ಮುನ್ನುಡಿ
ತೀರಾ ಇತ್ತೀಚಿನವರೆಗೆ ಪ್ರೊ. ಆರ್.ಕೆ.ಕುಲಕರ್ಣಿಯವರು ಕವಿಗಳು, ಚಿಂತಕರು, ಶ್ರೀ ಅರವಿಂದರ ಸಾಹಿತ್ಯದ ಅಭ್ಯಾಸಿಗಳು ಆಗಿರುವುದು ನನಗೆ ಗೊತ್ತೇ ಇರಲಿಲ್ಲ. ಅವರ ಕವನ ಸಂಕಲನ (ಮುಳ್ಳುಜಾಜಿ) ಹಸ್ತಪ್ರತಿಯನ್ನು ನನಗೆ ಆಪ್ತಮಿತ್ರರಾದ ಡಾ. ಎಂ.ಎಸ್.ಮದಭಾವಿಯವರು ಕೊಟ್ಟು ಮುನ್ನುಡಿ ಬರೆಯಲು ಕೇಳಿಕೊಂಡಾಗ ಒಂದಿಷ್ಟು ಅನುಮಾನದಿಂದಲೇ ಒಪ್ಪಿಕೊಂಡು, ಅದನ್ನು ಓದಿದಾಗ ಪ್ರೊ. ಆರ್.ಕೆ.ಕುಲಕರ್ಣಿಯವರು ಉದಯೋನ್ಮುಖ ಕವಿಗಳಾಗಿ ನನಗೆ ಕಾಣಲಿಲ್ಲ. ಬದಲು ಅವರು ಪಕ್ವಮನಸ್ಸಿನ ಹಿರಿಯ ಕವಿಗಳಾಗಿ ನನ್ನನ್ನು ಆಕರ್ಷಿಸಿದರು. ಈ ಆಕರ್ಷಣೆ ಅವರು ನನ್ನ ಸ್ನೇಹವಲಯಕ್ಕೆ ಬರಮಾಡಿಕೊಳ್ಳುವಂತೆ ಮಾಡಿತು. ಆಮೇಲೆ ಅವರು ಬರೆದ ಕಾಲದ ಕುರಿತಾದ ಕೃತಿ ಅವರೊಬ್ಬ ಅಪರೂಪದ ಚಿಂತಕರೆಂಬುದನ್ನು ಸಾಬೀತುಪಡಿಸಿತು. ಅವರು ಇಂಗ್ಲಿಷ್ ಪ್ರಾಧ್ಯಾಪಕರಾಗಿರುವುದರಿಂದ ವಿಜಯಪುರ ಜಿಲ್ಲೆ ಶ್ರೀ ಅರವಿಂದರ ಪ್ರಭಾವಲಯದಲ್ಲಿ(ಹಲಸಂಗಿ ಗೆಳೆಯರ ಮೂಲಕ) ಗುರುತಿಸಿಕೊಂಡದ್ದ ರಿಂದ ಪ್ರೊ. ಆರ್.ಕೆ.ಕುಲಕರ್ಣಿಯವರು ಆ ವಲಯದಲ್ಲಿಯ ಒಬ್ಬ ಚಿಂತಕರೇ ಆಗಿರುವುದ ರಿಂದ ಶ್ರೀ ಅರವಿಂದರ ಸಾಹಿತ್ಯವನ್ನು ಆಳವಾಗಿಯೇ ಅಧ್ಯಯನ ಮಾಡಿರುವುದು ಸಹಜ. ವಿಶೇಷವಾಗಿ ಕವಿಹೃದಯದ ಪ್ರೊ. ಆರ್.ಕೆ.ಕುಲಕರ್ಣಿಯವರು ಶ್ರೀ ಅರವಿಂದರ ಮಹಾಕಾವ್ಯ ವನ್ನು ತಲಸ್ಪರ್ಶಿಯಾಗಿ ಓದಿರುವುದರಲ್ಲಿ ಅನುಮಾನವಿಲ್ಲ. ಅವರು ಆ ಮಹಾಕಾವ್ಯವನ್ನು ಬಹುಕಾಲದಿಂದ ಅಧ್ಯಯನ ಮಾಡಿದ್ದರ ಫಲಶ್ರುತಿಯಾಗಿ ಈಗ ಅದರ ಸಂಕ್ಷೇಪ ಕನ್ನಡರೂಪ ಸಿದ್ಧಪಡಿಸಿದ್ದಾರೆ. ಈ ಕಾವ್ಯರೂಪ ನನ್ನನ್ನು ತಬ್ಬಿಬ್ಬುಗೊಳಿಸಿದೆ, ಮೂಕವಿಸ್ಮಿತನನ್ನಾಗಿ ಮಾಡಿದೆ. ಯಾಕೆಂದರೆ ಸಾವಿತ್ರಿ ಮಹಾಕಾವ್ಯವನ್ನು ನಾನು ೧೯೭೩ರಿಂದಲೂ(ಅದು ಮಹಾಕಾವ್ಯದ ನಾಲ್ಕನೇ ಮುದ್ರಣ) ಸಮಯ ದೊರೆತಾಗೆಲ್ಲ ಓದುತ್ತಲಿದ್ದೇನೆ. ಅದು ಸಂಪೂರ್ಣವಾಗಿ ತಿಳಿದಿದೆ ಎಂದು ಹೇಳುವ ಧೈರ್ಯ ನನಗೆ ಈವರೆಗೆ ಬರಲೇ ಇಲ್ಲ. ಅದರ ಸಂಪೂರ್ಣ ಕನ್ನಡಾನುವಾದವನ್ನು ಕೋ.ಚೆನ್ನಬಸಪ್ಪ ಮಾಡಿದ್ದನ್ನು ಓದಿದ ಮೇಲೂ ನನ್ನ ಗ್ರಹಿಕೆಯಲ್ಲಿಯ ಕೊರತೆಗಳು ಉಳಿದುಕೊಂಡೇ ಇವೆ.
ನನ್ನ ದೃಷ್ಟಿಯಲ್ಲಿ ಪ್ರೊ. ಆರ್.ಕೆ.ಕುಲಕರ್ಣಿಯವರ ಈ ಸಂಕ್ಷೇಪ ರೂಪ ಅತ್ಯಂತ ಮಹತ್ವದ್ದಾಗಿ ಕಾಣುತ್ತದೆ. ಅವರಿಗೆ ಇಂಗ್ಲಿಷ್ ಮತ್ತು ಕನ್ನಡ -ಈ ಉಭಯ ಭಾಷೆಗಳ ಮೇಲೆ ಪ್ರಭುತ್ವ ವಿರುವುದರಿಂದ ಒಬ್ಬ ಅಧ್ಯಾತ್ಮ ಸಾಧಕರಾಗಿ ಸಾವಿತ್ರಿ ಮಹಾಕಾವ್ಯವನ್ನು ಕೂಲಂಕಷವಾಗಿ ಓದಿದ್ದರಿಂದ ಹೀಗೆ ಸಂಕ್ಷೇಪಿಸಿಕೊಳ್ಳಲು ಸಾಧ್ಯವಾಗಿದೆ ಅನ್ನಿಸುತ್ತದೆ. ಕತೆಯ ಮೆಯ್ಗೆಡಲೀ ಯದೆ ಸಮಸ್ತ ಭಾರತಮಂ ಅಪೂರ್ವಮಾಗಿ ಮಹಾಕವಿ ಪಂಪ ರೂಪಿಸಿದಂತೆ -ಇವರು ಇನ್ನೂ ವಿಶೇಷ ರೀತಿಯಲ್ಲಿ ಸಂಯೋಜಿಸಿದ್ದಾರೆ. ಪ್ರೊ. ಆರ್.ಕೆ.ಕುಲಕರ್ಣಿಯವರು ತಮ್ಮ ಪ್ರಸ್ತಾವನೆಯಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಇದರಷ್ಟು ಸುದೀರ್ಘವಾದ ಕಾವ್ಯಕೃತಿ ಮತ್ತೊಂದಿಲ್ಲ. ಮೂರು ಭಾಗಗಳಲ್ಲಿ ಹನ್ನೆರಡು ಪರ್ವಗಳಲ್ಲಿ ನಲವತ್ತೊಂಬತ್ತು ಸರ್ಗಗಳಲ್ಲಿ ಇಪ್ಪತ್ಮೂರು ಸಾವಿರದ ಎಂಟುನೂರಾ ಹದಿಮೂರು ಸಾಲುಗಳಲ್ಲಿ ವ್ಯಾಪಿಸಿರುವ ಈ ಗ್ರಂಥವು ಗಾತ್ರದಲ್ಲಿ ಹಾಗೆಯೇ ಗುಣದಲ್ಲಿ ಭಾರವಾದ ಗ್ರಂಥವೇ ಎಂದು ಹೇಳಿಕೊಂಡಿದ್ದಾರೆ. ಇಷ್ಟು ಘನವಾದ ಮಹಾಕಾವ್ಯವನ್ನು ಸಂಕ್ಷೇಪರೂಪ ಕ್ಕಿಳಿಸುವ ಅವರ ಸಾಹಸ ಅನನ್ಯವಾದದ್ದು ಎನಿಸುತ್ತದೆ. ಉದ್ಗ್ರಂಥವಾದ ಸಾವಿತ್ರಿ ಮೂಲ ಇಂಗ್ಲಿಷಿನಲ್ಲಿ ಏಳುನೂರು ಪುಟಗಳನ್ನು ಮಿಕ್ಕಿದೆ. ಕನ್ನಡದ ಸಂಪೂರ್ಣ ಅನುವಾದ(ಕೋ.ಚೆ. ಅವರಿಂದ)ವೂ ಏಳುನೂರಾ ಎಪ್ಪತ್ತೊಂಬತ್ತು ಪುಟದ್ದಾಗಿದೆ. ಹೀಗಿರುವ ಸಾವಿತ್ರಿ ಗ್ರಂಥವನ್ನು ಎರಡುನೂರಾ ಹತ್ತೊಂಬತ್ತು ಪುಟಗಳಿಗೆ ಇಳಿಸಿದ್ದು ಅಚ್ಚರಿಯ ಸಂಗತಿ ಎನಿಸಿದೆ. ಸಂಕ್ಷೇಪೀಕರಣ ಕ್ರಿಯೆ(ಉದಾ: ಪಂಪ ಮಹಾಕವಿಯ ಆದಿಪುರಾಣ, ಸಂ. ಎಲ್.ಗುಂಡಪ್ಪ) ಕನ್ನಡದಲ್ಲಿ ನಡೆದಿದೆ. ಇಂಥ ಮಾದರಿಗಳಿದ್ದಾಗಲೂ ಸಾವಿತ್ರಿಯ ಸಂಕ್ಷೇಪ ರೂಪ (ಅನುವಾದಿತ) ತೀರ ನವೀನವಾದದ್ದು ಎಂದು ಹೇಳಬಹುದು. ಯಾಕೆಂದರೆ ಇದು ಅನುವಾದಿತ ಸಂಕ್ಷೇಪ ರೂಪ.
ಸಾವಿತ್ರಿಯು ಶ್ರೀ ಅರವಿಂದ ಮಹರ್ಷಿಗಳು ಬರೆದ ಮಹಾಕಾವ್ಯ. ಆದರೆ ಇದು ಅಷ್ಟಾದಶ ವರ್ಣನೆಗಳು, ನವರಸಗಳು ಹಾಗೆಯೇ ನಾಯಕ, ಪ್ರತಿನಾಯಕ ಇತ್ಯಾದಿಗಳಿಂದ ರಂಜಿಸುವ ಮಹಾಕಾವ್ಯವಲ್ಲ. ಸಾಂಪ್ರದಾಯಿಕ ತಂತ್ರಗಳಿಂದ ಕೂಡಿದ ಮಹಾಕಾವ್ಯ ಸಾವಿತ್ರಿ ಅಲ್ಲ; ಇದು ಅನುಭಾವಿಕ ಮಹಾಕಾವ್ಯ. ಪ್ರೊ. ಆರ್.ಕೆ.ಕುಲಕರ್ಣಿಯವರು ಆಧ್ಯಾತ್ಮಿಕ ಮಹಾಕಾವ್ಯಗಳ ಮಾಲಿಕೆಯಲ್ಲಿ ಇದನ್ನು ಗುರುತಿಸಿದ್ದಾರೆ. ಡಾಂಟೆಯ ಡಿವೈನ್ ಕಾಮಿಡಿ, ಮಿಲ್ಟನ್ನ ಪ್ಯಾರಾಡೈಸ್ ಲಾಸ್ಟ್ಗಳನ್ನೂ ಅವರು ಉದಾಹರಿಸಿದ್ದಾರೆ. ಕನ್ನಡದಲ್ಲಿ ಲೌಕಿಕ, ಆಗಮಿಕ ಎಂಬ ಎರಡು ಬಗೆಯ ಕಾವ್ಯ ಸೃಷ್ಟಿ ಮಹಾಕವಿ ಪಂಪನಿಂದಲೇ ಪ್ರಾರಂಭವಾಗಿದೆ. ಆದರೆ ಅವನ ಆಗಮಿಕ ಕಾವ್ಯಗಳಿಗೆ ಹಿನ್ನೆಲೆಯಾದದ್ದು ಧಾರ್ಮಿಕ ದೃಷ್ಟಿ. ಶ್ರೀ ಅರವಿಂದರ ಮಹಾಕಾವ್ಯ ಧಾರ್ಮಿಕತೆಯ ಯಾವ ಲೇಪನವನ್ನೂ ಪಡೆಯದ, ಆದರೆ ಯೋಗಿಕ ಪರಿಕಲ್ಪನೆ ಯನ್ನು ಒಳಗೊಂಡ ವಿಶೇಷವಾಗಿ ಪೂರ್ಣಯೋಗಸಿದ್ಧಾಂತಕ್ಕೆ ಬದ್ಧವಾದ ಸ್ವಾನುಭವಪೂರ್ಣ ವಾದ ಒಡಲನೂಲಿನಿಂದಲೇ ನೆಯ್ದ ಮಡಿಯಾದ, ನಯವಾದ ಯೋಗದ ಬಟ್ಟೆ.
ಸಾವಿತ್ರಿ ಮಹಾಕಾವ್ಯದ ವಸ್ತು ಚಿಕ್ಕದು. ಪ್ರೊ. ಆರ್.ಕೆ.ಕುಲಕರ್ಣಿಯವರು ಮಹಾ ಭಾರತದ ಅರಣ್ಯ ಪರ್ವದಲ್ಲಿರುವ ಸತ್ಯವಾನ ಸಾವಿತ್ರಿ ಉಪಾಖ್ಯಾನದ ಕಥೆಯೇ ಈ ಕಾವ್ಯಕ್ಕೆ ಆಧಾರ ಎಂದಿರುವುದನ್ನು ನಾವು ಗಮನಿಸಬಹುದು. ಈ ಉಪಾಖ್ಯಾನ ಮಹಾಕಾವ್ಯ ರೂಪ ತಾಳುವುದರಲ್ಲಿ ಶ್ರೀ ಅರವಿಂದರ ಸುದೀರ್ಘವಾದ, ಅನುಭವ ಗಮ್ಯವಾದ, ಋಷಿ ಪಾರಂಪರ್ಯದ ಸಾಧನೆಯ ಪೈಲುಗಳು ಅಭಿವ್ಯಕ್ತವಾಗುತ್ತ ಹೋಗಿವೆ. ತಾತ್ವಿಕ ಚಿಂತನೆ, ವಿವೇಚನೆ ಅಗಾಧವಾಗಿಯೇ ಕಾವ್ಯರೂಪದಲ್ಲಿ ಪ್ರಕಟಗೊಂಡಿವೆ. ಪ್ರೊ. ಆರ್.ಕೆ.ಕುಲಕರ್ಣಿ ಯವರು ತಮ್ಮ ದೀರ್ಘ ಕಾಲದ ಅಧ್ಯಯನದಿಂದ ಅಂದರೆ ನಿರಂತರದ ಸಾಧನೆಯಿಂದ ಮೂಲ ಕಥೆಗೆ ಊನಬರದಂತೆ ಯೋಗದ ಪ್ರಕ್ರಿಯೆಗೆ ಧಕ್ಕೆ ತಗುಲದಂತೆ ಕಥೆ ಮತ್ತು ತತ್ತ್ವ ಎರಡನ್ನೂ ಬಹಳ ಜೋಕೆಯಿಂದ ಈ ಸಂಕ್ಷೇಪ ಕನ್ನಡರೂಪದಲ್ಲಿ ಅಭಿವ್ಯಕ್ತಗೊಳಿಸಿದ್ದು ನನಗೆ ಅಚ್ಚರಿಯನ್ನುಂಟು ಮಾಡಿತು. ಅಷ್ಟಲ್ಲದೆ ಗಹನವಾದ ಮೂಲದ ನಿರೂಪಣೆಗೆ ತಿಳಿಯಾದ ಹೃದ್ಯವೂ ಎನ್ನಬಹುದಾದ ಸಂವಹನ ಕ್ರಿಯೆಗೆ ಅಳವಡಿಸಿದ್ದು ಗಮನಾರ್ಹ ವಾದದ್ದೂ ಎನಿಸಿತು. ಉದಾಹರಣೆಗೆ ಈ ಕೆಳಗಿನ ಚರಣಗಳನ್ನು ನೋಡಬೇಕು.
ದೇವ ಶಿಶುಗಳು ನಾವು, ನಮ್ಮಲಿಳಿಯಬೇಕು ಅವನು,
ಅವನ ಬಿಟ್ಟು ನಾವಿಲ್ಲ; ನಮ್ಮನವ ಬಿಡಲಾರದಬಂಧ
ಇಂದಿಲ್ಲ ನಾಳೆ ಜಡಬಂಧನವು ಕಳಚಿ ಇಹ ದಿವ್ಯವಾಗಲಿಹುದು
ಮನುಜ ಪ್ರಜ್ಞೆಯರಳುತ್ತ ಅತಿಮಾನಸ ದಿವ್ಯದಲಿ ಮೀಯಬಹುದು
-ಸರ್ಗ-೪, ರಹಸ್ಯಜ್ಞಾನ
ಈ ರೀತಿಯ ಅನುವಾದ, ಇದನ್ನು ಬರಿ ಅನುವಾದ ಎನ್ನುವುದು ಸೂಕ್ತವೆನಿಸುವುದಿಲ್ಲ. ಈ ಅನುವಾದವೂ ಒಂದು ಸೃಷ್ಟಿಯೇ. ಇಂಗ್ಲಿಷಿನಲ್ಲಿ ಹೇಳುವುದಾದರೆ Trans-creation ಅನ್ನಬಹುದು. ಈ ರೀತಿಯ ಬರವಣಿಗೆ ಈ ಕಾವ್ಯದುದ್ದಕ್ಕೂ ಕಾಣುತ್ತದೆ.
ಸಾವಿತ್ರಿ ಮಹಾಕಾವ್ಯದ ಶ್ರುತಿಗೆ ಮೂಲಾಧಾರ ಅಶ್ವಪತಿ. ಲೌಕಿಕ ದೃಷ್ಟಿಯಿಂದ ಅವನು ಮದ್ರ ದೇಶದ ಅರಸು. ಆಧ್ಯಾತ್ಮಿಕ ದೃಷ್ಟಿಯಿಂದ ಅವನು ಹದಿನೆಂಟು ವರ್ಷ ಕಠೋರ ತಪಸ್ಸು ಮಾಡಿದ ಯೋಗಿ. ಈ ಮಹಾಯೋಗಿಯ ಮಗಳು ಸಾವಿತ್ರಿ. ಪ್ರಾಯಕ್ಕೆ ಬಂದ ಸಾವಿತ್ರಿಗೆ ಅಗಾಧವಾದ ಸಂಸ್ಕಾರದ ಬಲವಿದೆ. ಅವಳು ತನ್ನ ಪತಿಯನ್ನು ತಾನೇ ಆರಿಸಿ ಕೊಳ್ಳಲು ಸಮರ್ಥಳಾಗಿದ್ದಳು. ಪರ್ವ-೪, ಸರ್ಗ-೪ ಹೊರಟಳು ರಥದಲಿ ಸಾವಿತ್ರಿ ನಿಜ ಬಾಳಸಂಗಾತಿಯನರಸಲು. ದಾರಿಯುದ್ದಕ್ಕೂ ಅವಳು ಕಂಡ ದೃಶ್ಯವನ್ನು ಶ್ರೀ ಅರವಿಂದರು ಬಣ್ಣಿಸುತ್ತ ಪುರುಷ ಕುಲವನೆಲ್ಲ ಅರಸುತ ಅಲೆದಾಡಿದರೂ ಕಾಣದೆ ಹೋದಳು ಅರಗುವರಿ. ಹಾಗಿದ್ದರೂ ದೈವ ನಿರ್ಮಿತ ಮಿಲನ ಸ್ಥಾನ ಬರುವವರೆಗೂ ತನ್ನ ಶೋಧಕಾರ್ಯ ಮುಂದುವರಿಸಿ ಕಂಡಳು ಸತ್ಯವಾನನ ವಿಪಿನದಂಚಿನಲಿ, ಹಸಿರು ಹಿನ್ನೆಲೆ ಹೊನ್ನ ಕಿರಣದ ಮಧ್ಯ ಕೊರೆದಿಟ್ಟ ಚಿತ್ರದಂತಿದ್ದ ಸುಂದರನ. ಇಲ್ಲಿಂದ ಪರಸ್ಪರರ ಪರಿಚಯ ಹಾಗೆಯೇ ಪ್ರೇಮ ಸಲ್ಲಾಪ. ಶ್ರೀ ಅರವಿಂದರು ಇಂದ್ರಿಯ ಸೌಂದರ್ಯವನ್ನೂ ಬಲ್ಲರು, ಆಧ್ಯಾತ್ಮ ಸೌಂದರ್ಯವನ್ನೂ ಬಲ್ಲರು. ಅವರ ‘The Future Poetry’ ಕಾವ್ಯ ಮೀಮಾಂಸೆ ಗ್ರಂಥದಲ್ಲಿ ನಾಲ್ಕು ಬಗೆಯ ಸೌಂದರ್ಯದ ಪ್ರಸ್ತಾಪವಿರುವುದನ್ನು ಕಾಣಬಹುದು. ಈ ಮಹಾಕಾವ್ಯದಲ್ಲಿ ಪ್ರಮುಖವಾದದ್ದು ಆಧ್ಯಾತ್ಮ ಸೌಂದರ್ಯವೇ. ಉಳಿದವೆಲ್ಲವೂ ಆನುಷಂಗಿಕ.
ಸತ್ಯವಾನ ಸಾವಿತ್ರಿಯರ ಪ್ರಥಮ ಸಮಾಗಮದ ಸಂದರ್ಭಕ್ಕೆ ಹೊಂದಿಕೊಂಡೇ ನಾರದ ಪ್ರವೇಶವಾಗಿ ಸತ್ಯವಾನನ ಆಯುಷ್ಯ ಒಂದು ವರ್ಷದ್ದು ಎಂಬ ಭವಿಷ್ಯ ಪ್ರಕಟವಾದಾಗ ಸಾವಿತ್ರಿ ಭಯಭೀತಳಾಗಲಿಲ್ಲ. ಅವಳು ಮಹಾಮಾತೆಯ ಪ್ರತಿರೂಪ ತಾನೆ?
ಆ ಕಾಡಡವಿಯಲಿ ಬದುಕು ಹೂಡಿದಳು ಸಾವಿತ್ರಿ ಸತ್ಯವಾನನೊಡನೆ,
ಮೃತ್ಯು ಸನಿಹದಲಿಯ ತನ್ನ ಸಂತಸವ ಅಮೂಲ್ಯವೆಂದು ಬಗೆದಳು,
ತನ್ನವರ ಪ್ರೀತಿಯಿಂ ದೂರಾಗಿ ಪ್ರೇಮಕಾಗಿಯೆ ಬದುಕಿದಳು.
ಅವಳ ಅಚಲ ಚೇತನ ಕಾಲದ ರಭಸ ಗತಿಯ ವೀಕ್ಷಿಸುತಿತ್ತು
ಸತ್ಯವಾನನ ಸಂಗ ಸಾವಿತ್ರಿಗಾಯ್ತು ನಿತ್ಯಾನಂದದ ಖಣಿ
ಅವನಿದ್ದ ತಾಣ ದೇವನೊಬ್ಬನ ಸಾಮ್ರಾಜ್ಯದಂತಿತ್ತು
-ಪರ್ವ ೭, ಸರ್ಗ ೧
ಸಾವಿತ್ರಿ ಜೀವನದ ಸಂತಸದ ಒಂದು ಹಂತ ನಿರೂಪಿಸಿದ ಮಹಾಕಾವ್ಯ ಆತ್ಮಾನ್ವೇಷಣೆಯ ಕೆಲವು ದೃಷ್ಟಾಂತಗಳನ್ನು ನೀಡುತ್ತದೆ. ಮಹಾಕವಿಯಾಗಿರುವ ಮಹರ್ಷಿ ಶ್ರೀ ಅರವಿಂದರಿಗೆ ಅಪಾರವಾದ ಅನುಭವವಿರುವುದರಿಂದ ಮಹಾಕಾವ್ಯದ ಗಾತ್ರಕ್ಕೆ ತಕ್ಕಂತೆ ಕಾವ್ಯ ವಿಸ್ತೃತವಾಗುತ್ತ ಹೋಗುತ್ತದೆ.
ಮೃತ್ಯ ಪರ್ವ ಬರುತ್ತಿರುವಂತೆ ನಮ್ಮ ಕುತೂಹಲ ಹೆಚ್ಚುತ್ತದೆ. ಏನಾಗಬಹುದು, ಏನಾಗಲಿಕ್ಕಿಲ್ಲ. ಇದು ನಮ್ಮ ತೊಳಲಾಟ. ಆದರೆ ಸಾವಿತ್ರಿಗೆ ಪರಾತ್ಪರ ಮಹಾಮಾತೆಯ ರಕ್ಷಣೆಯಿದೆ. ಆಕೆಯ ದಾಂಪತ್ಯದ ಒಂದು ವರ್ಷ ಕಳೆದುದನ್ನು ಹಿಂದಿರುಗಿ ನೋಡಿದ ಸಾವಿತ್ರಿ ಬೆಳಗೆದ್ದು ಕಾರ್ಯಪ್ರವೃತ್ತಳಾದಾಗ:
ಸತ್ಯವಾನನು ಕಾಡುಗಲ್ಲೊಂದರ ಮೇಲೆ ಸಹಜ ಕೊರೆದಿದ್ದ
ಮಹಾದೇವಿ ದುರ್ಗಾಮಾತೆಗೆ ಪ್ರಾರ್ಥನೆ ಸಲ್ಲಿಸಿದಳು
ಆ ಗಹನ ವಿಸ್ತಾರದ ಅರಣ್ಯದಲಿ ಪರಾತ್ಪರ ಮಹಾಮಾತೆ
ತನ್ನನು ವೀಕ್ಷಿಸುತ ನಿಶ್ಶಬ್ದದಲಿ ನುಡಿಯುತ್ತಿದ್ದಳೆಂದೆನಿಸಿತವಳಿಗೆ
ದುರ್ಗಾಮಾತೆ ಶ್ರೀ ಅರವಿಂದರ ಆರಾಧ್ಯ ದೇವತೆ. ಅಂತೆಯೇ ಅವರು ದುರ್ಗಾ ಸ್ತೋತ್ರ ಬರೆದದ್ದು. ಸತ್ಯವಾನನು ಮೃತ್ಯುವಶವಾಗುವ ಸಮಯದಲ್ಲಿ ಆ ದೇವಿಗೆ ಸಾವಿತ್ರಿ ಪ್ರಾರ್ಥನೆ ಸಲ್ಲಿಸಿದ್ದು ಸೂಕ್ತವೇ ಆಗಿದೆ.
ಇಲ್ಲಿಂದ ಕಾವ್ಯ ಗಂಭೀರ ಚಿಂತನೆಗೆ ತೊಡಗುತ್ತದೆ. ಹಾಗೆ ನೋಡಿದರೆ ಈ ಮಹಾಕಾವ್ಯ ಸಮಗ್ರವಾಗಿಯೇ ಗಂಭೀರವಾದ ಆಧ್ಯಾತ್ಮಿಕ ವಸ್ತುವನ್ನೊಳಗೊಂಡದ್ದಾಗಿದೆ. ಅದರ ತುಡಿತವಿರುವುದು ಅತಿಮಾನಸ ಸಿದ್ಧಿಯೆಡೆಗೆ. ಈ ಮಹಾಕಾವ್ಯದ ದೃಷ್ಟಿಯಿಂದ ಇನ್ನೂ ವಿಶೇಷವೆಂದರೆ ಮೃತ್ಯುವನ್ನು ಗೆಲ್ಲುವುದು. ಈ ಮಹಾಕಾವ್ಯದ ಹತ್ತನೆಯ ಪರ್ವದ ಸರ್ಗಗಳೆಲ್ಲ ಚಿಂತನೀಯವಾಗಿವೆ. ಇಲ್ಲಿಯ ಎರಡನೇ ಸರ್ಗದಲ್ಲಿ ಗಮನಿಸತಕ್ಕ ದಿವ್ಯಜೀವನ ಗ್ರಂಥಕ್ಕೆ ಋಣಿಯಾಗಿರುವಂಥ ಅನೇಕ ಚರಣಗಳಿವೆ. ಅವುಗಳಲ್ಲಿ ಮುಖ್ಯವಾದವು ಈ ಕೆಲವು:
ಮಾನವನ ಉನ್ನತ ಕೃತಿಗಳಲಿ ಅತಿ ಪ್ರಮಾದಗಳಲಿ
ಅವನುನ್ನತಿಯಲಿ ಏರುವುದು ಅವನತಿಯಲುರುಳುವುದು
ಅತಿಮಾನಸ ಸತ್ಯ ಕರೆಯುತಿದೆ ಚಿಂತಕ ಮಾನವನ
ಕೊನೆಯಲ್ಲಿ ಚೇತನವು ಮರಳುವುದು ನಿತ್ಯವಸ್ತುವಿನೆಡೆಗೆ
ನಾವಿಬ್ಬರು ನಕ್ಷತ್ರ ಕೆಳಗಿರುವ ದೇವದೂತರು,
ಭಗವಂತನ ಬಲವಾಗಿರುವ ನಾರಿ ನಾನು,
ಶಾಶ್ವತದ ಏಕೈಕ ಪ್ರತಿನಿಧಿ ಸತ್ಯವಾನನು.
ನನ್ನ ಸಂಕಲ್ಪ ಶಕ್ತಿ ನಿನ್ನ ಶಾಸನಕ್ಕಿಂತ ಹಿರಿದು,
ಸಾವಿತ್ರಿ ಹೇಳುವ ಈ ಸಂಕಲ್ಪ ಶಕ್ತಿ, ಅನನ್ಯವಾದ ಯೋಗಶಕ್ತಿಯೇ ಆಗಿದೆ. ಹಾಗಿದ್ದರೂ ಮೃತ್ಯುವಿನ ವಾದ ಮುಕ್ತಾಯಗೊಳ್ಳುವುದಿಲ್ಲ. ಈ ವಾದಕ್ಕೆ ನೀಡುವ ಸಮಜಾಯಿಸಿಗಳು ಸಾವಿತ್ರಿಯ ಅಪ್ರತಿಮ ಪೂರ್ಣಯೋಗದ ಸಿದ್ಧಿಯ ಪರಿಕಲ್ಪನೆಗಳೇ ಆಗಿವೆ. ನನಗನಿಸುತ್ತದೆ ದಿವ್ಯಜೀವನ ಉದ್ಗೃಂಥವು ಒಂದು ತಾತ್ತ್ವಿಕ ರೂಪ, ಸಾವಿತ್ರಿ ಮಹಾಕಾವ್ಯ ಅದರ ಪ್ರಾಯೋಗಿಕ ಸ್ವರೂಪ. ಯೋಗಸಮನ್ವಯದ ಸುಳುವು-ಹೊಳಹುಗಳನ್ನು ನಾವಿಲ್ಲಿ ಕಾಣಬಹುದು. ಪ್ರಾಜ್ಞರು ಶ್ರೀ ಅರವಿಂದರ ಗ್ರಂಥಗಳನ್ನು ಆಳವಾಗಿ ಅಭ್ಯಸಿಸಿದವರು. ಈ ಮಹಾನ್ ಗ್ರಂಥಗಳು ನೀಡುವ ತಾತ್ತ್ವಿಕ ಹಾಗೂ ಪ್ರಾಯೋಗಿಕ ಚಿಂತನೆಗಳನ್ನು ಇನ್ನೂ ವಿಶೇಷ ರೀತಿಯಲ್ಲಿ ಗುರುತಿಸಬಹುದು. ಏನಿದ್ದರೂ ನಾನು ಅಲ್ಪಜ್ಞನೆ.
ಇಡೀ ಕಾವ್ಯವನ್ನು ಓದಿ ಮುಗಿಸಿದ ಮೇಲೆ ಶ್ರೀಮಾತೆಯವರು ಆಶ್ರಮದ ಸಾಧಕರೊಂದಿಗೆ ಸಾವಿತ್ರಿ ಕುರಿತು ಹೇಳಿದ ಹಲವಾರು ಮಾತುಗಳು ನೆನಪಿಗೆ ಬರುತ್ತವೆ. ಶ್ರೀಮಾತೆಯವರ ಆ ಮಾತುಗಳು ‘The Mother on Savitri’ ಎಂಬ ಗ್ರಂಥದಲ್ಲಿ ಸಮಗ್ರವಾಗಿಯೇ ಪ್ರಕಟವಾಗಿವೆ. ಅವುಗಳಲ್ಲಿ ಒಂದೆರಡನ್ನಾದರೂ ಇಲ್ಲಿ ಉದ್ಧರಿಸುವುದು ಸೂಕ್ತವೆನಿಸುತ್ತದೆ.
೧. ಸಾವಿತ್ರಿ ಶ್ರೀ ಅರವಿಂದರ ದರ್ಶನದ ಪರಮೋಚ್ಛ ಜ್ಞಾನ ಪ್ರಕಾಶವಾಗಿದೆ.
೨. ಸಾವಿತ್ರಿ ಜಗತ್ತಿನ ಇತಿಹಾಸದ ಪ್ರವಾದಿಯ ದರ್ಶನವನ್ನು, ಪೃಥ್ವಿಯ ಭವಿಷತ್ತನ್ನು ಸಾರಿ ಹೇಳುವುದನ್ನು ಒಳಗೊಂಡಿದೆ.
ಶ್ರೀ ಅರವಿಂದರೆ ಸೂಚಿಸಿದ ವಿಚಾರವೊಂದನ್ನು ಶ್ರೀಮಾತೆಯವರು ನೆನಪಿಸುತ್ತ ಹೇಳಿದ್ದು ಹೀಗೆ: ಭವಿಷತ್ತಿನ ಕಾವ್ಯ ಎಂಬ ಗ್ರಂಥದಲ್ಲಿ ಶ್ರೀ ಅರವಿಂದರು ಹೇಳಿದ ಹಾಗೆ ಸಾವಿತ್ರಿ ನಾಳಿನ ಕಾವ್ಯ. ಅದು ಬಹಳ ಸೂಕ್ಷ್ಮವಾದದ್ದು ಹಾಗೂ ಸುಸಂಸ್ಕೃತವಾದದ್ದು. ಧ್ಯಾನದಲ್ಲಿ ಸಾವಿತ್ರಿ ಪ್ರಕಾಶಿತವಾಗುತ್ತದೆ. ಮನಸ್ಸಿನಲ್ಲಾಗಲಿ, ಮನಸ್ಸಿನ ಮೂಲಕವಾಗಲಿ ಆಗುವುದಿಲ್ಲ.
ನಾವೆಲ್ಲರು ಓದುವುದು ಸಾಮಾನ್ಯವಾಗಿ ಮನಸ್ಸಿನಿಂದ. ಬಹಳವೆಂದರೆ ಮನಸ್ಸುಗೊಟ್ಟು, ಅಲ್ಲವೆ? ಧ್ಯಾನಸ್ಥರಾಗುವುದು ಅಪರೂಪ. ಧ್ಯಾನಸ್ಥರಾಗುವುದು ಸಾಧನೆಯಿಂದ ಮಾತ್ರ, ಶ್ರೀಮಾತೆಯವರು ನಾವು ಸಾಧಕರಾಗಬೇಕೆಂದು ಸೂಚಿಸುವಂತೆ ತೋರುತ್ತದೆ.
ಪ್ರೊ. ಆರ್.ಕೆ.ಕುಲಕರ್ಣಿಯವರ ಈ ಸಂಕ್ಷೇಪ ರೂಪದ ಸಾವಿತ್ರಿ ಧ್ಯಾನಸ್ಥ ಸ್ಥಿತಿಯ ಒಂದು ಕೊಡುಗೆಯಾಗಿ ಮೂಡಿಬಂದಂತೆ ತೋರುತ್ತದೆ. ಅವರ ಈ ಸಾಧನೆ ಅಪರೂಪದ್ದು ಮತ್ತು ಅನನ್ಯವಾದದ್ದು. ಅವರ ಕಾವ್ಯಾಧ್ಯಯನ ಮತ್ತು ಕಿರುರೂಪಗೊಳಿಸಿದ ಸಾಧನೆ ಅಗಾಧವಾದದ್ದು. ಅವರ ಈ ಅಸಾಧಾರಣ ಕೊಡುಗೆಗೆ ನನ್ನ ಧನ್ಯವಾದಗಳು. ಜೊತೆಗೆ ನನ್ನನ್ನು ಮುನ್ನುಡಿ ನೆಪದಲ್ಲಿ ಪ್ರಥಮ ಓದುಗನನ್ನಾಗಿ ಮಾಡಿದುದಕ್ಕೆ ಹೃತ್ಪೂರ್ವಕ ಕೃತಜ್ಞತೆಗಳು. ಕನ್ನಡ ಕಾವ್ಯಾಭ್ಯಾಸಿಗಳು, ಚಿಂತಕರು, ಆಧ್ಯಾತ್ಮ ಮಾರ್ಗದ ಪಥಿಕರು ಈ ಕೃತಿಯನ್ನು ಮುಕ್ತಮನಸ್ಸಿನಿಂದ ಸ್ವೀಕರಿಸುತ್ತಾರೆಂದು ನಂಬಿರುವೆ.
೦೨.೧೦.೨೦೧೯ ಗುರುಲಿಂಗ ಕಾಪಸೆ
ಮಹಾತ್ಮಾ ಗಾಂಧಿ ಜಯಂತಿ-೧೫೦
Reviews
There are no reviews yet.