ಮುನ್ನುಡಿ
ಹೊಸ ಗೆಳೆಯರಾದರೂ ಅವರ ಒತ್ತಾಸೆಯ ಸ್ವಭಾವದಿಂದಾಗಿ ಆತ್ಮೀಯರಾಗಿರುವ ವಿಕಾಸ ಹೊಸಮನಿಯವರ ಮೊದಲ ಪ್ರಬಂಧ ಸಂಕಲನವಾದ ಮಿಂಚಿನ ಬಳ್ಳಿ’ಗೆ ಮುನ್ನುಡಿ ಬರೆಯುವುದು ನನಗೆ ಸಂತೋಷದ ಕೆಲಸವಾಗಿದೆ. ತಾಂತ್ರಿಕವಾಗಿ ಇದು ಮೊದಲ ಪ್ರಬಂಧ ಸಂಕಲನ. ದೃಷ್ಟಿಕೋನ, ಬರವಣಿಗೆಯ ನಿರರ್ಗಳತೆ, ವಸ್ತು ವೈವಿಧ್ಯ, ಸೂಕ್ಷ್ಮ ವಿಶ್ಲೇಷಣೆ -ಈ ಅಂಶಗಳನ್ನು ಪರಿಗಣಿಸಿದರೆ ನಾವು ಕಾಣುವುದು ಸಾಮಾಜಿಕ ಎಚ್ಚರ, ಕಾಳಜಿಯಿರುವ ಒಂದು ಮಾಗಿದ ಮನಸ್ಸನ್ನು. ಈ ಮಾತನ್ನು ನಾನು ಸ್ನೇಹಾಚಾರಕ್ಕಾಗಿ ಹೇಳುತ್ತಿಲ್ಲ ಎಂಬುದನ್ನು ಎಲ್ಲ ಓದುಗರು ಪ್ರಬಂಧಗಳನ್ನು ಓದಿದ ಮೇಲೆ ಒಪ್ಪಿಯೇ ಒಪ್ಪುತ್ತಾರೆ.
ಮೊದಲ ಪ್ರಬಂಧ ಸಂಕಲನದಲ್ಲಿ ನಾವು ಗುರುತಿಸಬೇಕಾದದ್ದು ಪ್ರಬಂಧಕಾರನ ವ್ಯಕ್ತಿತ್ವದ ಬಗ್ಗೆ, ನಂತರ ಪ್ರಬಂಧಗಳ ಬಗ್ಗೆ. ಬೇರೆ ಯಾವುದೇ ಸಾಹಿತ್ಯ ಪ್ರಕಾರಗಳಿಗೆ ಹೋಲಿಸಿದರೂ ಪ್ರಬಂಧವು ಒಂದು ಪ್ರಕಾರವಾಗಿ ಬರೆಯುವವರ ವ್ಯಕ್ತಿತ್ವದ ಆಧಾರದ ಮೇಲೆಯೇ ಅವಲಂಬಿತ ವಾಗಿದೆ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ವ್ಯಕ್ತಿತ್ವ ಮತ್ತು ಸ್ವಭಾವಕ್ಕೂ ಅವರ ಪ್ರಬಂಧಗಳಿಗೂ ಅವಿನಾಭಾವ ಸಂಬಂಧವಿದೆ. ಈ ರೀತಿಯ ಅವಿನಾಭಾವ ಸಂಬಂಧವಿಲ್ಲದವರು ಪ್ರಬಂಧಗಳನ್ನು ಬರೆಯಬಹುದು. ಆಗ ಅವು ಕೇವಲ ಬರಹಗಳಾಗುತ್ತವೆ, ಪ್ರಬಂಧಗಳಾಗುವುದಿಲ್ಲ. ಹಾಗಾದರೆ ಎಲ್ಲರೂ ಗೊರೂರರಂತೆ ಇರಬೇಕೆ ಎಂದರೆ ಉತ್ತರ ಖಂಡಿತವಾಗಿ ಇಲ್ಲ. ಆದರೆ ಪ್ರಬಂಧಕಾರನ ವ್ಯಕ್ತಿತ್ವ ಹೇಗಿರಬೇಕು ಎಂಬುದಕ್ಕೆ ನಿರ್ದಿಷ್ಟ ಉತ್ತರವಿಲ್ಲ. ಕೆಲವು ಗುಣಗಳನ್ನು ಸೂಚಿಸಬಹುದು.
ಪ್ರಬಂಧಕಾರ ಮುಖ್ಯವಾಗಿ ಸಾಮಾಜಿಕ ವಿಮರ್ಶಕ. ಗಾಂಭೀರ್ಯದ ಮೂರ್ತಿಯಲ್ಲ, ಆದರೆ ಹಾಸ್ಯಪಟುವೂ ಅಲ್ಲ. ಹರಟೆ ಹೊಡೆಯುತ್ತಾನೆ, ಆದರೆ ಸಾರ್ವಜನಿಕವಾಗಿ ಉಪದೇಶ ಮಾಡಲು ನಿರಾಕರಿಸುತ್ತಾನೆ. ಕಿಡಿಗೇಡಿ ಆದರೆ ದುಷ್ಟನಲ್ಲ. ಪಾಂಡಿತ್ಯದ ಬಗ್ಗೆ ಗೌರವವಿದೆ ಆದರೆ ಕೂಚುಭಟ್ಟನಲ್ಲ. ಯಾವುದೇ ವಿಚಾರದ ಬಗ್ಗೆಯಾಗಲೀ, ಯಾವುದೇ ವ್ಯಕ್ತಿಯ ಬಗ್ಗೆಯಾಗಲೀ ಇದೇ ಉತ್ತಮ, ಇವರೇ ಆದರ್ಶ, ಇದೇ ಸರಿ ಎಂದು ಹಠ ಹಿಡಿಯುವುದಿಲ್ಲ. ನಗುವಾಗಲೂ ಅಳುತ್ತಿರುತ್ತಾನೆ. ಸಿಟ್ಟಾದಾಗಲೂ ಪ್ರೀತಿಸುತ್ತಿರುತ್ತಾನೆ. ಮುಖ್ಯವಾಗಿ ಈ ಎಲ್ಲ ಗುಣಗಳ ಮೂಲಕ ಅವನು ಜೀವನವನ್ನು ಚಿತ್ರಿಸುತ್ತಾನೆ ಮತ್ತು ಶೋಧಿಸುತ್ತಾನೆ. ವಿಕಾಸರ ಪ್ರಬಂಧಗಳಲ್ಲಿ ಈ ಎಲ್ಲ ಗುಣಗಳೂ ಇವೆ ಎಂದು ನಾನು ಹೇಳುತ್ತಿಲ್ಲ. ವಿಕಾಸರ ವ್ಯಕ್ತಿತ್ವ, ಸ್ವಭಾವದಲ್ಲಿ ಈ ಗುಣ, ಸ್ವಭಾವಗಳೆಲ್ಲ ಇವೆಯೆಂದು ಖಂಡಿತ ಹೇಳುತ್ತೇನೆ! ಪ್ರಬಂಧಗಳನ್ನು ಓದಿದ ಮೇಲೆ ಪ್ರಬಂಧಕಾರನನ್ನು ಒಮ್ಮೆ ಭೇಟಿ ಮಾಡಬೇಕು ಅನಿಸಿದಾಗ ಮಾತ್ರ ಅವು ಒಳ್ಳೆಯ ಪ್ರಬಂಧಗಳಂತೆ. ವಿಕಾಸರನ್ನು ಭೇಟಿ ಮಾಡಿ ಮಾತನಾಡಿಸಬೇಕೋ ಅಥವಾ ಬೇಡವೋ ಎಂದು ಓದುಗರು ಸ್ವತಂತ್ರವಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಲಿ.
ವಿಕಾಸ ಉತ್ತರ ಕರ್ನಾಟಕದ ಪಕ್ಷಪಾತಿಗಳು. ಮೇಲ್ನೋಟಕ್ಕೆ ಉತ್ತರ ಕರ್ನಾಟಕದವರನ್ನು ಗೇಲಿ ಮಾಡುತ್ತಿದ್ದಾರೆ ಎಂದೆನಿಸಿದರೂ ಆ ಗೇಲಿಯ ಹಿಂದೆ ಪ್ರೀತಿಯಿದೆ, ಅಭಿಮಾನವೂ ಇದೆ. ಕೆಲವು ಸಲ ಅತಿಯಾಯಿತು ಎನ್ನುವಷ್ಟು! ಉತ್ತರ ಕರ್ನಾಟಕದ ಜೀವನಶೈಲಿ ಹೀಗೆ ಒಂದು ಪ್ರಬಂಧ ಸಂಕಲನದಲ್ಲಿ ನಿಚ್ಚಳವಾಗಿ ಮೂಡುತ್ತಿರುವುದು ಸುನಂದಾ ಬೆಳಗಾಂವಕರರ ಪ್ರಬಂಧಗಳ ನಂತರ ವಿಕಾಸರಲ್ಲೇ. ಪ್ರಬಂಧಕಾರರಾಗಿ ಒಂದು ನಿರ್ದಿಷ್ಟ ಜೀವನಶೈಲಿಯ ಆತ್ಮೀಯವಾದ, ಆಳವಾದ ಪರಿಚಯವಿರಬೇಕಷ್ಟೆ. ಅವನು ಅದರ ವಕ್ತಾರ ಕೂಡ. ಅಷ್ಟಾದರೆ ಅವನು ಪ್ರಬಂಧಕಾರನಾಗುವುದಿಲ್ಲ, ಹರಿಕಥೆ ದಾಸನಾಗುತ್ತಾನೆ. ಈ ಜೀವನಶೈಲಿ ಬದಲಾಗುತ್ತಿರುವ ಪ್ರಪಂಚದಲ್ಲಿ ಹೇಗೆ ಸಾಗುತ್ತದೆ ಎಂಬ ಅರಿವು ಕೂಡ ಅವನಿಗಿರಬೇಕು. ಉತ್ತರ ಕರ್ನಾಟಕದ ಮಂದಿ ಸಂಪನ್ನರು, ಸಹೃದಯಿಗಳು ಎಂದು ಎಷ್ಟೇ ಅಭಿಮಾನದಿಂದ ಬರೆದರೂ ವಾಸ್ತವ ಪ್ರಪಂಚದಲ್ಲಿ ಅದು ಸಲ್ಲುತ್ತದೆಯೇ, ಅವರು ಗೆಲ್ಲುತ್ತಾರೆಯೇ ಎಂಬ ಪ್ರಶ್ನೆಯನ್ನು ಕೂಡ ಪ್ರಬಂಧಗಳು ಕೇಳಿಕೊಳ್ಳುತ್ತವೆ.
ದೇಸಿ ಜೀವನಶೈಲಿಯ ವಕ್ತಾರರಾದ ಇವರ ಜೀವನದ ಒಳತಿಳಿವನ್ನು ಗುರುತಿಸಲು ಮೊದಲ ಎರಡು ಪ್ರಬಂಧಗಳೇ ಸಾಕು. ಎಷ್ಟು ರೀತಿಯ ಚಹಾ ಇದೆ, ಇರಬಹುದು, ಚಹಾ ದುಕಾನುಗಳ ಹೆಸರುಗಳಲ್ಲಿರುವ ವೈವಿಧ್ಯದ ವಿವರಗಳು -ಇದನ್ನೆಲ್ಲ ಕುರಿತ ಇರುವ ಪ್ಯಾರಾಗಳನ್ನು ಗಮನಿಸಿ. ಉತ್ತರದವರ ಅತಿ ಕುತೂಹಲದ ಸ್ವಭಾವ ಮತ್ತು ಅಧಿಕ ಪ್ರಸಂಗತನವನ್ನು ಒಂದೇ ಪದದಲ್ಲಿ ಹಿಡಿದಿಡುವ ನೀಳಕಂಠ ಪದ ಪ್ರಯೋಗವನ್ನು ಗಮನಿಸಿ. ಇಷ್ಟೇ ಆಗಿದ್ದರೆ ಇವರು ಒಬ್ಬ ಸಾಧಾರಣ ಪ್ರಬಂಧಕಾರರಾಗಿರುತ್ತಿದ್ದರು. ಉತ್ತರದವರನ್ನು ಕುರಿತು ಬರೆದಷ್ಟೇ ಪ್ರೀತಿಯಿಂದ ಮಲಯಾಳಿಗಳನ್ನು ಕುರಿತು ಕೂಡ ಬರೆದಿದ್ದಾರೆ. ಅಂದರೆ ತನ್ನ ಸಾಮಾಜಿಕ ವ್ಯಕ್ತಿತ್ವವನ್ನು ಮೀರಿ ಬರೆಯುವ ಶಕ್ತಿ ಇವರಿಗಿದೆ.
ಮಲಯಾಳಿಗಳ ಸಾಕಷ್ಟು ಒಡನಾಟವಿರುವ ನನಗೆ ಅವರು ಇಷ್ಟೊಂದು ಪ್ರತಿಭಾವಂತರು, ಸಜ್ಜನರು ಎಂದು ಗೊತ್ತೇ ಇರಲಿಲ್ಲ. ಆದರೆ ಇದು ಮಲಯಾಳಿಗಳನ್ನು ಕುರಿತ ಪ್ರೇಮವೋ ಇಲ್ಲ, ಮಲಯಾಳಿ ಸ್ತ್ರೀಯರ ಕುರಿತ ಪ್ರೇಮವೋ ಎಂಬ ಸಂದೇಹವೂ ನನಗೆ ಬಂತು. ಈ ಸಂದೇಹಕ್ಕೆ ಕಾರಣ, ಈ ಸಂಕಲನದ ಮಲಯಾಳಿಗಳು’ ಎಂಬ ಪ್ರಬಂಧದ ಒಂದು ಕಾವ್ಯಮಯ ಪ್ಯಾರಾ, ಇನ್ನು ಮಲಯಾಳಿ ಹುಡುಗಿಯರ ಕುರಿತು ಪ್ರತ್ಯೇಕ ಅಧ್ಯಾಯವನ್ನೇ ಬರೆಯಬೇಕು. ಈ ಮಲಯಾಳಿ ಹುಡುಗಿಯರು ಎಲ್ಲೇ ಹೋದರೂ, ಹೇಗೆ ಇದ್ದರೂ ತಮ್ಮ ಸಂಪ್ರದಾಯವನ್ನು ಮಾತ್ರ ಬಿಡುವುದಿಲ್ಲ. ಬಂಗಾರದ ಬಣ್ಣದ ಅಂಚಿರುವ ಶುಭ್ರ ಶ್ವೇತ ವರ್ಣದ ಸೀರೆಯುಟ್ಟು, ಮೊಣಕಾಲವರೆಗೆ ನೇತಾಡುವ ಉದ್ದ ಜಡೆಗೆ ಘಮಘಮಿಸುವ ಹೂವು ಮುಡಿದು, ಹಣೆಗೆ ಚಂದನದ ನಾಮವಿಟ್ಟು, ಮುಖದಲ್ಲಿ ಮಿಲಿಯನ್ ಡಾಲರ್ ಮುಗುಳ್ನಗೆ ತುಂಬಿಕೊಂಡು, ಕೈಯಲ್ಲೊಂದು ದೀಪ ಹಿಡಿದುಕೊಂಡು ನಿಂತರೆ ಸ್ವಾಮಿ ವಿವೇಕಾನಂದರ ಕಟ್ಟಾ ಅನುಯಾಯಿಯಾದ ನನ್ನಂಥ ಒಳ್ಳೆಯ ಹುಡುಗರು ಸಹ ತತ್ತರಿಸಿ ಹೋಗಬೇಕು ಅಷ್ಟೊಂದು ಸುಂದರವಾಗಿ ಕಾಣುತ್ತಾರೆ!” ರಾ.ಕು. ಅವರ ಪ್ರಬಂಧಗಳನ್ನು ನೆನಪಿಸುವ ಇಂತಹ ಪ್ಯಾರಾಗಳು ಮುಂದಿನ ಸಂಕಲನಗಳಲ್ಲಿ ಹೆಚ್ಚಾಗಲಿ. ವಿಶೇಷವೆಂದರೆ ರಾ.ಕು. ಅವರು ಸಹ ವಿಕಾಸರಂತೆ ಹಾವೇರಿಯವರೇ.
ಇರಲಿ, ವಿಕಾಸರು ಮಾತು, ಸಂಭಾಷಣೆಗಳನ್ನು ಹಿಡಿದು ಪ್ರಬಂಧ ಬರೆಯುವವರು. ಸಂಕಲನದ ಉದ್ದಕ್ಕೂ ಅವರು ನಿಮ್ಮೆದುರಿಗೆ ಕೂತು ಮಾತನಾಡುತ್ತಿದ್ದಾರೆ ಎಂಬ ಭಾವನೆ ಬರುತ್ತದೆ! ಪ್ರಸಂಗ” ವಿಕಾಸರು ಮತ್ತೆ ಮತ್ತೆ ಬಳಸುವ ಪದ. ಸಂಕಲನದ ತುಂಬ ಪ್ರಸಂಗಗಳಿವೆ. ಮೊದಲನೆಯ ಪ್ರಬಂಧದ ಶೀರ್ಷಿಕೆಯೇ ಚಹದ ಪ್ರಸಂಗಗಳು’. ಪ್ರಬಂಧಕಾರರು ಪ್ರಬಂಧವನ್ನು ಬೆಳೆಸಲು, ಓದುಗರನ್ನು ಸೆಳೆದುಕೊಳ್ಳಲು ಕಥನ, ಹರಟೆ, ಜಿಜ್ಞಾಸೆ, ವಾಗ್ವಾದ, ವ್ಯಕ್ತಿಚಿತ್ರ- ಹೀಗೆ ಯಾವುದಾದರೂ ಒಂದೆರಡು ಸ್ತರಗಳನ್ನು ಹಿಡಿದುಕೊಳ್ಳುತ್ತಾರೆ. ವಿಕಾಸರು ಪ್ರಸಂಗಗಳು ಮತ್ತು ವ್ಯಕ್ತಿಚಿತ್ರಗಳನ್ನು ಹಿಡಿದುಕೊಂಡಿದ್ದಾರೆ. ಈ ಸಂಕಲನದ ತುಂಬಾ ವ್ಯಕ್ತಿಚಿತ್ರಗಳು ಮತ್ತು ಪ್ರಸಂಗಗಳು ತುಂಬಿವೆ.
ಮುಂದೊಂದು ದಿನ ಇವರು ವ್ಯಕ್ತಿಚಿತ್ರಗಳ ಸಂಗ್ರಹ ಪ್ರಕಟಿಸಬಹುದು. ಸಮಾಜದ ಬೇರೆ ಬೇರೆ ಸ್ತರದ ಜನರ ವ್ಯಕ್ತಿಚಿತ್ರಣಗಳಲ್ಲಿ ಜೀವಂತಿಕೆಯಿದೆ. ಸಾಹಿತಿಗಳ ಸ್ವಭಾವದಲ್ಲಿ ಏಕತಾನತೆಯಿದೆ, ಸಿನಿಕತೆಯಿದೆ. ವಿಕಾಸರು ಗಣ್ಯ ಸಾಹಿತಿಯಾಗಬೇಕೆನ್ನುವ ಹಂಬಲವುಳ್ಳವರು. ಆ ದಿಕ್ಕಿನಲ್ಲಿ ಸರಿಯಾಗಿಯೂ, ಸಕಾರಾತ್ಮಕವಾಗಿಯೂ ಪ್ರಯಾಣ ಮಾಡುತ್ತಿರುವವರು. ಮುಂದೆ ಯಾರಾದರೂ ಅವರ ವ್ಯಕ್ತಿತ್ವದ ಬಗ್ಗೆ ಕೂಡ ಬರೆಯಬಹುದಲ್ಲ! ಮನುಷ್ಯ ಸ್ವಭಾವದ ವೈವಿಧ್ಯದ ಬಗೆಗಿರುವ ಕುತೂಹಲ, ಬೆರಗು ಇಲ್ಲಿನ ಬಹುಪಾಲು ಪ್ರಬಂಧಗಳಲ್ಲಿದೆ. ಉಪದೇಶ’, ಮೊದಲ ಪ್ರೇಮ’, ಸಂಪನ್ನರು’, ಸಹೃದಯಿ’ -ಈ ಪ್ರಬಂಧಗಳನ್ನು ನಿರ್ದಿಷ್ಟವಾಗಿ ಗಮನಿಸ ಬಹುದು.
ಕೇಕೆ ಹಾಕಿ ಹೇಳಬಲ್ಲೆ” ಇದು ವಿಕಾಸರ ಒಂದು ವಾಕ್ಯ. ಹೇಳಬಲ್ಲೆ ಎಂದು ಹೇಳಿದರೂ ಕೇಕೆ ಹಾಕುವುದಿಲ್ಲ. ನಿರರ್ಗಳತೆ, ತೀಕ್ಷ್ಣ ವ್ಯಂಗ್ಯವಿದ್ದರೂ ಅದು ಎಲ್ಲೂ ಅಟ್ಟಹಾಸವಾಗುವುದಿಲ್ಲ, ಭರ್ತ್ಸನೆಯಾಗುವುದಿಲ್ಲ. ಈ ಎಚ್ಚರ ಬರವಣಿಗೆಗೆ ಒಂದು ಹದವನ್ನು, ಆತ್ಮೀಯತೆಯನ್ನು ತಂದು ಕೊಟ್ಟಿದೆ. ಕೆಲವು ರೀತಿಯ ಮನುಷ್ಯರು ಮತ್ತು ಕೆಲವು ಸ್ವಭಾವಗಳ ಬಗ್ಗೆ ವಿಕಾಸರಿಗೆ ಎಷ್ಟು ಸಿಟ್ಟು, ಆಕ್ರೋಶವಿದೆ ಎಂಬುದನ್ನು ಗಮನಿಸಿದರೆ ಆಶ್ಚರ್ಯವಾಗುತ್ತದೆ. ಕೇಕೆ ಹಾಕಿ ಹೇಳಬಲ್ಲೆ ಆದರೆ ಹೇಳಲಾರೆ, ಹೇಳುವುದಿಲ್ಲ ಎಂಬ ಎಚ್ಚರ, ಸ್ವ-ವಿಮರ್ಶೆ ಒಂದು ಕೌನ್ಸೆಲರ್ ಗುಣವನ್ನು, ಸ್ವರೂಪವನ್ನು ತಂದಿದೆ.
ಇಲ್ಲಿಯ ಪ್ರಬಂಧಗಳ ರಚನೆಗೆ ವಿಕಾಸ ಒಂದು ವಿಶಿಷ್ಟ ಮಾದರಿಯನ್ನು ಪ್ರಯೋಗಿಸಿ ಅದರಲ್ಲಿ ಯಶಸ್ವಿಯಾಗಿದ್ದಾರೆ. ಪ್ರಾರಂಭದಲ್ಲಿ ಒಂದು ವಿಚಾರ, ಪರಿಕಲ್ಪನೆ ಅಥವಾ ಸ್ವಭಾವವನ್ನು ಮುಂದಿರಿಸುತ್ತಾರೆ. ಮುಂದೆ ಆ ಪರಿಕಲ್ಪನೆಯನ್ನು ಒಳನೋಟಗಳಿಂದ ಪರಿಚಯಿಸುತ್ತಾರೆ. ನಂತರ ಇದರ ಪರವಾದ, ವಿರುದ್ಧವಾದ ಉದಾಹರಣೆಗಳನ್ನು, ಪ್ರಸಂಗಗಳನ್ನು, ಸ್ವಭಾವ ಚಿತ್ರಗಳನ್ನು ಮುಂದಿರಿಸುತ್ತಾರೆ. ಇದರಿಂದಾಗಿ ಪ್ರಬಂಧಗಳ ವಿಷಯ ವ್ಯಾಪ್ತಿ ಮತ್ತು ವೈವಿಧ್ಯ ಹೆಚ್ಚಾಗಿದೆ. ಬಿಡಿಯಾಗಿ ಬರುವಾಗ ಈ ಮಾದರಿ ಎಲ್ಲ ರಚನೆಗಳಿಗೂ ಯುಕ್ತವೆನಿಸಬಹುದು. ಆದರೆ ಸಂಕಲನ ರೂಪದಲ್ಲಿ ಬಂದಾಗ ಒಂದೇ ಮಾದರಿಯಲ್ಲಿ ರಚಿಸಲ್ಪಟ್ಟಿವೆ ಎನಿಸಬಹುದು. ವಿಕಾಸರು ಪ್ರಬಂಧ ರಚನೆಯ ಇತರೆ ಮಾದರಿಗಳತ್ತ ಸಹ ಗಮನ ಹರಿಸುವಂತಾಗಲಿ. ಹಾಗೆಯೇ ಅವರು ಚಿಂತನಶೀಲ ಪ್ರಬಂಧಗಳನ್ನು ಸಹ ರಚಿಸುವಂತಾಗಲಿ. ಪರಿಕಲ್ಪನೆಗಳನ್ನು ಪರಿಚಯಿಸುವಾಗ ವಿಕಾಸರ ಬರವಣಿಗೆಯಲ್ಲಿರುವ ಚಿಂತನಶೀಲ ಅಂಶಗಳನ್ನು ಗುರುತಿಸಿ ಈ ಮಾತು ಹೇಳುತ್ತಿದ್ದೇನೆ.
ಈ ಸಂಕಲನದ ಪ್ರಬಂಧಗಳಲ್ಲಿ ವಿಕಾಸರ ವ್ಯಕ್ತಿತ್ವ ನಾನು ಎಂದು ಎಲ್ಲಿಯೂ ಢಾಳಾಗಿ ಹಾಜರಾಗುವುದಿಲ್ಲ. ಆದರೆ ವಿಕಾಸ ಎಲ್ಲೆಲ್ಲೂ ಇದ್ದಾರೆ. ತಮ್ಮ ವ್ಯಕ್ತಿತ್ವ ಮತ್ತು ಸ್ವಭಾವವನ್ನು ಇಲ್ಲಿ ಕಂಡುಬರುವ ಬೇರೆ ಬೇರೆ ವ್ಯಕ್ತಿಚಿತ್ರಗಳಲ್ಲಿ, ಪ್ರಸಂಗಗಳಲ್ಲಿ, ಉದಾಹರಣೆಗಳಲ್ಲಿ ಹಂಚಿದ್ದಾರೆ ಮತ್ತು ಪರಿಶೀಲಿಸಿದ್ದಾರೆ. ಸ್ವವನ್ನು ಬರವಣಿಗೆಯಲ್ಲಿ ಈ ರೀತಿ ಪರಿಶೀಲಿಸುವ ಮಾದರಿಯನ್ನು ಓದುಗರು ಗಮನಿಸುತ್ತಾರೆಂದು ಆಶಿಸುತ್ತೇನೆ.
ಈಚಿನ ದಿನಗಳಲ್ಲಿ ಪ್ರಬಂಧಗಳನ್ನು ಅಥವಾ ಪ್ರಬಂಧಗಳೆಂದು ತಿಳಿದ ಬರಹಗಳನ್ನು ಬರೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಸಂತೋಷದ ಸಂಗತಿ. ಆದರೆ ಇತ್ತೀಚೆಗೆ ಪ್ರಬಂಧ ಪ್ರಕಾರದ ಕುರಿತು ಚರ್ಚೆ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಈ ಚರ್ಚೆಯನ್ನು ಮುನ್ನೆಲೆಗೆ ತರಲು ಬೇಕಾದ ಮತ್ತು ಹೊಸ ಚರ್ಚೆ ಹುಟ್ಟು ಹಾಕಬಲ್ಲಂತಹ ಪ್ರಬಂಧಗಳನ್ನು ವಿಕಾಸ ಬರೆದಿದ್ದಾರೆ. ಇದಕ್ಕಾಗಿ ಅವರಿಗೆ ಓದುಗರ ಪರವಾಗಿ ಹಾರ್ದಿಕ ಅಭಿನಂದನೆಗಳು.
ಸುಲಲಿತ ನಿರೂಪಣೆ, ತುಂಟತನದ ಕಿಲಾಡಿ ದೃಷ್ಟಿಕೋನ, ವಕ್ರದೃಷ್ಟಿ, ಜೀವನಪ್ರೀತಿ, ಗಾಢವಾದ ಜೀವನಾನುಭವ, ಎಗ್ಗಿಲ್ಲದೆ ಮಾತನಾಡುವ ರೀತಿ ಮತ್ತು ದಣಿವರಿಯದ ಕುತೂಹಲ ಈ ಪ್ರಬಂಧಗಳ ವಿಶೇಷವಾಗಿದೆ. ಖಂಡಿತ ಈ ಪ್ರಬಂಧ ಸಂಕಲನಕ್ಕೆ ಒಳ್ಳೆಯ ಹೆಸರು ಬರುತ್ತದೆ.
ವಿಕಾಸರ ಮಿತ್ರರು ಮತ್ತು ಹಿತೈಷಿಗಳ ಪಟ್ಟಿಯಲ್ಲಿ ನನಗಿಂತ ಪ್ರತಿಭಾವಂತರು ಮತ್ತು ಪ್ರಭಾವಶಾಲಿಗಳು ಇದ್ದಾರೆ. ಆದರೆ ನನ್ನ ಮೇಲಿನ ಪ್ರೀತಿ ಮತ್ತು ವಿಶ್ವಾಸದಿಂದಾಗಿ ನನಗೊಂದು ಮುನ್ನುಡಿ ಬರೆದು ಕೊಡುವಂತೆ ಕೇಳಿದ್ದಾರೆ. ನನ್ನನ್ನು ಈ ಪ್ರಬಂಧಗಳ ಮೊದಲ ಓದುಗನಾಗುವಂತೆ ಮಾಡಿದ ವಿಕಾಸ ಹೊಸಮನಿಯವರಿಗೆ ಶುಭಾಶಯಗಳು.
-ಕೆ. ಸತ್ಯನಾರಾಯಣ
೨೪.೦೪.೨೦೨೪
Reviews
There are no reviews yet.