ಪ್ರಸ್ತಾವನೆ
ಮೋಹನ ಕುಂಟಾರ್ ಒಬ್ಬ ಸಾಹಸಿ ಸಾಹಿತ್ಯ ಪಯಣಿಗ. ಅವರ ಸಾಹಿತ್ಯ ಸಾತತ್ಯದ ಹಾಸುಬೀಸು ಎಷ್ಟು ದೊಡ್ಡದು ಹಾಗೂ ಅದು ಉಂಟುಮಾಡಿರುವ ಪರಿಣಾಮವೇನು ಎಂಬುದರ ಪರಾಮರ್ಶನವೇ ಈ ಕೃತಿಯ ತಿರುಳು. ಮೂರು ದಶಕಗಳ ಕಾಲ ಅವರ ಸಾಹಿತ್ಯ ಕೃಷಿ ಭಿನ್ನ ಮಾರ್ಗಗಳಲ್ಲಿ ಶೋಧ ಕಂಡಿದೆ. ಸಂಶೋಧನೆ, ಅನುವಾದ, ಅನುವಾದದ ಸೈದ್ಧಾಂತಿಕ ಅಧ್ಯಯನ ಹಾಗೂ ಕಾವ್ಯ ಪ್ರಕಾರಗಳಲ್ಲಿ ವ್ಯಕ್ತಗೊಂಡಿರುವ ಅವರ ಉತ್ಸಾಹದ ಬರಹ ಅವರ ಒಟ್ಟು ಸಾಹಿತ್ಯದ ಪರಿಪ್ರೇಕ್ಷ್ಯವನ್ನು ರೂಪಿಸಿದೆ. ಸುಮಾರು ಮೂವತ್ತು ಕೃತಿಗಳಲ್ಲಿ ಅದು ಹರಡಿ ನಿಂತಿದ್ದು ಆ ಎಲ್ಲ ಕೃತಿಗಳು ಪ್ರಸ್ತುತ ’ಅನುಶೋಧ’ ಕೃತಿಯಲ್ಲಿ ವಿಮರ್ಶೆಗೆ ಒಡ್ಡಿಕೊಂಡಿವೆ.
’ಅಸ್ತಿತ್ವದಲ್ಲಿರುವ ಸಾಂಸ್ಕೃತಿಕ ಹಾಗೂ ಮಾನವ ಪ್ರಗತಿಯ ಆಯಾಮಗಳನ್ನು ಪರೀಕ್ಷಿಸುವುದು ಹಾಗೂ ವೈವಿಧ್ಯಮಯ ಸಾಹಿತ್ಯ ಪ್ರಕಾರವನ್ನು ಬಳಸಿ ಅವುಗಳ ಆಳದ ಶೋಧಕ್ಕಿಳಿಯುವುದು’ ಅವರ ಸಾಹಿತ್ಯ ಕೃಷಿಯ ಕೇಂದ್ರ ಪ್ರಜ್ಞೆ. ಅವರ ಅಧ್ಯಯನದ ಹರಹು-ಆಯ್ದುಕೊಂಡ ವಸ್ತುವಿನ ವಿಶ್ಲೇಷಣೆಯು ವಿಷಯದ ಅಂಚಿನಿಂದ ಆರಂಭವಾಗಿ ಕೇಂದ್ರದವರೆಗೆ ತಲುಪುವ ವಿಸ್ತಾರಗಳಿಗೆ ಚಾಚಿಕೊಂಡಿದೆ. ತಮ್ಮ ವಿಶ್ಲೇಷಣೆಯ ಆ ವಾದಗಳಿಗೆ ಸೌಷ್ಠವ ದೊರಕಿಸಲು ಆಯ್ದುಕೊಂಡ ಅಧ್ಯಯನ ವಸ್ತುವಿನ ಕ್ಷೇತ್ರದ ವಿದ್ವಾಂಸರ ಪೂರ್ವಕೃಷಿಯನ್ನು ಬಳಸಿಕೊಳ್ಳುತ್ತಾರೆ. ತಾತ್ವಿಕತೆಯನ್ನು ದಿಟ್ಟಿಸುವ ತೀವ್ರತೆ ಅವರ ಬರಹಗಳಲ್ಲಿ ದಟ್ಟೈಸಿದೆ. ಅದು ಅವರ ಕೃತಿಗಳಲ್ಲಿ ದೃಗ್ಗೋಚರವಾಗುತ್ತದೆ. ಅವರ ಅನನ್ಯ ಅನುಭವಗಳು ಸುಮಾರು ಮೂರು ದಶಕದ ಸಾಹಿತ್ಯ ಶೋಧದಿಂದ ಹರಳುಗಟ್ಟಿವೆ. ಈ ಅವಧಿಯಲ್ಲಿ (೧೯೯೩ರಿಂದ ೨೦೨೩) ಕನ್ನಡ ಸಾಹಿತ್ಯಾಸ್ಮಿತೆಯ ಸ್ಥಿತ್ಯಂತರಗಳನ್ನು ಸಾಕ್ಷೀಕರಿಸುವ ಅವಕಾಶಗಳನ್ನು ಪಡೆದುಕೊಂಡವರಾದ್ದರಿಂದ ಅವರ ಬರವಣಿಗೆ ಅಧಿಕೃತತೆಯ ಶೃಂಗಗಳನ್ನು ಚುಂಬಿಸುತ್ತದೆ. ಕಲೆ, ಸಾಹಿತ್ಯ, ಸಂಸ್ಕೃತಿ, ಸಮಾಜ ಮುಂತಾದ ಅಮೂರ್ತ ಕಲ್ಪನೆಗಳನ್ನು ಪರಂಪರೆಯ ಅಧ್ಯಯನದ ಮೂಲಕ ಮೂರ್ತವಾಗಿಸಲು ಪ್ರಯತ್ನಿಸುವಲ್ಲಿ ಅವರ ಬರಹ ನಿರ್ದೇಶಿತಗೊಂಡಿದ್ದು ಕಂಡುಬರುತ್ತದೆ.
ಸಾಂಪ್ರದಾಯಕವಾಗಿ ತಮ್ಮ ವಿಚಾರಗಳನ್ನು ದಾಖಲಿಸುವ ಅವರು ಬಹುತೇಕ ಶಾಂತರು. ಅವರ ಬರೆಹವು ಪಲ್ಲಕ್ಕಿಯಲ್ಲಿ ಕುಳಿತು ಮೆರವಣಿಗೆಗೆ ಹೊರಡುವುದಿಲ್ಲ. ಯಾವುದೇ School of thoughtಗೆ ಪಂಥಾಹ್ವಾನವೀಯುವುದಿಲ್ಲ. ಆವೇಗ, ಆವೇಶಗಳಿಂದ ದೂರ ಉಳಿಯುತ್ತ ತಮ್ಮ ಬರೆಹದ ಭಾಷೆಯನ್ನು ವೇಗವರ್ಧಕಗಳಿಂದ ಜತನದಿಂದ ರಕ್ಷಿಸಿಕೊಂಡಿದ್ದಾರೆ. ಆಲೋಚನೆಗಳ ನಿಯಂತ್ರಣವು ಅಭಿವ್ಯಕ್ತಿಗೆ ಸಂಯಮವನ್ನೂ, ಅಲಿಪ್ತ ಗುಣವನ್ನು ಪ್ರಾಪ್ತಿಸುತ್ತದೆ. ಇಂತಹ ಸ್ಥಿತಪ್ರಜ್ಞ ಬರೆಹಕ್ಕಾಗಿ ವಿಮರ್ಶಕನಾಗಿ ನಾನು ನನ್ನ ಲೇಖಕನನ್ನು ಅಭಿನಂದಿಸುತ್ತೇನೆ. ಸಾಹಿತ್ಯಿಕ ಅದೃಷ್ಟವನ್ನು (Literary fortune) ನಂಬಿಕೊಂಡು ಅವರು ಬರೆಯುವುದಿಲ್ಲ. ’ಬರಹವನ್ನು ಲಾಭದ ಉದ್ಯಮ’ವೆಂದು ತಿಳಿದುಕೊಳ್ಳುವ ಪ್ರವೃತ್ತಿಯಿಂದ ಅವರ ಬರಹ ಬಹಳ ದೂರವಿರುವುದು ಸ್ಪಷ್ಟವಾಗಿದೆ.
ಕುಂಟಾರ್ರ ಒಟ್ಟು ಸಾಹಿತ್ಯ ಕೃಷಿಯು ಐವತ್ತಕ್ಕೂ ಹೆಚ್ಚು ಕೃತಿಗಳ ರಚನೆಯನ್ನು ಕಂಡಿದೆ. ಆದರೆ ಅವರ ಮುಖ್ಯ ಅಧ್ಯಯನ ಆಸಕ್ತಿಯ ಸುಮಾರು ಮೂವತ್ತಕ್ಕೂ ಹೆಚ್ಚು ಕೃತಿಗಳನ್ನು ಈ ಕೃತಿಯಲ್ಲಿ ಕೆಳಗಿನಂತೆ ವರ್ಗೀಕರಿಸಿ ಅಧ್ಯಯನಿಸಿ ವಿಮರ್ಶಿಸಲಾಗಿದೆ.
ಕಲಾಶೋಧ: ಯಕ್ಷಗಾನ ಆಹಾರ್ಯ, ಯಕ್ಷಗಾನ ವಾಚಿಕಾಧ್ಯಯನ, ಯಕ್ಷಗಾನ ಸ್ಥಿತ್ಯಂತರ, ಕಥಕಳಿ.
ಸಂಸ್ಕೃತಿ ಶೋಧ
೧. ನುಡಿಶೋಧ (ಭಾಷೆ): ಸಮುದಾಯಗಳ ಕನ್ನಡ ಪರಂಪರೆ, ಗಡಿನಾಡು ನುಡಿಸೊಗಡು, ಕಾಸರಗೋಡು ಕನ್ನಡ ಪದಕೋಶ.
೨. ಜನಶೋಧ (ಸಂಸ್ಕೃತಿ): ಕೇರಳ ಕಥನ, ಮಲಯಾಳಂ ಸಮಾಜ ಮತ್ತು ಸಂಸ್ಕೃತಿ, ಕೈರಳಿ.
೩. ಸಾಹಿತ್ಯ ಶೋಧ: ಸ್ವಗತ ಮತ್ತು ಸಂವಾದ, ಪರಿಗ್ರಹ, ಇನಾಂದಾರರ ಕಾದಂಬರಿಗಳು,
೪. ವ್ಯಕ್ತಿತ್ವ ಶೋಧ: ಯು.ಆರ್.ಅನಂತಮೂರ್ತಿ, ಪಾ.ಶ.ಶ್ರೀನಿವಾಸ, ಕಣ್ಮಣಿ
ಅನುಶೋಧ: ಅನುವಾದ ಕೃತಿಗಳ ಅಧ್ಯಯನ- ಕಾದಂಬರಿ, ಕತೆ, ಅನುವಾದ ಅಧ್ಯಯನ ಮತ್ತು ಸಿದ್ಧಾಂತ ಕೃತಿಗಳ ಅಧ್ಯಯನ
ಕಾವ್ಯಶೋಧ: ಲೋಕಾಂತದ ಕಾವು
ಕುಂಟಾರ್ರ ಒಟ್ಟು ಸಾಹಿತ್ಯ ಸಂಗೋಪನೆಯಲ್ಲಿ ’ಸಂಶೋಧನೆ’ಗೆ ಅಗ್ರ ಪಟ್ಟವಿರುವುದು ಗಮನ ಸೆಳೆಯುತ್ತದೆ. ಎಲ್ಲ ಸಂಶೋಧನಾ ಕೃತಿಗಳಲ್ಲಿ ಕಂಡುಬರುವ ಸಾಮಾನ್ಯ ಅಂಶವೆಂದರೆ ಅವರ ಸಂಶೋಧನೆಯು ಅನುಸರಿಸಿರುವ ಪ್ರಮಾಣ ವಿಧಾನ (Quantitative Approach) ಹಾಗೂ ಅದನ್ನು ಸೃಜನಶೀಲ ಬರವಣಿಗೆಯ ವಿಧಾನದೊಂದಿಗೆ ಕಸಿಗೊಳಿಸಿರುವುದು. ತನ್ಮೂಲಕ ಸಂಶೋಧನಾ ಸಾರವನ್ನು ಸಾಮಾಜಿಕವಾಗಿ ಉಪಯುಕ್ತವೆನಿಸುವ ’ಮೌಲಿಕ ಕಾಣ್ಕೆ’ಯಾಗಿ ಪರಿವರ್ತಿಸುವುದು. ಹಾಗೆ ಅದು ಸ್ಥಾಪಿತಗೊಳ್ಳುವಲ್ಲಿ ಆಯಾ ಸಂಶೋಧನಾ ಕ್ಷೇತ್ರದ ಪಠ್ಯೀಯ ಚರಿತ್ರೆ ಮತ್ತು ಮೌಖಿಕ ಚರಿತ್ರೆಯನ್ನು ಸಾಕ್ಷಿಯಾಗಿ ಇರಿಸಿಕೊಳ್ಳುವುದು. ಜೊತೆ ಜೊತೆಗೆ ತಮ್ಮ ಸಂಶೋಧನಾ ವಸ್ತುವನ್ನು ಸಮಾಜಶಾಸ್ತ್ರೀಯ ಹಾಗೂ ಮಾನವಶಾಸ್ತ್ರೀಯ ತತ್ವಗಳಲ್ಲಿ ಅವಲೋಕಿಸುವುದು. ಅವರು ತಮ್ಮ ವೃತ್ತಿ, ಪ್ರವೃತ್ತಿ, ಬಾಲ್ಯಜೀವನದ ಭೌಗೋಳಿಕ ಪ್ರದೇಶ ವಲಯದಿಂದ ಹಾಗೂ ಪರಿಶ್ರಮ ರಂಗಗಳಿಂದ ಸಂಶೋಧನಾ ವಸ್ತುಗಳನ್ನು ಆಯ್ದುಕೊಳ್ಳುತ್ತಾರೆ. ಆ ಕಾರಣಕ್ಕೆ ಅವರ ಸಂಶೋಧನಾ ಪ್ರಮೇಯಗಳು (Inferences) ಪ್ರಾಮಾಣಿಕವೂ ಅಧಿಕೃತವೂ ಆಗಿವೆ.
ದೇಶೀ ಸಂಸ್ಕೃತಿಯ ಸಮಗ್ರ ನೋಟಕ್ಕಾಗಿ ಕಲಾಕೇಂದ್ರಿತ ಹಾಗೂ ಸಮಾಜಶಾಸ್ತ್ರೀಯ ವ್ಯಾಖ್ಯಾನ ಕೇಂದ್ರಿತ ಮಾರ್ಗಗಳು ಪ್ರಯೋಗಗೊಂಡಿರುವುದು ಅವರ ಸಂಶೋಧನೆ ವಿಭಾಗದ ಕೃತಿ ರಚನೆಗಳಲ್ಲಿ ಕಾಣುತ್ತದೆ. ’ಕಲೆ’ ವಿಭಾಗದಲ್ಲಿ ’ಯಕ್ಷಗಾನ ಕಲೆ’ಯನ್ನು ಕೇಂದ್ರೀಕರಿಸಲಾಗಿದೆ. ’ಭಾಷೆ’ ವಿಭಾಗದಲ್ಲಿ ಕಾಸರಗೋಡು ಭೌಗೋಳಿಕ ಪ್ರದೇಶ ಕೇಂದ್ರಸ್ಥಾನದಲ್ಲಿದ್ದು, ಆ ಪ್ರದೇಶದಲ್ಲಿ ಕನ್ನಡ ಭಾಷಾ ಬೆಳವಣಿಗೆಯ ಹಂತಗಳು ದಾಖಲಾಗಿವೆ. ’ಸಂಸ್ಕೃತಿ’ ವಿಭಾಗದಲ್ಲಿ ಕೇರಳ ಸಮಾಜ ನಿರ್ಮಾಣಗೊಂಡ ಪ್ರಾಚೀನದಿಂದ ಆಧುನಿಕದವರೆಗಿನ ಕಥನವಿದೆ. ’ಸಾಹಿತ್ಯ’ ವಿಭಾಗದಲ್ಲಿ ’ಸ್ವಗತ ಮತ್ತು ಸಂವಾದ’ ಕೃತಿಯು ಕನ್ನಡ ಭಾಷೆಯ ಆಧುನಿಕ ಸ್ಥಿತ್ಯಂತರಗಳನ್ನು ಅಭ್ಯಸಿಸುವಲ್ಲಿ ಸಾಫಲ್ಯ ಕಂಡಿದೆ. ’ಇನಾಂದಾರರ ಕಾದಂಬರಿಗಳು’ ಕೃತಿಯು ಇನಾಂದಾರರ ಕಾದಂಬರಿಗಳ ಒಳನೋಟಗಳನ್ನು ಪರಿಚಯಿಸಿದೆ. ’ಪರಿಗ್ರಹ’ ಕೃತಿಯು ಕನ್ನಡದ ಕೆಲವು ಮುಖ್ಯ ಲೇಖಕರ ಸಾಹಿತ್ಯೋತ್ಪಾದನೆಯ ದೃಷ್ಟಿಕೋನಗಳನ್ನು ಸೆರೆಹಿಡಿದಿದೆ. ’ವ್ಯಕ್ತಿತ್ವ’ ವಿಭಾಗದಲ್ಲಿ ಪಾ.ಶ. ಶ್ರೀನಿವಾಸ ಎಂಬ ವಿದ್ವಾಂಸರು ಕನ್ನಡ-ತಮಿಳು ಸಾಂಸ್ಕೃತಿಕ ರಾಯಭಾರಿಯಾಗಿರುವುದರ ಹಿಂದಿನ ಶ್ರಮಜೀವನವನ್ನು ತೆರೆದಿಡುತ್ತದೆ. ’ಕಣ್ಮಣಿ’ ಎಂಬ ಪುಟ್ಟ ಪುಸ್ತಕದಲ್ಲಿ ದಿ. ಮಾಟೆಡ್ಕ ಪುರುಷೋತ್ತಮ ರಾಯರ ಬದುಕು ಕುಂಟಾರ್ರು ತಮ್ಮ ತಾರುಣ್ಯದಲ್ಲಿ ಸಂಘಟನಾ ಕಾರ್ಯದಲ್ಲಿ ತೊಡಗಲು ಪ್ರೇರಕವಾಗಿದ್ದನ್ನು ಸ್ಮರಿಸಿಕೊಂಡಿದ್ದಾರೆ. ಅವರ ಎಲ್ಲ ಸಂಶೋಧನಾ ಕೃತಿಗಳ ಪೈಕಿ ’ಯಕ್ಷಗಾನ ಆಹಾರ್ಯ’ ಕೃತಿಯು ತನ್ನ ಅಧ್ಯಯನ ಶಿಸ್ತು ಹಾಗೂ ಪ್ರತಿಭಾಪೂರ್ಣ ನಿರೂಪಣಾ ವಿನ್ಯಾಸಕ್ಕಾಗಿ ಪ್ರಶಂಸೆಗೆ ಪಾತ್ರವಾಗುತ್ತದೆ.
’ಅನುಶೋಧ’ ವಿಭಾಗದಲ್ಲಿ ಅನುವಾದ ಮತ್ತು ಅನುವಾದ ಸಿದ್ಧಾಂತಗಳ ಅಧ್ಯಯನ ಎಂಬ ಎರಡು ಸುಂದರ ಸಾಹಿತ್ಯ ಲೋಕಗಳಿವೆ. ’ಅನುವಾದ’ ಉಪವಿಭಾಗದಲ್ಲಿ ಮಲಯಾಳಂನಿಂದ ಕನ್ನಡಕ್ಕೆ ಭಾಷಾಂತರಗೊಂಡ ಆರು ಕಾದಂಬರಿಗಳು ಹಾಗೂ ನಲವತ್ತಕ್ಕೂ ಹೆಚ್ಚು ಕತೆಗಳಿರುವ ಮೂರು ಕಥಾಸಂಕಲನಗಳ ಸುದೀರ್ಘ ಅವಲೋಕನವಿದೆ. ಈ ಅನುವಾದ ಸಾಹಿತ್ಯವು ಸುಮಾರು ಎರಡು ಸಾವಿರ ಪುಟಗಳಷ್ಟಿದ್ದು, ಪ್ರತಿಯೊಂದು ಕಾದಂಬರಿಯ ಕಥೆಯನ್ನು ಈ ಕೃತಿಯಲ್ಲಿ ಪ್ರತ್ಯೇಕವಾಗಿ ಪರಿಚಯಿಸಲಾಗಿದೆ. ಅಲ್ಲದೆ ಕತೆಗಳ ಸ್ಥೂಲ ನೋಟ ನೀಡಿ ಕಾದಂಬರಿ ಸಾಹಿತ್ಯಕ್ಕೂ, ಕಥಾಸಂಕಲನಕ್ಕೂ ಪ್ರತ್ಯೇಕವಾಗಿ ಅವುಗಳ ಚರ್ಚೆಯ ಅಂತ್ಯದಲ್ಲಿ ವಿಮರ್ಶಾ ನುಡಿಗಳು ಅರಳಿ ನಿಂತಿವೆ.
ಅನುವಾದ ಕೃತಿಗಳ ಮೂಲಕ ಹರಿದು ಬರುವ ಅನ್ಯಭಾಷೆಯ ಕೃತಿಗಳ ಅನನ್ಯತೆಯು ಅವುಗಳ ಭಾಷಿಕ ನೆಲೆಯನ್ನು ಮೀರಿದ ಮೂಲಸತ್ವಗಳಲ್ಲಿ ಅಂತರ್ಧಾನಗೊಂಡಿರುತ್ತದೆ. ಅಂತಹ ಮೂಲಸತ್ವವನ್ನು ಕನ್ನಡ ವಾಚಕರ ಗಣನೆಗೆ ತರಲೆಂದೇ ಕುಂಟಾರ್ರು ಅನುವಾದ ಕಾರ್ಯವನ್ನು ನೆಚ್ಚಿಕೊಂಡಿದ್ದಾರೆ. ಕನ್ನಡ ಭಾಷಿಕ ನೆಲೆಯಲ್ಲಿ ಮಲಯಾಳಂ ಸಾಹಿತ್ಯದ ಸಾಂಸ್ಕೃತಿಕ ಚಹರೆಗಳು ಗರಿಷ್ಠ ಮಟ್ಟದಲ್ಲಿ ಸ್ವೀಕೃತಗೊಂಡಿರುವುದನ್ನು ಅವರ ಅನುವಾದದಲ್ಲಿ ಕಾಣಬಹುದು. ಅನುವಾದ ಸಾಹಿತ್ಯವು ನಮ್ಮ ಪರಿಸರದ ಕಥಾವಿನ್ಯಾಸಗಳ ತೌಲನಿಕ ಪರಾಮರ್ಶೆಗೆ ಗ್ರಾಸ ಒದಗಿಸುವುದರ ಹಿನ್ನೆಲೆಯಲ್ಲಿ ಈ ಕಾದಂಬರಿಗಳು ಹಾಗೂ ಕತೆಗಳು ಸಾಂಸ್ಕೃತಿಕ ಹಾಗೂ ಭಾಷಾ ಸೇತುವೆಯಾಗಿ ಕ್ರಿಯೆಗಿಳಿಯುತ್ತವೆ. ಕುಂಟಾರ್ರು ಅನುವಾದಿಸಿದ ಕಾದಂಬರಿಗಳ ವಸ್ತುಗಳು ಕನ್ನಡಕ್ಕೆ ಹೊಸದಲ್ಲವಾದರೂ ಅಭಿವ್ಯಕ್ತಿಯ ವಿನ್ಯಾಸಗಳಲ್ಲಿ ಭಿನ್ನತೆ ಇರುವುದನ್ನು ಅಲ್ಲಗಳೆಯಲಾಗದು.
ಉರೂಬ್ರ ಕಾದಂಬರಿ ’ಸುಂದರರು ಸುಂದರಿಯರು’, ಅದರ ಪ್ಲಾಟ್ ಹಾಗೂ ಕೌತುಕತೆ ಗಳಿಗಾಗಿ ಇಷ್ಟವಾದರೆ ಪಿ.ವತ್ಸಲ ಅವರ ’ಆಗ್ನೇಯ’ವು ತನ್ನ ಪುಟ್ಟ ಪುಟ್ಟ ವಾಕ್ಯಗಳಲ್ಲಿ ಭಾಷಾ ಸೌಂದರ್ಯವನ್ನು ಹೊಮ್ಮಿಸುವ ಅಭಿವ್ಯಕ್ತಿ ಕೌಶಲ್ಯದಿಂದ ಆಪ್ತವೆನಿಸುತ್ತದೆ. ಶಿವಶಂಕರ ತಗಳಿಯವರ ’ಚೆಮ್ಮೀನು’ ಕಾದಂಬರಿಯ ಕತೆ ಆರ್ದ್ರವೆನಿಸುತ್ತದೆ. ಅವರದೇ ಇನ್ನೊಂದು ಕಾದಂಬರಿ ’ತೋಟಿಯ ಮಗ’. ತೋಟಿಗಳು ತಮ್ಮ ಹಕ್ಕಿಗಾಗಿ ಮಾಡುವ ಬಾಹ್ಯ ಹೋರಾಟ ಹಾಗೂ ಶತಮಾನಗಳಿಂದ ಅನುಭವಿಸುತ್ತ ಬಂದಿರುವ ದಾಸ್ಯದ ಬಿಡುಗಡೆಗಾಗಿ ನಡೆಸುವ ಆಂತರಿಕ ಹೋರಾಟಗಳನ್ನು ತಗಳಿ ತುಂಬ ಸುಂದರವಾಗಿ ಚಿತ್ರಿಸುತ್ತ ಅವೆರಡರ ಸಂಬಂಧವನ್ನು ಸೂಚಿಸಲು ಸನ್ನಿವೇಶಗಳನ್ನು ರೂಪಿಸಿದ್ದನ್ನು ನೋಡುವುದೇ ಅವರ ಬರಹದ ಸೌಂದರ್ಯ.
ವೈಕಂ ಬಷೀರ್ರ ಕತೆಗಳಿಗೆ ತಮಾಷೆ, ಸ್ವವಿಡಂಬನೆ, ಲಘುಹಾಸ್ಯದ ಪರಿವೇಷವಿದ್ದರೆ ವಾಸುದೇವನ್ ನಾಯರ್ ಕತೆಗಳು ಸಮಾಜ ವಿಡಂಬನೆಯ ಮಾರ್ಗದಲ್ಲಿವೆ.
ಹೀಗೆ ವ್ಯಾಪಕ ಉದ್ದೇಶಗಳಿಗಾಗಿ ಸಾಹಿತಿಗಳು ತಮ್ಮ ಚಿಂತನೆಗಳನ್ನು, ಭಾಷೆಯನ್ನು ದುಡಿಸಿಕೊಳ್ಳುವ ಕ್ರಮದ ನೋಟ ಈ ಅನುವಾದಿತ ಕೃತಿಗಳಲ್ಲಿ ದೊರೆಯುವ ಅಮೂಲ್ಯ ಅಂಶ. ಇಂತಹ ಇತರ ಅನೇಕ ಅಂಶಗಳು ಓದುಗರ ಆಲೋಚನೆಗೆ, ಸಾಹಿತ್ಯ ರಚನೆಯ ಆಸಕ್ತಿಗೆ ಔಚಿತ್ಯಪೂರ್ಣ ಜ್ಞಾನವಲಯಗಳನ್ನು ಒದಗಿಸಬಲ್ಲವು. ಹೊಸ ದಿಗಂತದತ್ತ ಕೊಂಡೊಯ್ಯ ಬಲ್ಲವು.
ಇನ್ನೊಂದು ಉಪವಿಭಾಗದಲ್ಲಿ ’ಅನುವಾದ ಅಧ್ಯಯನ’ಕ್ಕೆ ಸಂಬಂಧಿಸಿದ ಆರು ಕೃತಿಗಳ ವಿವರಣೆಯಿದೆ. ಅನುವಾದ ಕುರಿತ ಸೈದ್ಧಾಂತಿಕ ವಿಚಾರಗಳು, ತತ್ವಚಿಂತನೆಗಳು, ಅನುವಾದದ ಇತಿಹಾಸ, ಅನುವಾದ ಕಾರ್ಯ ಆಧಾರಿತ ಕ್ರಿಯಾ ಕ್ಷೇತ್ರಗಳು. ಕನ್ನಡ ಅನುವಾದ ಲೋಕದ ಒಲವು ನಿಲುವುಗಳು, ಅನುವಾದದ ಪ್ರಯೋಜನಗಳು ಇಲ್ಲಿ ಚರ್ಚೆಯ ವಸ್ತುವಾಗಿವೆ.
ಜಾಗತಿಕ ಪರಿಸರದಿಂದ ದೇಶೀಯ ಪರಿಸರಕ್ಕೆ ಜ್ಞಾನವು ಹರಿದು ಬರಬೇಕಾದಲ್ಲಿ ಅನುವಾದ-ಅನುವಾದಕ-ಮೂಲಭಾಷೆ-ಲಕ್ಷ್ಯಭಾಷೆಗಳ ವೃತ್ತ ಪೂರ್ಣಗೊಳ್ಳಬೇಕು. ಅನುವಾದ ತತ್ವಗಳು ಈ ವೃತ್ತೀಯ ಕ್ರಿಯೆಯ ಕೇಂದ್ರಬಿಂದುವಾಗಿ ಸ್ಥಾಪಿತಗೊಂಡಾಗ ಅನುವಾದ ಕೃಷಿಗೆ ಒಂದು ಸಾರ್ವತ್ರಿಕ ತಾತ್ವಿಕತೆಯ ಚೌಕಟ್ಟು ನಿರ್ಮಾಣಗೊಳ್ಳುತ್ತದೆ. ತತ್ವಗಳನ್ನು ಅನುಸರಿಸಿಯೇ ಅನುವಾದಗಳು ಹುಟ್ಟುವುದಿಲ್ಲವಾದರೂ ಅಂತಹ ಅನುವಾದಗಳು ಅಪೂರ್ಣವೂ, ಅಸ್ಪಷ್ಟವೂ ಆಗಿರುವ ಋಣಾತ್ಮಕ ಲಕ್ಷಣಗಳಿಂದ ಶಿಥಿಲಗೊಂಡಿರುತ್ತವೆ. ಅನುವಾದ ನಿಯಮಗಳು ಜಾಗತಿಕ ಅನುವಾದ ಸಾಹಿತ್ಯಕ್ಕೆ ತಾತ್ವಿಕ ನಿರ್ದೇಶನ ನೀಡಿ ಅನುವಾದ ಸಾಹಿತ್ಯವನ್ನು ಸಾರ್ವತ್ರಿಕಗೊಳಿಸುವಲ್ಲಿ ನಿರತವಾಗುತ್ತವೆ. ಶೈಕ್ಷಣಿಕ, ಮಾಧ್ಯಮ, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ವಿನಿಮಯ ರಂಗಗಳಲ್ಲಿ ಅನುವಾದ ತತ್ವಗಳ ಪಾತ್ರ ಮಹತ್ವದ್ದು.
ಈ ವೈಚಾರಿಕತೆಯನ್ನು ಬಿಡಿಬಿಡಿಯಾಗಿ ಪ್ರತಿನಿಧಿಸಲು ಕುಂಟಾರರು ಭಾಷಾಂತರ ವಿಭಿನ್ನ ನೆಲೆಗಳನ್ನು ವಿವೇಚಿಸುತ್ತ, ಭಾಷಾಂತರ ಪ್ರಕ್ರಿಯೆಯ ಪ್ರಭಾವ ಪ್ರೇರಣೆಗಳನ್ನು ಅವಲೋಕನ ಗೈಯ್ಯುತ್ತಾರೆ. ಮಾಧ್ಯಮಗಳಲ್ಲಿ ಭಾಷಾಂತರ ಪ್ರಕ್ರಿಯೆ ಬಗೆ ಎಂತಹುದು ಎಂದು ಉದಾಹರಣೆ ಸಹಿತ ವಿವರಿಸುತ್ತಾರೆ. ಅನುವಾದ ಕ್ರಿಯೆಯ ಟಿಸಿಲುಗಳು-ಅನುಸೃಷ್ಟಿ ಹಾಗೂ ರೂಪಾಂತರಗಳು ಮೈದಾಳುವ ಬಗೆಯ ಕುರಿತು ಟಿಪ್ಪಣಿ ನೀಡುತ್ತಾರೆ.
ಕೊನೆಯ ಹಾಗೂ ಮೂರನೆಯ ಭಾಗವು ಅವರ ’ಕಾವ್ಯ’ದ ಅಭಿವ್ಯಕ್ತಿಗಾಗಿ ಸಿದ್ಧಗೊಂಡಿದೆ. ಇಲ್ಲಿ ಅವರ ಕವನಸಂಕಲನ ’ಲೋಕಾಂತದ ಕಾವು’ ಅವರ ಸೃಜನಶೀಲ ಬರವಣಿಗೆಗೆ ಸಾಕ್ಷಿಯಾಗಿದೆ. ಅನುಭವದ ಅಗ್ನಿಯಲ್ಲಿ ಅರಳಿದ ಗಂಭೀರ ಕವಿತೆಗಳೂ ಇಲ್ಲಿವೆ. ಅವರ ಕವಿತೆಗಳಲ್ಲಿ ಕೆಲವು ನವೋದಯದ ಸಾಂಪ್ರದಾಯಿಕ ನಡವಳಿಕೆಗಳನ್ನು ಪ್ರತಿನಿಧಿಸುತ್ತವೆ. ಕೆಲವು ಕವಿತೆಗಳು ಹರಟೆಯ ಸ್ವರೂಪದಲ್ಲಿದ್ದರೆ ಇನ್ನು ಕೆಲವಕ್ಕೆ ನವ್ಯ ಹಾಗೂ ನವ್ಯೋತ್ತರ ಕಾಲದ ಪ್ರಗತಿಪರ ಧೋರಣೆಗಳ ಆತ್ಮಗಳಿವೆ. ಕೃತಿ ಕೊನೆಯಲ್ಲಿ ಈ ಕಾವ್ಯಲೋಕದ ವಿಶ್ಲೇಷಣೆ ಇದೆ.
ಹೀಗೆ ಕೃತಿ ಸಮೀಕ್ಷೆ ಹಾಗೂ ವಿಶ್ಲೇಷಣೆಯ ಮೂಲಕ ಕುಂಟಾರ್ ಕೃತಿಗಳ ಅವಲೋಕನವು ’ಅನುಶೋಧ’ವಾಗಿ ಅಸ್ತಿತ್ವ ಪಡೆದಿದೆ.
–ವಿಶ್ವನಾಥ ನಾಗಠಾಣ
ಒಳ ಪುಟಗಳಲ್ಲಿ
ಸವಿನುಡಿ / ೩
ಅರಿಕೆ / ೫
ಪ್ರಸ್ತಾವನೆ / ೯
೧. ಕಲಾಶೋಧ / ೧೫
೨. ಸಂಸ್ಕೃತಿ ಶೋಧ / ೫೧
೩. ಅನುಶೋಧ / ೧೦೧
೪. ಕಾವ್ಯಶೋಧ / ೧೯೮
೫. ಸಮಾರೋಪ / ೨೧೧
೬. ಸಂದರ್ಶನ / ೨೧೭
೭.ಅನುಬಂಧ / ೨೨೫
೮. ಮೋಹನ ಕುಂಟಾರ್ ಕೃತಿಗಳು / ೨೩೧
೯. ಪರಾಮರ್ಶನ ಗ್ರಂಥಗಳು / ೨೩೬
Reviews
There are no reviews yet.