ಕೃಷಿಕನ ಕಾಶ್ಮೀರ
ಪರಿಚಿತ ನಾಡಿನ ಅಪರಿಚಿತ ನೋಟಗಳು?
ಪ್ರವಾಸವೆಂದರೆ ಈಗೆಲ್ಲ ಬರೀ ಮೋಜು-ಮಸ್ತಿಗಷ್ಟೇ ಸೀಮಿತವಾಗಿ ಉಳಿದಿಲ್ಲ. ಕಣ್ಣೆದುರು ಕಾಣುವ ಲೋಕವನ್ನು ಖುದ್ದಾಗಿ ಅನುಭವಿಸಿ, ಅದನ್ನು ಇನ್ನಷ್ಟು ಮತ್ತಷ್ಟು ತೀವ್ರವಾಗಿ ಅರಿಯುವ ಹೊಸ ಬಗೆಯ ಅನ್ವೇಷಣೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ನಾನಾ ಕಾರಣಗಳಿಂದಾಗಿ ಸಾರಿಗೆ ಸೌಲಭ್ಯ, ವಸತಿ, ಊಟೋಪಚಾರಗಳು ಸಾಮಾನ್ಯ ಜನರ ಕೈಗೆಟಕುವಂತೆ ಆಗಿರುವ ಹಿನ್ನೆಲೆಯಲ್ಲಿ ಪ್ರವಾಸದ ವ್ಯಾಖ್ಯಾನವೇ ಬದಲಾಗಿದೆ. ಸೋಲೋ ಟ್ರಿಪ್, ಬೈಕಿಂಗ್, ಜಾಲಿ ರೈಡ್, ಟ್ರಕ್ಕಿಂಗ್, ಫ್ಯಾಮಿಲಿ ಟೂರ್, ವೆಕೇಶನ್, ಸ್ಟಡಿ ಟೂರ್ ಎಂಬೆಲ್ಲ ವಿವಿಧ ಹೆಸರುಗಳಿಂದ ಕರೆಸಿಕೊಳ್ಳುವ ಪ್ರವಾಸವು ಮೂಲತಃ ಮನುಷ್ಯನ ಅಲೆಮಾರಿ ಸ್ವಭಾವದ ಸಂಕೇತವೇ ಆಗಿದೆ!
ತಿರುಗಾಟ’ವನ್ನು ಇನ್ನೊಬ್ಬರ ಜತೆ ಹಂಚಿಕೊಳ್ಳಬೇಕು ಎಂಬ ತುಡಿತ ಕಾಣುವುದೇ ಕಡಿಮೆ. ಹೆಚ್ಚೆಂದರೆ, ಬಂಧು-ಮಿತ್ರರ ಎದುರು ನಾಲ್ಕಾರು ದಿನ ಬಣ್ಣಿಸಬಹುದಷ್ಟೇ. ಆದರೆ ಪ್ರವಾಸದ ಅನುಭೂತಿಯನ್ನು ಅಕ್ಷರ ರೂಪದಲ್ಲಿ ಓದುವ ದೊಡ್ಡ ವರ್ಗವೇ ಇದೆ. ಅಂಥ ಕುತೂಹಲಿಗಳಿಗಾಗಿ ಪ್ರವಾಸದ ಪುಸ್ತಿಕೆಗಳು ವರ್ಷವಿಡೀ ಬರುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಡಾ. ಬದರಿ ಪ್ರಸಾದ್ ಪಿ.ಆರ್. ಬರೆದಿರುವ ಈ ಪುಸ್ತಕ ಕಾಶ್ಮೀರ ಕುರಿತಾದ ವಿಸ್ತೃತ ಹಾಗೂ ಹೊಸ ನೋಟವನ್ನು ಕೊಡುತ್ತದೆ.
ಮೂಲತಃ ಕೃಷಿ ವಿಜ್ಞಾನಿಯಾಗಿರುವ ಡಾ. ಬದರಿ ಪ್ರಸಾದ್, ಕಾಶ್ಮೀರವನ್ನು ಸೂಕ್ಷ್ಮವಾಗಿ ಅವಲೋಕಿಸಿದ ಪರಿ ವಿಶಿಷ್ಟ. ಜನಪ್ರಿಯ ತಾಣಗಳಿಗೆ ಭೇಟಿ ಕೊಟ್ಟು, ಅವುಗಳನ್ನು ವರ್ಣಿಸುವುದು ಸಾಮಾನ್ಯ. ಆದರೆ ಇಲ್ಲಿ ಬರಹ ರೂಪದಲ್ಲಿ ಕಟ್ಟಿಕೊಡಲಾದ ಚಿತ್ರಣಗಳು ಮಾಮೂಲಿ ವಿವರಗಳಿಂದ ಸರಿದು ವಿಶಿಷ್ಟವಾಗಿ ನಿಲ್ಲುತ್ತವೆ. ಸಾಮಾನ್ಯ ಪ್ರವಾಸಿಯೊಬ್ಬ ನೋಡುವುದಕ್ಕಿಂತ ವಿಭಿನ್ನವಾಗಿ ಚಿಕಿತ್ಸಕ ದೃಷ್ಟಿಯನ್ನು ಕೇಂದ್ರ ವಸ್ತು (ಕಂಟೆಂಟ್) ಮೇಲೆ ನಿರ್ದಿಷ್ಟವಾಗಿ ಕೇಂದ್ರೀಕರಿಸಿ ಬರೆದಿರುವುದು ಇವರ ವಿಶೇಷ.
ವಿಹಾರ ತಾಣಗಳ ಕುರಿತು ಬರೆದಷ್ಟೇ ಸೊಗಸಾಗಿ ಕಾಶ್ಮೀರದ ಒಳನೋಟಗಳ ಬಗ್ಗೆಯೂ ವಿವರಗಳನ್ನು ಡಾ. ಬದರಿ ಪ್ರಸಾದ್ ಒದಗಿಸಿದ್ದಾರೆ. ಇತಿಹಾಸ ಪ್ರಸ್ತಾಪ, ಪ್ರಾಕೃತಿಕ ಸೌಂದರ್ಯ ಬಣ್ಣನೆ, ಗ್ರಂಥಗಳ ಉಲ್ಲೇಖದೊಂದಿಗೆ ಕಾಶ್ಮೀರವೆಂದರೆ ಏನೆಂಬುದನ್ನು ಸರಳವಾಗಿ ವಿವರಿಸಿದ್ದಾರೆ. ಪ್ರವಾಸಿ ಸ್ಥಳಗಳ ಕುರಿತು ತಿಳಿಸಿದಷ್ಟೇ ಆಸಕ್ತಿಕರವಾಗಿ ಕೃಷಿ ಬದುಕನ್ನೂ ದಾಖಲಿಸಿದ್ದಾರೆ.
ಕಾಶ್ಮೀರದಲ್ಲಿ ಪ್ರವಾಸೋದ್ಯಮದಷ್ಟೇ ಪ್ರಮುಖವಾಗಿ ಕೃಷಿಯೂ ತನ್ನ ಹೆಜ್ಜೆಗಳನ್ನು ದಾಖಲಿಸಿದೆ. ಆದರೆ ಅಲ್ಲಲ್ಲಿ ಚದುರಿದಂತೆ ಪ್ರಕಟವಾದ ಬರಹಗಳನ್ನು ಹೊರತುಪಡಿಸಿದರೆ ಆ ಬಗ್ಗೆ ಹೆಚ್ಚೇನೂ ವಿವರಗಳು ಸಮಗ್ರವಾಗಿ ಒಂದೇ ಕಡೆ ಬಂದಂತಿಲ್ಲ. ಆ ಕೊರತೆ ಯನ್ನು ಡಾ. ಬದರಿ ಪ್ರಸಾದ್ ಅವರ ಕಾಶ್ಮೀರ’ ಕೃತಿಯು ನಿವಾರಿಸಿದೆ.
ತೋಟಗಳೆಂದರೆ ಫಸಲು ಕೊಡುವ ಅಥವಾ ಆದಾಯ ತಂದುಕೊಡುವ ಕ್ಷೇತ್ರ ಎಂಬುದರ ಆಚೆಗೂ ಯೋಚಿಸಬೇಕು. ಅದು ಹೇಗೆ’ ಎಂಬ ಪ್ರಶ್ನೆಗೆ ಕಾಶ್ಮೀರಿ ಕೃಷಿಕರ ತಂತ್ರಗಾರಿಕೆ ನೋಡಬೇಕು. ಸೇಬು ಅಥವಾ ಅಲ್ಲಿನ ವಿಶೇಷ ಫಲ-ಪುಷ್ಪ ನೋಡಲು ಬರುವ ಪ್ರವಾಸಿಗರಿಂದ ಆದಾಯ’ ಪಡೆಯುವ ಬಗೆ ಕುತೂಹಲಕರ. ಗ್ರಾಹಕರಿಗೆ ಹಣ್ಣಿನ ವಿವಿಧ ಪದಾರ್ಥಗಳ ರುಚಿ ತೋರಿಸಿ, ಅದನ್ನು ಅವರಿಗೆ ಮಾರಾಟ ಮಾಡುವ ತಂತ್ರವಾಗಲೀ ನಿಸರ್ಗ ರಮಣೀಯ ತಾಣಗಳಲ್ಲಿ ಕುರುಕಲು ತಿನಿಸು-ಪಾನೀಯ ಒದಗಿಸುವ ವಹಿವಾಟು ಇಲ್ಲಿ ಸಾಮಾನ್ಯ. ಕಾಶ್ಮೀರದ ಐಡೆಂಟಿಟಿ’ ಹಾಗೂ ಕೆಂಪು ಚಿನ್ನ’ ಎಂದೇ ಜಗತ್ಪ್ರಸಿದ್ಧಿ ಕೇಸರಿ ಕೃಷಿ ಕುರಿತು ಬರೆದಿರುವ ಪ್ರತ್ಯೇಕ ಅಧ್ಯಾಯವು ಈ ಬೆಳೆಯ ಸಂಪೂರ್ಣ ವಿವರವನ್ನು ತೆರೆದಿಡುತ್ತದೆ. ಭಾರತದ ಇತರ ಭಾಗಗಳಿಗೆ ಪೂರೈಕೆಯಾಗುವ ಕಾಶ್ಮೀರದ ಕೇಸರಿಯ ವಿಶೇಷವೆಂದರೆ, ಇದರ ಬಹೂಪಯೋಗಿ ಗುಣಗಳು ಹಾಗೂ ಕಿಲೋಗೆ ರೂ. ೩ ಲಕ್ಷದಷ್ಟಿರುವ ದರ! ಕೇಸರಿಯ ಬೇಸಾಯ ಪದ್ಧತಿ, ಸಂಸ್ಕರಣೆ, ಪ್ರಯೋಜನ ಇನ್ನಿತರೆ ಮಾಹಿತಿಯು ವಿಸ್ತೃತವಾಗಿ ಮೂಡಿಬಂದಿದೆ. ಇದಲ್ಲದೇ ಜೇನು, ಕೆಹ್ವಾ ಪೇಯ, ಟ್ಯುಲಿಪ್ ಹೂವು, ರೇಷ್ಮೆ, ಮೊರೆಲ್ ಅಣಬೆ, ಪೋನಿ (ಕುಬ್ಜ ಕುದುರೆ) ಎಂಬಿತ್ಯಾದಿ ಆಸಕ್ತಿಕರ ವಿಷಯಗಳ ಕುರಿತೂ ಸೊಗಸಾದ ಬರಹಗಳಿವೆ. ಪ್ರಾಕೃತಿಕ ಸೌಂದರ್ಯದಿಂದ ತುಂಬಿ ತುಳುಕುವ ಪ್ರದೇಶದಲ್ಲಿನ ನಿವಾಸಿಗಳು, ಆ ಸಂಪತ್ತನ್ನು ಉದ್ಯಮ ಶೀಲತೆಗೆ ಮಾರ್ಪಡಿಸುವ ಬಗೆಯನ್ನು ಈ ಪುಸ್ತಕ ಸರಳವಾಗಿ ತೆರೆದಿಡುತ್ತದೆ.
ಕೃಷಿ ವಿಜ್ಞಾನಿಯಾಗಿರುವ ಕಾರಣದಿಂದಲೋ ಏನೋ, ಪ್ರತಿ ಅಧ್ಯಾಯದಲ್ಲೂ ಹಳ್ಳಿಯ ನೋಟಗಳನ್ನು ಚಿಕಿತ್ಸಕ ದೃಷ್ಟಿಯಿಂದ ನೋಡುವ ಪರಿಪಾಠ ಡಾ. ಬದರಿ ಪ್ರಸಾದ್ ಅವರ ಬರಹಗಳಲ್ಲಿ ಎದ್ದು ಕಾಣುತ್ತದೆ. ಸಾಮಾನ್ಯ ಓದುಗರಿಗೂ ರುಚಿಸುವ ನಿರೂಪಣಾ ಶೈಲಿಯು ಈ ಕೃತಿಯ ಹೆಚ್ಚುಗಾರಿಕೆ ಎನ್ನಬಹುದು. ತಾವು ಕಂಡ ನೋಟವನ್ನು ಇತರ ಪ್ರವಾಸಿ ಆಸಕ್ತರಿಗೂ ತೋರಿಸಬೇಕು ಎಂಬ ಅದಮ್ಯ ಉತ್ಸಾಹದಿಂದ ಅಲ್ಲಿನ ಹತ್ತಾರು ವಿಷಯಗಳನ್ನು ಹೆಕ್ಕಿ, ಅಕ್ಷರ ರೂಪಕ್ಕೆ ಇಳಿಸುವ ಅವರ ಅದಮ್ಯ ಉತ್ಸಾಹಕ್ಕೆ ಈ ಕೃತಿಯೇ ಸಾಕ್ಷಿಯಾಗಿದೆ.
ಕೇವಲ ಪ್ರವಾಸಿಯಾಗಿ ಕಾಶ್ಮೀರವನ್ನು ನೋಡುವ ಪರಿಯೇ ಬೇರೆ; ಅಲ್ಲಿನ ಪರಿಸರ ಹಾಗೂ ಗ್ರಾಮೀಣ ಬದುಕನ್ನು ಕಾಣುವ ಬಗೆಯೇ ಬೇರೆ. ಈ ಎರಡನೇ ವರ್ಗದ ಪ್ರವಾಸಿಗನಾಗಿ ಡಾ. ಬದರಿ ಪ್ರಸಾದ್ ಕಾಶ್ಮೀರದುದ್ದಕ್ಕೂ ಅಲೆದಾಡಿದ್ದಾರೆ. ಈ ತಿರುಗಾಟದಲ್ಲಿ ತಮಗೆ ದಕ್ಕಿದ ನೋಟಗಳನ್ನು ಸುಲಲಿತ ಬರಹಗಳಾಗಿ ಇಲ್ಲಿ ನೀಡಿದ್ದಾರೆ. ಮೇಲ್ನೋಟಕ್ಕೆ ಚೇತೋಹಾರಿ ಅನುಭವ ಕೊಡುವ ಪ್ರಬಂಧಗಳಂತೆ ಕಾಣಿಸಿದರೂ, ಆಳದಲ್ಲಿ ಅವು ಕಾಶ್ಮೀರವೆಂಬ ಪರಿಚಿತ ನಾಡಿನ ಅಪರಿಚಿತ ನೋಟಗಳನ್ನು ನಮ್ಮೆದುರು ಅನಾವರಣಗೊಳಿಸುತ್ತವೆ. ಅಷ್ಟರ ಮಟ್ಟಿಗೆ ಈ ಪುಸ್ತಕವು ಪ್ರವಾಸ ಕಥನ ಎಂಬ ಸೀಮಿತ ಚೌಕಟ್ಟಿಗೆ ಒಳಗಾಗುವ ಸಾಧ್ಯತೆಯನ್ನು ಮೀರಿ, ಅದರಾಚೆಗೂ ಲಂಘನ ಮಾಡುವಲ್ಲಿ ಸಫಲವಾಗಿದೆ.
-ಆನಂದತೀರ್ಥ ಪ್ಯಾಟಿ
ಸಾವಯವ ಕೃಷಿಕ, ಪತ್ರಕರ್ತ
ಕಾಮನೂರು, ಕೊಪ್ಪಳ ಜಿಲ್ಲೆ
ನನ್ನೊಳಗೆ
ಸೃಷ್ಟಿಯ ಸೌಂದರ್ಯವೆಲ್ಲವನ್ನೂ ತನ್ನೊಳಗೆ ಹುದುಗಿಸಿ ಇಟ್ಟುಕೊಂಡಿರುವ ಕಾಶ್ಮೀರವನ್ನು ಒಮ್ಮೆ ನೋಡಬೇಕೆಂಬ ಇಚ್ಛೆ ಇದ್ದರೂ ಕಾರ್ಯ ಬಾಹುಳ್ಯದ ಒತ್ತಡದಿಂದ ಹೋಗಲಾಗಿರಲಿಲ್ಲ. ಅಂತಾರಾಷ್ಟ್ರೀಯ ಸಮ್ಮೇಳನವೊಂದಕ್ಕೆ ಆಹ್ವಾನ ಬಂದಾಗ ಹೋಳಿಗೆ ತಾನಾಗೆ ಬಂದು ತುಪ್ಪದಲ್ಲಿ ಬಿದ್ದಂತಾಯಿತು. ನಾನು ಮತ್ತು ಗೆಳೆಯ ಡಾ. ರಾಘವೇಂದ್ರ ಎಲಿಗಾರ ಜೊತೆಗೂಡಿ ಹೊರಟಾಗ ಮಧ್ಯದಲ್ಲಿ ನಮ್ಮನ್ನು ಸೇರಿದ್ದು ಡಾ. ಶಿವಯೋಗಿ ರ್ಯಾವಳದ. ಹೀಗೆ ಮೂವರೂ ಕೂಡಿ ಕಾಶ್ಮೀರದ ಒಂದು ಭಾಗವಾದ ಶ್ರೀನಗರ ಮತ್ತು ಸುತ್ತಮುತ್ತಲ ಪ್ರವಾಸಿ ತಾಣಗಳನ್ನು ಇದ್ದಷ್ಟು ಅಲ್ಪ ಸಮಯದಲ್ಲಿ ಸುತ್ತಾಡಿದೆವು. ಪ್ರವಾಸವೆಂದು ತೆರಳಿದಾಗ ಎಲ್ಲರಿಗೂ ಅಲ್ಲಿನ ಪ್ರಕೃತಿ ಸೌಂದರ್ಯವೇ ಮನದ ತುಂಬೆಲ್ಲಾ. ಆದರೆ ಅದರಾಚೆಗೆ ಇರುವ ಅಲ್ಲಿನ ಜನಜೀವನ, ಕಷ್ಟನಷ್ಟಗಳು, ಜೀವನ ಶೈಲಿ ಇವುಗಳು ದೃಷ್ಟಿಗೆ ಬೀಳುವುದು ಅಪರೂಪ. ಆದರೆ ನನಗೆ ಈ ಪ್ರವಾಸ ಸಂದರ್ಭದಲ್ಲಿ ನನ್ನ ಕಣ್ಣಿಗೆ ಬಿದ್ದ ಹಲವು ವಿಷಯಗಳು ನನ್ನ ಮನಸ್ಸನ್ನು ಮುಟ್ಟಿದವು. ಬೇರೆ ಎಲ್ಲರೂ ಪ್ರಕೃತಿಯ ಅಗಾಧತೆಯ ಬಗ್ಗೆ ಚಿಂತಿಸುವಾಗ ನನ್ನ ಮನ ಅಲ್ಲಿನ ಕೃಷಿ, ಉತ್ಪನ್ನಗಳು, ಮೌಲ್ಯವರ್ಧನೆ, ಮಾರುಕಟ್ಟೆ ಇತ್ಯಾದಿ ವಿಷಯಗಳ ಸುತ್ತಲೇ ಗಿರಕಿ ಹೊಡೆಯುತ್ತಿತ್ತು. ಅಲ್ಲಿನ ಕೃಷಿ ಬದುಕು ಜನಜೀವನವನ್ನು ಹೊಕ್ಕಿರುವ ಪರಿ ನನ್ನಲ್ಲಿ ಬೆರಗು ಮೂಡಿಸಿತು. ಇಡೀ ರಾಜ್ಯದ ಜನರನ್ನು ಕೃಷಿ, ಮೌಲ್ಯವರ್ಧನೆ ಮತ್ತು ಪ್ರವಾಸೋದ್ಯಮ ಒಂದಕ್ಕೊಂದು ಪೂರಕವಾಗಿ ಜೀವನ ಕಟ್ಟಿಕೊಟ್ಟಿರುವ ಪರಿ ಅನನ್ಯ. ಅಲ್ಲಿಯ ಜೀವನವನ್ನು ನಾವು ಇಂಚಿಂಚೂ ಗಮನಿಸುತ್ತಾ ಹೋದಂತೆ ಅವರ ಜೀವನ ಯಾನದ ಮಜಲುಗಳು ಗತಕಾಲದಿಂದ ವರ್ತಮಾನ ಕಾಲಕ್ಕೆ ತೆರೆದುಕೊಳ್ಳುತ್ತಾ ಸಾಗುತ್ತದೆ. ಕಾಲದಿಂದ ಕಾಲಕ್ಕೆ ಆಗುತ್ತಿರುವ ಬದಲಾವಣೆಗಳು ಸ್ಪಷ್ಟವಾಗಿ ನಮ್ಮೆದುರು ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಯಾವುದೇ ಜನಜೀವನದಲ್ಲಿ ನವನಾಗರೀಕತೆಯ ಪರಿಣಾಮ, ಅದರ ಒಳಿತು ಕೆಡುಕುಗಳು ನಮ್ಮ ಗಮನಕ್ಕೆ ಬರುತ್ತಾ ಹೋಗುತ್ತದೆ. ಅದರೊಂದಿಗೆ ನಮ್ಮ ಸಂಪ್ರದಾಯಗಳು, ಆಚರಣೆಗಳು ಬದಲಾಗುತ್ತಿರುವ ರೀತಿ ಮತ್ತು ಅದರೊಂದಿಗೆ ಬದಲಾಗುತ್ತಿರುವ ಜೀವನ ಶೈಲಿ ನಮ್ಮನ್ನು ಚಕಿತರನ್ನಾಗಿಸುತ್ತದೆ ಮತ್ತು ಕೆಲವೊಮ್ಮೆ ಮನಸ್ಸಿಗೆ ನೋವನ್ನು ಉಂಟು ಮಾಡುತ್ತವೆ. ನಮ್ಮ ಮನಸ್ಸಿನ ಭಿತ್ತಿಯಲ್ಲಿ ಬಿತ್ತಿರುವ ಅಂದಿನ ಕಾಶ್ಮೀರಕ್ಕೂ ನಾವು ಕಾಣುವ ಇಂದಿನ ಕಾಶ್ಮೀರಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಪ್ರಪಂಚದ ಎಲ್ಲೆಡೆ ಆಗುತ್ತಿರುವ ಹವಾಮಾನ ಬದಲಾವಣೆಯ ಪರಿಣಾಮ ನಮಗೆ ಇಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತದೆ. ಆರು ದಿನಗಳ ನನ್ನ ಸುತ್ತಾಟದಲ್ಲಿ ಕಣ್ಣಿಗೆ ಬಿದ್ದ ಹಲವಾರು ವಿಷಯಗಳನ್ನು ನನ್ನದೇ ಚಿಂತನೆಯಲ್ಲಿ ಅರಿಯುವ, ಅದನ್ನು ವಿಸ್ತರಿಸುವ ಮತ್ತು ಅದನ್ನು ತಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನ ಮಾಡಿರುವೆ. ಇಲ್ಲಿನ ಪ್ರತಿಯೊಂದು ಸಂಗತಿಗಳು ನಾನು ಸ್ಥಳೀಯರಿಂದ ಕೇಳಿ ತಿಳಿದದ್ದು ಮತ್ತು ಅಂತರ್ಜಾಲದಲ್ಲಿ ಹುಡುಕಿ ಹೆಕ್ಕಿದ್ದು. ಹುಡುಕಿದಷ್ಟು ಆಳಕ್ಕಿರುವ ಸಿಹಿ ನೀರ ಸಾಗರ ಕಾಶ್ಮೀರ. ಇದರ ಆಳ, ಅಗಲ ಮತ್ತು ವಿಸ್ತಾರವನ್ನು ಅರಿಯಲಾಗದೇ ಸೋತಿರುವೆ. ಯಾವುದೇ ಒಂದು ಸಂಸ್ಕೃತಿ ಅಲ್ಲಿನ ಜನಜೀವನದಲ್ಲಿ ಹಾಸು ಹೊಕ್ಕಾಗಿರುತ್ತದೆ. ಅಲ್ಲಿನ ಆಚಾರ, ವಿಚಾರ, ಸಂಪ್ರದಾಯ ಮತ್ತು ನಂಬಿಕೆಗಳು ಕಾಲ ಹೊರಳಿದಂತೆ ಬದಲಾಗುತ್ತಾ ಇರುತ್ತವೆ. ಕೆಲವೊಂದು ಸಲ ನಾವು ಬದಲಾವಣೆಗಳನ್ನು ಮೂಕ ಪ್ರೇಕ್ಷಕರ ಹಾಗೆ ಗಮನಿಸುತ್ತಾ ಇರುತ್ತೇವೆ. ಕೆಲವೊಂದು ಬದಲಾವಣೆಗಳು ಪ್ರಸಕ್ತ ಸನ್ನಿವೇಶಕ್ಕೆ ಅನಿವಾರ್ಯ ಎನಿಸಿದರೂ ಮನದಲ್ಲಿ ಏನೋ ಕಳೆದುಕೊಂಡ ಭಾವ ಮಡುಗಟ್ಟಿರುತ್ತದೆ. ಪ್ರಸ್ತುತ ಕಾಶ್ಮೀರಿಗರ ಮನದಲ್ಲೂ ಅಂತಹ ಒಂದು ಎಳೆ ಗೋಚರಿಸಿತು. ನನಗೆ ಸಿಕ್ಕಷ್ಟು ಮತ್ತು ನನ್ನ ಅಲ್ಪ ಮತಿಗೆ ಅರಿವಾದಷ್ಟು ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸಿ ಈ ಕೃತಿ ಬರೆದಿದ್ದೇನೆ. ನಾನು ಕಂಡ ಕೆಲವು ಮಾಹಿತಿಗಳನ್ನು ನಮ್ಮ ಮಣ್ಣಿನೊಂದಿಗೆ ಮಾತುಕತೆ ಕಾರ್ಯಕ್ರಮದಲ್ಲಿ ರೈತರೊಂದಿಗೆ ಹಂಚಿಕೊಂಡಾಗ ಇದನ್ನು ಪುಸ್ತಕ ರೂಪದಲ್ಲಿ ತನ್ನಿ ಎಂದು ಕನಸು ಬಿತ್ತಿದವರು ಕೃಷಿಕ ಮಿತ್ರ, ಲೇಖಕ ಹಾಗು ಪತ್ರಕರ್ತ ಶ್ರೀ ಆನಂದತೀರ್ಥ ಪ್ಯಾಟಿ. ಪುಸ್ತಕದ ಕರಡನ್ನು ಓದಿ ಅಗತ್ಯವಾದ ಪೂರಕ ಬದಲಾವಣೆಗಳನ್ನು ತಿಳಿಸಿ ಮಾರ್ಗದರ್ಶನ ಮಾಡಿದ್ದು ಅವರೇ. ಹಾಗಾಗಿ ಮುನ್ನುಡಿ ಅವರಿಂದಲೇ ಬರೆಸಬೇಕೆಂಬ ನನ್ನ ಆಸೆಯನ್ನು ಮನ್ನಿಸಿ ಸೂಕ್ತ ಮುನ್ನುಡಿ ಬರೆದುಕೊಟ್ಟ ಪ್ಯಾಟಿ ಅವರಿಗೆ ನನ್ನ ಅನಂತ ನಮನಗಳು. ನಮ್ಮ ನೆರೆಯ ವಿಜಯನಗರ ಜಿಲ್ಲೆಯಲ್ಲಿ ಹಸಿರಿನೊಂದಿಗೆ ಮಾತುಕತೆ ಕಾರ್ಯಕ್ರಮ ರೂಪಿಸಿ ನಿರ್ವಹಿಸುತ್ತಿರುವ ಮತ್ತೊಬ್ಬ ಆತ್ಮೀಯ ಸ್ನೇಹಿತರು ಮತ್ತು ಲೇಖಕರಾದ ಶ್ರೀ ಮಲ್ಲಿಕಾರ್ಜುನ ಹೊಸಪಾಳ್ಯ ನನ್ನ ಅನುಭವವನ್ನು ಮತ್ತೊಮ್ಮೆ ಅವರ ಕಾರ್ಯಕ್ರಮ ದಲ್ಲಿ ರೈತರೊಂದಿಗೆ ಹಂಚಿಕೊಳ್ಳಲು ಅವಕಾಶ ಮಾಡಿಕೊಟ್ಟು ಕಾಶ್ಮೀರದ ಕೃಷಿ ಮೌಲ್ಯವರ್ಧನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದವರು. ಅವರಿಂದ ಬೆನ್ನುಡಿ ಬರೆಸಿದರೆ ನನ್ನ ಬರಹಕ್ಕೊಂದು ಸೂಕ್ತ ಬೆಲೆ ಎಂಬ ಕಾರಣಕ್ಕೆ ಅವರನ್ನು ಕೇಳಿದಾಗ ಅತ್ಯಂತ ಆತ್ಮೀಯತೆಯಿಂದ ಬೆನ್ನುಡಿ ಬರೆದುಕೊಟ್ಟಿದ್ದಾರೆ. ಅವರಿಗೂ ನಾನು ಸದಾ ಆಭಾರಿ. ಇನ್ನುಳಿದಂತೆ ನನ್ನನ್ನೂ ಯಾವತ್ತೂ ಪ್ರೋತ್ಸಾಹಿಸಿ ಬೆನ್ನು ತಟ್ಟುತ್ತಿರುವ ನನ್ನ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳಾದ ಡಾ. ಎಂ. ಹನುಮಂತಪ್ಪನವರು ಹಾಗೂ ಎಲ್ಲಾ ಹಿರಿಯ ಅಧಿಕಾರಿಗಳಿಗೆ ಮತ್ತು ನನ್ನೆಲ್ಲಾ ಹಿರಿಯ ಮತ್ತು ಕಿರಿಯ ಸಹೋದ್ಯೋಗಿಗಳಿಗೆ, ನನ್ನೊಡನಿದ್ದು ನನ್ನ ಕಷ್ಟಸುಖಗಳಲ್ಲಿ ಭಾಗಿಯಾಗಿ ಸದಾ ಪ್ರೋತ್ಸಾಹಿಸುತ್ತಿರುವ ಸಹಸಂಶೋಧಕರಾದ ಡಾ. ಗಂಗಪ್ಪ, ಹಿರಿಯ ಸಂಶೋಧನಾ ಸಹಾಯಕರಾದ ಕು. ಸುಹಾಸಿನಿ, ಕು. ಮಂಜುಳ, ಶ್ರೀಮತಿ ವೀಣಾ ಕಂಬಳಿ ಮತ್ತು ಸಹಾಯಕರಾದ ಶ್ರೀಮತಿ ವನಿತಾ ಹಾಗೂ ನಲ್ಮೆಯ ವಿದ್ಯಾರ್ಥಿಗಳಿಗೆ ನಾನು ಸದಾ ಋಣಿ.
ಒಂದಕ್ಷರಂ ಕಲಿಸಿದಾತನಂ ಗುರುಃ ಎಂಬ ಮಾತಿನಂತೆ ನನಗೆ ವಿದ್ಯಾದಾರೆ ಎರೆದು ಸಮಾಜದಲ್ಲಿ ನನಗೊಂದು ಸ್ಥಾನವನ್ನು ಕಲ್ಪಿಸಿಕೊಟ್ಟ ನನ್ನೆಲ್ಲಾ ಗುರುವೃಂದಕ್ಕೆ ಮತ್ತು ದೇಶದ ಸಕಲ ಅನ್ನದಾತರಿಗೆ ನನ್ನ ಗೌರವಪೂರ್ವಕ ನಮನಗಳು.
ಸದಾ ನನ್ನ ಯಶಸ್ಸನ್ನೇ ಬಯಸುತ್ತಾ ನನ್ನ ಕಷ್ಟಸುಖಗಳಲ್ಲಿ ಯಾವಾಗಲೂ ಜೊತೆಯಾಗಿರುವ ನನ್ನ ಮಾತಾಪಿತೃಗಳು, ಪತ್ನಿ ಮತ್ತು ಮಕ್ಕಳು, ಮತ್ತು ಸಕಲ ಬಂಧು-ಬಾಂಧವರಿಗೆ ನನ್ನ ಹೃತ್ಪೂರ್ವಕ ನಮನಗಳು.
ಅಂತಿಮವಾಗಿ ನನ್ನ ಪುಸ್ತಕವನ್ನು ತಮ್ಮ ಯಾಜಿ ಪ್ರಕಾಶನದ ಮೂಲಕ ನಿಮ್ಮ ಕೈಗಿಟ್ಟಿರುವ ಹೊಸಪೇಟೆಯ ಶ್ರೀ ಗಣೇಶ ಯಾಜಿ ಮತ್ತು ಶ್ರೀಮತಿ ಸವಿತಾ ಯಾಜಿ ಅವರಿಗೆ ಅನಂತ ನಮಸ್ಕಾರಗಳು.
–ಡಾ. ಬದರಿ ಪ್ರಸಾದ್ ಪಿ.ಆರ್.
ಪುಟ ತೆರೆದಂತೆ
ಸವಿನುಡಿ / ೩
ಕೃಷಿಕನ ಕಾಶ್ಮೀರ / ೫
ನನ್ನೊಳಗೆ / ೮
೧ ಕಾಶ್ಮೀರ ಎಂಬ ಭಾರತದ ಸ್ವಿಟ್ಜರ್ಲ್ಯಾಂಡ್ / ೧೩
೨ ಕಾಶ್ಮೀರಿಗರು ನಾ ಕಂಡಂತೆ / ೧೮
೩ ನಾ ಕಂಡ ಕೃಷಿ ಬದುಕು / ೨೧
೪ ಉದ್ಯಮಶೀಲತೆ / ೨೭
೫ ಸಮರಸವೇ ಜೀವನ / ೩೦
೬ ನೀರೆಂಬ ಜೀವಜಲ / ೩೩
೭ ಫಶ್ಮಿನಾ ಶಾಲು / ೩೬
೮ ಕಾಶ್ಮೀರದ ಪ್ರಸಿದ್ದ ಪೇಯ: ಕೆಹ್ವಾ / ೩೯
೯ ಕಾಶ್ಮೀರ ಬ್ಯಾಟು / ೪೨
೧೦ ಕಾಶ್ಮೀರಿ ಜೇನು / ೪೫
೧೧ ಕಾಶ್ಮೀರಿ ಕೇಸರಿ / ೪೮
೧೨ ಟ್ಯುಲಿಪ್ ಗಾರ್ಡನ್ ಎಂಬ ಪುಷ್ಪ ಸುಂದರಿ / ೫೨
೧೩ ಏಷ್ಯಾದ ಎರಡನೇ ದೊಡ್ಡ ಹಣ್ಣಿನ ಮಂಡಿ: ಸೊಪ್ಪೋರ್ / ೫೫
೧೪ ಕಾಶ್ಮೀರದ ಕುಬ್ಜ ಕುದುರೆಗಳು (ಪೋನಿ) / ೫೭
೧೫ ಕಾಶ್ಮೀರಿ ಕಾಂಗ್ರಿ, ಬುಕಾರಿ ಮತ್ತು ವಾಗುವ್ / ೬೦
೧೬ ಗಾಳದ ಮೀನು / ೬೩
೧೭ ಚಿಲ್ಲಾ-ಇ-ಕಲನ್ / ೬೬
೧೮ ಹೊಕ್ ಸ್ಯೂನ್ / ೬೯
೧೯ ಕಾಡು ತರಕಾರಿಗಳ ರಾಜ: ಮೊರೆಲ್ ಅಣಬೆಗಳು / ೭೪
೨೦ ದಾಲ್ ಸರೋವರ / ೭೭
೨೧ ತೇಲುವ ತೋಟಗಳು ಮತ್ತು ಮಾರುಕಟ್ಟೆಗಳು / ೮೨
೨೨ ನಾದ್ರು: ಕಮಲದ ಕಾಂಡ / ೮೬
೨೩ ಪೋಲ್ / ೮೯
೨೪ ಕಾಶ್ಮೀರದ ಲಡಖಿ / ೯೨
೨೫ ಕಾಶ್ಮೀರದ ತರಕಾರಿಗಳ ರಾಜ ಸಾಗ್ ಅಥವ ಹಾಕ್ / ೯೩
೨೬ ಕರಕುಶಲ ಮತ್ತು ಜಾನಪದ ಕಲೆಗಳ ತವರು: ಶ್ರೀನಗರ / ೯೪
೨೭ ಕಾಶ್ಮೀರದ ಸುಪ್ರಸಿದ್ಧ ಪೇಪರ್ ಕಲೆ: ಮ್ಯಾಚೆ / ೯೭
೨೮ ಕಾಶ್ಮೀರದ ಒಣಹಣ್ಣುಗಳು / ೯೯
೨೯ ಕಾಶ್ಮೀರಿ ರೇಷ್ಮೆ / ೧೦೧
೩೦ ಚಾಂಗ್: ಕಾಶ್ಮೀರದ ಬಿಯರ್ / ೧೦೩
೩೧ ಶ್ರೀನಗರದ ಸುತ್ತ ಮುತ್ತ / ೧೦೪
೩೨ ಅಮರನಾಥ ಯಾತ್ರಾ / ೧೧೩
೩೩ ಚಲೋ ಕಾಶ್ಮೀರ / ೧೧೬
೩೪ ಮುಕ್ತಾಯಕ್ಕೂ ಮುನ್ನ / ೧೨೧
ಆಕರ ಗ್ರಂಥಗಳು / ೧೨೪
Reviews
There are no reviews yet.