ಓದಿಗೆ ಮೊದಲು
‘ಕುಂದಲತದ ಲೇಖಕ ಅಪ್ಪುನೆಡುಙಡಿ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡವರು. ಬ್ರಿಟಿಷರ ವಿರುದ್ಧ ಹೋರಾಡುವಲ್ಲಿ ಭಾರತದ ಆಳರಸರು ಪರಸ್ಪರ ಐಕ್ಯವನ್ನು ಕಾಪಾಡುವ ಅಗತ್ಯವನ್ನು ಈ ಕಾದಂಬರಿಯ ಮೂಲಕ ತಿಳಿಯಹೇಳಿದ್ದಾರೆ ಎಂಬುದನ್ನು ವಿಮರ್ಶಕರು ಗುರುತಿಸಿದ್ದಾರೆ. ಐಕ್ಯದಿಂದ ಶತ್ರುವನ್ನು ಹಿಮ್ಮೆಟ್ಟಿಸುವ ತಂತ್ರವನ್ನು ಸುಲಲಿತವಾಗಿ ಪ್ರೇಮಕತೆಯೊಂದಿಗೆ ಯುದ್ಧದ ಕತೆಯನ್ನು ಕಾದಂಬರಿ ಹೇಳುತ್ತದೆ ಎಂಬುದರಿಂದ ಓದುಗಪ್ರಿಯವೂ ಆಗಿದೆ. ವಸಾಹತುಶಾಹಿ ಆಡಳಿತಕ್ಕೆ ಹತ್ತೊಂಬತ್ತನೆಯ ಶತಮಾನದ ಹೊತ್ತಿನ ಬರಹಗಾರರ ಪ್ರತಿಕ್ರಿಯೆಯಾಗಿಯೂ ಈ ಕೃತಿ ಮಹತ್ವ ಪಡೆದಿದೆ.
ದ್ರಾವಿಡ ಭಾಷೆಗಳಲ್ಲಿ ಆರಂಭ ಕಾಲದ ಕಾದಂಬರಿಗಳ ತೌಲನಿಕ ಅಧ್ಯಯನಗಳನ್ನು ಕನ್ನಡದಲ್ಲಿ ಮಾಡುವ ಸಂದರ್ಭದಲ್ಲಿ ಈ ಕಾದಂಬರಿಯ ಗೈರುಹಾಜರಿಯನ್ನು ಕಂಡು ಅನುವಾದ ಮಾಡಲು ಮುಂದಾದೆ. ಹಾಗೆಯೇ ಚಂದು ಮೇನೋನ್ ಅವರ ಎರಡನೆಯ ಕಾದಂಬರಿ ‘ಶಾರದ(೧೮೯೨)ವನ್ನು ಸಹ ಈಗಾಗಲೇ ನಾನು ಕನ್ನಡಕ್ಕೆ ಅನುವಾದಿಸಿದ್ದು ಅದು ಕುವೆಂಪು ಭಾಷಾ ಭಾರತಿಯಿಂದ(೨೦೧೬)ರಲ್ಲಿ ಪ್ರಕಟವಾಗಿದೆ.
‘ಕುಂದಲತ ಮಲಯಾಳಂನ ಮೊದಲ ಕಾದಂಬರಿ ಎಂದೇ ಪ್ರಸಿದ್ಧಿ ಪಡೆದಿದೆ. ೧೮೮೭ರಲ್ಲಿ ಪ್ರಕಟವಾದ ಈ ಕಾದಂಬರಿ ನಂತರದ ದಿನಗಳಲ್ಲಿ ಅನೇಕ ಆವೃತ್ತಿಗಳನ್ನು ಕಂಡಿದ್ದು ಮಲಯಾಳಂನಲ್ಲಿ ಜನಪ್ರಿಯವಾಗಿದೆ. ಆದರೆ ಅದು ಕನ್ನಡದಲ್ಲಿ ಅನುವಾದ ವಾಗಿರಲಿಲ್ಲ. ನಾನು ಮೂರು ವರ್ಷಗಳಿಗೆ ಹಿಂದೆಯೇ ಇದನ್ನು ಕನ್ನಡಕ್ಕೆ ಅನುವಾದಿಸಿದ್ದೆ. ಆದರೆ ಬೇರೆ ಬೇರೆ ಕೆಲಸಗಳ ನಡುವೆ ಪ್ರಕಟಣೆಗೆ ಕೊಡುವುದು ವಿಳಂಬವಾಯಿತು.
ಪ್ರಸ್ತುತ ಕಾದಂಬರಿಯನ್ನು ಗಮನಿಸಿದ ಗಣೇಶ ಯಾಜಿಯವರು ತಮ್ಮ ಪ್ರಕಾಶನದಿಂದ ಪ್ರಕಟಿಸುವ ಉತ್ಸಾಹ ತೋರಿದ ಕಾರಣಕ್ಕೆ ಈಗ ಪ್ರಕಟವಾಗಿ ಓದುಗರ ಕೈ ಸೇರುತ್ತಿದೆ. ಇದರ ಪುಟವಿನ್ಯಾಸ, ಕರಡು ತಿದ್ದುವುದು ಇತ್ಯಾದಿ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಶ್ರೀ ಗಣೇಶ ಯಾಜಿ ಹಾಗೂ ಪ್ರಕಾಶಕಿ ಶ್ರೀಮತಿ ಸವಿತಾ ಯಾಜಿಯವರಿಗೆ ಪ್ರೀತಿಪೂರ್ವಕ ಕೃತಜ್ಞತೆಗಳು. ಪುಸ್ತಕವನ್ನು ಸುಂದರವಾಗಿ ಪ್ರಕಟಿಸುವ ಹೊಣೆಹೊತ್ತ ವಿದ್ಯಾರ್ಥಿ ಮಿತ್ರ ಎಸ್.ಕೆ. ಪ್ರೆಸ್ ಇಂಕ್ನ ಡಾ. ಲಕ್ಷ್ಮೀಕಾಂತ ಅವರಿಗೂ ಕೃತಜ್ಞತೆಗಳು. ಪುಸ್ತಕಕ್ಕೆ ಅಂದವಾದ ಮುಖಪುಟವನ್ನು ರಚಿಸಿಕೊಟ್ಟ ಎಫ್.ಟಿ.ಹಾದಿಮನಿ ಅವರನ್ನು ಪ್ರೀತಿಯಿಂದ ನೆನೆಯುತ್ತೇನೆ.
ಸಾಮಾನ್ಯವಾಗಿ ನನ್ನ ಬರವಣಿಗೆಯ ಮೊದಲ ಓದುಗರಾಗಿ ಮತ್ತು ಅಭಿಪ್ರಾಯ ವ್ಯಕ್ತಪಡಿಸುವ ಮಿತ್ರ ಸಿ.ವೆಂಕಟೇಶ ಈ ಪುಸ್ತಕಕ್ಕೆ ಬೆನ್ನುಡಿ ರೂಪದಲ್ಲಿ ಅಭಿಪ್ರಾಯ ನೀಡಿ ನನ್ನ ಸಂತೋಷವನ್ನು ಹೆಚ್ಚಿಸಿದ್ದಾರೆ.
ಪುಸ್ತಕವನ್ನು ಓದಿ ಸೂಕ್ತ ಸಲಹೆ ಸೂಚನೆಗಳೊಡನೆ ನೆರವಾದ ವಿದ್ಯಾಗುರುಗಳಾದ ಪ್ರೊ. ಬಿ. ಸದಾಶಿವ ಮಂಜೇಶ್ವರ ಇವರ ಪ್ರೀತಿಗೆ ಋಣಿ.
ನನ್ನ ಬರವಣಿಗೆಯ ಸಂದರ್ಭದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ನೆರವಾಗುತ್ತಿರುವ ಮಡದಿ ಶ್ರೀದೇವಿ, ಮಗ ಅಭಿಮಾನ್ ಮಗಳು ನಿಶಿತ ಇವರ ಹೃದಯ ತುಂಬಿದ ಪ್ರೀತಿಯನ್ನು ಮರೆಯುವಂತೆಯೇ ಇಲ್ಲ. ಹೀಗೆ ಪುಸ್ತಕ ಪ್ರಕಟಣೆಯ ಸಂದರ್ಭದಲ್ಲಿ ನೆರವಾದ ಎಲ್ಲರನ್ನು ಪ್ರೀತಿಪೂರ್ವಕವಾಗಿ ಸ್ಮರಿಸುವೆ. ಈಗ ಪುಸ್ತಕವನ್ನು ಓದುತ್ತಿರುವ ನಿಮಗೂ ಕೃತಜ್ಞತೆಗಳು.
ನವೆಂಬರ್, ೨೦೨೦ ಮೋಹನ ಕುಂಟಾರ್
ಅಪ್ಪು ನೆಡುಙಡಿ(೧೮೬೨–೧೯೩೩)
ಅಪ್ಪು ನೆಡುಂಙಡಿ ಕೇರಳದಲ್ಲಿ ಪ್ರಸಿದ್ಧನಾಗಿರುವುದು ‘ಕುಂದಲತ’ದ ಕರ್ತೃ ಎಂಬ ಕಾರಣಕ್ಕಷ್ಟೇ ಅಲ್ಲ. ಕೇರಳದಲ್ಲಿ ಇಂದಿಗೂ ಕಾರ್ಯನಿರ್ವಹಿಸುತ್ತಿರುವ ನೆಡುಙಡಿ ಬ್ಯಾಂಕ್ ಅಂದರೆ ಇಂದಿನ ಪಂಜಾಬ್ ನ್ಯಾಷನಲ್ ಬ್ಯಾಂಕ್ ಸ್ಥಾಪಕರಾಗಿಯೂ ಹೆಸರಾಗಿದ್ದಾರೆ. ೧೮೯೯ರ ಜೂನ್ನಲ್ಲಿ ೧೯,೦೦೦ ರೂಪಾಯಿಗಳನ್ನು ನಿಕ್ಷೇಪಿಸಿ ನೆಡುಙಡಿ ಬ್ಯಾಂಕ್ ಆರಂಭಿಸಿದರು. ಅಧ್ಯಾಪಕ, ಶಿಕ್ಷಣತಜ್ಞ, ನಗರ ಸಭಾಧ್ಯಕ್ಷ ಎಂಬಿತ್ಯಾದಿ ಹಲವು ಕಾರಣಗಳಿಗಾಗಿಯೂ ಇವರು ಗಮನಾರ್ಹರು. ಮಲಬಾರು ಪ್ರದೇಶದಲ್ಲಿ ಮೊದಲ ಹಾಲುತ್ಪಾದಕರ ವ್ಯವಸಾಯ ಸೇವಾ ಕಂಪನಿಯನ್ನು ಸ್ಥಾಪಿಸಿದವರು. ಕೋೞಕೋಡಿನಿಂದ ಪ್ರಕಟವಾಗುತ್ತಿದ್ದ ಕೇರಳ ಪತ್ರಿಕೆಯ ಸ್ಥಾಪಕ ಸದಸ್ಯರಲ್ಲಿ ನೆಡುಙಡಿಯೂ ಒಬ್ಬರು. ವಿದ್ಯಾ ವಿನೋದಿನಿ, ಕೇರಳ ಸಂಚಾರಿ ಎಂಬೀ ಪತ್ರಿಕೆಗಳ ಪ್ರಕಟಣಾ ಜವಾಬ್ದಾರಿಯೂ ಕೆಲವು ಸಮಯಗಳವರೆಗೆ ನೆಡುಙಡಿ ನಿರ್ವಹಿಸಿದ್ದರು. ಕೇರಳ ಪತ್ರಿಕೆ, ಕೇರಳ ಸಂಚಾರಿ, ವಿದ್ಯಾವಿನೋದಿನಿ, ಮನೋರಮ ಮೊದಲಾದ ಪತ್ರಿಕೆಗಳಿಗೆ ಲೇಖನಗಳನ್ನು ಬರೆದರು. ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಕೋೞಕೋಡಿನ ಚಾಲಪುರದಲ್ಲಿ ಇಂದಿಗೂ ಕಾರ್ಯಪ್ರವೃತ್ತ ವಾಗಿರುವ ‘ಅಚ್ಯುತನ್ ಗರ್ಲ್ಸ್ ಹೈಸ್ಕೂಲ್’ನ್ನು ಸ್ಥಾಪಿಸಿದ ನೆಡುಙಡಿ ೧೯೧೮-೧೯ರಲ್ಲಿ ಕೋೞಕೋಡು ನಗರ ಸಭೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಅನೇಕ ವ್ಯವಹಾರಗಳಲ್ಲಿ ತೊಡಗಿಸಿಕೊಂಡುದಲ್ಲದೆ ಈ ಎಲ್ಲಾ ಸಾರ್ವಜನಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದ ಕಾರಣ ಕ್ಕಾಗಿಯೇ ಸಾಹಿತ್ಯ ಕ್ಷೇತ್ರದಲ್ಲಿ ‘ಕುಂದಲತ’ವನ್ನು ಹೊರತುಪಡಿಸಿ ಇನ್ನೊಂದು ಕೃತಿ ರಚನೆ ಮಾಡುವುದು ಸಾಧ್ಯವಾಗದೇ ಹೋಗಿರಬಹುದೆಂದು ಊಹಿಸಲು ಅವಕಾಶ ವಾಗಿದೆ.
೧೮೬೨ ಅಕ್ಟೋಬರ್ನಲ್ಲಿ ಜನನ. ತಂದೆ: ಸಾಮೂದಿರಿ ಕೋವಿಲಗತ್ತ ಮುನ್ನಾರ್ಪಾಡ್ ಮಾನವಿಕ್ರಮ ತಂಬುರಾನ್. ತಾಯಿ: ಕುಂಞ್ಞಿಕುಟ್ಟಿ ಕೋವಿಲಮ್ಮ. ಎಳವೆಯಲ್ಲಿಯೇ ತಂದೆ-ತಾಯಿಯರನ್ನು ಕಳಕೊಂಡರು. ಬಿ.ಎ. ಕಾನೂನು, ಬ್ಯಾಂಕಿಂಗ್ ಶಿಕ್ಷಣ. ೧೮೮೮ರಲ್ಲಿ ವಕೀಲ ವೃತ್ತಿಯನ್ನಾರಂಭಿಸಿದರು. ೧೯೦೬ರಲ್ಲಿ ಕೋೞುಕೋಡಿನಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಆದರು. ಹೆಂಡತಿ ಮೀನಾಕ್ಷಿಯಮ್ಮ. ಅಪ್ಪು ನೆಡುಂಙಡಿ ಅವರ ಮರಣ ೧೯೩೩ ನವೆಂಬರ್ ೭.
ಬ್ರಿಟಿಷ್ ಸರಕಾರದ ರಾವ್ಬಹಾದ್ದೂರ್ ಗೌರವಕ್ಕೆ ಪಾತ್ರರಾದ ಅಪ್ಪು ನೆಡುಙಡಿ ಮಲಬಾರಿನ ವಳ್ಳುವನಾಡು ತಾಲೂಕಿನ ಒಟ್ಟಪಾಲದ ಸಮೀಪದ ಕೋಡಕುರುಶ್ಯೇರಿಯಲ್ಲಿ ಜನಿಸಿದರು. ಆದರೆ ಬದುಕಿನ ಬಹುಭಾಗವನ್ನು ಕಳೆದುದು ಅಂದಿನ ಮದರಾಸಿನಲ್ಲಿ, ನಂತರ ಕೋೞುಕೋಡಿನಲ್ಲಿ.
ಮುನ್ನುಡಿ
(ಮೊದಲನೆಯ ಆವೃತ್ತಿಗೆ ಬರೆದುದು)
ಇಂಗ್ಲಿಷಿನಲ್ಲಿ ಹೊಸ ಮಾದರಿ ಕತೆ ಎಂಬರ್ಥದಲ್ಲಿ ‘ನಾವೆಲ್’ ಎಂದು ಹೇಳಲಾಗುವ ಓದುಗರು ಹೊತ್ತು ಕಳೆಯಲು ಓದುವ ತುಂಬಾ ಪುಸ್ತಕಗಳಿವೆ. ಮಲಯಾಳ ಭಾಷೆಯಲ್ಲಿ ಅಂತಹ ಪುಸ್ತಕಗಳು ಇಲ್ಲದೆ ಇರುವುದರಿಂದ ಮಲಯಾಳಿಗರಲ್ಲಿ ಇಂಗ್ಲಿಷ್ (ಪರಿಜ್ಞಾನ) ತಿಳುವಳಿಕೆಯಿಲ್ಲದವರಾದ ಹೆಚ್ಚಿನ ಜನರಿಗೆ ಆ ಬಗೆಯ ಪುಸ್ತಕಗಳ ಕಥಾ ಸ್ವಾರಸ್ಯವನ್ನು, ಭಾಷಾಚಾತುರ್ಯವನ್ನು ಲೇಶವಾದರೂ ತಿಳಿದುಕೊಳ್ಳಲು ಸಾಧ್ಯವಾಗದೆ, ಚಿಕ್ಕಂದಿನಲ್ಲಿ ತಾಯಿತಂದೆಯರು ಹೇಳಿ ತಿಳಿದಿರುವ ಕೆಲವು ಪುರಾಣ ಕತೆಗಳನ್ನು, ರಾಮಾಯಣ, ಮಹಾಭಾರತ, ನಳಚರಿತೆ ಮೊದಲಾದವುಗಳನ್ನು ಸಂಕ್ಷಿಪ್ತವಾಗಿ ಕೆಲವು ಪುಸ್ತಕಗಳಿಂದ ಓದಿ ತಿಳಿದು ಅವುಗಳನ್ನೆ ಚರ್ವಿತ ಚರ್ವಣ ಮಾಡುತ್ತ ಸ್ವಲ್ಪವೂ ಸ್ವಾರಸ್ಯವಿಲ್ಲದೆ ಮತ್ತೆ ಮತ್ತೆ ಹಲವರು ಪುನರಾವರ್ತಿಸಿಕೊಂಡು ಕಾಲ ಕಳೆಯುತ್ತಿರುವುದು ತುಂಬಾ ಕಷ್ಟವೇ. ಇಂಗ್ಲಿಷ್ ಭಾಷಾ ತಿಳುವಳಿಕೆ ಹಾಗೂ ಅದನ್ನು ಕರಗತ ಮಾಡಿಕೊಂಡ ಅಪೂರ್ವರಾದ ಕೆಲವು ಕೇರಳೀಯರು ಇದುವರೆಗೆ ಆ ಪರಿಸ್ಥಿತಿಯನ್ನು ಬದಲಾಯಿಸಲು ಶ್ರಮಿಸದೆ ಇರುವುದು ಆಶ್ಚರ್ಯವೇ.
ನಾಲ್ಕು ತಿಂಗಳ ಮೊದಲೆ ‘ನಾವೆಲ್ಸ್’ ಎಂಬ ಇಂಗ್ಲಿಷ್ ಕತೆಗಳ ರೀತಿಯಲ್ಲಿ ಒಂದು ಸಣ್ಣಕತೆಯನ್ನು ನಾನು ರಚಿಸಿದ್ದು ನನ್ನ ಸ್ನೇಹಿತರು ಕೆಲವರು ನೋಡಿ, ಅದನ್ನು ಕೇರಳದ ಮಹಾಜನತೆ ಸ್ವಾಗತಿಸುವರೆಂದು ಹಾಗಾಗಿ ಸ್ವಲ್ಪವೂ ತಡ ಮಾಡದೆ ಪ್ರಕಟ ಮಾಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿ ನನ್ನನ್ನು ಹುರಿದುಂಬಿಸಿದ್ದರಿಂದ ನಾನು ಬರೆದು ಕೂಡಿಹಾಕಿದ್ದನ್ನು ಮತ್ತೊಮ್ಮೆ ಪರಿಶೀಲಿಸಿ ಪ್ರಕಟಿಸಲು ತೀರ್ಮಾನಿಸಿದೆ. ಈ ಕತೆಯಲ್ಲಿ ಕಳಿಂಗ, ಕುಂತಳ ಮೊದಲಾದ ದೇಶಗಳ ಹೆಸರುಗಳು ಹಾಗೂ ಕುಂದಲತ, ತಾರಾನಾಥ ಎಂಬಿತ್ಯಾದಿ ವ್ಯಕ್ತಿನಾಮಗಳನ್ನು ಬಳಸಲು ಪ್ರಮುಖ ಕಾರಣವೆಂದರೆ ಕೇರಳ ಸಂಪ್ರದಾಯದಲ್ಲಿ ಅನುಸರಿಸದ ಕೆಲವು ರೀತಿ-ನೀತಿಗಳು ಇದರಲ್ಲಿ ಎಲ್ಲಿಯಾದರೂ ಕಾಣುವುದು ಸಾಧ್ಯವಾದರೆ ಈ ಕತೆ ಕೇರಳದಿಂದ ತುಂಬಾ ದೂರದಲ್ಲಿರುವ ಬೇರೊಂದು ದೇಶದಲ್ಲಿ ನಡೆದುದೆಂದು ಹೇಳಿದರೆ ಅದು ಆ ದೇಶದ ನಡಾವಳಿಗಳೆಂದು ಓದುಗರು ನೆನಪಿಟ್ಟುಕೊಳ್ಳಲಿ ಎಂಬುದಕ್ಕೆ ಮಾತ್ರ. ಆದರೆ ಈ ಕತೆ ಪುರಾಣ ಪ್ರಸಿದ್ಧವಾದ ಆ ದೇಶಗಳಿಗೆ ಸರಿಯಾಗಿ ಹೊಂದಬೇಕೇ ಹೊರತು ಈಗ ಬೇರೆ ಹೆಸರುಗಳನ್ನು ಹೇಳುವ ದೇಶಗಳಲ್ಲಿ ಸಂಭವಿಸಿದೆ ಎಂದು ಓದುಗರು ತಿಳಿಯುವಂತಾಗಬಾರದು.
ಈ ಪುಸ್ತಕ ಇಂಗ್ಲಿಷ್ ತಿಳುವಳಿಕೆಯಿಲ್ಲದ ಬಹು ಜನರಿಗೆ ವಿಶೇಷವಾಗಿ ಸಮಯ ಕಳೆಯಲು ಕಷ್ಟಪಡುವ ಮಹಿಳೆಯರಿಗೆ ಹಿಡಿಸಬಹುದಾದ ದೋಷರಹಿತವಾದ ಮನರಂಜನೆಗೆ ಕಾರಣವಾಗಿದೆ ಎಂದು ನಾನು ಭಾವಿಸುತ್ತೇನೆ. ಆದರೆ ಮಲಯಾಳಿಗರಲ್ಲಿ ಹೆಚ್ಚಿನ ಜನರು ಮೇಲೆ ಹೇಳಿದ ಕಷ್ಟದ ಸ್ಥಿತಿಯನ್ನು ಹೋಗಲಾಡಿಸಿದರೆ ಒಳ್ಳೆಯದೆಂಬುದರಲ್ಲಿ ನನಗೆ ಮೋಹವಿದೆಯಾದರೂ ಆ ರೀತಿ ಬದಲಾವಣೆ ಮಾಡುವ ಅರ್ಹತೆ ಇದಕ್ಕೆ ಇದೆಯೆಂದು ನಾನು ಭಾವಿಸಿಲ್ಲ. ‘ಪ್ರಾಂಶುಲಂಭ್ಯೆ ಫಲೇ ಮೋಹದುದ್ ಬಾಹುರಿವ ವಾಮನಃ’ ಎಂದು ಈ ಆರಂಭಿಸಿದ ನನ್ನ ಪರಿಸ್ಥಿತಿಯಾದರೂ ನನ್ನ ಈ ಪ್ರಯತ್ನ ಪ್ರಾಜ್ಞರಾದ ಕೆಲವರ ಗಮನಕ್ಕೆ ಬಂದಾಗಲಾದರೂ ಬೇರೆ ಯಾರಾದರೂ ಈ ವಿಷಯಗಳಲ್ಲಿ ಪರಿಶ್ರಮಿಸಿಯೊ ಸ್ವಸ್ಥರಾಗಿ ಕಾಲಕ್ಷೇಪ ಮಾಡಿಕೊಂಡು ಬರುವ ಅವರು ನಾನು ಬಯಸಿದ ‘ಫಲ’ದ ಬಗೆಗೆ ಲುಬ್ಧರಾಗಿ ಅದನ್ನು ‘ಲಂಘಿಸಲು’ ದೊಡ್ಡ ಬಾಹುಗಳಾಗುವಂತೆ ಮಾಡಿದರೆ ಆ ಫಲ ಅನಾಯಾಸವಾಗಿ ಹಸ್ತಪ್ರಾಪ್ತಿ ಮಾಡಿಕೊಳ್ಳುವುದರ ಮೂಲಕವಾದರೂ ನನ್ನ ಆಸೆ ಈಡೇರಬಹುದು.
ಮದ್ರಾಶಿ ಇತಿ,
ಲಿಂಗಿ ಚೆಟ್ಟಿತೆರುವ್ ತ.ಮ. ಅಪ್ಪು ನೆಡುಙಡಿ
೧೮೮೭ ಅಕ್ಟೋಬರ್
Reviews
There are no reviews yet.