ್ಕೊಳಗಾದ ಮಹಿಳೆಯ ಹಂತದಿಂದ ಮೇಲೆತ್ತುವ ಸಾರ್ಥಕಕಾರ್ಯ ಕೈಕೊಂಡಿದ್ದಾರೆ ಡಾ. ಹಳ್ಳಿಕೇರಿ. ಕ್ರಿ.ಶ. ೯೮೦ರ ಸೊಗಲ ಶಾಸನದ ಆಧಾರವಿಡಿದು ಈ ಮಹಿಳೆಯ ತ್ಯಾಗ-ಆದರ್ಶಗುಣಗಳನ್ನು ಇಲ್ಲಿ ತೋರಿಸಿರುವುದು ಮೆಚ್ಚುವಂಥಾ ಕಾರ್ಯ. ಹಾಗೆಯೇ, ರಾಯಚೂರು-ಬಿಜಾಪುರ-ಬಾಗಲಕೋಟೆ ಜಿಲ್ಲೆಗಳ ೧೩೫ ಹಳ್ಳಿಗಳ ಕುರುಬ ಮನೆತನಗಳನ್ನು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿರಿಸಿಕೊಂಡಿದ್ದ ತುರುವಿಹಾಳದ ಮಾದಪ್ಪಯ್ಯ ಒಡೆಯರ ವೃತ್ತಾಂತವೂ ರೋಚಕ ವಾದುದೇ. ಸನದು, ನಿರೂಪ ಇತ್ಯಾದಿಗಳ ನೆರವಿನಿಂದ ಡಾ. ಹಳ್ಳಿಕೇರಿಯವರು, ಕುರುಬ ಒಡೆಯರ ವಶದಲ್ಲಿ ನೂರಾರು ದಾಖಲೆಗಳ ಸಂಗ್ರಹವಿದ್ದು, ಅವುಗಳಲ್ಲಿರುವ ಕುರುಬರ ಮೂಲಗುರುವಿನ ವಿಚಾರ, ಶರಣಾಗತ ಪತ್ರಗಳ ವಿಚಾರ, ಗುರು-ಶಿಷ್ಯರ ನಡುವೆ ನಡೆದಿರುವ ಪತ್ರ ವ್ಯವಹಾರ, ಶುದ್ಧಿಸಂಸ್ಕಾರ ಪತ್ರಗಳ ವಿಚಾರ, ಸುಡುಗಾಡು ಸಿದ್ಧರ ವಿಚಾರ-ಹೀಗೆ ಹಲವು ಹತ್ತು ಸಂಗತಿಗಳನ್ನು ಕ್ರೋಢೀಕರಿಸುವಲ್ಲಿ ಡಾ. ಹಳ್ಳಿಕೇರಿಯವರ ಸಂಶೋಧನ ಶ್ರದ್ಧಾಸಕ್ತಿ ಹಾಗೂ ಪರಿಶ್ರಮಗಳ ಪರಿಚಯವಾಗುತ್ತದೆ.
ಸಂಸ್ಕೃತಿಯ ಅಧ್ಯಯನಕ್ಕೆ ಶಾಸನಗಳೇ ಪ್ರಮುಖ ಆಕರ. ಶಾಸನ ಕ್ಷೇತ್ರವನ್ನು ಪ್ರವೇಶಿಸಿರುವ ಡಾ. ಹಳ್ಳಿಕೇರಿ, ಅವುಗಳ ಪರಾಮರ್ಶನದೊಡನೆ ಕುರುಬ ಸಂಬಂಧಿ ಕೆಲವು ವಿಶೇಷ ಸಂಗತಿಗಳ ಮೂಲಚೂಲಗಳನ್ನು ಜಾಲಾಡಲು ಪ್ರಯತ್ನಿಸಿರುವುದುಂಟು. ಉದಾಹರಣೆಗೆ, ೧೨-೧೩ನೇ ಶತಮಾನಗಳ ನಾಲ್ಕು ಶಾಸನಗಳಲ್ಲಿ ಉಲ್ಲೇಖವಾಗಿರುವ ಕುರುಬಸೇಣಿಯನ್ನು ಗುರುತಿಸಿಕೊಡುವುದರೊಡನೆ, ಕುರುಬ ಸಮುದಾಯ ಮತ್ತು ವೃತ್ತಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಿರುವರು. ಕುರಿತೆರಿಗೆಯನ್ನು ಕುರಿತು ವಿವರಿಸುವಲ್ಲಿ ಅವರಿಗೆ ನೆರವಿಗೆ ಬಂದಿರುವಂಥವುಗಳಲ್ಲಿ ೧೨ಕ್ಕೂ ಹೆಚ್ಚು ಕನ್ನಡ ಶಾಸನಗಳಿದ್ದರೆ, ರಾಷ್ಟ್ರಕೂಟರ ತಮಿಳು ಶಾಸನಗಳೂ ಸಾಕಷ್ಟು ಸಂಖ್ಯೆಯಲ್ಲಿವೆ. ರಾಷ್ಟ್ರಕೂಟರ ಶಾಸನಗಳಲ್ಲಿರುವಂತೆ, ಕುರಿತೆರಿಗೆಯೊಡನೆ ದೇವಾಲಯಗಳಲ್ಲಿ ನಂದಾದೀಪ ಬೆಳಗಲು ಸಾವಿರಾರು ಕುರಿಗಳನ್ನು ದಾನ ಮಾಡಿದುದರ ವಿಚಾರವಿದೆ. ಆದರೆ ಕನ್ನಡದ ಶಾಸನಗಳಲ್ಲಿ ದೊರಕುವುದು ಕುರಿತೆರಿಗೆಯ ವಿಚಾರ ಮಾತ್ರ. ಡಾ. ಹಳ್ಳಿಕೇರಿಯವರು ಕೈಗೊಂಡ ಶಾಸನಾಧ್ಯಯನದ ಫಲಶೃತಿಯೆಂದರೆ, ವ್ಯಕ್ತಿನಾಮಗಳು, ಗ್ರಾಮನಾಮಗಳು ಹಾಗೂ ಕುಟುಂಬನಾಮಗಳನ್ನು ಬಹುಮಟ್ಟಿಗೆ ಶಾಸನ ಗಳನ್ನೇ ಆಧರಿಸಿ ಅವರು ಸಂಪ್ರಬಂಧಗಳನ್ನು ರಚಿಸುವಂಥಾದುದು. ಪೂರಕ ಆಕರಗಳಾಗಿ ಕಾವ್ಯ-ಪುರಾಣ-ಕೈಫಿಯತ್ತುಗಳನ್ನೂ ಬಳಸಿಕೊಂಡಿದ್ದಾರೆ. ದೈವವಾಚಿ, ವೃತ್ತಿವಾಚಿ, ಜನಾಂಗ ವಾಚಿ, ಪೂರ್ವಜರವಾಚಿ-ಹೀಗೆ ಅಧ್ಯಯನದ ಅನುಕೂಲಕ್ಕಾಗಿ ವಿಂಗಡಣೆ ಮಾಡಿಕೊಂಡು ಅಧ್ಯಯನಿಸಿರುವುದು ವಿಶೇಷ. ಇನ್ನು ಗ್ರಾಮನಾಮಗಳ ಮಟ್ಟಿಗೆ, ಸುಮಾರು ೧೧೪ ಗ್ರಾಮಗಳು ಕುರುಬಸಂಬಂಧಿ ಹೆಸರುಗಳುಳ್ಳ ಗ್ರಾಮಗಳನ್ನು ಶೋಧಿಸಿರುವರು. ಕುಟುಂಬ ನಾಮಗಳ ವಿಚಾರವೂ ಅಷ್ಟೆ. ಇತರೆ ಆಕರಗಳೊಡನೆ ಪ್ರಧಾನವಾಗಿ ಶಾಸನಗಳನ್ನು ಗಮನಿಸಿರುವರು. ಈ ವಿಧದಲ್ಲಿ ಕರ್ನಾಟಕದಲ್ಲಿ ಕುರುಬಜನಾಂಗವನ್ನು ಪ್ರತಿನಿಧಿಸುವ, ನೆನಪಿಸುವ ಶಾಸನಗಳನ್ನು ಸಮಗ್ರವಾಗಿ ಅವಲೋಕಿಸುವ ಪ್ರಯತ್ನ ಕೈಕೊಂಡು ಯಶಸ್ವಿ ಯಾದವರು ಡಾ. ಹಳ್ಳಿಕೇರಿ.
ಕುರುಬ ಸಮುದಾಯವನ್ನು ಕುರಿತ ಕಾವ್ಯಗಳನ್ನೂ ಅವಲೋಕಿಸದೆ ಬಿಟ್ಟಿಲ್ಲ ಡಾ. ಹಳ್ಳಿಕೇರಿ. ಅವರ ಇಲ್ಲಿಯ ಪ್ರಬಂಧಗಳಲ್ಲಿ ತಗರಪವಾಡ-ಸಿದ್ಧಮಂಕ ಚರಿತೆ ಹಾಗೂ ಚಂದಾಲಿಂಗೇಶ್ವರ-ಚಂದಿಮರಸರಿಗೆ ಸಂಬಂಧಿಸಿದ ಕೃತಿಗಳನ್ನು ಕುರಿತ ಚರ್ಚೆ ಮುಖ್ಯ ವಾದುದು. ಸಿದ್ಧೇಶನ ಕೃತಿಯೆಂದು ಭಾವಿಸಲಾದ ತಗರಪವಾಡವು ೮ ಸಂಧಿ, ೬೪೯ ಸಾಂಗತ್ಯ ಪದ್ಯಗಳನ್ನೊಳಗೊಂಡಿರುವಂಥಾದ್ದು. ಇನ್ನು ೪ ಸಂಧಿ, ೬೨೬ ಸಾಂಗತ್ಯ ಪದ್ಯ ಗಳನ್ನೊಳಗೊಂಡಿರುವಂಥಾದ್ದು ಕಾದೋಡಿ ಒಡೆಯ ಸಿದ್ಧನು ರಚಿಸಿದ ಸಿದ್ಧಮಂಕ ಚರಿತೆ. ಈ ಎರಡೂ ಕಾವ್ಯಗಳು ಧ್ವನಿಸಿರುವುದು ಕುರುb-ಲಿಂಗಾಯತ ಸಂಸ್ಕೃತಿಗಳ ಏಕೀಕರಣವನ್ನು. ಈ ಎರಡೂ ಕಾವ್ಯಗಳನ್ನು ತೌಲನಿಕ ದೃಷ್ಟಿಕೋನದಿಂದ ನೋಡಿರುವ ಡಾ. ಹಳ್ಳಿಕೇರಿಯವರ ಹಸ್ತಪ್ರತಿ ಅಧ್ಯಯನದ ವೃತ್ತಿಪರತೆ ಇಲ್ಲಿ ಎದ್ದು ತೋರುತ್ತದೆ. ಹಾಗೆಯೇ, ಅನ್ಯ ವಿದ್ವಾಂಸರು ಸಂಪಾದಿಸಿ ಪ್ರಕಟಿಸಿದ ಚಂದಿಮರಸನ ವಚನಗಳ ಭಾವಾನುವಾದ ಕೃತಿಗೆ ಸಂಬಂಧಿಸಿದಂತೆ ಡಾ. ಹಳ್ಳಿಕೇರಿ ಎತ್ತಿರುವ ಸಂದೇಹ-ಸಂಶಯಗಳು ಇಲ್ಲಿ ಬರಹ ರೂಪದಲ್ಲಿ ಮೈದಳೆದಿವೆ. ೧೧ನೆಯ ಶತಮಾನದ ಒಬ್ಬ ಅಪ್ಪಟ ದೇಶಿದೈವವಾಗಿ ಚಂದಾಲಿಂಗವಿದ್ದರೆ, ೧೨ನೆಯ ಶತಮಾನದ ಚಂದಿಮರಸನೋರ್ವ ಶಿವಶರಣ. ಕಾಲಮಾನದ ದೃಷ್ಟಿಯಿಂದಲೂ ಈ ದೈವ ಮತ್ತು ವ್ಯಕ್ತಿಗಳ ನಡುವೆ ಯಾವುದೇ ಸಾಮ್ಯತೆಯಿಲ್ಲ. ಇದನ್ನು ಹಲವಾರು ಉದಾಹರಣೆಗಳ ಮೂಲಕ ವಿಮರ್ಶಿಸಿರುವ ಡಾ. ಹಳ್ಳಿಕೇರಿ, ಚಂದಾಲಿಂಗನ ಬಗೆಗೆ ಪೂರ್ಣ ವಿವರ ತಿಳಿಯದೆ ವಿಷಯ ಮಂಡಿಸಿರುವ ಆ ಲೇಖಕದ್ವಯರ ಮೇಲೆ ಮುಗಿಬೀಳುತ್ತಾರೆ. ಚಂದಾಲಿಂಗ-ಚಂದಿಮರಸ ಒಬ್ಬರೇ ಎಂಬುದನ್ನು ಸಕಾರಣವಾಗಿ ತಳ್ಳಿಹಾಕುವಲ್ಲಿ ಅವರ ಅಧ್ಯಯನಶೀಲತೆ, ವಿಮರ್ಶಾದೃಷ್ಟಿ ಹಾಗೂ ಕ್ಷೇತ್ರಕಾರ್ಯ ಮಾಹಿತಿಯ ಮಹತ್ವಗಳು ಇಲ್ಲಿ ದೃಢಪಡುತ್ತವೆ. ಪ್ರಸ್ತುತ ಸಂಕಲನದಲ್ಲಿರುವ ಇನ್ನೊಂದು ಅತ್ಯುಪಯುಕ್ತ ಪ್ರಬಂಧವೆಂದರೆ ಟಗರು ಕಾಳಗವನ್ನು ಕುರಿತದ್ದು. ಗ್ರಾಮೀಣ ಕ್ರೀಡೆಯಾಗಿ ಜನಪ್ರಿಯ ಗೊಂಡಿರುವ ಟಗರುಕಾಳಗದ ವಿವರವನ್ನು ಡಾ. ಹಳ್ಳಿಕೇರಿಯವರು ಕಾವ್ಯ-ಪುರಾಣಗಳಿಂದ ಹೆಕ್ಕಿಕೊಡುತ್ತಾರೆ. ಅಲ್ಲದೆ, ಪ್ರಾಚೀನ ಕಾಲದಿಂದಲೂ ಉಳಿದುಬಂದ ಈ ಕಾಳಗದ ಸ್ವರೂಪವನ್ನು ಚಿತ್ರಿಸುವುದರೊಡನೆ, ಇತ್ತೀಚಿನ ಸ್ಪರ್ಧಾತ್ಮಕ ದಿನಮಾನಗಳವರೆಗೆ ಇದು ಹೇಗೆ ಬೆಳೆದು ಬಂದಿದೆಯೆಂಬುದನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸುತ್ತಾರೆ. ಈ ಸ್ಪರ್ಧಾತ್ಮಕ ಮನೋಭಾವನೆಯಿಂದಾಗಿ ಹಣದ ಆಸೆಗಾಗಿ ಟಗರುಗಳಿಗೆ ಜೀವಹಿಂಸೆಯನ್ನು ಮಾಡು ತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂಬುದರ ಬಗೆಗೂ ನಾವು ಆಲೋಚಿಸಬೇಕಿದೆ ಎಂಬಂಥಾ ಕಳಕಳಿ ಡಾ. ಹಳ್ಳಿಕೇರಿ ಅವರದು.
ಕುರುಬ ದೈವಗಳು, ಪವಾಡಪುರುಷರನ್ನು ಕುರಿತು ಗಮನಹರಿಸಿರುವ ಡಾ. ಹಳ್ಳಿಕೇರಿ, ಈ ಪ್ರಯತ್ನದಲ್ಲಿ ಹಲವಾರು ರೋಚಕ ಹಾಗೂ ಕುತೂಹಲಕಾರಿ ಸಂಗತಿಗಳನ್ನು ಸಂಗ್ರಹಿಸಿ ಕೊಟ್ಟಿರುವುದು ಗಮನಾರ್ಹ ಅಂಶ. ದಕ್ಷಿಣ ಭಾರತದ ಜನಪದ ದೈವಗಳಲ್ಲಿ ಅತ್ಯಂತ ಪ್ರಸಿದ್ಧಿ ಪಡೆದ ಓರ್ವ ಸಾಂಸ್ಕೃತಿಕ ನಾಯಕನೆಂದರೆ ಮೈಲಾರಲಿಂಗ. ಈತನ ಆರಾಧನೆಯಲ್ಲಿ ಅಗ್ರಗಣ್ಯರೆಂದರೆ ಕುರುಬ ಸಮುದಾಯದವರು. ಹಾಗೆಯೇ, ಮೈಲಾರಲಿಂಗನ ಪರಂಪರೆ ಯನ್ನು ಮುಂದುವರೆಸಿಕೊಂಡು ಬರುತ್ತಿರುವವರು ಪೂಜಿಸುತ್ತಿರುವುದರಿಂದಾಗಿ ಈತ ಜನಪದ ದೇವತೆಯೆನಿಸಿದ್ದಾನೆಂಬುದನ್ನು ವಿಶದವಾಗಿ ನಿರೂಪಿಸಿದ್ದಾರೆ ಡಾ. ಹಳ್ಳಿಕೇರಿ. ಅವರು ಮುಂದುವರೆದು, ದಾವಣಗೆರೆ-ಚಿತ್ರದುರ್ಗ-ಬಳ್ಳಾರಿ-ಕೊಪ್ಪಳ ಜಿಲ್ಲೆಗಳ ಕೆಲವು ಆಯ್ದ ನೆಲೆಗಳಲ್ಲಿ ಆಚರಣೆಯಲ್ಲಿರುವ ಕುರುಬರ ಕುಲದೈವ ಬೀರಪ್ಪನನ್ನು ಕುರಿತು ಬರೆದಿರುವರು. ಈ ಬೀರಪ್ಪ ಮತ್ತು ವೀರಭದ್ರರ ಸಮನ್ವಯ ಕುರಿತ ಅವರ ಚಿಂತನೆಗಳು ಇಲ್ಲಿ ವಿದ್ವಾಂಸರ ಗಮನ ಸೆಳೆಯುತ್ತವೆ. ಈ ದೈವಗಳ ಇತಿವೃತ್ತ ತುಂಬಾ ಸಂಕೀರ್ಣತೆಯಿಂದ ಕೂಡಿದೆಯೆಂಬುದು ದಿಟವಾದರೂ ಡಾ. ಹಳ್ಳಿಕೇರಿಯವರು ಈ ಸಮಸ್ಯೆಯನ್ನು ಸೂಕ್ಷ್ಮವಾಗಿ ವಿಶ್ಲೇಷಿಸಲೆತ್ನಿಸುತ್ತಾರೆ. ಬೀರಪ್ಪನು ಕುರುಬರ ಆರಾಧ್ಯ ದೈವವಾಗಿದ್ದರೆ, ವೀರಭದ್ರನು ಲಿಂಗಾಯತರ ಆರಾಧ್ಯ ದೈವ. ಕೆಲವು ವಿದ್ವಾಂಸರು ಸೂಚಿಸಿರುವಂತೆ, ಯಾವುದೋ ಹಂತದಲ್ಲಿ ಬೀರಪ್ಪನು ವೀರಭದ್ರನಾಗಿ ಪರಿಷ್ಕೃತಗೊಂಡಿರುತ್ತಾನೆ. ಹಂಪಿಯ ವಿರೂಪಾಕ್ಷನೂ ಮೂಲದಲ್ಲಿ ಬೀರಪ್ಪನಾಗಿದ್ದನೆಂಬ ವಾದವಿದೆ. ಈ ಎರಡೂ ದೈವಗಳ ನಂಬಿಕೆ ಮತ್ತು ಆಚರಣೆಗಳಲ್ಲಿ ಸಾಮ್ಯತೆ ಕಂಡುಬರುವುದೇ ಇದಕ್ಕೆ ಕಾರಣ. ಆದ್ದರಿಂದ ಬೀರಪ್ಪ-ವೀರಭದ್ರರ ಕ್ಷೇತ್ರಗಳು ಒಂದೇ ನೆಲೆಯವೆಂಬುದು ಡಾ. ಹಳ್ಳಿಕೇರಿಯವರ ನಿಲುವು.
ಹಾಲುಮತದ ಗುರುವಾದ ರೇವಣಸಿದ್ಧನನ್ನು ಕುರಿತು ಡಾ. ಹಳ್ಳಿಕೇರಿಯವರು ಹಲವು ತೆರನಲ್ಲಿ ವಿಚಾರ ಮಾಡಿರುವುದುಂಟು. ಅವರು ಕೈಗೊಂಡ ರೇವಣಸಿದ್ಧನ ನೆಲೆಗಳ ಪರಿವೀಕ್ಷಣೆಯಲ್ಲಿ, ದಾವಣಗೆರೆ-ಚಿತ್ರದುರ್ಗ-ತುಮಕೂರು-ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಈತನ ಮಠ-ಮಂದಿರ-ದೇವಾಲಯಗಳು ಸಾಕಷ್ಟು ಸಂಖ್ಯೆಯಲ್ಲಿರುವುದು ವ್ಯಕ್ತಪಡುತ್ತದೆ. ಮುಖ್ಯವಾಗಿ, ಮೈಸೂರು ಜಿಲ್ಲೆ, ನಂಜನಗೂಡು ತಾಲ್ಲೂಕು ಕಳಲೆ ಗ್ರಾಮದ ರೇವಣಸಿದ್ಧ ದೇವಾಲಯದ ಬಗೆಗೆ ಅಧ್ಯಯನ ಕೈಕೊಂಡು ಅವರು ಮಂಡಿಸಿರುವ ವಿಚಾರಗಳು ಗಮನಾರ್ಹವಾದುವು. ಸಂಸ್ಕೃತಿ ಸಂಶೋಧಕ ಡಾ. ಎಂ.ಎಂ.ಕಲಬುರ್ಗಿಯವರು ರೇವಣಸಿದ್ಧನ ಬಗೆಗೆ ಪ್ರಕಟಿಸಿರುವ ಆರು ಸಂಶೋಧನ ಬರಹಗಳತ್ತಲೂ ಒಂದು ನೋಟ ಬೀರುತ್ತಾರೆ ಡಾ. ಹಳ್ಳಿಕೇರಿ. ಡಾ. ಕಲಬುರ್ಗಿಯವರು ವ್ಯಕ್ತಪಡಿಸಿರುವ ರೇವಣಸಿದ್ಧನ ಜಾತಿ, ಆತನನ್ನು ಶಿವಾಚಾರ್ಯನನ್ನಾಗಿ ಮಾಡಿದುದು, ಆತನ ನಿಜಶಿಲ್ಪ-ಕೃತಕಶಿಲ್ಪಗಳು, ಬಾಳೆಹಳ್ಳಿ ರಂಭಾಪುರಿ ಪೀಠದ ಸ್ಥಾಪನೆ, ಕೊಲ್ಲಿಪಾಕೆಯ ಲಿಂಗೋದ್ಭವ ಪ್ರತೀತಿ ಡಾ. ಹಳ್ಳಿಕೇರಿಯವರಿಂದ ನಡೆದಿದೆ.
ವಿಜಾಪುರ ಜಿಲ್ಲೆ ಇಂಡಿ ಪರಿಸರದ ರೇವಣಸಿದ್ಧ ಹಾಗೂ ಅಮೋಘಸಿದ್ಧರ ನೆಲೆಗಳನ್ನು ಸಮೀಕ್ಷಿಸಿ ಬರೆಯಲಾಗಿರುವ ಪ್ರಬಂಧವು ಡಾ. ಹಳ್ಳಿಕೇರಿಯವರ ವಸ್ತುನಿಷ್ಠ ಸಂಶೋಧನೆಗೆ ಹಿಡಿದ ಕನ್ನಡಿಯೆಂದರೆ ಉತ್ಪ್ರೇಕ್ಷೆಯೇನಲ್ಲ. ಸಿದ್ಧಪರಂಪರೆಯಲ್ಲಿ ಬಂದ ಈ ಅಮೋಘಸಿದ್ಧನ ಸಾಧನೆಯ ನೆಲೆಯೆಂದರೆ ಮಹಾರಾಷ್ಟ್ರದ ಸೊಲ್ಲಾಪುರ ತಾಲ್ಲೂಕಿನ ಹತ್ತೂರು ಗ್ರಾಮ ವೆಂಬುದನ್ನು ಡಾ.ಹಳ್ಳಿಕೇರಿಯವರೇ ಗುರುತಿಸಿಕೊಟ್ಟಿದ್ದಾರೆ. ಕುರುಬರ ಮೂಲ ಚಹರೆಗಳಲ್ಲಿ ಅಮೋಘಸಿದ್ಧನು ಭಂಡಾರವನ್ನು ಉಳಿಸಿಕೊಂಡಿದ್ದರೆ, ರೇವಣಸಿದ್ಧ-ಸಿದ್ಧರಾಮ ಪರಂಪರೆ ಗಳು ವಿಭೂತಿಯತ್ತ ಹೊರಳಿದ ಮಾರ್ಮಿಕ ಸಂಗತಿಗಳನ್ನು ನಿರೂಪಿಸುವಲ್ಲಿ ಡಾ. ಹಳ್ಳಿಕೇರಿಯವರು ಇಟ್ಟಿರುವ ಹೆಜ್ಜೆ ತುಂಬಾ ಸೂಕ್ಷ್ಮವಾದುದು.
ಹಂಪಿ ಪರಿಸರದಲ್ಲಿ ವ್ಯಕ್ತಿಶಿಲ್ಪಗಳ ಪೈಕಿ ಕುರುಬನನ್ನು ಹೋಲುವ ಉಬ್ಬುಶಿಲ್ಪಗಳು ದೇವಾಲಯ ಸಂಕೀರ್ಣ ಮೊದಲಾದೆಡೆಗಳಲ್ಲಿ ಕಂಡುಬರುವುದುಂಟು. ಇದರ ಆಧಾರದಿಂದ ಈ ಪರಿಸರವು ಪಶುಪಾಲಕರ ಮುಖ್ಯನೆಲೆಯಾಗಿದ್ದಿತೆಂದು ನಿರೂಪಿಸುವ ಪ್ರಯತ್ನ ಡಾ. ಹಳ್ಳಿಕೇರಿ ಅವರದು. ಇಷ್ಟಲ್ಲದೆ, ಅವರು ಮುಂದುವರೆದು, ವಿಜಯನಗರ ಸಾಮ್ರಾಜ್ಯದ ಸ್ಥಾಪಕರು ಇದೇ ಪಶುಪಾಲಕ ವೃತ್ತಿಗೆ ಸೇರಿದ ಹಕ್ಕ-ಬುಕ್ಕರೆಂತಲೂ ಅವರು ಮೂಲತಃ ಕುರುಬ ಸಮಾಜಕ್ಕೆ ಸೇರಿದವರೆಂತಲೂ ಪ್ರತಿಪಾದಿಸಲೆತ್ನಿಸುತ್ತಾರೆ. ಅವರ ಈ ಸಂಕಲನ ದಲ್ಲಿರುವ ಕೆಲವು ಪ್ರಬಂಧಗಳಲ್ಲಿಯೂ ಅಲ್ಲಲ್ಲಿ ಈ ಅಂಶ ಪುನರಾವರ್ತನೆಗೊಂಡಿರುವು ದುಂಟು. ಇಂಥಾ ವಾದ-ಪ್ರತಿವಾದಗಳೇನೇ ಇದ್ದರೂ ಸಧ್ಯಕ್ಕೆ ಇದೊಂದು ಇನ್ನೂ ಅಖೈರಾಗಿ ಬಗೆಹರಿಯಬೇಕಾಗಿರುವ ವಿಷಯವೆನ್ನಲೇಬೇಕು. ಕೆಲವು ಸಂಶೋಧಕರಂತೆ ಡಾ. ಹಳ್ಳಿಕೇರಿ ಯವರೂ ಎತ್ತುವ ಹಕ್ಕ-ಬುಕ್ಕರ ಕುಲವಿಚಾರದ ಜಿಜ್ಞಾಸೆಗೆ ಇನ್ನಷ್ಟು ಬಲವಾದ ಚಾರಿತ್ರಿಕ ಸಮರ್ಥನೆ ಅಗತ್ಯವಿರುವುದಾಗಿ ಕರ್ನಾಟಕದ ಹಲವಾರು ವಿದ್ವಾಂಸರು ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನೂ ಇಲ್ಲಿ ಗಮನಿಸಬೇಕಾಗುತ್ತದೆ. ಇದೊಂದು ಸೂಕ್ಷ್ಮ ವಿಷಯವೆಂದರೂ ಸರಿಯೇ. ಕೆಲವು ಚಾರಿತ್ರಿಕ ಸಂಗತಿಗಳ ವಿಚಾರದಲ್ಲಿ ಏಕಪಕ್ಷೀಯ ಅಭಿಪ್ರಾಯ-ಅನಿಸಿಕೆಗಳನ್ನು ಮರುಪರಿಶೀಲಿಸಬೇಕಾದುದು ಅಗತ್ಯ. ಇಂಥಾ ಪರಿಸ್ಥಿತಿಯಲ್ಲಿ ಪ್ರಸ್ತುತ ಸಂಗತಿಯನ್ನು ತಾರ್ಕಿಕವಾಗಿ ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಡಾ. ಹಳ್ಳಿಕೇರಿಯವರು ಎಚ್ಚರದ ಹೆಜ್ಜೆಗಳನ್ನಿಡ ಬೇಕಾದುದು ಅನಿವಾರ್ಯ ಹಾಗೂ ಅಪೇಕ್ಷಣೀಯ.
ಅಲೆಮಾರಿ ಕುರುಬ ಸಮುದಾಯದವರ ಕೆಲವು ಸಾಂಸ್ಕೃತಿಕಾಚರಣೆಗಳ ವೈಶಿಷ್ಟ್ಯಗಳನ್ನು ಹಾಗೂ ಪರಂಪರೆಯನ್ನು ಗೌರವಿಸುವಲ್ಲಿ ಅವರು ತೋರುವ ಶ್ರದ್ಧಾಭಕ್ತಿಗಳನ್ನು ಆದ್ಯಂತವಾಗಿ ಅಧ್ಯಯನಿಸಿದವರು ಡಾ. ಹಳ್ಳಿಕೇರಿ. ಈ ಸಮಾಜದವರು ಆಚರಿಸುವ ಮಲಪುರಿ ಹಬ್ಬದ ವಿವರವನ್ನು ತಮ್ಮ ಕ್ಷೇತ್ರಕಾರ್ಯದ ಮೂಲಕ ಕಣ್ಣಿಗೆ ಕಟ್ಟುವಂತೆ ನಿರೂಪಿಸಿರುವರು. ಇಂಥ ಸಂಭ್ರಮಾಚರಣೆಗಳ ಮಟ್ಟಿಗೆ ಡಾ. ಹಳ್ಳಿಕೇರಿಯವರು ಒಂದು ಅತ್ಯುತ್ತಮ ಸಾಮಾಜಿಕ ದಾಖಲೆಯನ್ನು ಒದಗಿಸಿರುವರೆನ್ನಬಹುದು. ಅವರ ಪ್ರಬಂಧವು ವ್ಯಕ್ತಪಡಿಸುವಂತೆ, ಗಂಗಾಪೂಜೆ, ಹೋಳಿಗೆ ಹಬ್ಬ ಇತ್ಯಾದಿ ಹೆಸರುಗಳಿಂದಲೂ ಕರೆಯಿಸಿಕೊಳ್ಳುವ ಮಲಪುರಿ ಹಬ್ಬವು, ವರ್ಷಕ್ಕೊಮ್ಮೆ ಶ್ರಾವಣಮಾಸ ಅಥವಾ ಮಳೆಗಾಲದ ಆರಂಭದ ಕಾಲದಲ್ಲಿ ಆಚರಿಸಲ್ಪಡುವಂಥಾದ್ದು. ಯಾವುದೇ ಹಳ್ಳ-ಹೊಳೆ-ನದಿ-ಕಾಲುವೆಗಳ ತಟಗಳೇ ಈ ಹಬ್ಬಾಚರಣೆಯ ಎಡೆಗಳು. ಹಿಂದೊಮ್ಮೆ ಯಾವುದೋ ತುರ್ತು ಸಂದರ್ಭದಲ್ಲಿ ತಮ್ಮ ಸಮುದಾಯದ ಹಿರಿಯರಿಗೆ ಸಹಾಯವೆಸಗಿದ ಗಂಗಾಮಾತೆಗೆ ಕೃತಜ್ಞತೆಯನರ್ಪಿಸುವುದು ಈ ಹಬ್ಬದ ಉದ್ದೇಶ.
ಬುಡಕಟ್ಟು ನ್ಯಾಯ ವ್ಯವಸ್ಥೆಯತ್ತಲೂ ಗಮನಹರಿಸುವ ಡಾ. ಹಳ್ಳಿಕೇರಿ, ಕುರುಬ ಸಮುದಾಯದ ನ್ಯಾಯವಿಧಾನ ಪದ್ಧತಿಗೆ ಸಂಬಂಧಿಸಿದಂತೆ ಒದಗಿಸಿರುವ ವಿವರಗಳು ಕುತೂಹಲಕಾರಿಯೆನಿಸುತ್ತವೆ. ಅವರು ಪರಾಮರ್ಶಿಸಿರುವ ನ್ಯಾಯವಿಧಾನಗಳು ಕಾಡುಕುರುಬ, ಜೇನುಕುರುಬ, ಗೊಂಡಕುರುಬ, ಅಲೆಮಾರಿ ಕುರುಬ, ಒಡೆಯರು, ಹತ್ತಿಕಂಕಣ ಕುರುಬ, ಉಣ್ಣೆಕಂಕಣ ಕುರುಬ -ಇಂಥಾ ಸಮುದಾಯದವರಲ್ಲಿ ಆಚರಣೆಯಲ್ಲಿರುವ ಹಾಗೂ ಪವಿತ್ರವೆನಿಸಿರುವ ಕಂಬಳಿ-ಭಂಡಾರಗಳನ್ನು ಕುರಿತದ್ದೂ ಒಂದು.
ಕುರುಬ ಸಮುದಾಯದ ಕೆಲವು ಅಪರೂಪದ ಪ್ರತಿಭಾನ್ವಿತರನ್ನು ಕುರಿತು ಪ್ರಬಂಧಗಳನ್ನು ರಚಿಸುವ ಮಟ್ಟಿಗೆ ಡಾ. ಹಳ್ಳಿಕೇರಿಯವರ ಲೇಖನಿ ಕೆಲಸ ಮಾಡಿದೆ. ಹಾಲುಮತ ಪುರಾಣ (ಮರುಳಸಿದ್ಧೇಶ್ವರ ಚರಿತೆ), ಬೀರೇಶ್ವರ ಚರಿತ್ರೆ ಕೃತಿಗಳ ಕರ್ತೃ ಹಾವೇರಿ ಜಿಲ್ಲೆ ಬಂಕಾಪುರದ ಬಸವಣ್ಣೆಪ್ಪ ನೀಲಪ್ಪ ಹಳವಳ್ಳಿ; ಜಾಬಾಲ ವಿಜಯಂ ಮೊದಲಾದ ಕೃತಿಗಳ ಕರ್ತೃವೂ ನರಹರಿ ಅಂಕಿತದೊಡನೆ ಸಾವಿರಾರು ತತ್ವಪದಗಳನ್ನು ರಚಿಸಿರುವವರೂ ಆದ ಚಿತ್ರದುರ್ಗ ತಾಲ್ಲೂಕು ತುರವನೂರಿನ ಲಿಂಗಯ್ಯ; ಡೊಳ್ಳು ಕುಣಿತದ ಕಲೆಯನ್ನು ಲೋಕಪ್ರಿಯಗೊಳಿಸಿದ ಹೊಸಪೇಟೆ ತಾಲ್ಲೂಕು ಮಲಪನಗುಡಿಯ ಕಾರಮಂಚಪ್ಪರಂಥವರು ಡಾ. ಹಳ್ಳಿಕೇರಿಯವರ ಮೂಲಕ ಕುರುಬರ ಸಾಂಸ್ಕೃತಿಕ ಚರಿತ್ರೆಯಲ್ಲಿ ಗಟ್ಟಿಸ್ಥಾನ ಪಡೆದುಕೊಂಡಿದ್ದಾರೆ.
ಸಧ್ಯಕ್ಕೆ ಹಾಲುಮತ ಸಾಹಿತ್ಯ-ಸಂಸ್ಕೃತಿ-ಸಂಘಟನೆಗಳ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿ ಸಮಾಜದ ಜಾಗೃತಿಗಾಗಿ ಕಾಳಜಿಯುಕ್ತವಾಗಿ ಪ್ರವರ್ತಿಸುತ್ತಿರುವವರಲ್ಲಿ ಇಂದು ಡಾ. ಎಫ್.ಟಿ. ಹಳ್ಳಿಕೇರಿಯವರು ಮುಂಚೂಣಿಯಲ್ಲಿರುವರೆಂಬುದಂತೂ ವಾಸ್ತವ. ಪ್ರಸಕ್ತ ಸಂದರ್ಭದಲ್ಲಿ, ಈ ಸಮುದಾಯದ ಯುವಜನರು ಸಾಗಬೇಕಾದ ಮಾರ್ಗವನ್ನು ನಿರ್ಧರಿಸುವ ಮಟ್ಟಿಗೆ ಅವರು ಹೊಂದಿರುವ ಆಸಕ್ತಿ-ಅಭಿಮಾನಗಳು ವಿರಳವಾದುವು. ಸಾಹಿತ್ಯ-ಸಂಸ್ಕೃತಿಗಳಲ್ಲಿ ಆಳವಾದ ವಿದ್ವತ್ ಪಡೆದಿರುವ ಡಾ. ಹಳ್ಳಿಕೇರಿಯವರು, ಕುರುಬ ಸಮಾಜ ಮಾತ್ರವಲ್ಲದೆ ಇತರೆ ಸಮಾಜಗಳೊಡನೆ ಅದು ಹೊಂದಿರಬೇಕಾದ ಮಧುರ ಬಾಂಧವ್ಯದ ಬಗೆಗೂ ಚಿಂತನೆ ನಡೆಸಿರುವರು. ಅವರ ಇಲ್ಲಿಯ ಪ್ರಬಂಧಗಳೇ ಈ ಮಾತಿಗೆ ಉದಾಹರಣೆಯಂತಿವೆ. ಮುಖ್ಯವಾಗಿ, ಈಗಿನ ಪರಿಸ್ಥಿತಿಯಲ್ಲಿ ಕರ್ನಾಟಕದ ಬುಡಕಟ್ಟು ಸಮುದಾಯಗಳ ಸಂಸ್ಕೃತಿ ಚಿಂತನೆಯ ಮಟ್ಟಿಗೆ, ಡಾ. ಹಳ್ಳಿಕೇರಿಯವರ ಕೊಡುಗೆಯೂ ಅಮೂಲ್ಯವೆಂದು ಪರಿಗಣಿಸುವ ಅನಿವಾರ್ಯತೆ ಇರುವುದು ಸ್ಪಷ್ಟ. ಅವರಿಗೆ ಯಶಸ್ಸನ್ನು ಹಾರೈಸುತ್ತೇನೆ.
ಪ್ರೊ. ಲಕ್ಷ್ಮಣ ತೆಲಗಾವಿ
ಪರಿವಿಡಿ
ಸವಿನುಡಿ / ೭
ಸಂಶೋಧನ ನಿಕಷಕ್ಕೊಡ್ಡಿದ ಸಾಮುದಾಯಿಕ ಸಂಗತಿಗಳು / ೯
ನನ್ನ ಮಾತು / ೧೫
೧. ವೀರ ಮಾಹೇಶ್ವರಿ ಕಂಚಿಕಬ್ಬೆ: ಹಾಲುಮತ ಸಮುದಾಯದ ಮೊದಲ ಶಾಸನೋಕ್ತ ಮಹಿಳೆ / ೧೯
೨. ತುರವಿಹಾಳ ಗ್ರಾಮದಲ್ಲಿ ಹಾಲುಮತ ದಾಖಲೆಗಳ ಶೋಧ / ೨೮
೩. ಮಹಾರಾಷ್ಟ್ರದ ಹತ್ತೂರು: ಅಮೋಘಸಿದ್ಧ ಪರಂಪರೆಯ ನೆಲೆ / ೩೯
೪. ಕುರುಬಸೇಣಿ: ಪ್ರಾಚೀನ ಕಾಲದ ಒಂದು ಸಹಕಾರಿ ಸಂಘ / ೪೯
೫. ಕುರಿ ತೆರಿಗೆ: ಕೆಲವು ಸಂಗತಿಗಳು / ೫೬
೬. ಕುರುಬರಿಗೆ ಸಂಬಂಧಿಸಿದ ಶಾಸನೋಕ್ತ ವ್ಯಕ್ತಿನಾಮಗಳು / ೬೪
೭. ಕುರುಬರಿಗೆ ಸಂಬಂಧಿಸಿದ ಶಾಸನೋಕ್ತ ಗ್ರಾಮನಾಮಗಳು / ೭೨
೮. ಕುರುಬರ ಕುಟುಂಬನಾಮಗಳು / ೮೨
೯. ಮೈಲಾರಲಿಂಗನ ಚರಿತ್ರೆ: ಕಾವ್ಯ-ಪುರಾಣ-ಶಾಸನಗಳ ಮುಖೇನ / ೯೦
೧೦. ಮಧ್ಯಕರ್ನಾಟಕದ ಬೀರಪ್ಪನ ನೆಲೆಗಳು / ೯೮
೧೧. ಬೀರಪ್ಪ-ವೀರಭದ್ರರ ಸಮನ್ವಯ: ಕೆಲವು ಸಂಗತಿಗಳು / ೧೦೯
೧೨. ಮೈಸೂರು ಪರಿಸರದಲ್ಲಿ ರೇವಣಸಿದ್ಧನ ನೆಲೆಗಳು / ೧೧೭
೧೩. ಇಂಡಿ ಪರಿಸರದಲ್ಲಿ ರೇವಣಸಿದ್ಧ ಮತ್ತು ಅಮೋಘಸಿದ್ಧ ಪರಂಪರೆ / ೧೨೨
೧೪. ರೇವಣಸಿದ್ಧ: ಎಂ.ಎಂ.ಕಲಬುರ್ಗಿ ಅವರ ಶೋಧಗಳು / ೧೩೧
೧೫. ಹಂಪಿ ಪರಿಸರದಲ್ಲಿ ಕುರುಬನ ಶಿಲ್ಪಗಳು / ೧೪೨
೧೬. ತಗರ ಪವಾಡ-ಸಿದ್ಧಮಂಕ ಚರಿತೆ: ತೌಲನಿಕ ಅಧ್ಯಯನ / ೧೪೫
೧೭. ಅಲೆಮಾರಿ ಕುರುಬರ ಮಲಪುರಿ ಹಬ್ಬ / ೧೫೩
೧೮. ಟಗರ ಕಾಳಗ / ೧೫೭
೧೯. ಕುರುಬರ ಸಾಮಾಜಿಕ ನ್ಯಾಯ ವ್ಯವಸ್ಥೆ / ೧೬೪
೨೦. ಚಂದಾಲಿಂಗೇಶ್ವರ-ಚಂದಿಮರಸ: ಒಬ್ಬರೇ ಅಲ್ಲ-ಬೇರೆ ಬೇರೆ / ೧೭೬
೨೧. ಹಾಲುಮತ ಸಂಸ್ಕೃತಿ ಚಿಂತಕ: ಬಸವಣ್ಣೆಪ್ಪ ನೀಲಪ್ಪ ಹಳವಳ್ಳಿ / ೧೮೨
೨೨. ತತ್ವಪದಕಾರ: ತುರುವನೂರಿನ ಕುರುಬರ ಲಿಂಗಯ್ಯ / ೧೮೬
೨೩. ಮಲಪನಗುಡಿಯ ಕಾರಮಂಚಪ್ಪನ ಡೊಳ್ಳು ಕುಣಿತ / ೧೯೧
೨೪. ಹಾಲುಮತ ಸಮಾಜ-ಸಾಹಿತ್ಯ ಸಂಘಟನೆ / ೧೯೫
೨೫. ಹಾಲುಮತ ಸಮಾಜ-ಸಾಹಿತ್ಯ-ಸಂಸ್ಕೃತಿ ಅಧ್ಯಯನದ ಸಾಧ್ಯತೆಗಳು / ೨೦೩
Reviews
There are no reviews yet.