ಲೇಖಕರ ಮಾತು
ನಾನು ಈ ಪುಸ್ತಕದಲ್ಲಿ ಬರೆದುದನ್ನು ಓದುಗರಾದ ನೀವು ನಿಜಜೀವನದಲ್ಲಿ ಅಳವಡಿಸಿಕೊಳ್ಳದಿದ್ದರೆ ಅವು ಕೇವಲ ಪರಿಕಲ್ಪನೆಗಳಾಗಿ ಮಾತ್ರ ಉಳಿದು ಬಿಡುತ್ತವೆ. ನಿಮ್ಮ ಜೀವನದಾಳಕ್ಕೆ ಇಳಿಯಲು ತೆಗೆದುಕೊಳ್ಳುವ ಸಮಯದಲ್ಲಿ ನಾನು ನಿಮಗೆ ಬೆಂಬಲವಾಗಿರುತ್ತೇನೆ. ನೀವು ಬದುಕಿದ್ದ ರೀತಿ ಬಗ್ಗೆ ಸರಿಯಾಗಿ ಪ್ರಶ್ನಿಸಿಕೊಳ್ಳಿ. ನೀವು ಅನುಭವಿಸಿದ ಪರಿಸ್ಥಿತಿಯ ಬಗೆಗೆ ಸರಿಯಾಗಿ ತಿಳಿದುಕೊಳ್ಳಿ. ಆಪ್ತಸಮಾಲೋಚನೆ ಮಾಡುವವರ, ಶಿಕ್ಷಕರ ಮತ್ತು ನಿಮ್ಮ ಕೈಯಲ್ಲಿರುವ ಈ ಪುಸ್ತಕ ಮಾತ್ರ ನಿಮ್ಮನ್ನು ಸರಿಯಾದ ಮಾರ್ಗದಲ್ಲಿ ನಡೆಸಲು ಸಹಾಯ ಮಾಡಬಲ್ಲುದು. ಆದರೆ ನೀವು ಬೆಳಗಲು ನಿಮ್ಮ ಸ್ವಯಂತ್ರಾಣದಿಂದ ಮಾತ್ರ ಸಾಧ್ಯ. ಬದುಕುವ ಈ ನವ್ಯಮಾರ್ಗ ಸರಳವಾಗಿದೆ ಹಾಗೂ ಸುಲಭವಾಗಿದೆ. ಪ್ರೀತಿ, ಸಂತೋಷ, ಸ್ವಾತಂತ್ರ್ಯ, ಕರುಣೆ ಹಾಗೂ ಕ್ರಿಯಾತ್ಮಕವಾದ ಬದುಕಿಗೆ ಸವೆದ ದಾರಿ ಇಲ್ಲ. ಇದು ಈಗ, ವರ್ತಮಾನದಲ್ಲಿ, ಸಮಯರಹಿತ ಕ್ಷಣದಲ್ಲಿ ಮಾತ್ರ ಸಂಭವಿಸಲು ಸಾಧ್ಯ. ಯೋಚನೆಯ ಚಲನೆ ನಿಂತು ಸುಳ್ಳು ಅಹಂ ಕರಗಿದಾಗ ಭಯವು ಇಲ್ಲವಾಗುವುದು.
ಸಂತೋಷ್ ನಂಬಿಯಾರ್, ಮೆಲ್ಬೊರ್ನ್, ಆಸ್ಟ್ರೇಲಿಯಾ
ಅನುವಾದಕರ ಮಾತು
ಸಹಜ ಸತ್ಯ, ಸರಳವಾದ ನುಡಿಗಳನ್ನು ಬದುಕಿನಲ್ಲಿ ರೂಢಿಸಿಕೊಳ್ಳಲು ಬಲು ಕಷ್ಟ. ಸರಳವಾದವುಗಳ ಬೆನ್ನಲ್ಲೇ ಕಠಿಣತೆ ಇರುತ್ತದೆ. ಜೀವನದಲ್ಲಿ ಮಾಡಬಾರದು ಎಂದು ನಿರ್ಧರಿಸಿದ ಕ್ರಿಯೆಗಳನ್ನು ಮತ್ತೆ ಮಾಡುವ ಪ್ರಸಂಗಗಳು ಒದಗಿಬರಬಹುದು. ಏಕೆಂದರೆ ಜೀವನ ಭೂತಕಾಲದ ಯೋಚನೆಗಳನ್ನು ವರ್ತಮಾನದ ಕ್ರಿಯೆಗಳನ್ನು ಹಾಗೂ ಭವಿಷ್ಯದ ಯೋಚನೆಗಳನ್ನು ಒಟ್ಟೊಟ್ಟಾಗಿ ಹೊತ್ತು ಸಾಗುತ್ತದೆ. ಭಯವಿಲ್ಲದೆ ಜೀವನ ನಡೆಸುವುದು ಸುಲಭದ ಮಾತಲ್ಲ.
ಶ್ರೀಯುತ ಸಂತೋಷ್ ನಂಬಿಯಾರ್ ಅವರ ಂ ಓಇW Wಂಙ ಔಈ ಐIಗಿIಓಉ- ಔಟಿe simಠಿಟe sಣeಠಿ ಣo ಚಿ ಟiಜಿe ತಿiಣhouಣ ಜಿeಚಿಡಿ ಇಷ್ಟವಾದದ್ದು ಅದರಲ್ಲಿಯ ಬದುಕಲು ಕಲಿಯಿರಿ ಬಗೆಗಿನ ಚಿಂತನೆಗಾಗಿ ಅಲ್ಲ. ಬದಲು ರಂಗಭೂಮಿಯ ಒಡನಾಟದಿಂದ ಬೆಳೆದು ಬಂದ ನನಗೆ ನಂಬಿಯಾರ್ ಅವರು ಕಂಡುಕೊಂಡ ಭಯಮುಕ್ತ ಬದುಕು ಹೇಗೆ ಸಾಧ್ಯ ಎಂಬ ಅವರ ವಿಶ್ಲೇಷಣೆಯಿಂದ. ರಂಗದ ಮೇಲಿನ ನಟ ಭಯವಿಲ್ಲದೆ ತಾನೊಂದು ಪಾತ್ರವಾಗಲು ಮಾಡಿಕೊಳ್ಳಬೇಕಾದ ತಯಾರಿಗೆ ಸಾಕಷ್ಟು ನಟನಾ ಸಿದ್ಧಾಂತಗಳು ಬಂದಿವೆ. ಮನುಷ್ಯ ತನ್ನನ್ನು ತಾನು ಅರ್ಥಮಾಡಿಕೊಂಡಾಗ ಪರಿಸರವನ್ನು ಅರ್ಥಮಾಡಿಕೊಳ್ಳಬಹುದೆನ್ನುವ ಸರಳವಾದ ನುಡಿಯ ಹಿಂದಿನ ಕ್ಲಿಷ್ಟತೆಯು ರಂಗದ ಮೇಲಿರುವ ನಟ, ಪಾತ್ರವಾಗುವ ಪ್ರಕ್ರಿಯೆಗಿಂತ ಭಿನ್ನವಲ್ಲ. ನಂಬಿಯಾರ್ ಅವರು ಮನುಷ್ಯ ಭಾವನೆಗಳ ಬಗ್ಗೆ ಬರೆದಿದ್ದರಿಂದ; ರಂಗಭೂಮಿ ಭಾವನೆಗಳನ್ನು ಅನಾವರಣ ಮಾಡಿಕೊಡುವ ಕ್ಷೇತ್ರವಾದ್ದರಿಂದ ಅನುವಾದ ಮಾಡಬೇಕೆನ್ನುವ ಮನಸ್ಸಾಯಿತು. ಎರಡನೆಯದಾಗಿ ಮನಸ್ಸು ಎಂಬ ಅದ್ಭುತವಾದ, ವಿಚಿತ್ರವಾದ ಪರಿಕಲ್ಪನೆಯ ಬಗ್ಗೆ ಕೇಳಿ, ಓದಿ ತಿಳಿದ ಅದರ ನಿಗೂಢತೆಗಾಗಿ.
ಸರಳವಾದದ್ದನ್ನು ನಾವೆಷ್ಟು ಬೇಗ ಮರೆಯುತ್ತೇವೆಯೋ ಕ್ಲಿಷ್ಟವಾದುದನ್ನು ನೆನಪಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಹಾಗಾಗಿ ಅನುವಾದವಾಗಿದೆಯೇ ಹೊರತು ಭಾವವಾಗುವುದಿಲ್ಲ. ಸೂತ್ರಗಳು ಕಿರಿದಾಗಿದ್ದು ಅದರ ಹಿಂದಿನ ವಿವರಣೆ ಸವಿಸ್ತಾರವಿರುತ್ತದೆ. ಸೂತ್ರದಂತೆ ಅನುವಾದಿಸಲಾಗಿದೆ. ಅನುವಾದಕ್ಕೆ ಅವಕಾಶ ಮಾಡಿಕೊಟ್ಟ ಶ್ರೀಯುತ ಸಂತೋಷ್ ನಂಬಿಯಾರ್ ಅವರಿಗೂ ಪ್ರೋತ್ಸಾಹಿಸಿದ ಸ್ನೇಹಿತರಿಗೂ, ಪ್ರಕಾಶಕರಿಗೂ ಆಭಾರಿ. ನಿಮ್ಮ ಸಲಹೆಗಳನ್ನು ಸದಾ ಸ್ವಾಗತಿಸುತ್ತೇನೆ.
ಶೀನಾ ನಾಡೋಳಿ
ಮುನ್ನುಡಿ
ಸಂತೋಷ್ ನಂಬಿಯಾರ್ ಅವರ ಭಯಮುಕ್ತ ಬದುಕಿನೆಡೆಗೆ… ಕೃತಿಯು ವರ್ತಮಾನದ ಅನೇಕ ಜಂಜಾಟಗಳ ನಡುವೆಯೂ ಬದುಕಲ್ಲಿ ಹೊಸ ಬೆಳಕನ್ನು ತೋರುತ್ತದೆ. ಮೇಲ್ನೋಟಕ್ಕೆ ಅಲೌಕಿಕ ಚಿಂತನೆಯ ದಾರ್ಶನಿಕತೆ ಯನ್ನು ಹೇಳುವ ತತ್ವಜ್ಞಾನಿಯಂತೆ ನಂಬಿಯಾರ್ ಅವರು ತಮ್ಮ ಅನುಭವಗಳನ್ನು ಇದರಲ್ಲಿ ಒರೆಹಚ್ಚಿದ್ದಾರೆ. ಅನುಭವವೇದ್ಯವಾದ ಘಟನೆಗಳನ್ನು ಮನುಷ್ಯನ ಮನಸ್ಸಿನ ಗ್ರಹಿಕೆಗಳ ಸೂಕ್ಷ್ಮ ಅವಲೋಕನದ ಮೂಲಕ ಇಲ್ಲಿನ ಚಿಂತನೆಯನ್ನು ಹರಿಯಬಿಟ್ಟಿದ್ದಾರೆ. ಇದು ವ್ಯಕ್ತಿಯೊಬ್ಬನನ್ನು ದಾರ್ಶನಿಕ ನೆಲೆಗೂ ಒಯ್ಯಲು ನೆರವಾಗಬಹುದು. ಹಾಗೆಯೆ ಉತ್ತಮ ಸಮಾಜ ನಿರ್ಮಾಣದಲ್ಲಿ ಭಾಗಿಯಾಗುವ ಪ್ರೀತಿ, ಕರುಣೆ ತುಂಬಿದ ಶಾಂತಿಪ್ರಿಯ ವ್ಯಕ್ತಿಯಾಗಲೂ ಸಹಕಾರಿಯಾಗಬಲ್ಲದು. ಮನುಷ್ಯನ ಭೂತಕಾಲದ ಆಲೋಚನೆಗಳು ನಿರ್ದಿಷ್ಟಪಡಿಸಿದ ಬದುಕಿನ ಕುರಿತಾದ ಪರಿಕಲ್ಪನೆಗಳು ಹಾಗೂ ಅವುಗಳಿಂದ ರೂಪುಗೊಳ್ಳಲಿರುವ ಬದುಕಿನ ಭವಿಷ್ಯತ್ತಿನ ಕುರಿತಾದ ಮಾನವರ ಆತಂಕ, ಇವುಗಳಿಂದಲೇ ಮನುಷ್ಯರ ಬದುಕು ನಿರಂತರವಾದ ಭಯದಿಂದ ವ್ಯಾಪ್ತಗೊಂಡಿರುತ್ತದೆ. ಇದನ್ನು ಕಳೆದುಕೊಂಡು ವರ್ತಮಾನವನ್ನು ಕ್ರಿಯಾಶೀಲವಾಗಿ ರೂಪಿಸುವ ಬದುಕಿನ ಮೂರ್ತಸ್ಥಿತಿಯೊಂದನ್ನು ನಂಬಿಯಾರ್ ಇಲ್ಲಿ ಬೆಟ್ಟು ಮಾಡುತ್ತಿದ್ದಾರೆ. ವರ್ತಮಾನದ ಎಲ್ಲ ವಿದ್ಯಮಾನಗಳನ್ನು ಅರ್ಥಪೂರ್ಣವಾಗಿ ಸ್ವೀಕರಿಸುವ ಹಾಗೂ ಕ್ರಿಯಾಶೀಲವಾಗಿ ಪ್ರತಿಕ್ರಿಯಿಸುವಂತೆ ಮಾಡುವಲ್ಲಿಯೇ ಬದುಕಿನ ನಿಜವಾದ ಅರ್ಥವಿದೆ. ಅದು ಮಾತ್ರ ಬಾಹ್ಯ ಬದುಕಿನ ಸೌಂದರ್ಯವನ್ನು ಆಸ್ವಾದಿಸುವಂತೆ ಮಾಡುವ, ಆಂತರಿಕವಾಗಿ ಆಹ್ಲಾದವನ್ನು ನೀಡುವ ಬದುಕಾದೀತು ಎಂಬುದನ್ನು ದೃಢಪಡಿಸಿದ್ದಾರೆ. ಇದು ವ್ಯಕ್ತಿಯ ದುಗುಡ, ದುಮ್ಮಾನಗಳನ್ನು ದೂರ ಮಾಡುವ ಪ್ರೀತಿ, ಕರುಣೆಗಳು ಮಾತ್ರವಿರುವ ಬದುಕಾದೀತು. ಋಷಿಸದೃಶ್ಯ ಬದುಕಿನೆಡೆಗೆ ಮುಖಮಾಡಿರುವ ಚಿಂತನೆ ಯೆಂದು ಭಾಸವಾದರೆ ಬದುಕನ್ನು ಸಂತೋಷಾನುಭವದಿಂದ ಪರಿಭಾವಿಸಲು ನೆರವಾಗುವುದರಲ್ಲಿ ಸಂಶಯವಿಲ್ಲ. ಆದರೆ ಸ್ವಯಂ ಪ್ರಯತ್ನಗಳು ಮಾತ್ರ ಇದನ್ನು ಸಾಧ್ಯವಾಗಿಸಬಲ್ಲವು. ನಂಬಿಯಾರ್ ಅವರ ಚಿಂತನೆಗಳು ಪ್ರಾಯೋಗಿಕವಾಗಿ ಬದುಕಿನೊಡನೆ ಮಿಳಿತವಾಗಿ ಆದರ್ಶದ ಸುವ್ಯವಸ್ಥಿತ ಸಮಾಜ ರೂಪುಗೊಳ್ಳಲಿ. ಲೇಖಕ ಸಂತೋಷ್ ನಂಬಿಯಾರ್ ಅವರಿಗೆ ಅಭಿನಂದನೆಗಳು.
ಡಾ. ಮೋಹನ ಕುಂಟಾರ್
ಪೀಠಿಕೆ
ಸಹಸ್ರಾರು ವರ್ಷಗಳಿಂದ ನಮ್ಮ ಮೆದುಳೇ ನಮ್ಮನ್ನು ಭಯ, ಕೋಪ, ಮತ್ಸರ ಹಾಗೂ ದ್ವೇಷಗಳೆಂಬ ವಿಷವರ್ತುಲದ ಬಲೆಯಲ್ಲಿ ಸಿಲುಕಿಸಿದೆ. ಇಂಥಾ ಮೆದುಳು ನಮ್ಮನ್ನು ಹಾಗೂ ಇತರರನ್ನು ಸತತವಾಗಿ ತುಲನೆ ಮಾಡಿಕೊಳ್ಳಲು ಮತ್ತು ಪರಾಮರ್ಶಿಸಿಕೊಳ್ಳುವಂತೆ ಮಾಡಲು ಕಾರ್ಯ ನಿರ್ವಹಿಸುತ್ತಿದೆ. ಎಲ್ಲಾ ಕಷ್ಟ ಕೋಟಲೆ, ಗೊಂದಲಗಳ ಮಧ್ಯೆ ಒಂದು ಅಲ್ಪಪ್ರಮಾಣದ ಸಫಲತೆಯನ್ನು ಕಾಣಲು ನಾವು ಬಹಳಷ್ಟು ಸೆಣಸಾಟ, ಹೆಣಗಾಟ ನಡೆಸಿದ್ದೇವೆ. ಬದುಕಿನ ತುಂಬಾ ಹತಾಶೆ, ನಿರಾಶೆಗಳೇ ತುಂಬಿ ಕೊಂಡಿವೆ ಹೊರತು ಸಂತೋಷದ ಬದುಕು ನಡೆಸಲು ವಿಫಲರಾಗಿದ್ದೇವೆ.
ಇದಕ್ಕೆ ಕಾರಣ ನಮಗೆ ನಮ್ಮ ಪರಿಸ್ಥಿತಿಯನ್ನು ಬದಲಾಯಿಸಿಕೊಳ್ಳಲು ತಿಳಿಯದೇ ಇರುವುದು. ನಾವು ಅದನ್ನು ಒಂದು ಮಾದರಿಯಂತೆ, ನಿಯಮದಂತೆ ಸ್ವೀಕರಿಸಿದ್ದೇವೆ. ಅಂದರೆ ನಮ್ಮ ಜೀವನವನ್ನು ಹೀಗೆಯೇ ನಡೆಸಬೇಕೆಂದು ಮೊದಲೇ ನಿರ್ಧರಿಸಿದ್ದೇವೆಯೇ? ಅಥವಾ ನಮಗೆ ಪರಿಸ್ಥಿತಿಯಿಂದ ಹಿಮ್ಮುಖವಾಗಿ ತಿರುಗಿ ಜೀವನ ನಡೆಸಲು ಸಾಧ್ಯವಿದೆಯೇ?
ಮಾನವನ ಮೆದುಳು ಒಂದು ಭಂಡಾರ. ದಾಖಲೆಗಳನ್ನು ಸಂಗ್ರಹಿಸಿ ಡುವ ಕೋಣೆ. ಅಲ್ಲಿ ಭೂತಕಾಲದ ಅನುಭವಗಳನ್ನು ಸಂಗ್ರಹಿಸಿಡ ಲಾಗುತ್ತದೆ. ಹೀಗೆ ಸಂಗ್ರಹಿಸಿಡಲ್ಪಟ್ಟ ಅನುಭವಗಳು ನೆನಪುಗಳಾಗಿ ರೂಪುಗೊಂಡು ನಮ್ಮ ದಿನನಿತ್ಯದ ಯೋಚನೆ, ಭಾವನೆ ಮತ್ತು ಕ್ರಿಯೆ ಪ್ರತಿಕ್ರಿಯೆಗಳ ಮೇಲೆ ಅಗಾಧವಾದ ಪರಿಣಾಮಗಳನ್ನು ಬೀರುತ್ತವೆ.
ನಮ್ಮ ತಲೆಯಲ್ಲಿ ಉಂಟಾಗುವ ಆಲೋಚನಾಪ್ರಕ್ರಿಯೆಗಳ ಬಗ್ಗೆ ನಾವುಗಳೆಲ್ಲರೂ ಹೆಚ್ಚು ಕಡಿಮೆ ವಿಸ್ಮೃತಿಯನ್ನು ಹೊಂದಿದ್ದೇವೆ. ಹಾಗೇ ನಮ್ಮ ಸಮಾಜದ ಹಿಂದಿನ ತಲೆಮಾರಿನಿಂದ, ತಲೆತಲಾಂತರದಿಂದ ಬಂದ ಯೋಚನೆ, ನೆನಪುಗಳು ನಮ್ಮ ಪ್ರಸ್ತುತ ಆಲೋಚನೆ ಮತ್ತು ಕ್ರಿಯೆಗಳಲ್ಲಿ ಯಾವ ಪಾತ್ರವನ್ನು ವಹಿಸುತ್ತವೆ ಎಂಬುವುದನ್ನು ಸಂಪೂರ್ಣವಾಗಿ ಮರೆತಿದ್ದೇವೆ. ನಮ್ಮ ಈಗಿನ ಬದುಕು ನಮ್ಮ ಹಿಂದಿನ ನೆನಪುಗಳ ಬಲೆಯಲ್ಲಿ ಸಿಕ್ಕು ಒದ್ದಾಡುತ್ತಿದೆ. ಅದರಿಂದ ಮುಕ್ತವಾಗಿ, ಸ್ವತಂತ್ರವಾಗಿ ಆಲೋಚನೆ ಮಾಡುವ ಶಕ್ತಿಯನ್ನು ನಾವು ಕಳೆದುಕೊಂಡಿದ್ದೇವೆ.
ನಮ್ಮ ಬದುಕು ಹೀಗೆಯೇ ಸಾಗಬೇಕೆ? ನಮ್ಮ ಪ್ರಸ್ತುತ ಯೋಚನೆ ಗಳನ್ನು, ಸ್ವಭಾವಗಳನ್ನು ಹಳೆಯ ನೆನಪುಗಳ ಮತ್ತು ಅನುಭವಗಳ ನಿಯಂತ್ರಣದಲ್ಲಿಟ್ಟುಕೊಳ್ಳಲು ಅವಕಾಶ ಮಾಡಿಕೊಡೋಣವೇ? ಅಥವಾ ನಮ್ಮ ಮೆದುಳಿನ ಕೋಶದಲ್ಲಿ ಸಂಗ್ರಹಿಸಲ್ಪಟ್ಟ ಜ್ಞಾನವನ್ನು ಶಾಂತವಾದ, ನಿರಂತರವಾದ ಹಿನ್ನೆಲೆ ಸ್ವರವನ್ನು ಬದಿಗೆ ಸರಿಸಿ, ಪ್ರೀತಿ ಸಂತೋಷ, ಸೌಂದರ್ಯ, ಕರುಣೆ ಮತ್ತು ಶಾಂತಿ ತುಂಬಿದ ಒಂದು ಹೊಸ ಬದುಕಿನ ರೀತಿಯನ್ನು ಪ್ರಜ್ಞಾಪೂರ್ವಕವಾಗಿ ಸೃಷ್ಟಿಸಿಕೊಳ್ಳಲು ಹೊರಡೋಣವೇ?
ಬದುಕುವುದಕ್ಕೋಸ್ಕರ ನಮ್ಮ ಮೆದುಳು ಕಾರ್ಯರೂಪಗೊಂಡಿದೆ. ನಮ್ಮ ಸೇವೆಯನ್ನು ಚೆನ್ನಾಗಿ ನಿರ್ವಹಿಸಿದೆ. ಆದರೆ ನಮ್ಮನ್ನು ಕೇವಲ ರಕ್ಷಿಸುವುದಕ್ಕಷ್ಟೇ ಅಲ್ಲದೆ ಅದಕ್ಕಿಂತಲೂ ಹೆಚ್ಚಿನ ಸಾಮರ್ಥ್ಯ ಅದಕ್ಕಿದೆ. ನನ್ನ ಸ್ವಂತ, ವೈಯಕ್ತಿಕ, ಶೋಧನೆ ಹಾಗೂ ಯಾತನೆಗಳ ಮೂಲಕ ಭಯ, ಕೋಪ, ದ್ವೇಷರಹಿತ ಮೆದುಳನ್ನು ಉಪಯೋಗಿಸಿಕೊಳ್ಳುವ ಒಂದು ಹೊಸಮಾರ್ಗವನ್ನು ನಾನು ಶೋಧಿಸಿದ್ದೇನೆ. ಇದರಿಂದ ದುಃಖ ದುಮ್ಮಾನಗಳಿಂದ ಮುಕ್ತವಾದ ಶಾಂತಿಯುತ ಬದುಕನ್ನು ನಾವು ಅನುಭವಿಸ ಬಹುದು.
ಯಾರ ಜೀವನವು ಪ್ರತಿಕ್ಷಣವು ಕೂಡಾ ತಾಜಾತನದಿಂದ ಕೂಡಿ ರುತ್ತದೋ, ಎಲ್ಲಿ ಶಾಂತಿ, ಸಂತೋಷ, ಕರುಣೆ, ಪ್ರೀತಿ ಇರುತ್ತದೋ ಅಲ್ಲಿ ಪವಾಡಗಳನ್ನು ಸೃಷ್ಟಿಸಲು ಸಾಧ್ಯವೆಂಬುದನ್ನು ನಾನು ಕಂಡುಕೊಂಡಿದ್ದೇನೆ. ಈ ಬದುಕು ನಮಗೆ ದೊರಕಿದೆ. ನಮ್ಮ ಬಾಳು ನಮ್ಮ ಕೈಲಿದೆ. ಅದನ್ನು ಕ್ಷಣದಲ್ಲಿ ನಾವು ಸೃಷ್ಟಿಸಬಹುದು. ಈ ಪುಸ್ತಕವನ್ನು ನೀವು ಓದುವ ಮೊದಲು ನಿಮ್ಮನ್ನು ಸ್ವಾಗತಿಸುತ್ತಾ, ಒಂದು ಹೊಸರೀತಿಯ ಬದುಕನ್ನು ಆಸ್ವಾದಿಸಲು ನಿಮ್ಮ ಮನಸ್ಸನ್ನು, ಹೃದಯವನ್ನು ತೆರೆದಿಟ್ಟುಕೊಳ್ಳಿ ಎಂದು ಹೇಳಲು ಬಯಸುತ್ತೇನೆ. ಎರಡನೆಯದಾಗಿ, ನಿಮ್ಮನ್ನು ಭೂತಕಾಲದಲ್ಲಿ ಬಂಧನದಲ್ಲಿರಿಸಿದ ನಿಮ್ಮ ಪಕ್ಷಪಾತ ಒಲವುಗಳನ್ನು, ಅಭಿಪ್ರಾಯಗಳನ್ನು, ಭೂತಕಾಲದಲ್ಲಿ ನೀವು ರೂಪುಗೊಂಡ ಬಗೆಯನ್ನು ಮತ್ತು ಯೋಚನೆಗಳನ್ನು ಬದಿಗಿಡಿ. ಈವರೆಗೆ ಮಾನವಕುಲ ಅರಿತುಕೊಂಡ ಬದುಕಿಗಿಂತ ವಿಭಿನ್ನವಾದ ಒಂದು ಬದುಕು ಮತ್ತು ಯಾವುದೇ ಭಯ, ವ್ಯಥೆಗಳಿಲ್ಲದ ಹೊಸ ಬದುಕಿನ ಸಾಧ್ಯತೆಯನ್ನು ಶೋಧಿಸುವ ಪ್ರಯತ್ನದ ಪ್ರಯಾಣದಲ್ಲಿ ನನ್ನ ಜೊತೆಗೆ ಬನ್ನಿ.
ಸಂತೋಷ್ ನಂಬಿಯಾರ್, ಮೆಲ್ಬೊರ್ನ್, ಆಸ್ಟ್ರೇಲಿಯಾ
ಪರಿವಿಡಿ
ಸವಿನುಡಿ / ೩
ಲೇಖಕರ ಮಾತು / ೬
ಅನುವಾದಕರ ಮಾತು / ೭
ಮುನ್ನುಡಿ / ೯
ಪೀಠಿಕೆ / ೧೧
ಅಂತರಾಳದಿಂದ / ೧
ನೀವು ಯೋಚಿಸುವ ರೀತಿಯನ್ನು ಬದಲಾಯಿಸಿ
ನಿಮ್ಮ ಯೋಚನಾಪ್ರಕ್ರಿಯೆಯ ಬಗ್ಗೆ ಎಚ್ಚರವಹಿಸಿ / ೯
ಭಯವನ್ನು ದೂರ ಮಾಡಿ / ೨೨
ಪ್ರೀತಿಯಿಂದಿರಿ / ೨೯
Reviews
There are no reviews yet.