ಬರವಣಿಗೆಯ ಪ್ರೇರಣೆ
ಆತ್ಮಚರಿತ್ರೆಯ ಈ ಸಂಪುಟವನ್ನು ಬರೆಯುವ ಬಗ್ಗೆ ನನಗೂ ಮೊದಮೊದಲು ಸ್ಪಷ್ಟತೆಯಿರಲಿಲ್ಲ. ಬರವಣಿಗೆಗೆ ತೊಡಗಿದಾಗಲೇ ಸ್ಪಷ್ಟತೆ ಬಂದದ್ದು, ಇದು ಕೂಡ ಬರೆಯಬೇಕಾದ ಪುಸ್ತಕವೇ ಎಂದು ಅನಿಸಿದ್ದು.
ಮೊದಲ ನಾಲ್ಕು ಸಂಪುಟಗಳು ನಿರ್ದಿಷ್ಟ ಪರಿಕಲ್ಪನೆ, ಅನುಭವವಲಯ, ನೆನಪುಗಳ ವಿನ್ಯಾಸವನ್ನು ಆಧರಿಸಿದ್ದು. ಇದು ಹಾಗಲ್ಲ!
ಸಾಹಿತ್ಯಿಕ ಆತ್ಮಚರಿತ್ರೆಯನ್ನು ಕೂಡ ಒಂದು ಸಂಪುಟದಲ್ಲಿ ಬರೆಯಿರಿ ಎಂದು ರವಿಕುಮಾರ್ ಒತ್ತಾಯಿಸುತ್ತಲೇ ಇದ್ದರು. ಇದಕ್ಕೆ ಕಾಲ ಪಕ್ವವಾಗಿಲ್ಲ, ಸಾಹಿತ್ಯಿಕ ಆತ್ಮಚರಿತ್ರೆಯನ್ನು ಬರೆಯುವಷ್ಟು ನಾನು ದೊಡ್ಡವನಲ್ಲ. ನಾನು” ಎಂದು ಪುಟಗಟ್ಟಲೆ ಬರೆಯಬೇಕಾದರೆ ಒಂದು ಸ್ತರದ ಸಾರ್ವಜನಿಕ ವ್ಯಕ್ತಿತ್ವ, ಸಿದ್ಧ ಓದುಗವಲಯ, ಸಾಕಷ್ಟು ಜನಪ್ರಿಯತೆ ಇರ ಬೇಕಾಗುತ್ತದೆ. ಹಾಗಾಗಿ ಬೇಡ ಎಂದು ಹೇಳುತ್ತಲೇ ಬಂದಿದ್ದೆ.
ಯಾವ ಸ್ವರೂಪದಲ್ಲಿ ಬರೆಯಬೇಕು ಎಂಬ ಪ್ರಶ್ನೆ ಕಾಡಲು ಪ್ರಾರಂಭಿಸಿತು. ಕಳೆದ ನಾಲ್ಕು ದಶಕಗಳಲ್ಲಿ ನನ್ನ ಸಂಪರ್ಕಕ್ಕೆ ಬಂದ ಸಾಹಿತಿಗಳ ಬಗ್ಗೆ ಬರೆಯುವುದರಿಂದ ವಿಶೇಷ ಪ್ರಯೋಜನವೇನೂ ಆಗುವುದಿಲ್ಲ -ನನಗೂ, ಓದುಗರಿಗೂ. ಎಲ್ಲ ಮನುಷ್ಯರಿಗಿರುವಂತೆ, ಇರುವಷ್ಟೇ ಸಾಹಿತಿಗಳಿಗೂ ದೌರ್ಬಲ್ಯ, ಕಾಮನೆಗಳಿರುತ್ತವೆ, ತಪ್ಪೇನಿಲ್ಲ. ಆದರೆ ಸಾಹಿತಿಗಳು ದೊಡ್ಡ ದೊಡ್ಡ ಆದರ್ಶದ ಮಾತುಗಳನ್ನು ಆಡುವುದರಿಂದ, ಬರೆಯುವುದರಿಂದ ಮಾತು, ಕೃತಿ, ಬರವಣಿಗೆಯ ನಡುವೆ ವಿರೋಧಾಭಾಸ ಎದ್ದು ಕಾಣುತ್ತದೆ. ಅಲ್ಲದೆ, ನಮ್ಮ ಸಂಪರ್ಕಕ್ಕೆ ಬರುವ ಸಾಹಿತಿಗಳ ಸಣ್ಣತನ, ಮಿತಿಗಳು ನಮಗೆ ದೊಡ್ಡದಾಗಿ ಕಾಣುತ್ತವೆ. ಸಂಪರ್ಕಕ್ಕೆ ಬಾರದವರು ದೂರದಿಂದ ಚೆನ್ನಾಗಿಯೇ ಕಾಣುತ್ತಾರೆ. ಹಾಗಾಗಿ, ಬರವಣಿಗೆಯಲ್ಲಿ ಸಾಹಿತಿಗಳ ಬಗ್ಗೆ ಬರೆಯಲು ಹೊರಟರೆ, ಸಮತೋಲನ, ವಸ್ತುನಿಷ್ಠತೆ ಇರುವುದಿಲ್ಲ. ಇದನ್ನೆಲ್ಲ ಮನಸ್ಸಿನಲ್ಲಿ ಇಟ್ಟುಕೊಂಡು ಊರಿನಲ್ಲಿರುವ ಸಕಲ ಸಾಹಿತಿಗಳ ಪರಿಚಯ ಮಾಡಿಕೊಂಡು ಗುಣಾವಲೋಕನ ಮಾಡುವುದು ಕೂಡ ಮೂರ್ಖತನವಾಗುತ್ತದೆ. ಪ್ರಶಸ್ತಿ ಪುರಸ್ಕಾರಗಳ ಸುತ್ತ ಬರೆದರೂ ಇದೇ ಸಮಸ್ಯೆ.
ಹಾಗೆಂದು ನನ್ನ ಬಗ್ಗೆ ನಾನು ಬರೆದುಕೊಳ್ಳುವುದು ಕೂಡ ಸರಿಯಾಗಲಾರದು. ನನ್ನ ಬಗ್ಗೆ ಬರೆದುಕೊಳ್ಳಲು ನಾನು ಸರಿಯಾದ ಅಭ್ಯರ್ಥಿಯಲ್ಲ.
ನನಗೆ ಉಳಿದದ್ದು ಒಂದೇ ದಾರಿ, ನನ್ನ ಪುಸ್ತಕಗಳ ಬಗ್ಗೆ ಬರೆಯುವುದು, ಬರವಣಿಗೆಯ ಪ್ರೇರಣೆಗಳನ್ನು ಹುಡುಕುವುದು, ಅರ್ಥಮಾಡಿಕೊಂಡು ಓದುಗರಿಗೆ ನಿವೇದಿಸುವುದು. ಕೃತಿ, ಪ್ರಯೋಗ, ಪ್ರಕಟಣೆಯ ಸಂದರ್ಭಗಳನ್ನು ಹೇಳುವುದು. ಪ್ರತಿ ಪುಸ್ತಕ ಬರೆಯುವಾಗಲೂ ಇರುವ ಉತ್ಸಾಹ, ಆಸೆ, ಹಿಂಜರಿಕೆ, ಗೊಂದಲ, ಓದುಗರ ಪ್ರೀತಿ, ಸ್ಪಂದನದಿಂದ ಸಿಗುವ ಖುಷಿ, ಆಪ್ತವಲಯದ ಓದುಗರು ನೀಡುವ ಪ್ರೋತ್ಸಾಹ, ಕೆಲವು ಸಂದರ್ಭಗಳಲ್ಲಿ ಎದುರಿಸಬೇಕಾಗಿ ಬರುವ ಸಣ್ಣತನ, ಕ್ಷುದ್ರತೆ, ಇವೆಲ್ಲವೂ ಲೇಖಕರನ್ನು ಹಿಗ್ಗಿಸುವ, ಕುಗ್ಗಿಸುವ ರೀತಿ, ಇವುಗಳ ಬಗ್ಗೆ ಬರೆಯುವುದು ಓದುಗರಿಗೆ ಇಷ್ಟವಾಗಬಹುದು, ಬರವಣಿಗೆಯ ಲೋಕಕ್ಕೆ ಪ್ರವೇಶಿಸುವವರಿಗೂ ನೆರವಾಗಬಹುದು. ಪ್ರತಿಯೊಂದು ಪುಸ್ತಕದ ಸಂದರ್ಭ, ಇತಿಹಾಸ, ಯಶಸ್ಸು, ಎಲ್ಲವೂ ವಿಶಿಷ್ಟ. ಹೀಗಾಗಿ, ನಮ್ಮ ಸಾಹಿತ್ಯಲೋಕದ ಸಮಕಾಲೀನ ಚರಿತ್ರೆಯ ಒಂದು ಪುಟ್ಟ ಭಾಗವೂ ಇಲ್ಲಿ ಸಿಗಬಹುದು.
ಕತೆ, ಕಾದಂಬರಿ, ಪ್ರಬಂಧ, ಆತ್ಮಚರಿತ್ರೆ, ವಿಮರ್ಶೆ, ಅಂಕಣ ಹೀಗೆ ಎಲ್ಲ ಪ್ರಕಾರಗಳಲ್ಲೂ ನಾನು ನನ್ನ ಮನಸ್ಸಿಗೆ ಬಂದಂತೆ, ಆದರೆ ನನಗೇ ನಿಜವೆನ್ನಿಸಿದಂತೆ ಪ್ರಯೋಗಶೀಲವಾಗಿಯೇ ಬರೆದಿದ್ದೇನೆ. ಸೃಜನಶೀಲವಾಗುವುದೆಂದರೆ, ಪ್ರಯೋಗಶೀಲವಾಗುವುದು. ಪ್ರಯೋಗಶೀಲತೆ ಬೇರೆಯಲ್ಲ, ಸೃಜನಶೀಲತೆ ಬೇರೆಯಲ್ಲ. ಪ್ರತಿಯೊಂದು ಕೃತಿ ಬರೆದಾಗಲೂ ನನ್ನ ಈ ನಂಬಿಕೆ ಗಟ್ಟಿಯಾಗಿದೆ. ಹಾಗೆ ಗಟ್ಟಿಯಾಗುವಂತೆ ಓದುಗರು ನನ್ನನ್ನು ಸ್ವೀಕರಿಸಿದ್ದಾರೆ, ಬೆಳೆಸಿದ್ದಾರೆ. ಇದೆಲ್ಲದರ ಒಳಪ್ರಪಂಚವನ್ನು ಓದುಗರಿಗೆ ನಿವೇದಿಸದೆ ಹೋದರೆ, ನನಗೇ ನಾನು ವಂಚನೆ ಮಾಡಿಕೊಂಡಂತೆ, ಓದುಗರಿಂದ ಕೂಡ ನನ್ನ ಒಳಗನ್ನು ಮುಚ್ಚಿಟ್ಟುಕೊಂಡಂತೆ. ಈ ಋಣ ಸಂದಾಯಕ್ಕಾದರೂ ಬರೆಯಬೇಕು.
ಏಕೆ ಒಂದೇ ಪ್ರಕಾರದಲ್ಲಿ ಮಾತ್ರ ಬರೆಯಬೇಕು ಅನಿಸುವುದಿಲ್ಲ? ಒಂದೇ ಪ್ರಕಾರದಲ್ಲಿ ಬರೆಯುವಾಗಲೂ ಬೇರೆ ಬೇರೆ ವಿನ್ಯಾಸಗಳನ್ನು ನಾವು ಏಕೆ ಹುಡುಕುತ್ತೇವೆ? ಪ್ರಯೋಗಶೀಲತೆ ಯೆಂದರೆ, ಹೊಸ ಅನುಭವ ವಲಯಗಳ, ಆಕೃತಿಗಳ, ವಿನ್ಯಾಸಗಳ ಹುಡುಕಾಟ. ಬಯಸಿದರೆ ಸಿಗುವಂತದ್ದಲ್ಲ. ಸಿಕ್ಕರೂ ನಾವು ಬಯಸಿದಂತಿರುವುದಿಲ್ಲ. ಇದರ ಬಗ್ಗೆ ಸ್ಥೂಲವಾಗಿ ಮಾತನಾಡುವುದು ಬೇರೆ, ಕೃತಿಯ ಸಂದರ್ಭದಲ್ಲಿ ನಿವೇದಿಸುವುದು ಬೇರೆ. ಈ ಶೋಧದ ಫಲಿತಗಳೆಲ್ಲ ಕೃತಿಯೊಳಗೇ ಅಂತರ್ಗತವಾಗಿರುತ್ತವೆ ಎಂಬುದು ನಿಜ. ಆದರೆ, ಹಿನ್ನೋಟ ದಿಂದಲಾದರೂ ಆತ್ಮಸಾಕ್ಷಿಯ ನೆಲೆಯಲ್ಲಿ ನೋಡಿಕೊಳ್ಳಬಹುದಲ್ಲ. ಅಂತಹ ಒಂದು ಪ್ರಯತ್ನ ಇಲ್ಲಿದೆ.
ಜೊತೆಗೆ ಹಲವು ಪ್ರಕಾರಗಳಲ್ಲಿ ಬರೆಯುವುದರಿಂದ ಲೇಖಕರಿಗೆ ಕೆಲವು ಅನುಕೂಲಗಳಿರುತ್ತವೆ. ಹಾಗೆಯೇ ತೊಂದರೆಗಳೂ ಇರುತ್ತವೆ. ಬೇರೆಬೇರೆ ಪ್ರಕಾರಗಳಲ್ಲಿ ಹೀಗೆ ನಿರಂತರವಾಗಿ ಬರೆಯದೆ ಹೋಗಿದ್ದರೆ, ನನಗೆ ಇಷ್ಟೊಂದು ಓದುಗವರ್ಗ ನಿರ್ಮಾಣವಾಗುತ್ತಿತ್ತೇ ಎಂಬುದೊಂದು ಅನುಮಾನ. ಈ ಅನುಮಾನದ ಬೇರೆಬೇರೆ ಪದರುಗಳನ್ನು ಓದುಗರೊಡನೆ ಅಲ್ಲದೆ ಇನ್ನೆಲ್ಲಿ ಹಂಚಿಕೊಳ್ಳಲಿ?
ಇಲ್ಲಿ ಹೆಸರುಗಳನ್ನು ಪ್ರಸ್ತಾಪಿಸುವಾಗ ನಾನೇ ಕೆಲವು ನಿಯಮಗಳನ್ನು ಹಾಕಿಕೊಂಡಿದ್ದೇನೆ. ಮನುಷ್ಯರ ಒಳ್ಳೆಯತನ, ಉದಾತ್ತತೆ, ಇನ್ನೊಬ್ಬರಿಗೆ ನೆರವಾಗುವ ಮನೋಭಾವದ ಪ್ರಸ್ತಾಪ ಬಂದಾಗಲೆಲ್ಲ ಉತ್ಸಾಹದಿಂದ ಹೆಸರುಗಳನ್ನು ನಮೂದಿಸಿದ್ದೇನೆ. ಸಣ್ಣತನ, ದುರಾಸೆ, ವಿಕ್ಷಿಪ್ತತೆ ಬಗ್ಗೆ ಬರೆಯುವಾಗ ಹೆಸರುಗಳನ್ನು, ಸಂದರ್ಭಗಳನ್ನು ಕೈಬಿಟ್ಟಿದ್ದೇನೆ. ಆದರೆ ಸಾಹಿತಿಗಳ ಲೋಕವೇ ತುಂಬಾ ಸಣ್ಣ ಲೋಕವಾದ್ದರಿಂದ, ನಾನು ಯಾರ ಬಗ್ಗೆ ಬರೆಯುತ್ತಿದ್ದೇನೆ ಎಂದು ಓದುಗರಿಗೆ ಬೇಗ ಗೊತ್ತಾಗುತ್ತದೆ. ಊಹೆ ಮಾಡಬೇಕೆನಿಸಿದರೆ, ಅದಕ್ಕೆ ನಾನು ಅಡ್ಡಿಬರುವುದಿಲ್ಲ. ಬರವಣಿಗೆಯ ಮತ್ತು ನನ್ನ ಆತ್ಮಗೌರವದ ದೃಷ್ಟಿಯಿಂದ, ಇನ್ನೊಬ್ಬರಿಗೆ ನೋವಾದರೂ ಸರಿಯೇ ಕೆಲವು ಹೆಸರುಗಳನ್ನು ಹೇಳಲೇಬೇಕಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಹೆಸರುಗಳನ್ನು ಪ್ರಸ್ತಾಪಿಸಲು ಹಿಂಜರಿದಿಲ್ಲ. ಆದರೂ ಈ ಜಗತ್ತಿನಲ್ಲಿ ಪ್ರೀತಿಯೆಂಬುದು ಸಿಗುವುದು ಎಷ್ಟು ಕಷ್ಟ ಎಂಬುದು ಎಲ್ಲರಿಗೂ ತಡವಾಗಿ ಗೊತ್ತಾಗುವುದಷ್ಟೆ. ನಾನು ಕೂಡ ಈ ದುರಾದೃಷ್ಟ, ನೋವನ್ನು ಅನುಭವಿಸಿದವನೇ!
ಕೆಲವು ಆಪ್ತರ ಹೆಸರುಗಳು ಬರವಣಿಗೆಯ ಉದ್ದಕ್ಕೂ ಇರಬೇಕಿತ್ತು. ಬರವಣಿಗೆಯಲ್ಲಿ ಹಾಗೆ ಮಾಡಿದಾಗ ಅದು ಸರಿ ಹೋಗುವುದಿಲ್ಲ. ಅವರಿಗೂ ಮುಜುಗರವಾಗಬಹುದು. ಹಾಗಾಗಿ, ಒಂದು ಹಂತದ ನಂತರ ಅವರ ಹೆಸರನ್ನು ಪ್ರಸ್ತಾಪಿಸಿಲ್ಲ. ಒಮ್ಮೊಮ್ಮೆ ಋಣಸಂದಾಯ ಮಾಡಲು, ಕೃತಜ್ಞತೆ ಹೇಳಲು ಕೂಡ ಹಿಂಜರಿಯಬೇಕಾಗುತ್ತದೆ. ಇನ್ನು ಕೆಲವರು -ಒಂದು ಕಾಲದಲ್ಲಿ ಆಪ್ತವಾಗಿದ್ದವರು ಅಥವಾ ಹಾಗೆಂದು ಕಾಣಿಸಿಕೊಂಡವರು ಇಂಥವರಿಂದಲೂ ಪ್ರೀತಿ, ಪ್ರೋತ್ಸಾಹ ಸಿಕ್ಕಿದೆ. ನಂತರದ ದಿನಗಳಲ್ಲಿ ಇಂಥವರ ವ್ಯಕ್ತಿತ್ವದ ಮೂಲಸೆಲೆಯೇ ಸ್ವ-ಕೇಂದ್ರಿತ ಮತ್ತು ಮಿತ್ರದ್ರೋಹಿತ್ವ ಎಂದೆನಿಸಿದಾಗ, ಸಂಬಂಧಗಳು ಕಡಿದುಹೋಗಿವೆ. ಬರೆದರೆ ಎರಡೂ ನೆಲೆಗಳ ಬಗ್ಗೆ ಬರೆಯಬೇಕು. ಹೀಗೆ ಬರೆಯುವುದೇ ಒಂದು ಕಹಿ ಅನುಭವವಾಗುತ್ತದೆಂಬ ಕಾರಣಕ್ಕೆ, ನನಗೂ, ಓದುಗರಿಗೂ, ಅಂಥ ಗಣ್ಯರ” ಪ್ರಸ್ತಾಪವನ್ನು ಇಡಿಯಾಗಿ ಕೈಬಿಟ್ಟಿದ್ದೇನೆ.
ನೀವು ಎಷ್ಟೇ ಇಷ್ಟಪಡದೆ ಹೋದರೂ, ಆತ್ಮಚರಿತ್ರೆಯ ಬರವಣಿಗೆಯನ್ನು ಒಂದು ಕಾಲಾನುಕ್ರಮಣಿಕೆಯಲ್ಲೇ ಮಾಡಬೇಕಾಗುತ್ತದೆ. ಮೊದಲಿಂದಲೂ ಕಾಲಾನುಕ್ರಮಣಿಕೆಯ ಶಿಸ್ತಿಗೆ ನಾನು ಒಗ್ಗಿದವನಲ್ಲ. ಬದಲಿಗೆ ನಾನು ಪ್ರತಿ ಪ್ರಕಾರದಲ್ಲೂ ಕೃತಿಗಳನ್ನು ಪ್ರಕಟಿಸಿದ ಕ್ರಮವನ್ನು ಹಿನ್ನೆಲೆಯಾಗಿಟ್ಟುಕೊಂಡು ಬರೆದಿದ್ದೇನೆ.
ಜನವರಿ ೧೦, ೨೦೨೩ರ ಸುಮಾರಿನಲ್ಲಿ ಬರವಣಿಗೆ ಶುರುಮಾಡಿದ್ದು. ಮೂರು-ನಾಲ್ಕು ದಿನಗಳಲ್ಲೇ ಬರವಣಿಗೆ ನನ್ನನ್ನು ಹಿಡಿದುಕೊಂಡಿತು. ಬೇರೆ ಯಾವ ಕೆಲಸದಲ್ಲೂ, ಓದು ಬರಹದಲ್ಲೂ ಮನಸ್ಸನ್ನು ತೊಡಗಿಸುವುದು ಕಷ್ಟವಾಯಿತು. ಪರೀಕ್ಷೆಗೆಂಬಂತೆ, ಈ ಕಾಲಾವಧಿಯಲ್ಲೇ ಸಮಾರಂಭಗಳು, ಕೌಟುಂಬಿಕ ಕೆಲಸಕಾರ್ಯಗಳು, ಭಾಷಣದ ಅವಕಾಶ, ಬರೆದುಕೊಡಲೇ ಬೇಕಾದ ಅಭಿಪ್ರಾಯ, ಎಲ್ಲವೂ ಪ್ರತಿದಿನವೂ ಹೆಚ್ಚಾಗುತ್ತಾ ಹೋಯಿತು. ಇದೆಲ್ಲದರಿಂದ ಮೂಡಿದ ಒತ್ತಡ ಕೂಡ ಈ ಬರವಣಿಗೆಯ ಭಾಗ. ಓದುಗರಿಗೆ ಈ ರಗಳೆಯೆಲ್ಲ ಬೇಕಾಗುವುದಿಲ್ಲ. ಅವರಿಗೆ ಬೇಕಾದ್ದು ಉಲ್ಲಾಸವಾಗಿ ಓದಲು ಇನ್ನೊಂದು ಒಳ್ಳೆಯ ಪುಸ್ತಕ. ಈ ಪುಸ್ತಕ ಕೂಡ ಆ ರೀತಿಯದೇ ಎಂಬ ಭರವಸೆ ಕೊಡುತ್ತೇನೆ. ಈ ಪುಸ್ತಕದ ಮೂಲಕ ನಾನು ಓದುಗರನ್ನು ನನ್ನ ಕೃತಿಲೋಕದೊಳಕ್ಕೆ ಸ್ವಾಗತಿಸುತ್ತೇನೆ.
ಬಿಡಿಬರಹಗಳ ಅಕ್ಷರಾಭ್ಯಾಸ
ನನ್ನ ಬರವಣಿಗೆಯ ವಿವರಗಳನ್ನು ನೀಡುವಾಗ, ನಾನು ೧೯೮೮ರಿಂದಲೇ ಪ್ರಾರಂಭಿಸುತ್ತೇನೆ. ಈ ನಂತರ ಪ್ರಕಟವಾದ ಕೃತಿಗಳ ಬಗ್ಗೆ ನನಗಿರುವ ಆತ್ಮವಿಶ್ವಾಸವನ್ನು ಇದು ಸೂಚಿಸಬಹುದೇ ಹೊರತು ಸತ್ಯಕ್ಕೆ ಹತ್ತಿರವಾದ ಸಂಗತಿಯಲ್ಲ. ೧೯೮೮ಕ್ಕೂ ಏಳೆಂಟು ವರ್ಷ ಮುಂಚೆಯಾದರೂ ನಾನಾ ರೀತಿಯ ತಡಕಾಟ ಮತ್ತು ಕಿರುಪ್ರಯತ್ನ, ಅರೆಪ್ರಯತ್ನಗಳಲ್ಲಿ ನಾನು ತೊಡಗಿರಬಹುದು. ಬರವಣಿಗೆಯ ಬಗ್ಗೆ ಇರುವ ಹಿಂಜರಿಕೆ ಮತ್ತು ಭಯಕ್ಕಿಂತ ಹೆಚ್ಚಾಗಿ, ಬರವಣಿಗೆ ಕುರಿತು, ಬರಹಗಾರನಾಗುವುದನ್ನು ಕುರಿತು ಸ್ಪಷ್ಟತೆಯಿರಲಿಲ್ಲವೆಂದು ಕಾಣುತ್ತದೆ. ಗಾಂಧಿಬಜಾರಿನ ವಾಸದ ದೆಸೆಯಿಂದಾಗಿ, ರಘುನಾಥರ ಗೆಳೆತನದಿಂದಾಗಿ, ಕಿರಂ ನಾಗರಾಜ್, ಕೆ.ವಿ.ನಾರಾಯಣ್, ಎಚ್.ಎಸ್.ಆರ್., ಎಚ್.ಎಸ್.ವಿ., ಶ್ರೀನಿವಾಸರಾಜು ಇವರೆಲ್ಲರ ಪರಿಚಯವಾಯಿತು. ವಲಯವು ಸಣ್ಣದಾದ್ದರಿಂದ ಒಬ್ಬರ ಪರಿಚಯವಾದರೆ ಹೆಚ್ಚು ಕಡಿಮೆ ಎಲ್ಲರ ಪರಿಚಯವಾದ ಹಾಗೇ. ಎ.ಎನ್.ಸುದರ್ಶನರವರ ಮೂಲಕ ಕವಿ ಗೋಪಾಲಕೃಷ್ಣ ಅಡಿಗರ ಭೇಟಿಯಾಗಿತ್ತು. ನಮ್ಮ ರೂಮಿನ ಆಸುಪಾಸಿನಲ್ಲೇ ಸುಮತೀಂದ್ರ ನಾಡಿಗ್ ಅವರ ಮನೆಯೂ ಇತ್ತು. ಆನಂದರಾಮ ಉಪಾಧ್ಯರ ಮೂಲಕ ಎಚ್.ಎಸ್.ವಿ., ನರಹಳ್ಳಿ, ಮುನಿಧರ್ಮಯ್ಯ ಇವರೆಲ್ಲರ ಪರಿಚಯ ವಾಯಿತು.
ಕಿರಂ ಪರಿಚಯವಾದರೆ ಆಕರ್ಷಣೆ ತಪ್ಪಿಸಿಕೊಳ್ಳುವುದು ಕಷ್ಟ. ಹೆಚ್ಚಾಗಿ ಅವರೇ ಮತ್ತೆ ಮತ್ತೆ ಗಾಂಧಿಬಜಾರಿನ ಎಲ್ಲ ಭಾಗಗಳಲ್ಲೂ ಸಿಗುತ್ತಿದ್ದರು. ಬರೆಯುವಂತೆ ಅವರೇನು ಉತ್ಸಾಹ ತುಂಬುತ್ತಿರಲಿಲ್ಲ. ಓದಿಗೆ, ವಿಸ್ತಾರದ ಓದಿಗೆ ಸೂಚನೆಗಳನ್ನು ಕೊಡುತ್ತಿದ್ದರು. ಎಲ್ಲರ ಬಗ್ಗೆಯೂ ಅಭಿಪ್ರಾಯ ನೀಡುವ ವಯಸ್ಸು ನನ್ನದು. ಹೀಗೇ ಒಮ್ಮೆ ಹರಟುತ್ತಿದ್ದಾಗ, ಈಗ ಬರುತ್ತಿರುವ ಸಾಹಿತ್ಯಿಕ ಪತ್ರಿಕೆಗಳೆಲ್ಲದಕ್ಕಿಂತ ಚೆನ್ನಾಗಿ ಇನ್ನೊಂದು ಪತ್ರಿಕೆ ತರಬಹುದೆಂದು, ಅದಕ್ಕೆ ಗೆಳೆಯರೆಲ್ಲರ ಒತ್ತಾಸೆಯಿರುವುದೆಂದು ಹೇಳಿದಾಗ, ಕಿರಂ ಕೂಡ ಉತ್ಸಾಹ ತೋರಿದರು. ಮತ್ತೆಮತ್ತೆ ಉತ್ಸಾಹ ತೋರಿದರು. ಮೈಸೂರಿಗೆ ಕರೆದುಕೊಂಡು ಹೋಗಿ ಅನಂತಮೂರ್ತಿಯವರನ್ನು ಭೇಟಿ ಮಾಡಿಸಿದ್ದು ಕೂಡ ಅವರೇ. ಆವಾಗ ನಮ್ಮ ತಂದೆ-ತಾಯಿ ಮಂಡ್ಯದಲ್ಲೇ ಇದ್ದುದರಿಂದ, ಮೈಸೂರಿಗೆ ಹೋಗುವುದೆಂದರೆ ನನಗೆ ಎರಡು ಕೆಲಸವೂ ಆಗುತ್ತಿತ್ತು.
ಋಜುವಾತಿಗೆ ಬರೆದ ಮೂರು ನಾಲ್ಕು ಲೇಖನಗಳಲ್ಲಿ ನನಗೆ ತುಂಬಾ ಇಷ್ಟವಾದದ್ದು ಚಿತ್ತಾಲರ ಶಿಕಾರಿ” ಕುರಿತು ಬರೆದ ಲೇಖನ, ದಸ್ತೊವಸ್ಕಿ ಮೇಲೆ ಮಾಡಿದ ಟಿಪ್ಪಣಿಗಳು, ಗ್ಯಾಸೆ ಕೃತಿಯ ಪರಿಚಯ. ಇದಕ್ಕಿಂತ ಹೆಚ್ಚಾಗಿ ಶೂದ್ರ ಶ್ರೀನಿವಾಸರು ಶೂದ್ರ” ಪತ್ರಿಕೆಗೆ ಬರೆಯುವಂತೆ ಪ್ರೋತ್ಸಾಹಿಸುತ್ತಿದ್ದರು. ಹೆಚ್ಚಿನ ಲೇಖನಗಳು ಪ್ರಕಟವಾದದ್ದು ಕೂಡ ಅವರ ಪತ್ರಿಕೆಯಲ್ಲೇ. ಅದು ಸಾಹಿತ್ಯಿಕ ಕಿರುಪತ್ರಿಕೆಗಳ ಕಾಲ. ಪತ್ರಿಕೆಗಳು ಬೇರೆಬೇರೆ ಇದ್ದರೂ, ಎಲ್ಲ ಕಿರುಪತ್ರಿಕೆಗಳಿಗೂ ಬರೆಯುವವರು ಹೆಚ್ಚುಕಡಿಮೆ ಅವರವರೇ ಆಗಿದ್ದರು. ಒಂದು ಕಿರುಪತ್ರಿಕೆಯನ್ನು ಓದುವವರು ಎಲ್ಲ ಪತ್ರಿಕೆಗಳನ್ನೂ ಓದುತ್ತಿದ್ದರು. ಖಾಸಗಿ ಕಿರುಪತ್ರಿಕೆಗಳಲ್ಲದೆ ಬೆಂಗಳೂರು ವಿಶ್ವವಿದ್ಯಾಲಯದ ಸಾಧನೆ” ಕೂಡ ಈ ಕಿರುಪತ್ರಿಕೆಗಳ ಬಳಗಕ್ಕೇ ಸೇರಿತ್ತು. ಆ ಕೆಲ ವರ್ಷಗಳಲ್ಲಿ ನಾನು ಹೆಚ್ಚುಕಡಿಮೆ ಎಲ್ಲ ಕಿರುಪತ್ರಿಕೆಗಳಿಗೂ ಲೇಖನಗಳನ್ನು ಬರೆದೆ. ಇದರಿಂದ ಬರೆಯುವ ತರಬೇತಿ ಮತ್ತು ಶಿಸ್ತು ರೂಢಿಯಾಯಿತು ಎನ್ನುವುದಕ್ಕಿಂತ, ದಶಕಗಳ ಕಾಲ ಉಳಿಯುವಂತಹ ಮನುಷ್ಯ ಸಂಬಂಧಗಳು ಸಿಕ್ಕಿದವು. ಬದುಕಿನಲ್ಲಿ ಯಾರನ್ನು ಯಾರೂ ಆಕಸ್ಮಿಕವಾಗಿ ಭೇಟಿಯಾಗುವುದಿಲ್ಲ ಎಂಬ ಮಾತಿನಂತೆ, ನಾನು ೧೯೮೮ರ ನಂತರ ಬರವಣಿಗೆಯನ್ನು ಗಂಭೀರವಾಗಿ ತೆಗೆದುಕೊಳ್ಳಲು ಈ ಎಲ್ಲ ಒಡನಾಟಗಳು ಕಾರಣವಾಗಿರಬೇಕು. ಒಡನಾಟದ ದೆಸೆಯಿಂದಾಗಿಯೇ ವಿಶ್ವವಿದ್ಯಾಲಯದ ವಿಚಾರಸಂಕಿರಣವೊಂದರಲ್ಲಿ ಭಾಗಿಯಾಗುವ, ಅಕಾಡೆಮಿಯ ವಾರ್ಷಿಕ ವಿಮರ್ಶಾ ಸಂಕಲನಗಳಲ್ಲಿ ಲೇಖನ ಸೇರ್ಪಡೆಯಾಗುವ ಅವಕಾಶ, ಅದೃಷ್ಟವೂ ದಕ್ಕಿತು.
ಬಿಡಿಲೇಖನಗಳಲ್ಲದೆ ಆವಾಗ ಪುಸ್ತಕರೂಪದಲ್ಲಿ ಪ್ರಕಟಿಸಿದ್ದು ಒಂದೇ ಒಂದು ನಾಟಕ ಕ್ರಮ”. ಮುಂದೆ ನಾನು ನಾಟಕಗಳನ್ನು ಕೂಡ ಹೆಚ್ಚಾಗಿ ನೋಡಲಿಲ್ಲ, ಯಾವುದೇ ನಾಟಕಗಳ ಬಗ್ಗೆ ಬರೆಯಲಿಲ್ಲ ಎಂಬುದನ್ನು ಗಮನಿಸಿದಾಗ, ಆವಾಗ ನಾನು ನಾಟಕ ಬರೆದದ್ದು, ಅದರ ಪ್ರಕಟಣೆಗೆ ಓಡಾಡಿದ್ದು, ಅದರ ರಿವ್ಯೂ ಕೂಡ ಒಂದೆರಡು ಪತ್ರಿಕೆಗಳಲ್ಲಿ ಬಂದದ್ದನ್ನು ನೆನೆಸಿಕೊಂಡರೆ ಆಶ್ಚರ್ಯವಾಗುತ್ತದೆ. ಇದಕ್ಕೂ ಕೂಡ ಕೆ.ವಿ.ನಾರಾಯಣ್ ವಿವರವಾದ ಮುನ್ನುಡಿ ಬರೆದು ಕೊಟ್ಟಿದ್ದರು. ಅವರ ಗೆಳೆಯರ ಕೈಲಿ ಓದಿಸಿದ್ದರು. ಕಲಾಕ್ಷೇತ್ರದ ವಿರಾಮಶಾಲೆಯಲ್ಲಿ ನಡೆದ Pಟಚಿಥಿ ಖeಚಿಜiಟಿgನಲ್ಲೂ ಭಾಗವಹಿಸಿ, ನಾಟಕದ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳಿದರು. ನಾರಾಯಣರಿಗೆ ನನ್ನ ಬಗ್ಗೆ ಇದ್ದ ಪ್ರೀತಿ, ನಂಬಿಕೆಗಳೇ ಬರವಣಿಗೆಯನ್ನು ಹಿಡಿದುಕೊಳ್ಳಲು ಪ್ರೇರಣೆಯಾಗಿರಬಹುದು. ನನ್ನನ್ನು ಗಂಭೀರವಾಗಿ ತೆಗೆದುಕೊಂಡ ಇನ್ನೊಬ್ಬರೆಂದರೆ, ಎನ್.ವಿದ್ಯಾಶಂಕರ್. ಬರವಣಿಗೆಯನ್ನು ಕುರಿತಂತೆ ಮಾತ್ರವಲ್ಲ, ನಾನು ಆಲೋಚನೆ ಮಾಡುವ ರೀತಿ, ಓದುತ್ತಿದ್ದ ಪುಸ್ತಕಗಳು, ಎಲ್ಲವನ್ನೂ ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದರು. ಆ ದಿನಗಳಲ್ಲೇ ಒಂದು ಕಾದಂಬರಿಗಾಗುವಷ್ಟು ಬರವಣಿಗೆಯನ್ನು ಮಾಡಿದ್ದು, ಹಸ್ತಪ್ರತಿಯನ್ನು ಕೂಡ ಕಳೆದು ಕೊಂಡದ್ದು.
ಬರವಣಿಗೆ ಬಗ್ಗೆ ಯೋಚಿಸದೆ ಇದ್ದುದಕ್ಕೆ ಅದಾಗ ತಾನೇ ಮದುವೆ ಆಗಿದ್ದುದು, ಹೊಸದಾಗಿ ಕೆಲಸಕ್ಕೆ ಸೇರಿ ಕೆಲಸ ಕಲಿಯುತ್ತಿದ್ದದ್ದು, ಪ್ರಯಾಣ, ಓಡಾಟ, ಆಫೀಸಿನ ಕೆಲಸದ ಭಾಗವಾಗಿದ್ದುದು, ಸಾಹಿತ್ಯ ಬರವಣಿಗೆಗೆ ಸಂಬಂಧಿಸದ ಗೆಳೆಯರ ವಲಯ ಕೂಡ ವಿಶಾಲವಾಗಿದ್ದುದು ಕೂಡ ಕಾರಣವಾಗಿರಬಹುದು.
ಬರಹಗಾರನಾಗಬೇಕೆಂದು ಯಾರೂ ಯೋಚಿಸುವುದಿಲ್ಲ ಅಥವಾ ನಿರ್ಧಾರ ಕೂಡ ಮಾಡುವುದಿಲ್ಲ. ಯಾವುದೋ ಒಂದು ಕ್ಷಣದಲ್ಲಿ ಅದು ನಮ್ಮನ್ನು ಹಿಡಿದುಕೊಳ್ಳುತ್ತದೆ. ಹಿಡಿದುಕೊಂಡಾಗಲೂ ಗೊತ್ತಾಗುವುದಿಲ್ಲ. ಹಿಡಿದುಕೊಂಡು ಒಂದಷ್ಟು ದೂರಕ್ರಮಿಸಿ, ಅದು ನಮ್ಮ ವ್ಯಕ್ತಿತ್ವದ ಭಾಗವಾದ ಮೇಲೆ, ನಮ್ಮ ವ್ಯಕ್ತಿತ್ವಕ್ಕೆ ಒಂದು ಹೊಸ ಆಯಾಮ ಸೇರಿಕೊಂಡಿರುವುದು ಗೊತ್ತಾಗುತ್ತದೆ, ಪಯಣ ಮುಂದುವರಿಯುತ್ತದೆ.
ಸ್ವಲ್ಪ ಯೋಚಿಸಿದರೆ ಗೊತ್ತಾಗುತ್ತದೆ, ಹೀಗೆ ನಿರುದ್ದಿಶ್ಯವಾಗಿ ಕಳೆದುಹೋಯಿತಲ್ಲ ಎಂದು ನಾವಂದುಕೊಂಡ ದಿನಗಳೇ ಹೊಯ್ದಾಟದ, ಅನುಭವಗಳ, ಜಿಗಿತದ ದಿನಗಳೂ ಆಗಿರುತ್ತವೆ. ನಾವು ಜಿಗಿದಿರುವುದಿಲ್ಲ, ಜಿಗಿಯಬಲ್ಲಷ್ಟು ಸಾಮರ್ಥ್ಯ, ಒಲುಮೆ ಮೂಡಿರುತ್ತದೆ.
ಬರಹಗಾರನೆಂದು ಗುರುತಿಸಿಕೊಳ್ಳುವುದರಲ್ಲಿ ಈವತ್ತಿಗೂ ನನಗೆ ಹಿಂಜರಿಕೆಯಿದೆ. ಬರೆದಿರುವುದರ ಮೌಲಿಕತೆ, ಗುಣಾತ್ಮಕತೆ ಬಗ್ಗೆ ಇರುವ ನಿರಂತರ ಸಂದೇಹ, ಅನುಮಾನ ಕೂಡ ಇದಕ್ಕೆ ಕಾರಣವಿರಬಹುದು. ಅಲ್ಲದೆ, ಬರಹಗಾರನೆಂದು ನನ್ನನ್ನು ನಾನು ಗುರುತಿಸಿಕೊಳ್ಳುವುದು ಒಂದು ಸ್ತರವಾದರೆ, ಸಮಾಜ, ಓದುಗವರ್ಗ ಕೂಡ ನಮ್ಮನ್ನು ಹಾಗೆ ಗುರುತಿಸಬೇಕಲ್ಲ! ಹಾಗೆ ಸಮಾಜ ಗುರುತಿಸುವುದು ಬಹು ನಿಧಾನವಾಗಿ ಆಗುವ ಕೆಲಸ. ಒಮ್ಮೊಮ್ಮೆ ತಲೆಮಾರುಗಳೇ ಕಳೆದುಹೋಗಬಹುದು. ಸಮಾಜಕ್ಕೆ ಬರಹಗಾರನ ವ್ಯಕ್ತಿತ್ವದ ಬಗ್ಗೆ ಗಮನವಿರುವುದಿಲ್ಲ, ಆಕರ್ಷಣೆಯೂ ಇರುವುದಿಲ್ಲ. ಅದು ಬರವಣಿಗೆಯನ್ನು ಮಾತ್ರ ಗುರುತಿಸುತ್ತದೆ. ತನ್ನ ಬದುಕಿಗೆ, ಆಕಾಂಕ್ಷೆಗಳಿಗೆ, ಕನಸುಗಳಿಗೆ ಪ್ರಸ್ತುತವಾಗುವಂತಹ ಬರವಣಿಗೆಯನ್ನು ಮಾತ್ರ ಅದು ಒಪ್ಪುತ್ತದೆ, ಸ್ವೀಕರಿಸುತ್ತದೆ. ಅದರ ಮೂಲಕ, ಅಷ್ಟರ ಮೂಲಕ ಮಾತ್ರ ಬರಹಗಾರನನ್ನು ಗಮನಿಸಬಹುದು. ನಮ್ಮ ಗಮನವೆಲ್ಲ ಬರಹಗಾರನ ವ್ಯಕ್ತಿತ್ವ, ಮುಖಚಹರೆಯನ್ನು ಸಮಾಜದ ಮೇಲೆ ಹೇರುವ ಕಡೆಗೇ ಇರುತ್ತದೆ. ಈ ಹೇರುವಿಕೆಯನ್ನು ನಿರಂತರ ಪ್ರಚಾರ, ಪ್ರಶಸ್ತಿಗಳ ಮೂಲಕ ಸಾಧಿಸಲೂ ಬಿಡಬಹುದು. ಕೆಲಕಾಲ ಸಮಾಜವನ್ನು ನಂಬಿಸಲೂ ಬಿಡಬಹುದು. ಆದರೆ ನಮ್ಮ ಅಂತರಾತ್ಮ ಕೂಡ ಒಪ್ಪಬೇಕಲ್ಲ.
ನನ್ನ ಬರವಣಿಗೆ ಈ ರೀತಿಯ ನಿರೀಕ್ಷೆ-ಪರೀಕ್ಷೆಗಳಲ್ಲಿ ಪಾಸಾಗಿದೆಯೆ ಎಂಬುದನ್ನು ತಿಳಿದುಕೊಳ್ಳಲು ನನಗೆ ಕುತೂಹಲವಿದೆ. ತಿಳಿದುಕೊಳ್ಳುವ ಮಾರ್ಗ ಮಾತ್ರ ಗೊತ್ತಾಗುತ್ತಿಲ್ಲ. ಹೀಗಾಗಿ, ೧೯೮೮ರ ತನಕದ ಮುನ್ನಾದಿನಗಳು ಮಾತ್ರವಲ್ಲ, ನಂತರದ ಕಾಲ, ಈಗಿನ ವರ್ಷಗಳಲ್ಲಿ ಮಾಡಿರುವ ಬರವಣಿಗೆಯೂ ಕೂಡ ಇನ್ನೂ ಬಿಡಿಬರಹಗಳ ಸ್ವರೂಪದಲ್ಲೇ ಇದೆಯೋ ಏನೋ, ಯಾರಿಗೆ ಗೊತ್ತು? ಬರವಣಿಗೆ ಕೂಡ ನಾಳೆಗೆ ಕಾಯುವುದನ್ನು ಕಲಿತು ಕೊಳ್ಳಬೇಕು.
ಪರಿವಿಡಿ
ಸವಿನುಡಿ / ೫
ಓದುಗರೊಡನೆ / ೭
ಬರವಣಿಗೆಯ ಪ್ರೇರಣೆ / ೮
ಬಿಡಿಬರಹಗಳ ಅಕ್ಷರಾಭ್ಯಾಸ /೧೨
೧. ಕಥಾಸಾಹಿತ್ಯ / ೧೭
೨. ಕಾದಂಬರಿ ಲೋಕ / ೯೧
೩. ಪ್ರಬಂಧ ಲೋಕ / ೧೬೯
೪. ಆತ್ಮಚರಿತ್ರೆ ಮತ್ತು ದಿನಚರಿ / ೧೯೨
೫. ಅಂಕಣ ಸಾಹಿತ್ಯ / ೨೨೨
೬. ಪ್ರವಾಸ ಕಥನ / ೨೪೧
೭. ವಿಮರ್ಶಾ ಬರವಣಿಗೆ / ೨೫೪
೮. ವ್ಯಕ್ತಿಚಿತ್ರ-ಸ್ವಭಾವಚಿತ್ರ / ೩೧೧
೯. ಕೊನೆಯಾಗಬಾರದ ಮಾತುಗಳು / ೩೨೨
Reviews
There are no reviews yet.