ಕಣ್ಣೀರ ಒರಸಿ ಬೆಳಕು ನೀಡುವ ಕೃತಿ
ಹತ್ತೊಂಬತ್ತನೆಯ ಶತಮಾನದ ಪೂರ್ವಾರ್ಧದಲ್ಲಿ, ಇಂಗ್ಲಂಡಿನ ಎರಡನೆಯ ತಲೆಮಾರಿನ ರೊಮ್ಯಾಂಟಿಕ್ ಕಾವ್ಯ ಪ್ರಪಂಚದಲ್ಲಿ, ಬೆಳಗಿ ಹೋದ ರತ್ನತ್ರಯರಲ್ಲಿ ಜಾನ್ ಕೀಟ್ಸ್ನೊಬ್ಬ. ಉಳಿದಿಬ್ಬರು ಲಾರ್ಡ್ ಬೈರನ್ ಮತ್ತು ಪಿ.ಬಿ. ಶೆಲ್ಲಿ.
ಅಪ್ಪಟ ಕಾವ್ಯ ಕುಶಲಕರ್ಮಿಯಾಗಿದ್ದ ಕೀಟ್ಸ್ನಿಗೆ ಎರಡು ತೀರದ ದಾಹಗಳಿದ್ದವು: ಕಾವ್ಯದಾಹ ಮತ್ತು ಪ್ರೀತಿದಾಹ. ತನ್ನ ಆಯುಷ್ಯದ ಕೊನೆ ಗಳಿಗೆವರೆಗೂ ಈ ಕವಿ ಕಾವ್ಯಯಜ್ಞದಲ್ಲಿ ತನ್ನನ್ನೇ ತಾನು ಹವಿಸ್ಸಾಗಿಸಿಕೊಂಡ ಅಧ್ವರಿ. ಕಾವ್ಯ ರಾಜ್ಯಗಳಲ್ಲಿ ಸಾಕಷ್ಟು ಸುತ್ತಾಡಿ ಬಂದವನು ನಾನು(ಒuಛಿh hಚಿve I ಣಡಿಚಿveಟಟeಜ iಟಿ ಣhe ಡಿeಚಿಟms oಜಿ goಟಜ) ಎಂದು ಹೃದಯ ತುಂಬಿ ನಲಿದಾಡಿದ ಇವನು ಮುಟ್ಟಿದ್ದೆಲ್ಲ ಚಿನ್ನಾಯ್ತು. ಕಾವ್ಯಾಮೃತವನ್ನು ಮೊಗೆ ಮೊಗೆದು ಕುಡಿದ ಈ ಅಮೃತ ಚೇತನನು ತನ್ನ ಓದುಗರಿಗೆ ಕಾವ್ಯ ಕೃತಿಗಳ ಮೂಲಕ ಆನಂದ ಧಾರೆಯೆರೆದಿದ್ದಾನೆ.
ಸಾವಿಲ್ಲದ ಕಾವ್ಯ ನೀಡಿ ಹೋಗಿರುವ ಕೀಟ್ಸ್ ವಿನಯದ ಖಣಿಯಾಗಿದ್ದನು; ತನ್ನದು ಶಾಶ್ವತ ಕೊಡುಗೆಯೆಂಬ ಭ್ರಮೆ ಎಂದೂ ಇರದವನು. ಶುದ್ಧಾಂತಃಕರಣ, ಭಾವ ಶ್ರೀಮಂತಿಕೆ, ನಿರ್ವ್ಯಾಜ ಪ್ರೀತಿ, ಆಳವಾದ ಸೌಂದರ್ಯ ಪ್ರಜ್ಞೆ, ಬುದ್ಧಿ ಪ್ರಖರತೆ, ಅಪ್ರತಿಮ ಕಾವ್ಯ ಪ್ರತಿಭೆ, ಸ್ವೋಪಜ್ಞತೆ ಇವುಗಳಿಗೆಲ್ಲ ಮತ್ತೊಂದು ಹೆಸರು ಕೀಟ್ಸ್ ಎನ್ನಬಹುದು. ಆದರೆ ಅವನು ಅಲ್ಪಾಯುಷಿಯಾಗಿದ್ದದ್ದು ವಿಧಿಯ ವಿಕಟಾಟ. ಅನುವಂಶೀಯವಾಗಿ ಬಂದ ಕ್ಷಯರೋಗದಿಂದಾಗಿ ಈತನ ವಯಸ್ಸು ಕೇವಲ ಇಪ್ಪತ್ತೈದು ವರ್ಷ ಮೂರು ತಿಂಗಳು ಇಪ್ಪತ್ನಾಲ್ಕು ದಿನವಾಗಿತ್ತು. ಒಂದು ದಶಕದ ಅವಧಿಯಲ್ಲಿ ಹಲವು ದಶಕಗಳ ಬೃಹತ್ ಸಾಧನೆಯನ್ನು ಹಿಡಿದಿಟ್ಟು ಹೋದ ಮಹಾ ಚೈತನ್ಯವದು.
ಕೀಟ್ಸ್ನ ಚರಿತ್ರಕಾರರಲೊಬ್ಬರಾದ ಸಿಡ್ನಿ ಕೊಲ್ವಿನ್ ಹೇಳುವಂತೆ, ಇವನು ರೋಮ್ದಲ್ಲಿ ಮರಣಶೆಯ್ಯೆಯಲ್ಲಿದ್ದಾಗ, ಸಾವು ಸಮೀಪಿಸುತ್ತಿದ್ದಾಗ, ಮಿತ್ರ ಸೆವರ್ನ್ನು ಆರೈಕೆಯಲ್ಲಿ ತೊಡಗಿದ್ದಾಗ, ತನ್ನ ಸಮಾಧಿಯ ಮೇಲಿನ ಚರಮ ಲೇಖವು(ಇಠಿiಣಚಿಠಿh) ನೀರ ಮೇಲೆ ಬರೆದ ಹೆಸರಿನವನು ಇಲ್ಲೊರಗಿಹನು(ಊeಡಿe ಟies oಟಿe ತಿhose ಟಿಚಿme ತಿಚಿs ತಿಡಿiಣ iಟಿ ತಿಚಿಣeಡಿ) ಎಂಬುದಿರಬೇಕೆಂದು ಬಯಸಿದನು. ಆದರೆ ಇಂದು ಕೀಟ್ಸ್ನ ಹೆಸರು ಓಲೆ ಲಿಖಿತಾಕ್ಷರ ಆಗದೆ ಶಿಲೆ ಲಿಖಿತಾಕ್ಷರ ಅಷ್ಟೇ ಏಕೆ ಜಗತ್ತಿನ ಕಾವ್ಯಪ್ರೇಮಿಗಳ ಹೃದಯ ಲಿಖಿತಾಕ್ಷರ ಆಗಿದೆ. ಕವಿಯ ಈ ಆಶಯವನ್ನೇ ಧ್ವನಿಸುವ ನೀರ ಮೇಲೆ ನೆನಪ ಬರೆದು… ಶೀರ್ಷಿಕೆಯ ಅಪರೂಪದ ಕೃತಿಯನ್ನು ರಾಗಂ ಕನ್ನಡಿಗರಿಗೆ ನೀಡಿದ್ದಾರೆ.
ಪ್ರಸ್ತುತ ಕೀಟ್ಸನ ಬಾಳ ಕಥೆ ಎಚ್ಚರದಿಂದ ಓದುವವರಿಗೆ ಹುಚ್ಚು ಹಿಡಿಸುವ ಕೃತಿಯಾಗಿದೆ. ಕೀಟ್ಸ್ನ ವಿನಯಪೂರ್ವಕ ಸ್ವವಿಮರ್ಶೆಯನ್ನು ಮೆಚ್ಚಿದರೂ ಅವನು ಅಮರತ್ವ ಪಡೆದ ಮಹಾ ಚೈತನ್ಯವೆಂದು ಹೆಜ್ಜೆ ಹೆಜ್ಜೆಗೂ ಪ್ರತಿಪಾದಿಸುತ್ತಾರೆ ರಾಗಂ. ಈ ಮಾತನ್ನು ಹೇಳದ ಇಂಗ್ಲಿಷ್ ಕಾವ್ಯ ವಿಮರ್ಶಕರು ಇಲ್ಲವೆಂದೇ ಹೇಳಬಹುದು. ಕೀಟ್ಸ್ನ ಸಮಕಾಲೀನ ಇನ್ನೊಬ್ಬ ಧೀಮಂತ ಕವಿ ಶೆಲ್ಲೆ ಅವನ ಸಾವಿನಿಂದ ದುಃಖಿತನಾಗಿ ಂಜoಟಿಚಿis ಎಂಬ ಹೆಸರಿನಿಂದ ಶೋಕ ಗೀತೆಯೊಂದನ್ನು ಬರೆದು ಅದರಲ್ಲಿ ಸತ್ತದ್ದು ಸಾವು, ಅವನಲ್ಲ(ಏeeಣs ಜeಣh is ಜeಚಿಜ, ಟಿoಣ he) ಎಂದು ಅವನ ಅಮರತ್ವವನ್ನು ಘೋಷಿಸಿದನು.
ಇಹ ಮತ್ತು ಇಹೋತ್ತರಗಳೆರಡನ್ನು, ಕಾಲಾತೀತವನ್ನು ತಬ್ಬಿಕೊಂಡು ಹಬ್ಬಬೇಕು, ಹಿಗ್ಗ ಬೇಕು ಎನ್ನುವ ಉತ್ಕಟ ತವಕದ ಕೀಟ್ಸ್ನ ಜಾಯಮಾನವೇ ರಾಗಂ ಅವರದು. ಕೀಟ್ಸ್ನ ಹಾಗೆಯೇ ಕಾವ್ಯಪೀಡಿತ, ಪ್ರೀತಿಪೀಡಿತ ಕವಿ ರಾಗಂ ಈಗ ಕೀಟ್ಸ ಪೀಡಿತನಾಗಿರುವುದು ಅಚ್ಚರಿಯೇನಲ್ಲ! ಪ್ರಪ್ರಥಮವಾಗಿ ಕವಿಯಾಗಿರುವ ಲೇಖಕನೊಬ್ಬನು ಇನ್ನೊಬ್ಬ ಕವಿಯ ಜೀವನಗಾಥೆಯನ್ನು ಬರೆದರೆ ಅದು ಯಾವ ಸ್ವರೂಪದ್ದಾಗಬಲ್ಲದು ಎನ್ನುವುದಕ್ಕೆ ನಿದರ್ಶನ ಈ ಕೃತಿ ನೀರ ಮೇಲೆ ನೆನಪ ಬರೆದು…. ಇದು ಜೀವನ ಕಥನವಷ್ಟೇ ಆಗಿರದೆ ಒಂದು ಅಸಾಧಾರಣ ವ್ಯಕ್ತಿತ್ವದ ಬಾಳ ಗತಿಯನ್ನು ಕವನವಾಗಿಸಿದ, ಕ್ವಚದಪಿ ಕಣ್ಣಿಗೆ ಬೀಳುವ, ಗದ್ಯಕೃತಿ. ಕೇವಲ ಮಾಹಿತಿ ನೀಡುವ ಪುಸ್ತಕವಲ್ಲ; ಒಂದು ಭವ್ಯ ಬಾಳಿನ ಒಳಹೊರಗನ್ನು ಬೆರಗುಗೊಳಿಸುವಂತೆ ತೆರೆದಿಡುವ ರಚನೆ. ದರ್ಶನವಿಲ್ಲದೆ ಶ್ರೇಷ್ಠ ಕಾವ್ಯ ಹುಟ್ಟುವುದಿಲ್ಲ. ಕೀಟ್ಸನದು ನಿತಾಂತ ಸತ್ವದ ದೃಶ್ಯ ಕಾವ್ಯ. ಕವಿತ್ವದ ಕಾರಂಜಿಯಾಗಿರುವ ರಾಗಂ ಆ ದರ್ಶನವನ್ನು ಧ್ಯಾನಸ್ಥವಾಗಿ ಅವಗತ ಮಾಡಿಕೊಂಡು ಇದರಲ್ಲಿ ಹಿಡಿದಿಟ್ಟಿದ್ದಾರೆ.
ಈ ಪುಸ್ತಕವು ಕೀಟ್ಸನ ಪತ್ರಗಳನ್ನು ಆಧಾರವಾಗಿಟ್ಟುಕೊಂಡು ರಚಿತವಾಗಿದೆ. ಲೇಖಕರಿಗೆ ಲಭ್ಯವಿರುವ ೧೬೪ ಪತ್ರಗಳಿಂದ -ಫ್ಯಾನಿ ಬ್ರೌನಳಿಗೆ ಬರೆದ ಪತ್ರಗಳೂ ಸೇರಿ- ಮಹತ್ವದ ಅಂಶಗಳನ್ನು ಆಯ್ಕೆ ಮಾಡಿ, ಅದಕ್ಕೆ ಪೂರಕವಾಗಿ ಪುಷ್ಟೀಕರಿಸುವ ಕವನಗಳಿಂದ ಉದ್ಧೃತಗಳನ್ನು ಕೊಟ್ಟು, ಅಲ್ಲಲ್ಲಿ ಟಿಪ್ಪಣಿಗಳನ್ನು ಮನೋಜ್ಞವಾಗಿ ಚಿತ್ರಿಸುತ್ತದೆ ಈ ಜೀವನ ಚರಿತ್ರೆ. ಕವಿಯ ಆಪ್ತ ಗೆಳೆಯರಾಗಿದ್ದ ಹೇಡನ್, ರೇನಾಲ್ಡ್ಸ್, ಜೇಮ್ಸ್ ರೈಸ್, ಲೀ ಹಂಟ, ಚಾರ್ಲಸ್ ಬ್ರೌನ್, ಬೇಲಿ, ಸಹೋದರ ಜಾರ್ಜ್ ಮತ್ತು ಪ್ರೇಯಸಿ ಫ್ಯಾನಿ ಬ್ರೌನ್ ಇವರೊಡನೆ ವ್ಯವಹರಿಸಿದ ಪತ್ರಗಳಿವು.
ಟಿ.ಬಿ. ರೋಗದಿಂದಾಗಿ ಬಳಲುತ್ತಿದ್ದಾಗ, ಅಗಲಿದ ತಾಯಿ ಮತ್ತು ಸಹೋದರ ಥಾಮಸ್ಸರ ನೆನಪು ಸದಾ ಕೊರೆಯುತ್ತಿದ್ದಾಗ ತಾನು ಅನುಭವಿಸುತ್ತಿದ್ದ ಖಿನ್ನತೆ, ನಿರಾಸೆ, ದುಗುಡ ದುಮ್ಮಾನಗಳನ್ನು ಮಿತ್ರರೊಡನೆ ಕೆಲವು ಪತ್ರಗಳಲ್ಲಿ ಹಂಚಿಕೊಂಡಿದ್ದಾನೆ. ಸ್ನಿಗ್ಧಜನಸಂವಿ ಭಕ್ತಂ ಹಿ ದುಃಖಂ ಸಹ್ಯವೇದನಂ ಭವತಿ ಎಂದು ಕನಕದಾಸರು ಹೇಳುವಂತೆ ಹಾಗೆ ಮಾಡುವುದರಿಂದ ಈ ಕವಿಯ ಮನದ ಕ್ಲೇಶ ಸಹನೀಯವೆನಿಸಿರ ಬೇಕು. ಎಲ್ಲವೂ ಪತ್ರಗಳಲ್ಲಿ. ಪೂರ್ವ ಕವಿಗಳಾದ ಸ್ಪೆನ್ಸರ್, ಶೇಕ್ಸಪಿಯರ್, ಮಿಲ್ಟನ್ನರನ್ನು ಗೌರವಪೂರ್ವಕ ಸ್ಮರಿಸಿದರೆ ಇನ್ನು ಕೆಲವು ಓಲೆಗಳಲ್ಲಿ ಸಮಕಾಲೀನ ಕವಿಗಳಾದ ವರ್ಡ್ಸವರ್ಥ, ಕೋಲರಿಜ್, ಬೈರನ್, ಶೆಲ್ಲೆ ಮುಂತಾದವರನ್ನು ಶ್ಲಾಘಿಸಿದ್ದಾನೆ. ಕೆಲವು ಸಂದರ್ಭಗಳಲ್ಲಿ ಇವನು ತನ್ನ ಸಾಹಿತ್ಯಕ ಚಿಂತನೆಗಳನ್ನು ಮತ್ತು ಒಳನೋಟಗಳುಳ್ಳ ವ್ಯಾಖ್ಯೆಗಳನ್ನು ದಾಖಲಿಸಿದ್ದಾನೆ. ಕೀಟ್ಸ್ನ ಪತ್ರ ಸರಣಿಯಲ್ಲಿ ಮೂಡಿ ಬಂದಿರುವ ಅವನ ಸೃಜನಾತ್ಮಕ, ವೈಚಾರಿಕ ವಸ್ತು ವಿಶೇಷತೆಗಳನ್ನು ಸೋಸಿ ತೆಗೆದು ತನ್ಮೂಲಕ ಕವಿ ಕೀಟ್ಸನ ನಿಜವಾದ ವ್ಯಕ್ತಿತ್ವವನ್ನು ತೋರಿಸುವ ಈ ಕೃತಿ ಸಾರ್ಥಕ ರೀತಿಯಲ್ಲಿ ಸುವರ್ಣ ಸ್ಮಾರಕ ಸೌಧವನ್ನು ನಿರ್ಮಿಸಿದೆ. ಈ ಪತ್ರಗಳು ಸ್ಪಷ್ಟಪಡಿಸುವ ಇನ್ನೊಂದು ಸತ್ಯವು ಗಮನಾರ್ಹವಾಗಿದೆ. ಬಹಳ ಜನ ವಿಮರ್ಶಕರು ತನ್ನ ಕಾಲವನ್ನು ಕಡೆಗಣಿಸಿ ಕೀಟ್ಸ್ನು ಗತಕಾಲಕ್ಕೆ(ಗ್ರೀಕ ಮತ್ತು ಮಧ್ಯಯುಗೀನ ಕಾವ್ಯ, ಇತಿಹಾಸ, ಸಂಸ್ಕೃತಿಗೆ) ಪಯಣಿಸುವ ಪಲಾಯನವಾದಿ ಕವಿ ಎಂದು ಟೀಕಿಸಿದ್ದಾರೆ. ಅದು ಸರಿಯಾದ ವಿಮರ್ಶೆ ಅಲ್ಲವೆಂದು ಈ ಪತ್ರಗಳನ್ನು ಓದಿದರೆ ಗೊತ್ತಾಗುತ್ತದೆ. ಕೀಟ್ಸ್ನು ತನ್ನ ಕಾಲಕ್ಕೆ ಸ್ಪಂದಿಸುತ್ತ ತನಗೆ ದಕ್ಕಿದ ಬಾಳನ್ನು ಹೇಗೆ ಅರ್ಥಪೂರ್ಣವಾಗಿ ಬಾಳಿದನೆಂಬುದನ್ನು ರಾಗಂ ಪರಿಣಾಮಕಾರಿಯಾಗಿ ತೋರಿಸಿ ಕೊಟ್ಟಿದ್ದಾರೆ.
ಸೌಂದರ್ಯ ಕುರಿತ ಕೀಟ್ಸ್ನ ಸುಪ್ರಸಿದ್ಧ ಉಕ್ತಿಯನ್ನು(ಃeಚಿuಣಥಿ is ಣಡಿuಣh, ಣಡಿuಣh is beಚಿuಣಥಿ) ಪ್ರಸ್ತಾಪಿಸುತ್ತ ಕವಿಯ ಆಳವಾದ ಸೌಂದರ್ಯ ಪ್ರಜ್ಞೆಯನ್ನು ಇಲ್ಲಿ ಚರ್ಚಿಸಲಾಗಿದೆ. ಅದು ಭೌತಿಕ, ಭಾವಾತ್ಮಕ, ಬೌದ್ಧಿಕ ಮತ್ತು ಆಧ್ಯಾತ್ಮಕ ಚತುರ್ಮುಖ ಸೌಂದರ್ಯ ದೃಷ್ಟಿ, ಸಮಗ್ರ ಸೌಂದರ್ಯ ದೃಷ್ಟಿ. ಸಮಗ್ರ ದೃಷ್ಟಿಯಿದ್ದ ಕಲಾವಿದನು ಮಾತ್ರ ತಾನು ಚಿತ್ರಿಸುತ್ತಿರುವ ವಸ್ತುವಿನೊಡನೆ ತಾದಾತ್ಮ್ಯ ಸಾಧಿಸಿಯೂ ಅದರಿಂದ ಹೊರಗೆ ನಿಲ್ಲಬಲ್ಲನು, ಕಮಲ ಪತ್ರದ ಮೇಲಿರುವ ನೀರಿನ ಹನಿಯಂತೆ. ಇದೇ ಅರ್ಥದಲ್ಲಿ ಅವನು ಸಾಹಿತ್ಯಸೃಷ್ಟಿಯನ್ನು ಕುರಿತು ಆಡಿದ ಮಾತೊಂದುಂಟು. ಅದು ಓegಚಿಣive ಛಿಚಿಠಿಚಿbiಟiಣಥಿ. ಅಂದರೆ ಶ್ರೇಷ್ಠ ಕವಿಯದು ಅವನಿಗಂಟದ ನಿರ್ಲಿಪ್ತ ಭಾವ, ಒಂದು ಬಗೆಯ ಸೃಜನಾತ್ಮಕ ಸಾಕ್ಷೀ-ಭಾವ; ನಿಜವಾದ ಸಾಹಿತ್ಯಸೃಷ್ಟಿಯ ಸಾರೋಕ್ತಿ ಇದು.
ಐಂದ್ರಿಕ ಜಗತ್ತನ್ನು ಸೃಷ್ಟಿಸುತ್ತಲೇ ಅದರಾಚೆಗಿನ ಹೊಳಹುಗಳನ್ನು, ನಿಗೂಢತೆಗಳನ್ನು ಮಿಂಚಿಸುತ್ತದೆ ಕೀಟ್ಸ್ನ ಕಾವ್ಯ. ಅವನಲ್ಲಿ ವೈರುಧ್ಯಗಳು ಸಂಧಿಸುವ ಬಿಂದು ಒಂದುಂಟು. ಅದು ಸೂಕ್ಷ್ಮ ಓದುಗನನ್ನು ಸೆಳೆದು ನಿಲ್ಲಿಸುತ್ತದೆ. ಈ ವಿಶಿಷ್ಟ ಕಾವ್ಯ ಗುಣವನ್ನು ಗುರುತಿಸುತ್ತ ಲುಯಿ ಮ್ಯಾಕ್ನೀಸ ಎಂಬ ವಿಮರ್ಶಕನು ಹೇಳುತ್ತಾನೆ- ಕೀಟ್ಸ್ನೊಬ್ಬ ಇಂದ್ರಿಯಾನಂದದ ಅನುಭಾವಿ(ಂ seಟಿsuous musಣiಛಿ). ಈ ಪುಸ್ತಕದಲ್ಲಿ ಉದ್ಧರಿಸಿರುವ ಕಾವ್ಯ ಕುರಿತ ಕೀಟ್ಸ್ನ ಮಾತನ್ನು ಪರಾಂಬರಿಸಬೇಕು: ಅದು(ಕಾವ್ಯ) ಎಲ್ಲವೂ ಆಗಿದೆ ಮತ್ತು ಏನೂ ಇಲ್ಲ(Iಣ is eveಡಿಥಿಣhiಟಿg ಚಿಟಿಜ ಟಿoಣhiಟಿg) ಇದೊಬ್ಬ ಸಂತನಾಡುವ ಮಾತಿನಂತಿದೆ. ಈ ಆಧ್ಯಾತ್ಮದ ಆತ್ಮಭಾವದ ಒಳಹರಿವನ್ನು ಕೀಟ್ಸ್ನ ಕಾವ್ಯದಲ್ಲಿದ್ದಂತೆ ಅವನ ಪತ್ರಗಳಲ್ಲೂ ಇರುವುದನ್ನು ರಾಗಂ ಅವರ ಈ ಪುಸ್ತಕದಲ್ಲಿ ಚೆನ್ನಾಗಿ ಗುರುತಿಸಲಾಗಿದೆ.
ಈ ಪುಸ್ತಕದ ನಲ್ವತ್ತೊಂಬತ್ತು ಅಧ್ಯಾಯಗಳಲ್ಲಿ ಒಂದಿಲ್ಲ ಒಂದು ಪರಿಯಲ್ಲಿ ದಾಂಗುಡಿಯಾಗಿ ಹಬ್ಬಿದ್ದು ಪ್ರೀತಿ ಎಂಬ ಬಳ್ಳಿ. ಈ ಮೊದಲೇ ಹೇಳಿದಂತೆ ಕವಿ ಕೀಟ್ಸ್ನನ್ನು ಆವರಿಸಿದ್ದು ಕಾವ್ಯವೊಂದೇ ಅಲ್ಲ ಪ್ರೀತಿಯೆಂಬ ಅವನ ಜೀವದುಸಿರೂ ಕೂಡ. ಅವನ ಜೀವನದುದ್ದಕ್ಕೂ ಸಾಗಿರುವ ಅದರ ಜಾಡು ಹಿಡಿದು ರಾಗಂ ಸಾಗಿದ್ದು ವಿಸ್ಮಯವೆನಿಸುತ್ತದೆ, ಕಲಾಜನ್ಯ ಸಂತಸ ನೀಡುತ್ತದೆ. ತಾಯಿಯ ಮೇಲಿನ ಎಲ್ಲಿಲ್ಲದ ಪ್ರೀತಿ, ಸಹೋದರರು ಮತ್ತು ಸಹೋದರಿಯ ಮೇಲಿರುವ ಕಕ್ಕುಲತೆ, ಮಿತ್ರರತ್ತ ಸೆಳೆವ ಸ್ನೇಹ, ಪ್ರೇಯಸಿ ಫ್ಯಾನಿಯ ಮೇಲಿನ ಅನುರಾಗ, ಪ್ರಾಣಿ-ಪಕ್ಷಿ-ನೆಲ-ಜಲ-ಗುಡ್ಡ-ಬೆಟ್ಟ ಆಕಾಶ ಎಲ್ಲವನ್ನೊಳಗೊಂಡ ಸಮಸ್ತ ನಿಸರ್ಗವನ್ನಪ್ಪಿಕೊಳ್ಳುವ ಅವನ ಒಲವು, ಪ್ರೇಮ ಇದೆಲ್ಲ ಬಹಿರ್ಪ್ರಾಕಟ್ಯಗೊಂಡದ್ದು ಆತನ ಹೃದಯ ತುಂಬಿದ ಧವಳ ಪ್ರೀತಿಗಂಗೋತ್ರಿಯಿಂದ.
ಪ್ರೀತಿಯ ಹೊರಬಣ್ಣ ಯಾವುದೇ ಇದ್ದರೂ, ಅದು ಯಾವ ಆಯಾಮದಲ್ಲಿ ಸಂಚರಿಸಿದರೂ, ಅದರ ಮೂಲ ಬಣ್ಣ ಶ್ವೇತ. ಕೀಟ್ಸ್ನ ಹತ್ತಿರ ಕೃತ್ರಿಮತೆ ಎಂದೂ ಸುಳಿಯಲಿಲ್ಲ; ಅವನದು ದೇವತಾ ಸ್ವಭಾವ, ದೇವತಾ ಚರ್ಯೆ. ಈ ಪ್ರೀತಿ ಸ್ರೋತಸ್ಸು ಕೀಟ್ಸ್ನ ಪತ್ರಗಳಲ್ಲಿ ಅನುಸ್ಯೂತವಾಗಿ ಹರಿದು ಬಂದದ್ದನ್ನು ಈ ಕೃತಿಯಲ್ಲಿ ನೋಡಬಹುದು. ಸ್ತ್ರೀಯ ವಿಷಯಕ್ಕೆ ಅವನಿಗಿದ್ದ ಧೋರಣೆಯನ್ನು ಕುರಿತು ಇಲ್ಲಿ ಪ್ರಸ್ತಾಪಿಸಲಾಗಿದೆ. ಸ್ತ್ರೀಯರನ್ನೂ ಗೌರವ ಭಾವದಿಂದ ನೋಡುವ ಈ ಕವಿಗೆ ಯಾಕೊ ಒಂದು ಬಗೆಯ ಗೊಂದಲವಿದ್ದಂತೆ ತೋರುತ್ತದೆ; ಒಮ್ಮೆ ಆಕರ್ಷಣೆ, ಮತ್ತೊಮ್ಮೆ ವಿಕರ್ಷಣೆಯ ಭಾವವಿತ್ತು. ಇರಲಿ.
ತಾಯಿಯ ಹಾಗೆಯೇ ತಮ್ಮನ ಸಾವಿನಿಂದ ತ್ರಸ್ತನಾಗಿದ್ದರೂ, ಟಿ.ಬಿ ರೋಗದ ಕಾರಣದಿಂದ ಫ್ಯಾನಿಯೊಡನೆ ಮಾಡಿಕೊಂಡಿದ್ದ ಮದುವೆಯ ನಿಶ್ಚಿತಾರ್ಥ ಮುರಿದು ಹೋದದ್ದರಿಂದ ಘಾಸಿಗೊಂಡವನಾಗಿದ್ದರೂ, ಸ್ವತಃ ರೋಗದ ಕೆಂಡವನ್ನೊಡಲೊಳಗಿಟ್ಟುಕೊಂಡು ಸಾವಿನ ನೆರಳಲ್ಲಿ ಬದುಕಿದ್ದರೂ ಕೊನೆ ಗಳಿಗೆವರೆಗೆ ಕಾವ್ಯ ರಚನೆಯಲ್ಲಿ ತೊಡಗಿದ್ದನೆನ್ನುವುದು ಕೀಟ್ಸ್ನ ಸಮಚಿತ್ತವನ್ನು, ಅವನ ನಿರೀಕ್ಷೆಯನ್ನು ನಾವು ಕೇವಲ ಊಹಿಸಬಹುದಷ್ಟೆ.
ಈ ಪುಸ್ತಕವನ್ನು ಪ್ರವೇಶಿಸುತ್ತಿದ್ದಂತೆಯೇ ಓದುಗನನ್ನು ಅಯಸ್ಕಾಂತದಂತೆ ಸೆಳೆದುಬಿಡುವ ಸಂಗತಿಯೆಂದರೆ ಭಾಷೆ ಮತ್ತು ನಿರೂಪಣಾ ಶೈಲಿ. ಚಿಕ್ಕ ಚಿಕ್ಕದಾದ ವಾಕ್ಯಗಳು, ಸುಂದರ ನುಡಿಗಟ್ಟು, ಆಪ್ತವೆನಿಸುವ ಮಾತಿನ ವೈಖರಿ, ಕೃತಿಗೆ ಹೊಸತನವನ್ನು, ಮೆರಗನ್ನು ತಂದಿವೆ. ಕುತೂಹಲ ಕುದುರೆ ನಮ್ಮನ್ನು ಕೂರಿಸಿಕೊಂಡು ಹೊಸ ಹೊಸ ಮಜಲುಗಳನ್ನು ದಾಟಿಸುತ್ತ ಓಡುತ್ತದೆ; ಇದೊಂದು ಮುದ ನೀಡುವ ಓದು ಯಾನ.
ಬದುಕಬಾರದೆ ಬದುಕು…!? ಈ ಕೀಟ್ಸ್ ಜೀವನ ಚರಿತ್ರೆ ನಿಸ್ಸಂದೇಹವಾಗಿ ಕನ್ನಡ ಸರಸ್ವತಿಯ ಮುಡಿಗೇರಿಸಿದ ಹೊಚ್ಚ ಹೊಸ ಮಲ್ಲಿಗೆ; ಕನ್ನಡ ಓದುಗರ ಸಾಹಿತ್ಯ ಜ್ಞಾನವನ್ನು, ಸಂಸ್ಕೃತಿಯನ್ನು, ಸಂತೋಷವನ್ನು ವರ್ಧಿಸುವ ಕೃತಿ.
ಕೃತಿಕಾರ ರಾಗಂ ಅವರಿಗೆ ಅನಂತ ಅಭಿನಂದನೆಗಳು. ಅವರ ಲೇಖನಿಯಿಂದ ಇನ್ನೂ ಹೆಚ್ಚು ಸಮೃದ್ಧವಾದ ಫಸಲು ಕನ್ನಡಕ್ಕೆ ಒದಗಿ ಬರಲೆಂದು ಹಾರೈಸುತ್ತೇನೆ.
೦೭.೦೨.೨೦೧೮ ಡಾ. ಆರ್.ಕೆ. ಕುಲಕರ್ಣಿ
ಇಲ್ಲಿಂದ ಮುಂದೆ ಶಬ್ಧವಿಲ್ಲ…
ಬರೆಯಬಾರದು, ಬರೆಯಿಸಲ್ಪಡಬೇಕು. ಬರಹ ಎನ್ನುವುದು ಹಂಬಲದ ಹಲವು ಹಾದಿಗಳ ಮೂಲಕ ಬೆಳಕಾಗಿ ನಮ್ಮೊಳಗಿಳಿದು, ಬೆರೆತು, ಸ್ಥಿತಿಸಿ, ಮತ್ತೆ ಮಾಗಿದ ಹೊತ್ತಿಗೆ ಹೊರಬರಲು ನಮ್ಮನ್ನು ಅದು ಸಾಧನವಾಗಿಸಿಕೊಳ್ಳಬೇಕು. ಈ ಅರ್ಥದಲ್ಲಿ ನಮ್ಮಿಂದ ನಡೆಯುವ ರಚನಾ ಕಾರ್ಯಗಳಿಗೆ ನಾವು ಬರೀ ವಾಹಕರಾಗಬೇಕು, ಸಾಕ್ಷಿಯಾಗಬೇಕಷ್ಟೆ. ಬರಹ ಘಟಿಸಬೇಕು ಪ್ರೀತಿಯಂತೆ. ಅಂಥ ಘಟನೆಗಳು ಮಾತ್ರ ಕಾಲ ಕಾಡುವ ಕೃತಿ-ಕಾರ್ಯಗಳಾಗಿ, ಸಮಾಜಕ್ಕೆ ಆದರ್ಶಗಳಾಗಿ ಉಳಿಯುತ್ತವೆ.
ಹೀಗೆ ಉಳಿಯುವ ಕಾರ್ಯಗಳು ನಮ್ಮಿಂದ ನಿರೀಕ್ಷಿಸುವುದು ನಿಷ್ಠೆಯನ್ನು. ಸಂಪೂರ್ಣ ನಿಷ್ಠೆಯನ್ನು. ಸಾಹಿತ್ಯದ ಎಲ್ಲ ಮೇರು ರಚನೆಗಳ ಹಿಂದೆ ಇಂಥ ನಿಷ್ಠೆ ಕಾರ್ಯ ಮಾಡಿದೆ. ಅಂತೆಯೇ The foundation of all good and lasting work in literature is entire sincerity to oneself ಎಂದು ಹೇಳುವುದು. ಕೊನೆ ಬಾಳುವ ಕಲಾಕೃತಿಯ ಮುಖ್ಯ ಆಧಾರ ‘ನಿಷ್ಠೆ. ಅದು ಬರೆದುದಲ್ಲ, ಬರೆಯಿಸಲ್ಪಟ್ಟದ್ದು.
ಇದನ್ನು ನಾನು ಯಾವುದೇ ಸಾಹಿತ್ಯವಾದಗಳನ್ನು ಮುಂದಿರಿಸಿಕೊಂಡು ಮಂಡಿಸುತ್ತಿಲ್ಲ. ಬದಲಾಗಿ ಬರಹದ ದೀರ್ಘ ಪಯಣದ ನನ್ನ ಅನುಭವಗಳನ್ನು ಮುಂದಿರಿಸಿಕೊಂಡು ದಾಖಲಿಸುತ್ತಿದ್ದೇನೆ. ಈ ಅರ್ಥದಲ್ಲಿ ನನ್ನ ಬಹುಪಾಲು ಕೃತಿಗಳು ಬರೆದವುಗಳಲ್ಲ, ಬರೆಯಿಸಲ್ಪಟ್ಟವುಗಳು, ಈ ಪ್ರಸ್ತುತ ಕೃತಿಯೂ ಸೇರಿಕೊಂಡು.
ಜಾನ್ ಕೀಟ್ಸ್, ಕಳೆದ ಹದಿನೇಳು ವರ್ಷಗಳಿಂದ ಕಾವ್ಯ ಚಿಂತನೆಯ ನನ್ನ ಅಭಿವ್ಯಕ್ತಿಗಳಲ್ಲಿ ವಾದ, ಉದಾಹರಣೆ, ರೂಪಕ, ಸಿದ್ಧಾಂತವಾಗಿ ಪದೇ ಪದೇ ನನ್ನಿಂದ ಉಲ್ಲೇಖಗೊಳ್ಳುತ್ತಲೇ ಬಂದಿದ್ದಾನೆ. ಈ ಮಧ್ಯದಲ್ಲಿ ಹೊಸಪೇಟೆಯ ಯಾಜಿ ದಂಪತಿಗಳ ಅನುರೋಧದ ಮೇರೆಗೆ ಭಾರತದ ಬಾವುಟದ ಚರಿತ್ರೆಯನ್ನು ಆದರಿಸಿದ ಜಗದ್ವಂದ್ಯ ಭಾರತಂ ಕಾದಂಬರಿ ರಚನೆಯಲ್ಲಿ ನಾನು ತೊಡಗಿಕೊಂಡದ್ದರಿಂದ ಕೀಟ್ಸ್ ಹಾಗೆಯೇ ಉಳಿದುಕೊಂಡ.
ಸೃಜನಶೀಲವಾದುದ್ಯಾವುದನ್ನೂ ದಿನಾಂಕುಗಳ ಕರಾರು ಒಕ್ಕತೆಗಾಗಿ ಆಗಲಿ, ಒತ್ತಾಯಕ್ಕಾಗಲಿ ಮಾಡಿದವನಲ್ಲ ನಾನು. ಕೆಲವೊಮ್ಮೆ ಓದದ, ಬರೆಯದ ಒಂದೇ ಒಂದು ಫೋಟೋ ತೆಗೆಯಿಸಿಕೊಳ್ಳದ ಹಲವು ಸೊಂಬೇರಿ ತಿಂಗಳುಗಳಿರುತ್ತವೆ. ಹಾಗೆಯೇ ಇರುತ್ತವೆ ಮತ್ತೆ ಕೆಲವು ದಿನಗಳು, ಬರೀ ಬರಹವನ್ನು ಅವಲತ್ತುಕೊಂಡು. ಬರೆಯುತ್ತಿರುವುದು ಕೆಲವೊಮ್ಮೆ ಗಕ್ಕನೆ ನಿಂತು ಮತ್ತಿನ್ನ್ಯಾವುದೊ ಬರೆಯಿಸಿಕೊಳ್ಳಲಾರಂಭಿಸು ತ್ತದೆ. ಎತ್ತಿಕೊಂಡ ಇನ್ನ್ಯಾವುದೊ ಇದ್ದಕ್ಕಿದ್ದಂತೆ ಪಕ್ಕಕ್ಕೆ ಸರಿದು ಮಗದೊಂದ್ಯಾವುದಕ್ಕೊ ದಾರಿ ಮಾಡಿಕೊಡುತ್ತದೆ. ಹೀಗೆಯೇ ರಚನೆಯಾದವುಗಳು ನನ್ನ ಬಹುಪಾಲು ಕೃತಿಗಳು.
ಹೀಗೆಯೇ ವಿಳಂಬಗೊಂಡ ಕೀಟ್ಸ್ ಇದ್ದಕ್ಕಿದ್ದಂತೆ ೨೦೧೯ರಲ್ಲಿ ಆರಂಭವಾಗಿ ದಿನಾಂಕ ೦೬ ಏಪ್ರಿಲ್ ೨೦೨೦ಕ್ಕೆ ಒಂದು ಸ್ವರೂಪ ಪಡೆಯಿತು. ಇದು ಭಾರತದಲ್ಲಿ ಕೊರೋನಾದ ಮರಣ ಮದ್ದಳೆಯ ಕಾಲ. ಒಟ್ಟು ೨೦೧೬ರಿಂದ ೨೦೨೦, ಅಂದರೆ ನಾಲ್ಕು ವರ್ಷಗಳ ಅವಧಿ ಕವಿತೆಯಾಗಿ ಕಾಡಿದ್ದಾನೆ ಕೀಟ್ಸ್ ನನ್ನನ್ನು.
ಇಂದಿಗೆ ೧೭೧ ವರ್ಷಗಳ ಹಿಂದೆ ನೂರೆಂಟು ನೋವುಗಳೊಂದಿಗೆ ಬದುಕಿದ್ದ ಈ ಕೀಟ್ಸ್, ತನ್ನ ಕಾವ್ಯದ ಮೂಲಕ ಹೇಳಿದ್ದಾದರೂ ಏನು? ಜೀವನದೊಂದಿಗೆ ಅವನ ಹಠವಾದರೂ ಏನು? ಎಂದು ಕೇಳಿದರೆ ನನಗೆ ಥಟ್ಟನೆ ನೆನಪಾಗುವುದು ಕಡಂಗೋಡ್ಲು ಅವರ ನಾಲ್ಕು ಸಾಲುಗಳು-
ಮರೆತು ಹೋಗಲಿ ದುಗುಡ, ಜಾರಿಹೋಗಲಿ ವಿರಹ
ಕಂಬನಿಯ ಬುಗ್ಗೆ ಬತ್ತಲಿ, ಸುಯ್ಯ ರೋಧನದ ಮಿಡುಕ ಮರೆಹೋಗಲಿ
ಉಸಿರು ಹಸರಿಸಲಿ ಕಮ್ಮಲರ ನೀಳೆಸಳಿನಲಿ.
ಆಗ, ಪುಲಕಗಳ ಗುಡಿಕಟ್ಟಿ, ಉತ್ಸವದಿ ಕುಣಿದು
ಮೃತ್ಯು ಆಗಮನದ ವಾರ್ತೆಯನು ಮರೆಸಿ, ಮರೆತಿರುವೆ.
ಇದೆಲ್ಲ ಪ್ರಶ್ನೆಯಲ್ಲ ನನಗೆ. ಪ್ರಶ್ನೆ ಇರುವುದು ಒಟ್ಟು ಈ ಬರಹ ಪ್ರಕ್ರಿಯೆಯ ಕುರಿತು. ಪ್ರಪಂಚದ ಅಗಾಧ ಶಕ್ತಿಯಲ್ಲಿ ತೃಣಮಾತ್ರದವನಾದ ಮನುಷ್ಯನನ್ನು ಸಾಧನವಾಗಿಸಿಕೊಂಡು ವಿಶ್ವಾತ್ಮಕತೆ ಪ್ರತಿಕ್ರಿಯಿಸಿದ ರೀತಿ, ಅದು ವೇದ್ಯವಾಗಿಸಿದ ಬದುಕು ಹಾಗೂ ಅದರ ಲೀಲಾ ಪ್ರಪಂಚ, ಅದು ಮನುಷ್ಯ ದೃಷ್ಟಿಗೆ ಒದಗಿಸುವ ಒಂದು ನಿರ್ದಿಷ್ಟ ಕೋನ, ದೃಷ್ಟಿಕೋನ. ಇದೆಲ್ಲದರ ಹಿನ್ನೆಲೆಯಲ್ಲಿಯೇ ಹೇಳಿದ್ದು Art is life seen through a temperament, ಕಲೆ ಅಥವಾ ಸಾಹಿತ್ಯವೆಂದರೆ ಒಂದು ವಿಶಿಷ್ಟ ಮನೋಧರ್ಮದ ಮೂಲಕ ನೋಡಿದ ಜೀವನ ಎಂದು. ಆದರೆ ಹೀಗೆ ಒಂದು ದೃಷ್ಟಿಕೋನದ ಮೂಲಕ ಜೀವನವನ್ನು ಮನಸ್ಸೊಂದು ನೋಡುವುದರೊಳಗಾಗಿ ದಕ್ಕಬೇಕಾದ ಅನುಭವವೂ ದಕ್ಕಿಸಿಕೊಳ್ಳಲು ಸಿದ್ಧವಾಗಿರುತ್ತದೆಯೆ? ಇದು ನನ್ನ ಜಿಜ್ಞಾಸೆ ಹಾಗೂ ಬರಹದ ಬಗೆಗಿರುವ ಕುತೂಹಲ.
ಈ ಕುತೂಹಲದ ಬೆನ್ನೇರಿಯೆ ಹಲವು ದಶಕಗಳಿಂದ ನಾನು ಬರೆಯುತ್ತ ಹೊರಟವ, ಕುತೂಹಲಕ್ಕೆ ಪೂರಕವಾಗಿ ಸಂಗತಿಗಳು ಘಟಿಸಿದ್ದರಿಂದ ಬರಹ ಎನ್ನುವುದು ಬರೆಯಲಾಗದು, ಬದಲಾಗಿ ಬರೆಯಿಸಲ್ಪಡುವುದು ಎನ್ನುವ ಸ್ಪಷ್ಟ ನಿರ್ಧಾರಕ್ಕೆ ಬಂದವ.
ಹೊರಗಡೆ ಸುಡು ಬಿಸಿಲು, ಒಳಗಡೆ ಕೊರೋನದ ಕಾರಣ ಸೃಷ್ಟಿಯಾದ ಮೃತ್ಯು ಭೀತಿ, ಗಡಿರೇಖೆಯ ಮೇಲಿರುವ ನನ್ನ ಮನೆ ಜೋಳಿಗೆಯ ಮುಂದೆ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ, ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಮೃತ್ಯು ಭಯದಿಂದಾಗಿ ಪರದಾಡುತ್ತಿದ್ದ ಜನ, ಪೊಲೀಸ್ ಗಸ್ತು, ಊರೂರುಗಳಲ್ಲಿ ಸ್ಮಶಾನ ಮೌನ, ಮಾತೆತ್ತಿದರೆ ಬರೀ ಸತ್ತವರ ಲೆಕ್ಕ, ಉಳಿದವರ ಗೋಳಾಟ ಹೀಗೆ ಏನೆಲ್ಲ ನಡೆದಿತ್ತು ನಾನು ಈ ಕೀಟ್ಸ್ನೊಂದಿಗೆ ಕುಳಿತಾಗ.
ಉಳಿದ ಕೃತಿಗಳ ಸಂದರ್ಭದಲ್ಲಿ ಜರುಗಿದಂತೆಯೇ ಕಾಲ ಈ ಬಾರಿಯೂ ಏನೇನೋ ಜರುಗಿಸುತ್ತಿತ್ತು ನನ್ನ ಸುತ್ತಲು. ಕೆಲವು ಸಚಿತ್ರ ಮತ್ತೆ ಕೆಲವು ವಿಚಿತ್ರ. ದಿನಾಂಕ ೦೬.೦೪.೨೦೧೯ರಲ್ಲಿ ಬರಹ ಆರಂಭವಾಗಿದ್ದು ಎಲ್ಲೆಲ್ಲೋ ನಿಂತು, ವಿಳಂಬಿಸಿ, ವಿಸ್ತಾರಗೊಂಡು, ಮಧ್ಯ ಮತ್ತೊಂದು ಕೃತಿ ರಚನೆಯಾಗಿ, ಮತ್ತೆ ಸರಿಯಾಗಿ ದಿನಾಂಕ ೦೬.೦೪.೨೦೨೦ರಂದು ಈ ಕೃತಿಯ ಮುಕ್ತಾಯವಾಗುತ್ತದೆ, ೨೩ ಫೆಬ್ರುವರಿ ೧೮೨೧ರಂದು ಜಾನ್ ಕೀಟ್ಸ್ ನರಳಾಟ ಹಾಗೂ ಗೋಳಾಟದ ಬದುಕಿನಿಂದ ಮೃತ್ಯುವಿಗೆ ಜಾರಿದ್ದು, ಆದರೆ ಇದೇ ಫೆಬ್ರುವರಿ ೨೩ರಂದು ನನ್ನ ಹೆಂಡತಿಯೊಂದಿಗೆ ಜೀವನ ಅರೆಸುತ್ತ ಬೆಂಗಳೂರಿಂದ ಹೊರಟು, ಲಕ್ಷ ಲಕ್ಷ ಜನರೊಂದಿಗೆ ಮೃತ್ಯುವಿನಿಂದ ಜೀವನದೆಡೆಗೆ ನಾನು ಪಯಣ ಬೆಳೆಸಿದ್ದು. ಕೀಟ್ಸ್ ಮೃತ್ಯು ವಶವಾದದ್ದು ೨೩ ಫೆಬ್ರುವರಿ ನಸುಕಿನ ನಾಲ್ಕು ಗಂಟೆಗೆ, ಮೃತ್ಯು ಕೊರೋನಾ ರೂಪದಲ್ಲಿ ನಮ್ಮೊಳಗೇನಾದರೂ ಮನೆ ಮಾಡಿದೆಯಾ? ಎಂದು ನಮ್ಮೆಲ್ಲರ ಆರೋಗ್ಯ ತಪಾಸಣೆಯಾದದ್ದು ಇದೇ ಫೆಬ್ರುವರಿ ೨೩-೨೪ರ ನಸುಕಿನಲ್ಲಿ, ಇಂಗ್ಲೆಂಡಿನಿಂದ ಬೇಸತ್ತು ಕೊನೆಗಾಲದಲ್ಲಿ ಆರೋಗ್ಯವನ್ನು ಹುಡುಕಾಡುತ್ತ ಕೀಟ್ಸ್ ಹೋದ ಇಟಲಿ ಆಗಲೂ ಸಾಂಕ್ರಾಮಿಕ ರೋಗಗಳ ಕೇಂದ್ರವಾಗಿತ್ತು. ಕನ್ನಡದಲ್ಲಿ ೧೭೧ ವರ್ಷಗಳ ನಂತರ ಅವನ ಚರಿತ್ರೆ ಮರುಸೃಷ್ಟಿಯಾಗುವ ಈ ಸಂದರ್ಭದಲ್ಲಿಯೂ ಇಟಲಿ ಕೊರೋನಾ ಎಂಬ ಸಾಂಕ್ರಾಮಿಕ ರೋಗದಿಂದ ತನ್ನ ಸಾವಿರ ಸಾವಿರ ಪ್ರಜೆಗಳನ್ನು ಕಳೆದುಕೊಂಡು ನರಳುತ್ತಿದೆ. ಕ್ವಾರಂಟೈನ್ ಎಂಬ ಪದ ಯುರೋಪಿನಲ್ಲಿ ಬಹಳ ಹಿಂದೆಯೇ ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ಪ್ರಚಲಿತ, ಆದರೆ ಏಷಿಯಾದಲ್ಲಿ ಅದು ಜನಜನಿತವಾದುದು ಕೊರೋನಾದ ಈ ಸಂದರ್ಭದಲ್ಲಿ. ಕೀಟ್ಸ್ನನ್ನು ಕುರಿತು ಬರೆಯುತ್ತಿರುವ ನಾನು, ೫೦ ದಿನಗಳ ಕಾಲದ ದಿಗ್ಭಂದನವನ್ನು ಕೊರೋನಾ ಕಾರಣಕ್ಕಾಗಿ ಅನುಭವಿಸಿದರೆ, ಸ್ವಯಂ ಕೀಟ್ಸ್ ಇಟಲಿಯ ನೆಪಲ್ಸ್ನಲ್ಲಿ ೩೨ ಗಂಟೆಗಳ ಕ್ವಾರಂಟೈನ್ ಅನುಭವಿಸಿ, ರಾಜಕೀಯ ಪ್ರೇರಿತವಾದ ಈ ಕ್ವಾರಂಟೈನ್ ಮೃತ್ಯುವಿಗಿಂತಲೂ ಭಯಾನಕವಾದುದು ಎಂದು ದಾಖಲಿಸುತ್ತಾನೆ.
ಈಗ ಹೇಳಿ ಬರಹವೆಂದರೇನು? ಸಮಾನ ಅನುಭವಗಳು ಸಮ-ಸಮನಾಗಿ ೧೭೧ ವರ್ಷಗಳ ನಂತರ ನನ್ನ ಮತ್ತು ಕೀಟ್ಸ್ನ ಮಧ್ಯ ಯಾಕೆ ಜರುಗಬೇಕು? ಇದೇ ಕಾರಣ ನಾನು ಮತ್ತೆ ಮತ್ತೆ ಕೇಳಿಕೊಳ್ಳುತ್ತಿರುತ್ತೇನೆ ಬರಹ ಬರೆಯುವಂಥದ್ದೊ? ಬರೆಯಿಸಲ್ಪಡುವಂಥದ್ದೊ? ವ್ಯಕ್ತಿಯೊಬ್ಬ ತನ್ನ ಜೀವ ಕಾಡಿದ ಬಾಹ್ಯದ ಸಂದರ್ಭ ಮರು ಸೃಷ್ಟಿಯಾಗುವವರೆಗೂ ಮತ್ತೆ ಕಾಯ್ದು ಅದು ಮರು ಸೃಷ್ಟಿಯಾಯಿತೆ? ಬರಹವೆನ್ನುವುದು ಬರೆದು ತೀರಿಸಿ ಬಿಡಬಹುದಾಗಿದ್ದರೆ ಹಿಂದೆಯೇ ಈ ಕ್ರಿಯೆ ಮುಗಿದುಬಿಡಬಹುದಿತ್ತಲ್ಲವೆ? ಅಥವಾ ಇದೆಲ್ಲ ಬರಹಗಾರನ ಆತ್ಮ, ವಿಶ್ವಾತ್ಮಕತೆಯನ್ನು ಸಾಧಿಸುವ ಹುನ್ನಾರವೆ? ನನಗೆ ತಿಳಿಯುತ್ತಿಲ್ಲ.
ಕೀಟ್ಸ್ನಿಗೂ ಇದು ತಿಳಿಯಲಿಲ್ಲ. ಆತ ಬರೆದದ್ದು ಬರೆಯದೇ ಇರಲು ಆಗದ್ದಕ್ಕಾಗಿ. ರೆಂಬೆ-ಕೊಂಬೆಗಳಿಗೆ ಚಿಗುರು ಬರುವಷ್ಟೇ ಸಹಜವಾಗಿ ಬರಹ ಸಾಧ್ಯವಾಗದೇ ಹೋಗುವುದಾದರೆ ಬರಹವೇ ಬೇಡ ಎಂದು ಷರಾ ಎಳೆದುಕೊಂಡಿದ್ದ ಕೀಟ್ಸ್ನ ಪಾಲಿಗಂತೂ ಬರಹ ವ್ಯಸನವೂ ಆಗಿರಲಿಲ್ಲ, ಪ್ರದರ್ಶನವೂ ಆಗಿರಲಿಲ್ಲ. ಬದಲಾಗಿ ಅದು ಬದುಕಿನ ಅನಿವಾರ್ಯವಾಗಿತ್ತು, ಉಸಿರಿನಷ್ಟೇ ಅವಶ್ಯಕವಾಗಿತ್ತು, ಸಾವಿಗೊಂದು ಸಮಾಧಾನವಾಗಿತ್ತು. ಕಾರಣ ಅವನ ಮೂಲಕ ಬಂದ ಬರಹ ಲೋಕೋದ್ಭವವಾಗಿತ್ತು, ಲೋಕವಾಣಿಯಾಗಿತ್ತು ಮತ್ತು ಅಂತಿಮವಾಗಿ ಲೋಕಾತ್ಮಕತೆಯೇ ಅದರ ಗುರಿಯಾಗಿತ್ತು.
ಇಂಥ ಕೀಟ್ಸ್ ಜೀವಿಸಿದ್ದು ಕಡಿಮೆ. ಆದರೆ ಕವಿಯಾಗಿ ಬದುಕಿದ್ದು, ಬಾಳಿದ್ದು ದೀರ್ಘ. ಬದುಕನ್ನು ಗಾಳಿಗೋಪುರವಾಗಲು ಬಿಡಲಿಲ್ಲ ಅವನು. ಪದ ಪದವೂ ಆತ್ಮವೃತ್ತದ ಒರತೆ. ಜಾನ್ ಕೀಟ್ಸ್ ಎಷ್ಟೊಂದು ದೀರ್ಘ ವಿಸ್ತಾರದ ಕವಿ ಎನ್ನುವುದನ್ನು ತಿಳಿಯಲು ಆತನ ನಿಧನದ ನಂತರ ಅವನ ಕವಿಮಿತ್ರನಾದ ಪರ್ಸಿ ಬ್ರೌನ್ ಶೆಲ್ಲಿ ಬರೆದ ಶೋಕ ಗೀತೆ ಎಡೋನಿಸ್ ಕವಿತೆಯನ್ನು ಒಮ್ಮೆಯಾದರೂ ನೀವು ಓದಲೇಬೇಕು. ಅದು ಮುಲಾಜಿಗಾಗಿ ಬರೆದ ಕವಿತೆಯಲ್ಲ. ಆ ಕವಿತೆಯನ್ನು ಇಡಿಯಾಗಿ ನಾನು ಉಲ್ಲೇಖಿಸುತ್ತಿಲ್ಲ. ಕೀಟ್ಸ್ ಎಷ್ಟು ಎತ್ತರದವನು ಎನ್ನುವುದಕ್ಕೆ ಸಾಕ್ಷಿಯಾಗಿರುವ ಅದರೊಳಗಿನ ಕೆಲವೇ ಸಾಲುಗಳನ್ನು ಉಲ್ಲೇಖಿಸುತ್ತಿದ್ದೇನೆ-
He lives, he wakes – it is Death is dead, not he
* * *
He is made one with Nature : there is heard
His voice in all her music, from the moan
Of thunder, to the song of Nights sweet bird
He is a presence to be felt and known
In darkness and in light, from herb and stone
Spreading itself where’er that Power may move
Which has withdrawn his being to its own
Which wields the world with never weried love
Sustains it from beneath, and kindles it above
ಸೀಮಾತೀತವಾಗಿ ಬರೆದ ಕವಿ ಕೀಟ್ಸ್ ಅವನ ಗೆಳೆಯ ಶೆಲ್ಲಿ ಹೇಳಿದಂತೆ ಸಾವಿಲ್ಲದವನೆ. ಸಮಸ್ತ ಸೃಷ್ಟಿಯ ಗತಿ-ಮತಿಗಳಲ್ಲಿ ಬೆರೆತುಹೋದವನು. ಇಡೀ ಪಾಶ್ಚಾತ್ಯ ಕಾವ್ಯದಲ್ಲಿ ಶೇಕ್ಸಪೀಯರ್ನ ನಂತರ ಜನಾನುರಾಗಕ್ಕೆ ಭಾಜನನಾದ ಅತ್ಯಂತ ಮಹತ್ವದ ಕವಿ. ಅವನಿಗೂ ಮೊದಲಿನ ಎಡ್ಮಂಡ್ ಸ್ಪೆನ್ಸರ್ ಬಹಳಷ್ಟು ಕಾವ್ಯ ರಸಿಕರಿಗೆ ಅರ್ಥವಾಗಲಿಲ್ಲ, ಜಾನ್ ಮಿಲ್ಟನ್ ಕಬ್ಬಿಣದ ಕಡಲೇ ಆದ, ಅಲೆಗ್ಝಾಂಡರ್ ಪೋಪ್ ಪ್ರಾಯೋಗಿಕ ನೆಲೆಯಲ್ಲಿ ಉಳಿದುಕೊಂಡ, ವರ್ಡ್ಸ್ವರ್ಥ್ ಸಂತನಾದ, ಕೀಟ್ಸ್ ಮಾತ್ರ ಕವಿತೆ ಬರೆದು ಕವಿಯಾದ ಎನ್ನುವುದಕ್ಕಿಂತ, ಅವನು ಕವಿತೆಗಾಗಿಯೇ ಬದುಕಿದ್ದ, ಕೊನೆಗೆ ಕವಿತೆಯಾಗಿಯೇ ದಕ್ಕಿದ.
ನಾನು ಹೇಳುತ್ತಿರುವುದು ಅಕ್ಷರಶಃ ಸತ್ಯ. ತನ್ನ ಬಾಲ್ಯದಲ್ಲಿ ಅಂದರೆ, ೧೮೦೪ರ ಆಸುಪಾಸಿನಲ್ಲಿ ಕುದುರೆಯ ಮೇಲಿಂದ ಬಿದ್ದು ಮಾರಣಾಂತಿಕವಾಗಿ ಗಾಯಗೊಂಡಿದ್ದ ಕೀಟ್ಸ್ ಜೀವನದ್ದುದ್ದಕ್ಕೂ ಬೀಳುತ್ತ, ಏಳುತ್ತ, ಮೃತ್ಯುವಿನೊಂದಿಗೆ ಸೆಣಸಾಡುತ್ತ ಮೃತ್ಯುಂಜಯನೇ ಆದ. ಕವಿ ಮ್ಯಾಥ್ಯು ಆರ್ನಾಲ್ಡ್ ಕೀಟ್ಸ್ನ ಕುರಿತು ಹೇಳುತ್ತಾನೆ- ‘He is, he is with Shakespeare. Though he lived more in sensations than in thoughts. Keats soon become alive to the principle of beauty in all things and he developed a style which was Greek in its sculpturesque perfection and Shakespearean in its intensity.
ನಿಮಗೆ ತಿಳಿ ತಿಳಿಯಾಗಲೆಂದು ನಾನು ಕೀಟ್ಸ್ನ ಕುರಿತು ಬರೆದಷ್ಟೂ ಆತ ಕಡಲಂತೆ ಆಳ, ಅನಂತವಾಗುತ್ತಲೇ ಹೋಗುತ್ತಾನೆ. ಇದು ಸರಿ, ಆದರೆ ಇದು ಏಕೆ ಹೀಗೆ ಎಂಬುದು ಪ್ರಶ್ನೆಯಲ್ಲವೆ? ಎಂಥ ಕವಿಗೆ ಇಂಥ ವಿಸ್ತಾರ ಸಾಧ್ಯವಾಗುತ್ತದೆ? ಎನ್ನುವುದು ನಮ್ಮ ಮುಂದಿರುವ ಪ್ರಶ್ನೆ. ಇದಕ್ಕೆ ಇಂದಿಗೆ ಐವತ್ತು ವರ್ಷಗಳ ಹಿಂದೆ ಕನ್ನಡ ಸಾಹಿತ್ಯ ಚರಿತ್ರೆಕಾರರಾದ ಪ್ರೊ. ರಂ.ಶ್ರೀ. ಮುಗಳಿ ಅವರು ಬಹಳ ಸುಂದರವಾಗಿ ಉತ್ತರಿಸಿದ್ದಾರೆ. ಅದನ್ನು ನೀವು ಗಮನಿಸಬೇಕು. ಅವರು ಬರೆಯುತ್ತಾರೆ- ಲೇಖಕನ ಜೀವನಾನುಭವ, ಆಲೋಚನೆ, ಹೃದಯಸ್ಪಂದನ ಇವುಗಳ ವಿಶಿಷ್ಟ ಪರಿಪಾಕವಾಗಿ ಅವನ ಸಾಹಿತ್ಯ ನಿರ್ಮಾಣವಾಗುತ್ತದೆ. ಇನ್ನೊಂದು ಬಗೆಯಲ್ಲಿ ಹೇಳಿರುವಂತೆ ಅದು ಸೃಷ್ಟಿ-ದೃಷ್ಟಿಗಳ ಸಂಗಮದಿಂದ ಉಂಟಾದ ನವೀನ ಸೃಷ್ಟಿಯಾಗಿರುತ್ತದೆ. ಈ ಸೃಷ್ಟಿಗೆ ಮುಖ್ಯ ಕಾರಣವಾದ ಪ್ರತಿಭಾಶಕ್ತಿ ನವನವೋನ್ಮೇಷಶಾಲಿನಿ ಯಾದ ಪ್ರಜ್ಞೆ ಎಂದು ಹೊಗಳಿಸಿಕೊಂಡಿದೆ. ಲೇಖಕನ ವ್ಯಕ್ತಿತ್ವದಲ್ಲಿ ಸಾಕ್ಷಿಭಾವ, ಸ್ನೇಹಭಾವ, ಸೌಂದರ್ಯಭಾವ ಇವು ಎಷ್ಟರ ಮಟ್ಟಿಗೆ ಮಾಗಿದ ರಸಪ್ರಜ್ಞೆಯಲ್ಲಿ ನೆಲೆ ನಿಲ್ಲುವುವೋ ಅಷ್ಟರ ಮಟ್ಟಿಗೆ ಅವನ ಕೃತಿ ಘನತೆಯನ್ನು ತಾಳುತ್ತದೆ. ಇಂಥ ಕೃತಿಯಲ್ಲಿ ಸಮಗ್ರ ಸೌಂದರ್ಯವು ಕಣ್ದೆರೆಯುತ್ತದೆ. ಅದರಿಂದ ನಿರ್ಮಲವಾದ, ನಿರ್ಹೇತುಕವಾದ ಆನಂದವು ಲಭಿಸುತ್ತದೆ. ಜೊತೆಗೆ ಅದು ರಸಿಕನ ಚಿತ್ರವನ್ನು ಎತ್ತರಿಸುತ್ತದೆ, ಜೀವನವನ್ನು ಸಂಸ್ಕರಿಸುತ್ತದೆ. ಅಂತರಂಗದಾಳದಲ್ಲಿ ತಿಳಿಯದಂತೆ ಹೊಕ್ಕು ಕೊನೆಬಾಳುವ ಬಾಳಿನ ಬೆಲೆಗಳನ್ನು ಸ್ಥಾಪಿಸುತ್ತದೆ. ಋಷಿಯಲ್ಲದವನು ಕಾವ್ಯವನ್ನು ರಚಿಸಲಾರ, ದರ್ಶನದಿಂದಲೇ ಋಷಿ ಋಷಿಯಾಗುತ್ತಾನೆ ಎಂಬ ಪ್ರಸಿದ್ಧವಾದ ಉಕ್ತಿ ಸಾಹಿತ್ಯದ ಚಿರಂತನವಾದ ಸ್ವರೂಪವನ್ನು ಬೇರೊಂದು ಬಗೆಯಲ್ಲಿ ಎತ್ತಿ ತೋರಿಸಿರುತ್ತದೆ. ಇಲ್ಲಿ ದರ್ಶನವೆಂದರೆ ಕಣ್ಣ ಮುಂದಿರುವ ಬಾಳಿನ ಹೊರನೋಟ, ಒಳಗಣ್ಣಿನಿಂದ ತಿಳಿಯುವ, ಇರಬೇಕಾದ ಬಾಳಿನ ಒಳನೋಟ. ಇದು ಲೇಖಕನ ಬುದ್ಧಿಗೆ ಮಾತ್ರ ಹೊಳೆದುದಲ್ಲ, ಅವನ ಸಮಗ್ರ ಚೇತನಕ್ಕೆ ಅರಿವಾಗಿ ಅವನ ಇರುವಿಕೆಯಲ್ಲಿ ಮೂಡಿರುವ ಇಲ್ಲವೆ ಮೂಡಲು ಹಾತೊರೆಯುತ್ತಿರುವ ಅವನದೇ ಆದ ಜೀವನದರ್ಶನವಾಗಿರುತ್ತದೆ. ಅಂತೇ ಸಾಹಿತ್ಯವು ವ್ಯಕ್ತಿತ್ವದ ಪ್ರತಿಫಲವೆಂದು ಹೇಳಿರುವುದುಂಟು. ವ್ಯಕ್ತಿವ್ಯಕ್ತಿಗೆ ನಿರ್ಮಿತಿ ಬೇರೆ ಬೇರೆಯಾಗುತ್ತದೆ. ವ್ಯಕ್ತಿ ಮಾಗಿದಷ್ಟು ಅವನ ಕೃತಿಯೂ ಮಾಗಿ ತೋರುತ್ತದೆ. ವ್ಯಕ್ತಿ ಕುಗ್ಗಿದಷ್ಟು ಅವನ ಕೃತಿಯೂ ಕುಗ್ಗಿ ನಿಲ್ಲುತ್ತದೆ.
ಮಾಗಿದ ಕವಿ ಜಾನ್ ಕೀಟ್ಸ್ ಈ ಮೇಲಿನ ಚರ್ಚೆಯ ಹಿನ್ನೆಲೆಯವನು. ತನ್ನ ಬದುಕು ನಿಗಿನಿಗಿಯಾದರೂ ಅವನು ಕಾವ್ಯಲೋಕದಲ್ಲಿ ತಣ್ಣಗಿನ ಬೆಳಕಂತೆ ಬಂದವನು. ಇಂದಿಗೂ ಕಾವ್ಯಾರಾಧಕರಿಗೆ ಅದೇ ನೆಮ್ಮದಿಯನ್ನು ನೀಡಿದವನು. ನಾನಂತೂ ಅವನ ಕಾವ್ಯ, ಪತ್ರ, ಸಾಹಿತ್ಯ ಹಾಗೂ ಬದುಕನ್ನು ಓದಿ ಪ್ರಪಂಚದ ಮಹಾ ನಿಧಿಯೊಂದನ್ನು ದಕ್ಕಿಸಿಕೊಂಡ ಆನಂದದಲ್ಲಿದ್ದೇನೆ. ನನಗಾದ ಅನುಭೂತಿ ನಿಮಗೂ ದಕ್ಕಲಿ ಎಂಬ ಸದಾಶಯದೊಂದಿಗೆ ಈ ಪ್ರಯತ್ನ ಮಾಡಿದ್ದೇನೆ.
ಎಲ್ಲಕ್ಕೂ ಮಿಗಿಲಾಗಿ ಕೀಟ್ಸ್ ಕದ್ದು ತಿನ್ನುವ ಹಣ್ಣಲ್ಲ, ಹಂಚಿಕೊಂಡು ತಿನ್ನಬೇಕಾದ ಮಹಾಪ್ರಸಾದ, ಮಹಾನಂದ. ಈಗ ಆತ ನಿಮ್ಮೊಂದಿಗೆ.
ರಾಗಂ
ಮೋಸ ಮಾಡಿದನೆ ದೇವರು?
ಪ್ರೀತಿಯ ಅಂಕಲ್,
ಜಾನ್ ಕೀಟ್ಸ್ ಆಹಾ! ಎಂಥ ಮಾಂತ್ರಿಕ ಹೆಸರು. ಮುಷ್ಠಿಯಷ್ಟಿರುವ ಅವನ ಹೃದಯದಲ್ಲಿ ಎಷ್ಟೊಂದು ಸಮೃದ್ಧ ಆಲೋಚನೆಗಳು! ಪ್ರೀತಿಗಾಗಿ ಬದುಕಿದ್ದ, ಕವಿತೆಯನ್ನೇ ಉಸಿರಾಗಿಸಿಕೊಂಡಿದ್ದ, ಸಾವಿನ ಬಾಗಿಲನ್ನು ತಟ್ಟುವ ಕ್ಷಣದವರೆಗೂ ಕಾವ್ಯವನ್ನೇ ಬದುಕಿದ್ದ, ಇಂಥ ವ್ಯಕ್ತಿಯನ್ನು ಪರಿಚಯಿಸಿದ ನಿಮಗೆ ವಂದನೆಗಳು ಅಂಕಲ್.
ತನ್ನ ಬದುಕಿನ ಕ್ಷಣಗಳನ್ನು ನಿಸರ್ಗದ ಸೌಂದರ್ಯವನ್ನು ಸವಿಯುವುದರಲ್ಲಿಯೇ ಕಳೆದ ಕೀಟ್ಸ್, ತಣ್ಣನೆ ಬೀಸುವ ಗಾಳಿಯಂತಿದ್ದ. ಪ್ರೀತಿಯ ಸ್ನೇಹಿತ ರೇನಾಲ್ಡ್ಸ್ನಿಗೆ ಪತ್ರಗಳನ್ನು ಬರೆಯುತ್ತ, ಸ್ನೇಹದ ಜವಾಬ್ದಾರಿಯನ್ನು ನಮಗೆ ವಿವರಿಸಿದ್ದಾನೆ. ಫ್ಯಾನಿ ಬ್ರೌನ್ಳ ರೂಪದಲ್ಲಿದ್ದ ಪ್ರೀತಿಯನ್ನು ಮನಸ್ಸಿನಲ್ಲೇ ಗೌರವಿಸಿದ್ದಾನೆ. ಅವಳನ್ನು ದೇವತೆಯಂತೆ ಆರಾಧಿಸುತ್ತಿದ್ದ ಕೀಟ್ಸ್, ಟಿ.ಬಿ ಎಂಬ ಮಹಾಮಾರಿಯ ಕಾರಣ ಪ್ರೀತಿಯನ್ನು ಅವಳಿಗೆ ನಿವೇದಿಸದೆ ತೀರಿಕೊಳ್ಳುತ್ತಾನೆ.
ಮನಸ್ಸು ಜೊತೆಯಾಗಿದ್ದರೂ ದೇಹಗಳು ಜೊತೆಯಾಗಲಿಲ್ಲ ಎಂಬ ಕೊರಗು ಅವನನ್ನು ತುಂಬಾ ಕಾಡಿದೆ. ರೋಗದ ಬಗ್ಗೆಯಾಗಲಿ, ಸಾವಿನ ಬಗ್ಗೆಯಾಗಲಿ ಯಾವತ್ತೂ ಭಯವಿರಲಿಲ್ಲ. ಸುಮಧುರ ಹೂಗುಚ್ಛದಂತಿದ್ದ ಕೀಟ್ಸ್, ಪ್ರೀತಿಯನ್ನು ಹಂಚುತ್ತಲೇ ಬದುಕಿದ.
ಕೀಟ್ಸ್ನ ಜೀವನದುದ್ದಕ್ಕೂ ಸಾಕಷ್ಟು ಟೀಕೆ, ಕಟುವಿಮರ್ಶೆ, ಅವಮಾನಗಳಿದ್ದರೂ ಅವನು ಎದೆ ಗುಂದಿರಲಿಲ್ಲ. ಬದಲಾಗಿ, ತನ್ನಲ್ಲಿನ ಲೋಪದೋಷಗಳನ್ನು ಸರಿಪಡಿಸಿಕೊಂಡು ಮುನ್ನುಗ್ಗುತ್ತಿದ್ದ. ಕಾವ್ಯ ಎಂದೂ ಅವನಿಗೆ ಬೇಸರ ತರಿಸಲಿಲ್ಲ. ಕವಿತೆ ಬರೆದಷ್ಟೂ ಅವುಗಳ ಬಗೆಗೆ ಹಂಬಲ ಹೆಚ್ಚಾಗುತ್ತಲೇ ಹೋಯಿತು. ಹೀಗೆ ಬಹಳಷ್ಟು ಅರ್ಥಪೂರ್ಣವಾಗಿ, ವಿಶಿಷ್ಟವಾಗಿ ಜೀವನ ಕಳೆದ ಕೀಟ್ಸ್ ಹಲವರಿಗೆ ಸ್ಪೂರ್ತಿ ಮತ್ತು ಮಾದರಿಯಾಗಿದ್ದಾನೆ.
ಕೀಟ್ಸ್ ತನ್ನ ಕಾಲದ ಯಾವ ಕವಿಗೂ ಕಡಿಮೆ ಇರಲಿಲ್ಲ. ಎಂದೂ ಆತ ಅನವಶ್ಯಕ, ಕ್ಷುಲ್ಲಕ, ಅರ್ಥವಿಲ್ಲದ ವಿಷಯಗಳಲ್ಲಿ ಭಾಗಿಯಾಗುತ್ತಿರಲಿಲ್ಲ. ಮನುಷ್ಯನಿಗೆ ತನ್ನ ತಪ್ಪುಗಳ ಅರಿವಿರಬೇಕು ಹಾಗೂ ಅವುಗಳ ಬಗ್ಗೆ ನಿರ್ಮೋಹಿಯಾಗಿರಬೇಕು ಎಂದು ಹೇಳಿದ ಕೀಟ್ಸ್ ತಾನು ನುಡಿದಂತೆ ನಡೆದುಕೊಳ್ಳುತ್ತಿದ್ದ. ಕೀಟ್ಸ್ ನಿಸರ್ಗದ ಮಧ್ಯ ಪರ್ವತಗಳತ್ತ ಓಡಿಹೋಗಿ ಕವಿತೆಗಳನ್ನು ಓದುತ್ತಿದ್ದ. ಹೀಗಾಗಿ ಯಾವತ್ತೂ ತನ್ನನ್ನು ತಾನು ಒಬ್ಬಂಟಿ ಎಂದುಕೊಳ್ಳಲಿಲ್ಲ. ಸುಖ-ದುಃಖ ಎಲ್ಲ ಸಂದರ್ಭಗಳಲ್ಲಿಯೂ ಕವಿತೆಗಳನ್ನು ಸಮಾನವಾಗಿ ಬರೆಯುತ್ತಿದ್ದ.
ಅಂಕಲ್, ಈ ಪುಸ್ತಕವನ್ನು ಓದುವ ಮೊದಲು ಕೀಟ್ಸ್ನ ಬಗ್ಗೆ ಈ ಮೇಲಿನ ಯಾವ ಮಾಹಿತಿಗಳೂ ನನಗೆ ಗೊತ್ತಿರಲಿಲ್ಲ. ಅವನು ಬರೆದ ಒಂದು ಸಣ್ಣ ಕವಿತೆ ನನ್ನ ಎಂಟನೇ ತರಗತಿಯ ಆಂಗ್ಲ ವಿಷಯದ ಪುಸ್ತಕದಲ್ಲಿ ಇದ್ದುದರಿಂದ ಅವನ ಹೆಸರು ನನ್ನ ಮನಸ್ಸಿನಲ್ಲಿ ಅಚ್ಚೊತ್ತಿತ್ತು. ಈಗ ನಿಮ್ಮ ಪುಸ್ತಕದಿಂದ ಕೀಟ್ಸ್ನ ಕಾವ್ಯ ಹಾಗೂ ಪತ್ರಗಳ ಹುಚ್ಚು ಹಿಡಿದಂತಾಗಿದೆ. ನಿಮ್ಮ ಬರಹಕ್ಕೆ, ಕೀಟ್ಸ್ನ ಅಸಾಧಾರಣ ಸಾಧನೆಯ ಬಗ್ಗೆ ತಿಳಿಸಿದ ನಿಮ್ಮ ಪ್ರಯತ್ನಕ್ಕೆ ನನ್ನ ಧನ್ಯವಾದಗಳು.
ಈ ಪುಸ್ತಕ ಓದಿದ ಮೇಲೆ ಅವನು ಇನ್ನಷ್ಟು ಕಾಲ ಬದುಕಬೇಕಿತ್ತು ಎಂಬ ನೋವು ಕಾಡುತ್ತದೆ. ಅವನು ಬದುಕಿದ ರೀತಿ ನೋಡಿ ಖುಷಿಪಡಲೆ, ಅವನ ದುರಂತ ಸಾವನ್ನು ಓದಿ ದುಃಖಪಡಲೆ ಎಂದು ಯೋಚಿಸುವಂತಾಗಿದೆ. ಕವಿತೆಯ ಹಂಬಲ ಇರುವವರಿಗೆ ಕೀಟ್ಸ್ನೊಬ್ಬನೆ ಸಾಕು ಎನ್ನುವಷ್ಟರ ಮಟ್ಟಿಗೆ ಕವಿತೆಯ ಬಗೆಗಿನ ಹಸಿವೆಯನ್ನು ಆತ ತಣಿಸಿದ್ದಾನೆ. ಅನ್ಯರ ಜ್ಞಾನವನ್ನು ತನ್ನ ಜೀವಮಾನದುದ್ದಕ್ಕೂ ಗೌರವಿಸುತ್ತಲೇ ಬಂದ ಕೀಟ್ಸ್ ಅಹಂಕಾರವೆಂಬ ಮುಳ್ಳನ್ನು ಚುಚ್ಚಿಕೊಂಡವನಲ್ಲ. ಗ್ರೌಂಡ್ ಟು ಅರ್ಥ್ ಬದುಕಿದವನು. ಯಾರನ್ನೂ ನಕಲು ಮಾಡಲಿಲ್ಲ, ಬದಲಾಗಿ ತನ್ನದೇ ಹೊಸ ಛಾಪು ಮೂಡಿಸಿದ ಕೀರ್ತಿ ಅವನದು.
ಬೆಳಕಿನಂತೆ ನೆಲದ ನಾಲ್ಕೂ ದಿಕ್ಕುಗಳನ್ನು ವ್ಯಾಪಿಸಿಕೊಳ್ಳಬೇಕೆಂದಿದ್ದ ಸಾಹಿತ್ಯಲೋಕದಲ್ಲಿ ಇನ್ನೂ ಬಾಳಿ ಬೆಳಗಬೇಕಿದ್ದ ಕೀಟ್ಸ್ನಿಗೆ ದೇವರು ಮೋಸ ಮಾಡಿದ ಅಲ್ಲವೆ? ಆದರೂ ಅದ್ಭುತ ಕಾವ್ಯ ಬರೆದ ಕೀಟ್ಸ್ ಸತ್ತಿದ್ದಾನೆ ಎಂದು ಹೇಳಲು ಹೇಗೆ ಸಾಧ್ಯ? ಅವನು ಅಮರ. ಪ್ರತಿ ಕವಿತೆಯಲ್ಲೂ ಅವನು ಜೀವಂತವಾಗಿದ್ದಾನೆ. ನನ್ನಂಥವರನ್ನು ನಿತ್ಯ ಎಚ್ಚರಿಸುತ್ತಿದ್ದಾನೆ. ಶೆಲ್ಲಿ ಹೇಳುವಂತೆ ಅವನು Pooಡಿ ಏeಚಿಣs ಅಲ್ಲವೇ ಅಲ್ಲ. ನಮ್ಮೆಲ್ಲರ ಮನಸ್ಸಿನಲ್ಲಿ ಅವನು ಮಹಾ ಶ್ರೀಮಂತ.
ಕೊನೆಯದಾಗಿ, ಕೀಟ್ಸ್ ತನ್ನ ಕಾವ್ಯಗಳನ್ನು ಕನ್ನಡದಲ್ಲಿಯೇ ಬರೆದಿದ್ದಾನೆ ಎನ್ನುವಷ್ಟರ ಮಟ್ಟಿಗೆ ಅವನನ್ನು ನಮ್ಮೆಲ್ಲರ ಹೃದಯದ ಬಾಗಿಲಿಗೆ ತಟ್ಟುವಂತೆ ಮಾಡಿದ ನಿಮಗೆ ಎಷ್ಟು ಕೃತಜ್ಞತೆ ಹೇಳಿದರೂ ಕಡಿಮೆಯೆ.
೦೯.೦೪.೨೦೨೦ ಇಂತಿ ನಿಮ್ಮ
ಕಿರಣಮಯಿ
Reviews
There are no reviews yet.