ಮುನ್ನುಡಿ
– ಬಿ.ಆರ್.ಲಕ್ಷ್ಮಣರಾವ್
ನನ್ನ ನಿಡುಗಾಲದ ಗೆಳೆಯರಾದ ಡಾ. ಮೋಹನ ಕುಂಟಾರ್ ಅವರು ತೀರಾ ತಡವಾಗಿ ಮತ್ತು ಅನಗತ್ಯ ಸಂಕೋಚದಿಂದ ತಮ್ಮ ಚೊಚ್ಚಲ ಕವನ ಸಂಕಲನ ‘ಲೋಕಾಂತದ ಕಾವು’ ಹೊರತರುತ್ತಿದ್ದಾರೆ. ನನ್ನಿಂದ ಮುನ್ನುಡಿಯ ನಾಲ್ಕು ಮಾತು ಬಯಸಿದ್ದಾರೆ. ಸಂತೋಷ.
ಕವಿತೆ ಎಂದರೇನು?
ಈ ಪ್ರಶ್ನೆಗೆ ನಿಖರವಾದ ಉತ್ತರ ಕೊಡಲು ಈವರೆಗೆ ಯಾರಿಗೂ ಸಾಧ್ಯವಾಗಿಲ್ಲ. ಆದ್ದರಿಂದಲೇ ಕವಿತೆ ಇಂದಿಗೂ ಒಂದು ವಿಸ್ಮಯವಾಗಿಯೇ ತನ್ನ ಆಕರ್ಷಣೆಯನ್ನು ಉಳಿಸಿಕೊಂಡಿದೆ.
ಕುಂಟಾರ್ ಅವರೂ ಸಹ ತಮ್ಮ ಈ ಸಂಕಲನದ ಮೊದಲ ಕವಿತೆಯಲ್ಲೇ ಈ ಪ್ರಶ್ನೆಗೆ ಮುಖಾಮುಖಿಯಾಗಿದ್ದಾರೆ:
ಕವಿಗೋ ಬರೆದುದೆಲ್ಲವೂ
ಕವಿತೆಯಾಗಬೇಕೆಂಬ ಕಾತರ
ಕವಿತೆಗೋ ಭಾವಬಂಧದಲಿ
ಲಯಗೊಳ್ಳುವ ತವಕ
ಸಿಕ್ಕು ಸಿಗ್ಗುಗಳ ನಡುವಿನಿಂದ
ಮುದಗೊಳ್ಳಲು ಹವಣಿಸುವ ಕವಿ!
ಜಟಿಲತೆಯ ತೊಡಕಿನಲಿ
ಅರ್ಥವನ್ನು ಹೊರ ಸೂಸದೆ
ಮುದುಡಿಕೊಳ್ಳುವ ಕವಿತೆ!
ಕವಿತೆ ಕವಿಯಲ್ಲೋ
ಕವಿ ಕವಿತೆಯಲ್ಲೋ
ಕವಿ-ಕವಿತೆಗಳೆರಡೂ ಭಾವಬಂಧಗಳಲ್ಲೋ? -(‘ಕವಿ-ಕವಿತೆ’)
ಆದ್ದರಿಂದಲೇ ಕುವೆಂಪು ಕವಿತೆಯನ್ನು ಬುದ್ಧಿ ಭಾವಗಳ ವಿದ್ಯುದಾಲಿಂಗನ’ ಎಂದಿದ್ದಾರೆ. ಕೇವಲ ಕವಿಯ ಬುದ್ಧಿ ಭಾವಗಳ ಆಲಿಂಗನದಿಂದ ಕವಿತೆ ಹುಟ್ಟುವುದಿಲ್ಲ. ಅದು ‘ವಿದ್ಯುತ್’ ಆಲಿಂಗನವಾಗಬೇಕು. ಆ ವಿದ್ಯುತ್ತೇ ಕವಿತೆಯ ಜೀವ, ಜೀವಂತಿಕೆ. ಅದಿಲ್ಲದಿದ್ದರೆ ಅದು ಜಡಕಾವ್ಯ, ಕಟ್ಟು-ಕವಿತೆ, ಹುಟ್ಟು-ಕವಿತೆಯಲ್ಲ. ಇದು ಪಟ್ಟು ಹಿಡಿದು ಕೂತು ಸಾಧಿಸುವಂಥದಲ್ಲ. ‘ಅ ಪೊಯೆಮ್ ಕೆನ್ನಾಟ್ ಬಿ ಮೇಡ್, ಇಟ್ ಹ್ಯಾಪನ್ಸ್’ ಎಂಬಂತೆ ಅದು ಸಂಭವಿಸುತ್ತದೆ. ಅದೊಂದು ದಿವ್ಯ ಅನೂಹ್ಯ ಘಳಿಗೆ! ಸ್ವತಃ ಕವಿಗೂ ತಿಳಿಯದ ಮಾಯೆ! ಆದ್ದರಿಂದಲೇ ಕವಿತೆ ಒಂದು ನಿಗೂಢ ಆಕಸ್ಮಿಕ; ಒಂದು ವಿಸ್ಮಯ.
ಒಂದು ಘನವಾದ ಕವಿತೆ ಸಂಭವಿಸ ಬೇಕಾದರೆ, ಗಾಢವಾದ ಅಧ್ಯಯನದ ಮೂಲಕ ಕಾವ್ಯದ ಪರಂಪರೆಯ ಅರಿವನ್ನು ಹಾಗೂ ಕಾವ್ಯಕೌಶಲದ ಅಸಲಿ ಕಸುಬನ್ನು ಕವಿ ತನ್ನದಾಗಿಸಿಕೊಂಡು ಕಾಯಬೇಕಾಗುತ್ತದೆ. ಏಕೆಂದರೆ ‘ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು ಪುರುಷೋತ್ತಮನ ಆ ಅಂಥ ರೂಪರೇಖೆ?’ ಎಂದು ಗೋಪಾಲಕೃಷ್ಣ ಅಡಿಗರು ಹೇಳಿದಂತೆ, ಒಳ್ಳೆಯ ಕವಿತೆಯ ಆವಿರ್ಭಾವಕ್ಕಾಗಿ ಸಾವಧಾನ ಚಿತ್ತದಿಂದ ಕಾಯುವುದು ಕವಿಗೆ ಅನಿವಾರ್ಯ. ಹೀಗೆ ಕಾದು ಪಡೆದ ಕವಿತೆಯೂ ಸಹ, ಬಿ.ಸಿ.ರಾಮಚಂದ್ರಶರ್ಮರು ಹೇಳಿದಂತೆ:
ಪ್ರತಿಯೊಂದು ಕವನವೂ ಭರವಸೆಯ ವ್ಯವಸಾಯ
ಅಜ್ಞಾತದ ತಳಕ್ಕಿಳಿದು ಬಂದವನ ಭಾಗ್ಯ
ಇಂಥ ಶ್ರದ್ಧೆ ಮತ್ತು ಧ್ಯಾನ ಇದ್ದಾಗಲಷ್ಟೇ ಒಂದು ಶ್ರೇಷ್ಠ ಕವಿತೆಯ ಹುಟ್ಟು ಸಾಧ್ಯವಾದೀತು. ಇದು ಖಂಡಿತವಾಗಿಯೂ ಸುಲಭದ ಕೆಲಸವಲ್ಲ.
ಕುಂಟಾರ್ ಅವರು ಸ್ವತಃ ಕನ್ನಡ ಸಾಹಿತ್ಯದ ಅಧ್ಯಯನ ಮತ್ತು ಅಧ್ಯಾಪನದಲ್ಲಿ ಸುದೀರ್ಘ ಕಾಲದಿಂದ ತೊಡಗಿರುವವರಾದ್ದರಿಂದ ಇವೆಲ್ಲವೂ ಅವರಿಗೆ ತಿಳಿದ ವಿಷಯವೇ. ಆದ್ದರಿಂದಲೇ ಅವರ ಪ್ರತಿಯೊಂದು ಕವನ ಸಹ ಒಂದು ಭರವಸೆಯ ವ್ಯವಸಾಯವೇ.
*
‘ಲೋಕಾಂತದ ಕಾವು’ ಸಂಕಲನದ ಕವಿತೆಗಳನ್ನು ಓದಿದಾಗ ನನಗನ್ನಿಸಿದ್ದು: ಕುಂಟಾರ್ ಅವರ ಮೇಲೆ ಕನ್ನಡ ‘ನವ್ಯ’ ಕಾವ್ಯದ ಪ್ರಭಾವವಿದೆಯಾದರೂ ಅವರ ಒಲವು ಹೆಚ್ಚಾಗಿ ‘ನವೋದಯ’ದ ಆಶಯಗಳು ಮತ್ತು ಶೈಲಿಯ ಕಡೆಗೇ ಇದೆ. ಛಂದೋಬದ್ಧವಾಗಿ ಭಾವಗೀತೆಯ ರೀತಿಯಲ್ಲಿ ಅವರು ಬರೆದಿರುವ ಕವಿತೆಗಳು ಹೆಚ್ಚು ಆಕರ್ಷಕವಾಗಿವೆ. ಉದಾಹರಣೆಗೆ ಈ ಕೆಲವು ಕವಿತೆಗಳ ಸಾಲುಗಳನ್ನು ನೋಡಬಹುದು:
ಆಟದಲ್ಲಿ ಕೂಟದಲ್ಲಿ
ಬೇಟದಲ್ಲಿ ನೋಟದಲ್ಲಿ
ಹೊಸೆದ ಭಾವದಾಟದಲ್ಲಿ ಮೆರೆಯುತಿತ್ತು ಕವಿತೆ;
ಲೋಕಾಂತದ ಕಾವಿನಲ್ಲಿ
ಏಕಾಂತದ ಧ್ಯಾನದಲ್ಲಿ
ಭಾವ ಭಾರದೊಜ್ಜೆಯಲ್ಲಿ ತಿಣುಕುತಿತ್ತು ಕವಿತೆ
(‘ಕವಿತೆಯ ಹುಟ್ಟು’)
ಇಲ್ಲಿನ ಮೂರು ಮಾತ್ರಾಗಣಗಳ ಆಟದಲ್ಲಿ ಕೂಟದಲ್ಲಿ ಬೇಟದಲ್ಲಿ ನೋಟದಲ್ಲಿ ಉತ್ಸಾಹದ ಲಯವನ್ನು ಕವಿ ಬದಲಾಗುವ ಭಾವನೆಗಳಿಗೆ ಹೇಗೆ ಬಾಗಿ ಬಳುಕಿಸಿದ್ದಾರೆ ಎಂಬುದನ್ನು ಗಮನಿಸಬಹುದು. ಮೊದಲ ಮೂರು ಸಾಲುಗಳಲ್ಲಿನ ಉತ್ಸಾಹ ಲಯ ನಂತರದ ಏಕಾಂತದ ಧ್ಯಾನದಲ್ಲಿ ಎಂಬಲ್ಲಿನ ಸಾವಧಾನದ ನಡೆ ಕೊನೆಗೆ ಭಾವ ಭಾರದೊಜ್ಜೆ ಯಲ್ಲಿ ಎಂಬಲ್ಲಿನ ಭಾವಾಭಿನಯವನ್ನು ಗಮನಿಸಿ.
ಬೆಳ್ಳನೆ ಬೆಳಗಿ ಬೆಳಕಾಗಿತ್ತು
ಬೆಳಕದು ಹನಿಯಲಿ ಪುಟಿಯುತಲಿತ್ತು
ಸಿರಿಹನಿ ಮಂಜು ಎಲೆಗಳ ಮೇಲೆ
ಹರಿಯಿತು ಬೆಳಗು ನೀರಾಗಿ.
(‘ಕವಿಶೈಲದಲ್ಲಿ ಬೆಳಗು’)
ಈ ಕವಿತೆಯ ಸಾಲುಗಳಲ್ಲಿ ನಾಲ್ಕು ಮಾತ್ರೆಗಳ ನಡೆಯ ಏಕತಾನತೆಯನ್ನು ಕವಿ ಅಲ್ಲಲ್ಲಿ ಸಹಜವಾಗಿ ತಂದಿರುವ ಮೂರು ಮಾತ್ರೆಗಳ ಬೆಳಗಿ-ಮಂಜು-ಬೆಳಗು ನಿಲುಗಡೆ ಗಳನ್ನು ಗಮನಿಸಿ.
ನನ್ನ ತೋಟದ ತುಂಬ
ಹಸಿರು ಹಾಸಿನ ನಡುವೆ
ಮೂಡಿರುವ ಕನಸುಗಳೆ
ಮೊಗ್ಗಾಗಿ ಮುದುಡದಿರಿ
ಹಿಗ್ಗಿನಲಿ ಅರಳಿಬಿಡಿ
ಹೂನಗೆಯ ಬೀರಿ.
(‘ಎದೆಯ ಹಾಡು’)
ಐದು ಮಾತ್ರಾಗಣಗಳ ಇಲ್ಲಿನ ನಡೆಯ ಸ್ವಭಾವೋಕ್ತಿಯ ಚೆಲುವು ಗಮನಾರ್ಹವಾದುದು.
ಸುರು ಸುರು
ಸುರು ಸುರು
ಸುತ್ತುತ ಸುಳಿಯಿತು
ಬೆಟ್ಟವ ಸುತ್ತಿ
ಸುಳಿಯುತಲಿತ್ತು
ಬಿಕ್ಕುತ ಸೊಕ್ಕುತ
ಬೆಟ್ಟದ ನೆತ್ತಿಯ
ಬಿಗಿಯುತಲಿತ್ತು
ಸುಂಟರಗಾಳಿಯು ಸುಳಿಸುತ್ತೀ..
(‘ಸುಂಟರಗಾಳಿ’)
ತೆಂಕಣಗಾಳಿಯಾಟವನ್ನು ನೆನಪಿಸುವ ಈ ಕವಿತೆಯಲ್ಲಿ ಕವಿಗೆ ತನ್ನ ಭಾಷೆಯ ಭಾವಾಭಿನಯದ ಮೇಲಿನ ಹಿಡಿತವನ್ನು ಕಾಣಬಹುದು.
ಅಡುಗೆಯ ರುಚಿಯು ಹಲವುಂಟು
ಹೊಡೆಯುವ ಗಮಲು ನೂರೆಂಟು
ಹಸಿವಿನ ಬಗೆಯು ಒಂದೆಂದು
ಸಾರುತ ಸಾಗೋಣ ಎಂದೆಂದು
(‘ಐಕ್ಯಗೀತೆ’)
ತೈಲ ಬತ್ತಿಗಳ ಮಿಲನದ ಕುರುಹನು
ತೋರಿತು ದೀಪವು ಬೆಳಕಿನಲಿ
ನೀರೊಳಗಿಳಿದ ಬೇರಿನ ತುದಿಯಲಿ
ಕಿಡಿಯದು ಚಿಗುರಿತು ಬೆಳಕಿನೊಲು
ಬದುಕಿನ ಬವಣೆಯು ನೀಡಿದ ಫಲವದು
ದೀಪದ ರೂಪದಲಿ
(‘ದೀಪ’)
ಇಂತಹ ಕವಿತೆಗಳು ಕವಿ ಸೊಗಸಾದ ಅರ್ಥವತ್ತಾದ ಭಾವಗೀತೆಗಳನ್ನು ಬರೆಯಲು ಸಮರ್ಥರು ಎಂಬುವುದಕ್ಕೆ ನಿದರ್ಶನಗಳಾಗಬಲ್ಲವು.
ಲಯಬದ್ಧವಾದ ಮೇಲಿನ ಈ ಗೀತೆಗಳಲ್ಲಿನ ‘ನಡೆ’ಗಳಲ್ಲಿರುವ ವೈವಿಧ್ಯತೆಯನ್ನು ಗಮನಿಸಿದಾಗ, ಕಾವ್ಯದ ಕಸುಬುಗಾರಿಕೆಯಲ್ಲಿ ಈ ಕವಿ ಗಳಿಸಿರುವ ಪ್ರಭುತ್ವದ ಬಗ್ಗೆ ಮೆಚ್ಚುಗೆ ಮೂಡುತ್ತದೆ. ‘ಮಹಾಬಲಿಯ ಕೇರಳ ದರ್ಶನ’ ಎಂಬ ಕವಿತೆಯೂ ಸಹ ವಸ್ತು ಮತ್ತು ಶಿಲ್ಪದ ದೃಷ್ಟಿಯಿಂದ ಈ ಬಗೆಯ ಇನ್ನೊಂದು ಗಮನಾರ್ಹ ರಚನೆಯಾಗಿದೆ.
‘ನವ್ಯ’ ಶೈಲಿಯ ಇಲ್ಲಿನ ಅವರ ಕೆಲವು ಕವಿತೆಗಳೂ ಸಹ ಗಮನಾರ್ಹವಾಗಿವೆ. ‘ಪ್ರೀ ಓನ್ಡ್ ಕಾರುಗಳು’, ‘ಗಡಿಯಾರದಲ್ಲಿ’, ‘ಕೇರಳ’, ‘ನೆರಳು’, ‘ತೋರಿಕೆ’ ಮುಂತಾದ ಕವನಗಳನ್ನು ಈ ಮಾದರಿಗೆ ಉದಾಹರಿಸಬಹುದು.
‘ಪ್ರೀ ಓನ್ಡ್ ಕಾರುಗಳು’ ಎಂಬ ಕವಿತೆ ‘ಬಳಸಿ ಎಸೆ’ ಎಂಬ ಇಂದಿನ ನಾಗರಿಕ ಭಾವ ಹೀನ ಮನಸ್ಥಿತಿಯ ಬಗ್ಗೆ ಬೆಳಕು ಚೆಲ್ಲುತ್ತದೆ. ಇಲ್ಲಿ ಕಾರುಗಳು ಕೇವಲ ಯಂತ್ರಗಳಾಗಿಯಷ್ಟೇ ಉಳಿಯದೆ ಭಾವಾರೋಪಣಗೊಂಡು ಶೋಷಿತ ಹೆಣ್ಣಿನ ದುಸ್ಥಿತಿಯನ್ನೂ ಧ್ವನಿಸುತ್ತವೆ. ಹಾಗಾಗಿ ಕವಿತೆಯ ಕೊನೆಯ ಈ ಸಾಲುಗಳು ಅರ್ಥವಂತಿಕೆ ಪಡೆದುಕೊಳ್ಳುತ್ತವೆ:
ಅಗಲಿದ ನೋವು, ಅಗಲಿಕೆಯ ಕಾವು
ಬಟ್ಟಬಯಲಲ್ಲಿ ಮಾನ ಹರಾಜಿಗಿಟ್ಟ
ಗಂಡನ ನೆನೆದು
ಭಾವಭಾರದಿಂದ ಹೆಪ್ಪುಗಟ್ಟಿದೆ
ಪರಿತ್ಯಕ್ತೆಯರ ಕಣ್ಣೀರು!
‘ಗಡಿಯಾರದಲ್ಲಿ’ ಎಂಬ ಕವಿತೆ ಒಂದು ವಿನೂತನ ಕಲ್ಪನೆಯನ್ನು ಒಳಗೊಂಡಿದೆ. ಕ್ಷಣ, ನಿಮಿಷ ಮತ್ತು ಗಂಟೆಗಳನ್ನು ಸೂಚಿಸುವ ಮೂರು ಮುಳ್ಳುಗಳು ಮಾನವ ಸಮಾಜದ ಮೂರು ಸ್ತರದ ವ್ಯಕ್ತಿಗಳಿಗೆ ಇಲ್ಲಿ ಸಂಕೇತಗಳಾಗಿವೆ. ಕ್ಷಣದ ಮುಳ್ಳನ್ನು ಬಿಡುವಿಲ್ಲದೆ ದುಡಿಯುವ ಕಾರ್ಮಿಕನಿಗೆ, ನಿಮಿಷದ ಮುಳ್ಳನ್ನು ದಗಾಕೋರ ವ್ಯಾಪಾರಿಗೆ ಮತ್ತು ಗಂಟೆಯ ಮುಳ್ಳನ್ನು ದರ್ಪದ ರಾಜಕಾರಣಿಗೆ ಹೋಲಿಸಿರುವುದು ಅರ್ಥವತ್ತಾಗಿದೆ.
‘ಕೇರಳ’ ಎಂಬ ಕವಿತೆ, ಹೊರನೋಟಕ್ಕೆ ಸಾಕ್ಷರತೆ ಮತ್ತು ಸಾಮಾಜಿಕ ನ್ಯಾಯಕ್ಕೆ ಜಗತ್ತಿಗೇ ಮಾದರಿ ಎಂಬಂತೆ ತೋರುವ ಕೇರಳದ ದಾಖಲಾಗದೆ ಉಳಿದ ಬಡತನ, ಅನೀತಿ, ಅತ್ಯಾಚಾರ, ಕೊಲೆ, ಸುಲಿಗೆಗಳ ಗುಪ್ತ ಅಂತರಂಗವನ್ನು ಬೆತ್ತಲಾಗಿಸಲು ಹವಣಿಸುತ್ತದೆ.
‘ನೆರಳು’ ಮತ್ತು ‘ತೋರಿಕೆ’ ಎಂಬ ಕವಿತೆಗಳೂ ಸಹ ತಮ್ಮ ಹೊಸ ಕಾಣ್ಕೆಗಳಿಂದ ಗಮನ ಸೆಳೆಯುತ್ತವೆ. ಆದರೆ ಕವನಗಳ ಆಶಯಗಳಷ್ಟೇ ಅವುಗಳ ಆಕೃತಿ ಮತ್ತು ಕಾವ್ಯಶಿಲ್ಪದ ಕಡೆಗೂ ಕುಂಟಾರ್ ಅವರು ಹೆಚ್ಚಿನ ಗಮನ ಕೊಟ್ಟಿದ್ದರೆ ಮೇಲೆ ಉದಾಹರಿಸಿದ ಕವಿತೆಗಳನ್ನು ಇನ್ನಷ್ಟು ಚಂದಗಾಣಿಸಬಹುದಿತ್ತು ಅನ್ನಿಸುತ್ತದೆ.
ಸಂಕಲನದಲ್ಲಿ ನಿಜಕ್ಕೂ ಗಮನಾರ್ಹ ರಚನೆಗಳೆಂದರೆ ಕೊನೆಯಲ್ಲಿರುವ ಎರಡು ಕಥನ ಕವನಗಳು -‘ಚೆಲುವ ಚಂದ್ರಾಮ’ ಮತ್ತು ‘ಪರೆಯರ ಕುವರಿ’. ಎರಡೂ ಸಹ ದುರಂತ ಕಥೆಗಳೇ. ‘ಚೆಲುವ ಚಂದ್ರಾಮ’ ವಿವಾಹೋತ್ತರ ಗುಪ್ತ ಪ್ರಣಯದ ಕಥೆಯಾದರೆ ‘ಪರೆಯರ ಕುವರಿ’ ಊರಗೌಡನ ಕಾಮಕ್ಕೆ, ಕ್ರೌರ್ಯಕ್ಕೆ ಬಲಿಯಾಗಲು ಒಲ್ಲದೆ ಆತ್ಮಾಹುತಿ ಮಾಡಿಕೊಳ್ಳುವ ಅಸಹಾಯಕ ಹೆಣ್ಣುಮಗಳ ಹೃದಯ ವಿದ್ರಾವಕ ಕಥೆಯಾಗಿದೆ. ಎರಡೂ ಕಥನಗಳು ಲಾವಣಿಯ ಮಾದರಿಯಲ್ಲಿದ್ದು ಮನೋಜ್ಞವಾಗಿವೆ. ಕುಂಟಾರ್ ಅವರ ಸಹಜ ಕಾವ್ಯ ಪ್ರವೃತ್ತಿ ಮತ್ತು ಶಕ್ತಿ ಯಾವುದರಲ್ಲಿದೆ ಎಂಬುದಕ್ಕೆ ಈ ಎರಡೂ ರಚನೆಗಳು ನಿದರ್ಶನವಾಗಿವೆ. ಈ ದಾರಿಯಲ್ಲೇ ಅವರು ಮುಂದುವರಿದರೆ ಇನ್ನಷ್ಟು ಸಾರ್ಥಕ ಕವನಗಳನ್ನು ಕನ್ನಡ ಕಾವ್ಯ ಕಣಜಕ್ಕೆ ಕೊಡುಗೆಯಾಗಿ ನೀಡಬಲ್ಲರೆಂಬ ನಂಬಿಕೆ ನನಗಿದೆ.
ಸನ್ಮಿತ್ರ ಡಾ. ಮೋಹನ ಕುಂಟಾರ್ ಅವರನ್ನು ಅವರ ಚೊಚ್ಚಲ ಕವನ ಸಂಕಲನದ ಪ್ರಕಟಣೆಯ ಈ ಸಂತಸದ ಸಂದರ್ಭದಲ್ಲಿ ಹಾರ್ದಿಕವಾಗಿ ಅಭಿನಂದಿಸಿ, ಕನ್ನಡ ಕಾವ್ಯಲೋಕಕ್ಕೆ ಸ್ವಾಗತಿಸುತ್ತೇನೆ ಹಾಗೂ ಅವರಿಗೆ ಸಕಲ ಯಶಸ್ಸು ಮತ್ತು ಶ್ರೇಯಸ್ಸನ್ನು ಹಾರೈಸುತ್ತೇನೆ.
ಸಹೃದಯ ಟಿಪ್ಪಣಿ
ಡಾ. ಎಂ. ಉಷಾ
ಕಳೆದ ಎರಡು ದಶಕಗಳಿಂದ ಸಹೋದ್ಯೋಗಿ ಮಿತ್ರರಾಗಿ ಪರಿಚಿತರಾಗಿರುವ ಮೋಹನ ಕುಂಟಾರ್ ಅವರು ಕವಿತೆ ಬರೆಯುತ್ತಾರೆ ಎಂಬ ವಿಷಯ ತಿಳಿದುದೇ ಬಹಳ ತಡವಾಗಿ. ನನ್ನ ನೆನಪನ್ನು ನಂಬಬಹುದಾದರೆ, ಹಸ್ತಪ್ರತಿಯಲ್ಲಿ ನಾನು ಓದಿದ ಅವರ ಮೊದಲ ಕವಿತೆ ಪಠ್ಯವೊಂದರ ಸ್ವಗತ. ಭಾಷಾಂತರದ ಸಿದ್ಧಾಂತವನ್ನು ಕಾವ್ಯವಾಗಿಸಿದ ಅವರ ಈ ಪ್ರಯೋಗ ಕನ್ನಡದ ಸಂದರ್ಭದಲ್ಲಿ ಹೊಸತೆಂದೇ ನನ್ನ ತಿಳುವಳಿಕೆ. ಅಲ್ಲಿಂದ ಮುಂದಕ್ಕೆ ಈ ಸಂಕಲನದಲ್ಲಿರುವ ಹಲವು ಪದ್ಯಗಳನ್ನು ನಾನು, ಅವುಗಳು ತಾಜಾ ಆಗಿದ್ದಾಗಲೇ ಅಂದರೆ, ಪರಿಷ್ಕರಣ ಪೂರ್ವದಲ್ಲಿಯೇ ಓದುವ ಅವಕಾಶ ಪಡೆದುಕೊಂಡಿದ್ದೇನೆ. ಅದರಿಂದಾಗಿಯೇ ಈ ವಿಮರ್ಶೆಯ ಕಷ್ಟವೂ, ಇಷ್ಟವೂ ನನ್ನನ್ನು ಸುತ್ತಿಕೊಂಡಿದೆ.
ಇಲ್ಲಿ ಕಷ್ಟದ ಮಾತು ಯಾಕೆ ಬಂತು ಎನ್ನುವುದಾದರೆ, ಅದನ್ನು ಕೊಂಚ ವಿವರಿಸಿ ಬಿಡುವುದು ಕ್ಷೇಮ. ಮೊದಲಿಗೆ ನಾನು ಕವಿತೆ ಇರುವುದು ಆಸ್ವಾದಿಸುವುದಕ್ಕೆ ಹೊರತು ವಿಮರ್ಶಿಸುವುದಕ್ಕಲ್ಲ ಎಂದು ನಂಬಿದವಳು. ಎರಡನೆಯದಾಗಿ, ವಿಮರ್ಶೆ ಎಂದರೆ, ಕಾವ್ಯ ಓದಿದಾಗ ಓದುಗನ ಮನಸ್ಸಿನಲ್ಲಿ ಮೂಡುವ ಅಭಿಪ್ರಾಯ ಎನ್ನುವುದಾದರೆ, ಇಲ್ಲಿನ ಬಹಳಷ್ಟು ಕವಿತೆಗಳ ಬಗೆಗಿನ ಅಭಿಪ್ರಾಯಗಳನ್ನು ಈಗಾಗಲೇ ಕವಿಯ ಬಳಿ ಹೇಳಿಬಿಡುವ ಮೂಲಕ ಆ ಓದಿನ ತಾಜಾತನವನ್ನು ಕಳೆದುಕೊಂಡಿದ್ದೇನೆ. ಮೂರನೆಯದಾಗಿ, ಲೆಬನಿಸ್-ಅಮೆರಿಕನ್ ಚಿಂತಕ ನಸ್ಸಿಮ್ ನಿಕೊಲಸ ತಲೆಬ್ ಹೇಳುವ Iಜಿ ಥಿou ತಿಚಿಟಿಣ ಣo ಚಿಟಿಟಿoಥಿ ಚಿ ಠಿoeಣ, exಠಿಟಚಿiಟಿ his ಠಿoeಣಡಿಥಿ ಎಂಬ ಮಾತಿನದು. ಕವಿಯೊಂದಿಗಿನ ಪರಿಚಿತತೆ ಕಾವ್ಯದ ಓದಿಗೆ ಪೂರಕವೆ, ಮಾರಕವೆ? ಎಂಬುದರ ಬಗ್ಗೆ ಇನ್ನೂ ನನ್ನಲ್ಲಿ ಸ್ಪಷ್ಟತೆ ಮೂಡಿಲ್ಲ. ಹಾಗಾಗಿಯೇ ನನಗಿದು ಕಷ್ಟದ ಕೆಲಸ.
ವಿಮರ್ಶಕನ ಅರ್ಥಾತ್ ಓದುಗನ ಕುತೂಹಲ, ಬರೆದ ಕವಿತೆಯ ಕುರಿತಾದರೆ, ಕವಿಯ ಕುತೂಹಲ ಕವಿತೆ ಬರೆಯುವ ಕ್ರಿಯೆಯ ಕುರಿತು ಎಂಬ ಮಾತಿಗೆ ಸಾಕ್ಷಿಯಂತೆ ಇಲ್ಲಿ ಎರಡು ಕವಿತೆ ಕುರಿತ ಕವಿತೆಗಳಿವೆ. ಅದರಲ್ಲಿ ಕವಿತೆಯ ಹುಟ್ಟು ಎಂಬ ಕವಿತೆ ಭಾವಗೀತದಿಂದ ಹಿಡಿದು, ಬಂಡಾಯ ಗೀತೆಯನ್ನು ಒಳಗೊಂಡು, ಅನುಭಾವ ಗೀತದವರೆಗಿನ ಬಹುತೇಕ ಎಲ್ಲ ಮಾದರಿಗಳ ಮೂಲವನ್ನು ತೋರಿಸಿ ಕೊಡುವ ಪ್ರಯತ್ನ ಮಾಡುತ್ತದೆ. ಆ ಕವಿತೆಯಲ್ಲಿ ಬರುವ ಲೋಕಾಂತದ ಕಾವಿನಲ್ಲಿ, ಏಕಾಂತದ ಧ್ಯಾನದಲ್ಲಿ, ಭಾವ ಭಾರದೊಜ್ಜೆ ಯಲ್ಲಿ ತಿಣುಕುತ್ತಿತ್ತು ಕವಿತೆ ಎಂಬ ಸಾಲಿನಿಂದ ಹೆಕ್ಕಿಕೊಂಡದ್ದೇ ಈ ಕವನ ಸಂಕಲನದ ಶೀರ್ಷಿಕೆ. ಕವಿ ಕವಿತೆಗಳ ಸಂಬಂಧದ ಸ್ವರೂಪವನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿರುವ ಕವಿ-ಕವಿತೆ ಕುತೂಹಲದ ಇನ್ನೊಂದು ರಚನೆ.
ಇಲ್ಲಿನ ಹಲವು ಉತ್ತಮ ಕವಿತೆಗಳ ಮೂಲಧಾತು ಸಮಕಾಲೀನ ಸ್ಪಂದನ. ಅದರ ವ್ಯಾಪ್ತಿ ದಕ್ಷಿಣದ ತುತ್ತತುದಿ ಕೇರಳದ ಜಲಪ್ರಳಯದಿಂದ ಹಿಡಿದು ಉತ್ತರದ ನೋಯ್ಡಾದ ಬೀದಿಯ ವರೆಗೆ ಹಬ್ಬಿ ನಿಂತಿದೆ. ಈ ಸಾಂದರ್ಭಿಕ ಕವಿತೆಗಳನ್ನು ಕವಿ ಸಾರ್ವತ್ರಿಕಗೊಳಿಸುವ ಶ್ರಮ ಮತ್ತು ಕ್ರಮಗಳು ಗಮನಾರ್ಹವಾಗಿವೆ. ಉದಾಹರಣೆಗೆ, ಸೌಜನ್ಯ ಅತ್ಯಾಚಾರ ಪ್ರಕರಣದ ಹಲವು ಆಯಾಮಗಳನ್ನು ಕುರಿತ ರಾಜಕೀಯ ಟಿಪ್ಪಣಿಯನ್ನು ಹದ್ದು ಮೀರಿದ ಹಾದಿ ಕವಿತೆಯು ಮಾರ್ಮಿಕಗೊಳಿಸುವ ವಿಧಾನ.
ಹದ್ದುಗಳ ಹದ್ದುಬಸ್ತಿನಲ್ಲಿ ಇಡಲಾಗದೆ
ಜೀಕುತ್ತಿವೆ ಗದ್ದುಗೆಗಳು
ಸದಾಚಾರದ ನುಡಿಹೇಳಿ
ಅತ್ಯಾಚಾರದ ಗುಡಿಕಟ್ಟುವ
ಸೋಗಲಾಡಿ ಪರಿವಾರಗಳು
ಎಪ್ಪತ್ತೆರಡು ವರ್ಷಗಳ ಭಾರತದ ಸ್ವಾತಂತ್ರ್ಯೋತ್ಸವದ ಸಂದರ್ಭವನ್ನು ವಿಮರ್ಶಿಸುವ ಬಹತ್ತರ ಮುದುಕ ಕವಿತೆಯು ಭಾರತಾಂಬೆ ಎಂಬ ಮಹಿಳೀಕರಣ ಪರಿಕಲ್ಪನೆಗೆ ಬದಲಾಗಿ ಮುದುಕ ಎಂದು ಪುರುಷೀಕರಿಸುತ್ತ, ಅದರ ರೋಗಗ್ರಸ್ತ ಸ್ಥಿತಿಯನ್ನು ಮೂರ್ತೀಕರಿಸುವ ವಿಧಾನ.
ವಾತ ಪಿತ್ತ ಕಫಗಳು ಗುಲ್ಲೆಬ್ಬಿಸಿ
ಕಿಚಕ್ಕನೆ ಉಗುಳುವ ಸ್ವತಂತ್ರ ಮುದುಕ
ಒಂದರ ಔಷಧಿ ಮತ್ತೊಂದರ ಉಲ್ಬಣ
ದಿನೇ ದಿನೇ ಸವಕಲಾಗುತ್ತಿರುವೆ;
ಕವಿ ಎಂದೂ ಕೇಳದ ಸದ್ದನ್ನು ಕೇಳುತ್ತಾನೆ. ಎಂದೂ ಕಾಣದ ಬಣ್ಣವನ್ನು ರೂಪವನ್ನು ಕಾಣುತ್ತಾನೆ ಎನ್ನುವ ಒಂದು ಪ್ರಸಿದ್ಧ ಮಾತಿದೆ. ಇಲ್ಲಿಯೂ ಅಷ್ಟೇ, ನಾವು ನೋಡಿಯೂ ನೋಡದಂತೆ ದಾಟಿ ಹೋಗುವ, ಅನುಭವಿಸಿಯೂ ಅನುಭವಕ್ಕೆ ಬರದೆ ಕಳೆದುಹೋಗುವ ಹಲವು ಸಂಗತಿಗಳು ಕಾವ್ಯವಾಗಲು ಹವಣಿಸಿವೆ. ಗಡಿಯಾರದ ಮುಳ್ಳುಗಳು, ಹೊಸ ಯಜಮಾನನಿಗಾಗಿ ಕಾಯುತ್ತಿರುವ ಪ್ರೀ ಓನ್ಡ್ ಕಾರುಗಳು, ಹೊತ್ತೊತ್ತಿಗೆ ದಿಕ್ಕು ಬದಲಿಸುವ ನೆರಳು, ಆಪರೇಷನ್ ಥಿಯೇಟರ್ನ ಮುಂಭಾಗದ ಮುಖಗಳು, ಗಗನಸಖಿಯರ ಮುಖದ ಮೇಲೆ ಎಳೆದುಕೊಂಡ ನಗು, ದಿನಕ್ಕೊಬ್ಬರಿಗೆ ಮೈ ಒಡ್ಡುವ ಲಾಡ್ಜಿನ ಹಾಸಿಗೆ ಹೀಗೆ ಹಲವು ಹತ್ತು ಸಾಮಾನ್ಯ ಸಂಗತಿಗಳು ಕಾವ್ಯದ ವಸ್ತುವಾಗುವ ಮೂಲಕ ಅಸಾಮಾನ್ಯ ಗೊಳ್ಳಲು ಹೊರಟದ್ದು ಮಾತ್ರವಲ್ಲದೆ ತಮ್ಮ ಗಮ್ಯಸ್ಥಾನವನ್ನು ತಲುಪಿವೆ ಕೂಡ.
ಮನುಷ್ಯ ಮಣಗಟ್ಟಲೆ ಮಣ್ಣನ್ನು ಶೋಧಿಸುವುದು ಒಂದು ಕಣ ಬಂಗಾರಕ್ಕಾಗಿ. ಮೈಲುಗಟ್ಟಲೆ ಕಾಡನ್ನು ಸುಡುವ ಕಾಳ್ಗಿಚ್ಚು ಹತ್ತುವುದು ಒಂದು ಕಿಡಿ ಬೆಂಕಿಯಿಂದ. ಹಾಗೆಯೇ ಇಲ್ಲಿನ ಕೆಲವು ಕವಿತೆಗಳು ಇಡಿಯಾಗಿ ಓದುಗನನ್ನು ಗೆಲ್ಲದಿದ್ದರೂ, ಕೆಲವು ಸಾಲುಗಳ ಮೂಲಕ ಗಮನ ಸೆಳೆಯುತ್ತವೆ. ಈ ಹಿಂದಿನ ಯಾವ ಕವಿತೆಯನ್ನು ನೆನಪಾಗಿಸದ ನವೀನವಾದ ನುಡಿಚಿತ್ರಗಳ ಮೂಲಕ, ಪ್ರತಿಮೆ-ರೂಪಕಗಳ ಮೂಲಕ, ಕಲ್ಪಕತೆಯ ಮೂಲಕ ಮನಸ್ಸಿಗೆ ಮುದ ನೀಡುತ್ತವೆ. ಉದಾಹರಣೆಗೆ, ಕವಿ-ಕವಿತೆ ಕವನದ ಕಾವ್ಯವನ್ನು ಕುರಿತ ನುಡಿಚಿತ್ರ:
ಕವಿ ಬಸಿರಿನಿಂದುದಿಸಿದ
ನವಜಾತ ಶಿಶು!
ಬಟ್ಟೆದೊಡಿಸಿ ಬಟ್ಟೆ ಬಿಚ್ಚಿ ಅಳಿಸಿ ನಗಿಸಿ
ಆಡಿಸುವವರ ಕೈಗೂಸು!
ಕೇರಳ ಕವಿತೆಯಲ್ಲಿನ ಸಾಕ್ಷರತೆಯಲ್ಲಿ ಮುಂದೆಂದು ಕರೆಸಿಕೊಳ್ಳುವ ಕೆಂಬಾವುಟದ ಕೇರಳ ಕುರಿತು ನೀಡುವ ವ್ಯಂಗ್ಯಚಿತ್ರ:
ಬಡತನ ದಾರಿದ್ರ್ಯ
ಕೊಚ್ಚೆ ಕೊಂಪೆಗಳ
ಅನೀತಿ ಅತ್ಯಾಚಾರಗಳ
ಕೊಲೆ ಸುಲಿಗೆಗಳ
ದಾಖಲಿಸುವುದಿಲ್ಲವೆಂದು
ಚಿತ್ರಗುಪ್ತನೂ ಇಲ್ಲಿ
ಮುಷ್ಕರ ನಿರತನು!
ವಿಸ್ಮಯ ಕವಿತೆಯ ಈ ರೂಪಕ:
ನಮ್ಮೂರ ಕೇರಿಯಲ್ಲಿ
ನಕ್ಕು ನಲಿಯುವ, ಕುಣಿದು ಕುಪ್ಪಳಿಸುವ
ಹದಿ ಹರೆಯದ ತರುಣಿಯರು
ಹಾವಿನ ಜೊತೆ ಹಾದರಕ್ಕೆಳಸುವ ಹುಚ್ಚಾಟ
ಮಹಾಬಲಿಯ ಕೇರಳ ದರ್ಶನ ಕವಿತೆಯಲ್ಲಿ ಕೇರಳ ಪ್ರವಾಹದಿಂದ ಹರಿಯುತ್ತಿದ್ದ ಕೆನ್ನೀರನ್ನು ಪ್ರತಿಮಿಸುವ ರೀತಿ:
ಒಡಲನು ಬಗೆದು ಭ್ರೂಣವ ಕಳೆದು
ಎಸಗುವರತ್ಯಾಚಾರವ ನಿತ್ಯ
ಗರ್ಭಸ್ರಾವದಿ ಹರಿಯಿತು ನೆತ್ತರು
ಇತ್ಯಾದಿಗಳನ್ನು ಹೆಸರಿಸಬಹುದು.
ಚೆಲುವ ಚಂದ್ರಾಮ ಎಂಬ ಕಥನ ಕವನವು ಎಕ್ಕುಂಡಿ ಮಾಸ್ತಿ ಮುಂತಾದವರ ಕಥನ ಕವನಗಳನ್ನು ನೆನಪಿಸುತ್ತಲೇ, ಅದಕ್ಕಿಂತ ಭಿನ್ನವಾದ ತನ್ನ ಸೊಗಡನ್ನು ಸೂಸುತ್ತದೆ. ವಿವಾಹೇತರ ಸಂಬಂಧ ಸುಖಕ್ಕಾಗಿ ಗಂಡ ಮತ್ತು ಮಗುವನ್ನು ಬಲಿಗೊಟ್ಟು ಬರಿದಾಗಿ ನಿಲ್ಲುವ ಹೆಣ್ಣಿನ ದುರಂತ ಕತೆಯನ್ನು ನೀರಲ್ಲಿ ಪ್ರತಿಮಿಸುವ ಚಂದ್ರಾಮನ ಕತೆಯಾಗಿ ಬಿಂಬಿಸುವ ಇಲ್ಲಿನ ತಂತ್ರ ಕಥನ ಕವನಕ್ಕೆ ಹೊಸತನವನ್ನು ನೀಡಿದೆ.
ಜನಪ್ರಿಯವಾದ ಗೋವಿನ ಹಾಡನ್ನು ಇಲ್ಲಿ ಕೋಟಿಪುಣ್ಯದ ಕತೆಯಾಗಿ ಪರಿವರ್ತಿಸಿರುವ ಕವಿ ಪ್ರಾಣಿಲೋಕಕ್ಕಷ್ಟೇ ಅಲ್ಲದೆ ಮನುಷ್ಯರಿಗೂ ಇರುವ ಕಾಡಿನ ಅನಿವಾರ್ಯತೆಯನ್ನು ಕಟ್ಟಿಕೊಡುತ್ತಾರೆ. ಹಾಲಿಗಾಗಿ ಅಳುವ ಮನುಷ್ಯನ ಮಗುವಿಗೆ ಹಾಲು ಕೊಡುವ ಹಸುವಿಗೆ ಮೇಯಲು ಕಾಡೇ ಇಲ್ಲ ಎಂಬುದರಿಂದ ಆರಂಭಗೊಳ್ಳುವ ಕವಿತೆ ತನ್ನನ್ನು ಬದುಕಲು ಬಿಟ್ಟು ಸತ್ತ ಹುಲಿಯ ಮರಿಯನ್ನು ಹಸು ಬಾಚಿ ತಬ್ಬುತ್ತದೆ ಎನ್ನುವ ಮೂಲಕ ಗೋವಿನ ಹಾಡಿನ ತ್ಯಾಗ ಸಾಮರಸ್ಯದ ನೆಲೆಯನ್ನು ಈ ಕವಿತೆ ಇನ್ನೊಂದು ಹಂತಕ್ಕೆ ಕೊಂಡೊಯ್ಯುತ್ತದೆ.
ಈ ಸಂಕಲನದ ಸಾಮಾನ್ಯ ಕವಿತೆಗಳ ಬಗ್ಗೆ ಮಾತನಾಡುವುದಿದ್ದರೆ ಅದರಲ್ಲಿ ಮೊದಲ ಸ್ಥಾನ ಇಲ್ಲಿನ ಐಕ್ಯಗೀತೆ, ಭಾಷಾ ಬಾಂಧವ್ಯ, ಕನ್ನಡ, ಕನ್ನಡದ ಸಿರಿಯಂತಹ ನಾಡಗೀತೆಗಳದು. ನಂತರದ ಸ್ಥಾನ ಕವಿ ಕುವೆಂಪು, ಹಂಪಿ, ನಂಬಿಕೆಯಂತಹ ಕವಿತೆಗಳದು. ಇವು ಈಗಾಗಲೇ ಬಳಕೆಯಲ್ಲಿರುವ ಒಂದು ನಿರ್ದಿಷ್ಟ ಫಾರ್ಮೂಲಾವನ್ನು ಪುನರುತ್ಪಾದಿಸುತ್ತಿರುವ ಕವಿತೆ ಗಳಂತಿರುವುದೇ ಇವುಗಳನ್ನು ಸಾಮಾನ್ಯ ಕವಿತೆಗಳು ಎಂದು ಹೇಳಲು ಕಾರಣ.
ಕಾವ್ಯದ ಆಕೃತಿಯ ನೆಲೆಯಿಂದ ಈ ಸಂಕಲನ ಒಂದು ಅಧ್ಯಯನ ಯೋಗ್ಯ ಪಠ್ಯ ವಾಗುತ್ತದೆ. ಇಲ್ಲಿ ನವೋದಯದ ಪ್ರಕೃತಿ ಗೀತೆಯಿಂದ ಹಿಡಿದು, ನಾಡಿನುಡಿಯ ಅಭಿಮಾನದ ಕವಿತೆಗಳನ್ನು ಒಳಗೊಂಡ ಮೂರು, ನಾಲ್ಕು ಸಾಲಿನ ಮಾತ್ರಾಲಯದ ಮಾದರಿಗಳು, ಕಥನಕವನಗಳು, ನವ್ಯದ ಮುಕ್ತಛಂದದ ವ್ಯಕ್ತಿನಿಷ್ಠ ಅಭಿವ್ಯಕ್ತಿಗಳು, ದ್ವಿಪದಿಗಳು, ಚೌಪದಿಗಳು, ಹನಿಗವನಗಳು, ಅಣಕುಗಳವರೆಗೆ ಹಲವು ಮಾದರಿಯನ್ನು ಕಾಣಬಹುದಾಗಿದೆ. ಹಾಗೆ ನೋಡಿದರೆ, ಇಲ್ಲಿ ಕಾಣದಿರುವ ಮಾದರಿಗಳೆಂದರೆ ಬಂಡಾಯ ಮತ್ತು ಜಾನಪದೀಯ ಶೈಲಿಯದು. ಈ ಅರ್ಥದಲ್ಲಿ ಇವರ ಕಾವ್ಯದ ಶೈಲಿಯನ್ನು ಇದೇ ಎಂದು ಹಿಡಿದಿಡುವುದು ತುಸು ಕಷ್ಟದ ಕೆಲಸ.
ಲೋಕಾಂತದ ಕಾವಿನಲ್ಲಿ ಏಕಾಂತದ ಧ್ಯಾನ
ಇದು ನನ್ನ ಮೊದಲ ಕವನ ಸಂಕಲನ. ಕಾಲೇಜು ದಿನಗಳಲ್ಲಿಯೇ ಕವಿತೆಗಳನ್ನು ಬರೆಯಲಾರಂಭಿಸಿದ್ದೆ. ಅನೇಕ ಕವಿಗೋಷ್ಠಿಗಳಲ್ಲಿ ಭಾಗವಹಿಸುತ್ತಿದ್ದ ನನ್ನಂತಹ ಕೆಲವರು ಕವಿಗೋಷ್ಠಿಗೆ ಸೀಮಿತವಾಗಿದ್ದ ಕವಿಗಳು. ವಿದ್ಯಾಗುರುಗಳಾಗಿದ್ದ ಡಾ. ಯು. ಮಹೇಶ್ವರಿ ಅವರು ನಮ್ಮನ್ನೆಲ್ಲ ಕವಿತೆ ಬರೆಯುವಂತೆ ಒತ್ತಾಯಿಸುತ್ತಿದ್ದರು. ಒತ್ತಾಯಕ್ಕೆ ಆಗಾಗ ಕವಿತೆಗಳ ಸಾಲುಗಳನ್ನು ಗೀಚುವುದು ಸಂಘಟಕರು ಕವಿಗೋಷ್ಠಿಯನ್ನು ಏರ್ಪಡಿಸಿದಾಗ ಅವರ ಒತ್ತಾಯಕ್ಕೂ ಕವಿತೆ ಬರೆಯಬೇಕಾದ ಅನಿವಾರ್ಯತೆ ಒದಗಿತು. ಆಗೆಲ್ಲ ಸಂಘಟಕರು ಗಮನಕ್ಕೆ ತಾರದೆಯೇ ಅನೇಕರ ಹೆಸರುಗಳನ್ನು ಕವಿಗೋಷ್ಠಿಯ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಿ ಬಿಡುತ್ತಿದ್ದರು. ಆಮಂತ್ರಣ ಪತ್ರಿಕೆ ಸೇರಿದ ಮೇಲೆ ಗೋಷ್ಠಿಗಾಗಿಯೇ ಒಂದು ಕವಿತೆ ಸಿದ್ಧವಾಗುತ್ತಿತ್ತು. ಮತ್ತೆ ಮತ್ತೆ ಕವಿಗೋಷ್ಠಿಯಲ್ಲಿ ಭಾಗವಹಿಸುತ್ತಿದ್ದ ಕವಿಗಳು, ನಾವೇ ಆಗಿರುತ್ತಿದ್ದರಿಂದ ಓದಿದ ಕವಿತೆಯನ್ನು ಇನ್ನೊಂದು ಕವಿಗೋಷ್ಠಿಯಲ್ಲಿ ಓದುತ್ತಿರಲಿಲ್ಲ. ಕವನ ಬರೆಯುವ ಹವ್ಯಾಸ ಹಾಗೆ ಬೆಳೆಸಿಕೊಂಡು ಹೊಸ ಕವನದೊಡನೆ ಕವಿಗೋಷ್ಠಿಗೆ ಹಾಜರಾಗುತ್ತಿದ್ದೆ. ಇದರಿಂದಾಗಿ ಬರೆದ ಕವಿತೆಗಳ್ಯಾವುವೂ ಉಳಿಯಲಿಲ್ಲ. ಬರೆದ ಕವಿತೆಗಳನ್ನು ಪ್ರಕಟಿಸಬೇಕು ಅಥವಾ ಪತ್ರಿಕೆಗಳಿಗಾದರೂ ಕಳುಹಿಸಬೇಕು ಎಂಬ ಆಲೋಚನೆಯು ಆ ದಿನಗಳಲ್ಲಿ ಬರಲೇ ಇಲ್ಲ.
ಗುರುಗಳಾದ ವೇಣುಗೋಪಾಲ ಕಾಸರಗೋಡು ಅವರೊಮ್ಮೆ ಬೆಂಗಳೂರಿನಲ್ಲಿ ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘದ ‘ದ.ರಾ.ಬೇಂದ್ರೆ ಸ್ಮೃತಿ ಅಂತರಕಾಲೇಜು ಕವನ ಸ್ಪರ್ಧೆಗೆ ಕವನಗಳನ್ನು ಕಳುಹಿಸುವಂತೆ ಸೂಚಿಸಿ, ಅದರ ಪ್ರಕಟಣೆಯ ಕರಪತ್ರವನ್ನು ವಿಭಾಗದ ಸೂಚನಾ ಫಲಕದಲ್ಲಿ ಹಾಕಿಸಿದ್ದರು. ನಾನು ಸಿದ್ಧವಾಗಿದ್ದ ಎರಡು ಕವನಗಳನ್ನು ಮುಖ್ಯಸ್ಥರ ದೃಢೀಕರಣದೊಡನೆ ಕನ್ನಡ ಸಂಘಕ್ಕೆ ಕಳುಹಿಸಿಕೊಟ್ಟಿದ್ದೆ. ಕ್ರಾಂತಿ, ಹಾಸಿಗೆ ಎಂಬ ಎರಡು ಕವನಗಳು ಬಹುಮಾನಕ್ಕೆ ಅರ್ಹವಾದವು. ಅವು ‘ಮಿಣಿಮಿಣಿ ಬೆಳಕು ಎಂಬ ಕವನ ಸಂಕಲನದಲ್ಲಿ ೧೯೮೪ರಲ್ಲಿ ಪ್ರಕಟವಾಗುವುದರ ಮೂಲಕ ನನ್ನ ಕವಿತೆ ಮೊದಲ ಬಾರಿಗೆ ಮುದ್ರಣ ರೂಪದಲ್ಲಿ ಬೆಳಕು ಕಂಡಿತು. ಪ್ರಕಟವಾದ ಪುಸ್ತಕಗಳ ಜೊತೆಗೆ ಬಹುಮಾನ ರೂಪದ ಪುಸ್ತಕಗಳ ಬಂಡಲ್ ಅಂಚೆ ಮೂಲಕ ಬಂದಾಗ ಸಂತೋಷವಾಯಿತು. ಪುಸ್ತಕಗಳಲ್ಲಿ ‘ದ.ರಾ. ಬೇಂದ್ರೆ ಸ್ಮೃತಿ ಅಂತರಕಾಲೇಜು ಕವನ ಸ್ಪರ್ಧೆಯಲ್ಲಿ ಬಹುಮಾನಿತ ಕವಿ ಎಂದು ಬರೆದಿತ್ತು. ಒಮ್ಮೆಲೇ ಒಂದು ರೀತಿಯ ರೋಮಾಂಚನದ ಅನುಭವ. ಈಗಲೂ ಸಾಲುಗಳನ್ನು ಓದುವಾಗ ಏನೋ ಒಂದು ಆತ್ಮಸಂತೋಷ. ಆ ನಂತರ ಕೆಲವೊಂದು ಕವನಗಳು ಕಾಲೇಜು ಮ್ಯಾಗಜಿನ್ಗಳಲ್ಲಿ, ಹಸ್ತಪ್ರತಿ ಸಂಚಿಕೆಗಳಲ್ಲಿ ಅಲ್ಲಲ್ಲಿ ಪ್ರಕಟವಾದದ್ದಿದೆ. ಅವು ಯಾವುವೂ ಇಂದು ಸುಲಭವಾಗಿ ಕೈಗೆ ಸಿಗಲಾರವು.
ಇದೇ ವೇಳೆಗೆ ಮುಕುಂದರಾಜ್ ಎಂಬವರು ಹುಣ್ಸೂರಿನಿಂದ ಪತ್ರಿಕೆಯಲ್ಲಿ ನೀಡಿದ ಸುದ್ದಿಯೊಂದು ನನ್ನ ಗಮನ ಸೆಳೆಯಿತು. ರಾಜ್ಯಮಟ್ಟದ ಕವನ ಸಂಕಲನ ವೊಂದನ್ನು ಪ್ರಕಟಿಸುವ ಉದ್ದೇಶಕ್ಕಾಗಿ ಕವನಗಳನ್ನು ಆಸಕ್ತರಿಂದ ಆಹ್ವಾನಿಸಿದ್ದರು. ನಾನು ಆಸಕ್ತಿಯಿಂದ ಎರಡು ಕವನಗಳನ್ನು ಕಳುಹಿಸಿದ್ದೆ(ಆ ಎರಡು ಕವನಗಳು ದುರ್ನೆಲೆ ಮತ್ತು ವಿಸ್ಮಯ ಅವೆರಡೂ ಇದರಲ್ಲಿ ಸೇರಿವೆ). ಕವನ ಆಯ್ಕೆಯಾದ ಬಗೆಗೆ ಅವರಿಂದ ಪತ್ರವೂ ಬಂತು. ಕವನ ಸಂಕಲನ ಪ್ರಕಟಣೆಗಾಗಿ ಹಣದ ಅವಶ್ಯಕತೆಯಿರುವುದರಿಂದ ಇಪ್ಪತ್ತೈದು ರೂಪಾಯಿಗಳನ್ನು ಕಳುಹಿಸುವಂತೆ ಬರೆದಿದ್ದರು. ಆರ್ಥಿಕವಾಗಿ ಅನುಕೂಲವಿಲ್ಲದ ನಾನು ಹಣ ಕಳುಹಿಸುವ ಗೋಜಿಗೇ ಹೋಗಲಿಲ್ಲ. ಕವನ ಸಂಕಲನ ಪ್ರಕಟವಾಯಿತೋ ಇಲ್ಲವೋ ನನಗೆ ಇಂದಿಗೂ ತಿಳಿಯದು.
ನಾನು ಆಗಾಗ ನನ್ನ ಡೈರಿಯಲ್ಲಿಯೋ ಇತರೇ ಪುಸ್ತಕಗಳಲ್ಲಿಯೋ ಕವಿತೆಗಳ ಸಾಲುಗಳನ್ನು ಬರೆಯುತ್ತಲೇ ಇರುತ್ತೇನೆ. ಕೆಲವೊಂದು ಕವಿತೆಗಳ ಸಾಲುಗಳು ಆರಂಭವಾಗಿ ಅರ್ಧಕ್ಕೆ ನಿಂತವು. ಮತ್ತೆ ಅವುಗಳನ್ನು ಪೂರ್ಣ ಮಾಡುವ ಗೋಜಿಗೇ ಹೋಗಲಿಲ್ಲ. ಕೆಲವೊಂದು ಪೂರ್ಣ ಕವಿತೆಗಳು ಇದ್ದುವು. ಕೆಲವೊಂದು ಕವಿತೆಗಳನ್ನು ಮಿತ್ರ ಸಿ. ವೆಂಕಟೇಶ್ ಮುಂದೆ ಬಿಡುವಿನ ವೇಳೆಯಲ್ಲಿ ಓದಿದ್ದಿದೆ. ಅವರೂ ಕವಿತೆ ಬರೆಯುವ ಹವ್ಯಾಸವುಳ್ಳವರು. ಅವರು ಆಗಾಗ ಕವಿತೆಗಳನ್ನು ಬರೆದು ನನ್ನ ಮುಂದೆ ಓದುತ್ತಿದ್ದರು. ಅವರೂ ಕವನಗಳನ್ನು ಸಂಕಲನ ರೂಪದಲ್ಲಿ ಇದುವರೆಗೂ ಪ್ರಕಟಿಸಲಿಲ್ಲ. ಹೀಗೆ ನಾನು ಬರೆದ ಕವಿತೆಗಳನ್ನು ಮತ್ತೆ ಎಂದೋ ಮರಳಿ ಓದುವ, ತಿದ್ದುವ ಯಾವ ಕೆಲಸವನ್ನು ಮಾಡುವ ಮನಸ್ಸಾಗಲಿಲ್ಲ. ಹಾಗೂ ಅವು ಎಲ್ಲಿ ಕಳೆದುವೋ ತಿಳಿಯದು.
೨೦೧೬ ಫೆಬ್ರವರಿಯಲ್ಲ್ಲಿ ಧಾರವಾಡದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದೆ. ದಾರಿಯುದ್ದಕ್ಕೂ ಸೆಕೆಂಡ್ ಹ್ಯಾಂಡು ಕಾರುಗಳ ಷೋ ರೂಂ ನೋಡಿ ನನ್ನಲ್ಲಿ ಅವುಗಳ ಬಗೆಗೆ ಕೆಲವು ಸಾಲುಗಳು ಮೂಡಿದುವು. ಬಸ್ಸಿಳಿದು ವಸತಿಗೃಹ ಸೇರಿದವನೇ ಆ ಸಾಲುಗಳನ್ನು ಹಾಳೆಗಳಲ್ಲಿ ಬರೆದೆ. ‘ಪರಿತ್ಯಕ್ತೆಯರು ಎಂದು ಶೀರ್ಷಿಕೆ ನೀಡಿದೆ. ಹಿಂದಿನ ಮೂರು ತಿಂಗಳಲ್ಲಿ ಭಾಷಾಂತರ ಸಂಬಂಧವಾಗಿ ಬರವಣಿಗೆಯಲ್ಲಿ ನಿರತನಾದ್ದರಿಂದ ನನ್ನ ಮನದಲ್ಲಿ ಮೂಡುತ್ತಿದ್ದ ಭಾಷಾಂತರ ವಿಷಯಗಳ ಬಗೆಗೆ ಕೆಲವು ಸಾಲುಗಳನ್ನು ಕವನ ರೂಪದಲ್ಲಿ ಬರೆಯಬೇಕೆಂದು ಹಲವು ದಿನಗಳಿಂದ ಯೋಚಿಸುತ್ತಿದ್ದೆ. ಮರುಕ್ಷಣದಲ್ಲಿಯೇ ಅನುವಾದದ ಸ್ವಗತ ಎಂಬ ಕವಿತೆಯ ಸಾಲುಗಳನ್ನು ಬರೆದೆ.
ಕವಿತೆ ಪೂರ್ಣಗೊಳಿಸುವಷ್ಟರಲ್ಲಿ ಧಾರವಾಡ ಕವಯತ್ರಿ ಸುಕನ್ಯಾ ಮಾರುತಿಯವರ ಫೋನ್ ಕರೆಬಂತು. ಧಾರವಾಡಕ್ಕೆ ಬಂದಿದ್ದೀರಂತೆ; ರಾತ್ರಿ ಬಿಡುವು ಮಾಡಿಕೊಳ್ಳಿ. ಜೊತೆಗೆ ಹೋಟೆಲಿನಲ್ಲಿ ಊಟ ಮಾಡೋಣ ಎಂದರು. ಆಗಲಿ ಎಂದೆ. ಅವರೇ ಹೇಳಿದಂತೆ ರಾತ್ರಿ ೮ ಗಂಟೆಗೆ ಹಳ್ಳಿಯ ವಾತಾವರಣವಿರುವ ಸುಸಜ್ಜಿತ ಹೋಟೆಲಿನಲ್ಲಿ ನಾವು ಸೇರಿದೆವು. ಜೊತೆಗೆ ಗೆಳೆಯರಾದ ಡಾ. ಜಿನದತ್ತ ಹಡಗಲಿ, ಡಾ. ಬಿರಾದಾರ್ ಮೊದಲಾದ ನಾಲ್ಕಾರು ಜನರೂ ಇದ್ದರು. ಊಟವಾದ ಬಳಿಕ ನಾನು ಈಗ ತಾನೆ ಬರೆದ ಕವಿತೆಯೊಂದನ್ನು ಓದುತ್ತೇನೆ. ನೀವೆಲ್ಲ ಕಿವಿಯಾಗಬೇಕು ಎಂದು ಹೇಳಿದೆ. ಸುಕನ್ಯಾ ಮಾರುತಿಯವರು ತಕ್ಷಣ ಸಂತೋಷದಿಂದ ಎಲ್ಲರ ಪರವಾಗಿ ಸಮ್ಮತಿಸಿದರು. ನಾನೇ ಅನುವಾದ ಸ್ವಗತದ ಕವಿತೆ ಓದಿದೆ. ಬಳಿಕ ನೀವು ಕವಿತೆ ಬರೆಯುತ್ತೀರೆಂದು ನಾನು ತಿಳಿದಿರಲಿಲ್ಲ. ಕವಿತೆ ಚೆನ್ನಾಗಿದೆ. ನೀವು ಇದನ್ನು ಯಾವುದಾದರೂ ಪತ್ರಿಕೆಗೆ ಕಳುಹಿಸಲೇಬೇಕು ಎಂದು ಒತ್ತಾಯಪಡಿಸಿದರು. ಅವರ ಅಪೇಕ್ಷೆಯನ್ನು ವಿನಯಪೂರ್ವಕವಾಗಿ ಒಪ್ಪಿಕೊಂಡೆ. ಬಳಿಕ ಕವಿತೆ ಬರೆಯುತ್ತಿರುವ ಬಗೆಗೆ ಹೇಳಿದೆ. ಅವು ಯಾವುದನ್ನು ಪ್ರಕಟಿಸುವ ಮನಸ್ಸು ಮಾಡಲಿಲ್ಲ ಎಂಬುದನ್ನೂ ತಿಳಿಸಿದೆ. ಸಂಕ್ರಮಣಕ್ಕೆ ಎರಡು ಕವಿತೆಗಳನ್ನು ಕಳುಹಿಸಿದ್ದೆ. ಅವುಗಳಲ್ಲಿ ಹದ್ದು ಮೀರಿದ ಹಾದಿ ಒಂದು ಪ್ರಕಟವಾಗಿತ್ತು.
ಹಾಗೆ ಧಾರವಾಡದಿಂದ ಮರಳಿದ ಮೇಲೆ ಅದೇ ಕಾವ್ಯೋತ್ಸಾಹದಿಂದ ನನ್ನ ಸಹೋದ್ಯೋಗಿಗಳ ಮುಂದೆ ಅದೇ ಕವನವನ್ನು ಮರುವಾಚಿಸಿದೆ. ಎಲ್ಲರೂ ಇಷ್ಟಪಟ್ಟರು. ಕವಿತೆಯ ಶೀರ್ಷಿಕೆಯನ್ನು ಪಠ್ಯವೊಂದರ ಸ್ವಗತ ಎಂದು ಬದಲಾಯಿಸಿ ಡಿ.ಟಿ.ಪಿ.ಗೆ ಅಳವಡಿಸಿ ಈ ಮೇಲ್ ಮೂಲಕ ಪ್ರಜಾವಾಣಿಯ ಮುಕ್ತಛಂದಕ್ಕೆ ಕಳುಹಿಸಿದೆ. ಅದು ೧೭.೦೪.೨೦೧೬ರಂದು ಪ್ರಕಟವಾಯಿತು. ಜೊತೆಗೆ ಬರೆದ ಇನ್ನೊಂದು ಕವಿತೆ ಪರಿತ್ಯಕ್ತೆಯರು ಶೀರ್ಷಿಕೆಯನ್ನು ಪ್ರೀ ಓನ್ಡ್ ಕಾರ್ಗಳು ಎಂದು ಬದಲಾಯಿಸಿ ಮಯೂರ ಮಾಸಪತ್ರಿಕೆಗೆ ಕಳುಹಿಸಿದೆ. ಅದು ಜೂನ್ ೨೦೧೬ರಲ್ಲಿ ಪ್ರಕಟವಾಯಿತು.
ಮುಂದೆ ಬರೆದ ಮಾತ-ಜ್ಯೋತಿ(ಉದಯವಾಣಿ ೧೪.೦೮.೨೦೧೬) ಕವಿತೆಯ ಹುಟ್ಟು(ಪ್ರಜಾವಾಣಿ ೧೮.೦೯.೨೦೧೬) ಕವಿಶೈಲದಲ್ಲಿ ಬೆಳಗು, (ಕನ್ನಡಪ್ರಭ ೧೬.೦೪. ೨೦೧೭) ಮೌನ ಮತ್ತು ಮಾತು(ವಿಜಯ ಕರ್ನಾಟಕ ೧೧.೦೯.೨೦೧೭) ಪ್ರಣಯ ದಾಟ(ತುಷಾರ, ಆಗಸ್ಟ್ ೨೦೧೭), ಗಗನಸಖಿಯರು(ಉದಯವಾಣಿ, ೨೨.೦೭. ೨೦೧೮), ಕೇರಳ(ಕನ್ನಡಪ್ರಭ, ೨೯.೦೭.೨೦೧೮), ಎದೆಯ ಹಾಡು(ವಿಜಯ ಕರ್ನಾಟಕ, ೨೮.೧೦.೨೦೧೮) ಹೀಗೆ ಪ್ರಕಟವಾದುವು. ಪತ್ರಿಕೆಗಳು ಕವಿತೆಗಳನ್ನು ಪ್ರಕಟಿಸಿದುವು ಎಂಬ ಕಾರಣಕ್ಕೆ ಸಂಕಲನ ರೂಪದಲ್ಲಿ ಪ್ರಕಟಿಸಲು ಧೈರ್ಯ ಬಂತು.
ಕಾಲೇಜಿನ ದಿನಗಳಲ್ಲಿ ಕನ್ನಡದಲ್ಲಿ ಪ್ರಸಿದ್ಧರಾದ ಕವಿಗಳು ಶೈಕ್ಷಣಿಕ ವಲಯದ ಒಳಗೆ ಅಧ್ಯಯನಶೀಲವಾದವರಿಗೆ ಹೆಚ್ಚಿನ ಹೂರಣವನ್ನು ಒದಗಿಸುತ್ತಿದ್ದರು. ಕುವೆಂಪು, ಬೇಂದ್ರೆ, ಅಡಿಗ, ಕಂಬಾರ ಇವರ ಕವಿತೆಗಳನ್ನು ಓದಲು, ಅರ್ಥ ಮಾಡಲು ತುಂಬಾ ಶ್ರಮ, ತಾಳ್ಮೆಯ ಅಗತ್ಯವಿರುತ್ತಿತ್ತು. ಅವುಗಳ ಗಂಭೀರ ಓದು ಒಳನೋಟಗಳತ್ತ ದೃಷ್ಟಿ ಹಾಯಿಸಿದಾಗ ಅವು ತೆರೆದುಕೊಳ್ಳುತ್ತಿದ್ದವು. ವೈಚಾರಿಕ ಜಗತ್ತು ನಮ್ಮನ್ನು ಹೊರತೆಗೆದು ಅನುಭವದೆಡೆಗೆ ಕೊಂಡೊಯ್ಯುತ್ತಿದ್ದವು. ಇಂತಹ ಹಿರಿಯ ಕವಿಗಳ ಕವನಗಳ ಅರ್ಥವನ್ನು ಹುಡುಕಾಡುತ್ತ ಶೈಕ್ಷಣಿಕ ಅಗತ್ಯವನ್ನು ಪೂರೈಸುವ ಸಲುವಾಗಿ ಅವುಗಳಿಗೆ ಬಂದ ವಿಮರ್ಶೆಗಳನ್ನು ಓದುತ್ತಿದ್ದೆ. ಕವನಗಳಿಗಿಂತ ವಿಮರ್ಶೆಯನ್ನೇ ನಂಬಿ ಅದರ ಮೇಲೆ ಪಯಣಿಸುವ ಓದು ಹೊರೆಯಾದಾಗ ಭಾರ ಇಳಿಸುವ ಸಲುವಾಗಿ ಕೆ.ಎಸ್.ನ., ಬಿ.ಆರ್.ಲಕ್ಷ್ಮಣರಾವ್ ಅವರ ಕವಿತೆಗಳನ್ನು ಓದಿ ಭಾವ ತುಂಬಿಕೊಂಡು ಹಗುರಾಗುತ್ತಿದ್ದೆ. ನನ್ನದೇ ಧಾಟಿಯಲ್ಲಿ ಓದುವ ಹಾಡುವ ಮತ್ತೆ ಮತ್ತೆ ಅದನ್ನೇ ಓದುವ ನನಗೆ ಅವು ಆತ್ಮೀಯವಾಗುತ್ತಿದ್ದವು. ಹಾಗಾಗಿ ನನಗೆ ಇಂದಿಗೂ ಗದ್ಯದ ಲಯಕ್ಕಿಂತ ಪದ್ಯದ ಲಯದಲ್ಲಿ ಭಾವನಾತ್ಮಕವಾದ ಸಾಮಾನ್ಯ ಭಾವಗೀತೆಗಳ ಕಡೆಗೆ ಒಲವು ಅಧಿಕ. ಕುವೆಂಪು, ಬೇಂದ್ರೆ, ಅಡಿಗ, ಜಿ.ಎಸ್.ಶಿವರುದ್ರಪ್ಪ, ಕಂಬಾರರ ರಚನೆಗಳಲ್ಲಿ ಭಾವ ತೀವ್ರತೆಯ ರಚನೆಗಳನ್ನು ಓದುವುದರಲ್ಲಿರುವ ಸಂತೋಷ ಗದ್ಯಾತ್ಮಕ ಕವನದ ಸಾಲುಗಳಲ್ಲಿ ದೊರೆಯುವುದಿಲ್ಲ. ಹಾಗಾಗಿ ಕೆ.ಎಸ್. ನರಸಿಂಹಸ್ವಾಮಿ, ಬಿ.ಆರ್. ಲಕ್ಷ್ಮಣರಾವ್ ಎಲ್ಲ ಜನರನ್ನು ಸುಲಭವಾಗಿ ತಲುಪಿಸಬಲ್ಲ ಭಾವನಾತ್ಮಕವಾಗಿ ಸಂತೋಷವನ್ನು ನೀಡಬಲ್ಲ ಕವಿಗಳು ಎಂದು ನನ್ನ ಅನಿಸಿಕೆ.
ನಾನು ಬಿ.ಎ. ಓದುತ್ತಿದ್ದ ದಿನಗಳು. ಸುಮಾರು ೧೯೮೪ರಲ್ಲಿ ಇರಬಹುದು. ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನ ಕಾರ್ಯಕ್ರಮಕ್ಕೆ ಕವಿ ಬಿ.ಆರ್.ಲಕ್ಷ್ಮಣರಾವ್ ಬರುತ್ತಿದ್ದಾರೆ ಎಂಬ ವಿಷಯವನ್ನು ಪತ್ರಿಕೆಯಲ್ಲಿ ಓದಿದೆ. ಕಾರ್ಯಕ್ರಮ ಸಂಜೆ ಐದು ಗಂಟೆಗೆ ಆಗಿದ್ದುದರಿಂದ ಸರಿಯಾದ ಸಮಯಕ್ಕೆ ಅಲ್ಲಿಗೆ ತಲುಪಿದೆ. ಅಂದು ಯಾರು ಯಾರು ಕವಿತೆಗಳನ್ನು ಓದಿದ್ದರು, ಮಾತನಾಡಿದ್ದರು ಎಂಬುದು ನನಗೆ ನೆನಪಿಲ್ಲ. ಬಿ.ಆರ್.ಲಕ್ಷ್ಮಣರಾವ್ ಅವರು ಸುಬ್ಬಾಭಟ್ಟರ ಮಗಳೇ, ಗೋಪಿ ಮತ್ತು ಗಾಂಡಲೀನ ಕವಿತೆಗಳನ್ನು ವಾಚಿಸಿದರು. ನನಗೆ ಅವರ ಕಾವ್ಯ ಮಂಡನೆಯ ರೀತಿ ತುಂಬಾ ಹಿಡಿಸಿತು. ಹಾಗೆ ಕಾರ್ಯಕ್ರಮ ಮುಗಿದ ಬಳಿಕ ಡಾ. ನಾ.ದಾ.ಶೆಟ್ಟಿಯವರೊಡನೆ ಹೆಜ್ಜೆ ಹಾಕುತ್ತಿದ್ದ ಅವರನ್ನು ಭೇಟಿ ಮಾಡಿ ನಮಸ್ಕರಿಸಿ, ನನ್ನ ಹೆಸರು ಹೇಳಿಕೊಂಡೆ. ಕನ್ನಡದ ಕವಿಯೊಬ್ಬರನ್ನು ಮೊದಲ ಬಾರಿಗೆ ಮುಖತಃ ಮಾತನಾಡಿಸಿದ ಸಂಭ್ರಮ ನನ್ನಲ್ಲಿ ಮನೆಮಾಡಿತ್ತು. ಅದೇ ಸಂದರ್ಭವನ್ನು ಈಗಲೂ ನೆನಪಿಸಿಕೊಂಡರೆ ಸಂತೋಷವಾಗುತ್ತದೆ. ಬಿ.ಆರ್. ಲಕ್ಷ್ಮಣರಾವ್ ಅವರ ಕವಿತೆಗಳನ್ನು ಅದೇ ಪ್ರೀತಿಯಿಂದ ಓದುತ್ತಿರುತ್ತೇನೆ. ಅವರ ಭಾವಗೀತೆಗಳು ಮುಖ್ಯವಾಗಿ ನಾನು ಮೆಚ್ಚಿದ ಕವನಗಳ ಸಾಲಿನಲ್ಲಿ ಸೇರುತ್ತವೆ. ಕನ್ನಡ ಕಾವ್ಯಲೋಕದ ಪಂಜೆ, ಬಿ.ಎಂ.ಶ್ರೀ. ಅವರಿಂದ ಸಿದ್ಧಲಿಂಗಯ್ಯನವರ ವರೆಗಿನ ಬಹುತೇಕ ಕವಿಗಳ ಕವಿತೆಗಳಲ್ಲಿನ ಲಯ ನನ್ನನ್ನು ಹೆಚ್ಚು ಸೆಳೆದಿದೆ. ಹಾಗಾಗಿ ನಾನು ಕವಿತೆಗಳನ್ನು ಸಂತೋಷಕ್ಕಾಗಿ ಓದುತ್ತಿದ್ದೆ. ಕಾವ್ಯ ಓದು ನನಗೆ ಖುಷಿಯ ವಿಚಾರ. ಹಾಗಂತ ನಾನು ಗೀಚುವ ಕವಿತೆಗಳ ಸಾಲುಗಳನ್ನು ಗಮನಿಸಿದಾಗ ಅವೆಲ್ಲ ಕಾವ್ಯಗಳಾಗಲಿಲ್ಲ ಎಂಬ ಕಾರಣಕ್ಕೆ ಸಂಕೋಚದಿಂದ ಅವುಗಳನ್ನು ಬಹಿರಂಗವಾಗಿ ಯಾರ ಮುಂದೆಯು ಅನಾವರಣಗೊಳಿಸಲಿಲ್ಲ. ಕವಿತೆ ಬರೆಯುತ್ತಿದ್ದೆ ಹಾಗೆಯೇ ಮರೆಯುತ್ತಿದ್ದೆ. ನನಗೆ ನಾನೇ ಕವಿಯೆಂದು ಹೇಳಿಕೊಳ್ಳಲು ಸಂಕೋಚ.
ಕವಿಯೆಂದರೆ ಸಾಮಾನ್ಯ ಮನುಷ್ಯರಲ್ಲ, ಅವನೊಬ್ಬ ವಿಚಿತ್ರ ಜೀವಿ, ಅವನ ಮಾತು, ವೇಷ, ನಡಿಗೆ ಎಲ್ಲವೂ ವಿಶಿಷ್ಟ ಎಂದು ಬಿಂಬಿಸುವ ಕೆಲವೊಂದು ಕವಿಗಳು ಅಂದು ನಮ್ಮ ಕಾಲೇಜಿನಲ್ಲಿ ಇದ್ದರು. ಕವಿ, ಪ್ರೇಮಿ, ಹುಚ್ಚ ಎಲ್ಲರೂ ಒಂದೇ ವರ್ಗಕ್ಕೆ ಸೇರಿದವರೆಂಬ ಯಾರೋ ಹೇಳಿದ ಮಾತು ನೆನಪಿತ್ತು.
ಈಗಾಗಲೇ ಹೇಳಿದಂತೆ ೧೯೮೩ರಿಂದ ೧೯೮೭ರ ಅವಧಿಯಲ್ಲಿ ಕವಿಗೋಷ್ಠಿಯಲ್ಲಿ ಭಾಗವಹಿಸುವ ಆಹ್ವಾನದ ಕಾರಣಕ್ಕೆ ಬರೆಯುತ್ತಿದ್ದೆ. ಅಲ್ಲಿ ವಾಚಿಸಿ ಆ ಕವಿತೆಯನ್ನು ಎಲ್ಲೋ ಕಳೆಯುತ್ತಿದ್ದೆ. ೧೯೮೭ರಲ್ಲಿ ಇರಬೇಕು. ಕಾಸರಗೋಡಿನ ಬದಿಯಡ್ಕದಲ್ಲಿ ಬಿ.ಕೃಷ್ಣ ಪೈಯವರು ಶತಕವಿಗೋಷ್ಠಿಯನ್ನು ಆಯೋಜಿಸಿದ್ದರು. ಅವರುಗಳಲ್ಲಿ ನಾನೂ ಒಬ್ಬ ಕವಿ. ಎಂ.ಫಿಲ್. ಅಧ್ಯಯನದ ನಿಮಿತ್ತ ನಾನಾಗ ಮದುರೈನಲ್ಲಿದ್ದೆ. ಕವಿಗೋಷ್ಠಿಯ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರನ್ನು ನೋಡಿದೆ. ಮತ್ತೆ ನಾನು ಕಾಸರಗೋಡಿನಿಂದ ದೂರ ಉಳಿದು ೧೯೯೨ರವರೆಗೆ ಮದುರೈಯಲ್ಲಿ ನಂತರ ಹಂಪಿಯಲ್ಲಿ ಮುಂದುವರಿದುದರಿಂದ ಊರಿನ ಕವಿಗೋಷ್ಠಿಗಳಲ್ಲಿ ಭಾಗವಹಿಸುವ ಅವಕಾಶ ನನಗೆ ದೊರೆಯಲಿಲ್ಲ. ನಾನಿರುವಲ್ಲಿಗೆ ನಾನೊಬ್ಬ ಕವಿ ಎಂದು ಗುರುತಿಸಿಕೊಳ್ಳಲು ಸಂಶೋಧನೆಯಂತಹ ಬರವಣಿಗೆಗಳ ನಡುವೆ ಅವಕಾಶವೂ ಒದಗಲಿಲ್ಲ. ಹಾಗಾಗಿ ಕವಿತೆಗಳು ಎಂದು ಗೀಚಿದ ಸಾಲುಗಳು ಡೈರಿಯಲ್ಲಿಯೋ, ಪುಸ್ತಕಗಳ ಹಾಳೆ ಗಳಲ್ಲೋ ಉಳಿದು ಹೋದವು.
೧೯೯೨ರಲ್ಲಿ ಹಂಪಿಗೆ ಬಂದ ಬಳಿಕ ಕೆಲವೊಂದು ಕವನಗಳ ಸಾಲುಗಳನ್ನು ಬರೆಯ ಲಾರಂಭಿಸಿದೆ. ಕನ್ನಡ ಕಥನ ಕವನವನ್ನು ನಾನು ಕಾಲೇಜು ದಿನಗಳಲ್ಲಿಯೇ ತುಂಬಾ ಮೆಚ್ಚಿಕೊಂಡಿದ್ದು ಅದೇ ಮಾದರಿಯ ಕಥನ ಕವನಗಳನ್ನು ರೂಪಿಸಲು ಮಾಡಿದ ಪ್ರಯತ್ನಗಳೇ ಚೆಲುವ ಚಂದ್ರಾಮ ಮತ್ತು ಪರೆಯರ ಕುವರಿ. ಈ ಎರಡೂ ಕಥನ ಕವನಗಳಿಗೆ ಚಿಕ್ಕಂದಿನಲ್ಲಿ ಅಮ್ಮ ಹೇಳುತ್ತಿದ್ದ ಕತೆಗಳೇ ಮುಖ್ಯ ಆಧಾರ. ನಾನೇ ಅಲ್ಲಿನ ಕತೆಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡಿದ್ದೇನೆ. ಹಂಪಿಯಲ್ಲಿನ ದಿನಗಳಲ್ಲಿ ಅನೇಕ ಕವಿಮಿತ್ರರ ಭೇಟಿಗೆ ಅವಕಾಶವಿತ್ತು. ಕುಲಪತಿಗಳಾಗಿದ್ದ ಕವಿ ಕಂಬಾರರ ಕವನ ವಾಚನದ ಸವಿಯನ್ನು ಆಸ್ವಾದಿಸುವ ಯೋಗ ದೊರೆಯಿತು. ಕಂಬಾರರ ಕವನ ವಾಚನವನ್ನು ಮುಗ್ಧ ವಾಗಿ ಆಸ್ವಾದಿಸುತ್ತಿದ್ದೆ. ಅವರ ಕವನಗಳನ್ನು ಓದುವಾಗ ಈಗಲೂ ಅವರದೇ ಧಾಟಿಯಲ್ಲಿ ವಾಚಿಸುವ ಪ್ರಯತ್ನ ಮಾಡುತ್ತಿರುತ್ತೇನೆ. ಕಾವ್ಯಾನುವಾದ ಕಮ್ಮಟಗಳಲ್ಲಿ ತಮಿಳು, ಮಲಯಾಳಂ ಕವಿಗಳ ವಾಚನದ ಲಯವನ್ನು ಹಿಡಿದು ಕನ್ನಡದಲ್ಲಿ ಅನುವಾದಿಸುವ ಪ್ರಯತ್ನವನ್ನು ಮಾಡಿದ್ದೇನೆ. ಮಲಯಾಳಂ ಕಾವ್ಯವಾಚನ ಇಂದಿಗೂ ಲಯಬದ್ಧವಾಗಿಯೇ ಇರುತ್ತದೆ. ಹಾಗಾಗಿ ಕನ್ನಡದಲ್ಲಿ ಕಂಬಾರರು ಬಿ.ಆರ್.ಲಕ್ಷ್ಮಣರಾವ್ ಮೊದಲಾದವರ ಕಾವ್ಯವಾಚನ ಮತ್ತು ಮಲಯಾಳಂ ಕವಿಗಳ ಕಾವ್ಯ ವಾಚನದ ಲಯಬದ್ಧ ಧಾಟಿ ನನಗೆ ಪ್ರಿಯವಾಗಿದೆ. ಹಾಗೆ ನಾನು ಬರೆಯುವ ಸಾಲುಗಳು ಲಯಬದ್ಧ ಧಾಟಿಗೆ ಒಗ್ಗುವಂತೆಯೇ ರೂಪುಗೊಂಡಿರುತ್ತವೆ. ಇದು ನನ್ನ ಸ್ವಸಂತೋಷಕ್ಕಾಗಿಯೇ ರೂಪಿಸಿಕೊಂಡ ರಚನೆಗಳು. ಅದು ವಸ್ತುವಿಗೆ ಅನುಗುಣವಾಗಿ ಲಯಬದ್ಧವಾಗಿದೆ ಎಂಬ ಕಾರಣಕ್ಕಾಗಿಯೇ ಕವಿತೆಗಳೆಂದು ಕರೆಯಲು ಅರ್ಹವಾಗಿರಬಹುದಷ್ಟೆ. ಹಾಗೆ ಹೇಳುವಾಗ ಲಯಬದ್ಧ ರಚನೆಗಳೇ ಕವಿತೆಯ ಜೀವಾಳ ಎಂದಲ್ಲ. ಕವಿತೆ ಕೇಳಲು ಹಿತವಾಗುವ ಲಯಬದ್ಧ ಧಾಟಿಯಲ್ಲಿರಬೇಕು. ಅದು ಕಾವ್ಯದಲ್ಲಿ ಸಹೃದಯನಿಗೆ ತನ್ಮಯವಾಗುವ ಸೋಪಾನವಾಗಿರುತ್ತದೆ. ಆದರೆ ಕವಿತೆ ವಾಚ್ಯವಾಗದೆ ಸಾಂಕೇತಿಕವಾಗಿಯೂ ಅರ್ಥವನ್ನು ಹಿಗ್ಗಿಸಿಕೊಳ್ಳುವ ಭಾವ ಸಾಮರ್ಥ್ಯದಿಂದ ಕೂಡಿರಬೇಕು ಎಂಬ ಗಾಢವಾದ ನಂಬಿಕೆ ನನ್ನದು. ಆ ಕಾರಣಕ್ಕಾಗಿಯೇ ನನ್ನ ರಚನೆಗಳ ಬಗೆಗೆ ನನ್ನೊಳಗೆ ನನಗೇ ಅಳುಕಿದೆ; ಅಂಜಿಕೆಯಿದೆ. ಆದರೂ ನನ್ನ ಕಾವ್ಯಾಭಿವ್ಯಕ್ತಿಯು ಅನಾವರಣಗೊಳಿಸುವುದು ಅವಶ್ಯ. ಅದೂ ಸಂಕಲನದ ರೂಪದಲ್ಲಿಯೇ ಪ್ರಕಟವಾಗಲಿ ಎಂಬ ಕೆಲವು ಗೆಳೆಯರ ಅಪೇಕ್ಷೆಗೆ ಮಣಿದು ಲೋಕಾಂತದ ಕಾವಿನಲ್ಲಿ ಹೊರಹೊಮ್ಮಿದ ಸಾಲುಗಳನ್ನು ಸಹೃದಯರ ಮುಂದಿಟ್ಟಿದ್ದೇನೆ.
ಕನ್ನಡ ಕಾವ್ಯಲೋಕದ ಓದಿನ ಪರಿಣಾಮದಿಂದ ಸ್ಫೂರ್ತಿ ಪಡೆದೇ ಇಲ್ಲಿನ ರಚನೆಗಳು ಹೊರಹೊಮ್ಮಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಜೊತೆಗೆ ಜೀವನಾನುಭವದ ಅನೇಕ ಸಂದರ್ಭಗಳಲ್ಲಿ ನನ್ನ ಭಾವಕೋಶವನ್ನು ತುಂಬಿಸಿವೆ. ಅವುಗಳು ನಾನು ಹುಟ್ಟಿ ಬೆಳೆದ ಪರಿಸರದಿಂದ ಹಿಡಿದು ನನ್ನ ಕೌಟುಂಬಿಕ ಹಾಗೂ ವೃತ್ತಿ ಬದುಕಿನ ಪರಿಸರದವರೆಗೆ ವಿಸ್ತರಿಸಿರಬಹುದು. ೧೯೮೪ರಿಂದ ೨೦೧೮ರ ಸುದೀರ್ಘ ಅವಧಿಯಲ್ಲಿ ಬರೆದ ಕವನಗಳಲ್ಲಿ ಅರವತ್ತೊಂದು ಕವಿತೆಗಳನ್ನು ಮಾತ್ರ ಆಯ್ದುಕೊಂಡಿದ್ದು, ಅವುಗಳು ವಸ್ತು ಮತ್ತು ರಚನೆಯ ದೃಷ್ಟಿಯಿಂದಲೂ ವಿಭಿನ್ನವಾಗಿವೆ. ಪಠ್ಯವೊಂದರ ಸ್ವಗತ ಎನ್ನುವುದು ಭಾಷಾಂತರಕ್ಕೆ ಸಂಬಂಧಿಸಿದಂತೆ ನಮ್ಮ ಆಲೋಚನೆಗಳಿಗೆ ನೀಡಿದ ಕಾವ್ಯಾಭಿವ್ಯಕ್ತಿ. ವಸ್ತುವಿನ ದೃಷ್ಟಿಯಿಂದ ಕವಿತೆಗೆ ಇದು ವಿಶಿಷ್ಟವಾದುದೇ -ಮಿತ್ರರ ಅನಿಸಿಕೆಯೂ ಹೌದು- ಇರಬಹುದು.
ಕಾಲದ ಕೂಸು ಮುಂಬೈ ದಾಳಿಯಲ್ಲಿ ಭಾಗಿಯಾದ ಉಗ್ರ ಕಸಬ್ನನ್ನು ೨೦೧೨ ನವೆಂಬರ್ ೨೧ರಂದು ಗಲ್ಲಿಗೇರಿಸಿದಾಗ, ಹದ್ದು ಮೀರಿದ ಹಾದಿ ಮಂಗಳೂರಿನಲ್ಲಿ ಪಬ್ ದಾಳಿಯಾದಾಗ, ಕನ್ನಡದ ಸಿರಿ ಕಂಬಾರರಿಗೆ ಜ್ಞಾನಪೀಠ ದೊರೆತಾಗ ಇತ್ಯಾದಿ ಸಂದರ್ಭಗಳಲ್ಲಿ ಮೂಡಿದವುಗಳು. ಕೇರಳದಲ್ಲಿ ಪ್ರವಾಹ ಬಂದು ಹಾನಿಯಾದಾಗ ಬರೆದವುಗಳು. ಪ್ರಳಯ ಕೇರಳ, ಮಹಾಬಲಿ ಕೇರಳ ದರ್ಶನ. ಕೇರಳವನ್ನಾಳಿದ ಮಹಾಬಲಿಯು ಓಣಂ ಸಂದರ್ಭದಲ್ಲಿ ನಾಡಿಗೆ ಬಂದು ಜನರ ಸುಖ ಸಮೃದ್ಧಿಯನ್ನು ನೋಡಿ ಸಂತೋಷಗೊಂಡು ಮರಳುವನೆಂಬುದು ಮಿತ್. ೨೦೧೮ರಲ್ಲಿ ಪ್ರವಾಹದ ಕಾರಣಕ್ಕೆ ಕೇರಳದಲ್ಲಿ ಓಣಂ ಹಬ್ಬ ಆಚರಿಸಲಿಲ್ಲ. ಆಗ ಮೂಡಿಬಂದ ಕವಿತೆಯಿದು.
ಇಲ್ಲಿನ ಎರಡು ಕಥನ ಕವನಗಳು ನಾನು ಕೇಳಿದ ಜನಪದ ಕತೆಯನ್ನಾಧರಿಸಿದ್ದು. ಚೆಲುವ ಚಂದ್ರಾಮ ಎಂಬ ಕಥನ ಕವನವು ನನಗೆ ದೊರೆತ ಕತೆಯಲ್ಲಿ ದುರಂತ ದಲ್ಲಿಯೇ ಕೊನೆಯಾಗುತ್ತದೆ. ಮಾದೇವಿ ತನ್ನ ಪ್ರಿಯಕರಿನಿಗಾಗಿ ಗಂಡ ಹಾಗು ಮಗುವನ್ನು ಕೊಂದು ಸಂತೋಷಪಡುವಲ್ಲಿಗೆ ಕತೆ ಮುಕ್ತಾಯವಾಗುತ್ತದೆ. ಮಗುವನ್ನು ಕೊಲ್ಲುವ ತಾಯಿಯನ್ನು ನೆರೆಮನೆಯ ಮಕ್ಕಳು ತಡೆಯುವ ಕಥಾಭಾಗ ಅಮ್ಮನ ನಿರೂಪಣೆಯ ಪರಿಣಾಮದಿಂದ ಚಿಕ್ಕಂದಿನಲ್ಲಿಯೂ ನನ್ನ ಭಾವಕೋಶವನ್ನು ತುಂಬಿ ನಿಂತಿತ್ತು. ಬಾಲ್ಯದಲ್ಲಿ ಅಮ್ಮ ಹೇಳುತ್ತಿದ್ದ ಆ ಕತೆಯನ್ನು ಮತ್ತೆ ಮತ್ತೆ ಕೇಳಿದಾಗೆಲ್ಲ ಹತ್ಯೆಯ ಬಗೆಗೆ ಮನಸ್ಸು ಆರ್ದ್ರಗೊಳ್ಳುತ್ತಿತ್ತು. ಅದೇ ಕತೆಯನ್ನು ನಾನು ನನ್ನದೇ ಧಾಟಿಯಲ್ಲಿ ಕಾವ್ಯವಾಗಿಸಿದೆ. ಇಲ್ಲಿನ ಕತೆಗಳು ಮಾತ್ರ ಜನಪದದ ಸನ್ನಿವೇಶ, ಕಥಾಪಾತ್ರಗಳು ಎಲ್ಲವೂ ಭಾವಲೋಕದಲ್ಲಿ ಗಟ್ಟಿಯಾಗಿ ನನ್ನ ಕಲ್ಪನೆಯಲ್ಲಿ ಮೂಡಿ ಕಾವ್ಯಾಭಿವ್ಯಕ್ತಿಯಲ್ಲಿ ಅನಾವರಣಗೊಂಡಿವೆ. ಕೊನೆಯ ಭಾಗ ಅಂದರೆ ಗಂಡ ಮತ್ತು ಮಗುವಿನ ಸಾವಿನ ಬಳಿಕ ಮಾದೇವಿ ಚಂದ್ರಾಮನನ್ನು ಕರೆತರಲು ಹೋಗಿ ಆತ ಸಿಗದೇ ಇದ್ದಾಗ ಆಕೆಗೆ ತಪ್ಪಿನ ಅರಿವಾಗಿ ಪಶ್ಚಾತ್ತಾಪಪಡುವ ವಿವರಗಳನ್ನು ನಾನೇ ವಿಸ್ತರಿಸಿದ್ದೇನೆ. ಈ ಕತೆ ನಮ್ಮ ಪರಂಪರೆಯಲ್ಲಿ ಸ್ವಲ್ಪ ವಿಶಿಷ್ಟವಾದುದು ಎಂದೆನಿಸುತ್ತದೆ. ಹೇಗಾದರೂ ಮಾಡಿ ತನ್ನ ಶೀಲವನ್ನು ಉಳಿಸಿಕೊಳ್ಳಲು ಪ್ರಾಣತ್ಯಾಗ ಮಾಡುವ ಮಹಿಳೆಯರ ನಡುವೆ ವಿಭಿನ್ನವಾಗಿದೆ. ಪ್ರಿಯತಮನಿಗಾಗಿ ಗಂಡ, ಮಕ್ಕಳನ್ನು ಕೊಲ್ಲುವ ಆಧುನಿಕ ದಿನಗಳ ಘಟನೆಗಳನ್ನು ನೆನಪಿಸುವಂತಿರುವ ಜನಪದ ಮೂಲದ ಈ ಕತೆ ವಿಶಿಷ್ಟವಾದುದು. ಏನೇ ಆದರೂ ಹೆಣ್ಣೊಬ್ಬಳ ಮನಸ್ಥಿತಿಯು ಅನಾವರಣಗೊಳ್ಳುವ ಕಥನವಿದು.
ಪರೆಯರ ಕುವರಿ ಶೀಲವನ್ನು ಉಳಿಸಿಕೊಳ್ಳುವ ಸಲುವಾಗಿ ಉಪಾಯದಿಂದ ಪ್ರಾಣತ್ಯಾಗ ಮಾಡುವ ಹೆಣ್ಣಿನ ಕಥನವಿದೆ. ಈ ಎರಡೂ ಕತೆಗಳು ದುರಂತದಲ್ಲಿಯೇ ಕೊನೆಯಾಗುತ್ತದೆ ಎಂಬ ಕಾರಣಕ್ಕೆ ನನಗೆ ಹೃದ್ಯವೆನಿಸುತ್ತವೆ. ಕಾವ್ಯವಾಗಿ ಆಸ್ವಾದನೆಗೆ ಎಷ್ಟರ ಮಟ್ಟಿಗೆ ನಿಲುಕುತ್ತದೆ ಎಂಬುದನ್ನು ಸಹೃದಯರು ಹೇಳಬೇಕು. ಭಾವ, ಭಾಷೆಗಳ ಮಿಲನ ಯಾವುದೋ ಒಂದು ಹೊತ್ತಿನ ರಚನೆಯಾಗಿ ಈ ಕಥನ ರೂಪುಗೊಂಡಿದೆ. ಆದರೆ ಇವೆರಡೂ ಬೇರೆ ಬೇರೆ ಸಂದರ್ಭಗಳಲ್ಲಿ ಸುಮಾರು ೧೯೯೪-೯೫ರ ಅವಧಿಯಲ್ಲಿ ಬರೆದವುಗಳು.
ಆಧುನಿಕ ಕನ್ನಡ ಕಾವ್ಯಲೋಕದಲ್ಲಿ ಎಷ್ಟೋ ಹೊಸ ಕವನಗಳ ಪ್ರಯೋಗಗಳು ಕಾಣಿಸಿಕೊಂಡರೂ ಕಾವ್ಯ ಜಗತ್ತನ್ನು ಆತ್ಮೀಯವಾಗಿಸುವಲ್ಲಿ ನಾಡಿನ ಹಿರಿಯ ಕವಿಗಳ ರಚನೆಗಳು ಮನದಾಳದಲ್ಲಿ ಮರುಜೀವ ಪಡೆಯುತ್ತವೆ. ಕುವೆಂಪು ಅವರ ಭಾಷೆ, ಬೇಂದ್ರೆಯವರ ಜಾನಪದ ಲಯ, ಕಂಬಾರರ ದೇಸಿ, ಕೆ.ಎಸ್.ನ ಅವರ ಸರಳತೆ, ಲಕ್ಷ್ಮಣರಾವ್ ಅವರ ನರ್ಮಬೋಧೆ ಇತ್ಯಾದಿಗಳು ಕನ್ನಡ ಕಾವ್ಯವನ್ನು ಜೀವಂತಗೊಳಿಸಿವೆ ಎಂದು ನಾನು ಭಾವಿಸಿದ್ದೇನೆ. ಕವಿತೆಗಳು ಪ್ರಗತಿಪರ ವಿಚಾರಗಳನ್ನು ಪ್ರತಿಪಾದಿಸಬೇಕು. ಸಾಮಾಜಿಕ ಪ್ರಜ್ಞೆಯನ್ನು ಪ್ರಕಟಿಸಬೇಕು ಎಂಬಿತ್ಯಾದಿ ಧೋರಣೆಗಳನ್ನು ಮೀರಿಯೂ ಕವಿತೆಗಳು ಹೃದ್ಯವಾಗುವುದು ಈ ಮೇಲಿನ ಗುಣಗಳ ಕಾರಣದಿಂದಲೇ ಇರಬೇಕು. ಕವಿಗಳು ಸಮಾಜದ ಒಳಗಿದ್ದೆ ಕವನಗಳಿಗೆ ಜೀವ ತುಂಬಿರುತ್ತಾರೆ. ಸಮಾಜದ ಒಳ ಬೇಗುದಿಗಳಿಗೆ ಬೆಳಕಾಗುತ್ತಾರೆ. ಸಹೃದಯರನ್ನು ನೇರವಾಗಿ ಸಮಾಜದ ಸಮಸ್ಯೆಗಳತ್ತ ತಳ್ಳಬೇಕೆಂದೇನೂ ಇಲ್ಲ. ಸಮಾಜದ ಸಂವೇದನೆಗಳು ಅಭಿವ್ಯಕ್ತಗೊಳ್ಳುವಾಗ ಆತ್ಮೀಯವಾಗಿ ಸೆಳೆದು ಬುದ್ಧಿ, ಭಾವಗಳನ್ನು ಸ್ಪರ್ಶಿಸುವ ಗುಣವನ್ನು ಹೊಂದಿರುವುದು ಮುಖ್ಯ.
ಈ ಗುಣಗಳಿಂದಾಗಿಯೇ ಅನೇಕ ಕವಿತೆಗಳು ಕಾಲಾತೀತವಾಗಿ ಸಹೃದಯರನ್ನು ಸೆಳೆಯುತ್ತವೆ. ಒಂದು ಹೊತ್ತಿನ ಹೃದಯ ತಾದಾತ್ಮ್ಯಕ್ಕೆ ಪಕ್ಕಾಗುವಂತೆ ಮಾಡುವಲ್ಲಿ ಕವಿತೆಗಳು ಯಶಸ್ವಿಯಾಗಬೇಕು. ಆಗ ಮಾತ್ರ ಅದಕ್ಕೆ ಸಾರ್ಥಕತೆ ಒದಗುತ್ತದೆ. ಅದಲ್ಲದೆ ಹೋದರೆ ಕವಿತೆ ಬರೆ ಅಕ್ಷರಗಳನ್ನು ಪೋಣಿಸಿದ ಶುಷ್ಕ ಬರಹವಾಗಿ ಮಾತ್ರ ಉಳಿದೀತು. ಕಾವ್ಯದ ಬಗೆಗಿನ ನನ್ನ ನಿಲುವನ್ನು ಪ್ರಕಟಿಸಲು ಇಲ್ಲಿನ ರಚನೆಗಳು ಯಶಸ್ವಿಯಾಗಿವೆ ಎಂದೇನು ಅಲ್ಲ. ಆ ಪ್ರಯತ್ನದ ಹಾದಿಯಲ್ಲಿವೆ ಎಂದು ಮಾತ್ರ ಹೇಳಬಲ್ಲೆ.
ಮೋಹನ ಕುಂಟಾರ್
ಪುಟ ತೆರೆದಂತೆ…
ಕವಿ-ಕವಿತೆ / ೩೧
ಕವಿತೆಯ ಹುಟ್ಟು / ೩೨
ಪಠ್ಯವೊಂದರ ಸ್ವಗತ / ೩೪
ಹದ್ದು ಮೀರಿದ ಹಾದಿ / ೩೬
ಆಡು(ವ) ನಾಯಕ / ೩೮
ಕವಿಶೈಲದಲ್ಲಿ ಬೆಳಗು / ೪೦
ಪ್ರೀ ಓನ್ಡ್ ಕಾರುಗಳು / ೪೨
ಗಡಿಯಾರದಲ್ಲಿ / ೪೪
ಕವಿ ಕುವೆಂಪು / ೪೬
ಹಂಪಿ / ೪೭
ಮಳೆ / ೪೯
ನೋಯ್ಡಾದ ಬೀದಿಗಳು / ೫೧
ಗಗನ ಸಖಿಯರು / ೫೩
ಸೂರ್ಯ / ೫೫
ಪುರುಷೋತ್ತಮ / ೫೬
ಹಂಪಿಯ ಬಂಡೆಗಳು / ೫೮
ಎದೆಯ ಹಾಡು / ೫೯
ಸುಂಟರಗಾಳಿ / ೬೦
ಐಕ್ಯಗೀತೆ / ೬೧
ಭಾಷಾ ಬಾಂಧವ್ಯ / ೬೩
ಕನ್ನಡ / ೬೪
ಕೋಟೆ ಕಾವಲು / ೬೫
ಇರುವೆ ಬೇಡಿದ ವರ / ೬೬
ಶಾಕುಂತಳೆ / ೬೭
ಪ್ರೀತಿ / ೬೯
ಕೇರಳ / ೭೦
ದೀಪ / ೭೨
ವ್ಯತಿರಿಕ್ತ / ೭೩
ಸ್ವಗತ / ೭೪
ಪ್ರಾಕೃತ ನೀತಿ / ೭೫
ಮಗನಿಗೆ ಕಿವಿಮಾತು / ೭೭
ನಗರದ ಬದುಕು / ೭೯
ಬಹತ್ತರ ಮುದುಕ / ೮೦
ಡಾವರ / ೮೨
ಸಿಂಧೂರ ಚೆಲುವೆ / ೮೪
ಮೌನ ಮತ್ತು ಮಾತು / ೮೬
ಮಾತು-ಜ್ಯೋತಿ / ೮೭
ನೆರಳು / ೮೮
ಕೆಂಪು ಕೇರಳ / ೮೯
ಕನ್ನಡದ ಸಿರಿ / ೯೧
ತೋರಿಕೆ / ೯೨
ಆಪರೇಷನ್ ಥಿಯೇಟರ್ ಮುಂದೆ / ೯೩
ವಿಮಾನ / ೯೪
ಯಕ್ಷಗಾನ / ೯೫
ಕಾಲದ ಕೂಸು / ೯೬
ಬಾಲ್ಯ / ೯೮
ಸಿಟ್ಟು / ೯೯
ನಿಷಿದ್ಧ / ೧೦೦
ಸುಖ / ೧೦೧
ಇಷ್ಟ / ೧೦೨
ನಂಬಿಕೆ / ೧೦೪
ದುರ್ನೆಲೆ / ೧೦೫
ವಿಸ್ಮಯ / ೧೦೭
ಕ್ರಾಂತಿ / ೧೦೮
ಹಾಸಿಗೆ / ೧೦೯
ಪ್ರಳಯ ಕೇರಳ / ೧೧೦
ಪ್ರಣಯದಾಟ / ೧೧೨
ಕೋಟಿ ಪುಣ್ಯದ ಕತೆ / ೧೧೪
ಮಹಾಬಲಿ ಕೇರಳ ದರ್ಶನ / ೧೧೮
ಚೆಲುವ ಚಂದ್ರಾಮ / ೧೨೧
ಪರೆಯರ ಕುವರಿ / ೧೨೯
Reviews
There are no reviews yet.