‘ದಂಡಿ’ ಎಂದರೆ?
ಈ ಕಾದಂಬರಿಯ ಶೀರ್ಷಿಕೆ ’ದಂಡಿ’, ಯಾಕೆಂದರೆ ಇದರ ನಾಯಕನ ಹೆಸರು ’ದಂಡಿ’. ಈತ ಭಾರತದ ಸ್ವಾತಂತ್ರ್ಯ ಹೋರಾಟಗಳಲ್ಲಿ ಅತ್ಯಂತ ಪ್ರಮುಖ ಎನಿಸಿದ, ದಂಡಿ ಉಪ್ಪಿನ ಸತ್ಯಾಗ್ರಹದ ಸುತ್ತಲಿನ ಮಹತ್ವದ ರಾಷ್ಟ್ರ, ರಾಜ್ಯ ನಾಯಕರುಗಳ ಚಟುವಟಿಕೆ ಮತ್ತು ವ್ಯಕ್ತಿತ್ವಗಳಿಂದ ತೀವ್ರವಾಗಿ ಪ್ರಭಾವಿತನಾದವನು. ಅವರೆಲ್ಲರ ಸಾರಸತ್ವಗಳನ್ನು ಹೀರಿಕೊಳ್ಳಲು ಹೊರಟವನು. ಆದರೆ ಎಲ್ಲೋ ದಾರಿ ತಪ್ಪಿದ್ದಾನೆ. ತಪ್ಪಿದ ಈ ದಾರಿಯನ್ನು ಆತ ದಕ್ಕಿಸಿಕೊಳ್ಳಲೇಬೇಕಿದೆ. ಹೀಗಾಗಿ, ಈ ದಾರಿಯ ಶೋಧವೇ ಕಾದಂಬರಿ ವಸ್ತು. ಅದಕ್ಕಾಗಿಯೇ ಇದು ಮನುಷ್ಯನ, ಸಮುದ್ರದೆಡೆಗಿನ ಸಾವಿರದ, ಸಾವಿಲ್ಲದ ಹೆಜ್ಜೆಗಳ ಹಾಡು.
ಮಹಾತ್ಮ ಗಾಂಧೀಜಿ ಅವರಿಂದಾದಿಯಾಗಿ ಕರ್ನಾಟಕದ ಉತ್ತರ ಕನ್ನಡದ ಟಿ.ಎಸ್.ನಾಯಕ, ರಂಗನಾಥ ದಿವಾಕರ, ಡಾ.ಹರ್ಡಿಕರರ ರಾಷ್ಟ್ರೀಯ ಕಾಳಜಿಗಳು ಕಾದಂಬರಿಯ ನಾಯಕ ದಂಡಿಯಲ್ಲಿ ಸಮ್ಮಿಳಿತಗೊಂಡಿವೆ. ಅವರಂತೆಯೇ ಈ ನೆಲದ ಉಪ್ಪಿನ ಋಣವನ್ನು ತೀರಿಸಿದ ಧನ್ಯತೆಯನ್ನು ಅನುಭವಿಸುವುದೇ ನಮ್ಮ ನಾಯಕ ದಂಡಿಯ ಉದ್ದೇಶ. ಈ ಅರ್ಥದಲ್ಲಿ ದಂಡಿ ಸರ್ವಕಾಲಕ್ಕೂ ಸಲ್ಲುವ ನಾಯಕ. ಈತನಿಗೆ ಭೂತದ ಹಂಗಿಲ್ಲ, ವರ್ತಮಾನದ ಬಂಧನವಿಲ್ಲ ಮತ್ತು ಭವಿಷ್ಯದ ಮಿತಿ ಇಲ್ಲ.
ಚಾರಿತ್ರಿಕವಾದ ದಂಡಿಯ ಈ ಚರಿತ್ರೆ ಇನ್ನೊಂದು ಅರ್ಥದಲ್ಲಿ ಇಡೀ ಕರಾವಳಿ ಕರ್ನಾಟಕದ ಉಪ್ಪಿನ ಸತ್ಯಾಗ್ರಹದ ಸುತ್ತಲಿನ ಚರಿತ್ರೆಯೇ ಆಗಿದೆ.
೧೯೨೯ರ ಡಿಸೆಂಬರ್ ನಲ್ಲಿ ಮಹತ್ವದ ಕಾಂಗ್ರೆಸ್ ಅಧಿವೇಶನ ಒಂದು ಲಾಹೋರಿನಲ್ಲಿ ಜರುಗಿತು. ಅಲ್ಲಿ ಸ್ವೀಕೃತವಾದ ಗೊತ್ತುವಳಿಗೆ ಪೂರಕವಾಗಿ ಮಹಾತ್ಮಾ ಗಾಂಧೀಜಿ ಸಮಸ್ತ ಭಾರತಿಯರೆಲ್ಲರನ್ನೂ ರಾಷ್ಟ್ರ ರಕ್ಷಣೆಯ ಒಂದು ಸಾಮಾನ್ಯ ವೇದಿಕೆಯ ಮೇಲೆ ಒಗ್ಗುಡಿಸಲು ಆಲೋಚಿಸುತ್ತಿದ್ದರು. ಅದಕ್ಕಾಗಿ ಅವರು ಒಂದು ಸರಳ ವಸ್ತುವನ್ನು ಹುಡುಕಾಡುತ್ತಿದ್ದರು. ಈ ಹುಡುಕಾಟದಲ್ಲಿ ಅವರಿಗೆ ಹಾಗೆ ದಕ್ಕಿದ ಸರಳ ವಸ್ತುವೇ ಉಪ್ಪು. ಗುಜರಾತಿನ ಅಹಮದಾಬಾದಿನಿಂದ ಎರಡು ನೂರು ಮೈಲಿ ದೂರದ ದಂಡಿ ಎನ್ನುವ ಸ್ಥಳವನ್ನು ೮೮ ಜನ ಸತ್ಯಾಗ್ರಹಿಗಳೊಂದಿಗೆ ಕ್ರಮಿಸಿ, ಉಪ್ಪು ತಯಾರಿಸಿ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಭಾರತೀಯರ ಸ್ವಾತಂತ್ರ್ಯದ ಸಂದೇಶವನ್ನು ಘೋಷಿಸಿದರು. ೧೯೩೦ರ ಜನೆವರಿ ೨೬ರಂದು ಗುಜರಾತಿನಲ್ಲಿ ನಡೆದ ಈ ಹೋರಾಟ, ರಾಷ್ಟ್ರದ ಅನೇಕ ಸ್ಥಳಗಳಲ್ಲಿ ಅನುರಣಿಸಿತು. ಇದಕ್ಕೆ ಪ್ರತಿಸ್ಪಂದನೆ ಎನ್ನುವ ರೀತಿಯಲ್ಲಿ ೧೯೩೦ರ ಏಪ್ರಿಲ್ ೧೩ರಂದು ಕರಾವಳಿ ಕರ್ನಾಟಕದ ಅಂಕೋಲೆಯಲ್ಲಿ ಉಪ್ಪಿನ ಸತ್ಯಾಗ್ರಹವನ್ನು ಕೈಗೊಳ್ಳುವ ಯೋಜನೆಯನ್ನು ಕರ್ನಾಟಕ ಸತ್ಯಾಗ್ರಹ ಮಂಡಲ ಮತ್ತು ಹಿಂದೂಸ್ಥಾನಿ ಸೇವಾದಳಗಳು ಜಂಟಿಯಾಗಿ ರೂಪಿಸಿದವು. ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳ ಸಾಣಿಕಟ್ಟಾ, ಬಂಗ್ರೆ, ಪೂಜಿಗೆರೆ, ಹೊನ್ನಾವರ ಹೀಗೆ ಹಲವಾರು ಸ್ಥಳಗಳಲ್ಲಿ ಉಪ್ಪನ್ನು ತಯ್ಯಾರಿಸುವುದರ ಮೂಲಕ, ಗಾಂಧೀಜಿಯವರ ದಂಡಿ ಸತ್ಯಾಗ್ರಹದ ಕಿಚ್ಚನ್ನೆ ಕರ್ನಾಟಕದ ಕರಾವಳಿ ಪ್ರದೇಶ ಕಾಯ್ದಿರಿಸಿಕೊಂಡು, ಅದನ್ನೊಂದು ರಾಷ್ಟ್ರೀಯ ಆಂದೋಲನವಾಗಿ ರೂಪಿಸಿತು. ಈ ಕಾರಣಕ್ಕಾಗಿ ಕರ್ನಾಟಕವು ಇಡೀ ದೇಶದ ಗಮನವನ್ನು ಸೆಳೆಯಿತು.
ಈ ಮಹತ್ವದ ಸಂದರ್ಭದಲ್ಲಿ ರೂಪಗೊಂಡವನು ಕಾದಂಬರಿಯ ನಾಯಕ ದಂಡಿ. ಇವನೊಂದಿಗೆ ಇಲ್ಲಿಯ ಅಗೇರ, ಮೊಗೇರ, ಹಾಲಕ್ಕಿ, ಗೌಡಸಾರಸ್ವತ, ಹವ್ಯಕ ಮತ್ತು ದೇಶಾವರಿ ಬ್ರಾಹ್ಮಣ ಸಮುದಾಯಗಳು, ನಾಡವರು, ಕಾರ್ವಿ ಹಾಗೂ ಕುಣಬಿ ಸಮುದಾಯಗಳು ತಮ್ಮ ಹೋರಾಟದ ರೀತಿಯನ್ನು ಚಳುವಳಿಯ ಆಶಯದಂತೆ ರೂಪಿಸಿಕೊಂಡ ಕಥನವನ್ನು ಕಾದಂಬರಿಯು ಎಳೆಎಳೆಯಾಗಿ ವಿವರಿಸುತ್ತಾ ಹೋಗುತ್ತದೆ.
ಉಪ್ಪಿಗಾಗಿ ಹೋರಾಡುವ ದಂಡಿ, ಉಪ್ಪಿನ ಋಣಕ್ಕಾಗಿ ಮತ್ತು ಎಲ್ಲರನ್ನು ಒಗ್ಗೂಡಿಸಿದ ಅದರ ಗುಣಕ್ಕಾಗಿ ಮತ್ತೆ ಮತ್ತೆ ಓದು ಮತ್ತು ಚಿಂತನೆಗೆ ಒಂದು ಸರಳ ಸಾಮಾನ್ಯ ಕಾರಣವಾಗುತ್ತಾನೆ.
ಮಲ್ಲಿಗೆಯ ಮೈಯಲ್ಲಿ ವಿದ್ರೋಹದ ಬೆಂಕಿ
ಸೆರೆಮನೆಯೆ ಸ್ವರಾಜ್ಯದ ಮೆಟ್ಟಿಲು -ರಾ.ವೆ.ಕರಗುದರಿ
ಇನ್ನೂ ನೆತ್ತರದ ಬಿಸಿ ಆರುವ ಮುಂಚಿನ ಒಂದು ನಸುಕಿನ ಜಾವ, ನಾನು ಸಮುದ್ರ ತೀರದ ಭಟ್ಕಳಕ್ಕೆ ಬಂದಿಳಿದೆ.
ನಾನು ಇಲ್ಲಿಗೆ ಬಂದಾಗ ಭಟ್ಕಳದ ಖ್ಯಾತ ವೈದ್ಯ ಡಾ. ಯು.ಚಿತ್ತರಂಜನ್ದಾಸ್ ಅವರ ಹತ್ಯೆಯಾಗಿ ಕೆಲವು ವರ್ಷಗಳು ಗತಿಸಿದ್ದವು ಅಷ್ಟೆ. ಊರಲ್ಲಿ ಪ್ರಕ್ಷುಬ್ಧ ವಾತಾವರಣ, ಎಲ್ಲಿ ನೋಡಿದಲ್ಲಿ ಪೊಲೀಸರು. ಊರ ಜನರಿಗಿಂತ ಪೊಲೀಸ ಹಾಗೂ ಮಿಲಿಟರಿಯ ಸಂಖ್ಯೆ ಹೆಚ್ಚಾಗಿತ್ತು. ಎಲ್ಲೆಲ್ಲೂ ಸಂಶಯದ ಗಾಳಿ. ಆಗ ಬಹುತೇಕ ಅಲ್ಲಿಯ ಎಲ್ಲ ಟೆಲಿಫೋನ್ ಸೆಂಟರ್ಗಳಲ್ಲಿ ಮುಸ್ಲಿಂ ರಾಷ್ಟ್ರಗಳ ಸಂಪರ್ಕ ನಂಬರ್ಗಳೆ. ಹಾಗೆ ಆ ಊರು ಕರ್ನಾಟಕದ ಒಂದು ಪುಟ್ಟ ಪಾಕಿಸ್ತಾನವೇ ಸರಿ. ಅದಕ್ಕೆ ಅಲ್ನವಾಯತ್ ಎಂದೂ ಕರೆಯುವುದುಂಟು. ವರ್ತಮಾನದ ಕರಾಳ ವಾಸ್ತವ ನನ್ನಂಥ ಲೇಖಕನಿಂದ ದೂರವಿರಲಿಲ್ಲ. ಯಾಕೆಂದರೆ ಹತ್ಯೆಯಾದ ಡಾ. ಯು.ಚಿತ್ತರಂಜನ್ರ ಮಗ ನಾನು ವೃತ್ತಿ ಅರಸಿ ಹೋದ ಸಂಸ್ಥೆಯ ಸದಸ್ಯರಲ್ಲಿ ಒಬ್ಬರಾಗಿದ್ದರು.
ಆದರೆ, ಕಡಲ ಉಪ್ಪಿನ ಕತೆ ಕೇಳಲು ಬಂದಿದ್ದ ನನಗೆ, ಇಲ್ಲಿಯ ಕೋಮು ಗಲಭೆ, ರಾಜಕೀಯ ಯಾವುದೂ ತಡೆಯಾಗಿರಲಿಲ್ಲ. ನನಗೆ ಅದರಲ್ಲಿ ಆಸಕ್ತಿಯೂ ಇರಲಿಲ್ಲ.
ಭಟ್ಕಳದಲ್ಲಿ ನಾನು ಬಹುಕಾಲ ಇರಲಿಲ್ಲ. ಇಲ್ಲಿ, ಅಬ್ಬಬ್ಬಾ ಎಂದರೆ ವರ್ಷಕ್ಕೂ ಮಿಕ್ಕಿದ ಒಂದಷ್ಟು ತಿಂಗಳುಗಳನ್ನು ಅಲ್ಲಿ ಕಳೆದಿರಬಹುದು. ಆದರೆ, ಅದೇಕೊ ಗೊತ್ತಿಲ್ಲ, ಮುಂದಿನ ನನ್ನ ಅನಂತ ಕಾಲದ ಒಂದು ಪ್ರಧಾನ ಸೆಳೆತವಾಗಿ, ಎದೆಯ ಕೂಗಾಗಿ, ಕಾಡುವ ಕಡಲಾಗಿ ಉಳಿದೇ ಹೋಯಿತು ಭಟ್ಕಳ, ಇಳಿದೇ ಹೋಯಿತು ನನ್ನೊಳಗೆ ಕವಿತೆಯಂತೆ ಭಟ್ಕಳ.
ಈ ಕಾರಣವಿರಬಹುದೇನೊ ಕುಂದಾಪುರದ ಶಿಷ್ಯ ಶರಣ್ ಮತ್ತು ಯಲ್ಲಾಪುರದ ಶಿಷ್ಯ ಮಾರುತಿ ಗೌಡ ಇವರಿಬ್ಬರಿಗೂ ಎಂ.ಫಿಲ್ ಮಾರ್ಗದರ್ಶಿಯಾದೆ, ಶಿರಾಲಿಯ ಗಣೇಶ ಯಾಜಿಗೆ ಪಿ.ಎಚ್ಡಿಯ ಮಾರ್ಗದರ್ಶಕನಾದೆ. ಮುರ್ಡೇಶ್ವರದ ಆರ್.ಎನ್. ಶೆಟ್ಟಿ ಸಂಸ್ಥೆಯಲ್ಲಿ ಗ್ರಂಥಪಾಲಕನಾದ ಗೆಳೆಯ ತಳವಾರನ ಹದುಳ ವಿಚಾರಿಸುತ್ತಿದ್ದೆ, ಬರಡು ನಾಡಿನ ನನ್ನ ಜೋಳಿಗೆಯ(ಚಡಚಣದ ಮನೆ) ತುಂಬ ಶಿರಾಲಿಯ ತವಕ್ಕಲ್ ಕೇನ್ ಇಂಡಸ್ಟ್ರಿಯ ಬೆತ್ತದ ಆಸನಗಳನ್ನು ತುಂಬಿಸಿಬಿಟ್ಟೆ. ಶಿರಸಿಯ ತಾರಾ ಹೆಗಡೆಯವರ ಕವಿತೆಗೆ ಮುನ್ನುಡಿಕಾರನಾದೆ, ಇದೇ ನಗರದ ಹಿರಿಯ ವೈದ್ಯಸಾಹಿತಿ ಪವಾರ ಅವರ ಕೃತಿ ಬಿಡುಗಡೆ ಮಾಡಿದೆ, ಹಿರಿಯರಾದ ಧರಣೇಂದ್ರ ಕುರುಕುರೆಯವರ ಭಾಷಾಂತರಗಳನ್ನು ಸಂಭ್ರಮಿಸಿದೆ.
ಇದೆಲ್ಲ, ಎಲ್ಲ ಎಲ್ಲವೂ ಭಟ್ಕಳವೆಂಬ ಭಾಗ್ಯವನ್ನುಳಿಸಿಕೊಳ್ಳಲು, ಅಲ್ಲಿ ಕಳೆದ ಬದುಕನ್ನು ನೆನಪಿಸಿಕೊಳ್ಳಲು ನಾನು ಮಾಡಿದ ಪ್ರಯತ್ನಗಳು. ಈ ಕಾರಣ ಭಟ್ಕಳ ಈಗಲೂ ನನ್ನಲ್ಲಿ ಬತ್ತದ ಒರತೆ.
ಎರಡು ದಶಕಗಳ ಹಿಂದೆ, ಹಾಳು ಬಿದ್ದ ಮನೆಯಂತಿದ್ದ ಈ ಭಟ್ಕಳದ ಓಣಿ ಓಣಿಗಳಲ್ಲಿ ಒಂಟಿಯಾಗಿ ನಾನು ಅಲೆದಾಡುತ್ತಿದ್ದರೆ, ಅಕ್ಕ ಪಕ್ಕ ಸಾವಿರ ಸಾವಿರ ಧ್ವನಿಗಳು ಪಿಸುಗುಟ್ಟಿದ ಅನುಭವವಾಗುತ್ತಿತ್ತು. ಒಂದು ಕಾಲದ ಹಿಂದೂ ವಾಸ್ತುವಿನ, ಸದ್ಯ ಮುಸ್ಲಿಂ ವಾಸ್ತವ್ಯದ ಈ ಪುರಾತನ ಮನೆಗಳಲ್ಲಿ ದೃಷ್ಠಿ ಹರಿದಷ್ಟೂ ಆಳವಾಗಿ ನೋಡುತ್ತಿದ್ದೆ ಆಗ. ಹೀಗೆ ತಿರುಗುವಾಗಲೆಲ್ಲ, ಪ್ರಕ್ಷುಬ್ಧವಾದ ಈ ನೆಲದಲ್ಲಿ ಜನರೆಲ್ಲ ಬಲವಂತದ ಬಾಳು ಸಾಗಿಸುತ್ತಿರುವ ಗುಮಾನಿ ನನಗೆ. ಈ ಊರು ಅಥವಾ ಒಟ್ಟು ಈ ಪ್ರದೇಶ ನನ್ನೊಂದಿಗೆ ಹಂಚಿಕೊಳ್ಳಲೇಬೇಕಾದ ವೇದನೆಯೊಂದಿದೆ ಎಂಬ ಜವಾಬ್ದಾರಿಯಿಂದಲೇ ಇಲ್ಲಿ ಸುತ್ತಾಡಿದೆ. ಸತ್ತವರ ಸಾವಿಲ್ಲದ ಮಾತುಗಳಿಗೆ ಕಿವಿಯಾಗಲು ಯತ್ನಿಸಿದೆ. ಲೇಖಕನಾಗುವುದೆಂದರೆ ಇದೆ, ಅಲ್ಲವೆ? ಉಂಡ ಊರಿನ ಉಪ್ಪಿನ ನಂಟು ಬೇಡವೆ?
ಕಾಲೇಜಿನಲ್ಲಿ ಪಾಠ ಮುಗಿಸಿದರಾಯ್ತು ಭಟ್ಕಳ, ಕುಂದಾಪುರ, ಮುರ್ಡೇಶ್ವರ, ಶಿರಾಲಿ, ಹೊನ್ನಾವರ ಕೊನೆಗೆ ಅಂಕೋಲೆಯ ಸಮೀಪದ ಅಗಸೂರಿನವರೆಗೂ ಕಡಲ ಅಬ್ಬರಕ್ಕೆ ಕಿವಿಯೊಡ್ಡಿ ಗೆಳೆಯ ವಿರೇಂದ್ರ ಶಾನಭಾಗನ ಬೈಕ್ ಹತ್ತಿ ಚಿನುಗು ಚಿನುಗು ಉಪ್ಪು ನೀರಿನ ಗಾಳಿ ಅನುಭವಿಸುತ್ತ ತಿರುಗಾಡಿದ್ದೇ ತಿರುಗಾಡಿದ್ದು. ಮುಂಬೈನಿಂದ ಕನ್ಯಾಕುಮಾರಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ೬೬ರ ಈ ಯಾನ, ಯಾರೆಲ್ಲರನ್ನು ನಡೆಯಿಸಿರಬಹುದು ಎಂಬ ಪ್ರಶ್ನೆ ಆಗ.
ಸಾಮಾನ್ಯವಾಗಿ ತಿರುಗಾಟ, ನಮ್ಮೊಳಗಿನ ಹೇಳಲಾಗದ, ಸಹಿಸಿಕೊಳ್ಳಲೂ ಆಗದ ಆಳ ಸಂಕಟದ ಬಾಹ್ಯ ಅಭಿವ್ಯಕ್ತಿಯಾಗಿರುತ್ತದೆ ಎಂದು ನಂಬಿದವ ನಾನು.
ಸ್ವಲ್ಪ ಸೂರ್ಯ ಸರಿದರೆ ಸಾಕು, ಭಟ್ಕಳದ ಬಂದರಿಗೆ ಹೋಗಿ, ಲೈಟ್ಹೌಸ್ ಗುಡ್ಡದ ಹೊಟ್ಟೆಯೊಳಗೊ, ಇಲ್ಲ ಸಮುದ್ರ ದಂಡೆಯ, ಸಾಯಂಕಾಲವಾಗುತ್ತಲೆ ಸಂಪೂರ್ಣ ಜಲಾವೃತಗೊಳ್ಳುತ್ತಿದ್ದ ದೂರದ ಬಂಡೆಯ ಮೇಲೊ, ಹೊತ್ತು ಮುಳುಗುತ್ತಲೆ ಮೀನು ಹಿಡಿಯಲು ಹೊರಡುತ್ತಿದ್ದ ಅಥವಾ ಮೀನು ಹಿಡಿದುಕೊಂಡು ದಡಕ್ಕೆ ಮರಳಿ ಬರುತ್ತಿದ್ದ ದೋಣಿಗಳ ಲೆಕ್ಕ ಇಡುತ್ತ, ಅವುಗಳ ಚುಕ್ಕಾಣಿ ನೋಡುತ್ತ, ಎಲ್ಲವನ್ನೂ ನುಂಗಿ ಹಾಕುವ ಅಬ್ಬರದಿಂದ ಬಂದು ಬಂಡೆಗೊ, ದಡಕ್ಕೊ ಅಪ್ಪಳಿಸಿ ಮೈಮುರಿದು ಕೊಂಡು ಹೋಗುತ್ತಿದ್ದ ಅಲೆಗಳ ದಿಟ್ಟಿಸುತ್ತ, ಹಾರುವ ಅಲೆಗಳನ್ನೇ ಬಲೆ ಮಾಡಿಕೊಂಡು ಅದರೊಳಗೆ ತೂರಿ ಬರುವ ಮೀನುಗಳನ್ನು ನುಂಗುವ ಕಡಲ ಹಕ್ಕಿಗಳ ಜಾಣ್ಮೆ ಗಮನಿಸುತ್ತ, ಕೊನೆಗೆ, ಇಂದಿಗಿಷ್ಟು ಸಾಕು ನಾಳೆ ಮತ್ತೆ ಮಾತಾಡುವಾ ಎಂದು ಮೆಲ್ಲಗೆ ಕಡಲಿಗಿಳಿದು, ಕತ್ತಲೆಗೆ ಇಂಬುಗೊಟ್ಟು ಹೋಗಿದ್ದ ಸೂರ್ಯನನ್ನು ನೆನೆಸುತ್ತ, ಒಂದು ದೀರ್ಘ ವರ್ಷ ಉರುಳಿಸಿದ್ದು ಈಗ ಒಂದು ಕನಸಂತೆ ಅಷ್ಟೆ.
ಆನಂತರ ೧೩ ವರ್ಷಗಳ ನಂತರ ಮತ್ತೆ ಹುಟ್ಟುತ್ತದೆ ಈ ಸಮುದ್ರ ನನ್ನೊಳಗೊಂದು ಕವಿತೆಯಾಗಿ-
ಅಯ್ಯೋ! ಅಯ್ಯೋ! ಇದು ಸಮುದ್ರವಂತೆ,
ಇದಕ್ಕೆ ಬಿಡುವಿಲ್ಲವಂತೆ
ಮಳೆ, ಛಳಿ, ಬೇಸಿಗೆ ಕಾಲ, ಅನುಗಾಲ
ಹಗಲು, ಇರುಳು, ನಿಮಿಷ ಪ್ರತಿನಿಮಿಷ ಮುಕ್ತ
ಇದಕ್ಕಿಲ್ಲ ಹರುಷ ವರುಷಗಳ ಲೆಕ್ಕ
ಅಕಟಕಟಾ
ಇಲ್ಲಿರುವುದೇ ವಿಕಟಾಟ್ಟಹಾಸ
ಭೂತಕೋಲು ಚೀತ್ಕಾರ, ಫೂತ್ಕಾರ
ಸಿಂಹಗರ್ಜನೆ, ಆನೆಗಳ ಗೀಳು,
ಅಲೆಗಳ ಕಾಳಗ
ಬೊಬ್ಬೆ ಹೂಂಕಾರ
ಇದರ ರಕ್ಕಸ ತೋಳುಗಳಲ್ಲಿ
ಮರಳ ರಣಚಂಡೆ,
ಉಪ್ಪು, ಬರೀ ಉಪ್ಪು ಇದರ ದಂಡೆ
ಪುಡಿಯಾಗುವುದು ಇಲ್ಲಿ ಬಂಡೆ
ಕಾಳ ಕಾರ್ಕೋಟಕ ವಿಷದುಸಿರು
ಇದು ತಣ್ಣಗಾದರೆ ನಮ್ಮ ಬಾಳು ಹಸಿರು
ನೀಲಜಲ ಕುದಿದು, ಭೂಮಿಯನೇ ಬಗೆದು
ಮೇಲೆಳುತ್ತದೆ ನಿರಂತರ ನೀರ ಗೋಪುರ
ಇಲ್ಲಿ ಮನೆ ಕಟ್ಟಬಹುದು ಅಸುರ
ಇದು ಭಯಂಕರ ರುದ್ರನಾದ, ಮಾಡಿದ್ದೇ ವಾದ
ಇಲ್ಲಿ ಸಾವೇ ಹುಟ್ಟು,
ಹುಟ್ಟೋ ಬಿಡಿಸಲಾಗದ ಗುಟ್ಟು
ಅಬ್ಬಾ!! ಇದು ಸಮುದ್ರವಂತೆ
ಇದು ಕರುಣಿಸಿದರೆ, ಕುದ್ದರೆ ಮಾತ್ರ
ನಡೆಯುವುದು ನಮ್ಮ ಬದುಕ ಸಂತೆ.
(ಕೃತಿ: ಇರುವಷ್ಟು ಕಾಲ… ಇರುವಷ್ಟೇ ಕಾಲ!)
ಯಾವುದೋ ದಿನ, ಒಂದುವೇಳೆ ಅಂದು ಸಮುದ್ರ ತಪ್ಪಿದರೆ? ಕಡವಿನ ಕಟ್ಟೆ. ಭಟ್ಕಳದ ನನ್ನ ಕಾಲೇಜಿನಿಂದ ಕೇವಲ ಎರಡು ಮೂರು ಕಿಲೋಮೀಟರ್ಗಳ ದೂರದಲ್ಲಿದ್ದ ಒಂದು ಜಲಪಾತ. ಅದು ಶಾಂತ, ಸುಂದರ, ಸೌಮ್ಯತೆಯ ಹಾಡು. ಸಮುದ್ರಕ್ಕೆ ತದ್ವಿರುದ್ಧ. ಅಲ್ಲಿ ಮೀನು ಹಿಡಿಯುವ ಹಕ್ಕಿಗಳೂ ಅಷ್ಟೆ, ಅವು ಕಡಲ ಹಕ್ಕಿಗಳಂತೆ ಆಕ್ರಮಣಕಾರಿ ಅಲ್ಲ. ಸಿಕ್ಕರೆ ತಿನ್ನೋಣ, ಇಲ್ಲದಿದ್ದರೆ ಸಿಗಬೇಕಾದುದ್ದಕ್ಕಾಗಿ ಧ್ಯಾನ ಮಾಡೋಣ ಎನ್ನುವ ನಿರ್ಭಾವುಕ ನಿಲುವಿನವು.
ಸಮುದ್ರ ಮತ್ತು ನದಿ, ಇವೆರಡೂ ಜಲಪ್ರಪಂಚಗಳೆ. ಆದರೆ ಇವುಗಳೊಳಗಿನ ಪರಪಂಚಗಳೇ ಬೇರೆ, ಪ್ರಭಾವಿಸುವ ರೀತಿಯೇ ಬೇರೆ, ಈ ಲೋಕಗಳ ವ್ಯಾಜ್ಯ ಪ್ರೀತಿಗಳನ್ನು ಬಗೆಹರಿಸುವ ಪಂಚಾಯಿತಿಯೂ ಬೇರೆ ಇರಬಹುದೇನೊ.
ಒಂದೊಮ್ಮೆ ವೃತ್ತಿ ಕೇಳಿ, ಸಂದರ್ಶನಕ್ಕೆ ನಿಂತಾಗ, ಆಯ್ಕೆ ಸಮೀತಿಯಲ್ಲಿದ್ದ ಮೆಂಬರ್ ಒಬ್ಬರು ಕೇಳಿದ್ದರು, ಕರ್ನಾಟಕದ ಬಯಲು ಸೀಮೆಯ ಆ ತುದಿಯಿಂದ, ಉಪ್ಪು ತೀರದ ಈ ತೀರಕ್ಕೆ ಬರುವ ಉದ್ದೇಶ?
ನನ್ನ ಉತ್ತರ ಸ್ಪಷ್ಟ ಹಾಗೂ ನೇರವಾಗಿತ್ತು. ಸಮುದ್ರದೊಂದಿಗೆ ಮಾತಾಡಲು
ಉತ್ತರ ಕೇಳಿ ಅವರು ನಕ್ಕರು, ಆಯ್ಕೆಯಾಗಿ ನಾನು ಧ್ಯಾನಸ್ಥನಾದೆ.
ಕಾರವಾರಕ್ಕೆ ಬಹಳ ಹಿಂದೆ ಗಾಂಧೀಜಿ ಹಾಗೂ ಕವಿ ರವೀಂದ್ರನಾಥ ಟ್ಯಾಗೋರರು ಬಂದಿದ್ದರು ಗೊತ್ತೊ? ಅವರ ಪ್ರಶ್ನೆ. ಬಂದವರೆಲ್ಲ ಗಾಂಧಿ, ಟ್ಯಾಗೋರರಾಗುವುದಿಲ್ಲ, ಆಗುವ ಅವಶ್ಯಕತೆಯೂ ಇಲ್ಲ, ನಾನು ರಾಗಂ, ಅಷ್ಟಾಗಲು ಇಲ್ಲಿ ಉಳಿಯಬೇಕಿದೆ. ಅವಕಾಶ ಮಾಡಿಕೊಡಿ, ಎಂದು ಸಂದರ್ಶನಾ ಕೊಠಡಿಯಿಂದ ಹೊರಬಂದು, ಅಂದು ಮೊದಲಿಗೆ ಹೋದದ್ದು ಸಮುದ್ರ ತೀರದ ಬಂದರಿಗೆ.
ಮಾರ್ಗ ಮಧ್ಯದ ಸರ್ಕಲ್ನಲ್ಲಿ ನನ್ನ ಕುತೂಹಲಕ್ಕೊಂದು ದೃಶ್ಯ. ಮೀನು ಮಾರಲು ಕುಳಿತ ಸಾಲು ಸಾಲು ಹೆಂಗಸರು, ಅದಕ್ಕೂ ಒಂದಿಷ್ಟು ಮುಂದೆ ಬಂದರೆ ಹೂ ಮಾರಲು ಕುಳಿತ ಹೂಗಾರರು.
ನಾನು ಈ ಬದುಕು ಪೂರ್ತಿ ನಿತ್ಯ ಹೂ-ಹೆಣ್ಣಿಗಾಗಿ, ಹಣ್ಣು-ಮಣ್ಣಿಗಾಗಿ ಹಸಿಯುತ್ತಲೇ ಹಪಹಪಿಸುತ್ತಲೇ ಮುಗಿದುಬಿಡಬೇಕೆಂದು ಪ್ರಾರ್ಥಿಸುವ ಪಾಮರ. ಇವುಗಳು ಎಲ್ಲೇ ಕಂಡರೂ ಒಂದಿಷ್ಟು ನಿಂತು, ಗೌರವಿಸಿ ಮುಂದೆ ಹೋಗುವುದು ರೂಢಿ. ಅಂದೂ ಅಷ್ಟೆ, ಓಡಿ ಹೋಗಿ ಎಷ್ಟು ಮಲ್ಲಿಗೆ, ಮೊಳಕ್ಕೆ?
ಮೊಗೆರಾ?
ಅಂದ್ರೆ?
ಭಟ್ಕಳ ಮೊಗೇರ ಬೇಕಿತ್ತಾ?, ನನ್ನ ಕಿವಿಗಿದು ಹೊಸ ಶಬ್ಧ. ಆ ಹೂ-ದಂಡೆ ಹೆಣೆದ ರೀತಿ ಅದ್ಭುತ! ಮತ್ತು ಭಿನ್ನ.
ಈ ಮೊಗೇರ? ಇದು ಮತ್ಸ್ಯಗಂಧಿಯ ಹಾಡೆ?
ಭಟ್ಕಳಿಗರ ಭಾಷೆಯಲ್ಲಿ ಮೊಗೇರ ಎಂದರೆ ಮಲ್ಲಿಗೆ. ಇದು ಇಲ್ಲಿ ಮಾತ್ರ ಬೆಳೆಯುವ ಮಲ್ಲಿಗೆ. ಸಮುದ್ರದ ಉಪ್ಪನ್ನುಂಡು, ಕಡವಿನ ಕಟ್ಟೆಯ ತಂಗಾಳಿಯ ಅನುಭವಿಸಿ, ಬೆಳೆಯುವ ಈ ಹೂವಿಗೆ ದೇಶದ ಇನ್ನ್ಯಾವ ನೆಲವೂ ಒಗ್ಗದು. ಇದು ಹುಟ್ಟುತ್ತಲೆ ತನ್ನ ಠಿಚಿಣeಟಿಣ(ಹಕ್ಕುಸ್ವಾಮ್ಯ)ವನ್ನು, ಅಲ್ಲಲ್ಲ ಭೂಸ್ವಾಮ್ಯವನ್ನು ಪಡೆದುಕೊಂಡಿದೆ.
ಸಮುದ್ರದ ತಳಮಳ, ಸತ್ತ ಜಿನ-ಭಟ್ಟಾಚಾರ್ಯರ ಗೌಪ್ಯ, ಸಮುದ್ರದಂತೆ ಏರಿಬಂದ ಅನ್ಯರ ಆಕ್ರಮಣದ ಪರಿ, ಮಗ್ಗುಲಿದ್ದವನ ಪರಾಧೀನತೆಯ ಅನಾಹತ ಹಾಡು ದಕ್ಕಿಸಿಕೊಂಡ ಇದು ಕರುನಾಡಿನ ವಿವಶ ಮಲ್ಲಿಗೆ, ನನ್ನ ಪ್ರೀತಿಯ ಭಟ್ಕಳದ ಮಲ್ಲಿಗೆ. Soಡಿಡಿಥಿ ಭಟ್ಕಳದ ಮೊಗೇರಾ.
ನಮಗೆ ಇದು ಎಲ್ಲೆಂದರಲ್ಲಿ ಸಿಗುವುದಿಲ್ಲ, ಇಲ್ಲಿಗೆ ಬರದೇ ಈ ಮಲ್ಲಿಗೆಯ ಸುಖ ನಮ್ಮದಾಗುವುದಿಲ್ಲ. ಇದು ಬಂದು ಬಾಚಿಕೊಂಡವರಿಗೆ ಮಾತ್ರ ದಕ್ಕುವ ಭಾಗ್ಯ. ಬರುವವ ಭಕ್ತನಾಗಿರಬೇಕು, ಅನುರಕ್ತನಾಗಿರಬೇಕು ಅಷ್ಟೆ.
ಭಟ್ಕಳದ ನನ್ನ ಉಪನ್ಯಾಸ ವೃತ್ತಿಯ ದಿನಗಳಲ್ಲಿ, ನನ್ನ ವಿದ್ಯಾರ್ಥಿನಿಯೊಬ್ಬಳು ನನ್ನ ಸ್ನೇಹಿತೆಯಾದಳು. ಅವಳದು ಶಿರಾಲಿಯ ಪಕ್ಕದ ಊರು ಮುರ್ಡೇಶ್ವರ. ಅರಳು ಹುರಿದಂತೆ ಒಂದೇ ಸಮನೆ ಮಾತನಾಡುತ್ತಿದ್ದ ಆ ಹುಡುಗಿ ಪ್ರೀತಿಯನ್ನು ಮೊಗೆ ಮೊಗೆದು ಕುಡಿಯುವ ಮತ್ತು ಕುಡಿಸುವ ಜೀವ. ದಿನದ ಪ್ರತಿ ಕ್ಷಣವೂ ಉತ್ಸವ, ವಿಜೃಂಭಣೆ. ಆಕೆಯ ಊರಿಗೆ, ಮನೆಗೆ ಹೋದರೆ ಮಣ್ಣು ಮಡಕೆಯ ಮೇಲೆ, ದಿಂಬು-ಹಾಸಿಗೆಯ ಮೇಲೆ ಆಕೆ ಬಿಡಿಸಿದ ಚಿತ್ರಗಳು, ಎಳೆದ ಬಣ್ಣದ ರೇಖೆಗಳು, ಯೌವ್ವನದ ಎದೆಗೆ ಕಾಮನ ಬಿಲ್ಲು ಮೂಡಿಸುತ್ತಿದ್ದವು. ಆಕೆ ಜಾತಿಯಿಂದ ಮುಸ್ಲಿಂ. ಬೆವರಿಳಿಸುವ, ಉಸಿರುಗಟ್ಟಿಸುವ ಬುರ್ಖಾದೊಳಗೆ ಎಷ್ಟೊಂದು ಕನಸುಗಳು ಅವಳಲ್ಲಿ. ಆಕೆ ಶ್ರೀಮಂತನ ಮಗಳಾಗಿರಲಿಲ್ಲ, ಆದರೆ ಚೈತನ್ಯ ತುಂಬಿದ ಬದುಕಿನಿಂದ ಶ್ರೀಮಂತ ಳಾಗಿದ್ದಳು.
ಒಂದು ದಿನ ಹೀಗಾಯಿತು. ಹೊಸ ವರ್ಷದ ದಿನವನ್ನು ಆಕೆ ಆಕೆಯ ಅಣ್ಣಂದಿರು, ಬಂಧುಗಳು ಸೇರಿಕೊಂಡು ಆಚರಿಸಿದರು. ಅವರ ಮನೆ ಮಸೀದಿಯೊಂದರ ಪಕ್ಕದಲ್ಲಿತ್ತು. ಈ ಹುಚ್ಚು ಹುಡುಗಿ ಇಸ್ಲಾಂದ ಕಟ್ಟಳೆ ಮೀರಿ ಹೊಸ ವರ್ಷವನ್ನು ಆಚರಿಸಿದ್ದು, ಊರಲ್ಲಿ ಗೊತ್ತಾಗುತ್ತಲೇ ಮತಾಂಧರು ಆಕೆಯ ಮನೆ ಹೊಕ್ಕು, ಕೈಗೆ ಸಿಕ್ಕದ್ದನ್ನೆಲ್ಲ ಬೀಸಾಡಿ, ಮನೆಯ ಬಂಧುಗಳನ್ನೆಲ್ಲ ಥಳಿಸಿ, ಊರು ಬಿಡಿಸಿದರು. ನಿರಾಶ್ರಿತರಾಗಿದ್ದ ಅವರು ಮುಂದೆ ಶಿರಸಿಯಲ್ಲಿ ಮನೆ ಮಾಡಿದರು. ಆಕೆಗೆ ಸಾಂತ್ವಾನ ಹೇಳಲು ಹೋದೆ. ಮನೆಯ ಬಾಗಿಲೊಳಗೆ ಮನೆಯವರೊಂದಿಗೆ ನನ್ನ ಬರುವಿಕೆಗಾಗಿ ಕಾಯುತ್ತ ನಿಂತಿದ್ದಳು, ಅದೇ ನಗೆ ಹಾಗೂ ಧೈರ್ಯದೊಂದಿಗೆ. ಎಲ್ಲಿಯೂ ಆಕೆ ಮನುಷ್ಯ ಪ್ರೀತಿಯ ಬಡತನವನ್ನು, ಭಗ್ನತೆಯನ್ನು ಅನುಭವಿಸುತ್ತಿದ್ದಾಳೆ ಎಂದು ನನಗನ್ನಿಸಲಿಲ್ಲ. ಆಕೆಯ ಕನಸುಗಳು ಕುಸಿದಿರಲಿಲ್ಲ. ಅಲ್ಲಿಯೂ ಮತ್ತೆ ಇದೇ ಸಮುದ್ರ ಮಲ್ಲಿಗೆಯ ಘಮಘಮ, ಗೆಲ್ಲುವ ಮಾತು. ಎದೆಯ ಶ್ರೀಮಂತಿಕೆ.
ಈಗ, ಭಟ್ಕಳದ ಮಲ್ಲಿಗೆ ಎಂದರೆ ನನಗೆ ಆತ್ಮಸ್ಥೈರ್ಯದ ಹೆಣ್ಣು.
ಇಂಥ ಘಟನೆಗಳ ಹಿನ್ನೆಲೆಯಲ್ಲಿ ಹೇಳಬೇಕಾದ ಒಂದು ಮಾತು, ನಾನು ಮಲ್ಲಿಗೆಯ ಕೊಂಡವನಲ್ಲ, ಅದನ್ನು ಕೊಂಡುಕೊಳ್ಳುವ ಯಾವುದೇ ಶ್ರೀಮಂತ ಇದುವರೆಗೂ ಈ ಭೂಮಿಯ ಮೇಲೆ ಹುಟ್ಟಿದ್ದಾನೆ ಎನ್ನುವ ನಂಬಿಕೆ ನನಗಿಲ್ಲ. ನಾನು ಮಲ್ಲಿಗೆಯ ಬದುಕಿದವನು. ಹಾಗೆ ನೋಡಿದರೆ ಈ ನಾಡಿನ ಪ್ರತಿ ಮಲ್ಲಿಗೆಯಲ್ಲಿಯೂ ಆ ಪ್ರದೇಶದ ಇತಿಹಾಸವನ್ನು ಶ್ರದ್ಧೆ ಹಾಗೂ ವಿನೀತತೆಯಿಂದ ಓದಿದ್ದೇನೆ ನಾನು.
ನಾನು ಸುತ್ತಾಡಿದ ನಾಡಿನ ಎಲ್ಲ ಮೂಲೆ ಮೂಲೆಗಳಿಂದ ಮಾಲೆ ಮಾಲೆಯಾಗಿ ಮಲ್ಲಿಗೆಯ ತಂದು, ನನ್ನ ಪ್ರೀತಿಗೆ ಮುಡಿಸಿದ್ದೇನೆ. ನನ್ನ ಬಾಳ ಸಂಗಾತಿ ಪದ್ದಿಯ ಜಡೆಗಿಟ್ಟು ಸಂಭ್ರಮಿಸಿದ್ದೇನೆ. ಇದು ನಾವು ದಂಪತಿಗಳು ಯಾವಾಗಲೂ ಅನುಭವಿಸಿದ ನಮ್ಮ ಪ್ರೀತಿಯ ಮಹಾ ಶ್ರೀಮಂತಿಕೆ. ನನ್ನ ನೆಲದ ಜಾಜಿ, ಸೂಜಿ, ಕರಿಮಲ್ಲಿಗೆ ಮತ್ತು ಸದಾಮಲ್ಲಿಗೆಯಿಂದ ಹಿಡಿದು ಮೈಸೂರ ಮಲ್ಲಿಗೆ, ಬೆಂಗಳೂರಿನ ದುಂಡು ಮಲ್ಲಿಗೆ, ಮಂಗಳೂರಿನ ಕಡಲ ಮಲ್ಲಿಗೆ, ಸಿರಸಿ-ಸಿದ್ಧಾಪುರದ ಕಾಡ ಮಲ್ಲಿಗೆ ಒಂದೊಂದಕ್ಕೂ ಒಂದೊಂದು ಗಂಧ-ಗಾಳಿಯ ಹಿತ. ಜೊತೆಗೆ ಈ ಮಲ್ಲಿಗೆಗಳ ಮಾರುವ ಪ್ರತಿ ಜೀವದ ಮೊಗದಲ್ಲಿಯೂ ಆ ಪ್ರದೇಶದ ಕಷ್ಟ ಕಾರ್ಪಣ್ಯಗಳ ಮಹಾ ಕಥನ.
ಇಲ್ಲಿರುವಾಗಲೆಲ್ಲ ಒಂದಿಷ್ಟು, ದುಡ್ಡುಕೊಟ್ಟು ಮಲ್ಲಿಗೆಯ ದಂಡಿ ಪಡೆಯುವಾಗ, ಅದನ್ನು ಮಾರುವ ಮಾಲಿಯ ಕಣ್ಣ ಬಾವಿಗಿಳಿದು ಬದುಕ ಸೇದುವ ಪ್ರಯತ್ನ ಮಾಡುತ್ತಿದ್ದೆ ನಾನು. ಯಾಂತ್ರಿಕವಾಗಿ ಹೂವನ್ನು ಕೊಂಡುಕೊಂಡು ಬರುವ ಬದಲು, ಅವರ ಬಳಿ ಒಂದಿಷ್ಟು ಕಾಲ ಕುಳಿತು, ಗತ ಬದುಕು, ವರ್ತಮಾನದ ಫಲಿತಗಳ ಕುರಿತೂ ಮಾತಿಗಿಳಿಯುತ್ತಿದ್ದೆ.
ಭಟ್ಕಳದ ಸರ್ಕಲ್ನಲ್ಲಿ, ಆ ದಿನಗಳಲ್ಲಿ ಹೂಮಾರುವ ವೆಂಕಜ್ಜಿ ಎಂಬ ಮುಪ್ಪಿನ ಮಹಿಳೆ ಇದ್ದಳು. ಆಗಲೇ ಅವಳದು ಮುಗಿದು ಹೋದ ಆಯುಷ್ಯ. ಆನಂತರ ನಾನು ಅದೆಷ್ಟೋ ಬಾರಿ ಭಟ್ಕಳಕ್ಕೆ ಹೋದರು ನನಗವಳು ಕಂಡೇ ಇಲ್ಲ. ಚೂರು-ಪಾರು ಶಾಲೆ ಕಲಿತ ಸಾತ್ವಿಕ ಸೊಕ್ಕು ಅವಳಿಗಿತ್ತು. ಅವಳನ್ನು ನೋಡಿದಾಗೊಮ್ಮೆ ನಾಡವರೇ ನಿಜ ನಾಡಿಗರು ಎಂಬ ಅಂಕೋಲೆ ಸೀಮೆಯ ಮಾತೊಂದು ನನ್ನ ಸ್ಮರಣೆಯಲ್ಲಿ ಸುತ್ತಿ ಹೋಗುತ್ತಿತ್ತು. ಈ ಅರ್ಥದಲ್ಲಿ ನನ್ನ ಈ ಕಾದಂಬರಿಯ ನಿಜವಾದ ಮೂಲ ಜಾಡು ಅವಳೆ. ಉಪ್ಪು ನೆಲದ ಕಪ್ಪು ಹೆಣ್ಣವಳು ಮಲ್ಲಿಗೆಯ ಮಾರುತ್ತಿದ್ದಳು.
ಮುಂದೆ ನಾನೊಮ್ಮೆ ಬರೆಯಬೇಕೆಂದುಕೊಂಡಿದ್ದ ಕತೆಯೊ, ಕಾದಂಬರಿಯೊ ಅವಳ ಸಖ್ಯದ ಕಾರಣ ಮೈದಾಳುತ್ತದೆ ಎಂಬ ತಿಳುವಳಿಕೆ ಮಾತ್ರ ಆಗ ಇರಲಿಲ್ಲ. ಆದರೆ ಈ ಒಕ್ಕಲತಿಯ ಹಣೆಯ ನೀರಿಗೆಗಳಲ್ಲಿ, ಮಂದ ಕಣ್ಣುಗಳಲ್ಲಿ, ದುಡಿದು ಸಣ್ಣಾದ ಎದೆ-ರಟ್ಟೆಗಳಲ್ಲಿ ಕಥನವೊಂದಿದೆ ಎಂಬ ನಂಬಿಕೆ ಇತ್ತು. ಅದಿಂದು ಸಾಕಾರಗೊಳ್ಳುವ ಸಂದರ್ಭ.
ವಾರಾಂತ್ಯದಲ್ಲಿ ಹೆಚ್ಚಿನ ಸಮಯವನ್ನು ನಾನು ಮೀನುಗಾರಿಕೆ ಹಾಗೂ ಉಪ್ಪು ತಯ್ಯಾರಿಯನ್ನೇ ತಲೆತಲಾಂತರಗಳಿಂದ ಕುಟುಂಬದ ಕಸುಬು ಮಾಡಿಕೊಂಡಿದ್ದ ಅಗೇರ, ಮೊಗವೀರ, ಕಾರ್ವಿ ಹಾಗೂ ಕೆಲವು ಮುಸ್ಲಿಂ ಸಮುದಾಯಗಳ ಮಕ್ಕಳೊಂದಿಗೆ ಕಳೆಯುತ್ತಿದ್ದೆ. ಅವರ ಬದುಕೊಂದು ಅಕ್ಷಯ ಪಾತ್ರೆ. ಅವರು ಹೇಳುತ್ತಿದ್ದ ಖಾಲಿಯಾಗದ ನಿಗೂಢ ಸಂಗತಿ-ಸಂಕಷ್ಟಗಳು, ಕಥೆ-ವಾಸ್ತವಗಳನ್ನು ಬರೆದು ತೀರಿಸಲಾಗದು. ಅನಂತವಾಗಿ, ಕಾಲದ ಹಂಗಿಲ್ಲದೆ ಏರಿಳಿಯುವ ಕಡಲು, ರುಚಿ ಕಳೆದುಕೊಳ್ಳದ ಉಪ್ಪು ಅವರಲ್ಲಿ ಬಗೆದು ನೋಡಲಾಗದ ಕುತೂಹಲಗಳನ್ನು ತುಂಬಿವೆ. ಅವರ ಎದೆ-ಕಿವಿಗಳಲ್ಲಿ ಕೇಳಿ ಮುಗಿಸಲಾಗದ ಅಲೆಯ ಲಾಲಿಗಳನ್ನು ತುಂಬಿ ಕಳಿಸಿವೆ. ಇಲ್ಲಿಯ ಪ್ರತಿ ಬದುಕೂ, ಖಾಲಿಯಾಗದ ಸರಕು ಹೊತ್ತು ಬಂದರಿಗೆ ಬಂದ ಕಡಲ ಹಡಗು.
ಇವರಂತೆಯೇ, ಈ ಕಾದಂಬರಿಯ ನಾಯಕ ದಂಡಿಯೂ ಕೂಡಾ.
ಸುಮ್ಮನೆ ಹರಟೆಯಲ್ಲಿದ್ದಾಗ, ಅಗೋ, ಅಲ್ಲಿ ನೋಡಿ ಸಾರ್ ಎಂದು, ನನಗೆ ಕಾಣದ, ಆದರೆ ಅವರ ಕಡಲ ಶೋಧದ ಅನುಭವಕ್ಕೆ ಹತ್ತಿರವಾದ, ಒಂದು ನಡುಗಡ್ಡೆ ತೋರಿಸಿ, ಅದರ ಬಗ್ಗೆ ಅವರು ಮಾತಿಗೆ ಕುಳಿತರೆ ಮುಗಿಯಿತು, ಆಚೆ ಸೂರ್ಯ ಮುಳುಗಿ, ಬಲೆ ದೋಣಿಗೆ ಸೇರಿ, ದೋಣಿ ದಡ ಸೇರಿ, ಉಪ್ಪು ನೆಣಚುತ್ತ, ಬೆಸ್ತರು ಒಂದಿಷ್ಟು ಸೆರೆ ಕುಡಿಯುತ್ತ, ಸಮುದ್ರ ಜೋಗುಳಕ್ಕೆ ಮೈ ಒಡ್ಡುವ ಸಮಯ. ಮಾತು, ಮಾತು ಕಡಲ ಮಾತು, ಮಾತೇ ಕಡಲು.
ಭಟ್ಕಳದ ಬಂದರಿನಿಂದ ಒಂದಿಷ್ಟು ಕಿಲೋಮೀಟರ್ ನೀವು ಅರಬ್ಬಿ ಸಮುದ್ರದಲ್ಲಿ ಹೋಗಬೇಕು. ಅಲ್ಲೊಂದು ನೇತ್ರಾಣಿ ಎಂಬ ನಡುಗಡ್ಡೆ. ಅಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ನಮ್ಮ ಸ್ವದೇಶಿ ಹೋರಾಟಗಾರರು, ನಾಡಬಾಂಬ್, ಗನ್ ಹಾಗೂ ತಮ್ಮ ಉಳಿದ ಶಸ್ತ್ರಾಸ್ತ್ರ ಹಾಗೂ ಕರಪತ್ರಗಳನ್ನು ಬಚ್ಚಿಡುತ್ತಿದ್ದರು. ಈ ನಡುಗಡ್ಡೆಯ ತುಂಬ ಭಯಾನಕ ವಿಷಸರ್ಪಗಳಿವೆ ಎಂದು ಕಾರ್ವಿ ಹುಡುಗರು ಹೇಳುತ್ತಿದ್ದುದನ್ನು ಇಂದಿಗೂ ಮರೆಯಲಾಗಿಲ್ಲ.
ಹಾಗೆ ನೋಡಿದರೆ, ಅರಬ್ಬಿ ಸಮುದ್ರ ಹಾಗೂ ಗಂಗಾವಳಿ ನದಿಯಿಂದ ಇಡೀ ಉತ್ತರ ಕನ್ನಡ ಜಿಲ್ಲೆಯ ತುಂಬಾ ನಿರ್ಮಾಣವಾದ ಕೂರ್ವೆ, ಸೂರ್ವೆ, ಬೊಳ್ಳಿಯಿಂದ ದಕ್ಷಿಣ ಕನ್ನಡದ ದೇವಭಾಗದವರೆಗೂ ಇರುವ, ನೂರಾರು ನಡುಗಡ್ಡೆಗಳು ಒಂದು ಕಾಲಕ್ಕೆ ನಾಡು-ನುಡಿಗಾಗಿ ಹೋರಾಡಿದವರ ಅಡಗುದಾಣಗಳೇ ಆಗಿದ್ದವು. ಬ್ರಿಟಿಷರ ದೌರ್ಜನ್ಯ, ಜಪ್ತಿ, ಹಿಂಸೆಗಳಿಂದ ಪೀಡಿತರಾದವರು, ಭೂಗತರಾಗಿದ್ದವರು ಆಶ್ರಯ ಪಡೆದದ್ದು, ಅಡಗಿಕೊಂಡಿದ್ದು ಕಾಡಿನಿಂದ ಸಮೃದ್ಧವಾದ ಹಾಗೂ ಸುತ್ತಲೂ ಜಲಾವೃತವಾದ ಈ ನಡುಗಡ್ಡೆಗಳಲ್ಲಿಯೆ.
ಇವು ನಮ್ಮ ಸ್ವಾತಂತ್ರ್ಯದ ಹಣತೆ ಕಾಯ್ದಿಟ್ಟ ದ್ವೀಪಗಳು, ಭಾರತವನ್ನು ದಾಸ್ಯದ ಕತ್ತಲೆಯಿಂದ ಬಿಡಿಸಿದ ದೀಪಗಳು.
ಭಟ್ಕಳದ ಬಂದರಿನಲ್ಲಿರುವ ಬೆಟ್ಟಕ್ಕೆ ಕಂದುಕಗಿರಿ ಎಂದು ಹೆಸರು. ಆ ಬೆಟ್ಟದ ತುದಿಯ ಮೇಲೆ ನಿಂತು ನೋಡಿದರೆ, ಒಂದು ಕಡೆಯಲ್ಲಿ ಪಶ್ಚಿಮ ಘಟ್ಟಗಳ ಸಾಲು, ಇನ್ನೊಂದು ಕಡೆ ಅರಬ್ಬಿ ಸಮುದ್ರಗಳಿಂದ ಆವೃತ್ತವಾದ, ಕರ್ನಾಟಕದ ಸಹಜ ನಿಸರ್ಗ ನಿರ್ಮಿತ ಬಂದರು ನಗರ ಭಟ್ಕಳದ ದರ್ಶನವಾಗುತ್ತದೆ. ಇದು ಹದಿನಾರನೇ ಶತಮಾನದಲ್ಲಿಯೇ ವಿಜಯನಗರ ಸಾಮ್ರಾಜ್ಯದ ಪ್ರಮುಖ ಬಂದರಾಗಿತ್ತು. ವಸಹಾತು ಹಾಗೂ ವಸಹಾತೋತ್ತರ ಕಾಲದಲ್ಲಿ ಒಂದಿಷ್ಟು ಕಳ್ಳ ವ್ಯವಹಾರಗಳ ಮುಖ್ಯ ದಾರಿಯೂ ಇದಾಗಿತ್ತು ಎಂಬುದನ್ನು ಮರೆಯುವಂತಿಲ್ಲ.
ಭಟ್ಕಳದ ವೃತ್ತಿ ದಿನಗಳಲ್ಲಿ ನನ್ನದೊಂದು ದೊಡ್ಡ ಶಿಷ್ಯ ವರ್ಗ. ಇವರಲ್ಲಿ ನಾಡವರು, ಮೊಗವೀರರು, ಅಗೇರರು, ಕಾರ್ವಿ, ಕುಣಬಿ, ಸಿದ್ಧಿ, ಶಾನಭಾಗ, ನಾಯಕ, ಕಿಣಿ, ಪ್ರಭು, ಕಾಮತ, ಭಟ್ಟ, ಶಾನುಭೋಗ, ಹೆಗಡೆ, ದೇಶಾವರಿ, ಶೆಟ್ಟಿ, ಪೈ, ನವಾಯತಿ, ದಖ್ಖನಿ ಮತ್ತು ಮುಸ್ಲಿಂ ಹೀಗೆ ಎಲ್ಲ ಸಮುದಾಯಗಳ, ಎಲ್ಲ ವಯೋಮಾನದವರು ಸಂಪರ್ಕದಲ್ಲಿದ್ದರು. ಇದು ವಿದ್ಯಾರ್ಥಿಗಳ ದೊಡ್ಡ ಸಂಗತಿಯಲ್ಲ. ಆದರೆ, ಈ ನಾಡಿನ ಉಳಿದ ಪ್ರದೇಶಗಳಿಗೆ ಹೋಲಿಸಿದರೆ, ಅವರಲ್ಲಿ ಎದ್ದು ಕಾಣುತ್ತಿದ್ದ ಧೈರ್ಯದ ಗುಣವಿದೆಯಲ್ಲ, ಅದು ಅವರ ವಿಶೇಷತೆ. ನನ್ನ ಈ ಕಾದಂಬರಿಯ ದಂಡಿ ಇವರಂತೆ. ಅವನ ಬೆವರಿಗೆ ಇಲ್ಲಿಯ ಉಪ್ಪು, ಅವನ ಎದೆಗೆ ಇಲ್ಲಿಯ ಮಲ್ಲಿಗೆ ಎರಡೂ ದಕ್ಕಿವೆ.
ಪ್ರೀತಿ-ದ್ವೇಷ, ಕಾಯಕ-ಜಗಳ ಎಲ್ಲದಕ್ಕೂ ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದ ಇಲ್ಲಿನ ಹುಡುಗರ ರೀತಿ, ಸಮುದ್ರದ ಅಲೆಗಳಂತೆ ಏರಿ ಬರುತ್ತಿದ್ದ ಅವರ ವೈಖರಿ, ಎಲ್ಲವನ್ನೂ ಎದುರಿಸುವ ಛಾತಿ ನಾನು ವಿಶೇಷವಾಗಿ ಅವರಲ್ಲಿ ಆಸ್ಥೆವಹಿಸಲು ಕಾರಣವಾಯಿತು. ಅವರು ಭುಗಿಲೆದ್ದಾಗಲೊಮ್ಮೆ ನನ್ನ ಕಾಲೇಜಿನ ಅದೆಷ್ಟೋ ಆಸ್ತಿ ಜಖಮ್ ಆಗುತ್ತಿತ್ತು. ಅವರ ಪ್ರೀತಿಯಂತೆಯೇ ಅವರ ಸಿಟ್ಟೂ ಕೂಡ. ರಭಸ ಅವರ ರಕ್ತದ ಭಾಷೆ. ಈ ಕಾರಣವೆ ಇಡೀ ಕರ್ನಾಟಕ ಇನ್ನೂ ನಿದ್ದೆಯಲ್ಲಿದ್ದಾಗ ಸ್ವಾತಂತ್ರ್ಯ ಸಂಗ್ರಾಮದ ಮುಂಚೂಣಿಯಲ್ಲಿ ನಾವು ನಾಡವರೆಂದು ಇವರು ಎದ್ದು ಬಂದರು.
ಹಾಗೆ ನೋಡಿದರೆ, ಪ್ರತಿ ಬದುಕಲ್ಲಿಯೂ ಛಲವೆಂಬ ಮಹಾಶಕ್ತಿಯ ಒರತೆ ಇದೆ. ಈ ಪ್ರಪಂಚದ ಅತ್ಯಂತ ಕುತೂಹಲಕಾರಿ ಕೇಂದ್ರವೇ ಮನುಷ್ಯ. ಮನುಷ್ಯನ ಕೇಂದ್ರ ಛಲ. ಕುಲ-ನೆಲ ಯಾವುದೇ ಆಗಿರಲಿ. ಛಲದ ಕಥನವಿಲ್ಲದ ಮನುಷ್ಯನೇ ಇಲ್ಲ. ಆದರೆ, ಈತನನ್ನು, ಓದುವ ಒಂದು ಹದವಾದ ಕಾಲ ಬರಬೇಕು ಅಷ್ಟೆ.
ಈ ನನ್ನ ಹೊಸ ಕಾದಂಬರಿಯ ನಾಯಕ ಹೀಗೆ, ನಮ್ಮ ಕಡಲ ನಾಡಿನ ಸಂಕಷ್ಟಗಳನ್ನು, ಭೂತ-ವರ್ತಮಾನಗಳನ್ನು, ಪ್ರಯೋಗ-ಪ್ರತಿಫಲಗಳನ್ನು ಗರ್ಭೀಕರಿಸಿಕೊಂಡ ಒಬ್ಬ ಛಲಗಾರ ಕುತೂಹಲದ ಮನುಷ್ಯ. ಅವನಿಗೊಂದು ಹೆಸರು, ದಂಡಿ.
ಬಹುತೇಕ ಮೇಲಿನ ಈ ಎಲ್ಲ ಕಾರಣಗಳಿಗಾಗಿಯೇ ಇರಬಹುದು, ಇಲ್ಲಿಂದ ನಿರ್ಗಮಿಸಿದ ಎರಡು ದಶಕಗಳ ನಂತರವೂ ಈ ಕೃತಿಯ ಮೂಲಕ, ದಂಡಿಯನ್ನು ನೆಪವಾಗಿಸಿಕೊಂಡು ಸ್ವಾತಂತ್ರ್ಯ ಹೋರಾಟದ ಇತಿಹಾಸಕ್ಕೆ ಕೈ ಹಾಕಲು ದಾರಿಯಾಯಿತು.
ಇಲ್ಲಿ ನಿಂತಿರುವ ನಾಯಕ ದಂಡಿ, ಸಮುದ್ರ ಈ ಸಮುದಾಯದ ಮಧ್ಯ ಎದ್ದು ನಿಂತ ಅಗ್ನಿಶಿಲೆ. ಈತ ಇವರೆಲ್ಲರ ಹೋರಾಟ ಹಾಗೂ ನಂಬಿಕೆಗಳ ಮೂರ್ತರೂಪ, ಕಡಲ ಸ್ವರೂಪ.
ರಾಗಂ, ಬೆಂಗಳೂರು
Reviews
There are no reviews yet.