ಒಡ್ಡೋಲಗಕ್ಕೆ ಮುನ್ನ
ಶ್ರೀ ಅಶೋಕ ಹಾಸ್ಯಗಾರರು ಉತ್ತರಕನ್ನಡದ ಕರ್ಕಿಯವರು. ಹಾಸ್ಯಗಾರ ಮನೆತನಕ್ಕೆ ಯಕ್ಷಗಾನ ಒಲಿದ ಕಲೆ. ಒಂಬತ್ತು ತಲೆಮಾರುಗಳಿಂದ ಹಾಸ್ಯಗಾರರ ಮನೆಯಲ್ಲಿ ಪಾರಂಪರಿಕವಾಗಿ ಯಕ್ಷಗಾನವು ನಡೆದುಕೊಂಡು ಬಂದಿದೆ. ಅದು ಜಿಲ್ಲೆಯ ಮೇಳವಾಗಿ ಬೆಳಗಿದ ದಿನಗಳು ಈಗ ಇತಿಹಾಸದ ಒಂದು ವಿಷಯ. ಮರಾಠೀ ರಂಗಭೂಮಿಯ ಉದಯಕ್ಕೆ ಕಾರಣವಾದ ಕರ್ಕಿ ಮೇಳದ ಯಕ್ಷಗಾನವು ಕನ್ನಡಿಗರ ಹೆಮ್ಮೆಗೆ ಕಾರಣವಾಗಬೇಕಾದ ವಿಷಯ. ಇಂತಹ ಒಂದು ಐತಿಹಾಸಿಕ ಮಹತ್ವದ ವಿಷಯವೂ ಮರೆಮಾಚಲ್ಪಟ್ಟ ಕಾರಣ, ಅಥವಾ ಪ್ರಚಾರಕ್ಕೆ ಬರದ ಕಾರಣವನ್ನು ಗಮನಿಸಿದರೆ ಯಕ್ಷಗಾನದ ಇನ್ನೆಷ್ಟೋ ವಿಷಯಗಳು, ವಸ್ತುಗಳು ಕಾಲಗರ್ಭದಲ್ಲಿ ಹೂತು ಹೋಗಿವೆ ಎಂಬುದು ನಿರ್ವಿವಾದ.
ಮೂಲತಃ ಹೆಗಡೆಗಳಾಗಿದ್ದವರು ಬಹುಕಾಲದ ಹಿಂದೆ ಹಾಸ್ಯಗಾರ ಎಂದು ರಾಜಮನೆತನಗಳಿಂದ ಮನ್ನಿಸಲ್ಪಟ್ಟ ಒಂದು ಕವಲಾಗಿ ಅಶೋಕ ಹಾಸ್ಯಗಾರರು ಭಿನ್ನ ಭಿನ್ನ ಕ್ಷೇತ್ರಗಳಲ್ಲಿ ಕೃಷಿ ಮಾಡಿ ಹೆಸರು ಗಳಿಸಿದವರು. ಅವರು ಈಗ ಕೆಲವಾರು ವರ್ಷಗಳಿಂದ ತಮ್ಮ ಮನೆತನದ ಮೂಲ ಕಲೆಯ ಶೋಧಕ್ಕೆ ತೊಡಗಿಕೊಂಡವರು. ಅದಕ್ಕಾಗಿ ನಾಟ್ಯಶಾಸ್ತ್ರ, ಧನಂಜಯನ ದಶರೂಪಕ, ಅಭಿನಯದರ್ಪಣ, ನಾಟ್ಯಲೋಚನ, ಲಾಸ್ಯರಂಜನ, ನೃತ್ಯಕೋಶ, ಮಾನಸೋಲ್ಲಾಸ ಮುಂತಾದ ಅನೇಕ ಪ್ರಾಚೀನ ನಾಟ್ಯಗ್ರಂಥಗಳನ್ನು, ಇನ್ನಿತರ ಯಕ್ಷಗಾನ ಕೃತಿಗಳನ್ನೂ ಸ್ವಸುಖಕ್ಕಾಗಿ ಅಧ್ಯಯನ ಮಾಡಿ ಬಯಲಾಟವು ನಾಟ್ಯಶಾಸ್ತ್ರಾಧಾರಿತ ಕಲೆಯೇ ಹೊರತು ಜನಪದ ಕಲೆ ಅಲ್ಲವೆನ್ನುವುದನ್ನು ಸಮರ್ಥಿಸಲು ಸಾಕಷ್ಟು ಅಂಶಗಳು ದೊರೆಯುತ್ತವೆ ಎಂಬುದನ್ನು ಮನಗಂಡವರು. ಯಕ್ಷಗಾನವು ನಾಟ್ಯಶಾಸ್ತ್ರದ ೨೦ನೇ ಅಧ್ಯಾಯದ ದಶರೂಪ ವಿಧಾನ, ೧೩ನೇ ಅಧ್ಯಾಯದ ಗತಿಪ್ರಚಾರ, ೨೨ನೇ ಅಧ್ಯಾಯದ ವೃತ್ತಿ ವಿಕಲ್ಪ, ೨೩ನೇ ಅಧ್ಯಾಯದ ಆಹಾರ್ಯಾಭಿನಯ, ೩೨ನೇ ಅಧ್ಯಾಯದ ಧ್ರುವಾಗೀತಗಳು ಮತ್ತು ಇನ್ನಿತರ ಅಧ್ಯಾಯಗಳ ಹಲವಾರು ನಿಯಮಗಳನ್ನು ಅಳವಡಿಸಿಕೊಂಡಿರುವುದು ಸ್ಪಷ್ಟವಾಗುತ್ತದೆ. ಅಷ್ಟೇ ಅಲ್ಲ, ಯಕ್ಷಗಾನ ಕಲಾಪ್ರಪಂಚಕ್ಕೆ ನಾಟ್ಯಶಾಸ್ತ್ರವು ಪವಿತ್ರ ಸಂವಿಧಾನವಾಗಿದೆ. ಯಕ್ಷಗಾನವನ್ನು ನಾಟ್ಯಶಾಸ್ತ್ರದ ಬೆಳಕಿನಲ್ಲಿ ಪುನರ್ವ್ಯಾಖ್ಯಾನ ಮಾಡುವ ಕೆಲಸ ಗಂಭೀರವಾಗಿ ಆಗಬೇಕಾಗಿದೆ ಎಂಬ ಅಭಿಪ್ರಾಯವನ್ನು ಮಂಡಿಸಿದ್ದಾರೆ.
* ಚೌಕಿಮನೆ: ಯಕ್ಷಗಾನದ ಚೌಕಿಮನೆ ನಾಟ್ಯಶಾಸ್ತ್ರ ಪ್ರಸ್ತಾಪಿತ ನಾಟ್ಯಗೃಹದ ಕಲ್ಪನೆ.
*ನಾಟ್ಯಮಂಟಪ: ಯಕ್ಷಗಾನ ಬಯಲಾಟದಲ್ಲಿ ರಂಗಸ್ಥಳ ನಿರ್ಮಾಣಕ್ಕೆ ನಾಟ್ಯಶಾಸ್ತ್ರದಲ್ಲಿ ನಾಟ್ಯಮಂಟಪದ ವಿವರಗಳು ಮೂಲವಾಗಿವೆ.
* ಚೌಕಿಮನೆಯಲ್ಲಿ ದೇವರ ಸ್ಥಾಪನೆಯು ನಾಟ್ಯಶಾಸ್ತ್ರದಲ್ಲಿ ಉಕ್ತವಾಗಿರುವ ರಂಗದೈವತ ಪೂಜೆಯ ಸಂಕ್ಷಿಪ್ತ ಕ್ರಮವಾಗಿದೆ.
* ನೇಪಥ್ಯದಲ್ಲಿ ಮುಖವರ್ಣಿಕೆಯೊಂದಿಗೆ ಸಿದ್ಧವಾಗುವುದು ’ಆಹಾರ್ಯಾಭಿನಯ’ವಾಗಿದೆ.
* ಯಕ್ಷಗಾನದಲ್ಲಿ ಕಥಾರಂಭಕ್ಕೆ ಮೊದಲು ನಡೆಯುವ ’ಸಭಾಲಕ್ಷಣ’ ಎಂಬ ನಾಂದಿಯು ಅದರ ಶಾಸ್ತ್ರೀಯತೆಗೆ ಹಿಡಿದ ಕನ್ನಡಿ.
* ಚೌಕಿಯಿಂದ ತೆರೆಕುಣಿತದ ವರೆಗಿನ ಹಾಡುವಿಕೆಯು ಅದನ್ನನುಸರಿಸುವ ಚಂಡೆ-ಮದ್ದಳೆಗಳ ನುಡಿಗಡಣವು ’ಪ್ರಾವೇಶಿಕೀ ಧ್ರುವಾ’ ಎಂಬುದಾಗಿದೆ.
* ಕಥಾವಸ್ತುವನ್ನು ಭರತನ ಶಾಸ್ತ್ರೀಯ ಭಾಷೆಯಲ್ಲಿ ‘ಇತಿವೃತ್ತ’ ಎಂದು ಹೇಳಲಾಗಿದೆ. ಇದು ಪ್ರಸಿದ್ಧ, ಕಲ್ಪಿತ, ಮಿಶ್ರ ಎಂಬ ಮೂರು ಬಗೆಗಳಲ್ಲಿ ಇದೆ. ಯಕ್ಷಗಾನದಲ್ಲಿ ಈ ಮೂರೂ ಬಗೆಗಳನ್ನು ಕಾಣಬಹುದು.
* ದೇಹ, ಮಾತು, ಮನಸ್ಸುಗಳ ವಿಚಿತ್ರ ಚೇಷ್ಟೆಯನ್ನು ’ವೃತ್ತಿ’ ಎಂದು ಭರತನ ಆದಿಯಾಗಿ ಅನೇಕರು ಹೇಳಿದ್ದಾರೆ. ಈ ವೃತ್ತಿಯನ್ನು ನಾವು ಯಕ್ಷಗಾನದಲ್ಲಿ ಕಾಣುತ್ತೇವೆ.
* ಯಕ್ಷಗಾನದ ಕಥಾರಂಭದಲ್ಲಿ ನಡೆಯುವ ಒಡ್ಡೋಲಗ ಮತ್ತು ಪ್ರಧಾನ ಪಾತ್ರಧಾರಿ ಪೀಠಿಕೆಯ ಮಾತನ್ನಾಡುವುದು ’ಭಾರತೀ ವೃತ್ತಿ’. ಮುಂದೆ ಮಾತು ಮುಗಿಯುತ್ತಿದ್ದ ಹಾಗೆ ಪದ್ಯದ ಎತ್ತುಗಡಿ ಮಾಡುವುದು ’ಪ್ರರೋಚನ’, ಇದು ನಾಟ್ಯಶಾಸ್ತ್ರದ ಉಲ್ಲೇಖವೇ ಆಗಿದೆ.
* ಪ್ರಸಂಗ ಪ್ರದರ್ಶನದಲ್ಲಿ ಕಥೆಯನ್ನು ಆರಂಭಿಸುವ ಹಾಗೂ ಮಂಗಲಗೊಳಿಸುವ ಕ್ರಮ ಇರಬೇಕು ಎನ್ನುವುದು ಶಾಸ್ತ್ರೀಯತೆಯ ಅಂಶವಾಗಿದೆ.
* ’ವಾಗಂಗಾಭಿನಯ’ ಯಕ್ಷಗಾನ ಬಯಲಾಟದಲ್ಲಿದೆ. ಬಹುಶಃ ಇನ್ನಾವುದೇ ಪ್ರದರ್ಶನ ಕಲೆಯಲ್ಲೂ ಈ ರೀತಿಯ ಶಾಸ್ತ್ರೀಯ ಮಾತುಗಾರಿಕೆಯನ್ನು ನೋಡುವುದು ಕಷ್ಟ.
* ಗೋಲಾಕಾರದಲ್ಲಿ ಕುಣಿಯುವುದು ನಾಟ್ಯಶಾಸ್ತ್ರದಲ್ಲಿ ಉಕ್ತವಾಗಿರುವ ’ಮಂಡಲಚಾರಿ’ಗೆ ಅನುಗುಣವಾಗಿದೆ.
* ತೆರೆ ಕುಣಿತದ ಕಾಲಕ್ಕೆ, ತೆರೆಯನ್ನು ತೆಗೆಯುವಾಗ ಯಕ್ಷಗಾನದಲ್ಲಿ ಹಾಡುವುದು, ನಾಟ್ಯಶಾಸ್ತ್ರದಲ್ಲಿ ಹೇಳುವ ’ಉತ್ಥಾಪನೀ ಧ್ರುವಾ’ ಆಗಿದೆ.
ನಾಟಕಂ ಸಪ್ರಕರಣಂ ಭಾಣಃ ಪ್ರಹಸನಂ ಡಿಮಃ |
ವ್ಯಾಯೋಗ ಸಮವಕಾರೌ ವೀಥ್ಯಂಕೇಹಾಮೃಗಾ ಅಪಿ ||
ಈ ದಶರೂಪಕಗಳನ್ನಲ್ಲದೇ, ಹದಿನೆಂಟು ಬಗೆಯ ಉಪರೂಪಕಗಳನ್ನು ಶಾಸ್ತ್ರಕಾರರು ಗಮನಿಸಿದ್ದಾರೆ. ಇದನ್ನನುಸರಿಸಿ ಹಾಸ್ಯಗಾರರು ಯಕ್ಷಗಾನದಲ್ಲಿ ಈ ಹುಡುಕಾಟವನ್ನು ಮಾಡಿದ್ದಾರೆ. ದಶಾವತಾರ ಆಟವೆಂದರೆ ನಾಟಕವೇ ಮೊದಲಾದ ದಶರೂಪಕ ಎಂಬುದನ್ನು ವಿಶ್ಲೇಷಿಸಿದ್ದಾರೆ.
೧. ನಾಟಕ: ಉಳಿದ ಒಂಬತ್ತು ರೂಪಕಗಳಿಗೆ ಮಾದರಿಯಂತಿರುವ ’ನಾಟಕ’ ಎಂಬ ರೂಪಕವು ಮುಖ, ಪ್ರತಿಮುಖ, ಗರ್ಭ, ವಿಮರ್ಶ, ನಿರ್ವಹಣ ಎಂಬ ಐದು ಸಂಧಿಗಳಿಂದ ಯುಕ್ತವಾದದ್ದು. ಯಕ್ಷಗಾನದಲ್ಲಿ ಕೂಡ ನಾಂದಿ, ಸಭಾಲಕ್ಷಣ, ಒಡ್ಡೋಲಗ, ಕಥಾಮುಖ, ಮಂಗಲಗಳಿಂದ ಕೂಡಿದೆ.
೨. ಪ್ರಕರಣ: ಪೀಠಿಕೆ ಹಾಕುವಲ್ಲಿನ ರಂಗನಡೆಗಳು- ’ಸಾಮಾನ್ಯಾಭಿನಯ’ ಮತ್ತು ಪ್ರಕರಣವೆಂಬ ಎರಡನೇ ರೂಪಕದ ಶಾಸ್ತ್ರಗಳಿಗೆ ಅನುಗುಣವಾಗಿದೆ.
೩. ಭಾಣ: ಯಕ್ಷಗಾನದ ಕಂಸ, ಮಾಗಧ, ಕೀಚಕ, ದುಷ್ಟಬುದ್ಧಿ, ರಾವಣ, ವಾಲಿ, ಕೌರವ ಮುಂತಾದ ದುಷ್ಟ ಪಾತ್ರಗಳು ’ಭಾಣ’ ರೂಪಕಕ್ಕೆ ಹೊಂದಿಕೊಳ್ಳುವಂತಹವುಗಳು.
೪. ಪ್ರಹಸನ: ಬಯಲಾಟದ ಹಾಸ್ಯಪ್ರಧಾನವಾದ ಸನ್ನಿವೇಶಗಳನ್ನು ’ಪ್ರಹಸನ’ಕ್ಕೆ ಉದಾಹರಿಸ ಬಹುದು.
೫. ಡಿಮ: ವ್ರತ್ರಾಸುರ ವಧೆ, ತ್ರಿಪುರದಹನ, ಕೃಷ್ಣ ವಿಜಯ ಈ ಬಗೆಯ ಪ್ರಸಂಗಗಳು ಯಕ್ಷಗಾನದಲ್ಲಿವೆ. ಇವನ್ನು ’ಡಿಮ’ಕ್ಕೆ ಉದಾಹರಿಸಬಹುದು.
೬. ವ್ಯಾಯೋಗ: ಭಾಸನ ಮಧ್ಯಮ ವ್ಯಾಯೋಗದಿಂದ ಪ್ರೇರಿತವಾಗಿ ಹುಟ್ಟಿಕೊಂಡ ಭೀಮ ಘಟೋದ್ಗಜ, ಸೌಗಂಧಿಕಾಹರಣ, ಉತ್ತರಗೋಗ್ರಹಣ, ಕೀಚಕ ವಧೆ, ಇಂದ್ರಕೀಲ ಇವೆಲ್ಲ ವ್ಯಾಯೋಗದಲ್ಲಿ ಸೇರಿದ ಪ್ರಸಂಗಗಳು.
೭. ಸಮವಕಾರ: ಅಮೃತಮಥನ ಪ್ರಸಂಗ ಇದಕ್ಕೆ ಉದಾಹರಣೆಯಾಗಿ ಸಂದಿದೆ.
೮. ವೀಥಿ: ನಾಯಕ ಪಾತ್ರದೊಂದಿಗೆ ಇರುವ ಸಖ, ದೂತ, ಸಹಾಯಕ ಇವರುಗಳು ಬೇರೆ ಬೇರೆ ಪ್ರಸಂಗಗಳಲ್ಲಿ, ಬೇರೆ ಬೇರೆ ಸನ್ನಿವೇಶಗಳಲ್ಲಿ ನಡೆಸುವ ಸಂಭಾಷಣೆಯು ವೀಥಿ ಯೆನಿಸಿದೆ. ಭಸ್ಮಾಸುರ ಮೋಹಿನಿ ಪ್ರಸಂಗದ ಕೀಚಕ ಹಾಗೂ ವಿಜಯರ ಸಂಭಾಷಣೆ, ಇಂತಹ ಅನೇಕ ಉದಾಹರಣೆಗಳನ್ನು ಯಕ್ಷಗಾನದಲ್ಲಿ ಗಮನಿಸಬಹುದು.
೯. ಅಂಕ: ಯಕ್ಷಗಾನ ಪ್ರಸಂಗದಲ್ಲಿ ದಿವ್ಯ, ಅಮರ್ತ್ಯ ಪಾತ್ರಗಳ ಹೊರತಾಗಿರುವ ಜನಸಾಮಾನ್ಯರು ’ಅಂಕ’ದಲ್ಲಿ ಕಾಣಸಿಗುತ್ತಾರೆ.
೧೦. ಈಹಾಮೃಗ: ಯಕ್ಷಗಾನದ ಭೀಷ್ಮ ವಿಜಯ, ರುಕ್ಮಿಣೀ ಸ್ವಯಂವರ, ಸೀತಾಪಹರಣ, ಸುಭದ್ರಾಹರಣ, ಪಾರಿಜಾತ ಹರಣ ಇವುಗಳನ್ನು ’ಈಹಾಮೃಗ’ದಲ್ಲಿ ಗುರುತಿಸಬಹುದು.
ಇವಿಷ್ಟು ಸ್ಥೂಲವಾಗಿ ಯಕ್ಷಗಾನದ ಶಾಸ್ತ್ರೀಯತೆಯನ್ನು ಸ್ಥಾಪಿಸಲು ಹಾಸ್ಯಗಾರರು ಸಂಯೋಜಿಸಿದ ವಿಚಾರ. ಜಾನಪದ ಎಂದು ಹತ್ತರೊಡನೆ ಹನ್ನೊಂದನೆಯ ಕಲೆಯಾಗಿ ಯಕ್ಷಗಾನವನ್ನು ಕಾಣುವ ಸರಕಾರದ ಹಾಗೂ ಅನೇಕ ಸಾರ್ವಜನಿಕರ ಧೋರಣೆಯನ್ನು ಖಂಡಿಸುವ ಒಂದು ಯತ್ನವಾಗಿ ಈ ಕೃತಿ ಒಡಮೂಡಿದಂತಿದೆ. ಆದ್ದರಿಂದಲೇ ಈ ಕೃತಿ- ’ಯಕ್ಷಗಾನ ದಶರೂಪಕ’ ಅಥವಾ ’ದಶರೂಪಕದಿಂದ ದಶಾವತಾರ’ ಎನಿಸಿದೆ.
ಅಪಾರ ಅನುಭವ, ಅಧ್ಯಯನಗಳ ಹಿನ್ನೆಲೆಯಲ್ಲಿ ಡಾ. ಮನೋರಮಾ ಬಿ.ಎನ್. ರವರು ರಚಿಸಿದ ’ಯಕ್ಷಮಾರ್ಗಮುಕುರ’ದ ಜೊತೆಯಲ್ಲಿ ಹಾಸ್ಯಗಾರರ ಈ ಕೃತಿಯೂ ಕೂಡ ಯಕ್ಷಮಾರ್ಗದ ವಿಸ್ತಾರವನ್ನು ದರ್ಶಿಸಲು ನಮಗೆ ಸಹಕಾರಿಯಾಗಿದೆ. ಯಕ್ಷಗಾನ ಹಾಗೂ ನಾಟ್ಯಶಾಸ್ತ್ರವನ್ನು ತುಲನಾತ್ಮಕವಾಗಿ ನೋಡಲು ಇದೊಂದು ಪ್ರಾಥಮಿಕ ಪಠ್ಯ ಎಂಬ ಬಿನ್ನಹವೊಂದನ್ನು ಹಾಸ್ಯಗಾರರು ನೀಡಿರುವಲ್ಲಿ ಅವರ ವಾಚೋವಿಧೇಯತೆ ಕೂಡಾ ಅಭಿನಂದನೆಗೆ ಅರ್ಹವಾದುದು.
ನಾಟ್ಯಶಾಸ್ತ್ರ ಮೂಲತಃ ಒಂದು ಲಕ್ಷಣ ಗ್ರಂಥ. ಭಾರತೀಯ ರಂಗಪರಂಪರೆಗಳ ವಿಶ್ವಕೋಶ. ಭಿನ್ನ ಭಿನ್ನ ಕಾಲಗಳ, ಭಿನ್ನ ಭಿನ್ನ ರಂಗಪ್ರಯೋಗಗಳ ಆದರ್ಶರೂಪವಾಗಿ ಅದು ಮೈ ವೊಡೆದಂತೆ ಕಾಣುತ್ತದೆ. ಭಾರತೀಯರ ದೇಶೀ ಪರಂಪರೆಯನ್ನು ಅನುಲಕ್ಷ್ಯಿಸಿ ಅವುಗಳಿಗೊಂದು ಶಾಸ್ತ್ರೀಯ ಚೌಕಟ್ಟನ್ನು ನೀಡಿ, ವ್ಯವಸ್ಥಿತ ವ್ಯಾಕರಣ ವಿಧಾನವನ್ನು ರೂಪಿಸಿ ತನ್ಮೂಲಕ ಅಧ್ಯಯನ ವಿಧಾನವೊಂದನ್ನು ನಾಟ್ಯಶಾಸ್ತ್ರ ನಮಗೆ ನೀಡಿದೆ. ಈಗ ಪ್ರಚಲಿತವಿರುವ ಭರತನ ನಾಟ್ಯಪದ್ಧತಿ ತಂಜಾವೂರಿನಲ್ಲಿ ರೂಪುಗೊಂಡಿದ್ದು, ಭಾಗವತರಾಟ್ಟ, ದಾಸೀಯಾಟ್ಟ ಮುಂತಾದ ರಂಗಕಲೆಗಳ ಕೆಲವು ಅಂಶಗಳನ್ನು ಸೇರಿಸಿಕೊಂಡು ’ಭರತನಾಟ್ಯ’ ಎಂಬ ಗೌರವದ ಹೆಸರಿನಲ್ಲಿ ಹದಿನಂಟನೇ ಶತಮಾನದ ಸೃಷ್ಟಿಯಾಗಿ ವಿಕಾಸವಾಯಿತು.
ಕನ್ನಡ ನಾಡಿನ ಒಂದು ’ಪರಿಪುಷ್ಟವಾದ ರಂಗಕಲೆ ಯಕ್ಷಗಾನ’ ಎಂಬ ಹೆಸರನ್ನು ಪಡೆಯುವಲ್ಲಿ ಸ್ವಾರಸ್ಯವೇನು? ಎಂಬ ಕುತೂಹಲ ವಿದ್ವಾಂಸರನ್ನು ಕಾಡುತ್ತಿರುವುದು ಸಹಜ. ಈ ಮಣ್ಣಿನ ಆರಾಧನಾ ಕಲೆಗಳಾದ- ಸುಗ್ಗಿಕುಣಿತ, ಬಂಡಿ ಹಬ್ಬ, ಭಜನೆ ಕುಣಿತ, ನಾಗಮಂಡಲ, ಜಾಲಾಟ, ಕಾಡ್ಯನಾಟ, ಭೂತಾರಾಧನೆ ಇವುಗಳ ಹೊಳಹನ್ನು ಹೊಂದಿಕೊಂಡು ದೇವಾಲಯದಿಂದ ಬಯಲಿಗೆ ಬಂದು ಬಯಲಾಟವಾಗಿ, ದಶರೂಪಗಳ ಕಾರಣದಿಂದಲೋ, ದಶಾವತಾರದ ಕಥೆಗಳ ಕಾರಣ ದಿಂದಲೋ ದಶಾವತಾರ ಆಟವೆನಿಸಿ ಭಾಗವತರ ನಿರ್ದೇಶನದಲ್ಲಿ ಭಾಗವತರಾಟವಾಗಿ ಯಕ್ಷಗಾನ ರೂಪುಗೊಂಡಿದೆ. ಕ್ರಿ.ಪೂ. ೩ರಿಂದ ಕ್ರಿ.ಶ. ೪ರ ವರೆಗೆ ನಾಟ್ಯಶಾಸ್ತ್ರವು ಮೌರ್ಯ ಹಾಗೂ ಗುಪ್ತ ಸಾಮ್ರಾಜ್ಯಗಳ ಮಧ್ಯಂತರದ ಅವಧಿಯಲ್ಲಿ ಬಂತು ಎಂಬುದು ಸುಮಾರಾಗಿ ಒಪ್ಪಿತವಾದ ವಿಷಯ. ಆದರೆ ಇಂದಿನ ನಮ್ಮ ಯಕ್ಷಗಾನ ಬಹಳ ನಂತರದ್ದಾಗಿ ಕಾಣುತ್ತದೆ. ಯಕ್ಷಗಾನದ ಲಿಖಿತ ಪಠ್ಯವನ್ನು ಗಮನಿಸಿ ಕುಮಾರವ್ಯಾಸನ ನಂತರದ ಕಾಲಕ್ಕೆ ಯಕ್ಷಗಾನದ ಉಗಮದ ಕಾಲವನ್ನು ಕೆಲವರು ದಾಖಲಿಸಿದ್ದಾರೆ. ಕವಿರಾಜಮಾರ್ಗದಲ್ಲಿ ಕಂಡುಬರುವ ಬೆದಂಡೆ (ವೈದಂಡಿಕಾ) ಚತ್ತಾಣಗಳ ಹಿನ್ನೆಲೆಯಲ್ಲಿ ಈ ಪ್ರಕಾರವನ್ನು ಗುರುತಿಸುವ ಯತ್ನ ನಡೆದಿದೆ.
ಯಕ್ಷಗಾನ ಒಂದು ಪಠ್ಯವಾಗಿರದೆ, ಅದೊಂದು ಪ್ರಾಚೀನ ರಂಗಪ್ರಯೋಗ ಪದ್ಧತಿ. ಅದಕ್ಕೂ ಪೂರ್ವದಲ್ಲಿ ಅದೊಂದು ಆರಾಧನಾ ಕಲೆ ಎಂಬ ಹಿನ್ನೆಲೆಯನ್ನು ಭಾಷಿಕ ಚರಿತ್ರೆ, ಸಾಮಾಜಿಕ ಭಾಷಾ ವಿಜ್ಞಾನ ಇತ್ಯಾದಿ ಹಿನ್ನೆಲೆಯಲ್ಲಿ ಗಮನಿಸಿದರೆ ಚಾಲುಕ್ಯರ ನಂತರ ರಾಷ್ಟ್ರಕೂಟರ ಕಾಲಕ್ಕೆ ಇದು ರೂಪುಗೊಂಡಿರಬೇಕು ಎಂಬುದು ವಿದಿತವಾಗುತ್ತದೆ. ಅಷ್ಟೇ ಅಲ್ಲ, ಅದು ದೇವಾಲಯದಿಂದ ಬಯಲಿಗೆ ಬಂದು ಬಯಲಾಟವಾದ ಬಗೆಯೂ ವೇದ್ಯವಾಗುತ್ತದೆ. ವಾಸ್ತವವಾಗಿ ಯಕ್ಷಗಾನದ ಮೂಲವನ್ನು ನಾಟ್ಯಶಾಸ್ತ್ರದಲ್ಲಿ ಹುಡುಕಬೇಕಾದ ಪ್ರಮೇಯ ನಮಗಿಲ್ಲ. ಆದರೆ ನಾಟ್ಯಶಾಸ್ತ್ರದಿಂದ ಯಕ್ಷಗಾನ ಎಷ್ಟು ಉಪಕೃತವಾಗಿದೆ ಅಥವಾ ಉಪಕೃತವಾಗಬೇಕು ಎಂಬುದಷ್ಟೇ ನಮಗೆ ಮುಖ್ಯ ಪ್ರಶ್ನೆಯಾಗುತ್ತದೆ.
ದ್ರಾವಿಡ ಭಾಷೆಯಲ್ಲಿ ’ಆಟ್ಟಂ’ ಎಂಬ ಹೆಸರಿದೆ. ರಂಗಸ್ಥಳಕ್ಕೆ ’ಅಟ್ಟಲ್’ ಅಥವಾ ’ಅಟ್ಟ’ ಎಂದು ಹೆಸರು. ನಾವು ಹೇಳುವ ’ಆಟ’ ಎಂಬ ಹೆಸರಿಗೆ ಸಮಾನಾರ್ಥಕವಾದ ಶಬ್ದ ಸಂಸ್ಕೃತದಲ್ಲಿ ಇಲ್ಲ ಎಂದು ತೋರುತ್ತದೆ. ಆಟ ನಾಟಕಕ್ಕಿಂತಲೂ ಹೆಚ್ಚು ಪ್ರಾಚೀನ ಎಂದು ಕಾಣುತ್ತದೆ. (ಕನ್ನಡ ನಾಟಕ- ತ.ಸು.ಶಾಮರಾಯ ಪುಟ ೧೬) ಅಷ್ಟೇ ಅಲ್ಲ, ಶಾಮರಾಯ ಅವರೇ ಹೇಳುವ ಹಾಗೆ, ನಾಟಕಕ್ಕೆ ದ್ರಾವಿಡರ ಆಟವೇ ಮೂಲವೆಂದು ಭಾವಿಸಲು ಅವಕಾಶವಿದೆ.
ಭರತನ ನಾಟ್ಯಶಾಸ್ತ್ರಕ್ಕಿಂತಲೂ ಹಿಂದಿನ ನಾಟಕಗಳಾವುವೂ ನಮಗೀಗ ದೊರೆತಿಲ್ಲ. ಆದರೆ ಅಲ್ಲಿನ ನಿಯಮಗಳು ನಮ್ಮ ಬಯಲಾಟ, ಕಥಕ್ಕಳಿ, ತೆರಕ್ಕೂತ್ತು, ವೀಥಿನಾಟಕ ಮೊದಲಾದವುಗಳ ಲಕ್ಷಣವನ್ನು ಹೋಲುತ್ತವೆ. (ಕನ್ನಡ ನಾಟಕ-ತ. ಸು. ಶಾಮರಾಯ ಪುಟ ೧೬). ವಿದ್ವಾಂಸರ ಈ ಬಗೆಯ ಮಾತನ್ನು ಅನುಲಕ್ಷ್ಯಿಸಿ ಹೇಳುವುದಾದರೆ, ದಾಕ್ಷಿಣಾತ್ಯರ ರಂಗಭೂಮಿಯನ್ನು ಗಮನಿಸಿಯೇ ಭರತಮುನಿ ತನ್ನ ನಾಟ್ಯಶಾಸ್ತ್ರದ ಚೌಕಟ್ಟನ್ನು ನಿರ್ಮಿಸಿರಬೇಕು ಎನಿಸುತ್ತದೆ. ಹಾಗಾಗಿಯೇ ನಮ್ಮ ರಂಗಭೂಮಿಯ ಪ್ರತಿಬಿಂಬವನ್ನು ನಾವು ಅಲ್ಲಿ ಕಾಣಲು ಸಾಧ್ಯವಿದೆ.
ದೇಹದ ಅಂಗೋಪಾಂಗಗಳನ್ನು ಬಳಸಿ ಅಭಿವ್ಯಕ್ತಿಸುವ ಆಂಗಿಕಾಭಿನಯ, ಧ್ವನಿ ಮತ್ತು ಭಾಷಿಕಾಭಿನಯವೆನಿಸಿರುವ ವಾಚಿಕಾಭಿನಯ, ಅಭಿನಯದ ಯಾಂತ್ರಿಕತೆಯನ್ನು ತೊಡೆದು ಜೀವ ನೀಡುವ ಸಾತ್ವಿಕಾಭಿನಯ, ಬಾಹ್ಯ ಪರಿಕರಗಳೆಂಬ ಆಹಾರ್ಯ- ಇವುಗಳಲ್ಲಿ ಆಹಾರ್ಯ, ಆಂಗಿಕ, ಕ್ವಚಿತ್ತಾಗಿ ಸಾತ್ವಿಕಾಭಿನಯವನ್ನು ಬಳಸಿಕೊಂಡು ದೇವಾಲಯಗಳಲ್ಲಿ ಬೆಳೆದುಬಂದ ದೇವದಾಸೀ ನೃತ್ಯ ಭರತನ ಅಭಿನಯಶಾಸ್ತ್ರವನ್ನು ಅವಲಂಬಿಸಿ ಲೋಚನಯಜ್ಞಗಳೆನಿಸಿದವು. ದೇವರಿಗೆ ಸಲ್ಲುವ ಈ ಅಂಗಭೋಗಗಳೆಲ್ಲ ರಾಜರಿಗೂ ಸಲ್ಲುತ್ತ ಬಂದ ಕಾರಣ ರಾಜಾಶ್ರಯವು ನರ್ತಕಿಯರಿಗೂ ಅವರ ನಾಟ್ಯವಿಧಾನಕ್ಕೂ ದೊರೆಯಿತು. ಹೀಗೆ ದೇವಾಲಯದ ಮೂಲಕ ಬಂದ ಯಕ್ಷಗಾನದ ಆಂಗಿಕ ಅಭಿನಯದಲ್ಲಿ ದೇವದಾಸಿ ನೃತ್ಯದ ಪರಿಣಾಮ ಇದೆ. ಅಷ್ಟೇ ಅಲ್ಲ, ಯಕ್ಷಗಾನದ ಪೂರ್ವರಂಗದಲ್ಲಿ ಬರುವ ಎರಡು ಹೆಣ್ಣು ವೇಷಗಳನ್ನು ’ಆಟದ ಸೂಳೆ’ ಎಂದು ಕರೆಯುತ್ತಿದ್ದರು. ಇವರ ಅಭಿನಯದ ಹಿನ್ನೆಲೆಯಲ್ಲಿಯೇ- ನಾಳೆ ಬರುವೆ ರಂಗಕೇಳಿಗೆ ರಮಣಾ | ಕೋಳಿ ಕೂಗುತಲಿದೆ ಯೇಳಲೋ ಜಾಣ || ಎಂಬಿತ್ಯಾದಿ ಪದಗಳು ಪೂರ್ವರಂಗದಲ್ಲಿ ಕಾಣಸಿಗುತ್ತವೆ. ಅವು ಮೇಲಿನ ಮಾತಿಗೆ ಪೂರಕವೂ ಹೌದೆನಿಸುತ್ತವೆ. ಆದರೆ ದೇವದಾಸಿಯರ ಭರತಾಭಿನಯವು ಗುರುಶಿಷ್ಯ ಪರಂಪರೆಯ ರೀತಿಯಲ್ಲಿ ಯಕ್ಷಗಾನಕ್ಕೆ ಬಂದ ಹಾಗೆ ಕಾಣುವುದಿಲ್ಲ.
ಇಂದು ನಾವು ಕಾಣುವ ’ಭರತನಾಟ್ಯ’ ಎಂಬ ರಂಗಪ್ರಕಾರವು ಬಳಸಿಕೊಂಡ ಸಂಗೀತ ಪದ್ಧತಿ ಕೂಡ ನಮ್ಮನ್ನು ಯೋಚನೆಗೆ ಹಚ್ಚುತ್ತದೆ. ಸಂಗೀತ ತಜ್ಞರ ಅಭಿಪ್ರಾಯದಂತೆ ಭರತಮುನಿ ಹೇಳಿದ ಸಂಗೀತ ವಿಧಾನವು ಉತ್ತರಾದಿಗೆ ಸೇರಿದ್ದು. ಆತನ ಕಾಲಕ್ಕೆ ಉತ್ತರಾದಿ-ದಕ್ಷಿಣಾದಿ ಎಂಬ ಪರಿಭೇದಗಳು ಇರಲಿಲ್ಲವೆಂಬುದೂ ಸತ್ಯವೇ. ಕರ್ನಾಟಕ ಸಂಗೀತಗಾರರು ರಾಜರ ಅಪೇಕ್ಷೆಯ ಮೇರೆಗೋ, ಜನಾಪೇಕ್ಷೆಯ ಮೇರೆಗೋ, ಪ್ರಯೋಗದ ದೃಷ್ಟಿಯಿಂದಲೋ, ಪ್ರಾದೇಶಿಕ ಅನಿವಾರ್ಯತೆಯಿಂದಲೋ ಈ ನೃತ್ಯಕ್ಕೆ ತಮ್ಮ ಸಂಗೀತ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಯಕ್ಷಗಾನದಲ್ಲಿ ಕೂಡ ಉತ್ತರಾದಿ ಹಾಗೂ ದಕ್ಷಿಣಾದಿ ರಂಗಪದ್ಧತಿಗಳು ಪ್ರತ್ಯೇಕ ಶೈಲಿಗಳಾಗಿ ಕಾಣಸಿಗುತ್ತವೆ. ಆಳವಾದ ಅಧ್ಯಯನದಿಂದ ಮೂಲತಃ ಇವೆರಡೂ ಒಂದೇ ಮೂಲದವು ಎಂಬುದೂ ವೇದ್ಯವಾಗುತ್ತವೆ. ಅದರಲ್ಲೂ ವಿಶೇಷವಾಗಿ ಯಕ್ಷಗಾನದ ಹಾಡುಗಳು ಹೆಂಗಸರ ಹಾಡಿನ ಮಟ್ಟನ್ನು ಅವಲಂಬಿಸಿ ಹುಟ್ಟಿಕೊಂಡಿವೆ ಎಂಬುದನ್ನು ನಾವು ಅಲ್ಲಗಳೆಯಲು ಸಾಧ್ಯವೇ ಇಲ್ಲ. ಹೀಗಾಗಿಯೇ ಯಕ್ಷಗಾನ ಸಂಗೀತವನ್ನು ಉತ್ತರಾದಿಯವರಾಗಲೀ, ದಕ್ಷಿಣಾದಿಯವರಾಗಲೀ ತಮ್ಮ ಶಾಸ್ತ್ರೀಯ ಸಂಗೀತ ಪಂಕ್ತಿಯಲ್ಲಿ ಸೇರಿಸುವುದಿಲ್ಲ. ಸೇರಿಸಬೇಕಾಗಿಯೂ ಇಲ್ಲ, ಏಕೆಂದರೆ ಯಕ್ಷಗಾನ ಸಂಗೀತಕ್ಕೆ ಒಂದು ಪ್ರತ್ಯೇಕ ಅಸ್ಮಿತೆಯೇ ಇದೆ. ಎಷ್ಟೇ ಶಾಸ್ತ್ರೀಯ ಸಂಗೀತದ ರಾಗಗಳನ್ನು ಬಳಸಿದರೂ ಯಕ್ಷಗಾನದ ಚೌಕಟ್ಟಿನಲ್ಲಿ ಮಾತ್ರ ಅವುಗಳ ಬಳಕೆಗೆ ಗೌರವವಿದೆ.
ಯಕ್ಷಗಾನದ ಆಹಾರ್ಯ ಕೂಡ ಭರತಮುನಿಯ ಊಹೆಯನ್ನೂ ಮೀರಿ ಬೆಳಗಿದೆ. ಅದಕ್ಕೊಂದು ಪ್ರತ್ಯೇಕ ಆಹಾರ್ಯದ ವ್ಯವಸ್ಥೆಯೇ ಇದೆ. ಅದರಲ್ಲಿಯೂ ಅದಕ್ಕೊಂದು ಅಸ್ಮಿತೆಯಿದೆ. ಈ ದೃಷ್ಟಿಯಿಂದ ನೋಡಿದರೆ ಯಕ್ಷಗಾನವೇ ಕನ್ನಡದ ನಾಟ್ಯಶಾಸ್ತ್ರ ಎಂದರೆ ತಪ್ಪಾಗಲಾರದು.
ಭರತನಾಟ್ಯವೆಂಬ ರಂಗಪ್ರಕಾರವು ತನ್ನ ಪೋಷಣೆಗಾಗಿ ಭರತನು ಉಲ್ಲೇಖಿಸದ ಅನೇಕ ಸಂಗತಿಗಳನ್ನು ಮೈಗೂಡಿಸಿಕೊಂಡು ಬೆಳೆದಿದೆ. ಯಕ್ಷಗಾನ ಕೂಡ ಹಾಗೆಯೇ ಬೆಳೆದಿದ್ದರೂ ಅದು ಸ್ವತಂತ್ರವಾದ ನಾಟ್ಯಪದ್ಧತಿಯನ್ನು ಕಂಡುಕೊಂಡಿದೆ. ಆದರೆ ಈ ನೆಲೆಯಲ್ಲಿ ಅದು ಭರತನಾಟ್ಯದಿಂದ ಉಪಕೃತವಾಗಬೇಕಾದ ಅಗತ್ಯವನ್ನೂ ನಾವು ಅಲ್ಲಗಳೆಯುವಂತಿಲ್ಲ.
ಯಕ್ಷಗಾನದ ವಾಚಿಕಾಭಿನಯದಲ್ಲಿ ಉಳಿದ ಹಾಗೆ ಒಂದು ಪ್ರತ್ಯೇಕತೆಯನ್ನು ಗುರುತಿಸಬೇಕು. ಯಕ್ಷಗಾನದ ಮಾತುಗಾರಿಕೆ-ನಾಟಕದ ಹಾಗೆ ಅಥವಾ ದಶರೂಪಕಗಳ ಹಾಗೆ ಬರೆದು ತಯಾರಿಸಿದ್ದಲ್ಲ. ಅದು ಆಶುವೈಭವ. ಇಲ್ಲಿ ಕೂಡ ಅದಕ್ಕೊಂದು ಅಸ್ಮಿತೆಯಿದೆ. ಯಕ್ಷಗಾನವೆನ್ನುವುದು ಒಂದು ’ಕೂಟಕಲೆ’. ಅದರ ಯಾವುದೇ ಒಂದು ಅಂಗ ಹೆಳವಾದರೆ ಅಥವಾ ಅತಿಯಾಗಿ ಬೆಳೆದರೆ ಅದರ ಸಮಷ್ಟಿ ಸೌಂದರ್ಯಕ್ಕೆ ಬಾಧಕವೇ ಸರಿ. ಕೆಲವೊಮ್ಮೆ ಅದು ಗಾನವೈಭವವಾಗಿ, ಮತ್ತೆ ಕೆಲವೊಮ್ಮೆ ನಾಟ್ಯವೈಭವವಾಗಿ ತನ್ನ ಮೂಲ ಉದ್ದೇಶವನ್ನೇ ಬಲಿ ತೆಗೆದುಕೊಳ್ಳುವಲ್ಲಿ ಈ ರಂಗದ ದುರ್ದೆಸೆಯ ಬಗ್ಗೆ ಚಿಂತಿಸಬೇಕಾಗುತ್ತದೆ. ಸಾತ್ತ್ವಿಕಾಭಿನಯದ ಕೊರತೆಯಂತೂ ಎದ್ದು ಕಾಣುತ್ತದೆ. ಇದಕ್ಕಾಗಿಯೂ ಯಕ್ಷರಂಗಕ್ಕೆ ಭರತಶಾಸ್ತ್ರದ ಅಗತ್ಯ ಇಂದಿಗೂ ಇದೆ.
’ಯಕ್ಷಗಾನಕ್ಕೆ ಭರತಶಾಸ್ತ್ರವೇ ಸಂವಿಧಾನ’ ಎಂದೂ ಹೇಳುವ ಕೃತಿಕಾರರು ದೇಶೀ ಮಾರ್ಗದ ಸಮನ್ವಯವನ್ನು ಒಪ್ಪಿಕೊಳ್ಳುವ ವಿವೇಕವನ್ನು ತೋರಿದ್ದಾರೆ.
ಇಂಗ್ಲೀಷಿನ ’ಫೋಕ್’ (ಈoಟಞ) ಎಂಬುದನ್ನು ಜನಪದವೆಂದು ಅಂಗೀಕರಿಸಿ ಅದಕ್ಕೆ ರಾಜಕಾರಣಿಗಳು ಸಾಕಿ, ಸಲಹುತ್ತಿರುವ ಜಾತಿಯ ಘಮಲನ್ನು ಹಚ್ಚಿ ಅದು ಮಾರ್ಗಕ್ಕೆ ವಿರುದ್ಧವಾದುದೆಂದು ಬಿಂಬಿಸಿ ಶಾಸ್ತ್ರ ಎಂದೊಡನೆಯೇ ಸಿಡಿಮಿಡಿಗೊಳ್ಳುವ ವಿಕೃತ ಮನಸ್ಸಿನ ನಿರೂಪಣೆಗಳನ್ನು ಬದಿಗಿಕ್ಕಿ ಪರಸ್ಪರ ಪೂರಕವಾದ ದೇಶೀ ಹಾಗೂ ಮಾರ್ಗಗಳ ಸಮನ್ವಯ ಸಿದ್ಧಾಂತದ ಅಡಿಪಾಯದ ಮೇಲೆ ಯಕ್ಷಗಾನವನ್ನು ’ಕನ್ನಡ ನಾಟ್ಯಶಾಸ್ತ್ರ’ವನ್ನಾಗಿ ಕಟ್ಟಿ ನಿಲ್ಲಿಸಬೇಕಾದ ಅಗತ್ಯವಿರುವ ಈ ಕಾಲಕ್ಕೆ ಶ್ರೀ ಅಶೋಕ ಹಾಸ್ಯಗಾರರ ದಶರೂಪಕಗಳ ದಶಾವತಾರ ಒಂದು ಆಧಾರ ಶೃತಿಯಾಗಬಲ್ಲದು.
ಕಾರ್ತೀಕ ಶುಕ್ಲ ಪೂರ್ಣಿಮೆ ಇತಿ ಶಂ
೧೫.೧೧.೨೦೨೪ –ಡಾ. ಜಿ.ಎಲ್.ಹೆಗಡೆ
ನಿಕಟಪೂರ್ವ ಅಧ್ಯಕ್ಷರು
ಕರ್ನಾಟಕ ಯಕ್ಷಗಾನ ಅಕಾಡೆಮಿ, ಬೆಂಗಳೂರು
ಪೂರ್ವವಕ್ತವ್ಯ
(ದಶರೂಪಕಗಳ ದಶಾವತಾರ: ಮೊದಲ ಓದು)
ಧರತೇ ದಶರೂಪಾಣಿ ರಂಗೇ ಧಾತೃವಿನಿರ್ಮಿತೇ |
ರಸೋನ್ಮೇಷಾಯ ಸರ್ವೇಷಾಂ ದಶಾವತಾರಿಣೇ ನಮಃ ||೧||
ಎಲ್ಲರ ರಸೋದಯಕ್ಕಾಗಿ ಬ್ರಹ್ಮನೇ ನಿರ್ಮಿಸಿದ ಜಗವೆಂಬ ರಂಗದಲ್ಲಿ ಹತ್ತು ರೂಪಗಳನ್ನು ಧರಿಸಿದ ದಶಾವತಾರಿ ಹರಿಗೆ ನಮಸ್ಕಾರ.
ಪ್ರತ್ಯವತಾರಮೇತಸ್ಯ ರಸನೇತುರ್ವಿನೋದಿನಃ |
ಏಕೈಕಂ ಹಿ ಹರೇರಾಸ್ತಾಂ ರೂಪಾರೋಪೇಣ ರೂಪಕಮ್ ||೨||
ವಿನೋದವನ್ನು ಬಯಸಿದ ರಸನಾಯಕನಾದ ಹರಿಯ ಪ್ರತಿಯೊಂದು ಅವತಾರದಲ್ಲಿಯೂ ರೂಪಧಾರಣೆಯ ಕಾರಣದಿಂದ ಒಂದೊಂದು ರೂಪಕವು ನೆಲೆಸಲಿ.
ವಿಷ್ಣು ಜಗತ್ಪಾಲಕ, ಪ್ರಪಂಚದ ಅಸ್ತಿತ್ವವೆ ಅವನ ಅನುಗ್ರಹ. ಅವನು ತ್ರಿಮೂರ್ತಿಗಳಲ್ಲಿ ಒಬ್ಬ. ವಿಶ್ವವ್ಯವಸ್ಥೆಯ ಮೂಲಸೂತ್ರ ಅವನೇ. ಆದುದರಿಂದ ಅವನು ವಿಶ್ವಂಭರ. ವಿಶ್ವದೊಳಗೆ ಅವನು ತುಂಬಿಕೊಂಡಿದ್ದಾನೆ. ವಿಶ್ವ ಅವನೊಳಗೆ ನೆಲೆಸಿಕೊಂಡಿದೆ. ಪ್ರಪಂಚದ ಅಣು ಅಣುಗಳಲ್ಲಿಯೂ ಅಹೋರಾತ್ರ, ಅನುಕ್ಷಣ ಅದರ ಸತ್ತೆಯನ್ನು ಉಳಿಸಿ, ಬೆಳೆಸಿ, ಬೆಳಗಿಸುವುದೆ ಅವನ ಕಾಯಕ-ಕಾರ್ಯಕ್ಷೇತ್ರ. ಅದನ್ನೂ ಅವನು ತನಗೆ ತಾನೇ ವಿಧಿಸಿಕೊಂಡಿರುವುದು. ಸ್ವಯಂ ಸ್ವೀಕೃತ; ಪರಪ್ರೇರಿತವಲ್ಲ. ಅಧರ್ಮ ಹೆಚ್ಚಾಗಿ, ಧರ್ಮ ಕೈ ಸೋತಾಗ, ಧರ್ಮದ ಅಭ್ಯುತ್ಥಾನಕ್ಕಾಗಿ ಅವನೇ ರೂಪಧರಿಸಿ, ಅವತರಿಸಿ ಬರುವುದು ಉಂಟು. ಅವತರಣ ಎಂದರೆ ಇಳಿದು ಬರುವುದು. ಮೇಲಿನಿಂದ ಕೆಳಗೆ ಇಳಿದರೆ ಅವತರಣ; ಕೆಳಗಿನಿಂದ ಮೇಲಕ್ಕೆ ಎತ್ತಿದರೆ ಉದ್ಧರಣ. ಸರ್ವವ್ಯಾಪಕನಾದ ವಿಷ್ಣುವಿಗೆ ಒಳಗೆಲ್ಲಿ-ಹೊರಗೆಲ್ಲಿ? ಮೇಲೆಲ್ಲಿ-ಕೆಳಗೆಲ್ಲಿ? ಆದರೂ ತನ್ನ ಸೃಷ್ಟಿಯ ಒಳಗೆ, ತನ್ನಿಂದ ಉದ್ಧಾರವಾಗುವವರ ಮಟ್ಟಕ್ಕೆ (ಕೆಳಗೆ) ಇಳಿದು ಬಂದ ಎಂಬ ಆಶಯದಿಂದ ಈ ಶಬ್ದಪ್ರಯೋಗ. ಕಾಯುವ ದೇವರಿಗೆ ಸಾವಿರದ ಅವತಾರಗಳು; ಸಾವಿರಾರು ಅವತಾರಗಳು. ಬೇರೆ ಬೇರೆ ಕಾರಣಗಳಿಂದ ಅವನ ಹತ್ತು ಅವತಾರಗಳು ಪುರಾಣಪ್ರಸಿದ್ಧ. ಅವು ಮತ್ಸ್ಯ, ಕೂರ್ಮ, ವರಾಹ, ನಾರಸಿಂಹ, ವಾಮನ, ಪರಶುರಾಮ, ರಾಮ, ಕೃಷ್ಣ, ಬುದ್ಧ, ಕಲ್ಕ್ಯ ಎಂಬೊಂದು ಬಗೆಯ ಗಣನೆಯಿದೆ. ಇಲ್ಲಿ ಬುದ್ಧ ಶಾಕ್ಯಮತದ ತಥಾಗತನಲ್ಲ; ಕಾಶ್ಯಪಗೋತ್ರದ ಆಚಾರ್ಯ ಎಂಬುದು ಕೆಲವರ ಮತ. ಮತ್ತೆ ಕೆಲವರು ಬುದ್ಧನನ್ನು ಬಿಟ್ಟು ಬಲರಾಮನನ್ನು ಸೇರಿಸಿ ದಶಾವತಾರಗಳ ಪಟ್ಟಿಯನ್ನು ಪಠಿಸುತ್ತಾರೆ. ಅವರಲ್ಲಿ ಜಯದೇವ ಕವಿ ಪ್ರಮುಖನಾಗಿದ್ದಾನೆ. ಗೀತಗೋವಿಂದದಲ್ಲಿ ಅವನು ಮಾಡಿದ ದಶಾವತಾರಸ್ತುತಿ ಹೀಗಿದೆ:
ವೇದಾನುದ್ಧರತೇ ಜಗನ್ನಿವಹತೇ ಭೂಗೋಲಮುದ್ಬಿಭ್ರತೇ
ದೈತ್ಯಾನ್ ದಾರಯತೇ ಬಲಿಂ ಛಲಯತೇ ಕ್ಷತ್ರಕ್ಷಯಂ ಕುರ್ವತೇ |
ಪೌಲಸ್ತ್ಯಂ ಜಯತೇ ಹಲಂ ಕಲಯತೇ ಕಾರುಣ್ಯಮಾತನ್ವತೇ
ಮ್ಲೇಚ್ಛಾನ್ಮೂರ್ಛಯತೇ ದಶಾಕೃತಿಕೃತೇ ಕೃಷ್ಣಾಯ ತುಭ್ಯಂ ನಮಃ ||
ವೇದವನ್ನು ಉದ್ಧರಿಸುವ, ಜಗತ್ತನ್ನು ಹೊರುವ, ಭೂಗೋಲವನ್ನು ಎತ್ತಿ ಹಿಡಿಯುವ, ದೈತ್ಯರನ್ನು ಸಂಹರಿಸುವ, ಬಲಿಯನ್ನು ವಂಚಿಸುವ, ಕ್ಷತ್ರಿಯರ ನಾಶವನ್ನು ಮಾಡುವ, ರಾವಣನನ್ನು ಗೆಲ್ಲುವ, ನೇಗಿಲನ್ನು ಹಿಡಿಯುವ, ಕರುಣೆಯನ್ನು ತಳೆಯುವ, ಮ್ಲೇಚ್ಛರನ್ನು ಮೈಮರೆಸುವ ದಶಾವತಾರಿ ಕೃಷ್ಣ: ನಿನಗೆ ವಂದನೆ: ದಶಾವತಾರ ಪಟ್ಟಿಯಲ್ಲಿ ಹಲಂ ಕಲಯತೇ ಎಂದು ಬಲರಾಮನನ್ನು ಜಯದೇವ ಸೇರಿಸಿದ್ದಾನೆ.
ಯಕ್ಷಗಾನ ರಂಗಪ್ರದರ್ಶನಗಳಿಗೆ ದಶಾವತಾರ ಆಟ ಎಂಬ ಹೆಸರು ಹಿಂದಿನ ಕಾಲದಿಂದಲೂ ರೂಢವಾಗಿದೆ. ಅವುಗಳ ವಸ್ತು-ಪ್ರಸಂಗ ರಾಮಾಯಣ, ಮಹಾಭಾರತ ಮತ್ತು ಭಾಗವತಗಳಿಂದಲೇ ಆಯ್ಕೆ ಮಾಡಿಕೊಂಡಿರುವಂಥದು. ಬೇರೆ ಬೇರೆ ಪುರಾಣಗಳಿಂದ, ಉಪಪುರಾಣಗಳಿಂದ ಆಯ್ಕೆಯಾದ ಕೆಲವು ಪ್ರಸಂಗಗಳಿದ್ದರೂ ಅವುಗಳ ಸಂಖ್ಯೆ ಮತ್ತು ಪ್ರಾಚುರ್ಯ ತೀರಾ ಕಡಿಮೆ. ಪ್ರಸಂಗಗಳಿಗೂ ಪ್ರದರ್ಶನಗಳಿಗೂ ಇರುವ ನಿಕಟತೆಯನ್ನು ಗಮನಿಸಿ ಪ್ರದರ್ಶನಗಳನ್ನು ದಶಾವತಾರ ಆಟ ಎಂದು ಕರೆಯುವಲ್ಲಿ ಔಚಿತ್ಯವಿದೆ. ಹರಿಗೆ ಅವತಾರ ಆಟ; ಅದನ್ನು ಅಭಿನಯಿಸುವವರಿಗೆ ಪ್ರದರ್ಶನ ಆಟ. ಈರ್ವರಿಗೂ ಪರಾನಂದವೇ ಲಕ್ಷ್ಯ. ಆನಂದಕ್ಕಾಗಿ ಕ್ರೀಡನೀಯಕ. ಯಕ್ಷಗಾನದ ಕಲಾವಿದರಿಗೆ ದಶಾವತಾರಿ ಎಂಬ ಗೌರವದ ಬಿರುದೂ ಇತ್ತು. ಅವರ ಹೊಣೆ ಅಷ್ಟಿತ್ತು! ಅದರಿಂದಲೇ ಇಷ್ಟು ಮನ್ನಣೆಯೂ ಇತ್ತು! ಸಮರ್ಥ ಕಲಾವಿದ ಮತ್ಸ್ಯನಂತೆ ಕಣ್ಣು ಮುಚ್ಚದೇ ಎಲ್ಲವನ್ನೂ ಗಮನಿಸಬೇಕು. ಕೂರ್ಮನಂತೆ ಪ್ರದರ್ಶನದ ಹೊಣೆಯನ್ನು ಬೆನ್ನು ಕೊಟ್ಟು ಹೊರಬೇಕು. ವರಾಹನಂತೆ ಸ್ಪರ್ಶಾಸ್ಪರ್ಶಗಳಿಗೆ ಹಿಂಜರಿಯದವ ನಾಗಬೇಕು. ನರಸಿಂಹನಂತೆ ಎಲ್ಲ ಪಾತ್ರಗಳನ್ನು ಒಪ್ಪಿ ಮಾಡಬೇಕು. ವಾಮನನಂತೆ ಅಹಂಕಾರವನ್ನು ತ್ಯಜಿಸಿ ಮಗುವಿನ ಮುಗ್ಧತೆಯನ್ನು ಅರಿತುಕೊಳ್ಳಬೇಕು. ಪರಶುರಾಮನಂತೆ ಪ್ರದರ್ಶನಗಳಿಗಾಗಿ ಊರೂರು ಸುತ್ತಾಡಬೇಕು. ರಾಮನಂತೆ ಚಾರಿತ್ರಿಕ ಗುಣಗಳನ್ನು ರೂಢಿಸಿಕೊಳ್ಳಬೇಕು; ಕಷ್ಟಗಳನ್ನು ಸಹಿಸಿಕೊಳ್ಳಬೇಕು. ಕೃಷ್ಣನಂತೆ ಕಲಾವಿಚಕ್ಷಣನೂ ಕ್ರಿಯಾನಿಪುಣನೂ ಆಗಿರಬೇಕು. ಬುದ್ಧನಂತೆ ವಿರಕ್ತನಾಗಿರಬೇಕು. ಕಲ್ಕಿಯಂತೆ ಪರಾಕ್ರಮಿಯಾಗಿರಬೇಕು. ಹೀಗಿದೆ ದಶಾವತಾರಿಯ ದಶಾವೇಶ ದಶಾವಿಶೇಷ.
ಧನಂಜಯನ ದಶರೂಪಕವು ಕಾವ್ಯಮೀಮಾಂಸೆಯ ಅಪರೂಪದ ಪ್ರಬಂಧ. ನಾಟಕ, ಪ್ರಕರಣ, ಭಾಣ, ಪ್ರಹಸನ, ಡಿಮ, ವ್ಯಾಯೋಗ, ಸಮವಕಾರ, ವೀಥಿ, ಅಂಕ, ಈಹಾಮೃಗ ಈ ಹತ್ತು ರೂಪಕಗಳನ್ನು ಸಲಕ್ಷಣವಾಗಿ ನಿರೂಪಿಸುವ ಪ್ರಮಾಣಗ್ರಂಥ. ಆಶಯ ಮತ್ತು ಪ್ರಸಂಗಗಳಿಗೆ ರೂಪಕೊಟ್ಟು ಚಿತ್ರಿಸುವ ಸಂಯೋಜನೆಗೆ ರೂಪಕವೆಂದು ಹೆಸರು. ಅದರ ವಸ್ತು, ನಾಯಕ ಮತ್ತು ರಸಗಳ ಭೇದದಿಂದ ಅದರಲ್ಲಿ ಹತ್ತು ಪ್ರಧಾನ ರೂಪಕಗಳೂ, ಹದಿನೆಂಟು ಉಪರೂಪಕಗಳೂ ಉಂಟಾಗುತ್ತವೆ. ಈ ರೂಪಕ ಪ್ರಭೇದಗಳೆ ಸಂಸ್ಕೃತ ನಾಟಕ ಸಾಹಿತ್ಯವನ್ನೂ, ಭಾರತೀಯ ರಂಗಭೂಮಿಯನ್ನೂ ಸಮೃದ್ಧಗೊಳಿಸಿವೆ.
ವಿಷ್ಣುವಿನ ದಶಾವತಾರಗಳಿಗೂ, ದೃಶ್ಯ ಪ್ರಭೇದಗಳಾದ ದಶರೂಪಕಗಳಿಗೂ ಸೂಕ್ಷ್ಮವಾದ ಸಂಬಂಧವೊಂದು ಮುತ್ತಿನ ಮಾಲೆಯೊಳಗೆ ಗುಟ್ಟಾಗಿ ಎಲ್ಲ ಮುತ್ತುಗಳ ಒಳಗೆ ಹಾದುಹೋದರೂ ಹೊರಗೆ ಕಾಣದಿರುವ ಸೂತ್ರದಂತೆ ರಹಸ್ಯಪ್ರಕಾಶವಾಗಿ, ದೃಢವಾಗಿ ನಿಂತುಕೊಂಡಿದೆ ಎಂದು ಧನಂಜಯನೆ ಉಪೋದ್ಘಾತದಲ್ಲಿ ಸೂಚಿಸಿದ್ದಾನೆ. ಇದನ್ನೇ ಮುಂದುವರಿಸಿ ಕೆಲವರು ಇವುಗಳಿಗೂ ಯಕ್ಷಗಾನ ದಶಾವತಾರ ಆಟಕ್ಕೂ ಒಂದು ಗಣನೀಯವಾದ ಸಂಬಂಧವಿದೆ ಎಂದು ಸೂಚಿಸಿರುತ್ತಾರೆ. ಇದರಿಂದ ಪ್ರೇರಿತರಾದ ಮಿತ್ರ ಅಶೋಕ ಹಾಸ್ಯಗಾರರು ಸುಮಾರು ಹನ್ನೆರಡು-ಹದಿಮೂರು ವರ್ಷಗಳಿಂದ ಗಹನವಾದ ಅಧ್ಯಯನವನ್ನು ಕೈಗೊಂಡರು. ನೂರಾರು ಗ್ರಂಥಗಳನ್ನು ಆಮೂಲಚೂಲ ವಾಗಿ ಪರಿಶೀಲಿಸಿದರು. ಹತ್ತಾರು ವಿದ್ವಾಂಸರ ಜೊತೆ ಚರ್ಚೆವಿಚರ್ಚೆಗಳನ್ನು ಮಾಡಿದರು. ಸಂಶಯಗಳು ಸಾಗಿ, ನಿರ್ಣಯಗಳು ತಲೆದೂಗಿ, ಮನಸ್ಸು ಮಾಗಿ, ಮಾತುಗಳು ಬೀಗಿ ಉದ್ಗಮಿಸುವಾಗ ಲೇಖನಕ್ಕೆ ತೊಡಗಿದರು. ಈ ಸನ್ನಿವೇಶದಲ್ಲಿ ಅರಳುವ ಅಡಿಕೆಯ ಶಿಂಗಾರದಂತೆ ಆಕೃತಿಯನ್ನು ತಳೆದಿದೆ ಈ ಕೃತಿ.
ಇದೊಂದು ಸಂಶೋಧಕ ಮಹಾಪ್ರಬಂಧ. ಅಳತೆಯಿಂದ ’ಮಹಾ’ ಎಂದು ಆಗದಿದ್ದರೂ ಅಳವಿಯಿಂದ, ಒಳಗಿನ ಹೂರಣದಿಂದ, ಮಹಾಪ್ರಬಂಧವಾಗುವ ಅರ್ಹತೆಯನ್ನು ಹೊಂದಿದೆ. ಇಡೀ ಕೃತಿಯೊಳಗೆ ಶೋಧನೆಯ ಸೂಕ್ಷ್ಮದೃಷ್ಟಿ ಪಸರಿಸಿದೆ. ಒಟ್ಟೂ ಒಂಬತ್ತು ಅಧ್ಯಾಯಗಳಿದ್ದು, ಪ್ರತಿಯೊಂದು ಅಧ್ಯಾಯದಲ್ಲಿಯೂ ಒಂದು ಹೊಸ ನೋಟ, ಹೊಸ ಪ್ರಮೇಯ, ನವೀನ ವ್ಯುತ್ಪತ್ತಿ, ನವಾನುಸಂಧಾನ ಇಲ್ಲದಿಲ್ಲ. ಸಂಶೋಧನೆಯ ಹೊಸ ಸಂಗತಿಗಳನ್ನೂ, ಹೊಸ ಕ್ಷೇತ್ರಗಳನ್ನೂ ತೆರೆದು ಕಾಣಿಸುವ ತ್ವರೆ ಮತ್ತೂ ಕಾಳಜಿ ಗ್ರಂಥದ ಉದ್ದಗಲದಲ್ಲಿ ಹಾಸುಹೊಕ್ಕಾಗಿವೆ. ಧನಂಜಯನ ದಶರೂಪಕ, ಭರತನ ನಾಟ್ಯಶಾಸ್ತ್ರ ಮತ್ತು ಯಕ್ಷಗಾನ ದಶಾವತಾರ ಆಟಗಳ ಬಗ್ಗೆ ಏಕಕಾಲದಲ್ಲಿ ಕೈಗೊಂಡ ಸಂಶೋಧನ ಯಾನ ಈ ಗ್ರಂಥ.
ಯಕ್ಷಗಾನ ನಮ್ಮ ನಾಡಿನ ಜಾನಪದ ಕಲೆ-ಎಂದು ಅನೇಕರು ವಾದಿಸುತ್ತಾರೆ. ಇದೊಂದು ಶಾಸ್ತ್ರೀಯ ಕಲೆ-ಎಂದು ಹಲವು ವಿದ್ವಾಂಸರು ಸಮರ್ಥಿಸುತ್ತಾರೆ. ಯಕ್ಷಗಾನ ಕಲೆಯ ಒಳಗೆ ಮತ್ತು ಹೊರಗೆ ಈ ಎರಡೂ ಅಭಿಪ್ರಾಯಗಳನ್ನು ಪ್ರತಿಪಾದಿಸುವವರಿದ್ದಾರೆ. ಜಾನಪದ ಕಲೆ ಎಂದು ನಂಬುವವರಿಗೆ ಯಕ್ಷಗಾನದ ಶಾಸ್ತ್ರೀಯ ರಚನೆಯ ಬಗ್ಗೆ ಅನಾದರವಿರುತ್ತದೆ. ಶಾಸ್ತ್ರೀಯ ಕಲೆ ಎಂದು ನೆಮ್ಮುವವರಿಗೆ ಈ ಕಲೆಯ ಜಾನಪದ ಸ್ಫೂರ್ತಿಯ ಬಗ್ಗೆ ಅಸಹನೆಯಿರುತ್ತದೆ. ಚರ್ಚೆ ಅವರವರ ನೇರದಲ್ಲಿ ಮುಂದುವರಿಯುತ್ತಲೇ ಇದೆ. ಅಪರೂಪಕ್ಕೆ ಕೆಲವು ವಿದ್ವಾಂಸರು ಕಲೆಗಳಲ್ಲಿ ಶಿಷ್ಟ ಮತ್ತು ಜಾನಪದ ಎಂಬ ವಿಭಾಗವೇ ತಪ್ಪು; ಪ್ರತಿಯೊಂದು ಕಲೆಯಲ್ಲಿಯೂ ಸೂಕ್ಷ್ಮವಾಗಿ ಗಮನಿಸಿದರೆ ಚರಾಂಶದಲ್ಲಿ ಜಾನಪದವೂ, ಸ್ಥಿರಾಂಶದಲ್ಲಿ ಶಿಷ್ಟವೂ ಇದ್ದು ಒಂದನ್ನೊಂದು ಸಮತೋಲ ಮಾಡಿಕೊಳ್ಳುತ್ತ ಸೇರಿಕೊಳ್ಳುತ್ತವೆ ಎಂಬ ವಾದವನ್ನು ಮಂಡಿಸುತ್ತಾರೆ. ಅಶೋಕ ಹಾಸ್ಯಗಾರರು ಯಕ್ಷಗಾನ ಕಲೆಯ ಶಾಸ್ತ್ರೀಯತೆಯನ್ನು ಎಳೆ ಎಳೆಯಾಗಿ ವಿಶ್ಲೇಷಣೆ ಮಾಡಿ ಸಮರ್ಥಿಸಲು ಈ ಕೃತಿಯನ್ನು ಮುಡಿಪಾಗಿಟ್ಟಿದ್ದಾರೆ. ಕರ್ಕಿ ಪರಂಪರೆಯ ಪ್ರಯೋಗಗಳನ್ನು ಪರಿಶೀಲಿಸಿ, ಬಡಗುತಿಟ್ಟಿನ ಉತ್ತರ ಕನ್ನಡ ಜಿಲ್ಲೆಯ ವೈಶಿಷ್ಟ್ಯವನ್ನು ಪರಾಂಬರಿಸುವಲ್ಲಿ ಈ ಕೃತಿ ಅಗ್ರಮಾನ್ಯವಾಗಿದೆ. ಆದುದರಿಂದ ಗ್ರಂಥದ ಮೊದಲು ಮಾಡಿದ ಕರ್ಕಿಮೇಳದ ಕಲಾವಿದರ ಪದತಲದಲ್ಲಿಯೇ ಸಮರ್ಪಣೆಯು ಅತ್ಯಂತ ಸಮುಚಿತವಾಗಿದೆ.
ಆಶೋಕ ಹಾಸ್ಯಗಾರರು ಅನೇಕ ವರ್ಷಗಳಿಂದ ವೃತ್ತಿನಿರತ ಪತ್ರಕರ್ತರು. ಪತ್ರಿಕೆಯ ಸಂಪಾದಕರಾಗಿ ಹಗಲಿರುಳು ದುಡಿದವರು. ಪತ್ರಿಕೆಗಳ ಕಷ್ಟ-ಸುಖಗಳಲ್ಲಿ ಪಾಲ್ಗೊಂಡವರು. ತಮ್ಮ ಹೆಚ್ಚಿನ ಅವಧಾನ-ವ್ಯವಧಾನಗಳನ್ನು ಕನ್ನಡ ಸಾಹಿತ್ಯದ ಕೃಷಿಯಲ್ಲಿ ತೊಡಗಿಸಿದವರು. ಸುದ್ದಿ ಸಂಗ್ರಹದಲ್ಲಿ ಅವರಿಗೆ ರುಚಿಯಿಲ್ಲ. ಸುದ್ದಿಯ ವಿಶ್ಲೇಷಣೆಯಲ್ಲಿ ತೊಡಗು ಇಲ್ಲ. ವರದಿಗಳಲ್ಲಿ ತ್ವರೆಯಿಲ್ಲ. ಆದರೆ ವ್ಯಕ್ತಿಚಿತ್ರದಲ್ಲಿ ಅವರಿಗೆ ತೀವ್ರವಾದ ಆಸಕ್ತಿ. ಪುಸ್ತಕ ಪರಿಚಯದಲ್ಲಿ ಬಹುವಾದ ಪ್ರವೃತ್ತಿ. ಕಾದಂಬರಿ, ಕತೆ, ಕವನ, ನಾಟಕಗಳ ಓದು, ಬರಹ, ಚರ್ಚೆಗಳಲ್ಲಿ ಅವರು ಎತ್ತಿದ ಕೈ. ಹೊಸ ಪುಸ್ತಕ ಓದದೆ ಅವರ ಮಸ್ತಕ ನಲಿಯದು. ವಿಮರ್ಶೆ ಮಾಡದೆ ಮನ ಒಲಿಯದು. ಸಾಹಿತ್ಯವ್ಯಾಸಂಗ ಮಾಡುವ ಸ್ನೇಹಿತರಿಗೆ ಅವರೇ ದೀಪಸ್ತಂಭ. ಓದುಗರಿಗೆ ರುಚಿಸುವ ಅವರ ಅಂಕಣ ದೀಪಸ್ತಂಭ. ಅವರೊಳಗೆ ಹಲವು ವರ್ಷಗಳಿಂದ ಇಂಥ ಸಂಶೋಧಕನೊಬ್ಬ ಬೆಳೆಯುತ್ತಿದ್ದಾನೆ ಎಂಬ ಸಂಗತಿ ಈ ಕೃತಿಯನ್ನು ಓದಿದವರಿಗೆ ಹೊಳೆಯದೇ ಇರದು.
ಗಮನಿಸಬೇಕಾದ ಸಂಗತಿಗಳ ಬಗ್ಗೆ ಆಧಾರ ಗ್ರಂಥಗಳಿಂದ ಧಾರಾಳವಾಗಿ ವಾಕ್ಯ-ಪದಪುಂಜ ಗಳನ್ನು ಉದ್ಧರಣ ಮಾಡಿ ಅವುಗಳನ್ನು ಅಡಿಟಿಪ್ಪಣಿಗಳಲ್ಲಿ ಕೊಟ್ಟಿರುವ ಕ್ರಮ ಅಭಿನಂದನೀಯ ವಾಗಿದೆ. ಟಿಪ್ಪಣಿಗಳನ್ನು ಆಯಾ ಅಧ್ಯಾಯದ ಕೊನೆಯಲ್ಲಿ ಜೋಡಿಸಲಾಗಿದೆ. ಓದುವ ವಿಶೇಷ ಜಿಜ್ಞಾಸುಗಳಿಗೆ ಈ ವ್ಯವಸ್ಥೆ. ಸಾಮಾನ್ಯ ಓದುಗರಿಗೆ ಉದ್ಧರಣಗಳಿಂದಾಗುವ ವ್ಯವಧಾನದ ಕಿರಿಕಿರಿಯಿಲ್ಲ. ಗ್ರಂಥದ ಕೊನೆಯಲ್ಲಿ ಪಲ್ಲವಿಸಿದ ಮೂರು ಅನುಬಂಧಗಳು ಇದರ ಉಪಾದೇಯತೆ ಯನ್ನು ಹೆಚ್ಚಿಸುತ್ತ ಮುಂದಿನ ಪುಸ್ತಕಗಳ ಅಗತ್ಯವನ್ನೂ ಒತ್ತಾಯಿಸುತ್ತಿವೆ.
ಈ ಕೃತಿಯಲ್ಲಿ ಅಶೋಕ ಹಾಸ್ಯಗಾರರ ನಿರೂಪಣ ಶೈಲಿ ಎರಡು ಸೂತ್ರಗಳನ್ನು ಅವಲಂಬಿಸಿದೆ. ಭರತನ ನಾಟ್ಯಶಾಸ್ತ್ರಕ್ಕೂ ಧನಂಜಯನ ದಶರೂಪಕಕ್ಕೂ ಸುಮಾರು ಸಾವಿರದ ಎರಡುನೂರು ವರ್ಷಗಳ ಅಂತರವಿದೆ. ಆ ಅವಧಿಯಲ್ಲಿ ನಾಟ್ಯಶಾಸ್ತ್ರದ ಪ್ರಮೇಯಗಳಲ್ಲಿ ಆದ ಪಲ್ಲಟ ಮತ್ತು ಪರಿಷ್ಕಾರಗಳನ್ನು ದಶರೂಪಕಕ್ಕೆ ಸಂಬಂಧಪಟ್ಟಂತೆ ನಿಖರವಾಗಿ ಗುರುತಿಸುವುದು. ಮೊದಲ ಸೂತ್ರ, ಎರಡನೇ ಸೂತ್ರ ಅವುಗಳನ್ನು ಯಕ್ಷಗಾನ ಪ್ರಸಂಗ, ದೃಶ್ಯ, ಪದ, ಪಾತ್ರಗಳಲ್ಲಿ ಅಳವಡಿಸಿಕೊಂಡಿರುವ ವಿಧಾನ. ನಾಟ್ಯವಸ್ತುವಿಗೆ ಸಂಬಂಧಪಟ್ಟಂತೆ ಪ್ರತಿಯೊಂದು ಅಧ್ಯಾಯ ದಲ್ಲಿಯೂ ವಿಪುಲವಾದ ಚರ್ಚೆ, ವಿಶ್ಲೇಷಣೆಗಳನ್ನು ಮಾಡಲಾಗಿದೆ. ದಶರೂಪಕಗಳ ದಶಾವತಾರ ಯಕ್ಷಗಾನದ ದಶಾವತಾರ ಆಟ ಎಂಬ ಉದ್ಗಾರಕ್ಕೆ ಅಣಿಗೊಳಿಸಿದ ಪ್ರೌಢ ಪ್ರಬಂಧ ಈ ಗ್ರಂಥ.
ಕೃತಿಯಲ್ಲಿ ಅಲ್ಲಲ್ಲಿ ಅರೆಕೋರೆಗಳಿವೆ. ನಾವು ಒಪ್ಪದ ನಿರ್ಣಯಗಳೂ ಇವೆ. ಹಲವು ಎಡೆಗಳಲ್ಲಿ ಹೆಚ್ಚಿನ ವಿವರಗಳು ಬೇಕಿತ್ತು. ಸಂಕ್ಷೇಪ ಬಹಳವಾಗಿ ವಿವಕ್ಷೆ ಅಸ್ಪಷ್ಟವಾದ ಸ್ಥಳಗಳೂ ಇವೆ. ಬರೆಯುವಾಗ ಇವೆಲ್ಲ ಸಹಜ. ಆದರೂ ಈ ಕೃತಿ ಯಕ್ಷಗಾನ ಸಂಶೋಧನೆಯ ಹಲವು ಮುಖಗಳನ್ನು ತೆರೆಯುತ್ತ, ವಸ್ತುವಿಗೆ ಸಂಬಂಧಿಸಿದ ಪ್ರಸಂಗ-ಪಾತ್ರ-ಪದ ದೃಶ್ಯಗಳ ಪ್ರಾಯೋಗಿಕ ವಿಮರ್ಶೆಯ ಅಪರೂಪದ ಮಗ್ಗಲುಗಳನ್ನು ಮೇಲೆತ್ತುವ ಭರದಿಂದ ಈ ದಶಕದ ಅಭಿನಂದನೀಯ ವಾದ ಗ್ರಂಥವಾಗಿದೆ. ಕೃತಿಯನ್ನು ನಮಿಸುತ್ತ, ಕೃತಿಕಾರರನ್ನು ಮನ್ನಿಸುತ್ತ, ಮಾತನ್ನು ಮುಗಿಸುತ್ತೇನೆ.
ಕ್ರೋಧಿ, ಪ್ರಬೋಧ ದ್ವಾದಶೀ –ವಿದ್ವಾನ್ ಉಮಾಕಾಂತ ಭಟ್ಟ, ಕೆರೆಕೈ
೧೩.೧೧.೨೦೨೪ ವಿಶ್ರಾಂತ ಪ್ರಾಂಶುಪಾಲರು
ಸರ್ಕಾರಿ ಸಂಸ್ಕೃತ ಕಾಲೇಜು, ಮೇಲುಕೋಟೆ
ಒಳಪುಟಗಳಲ್ಲಿ…
ಸವಿನುಡಿ / ೫
ಒಡ್ಡೋಲಗಕ್ಕೆ ಮುನ್ನ -ಡಾ. ಜಿ.ಎಲ್.ಹೆಗಡೆ / ೭
ಪೂರ್ವವಕ್ತವ್ಯ -ವಿದ್ವಾನ್ ಉಮಾಕಾಂತ ಭಟ್ಟ / ೧೪
ಪ್ರಾವೇಶಿಕೀ ಧ್ರುವಾ -ಅಶೋಕ ಹಾಸ್ಯಗಾರ, ನಾಭಿಪುರಂ / ೧೯
೧. ಚೌಕಿಮನೆ / ೨೫
೨. ಸಭಾಲಕ್ಷಣ ಎಂಬ ಪೂರ್ವರಂಗ ಮತ್ತು ನಾಟಕ ಎಂಬ ಮೊದಲ ರೂಪಕ/ ೪೪
೩. ’ನಾಟಕ’ ಎಂಬ ಪ್ರಥಮಾವತಾರ / ೮೪
೪. ’ಪ್ರಕರಣ’ ಎಂಬ ದ್ವಿತೀಯಾವತಾರ / ೧೦೭
೫. ಪ್ರಸಂಗ ಪದ್ಯಗಳಲ್ಲಿ ಧ್ರುವಾಗೀತಗಳ ಅನ್ವಿತಿ / ೧೧೮
೬. ’ಅಂಕ’ ಎಂಬ ತೃತೀಯಾವತಾರ ಮತ್ತು ’ಭಾಣ’ ಎಂಬ ಚತುರ್ಥಾವತಾರ / ೧೪೫
೭. ’ಪ್ರಹಸನ’ ಎಂಬ ಪಂಚಮಾವತಾರ ಹಾಗೂ ’ವೀಥಿ’ ಎಂಬ ಷಷ್ಠಮಾವತಾರ / ೧೬೪
೮. ’ವ್ಯಾಯೋಗ’ ಎಂಬ ಸಪ್ತಮಾವತಾರ ಮತ್ತು ’ಡಿಮ’ ಎಂಬ ಅಷ್ಟಮಾವತಾರ / ೧೮೦
೯. ’ಸಮವಕಾರ’ ಎಂಬ ನವಮಾವತಾರ ಮತ್ತು ’ಈಹಾಮೃಗ’ ಎಂಬ ದಶಮಾವತಾರ / ೧೯೨
ಉಪಸಂಹಾರ
ಯಕ್ಷಗಾನದ ದಶಾವತಾರವು ನಾಟ್ಯಶಾಸ್ತ್ರೀಯ ದಶರೂಪಕದ ಪರ್ಯಾಯ / ೨೧೦
ಅನುಬಂಧಗಳು
೧. ನೇಪಥ್ಯಗೃಹ, ರಂಗಸ್ಥಳ, ಮತ್ತವಾರಣೀ ಚರ್ಚೆ / ೨೧೯
೨. ಯಕ್ಷಗಾನ ಪ್ರಬಂಧ, ಆಖ್ಯಾನ, ಪುರಾಣ, ಪ್ರಸಂಗ ವ್ಯಾಖ್ಯಾನ / ೨೨೯
೩. ಭಾಗವತ ಮತ್ತು ಪಾತ್ರ ನಿರ್ಮಾಣ / ೨೪೪
ಪರಾಮರ್ಶಿತ ಗ್ರಂಥಗಳು / ೨೬೧
Reviews
There are no reviews yet.