ಮುನ್ನುಡಿ
ಗೆಳೆಯ ಪ್ರೊ. ಎನ್.ಚಿನ್ನಸ್ವಾಮಿ ಸೋಸಲೆ ಅವರು ನಾಡಿನಲ್ಲಿ ಚರಿತ್ರೆ ಅಧ್ಯಯನ ಶಿಸ್ತಿನ ವಿದ್ವಾಂಸರು. ಆದರೆ ಅವರ ಚಿಂತನೆ ಮತ್ತು ಬರಹಗಳು ಸಾಂಪ್ರದಾಯಿಕ ಚರಿತ್ರೆಯ ಚೌಕಟ್ಟಿನ ಆಚೆಗೆ ವಿಸ್ತರಿಸಿಕೊಳ್ಳುತ್ತವೆ. ಚರಿತ್ರೆ ಎಂಬುದು ಆಗಿಹೋದ ಘಟನೆ ಮಾತ್ರವಲ್ಲ. ಈಗ ಆಗುತ್ತಿರುವ ಪ್ರಕ್ರಿಯೆಯೂ ಹೌದು. ಈ ದೃಷ್ಟಿಕೋನ ಇವರಿಗೆ ಖಚಿತವಾಗಿರುವುದರಿಂದ ಚರಿತ್ರೆಯ ಅಧ್ಯಯನಶಿಸ್ತನ್ನು ಸಮಕಾಲೀನ ದಲಿತರ ಸಕಲ ಸಮಸ್ಯೆಗಳು ಹಾಗೂ ಸಂಕಟಗಳೊಡನೆ ಬೆರೆಸಿ ನೋಡುವ ಅಕಾಡೆಮಿಕ್ ಪರಿಣತಿಯನ್ನು ಇವರು ಹೊಂದಿದ್ದಾರೆ. ಇವರಿಗೆ ಚರಿತ್ರೆ ಮತ್ತು ದಲಿತರ ಸಮಕಾಲೀನ ಸಮಸ್ಯೆಗಳು ಬೇರೆ ಬೇರೆ ಅಲ್ಲ. ಈಗಾಗಲೇ ಬರೆದಿರುವ ಚರಿತ್ರೆಯ ಪುಟಗಳಲ್ಲಿ ದಲಿತರಿಗೆ ಜಾಗವೇ ಸಿಕ್ಕಿಲ್ಲ ಎಂಬ ಅತ್ಯಂತ ತೀವ್ರವಾದ ಅಸಹನೆ ಇವರಿಗಿದೆ. ಅದನ್ನು ತುಂಬಿಸಿಕೊಡುವ ಬಹುದೊಡ್ಡ ಜವಾಬ್ದಾರಿ ಹಾಗೂ ಸವಾಲನ್ನು ಅವರು ಹೊತ್ತುಕೊಂಡಿದ್ದಾರೆ. ಇದು ಅವರಿಗೆ ಅಕಾಡೆಮಿಕ್ ಕೆಲಸವಲ್ಲ. ಅಸಹಾಯಕ ಮತ್ತು ಶೋಷಿತ ದಲಿತ ಸಮುದಾಯ ತನ್ನ ಮೇಲೆ ಹೊರೆಸಿರುವ ಮಹಾನ್ ಜವಾಬ್ದಾರಿ ಎಂದೇ ಇದನ್ನು ತಿಳಿದಿದ್ದಾರೆ. ಹಾಗಾಗಿ ಬರೆದಿರುವ ಚರಿತ್ರೆಯ ಬರವಣಿಗೆಯಲ್ಲಿ ಕಾಣೆಯಾಗಿರುವ ದಲಿತಲೋಕವನ್ನು ನಿರ್ಮಾಣ ಮಾಡುವ ಕಾರ್ಯದಲ್ಲಿ ಇವರು ತೊಡಗಿದ್ದಾರೆ. ಆ ಮೂಲಕ ದಲಿತರಿಗೆ ಚಾರಿತ್ರಿಕವಾಗಿ ಹಾಗೂ ಪಾರಂಪಕರಿವಾಗಿ ಒಂದು ಬಗೆಯ ಅಸ್ತಿತ್ವವನ್ನು ತಂದುಕೊಡೋ ಆಸಕ್ತಿ ಇವರ ಆಲೋಚನೆ ಮತ್ತು ಬರವಣಿಗೆಯ ಹಿಂದಿನ ಶಕ್ತಿಶಾಲಿ ಉಪಕರಣವಾಗಿದೆ. ಸಮಕಾಲೀನ ಸಮಸ್ಯೆಗಳನ್ನು ಎದುರಿಸಲು ಚರಿತ್ರೆ ಹಾಗೂ ಪರಂಪರೆಯಿಂದ ಗುಣಪಾಠಗಳನ್ನು ಕಲಿಯ ಬೇಕೆಂಬುದು ಇವರ ಆಲೋಚನೆ.
ದಲಿತರ ಗ್ರಹಿಕೆಯು ದಲಿತ ಹಿತಾಸಕ್ತಿಯಿಂದ ಬೇರ್ಪಡುತ್ತಿದೆ. ಜೊತೆಗೆ ಅದು ಡಾ. ಬಿ.ಆರ್.ಅಂಬೇಡ್ಕರ್ ಅವರ ಆಲೋಚನೆ ಹಾಗೂ ಹಿತಾಸಕ್ತಿಯಿಂದಲೂ ದೂರ ವಾಗುತ್ತಿದೆ ಮತ್ತು ಬೇರ್ಪಡುತ್ತಿದೆ. ಇಂತಹ ಸಂದರ್ಭದಲ್ಲಿ ಡಾ.ಎನ್. ಚಿನ್ನಸ್ವಾಮಿ ಸೋಸಲೆ ಅವರು ಚಿತ್ರದುರ್ಗದ ಚರಿತ್ರೆಯಲ್ಲಿ ಛಲವಾದಿ ಜನಾಂಗದ ವೀರಧೀರ ಮಹಿಳೆ ಎನ್ನಿಸಿಕೊಂಡ ಒನಕೆ ಓಬವ್ವೆಯ ರಾಷ್ಟ್ರೀಯ ದೃಷ್ಟಿಕೋನದ ವರ್ಣನಾತ್ಮಕ ಚರಿತ್ರೆಯನ್ನು ವರ್ತಮಾನ ಮತ್ತು ಪ್ರಸ್ತುತ ಸಬಾಲ್ಟರ್ನ್ ಚರಿತ್ರೆ ರಚನೆಯ ದೃಷ್ಟಿಕೋನದಲ್ಲಿ ಗ್ರಹಿಸುವ ಪ್ರಯತ್ನ ಬಹುಸೂಕ್ಷ್ಮವಾಗಿ ದಲಿತ ಸಂವೇದನೆಯೊಂದಿಗೆ ಮುಖಾಮುಖಿ ಮಾಡಿದ್ದಾರೆ. ಈ ದೃಷ್ಟಿಯಲ್ಲಿ ಅವರ ಪ್ರಯತ್ನ ಇಲ್ಲಿ ವಿಶೇಷವಾಗಿ ಸಾರ್ಥಕವಾಗಿದೆ. ಇವರಿಂದ ಇನ್ನೂ ಇಂತಹ ಮಹತ್ವದ ಕೃತಿಗಳು ಹೊರಬರಲಿ, ನಾಡಿನ ಓದುಗ ಸಮುದಾಯವನ್ನು ಕಣ್ಣು ತೆರೆಸುವಂತಾಗಲಿ.
ಪ್ರೊ. ಬಿ.ಎಂ.ಪುಟ್ಟಯ್ಯ
ಪ್ರಾಧ್ಯಾಪಕರು ಹಾಗೂ ಚಿಂತಕರು
ನನ್ನುಡಿ
’ಒನಕೆ ಓಬವ್ವ: ದಲಿತ ಸಂವೇದನೆಯೊಂದಿಗೆ ಮುಖಾಮುಖಿ’. ಇದು ವೀರ ಓಬವ್ವೆಯ ಸಾಹಸವನ್ನು ಕುರಿತು ದಲಿತ ಸಂವೇದನೆ ಹಿನ್ನೆಲೆಯ ದಲಿತಾನುಭವ, ನೋವು- ನಲಿವು, ಆಂತರ್ಯದ ತುಡಿತ-ಮಿಡಿತ ಹಾಗೂ ಪ್ರಾಮಾಣಿಕತೆಯ ಶುದ್ಧ ಅಭಿವ್ಯಕ್ತಿಯ ಕೃತಿ. ಈ ಕೃತಿಯಲ್ಲಿ ವ್ಯಕ್ತವಾಗಿರುವ ದಲಿತ ಸಂವೇದನೆಯ ನಗ್ನ ಚಿತ್ರಣಕ್ಕೂ; ದಲಿತೇತರರು ಓಬವ್ವೆಯ ಕಥೆಯನ್ನು ಕೇವಲ ಮೌಖಿಕವಾಗಿ ಕೇಳಿಯೇ ಅಗ್ರಹಾರದ ಮನೆ ಹಾಗೂ ಮನದಲ್ಲಿ ಕೂತು ಬರೆದ ವರ್ಣರಂಜಿತವಾದ ಕೃತಿಯ ಚಿತ್ರಣಕ್ಕೂ ಅಜ-ಗಜಾಂತರಗಳ ಅಂತರ ಇದ್ದೇ ಇರುತ್ತದೆ ಎಂಬುವುದು ಸಹ ಸತ್ಯವೇ. ಇದಕ್ಕೆ ನಿದರ್ಶನವೆನ್ನುವಂತೆ ಇತ್ತೀಚೆಗೆ ಈ ಸಂಬಂಧ ಬಂದಿರುವ ಹಾಗೂ ಬರುತ್ತಿರುವ ಸಂಶೋಧನೆ ಹಾಗೂ ಸೃಜನಶೀಲ ಬರವಣಿಗೆಯ ಪ್ರಶ್ನೆ ಮೂಡದ ಕೃತಿಗಳನ್ನು ಅವಲೋಕಿಸಬಹುದಾಗಿದೆ. ನೊಂದವರ ನೋವು, ನೋಯದವರೆತ್ತ ಬಲ್ಲರು? ಅಥವಾ ದಲಿತರಿಗೆ ಇರುವ ಭೌತಿಕ ಇಲ್ಲವೆ ಮಾನಸಿಕ ಅಸ್ಪೃಶ್ಯತೆಯ ವಸ್ತುನಿಷ್ಠವಾದ ಅನುಭವ ದಲಿತೇತರರಿಗೆ ಇರಲು ಹೇಗೆ ಸಾಧ್ಯ? ಎಂಬುವುದು ಪ್ರತಿಯೊಬ್ಬರ ಜೀವನಾನುಭವ ವಿಭಿನ್ನವಾದಾಗ ಅವರ ಅಭಿವ್ಯಕ್ತಿಯೂ ವಿಭಿನ್ನವಾಗಿರುತ್ತದೆ ಎಂಬುವುದಕ್ಕೆ ನಿದರ್ಶನವೂ ಆಗಬಹುದು. ಜೊತೆಗೆ ಸಾಕ್ಷಿಯೂ ಆಗಿರುತ್ತದೆ.
ಕಾಲಕಾಲಕ್ಕೆ ಇತಿಹಾಸದ ಓದು ಹಾಗೂ ಗ್ರಹಿಕೆಯಲ್ಲಿರುವಾಗ ಹೊಸ ಹೊಸ ದಲಿತ ಸಂವೇದನೆಯ ಜೀವನಾನುಭವವು ಜನಮುಖಿಯಾಗಿ ವಿಭಿನ್ನವಾದಾಗ ಅದನ್ನು ನೋಡುವ ಗ್ರಹಿಸುವ ಅಭಿವ್ಯಕ್ತಿಯೂ ಭಿನ್ನವಾಗಿರುತ್ತದೆ ಎಂಬುವುದಕ್ಕೆ ಚಿತ್ರದುರ್ಗದ ಛಲವಾದಿ ಜಾತಿಗೆ ಸೇರಿದ ವೀರಮಹಿಳೆ ಎಂಬ ಕಥಾನಾಯಕಿ ’ಒನಕೆ ಓಬವ್ವೆ’ ಬಹುಮುಖ್ಯ ನಿದರ್ಶನವಾಗುತ್ತಾಳೆ. ಇವಳ ಬದುಕಿನ ಸಾಹಸಮಯ ಸಂದರ್ಭ, ನಂತರದ ಚರಿತ್ರೆಯಲ್ಲಿ ಇವಳ ಪಾತ್ರ ಏಕೆ? ಹೇಗೆ? ಎಂಬ ಪ್ರಶ್ನೆಗಳನ್ನು ವಸ್ತುನಿಷ್ಠವಾಗಿ ಮುಂದಾಗಿಸಿ ಈ ಕಿರು ಪುಸ್ತಕವನ್ನು ತಮ್ಮಂತಹ ಸೃಜನಶೀಲ ದಲಿತ ಸಂವೇದನೆಯ ಚಿಂತಕರ ಮುಂದಿಟ್ಟಿದ್ದೇನೆ. ಈ ಹಂತದಲ್ಲಿ ನನಗೆ ಕಾಡಿದ ದಲಿತ ಸಂವೇದನೆಯ ಮೂಲಭೂತ ಪ್ರಶ್ನೆಗಳನ್ನು ಮೊದಲು ಪ್ರಸ್ತಾಪಿಸಿ ಸೂಕ್ಷ್ಮ ವಿಮರ್ಶೆಗೆ ಒಳಪಡಿಸಿದ್ದು ಪತ್ನಿ ಡಾ. ಬಿ.ವಿ.ನಾಗವೇಣಿ ಅವರೊಂದಿಗಿನ ಈ ಚರ್ಚೆಯಲ್ಲಿ ಹೊಸದನ್ನು ಕಂಡು ಧ್ವನಿಗೂಡಿಸಿದ ಮಕ್ಕಳಾದ ಸ್ಫೂರ್ತಿ ಸಿ. ಸೋಸಲೆ, ತಾನ್ಯಾ ಸಿ. ಸೋಸಲೆ ಅವರು. ಇವರಿಂದ ಇಲ್ಲಿ ಎಷ್ಟೋ ಪ್ರಶ್ನೆಗಳು ಮುಖಾಮುಖಿ ಆಗಿವೆ. ಇವರಿಗೆ ಪ್ರೀತಿಯ ವಂದನೆಗಳು.
ಈ ಕೃತಿಯನ್ನು ಚಿತ್ರದುರ್ಗದ ಇತಿಹಾಸಕ್ಕೆ ಸಂಬಂಧಿಸಿದಂತೆ ನಡೆದಾಡುವ ವಿಶ್ವಕೋಶ ಎನ್ನಿಸಿಕೊಂಡಿರುವ ಹಿರಿಯರಾದ ಪ್ರೊ. ಲಕ್ಷ್ಮಣ್ ತೆಲಗಾವಿ ಅವರಿಗೆ ಅರ್ಪಿಸುತ್ತೇನೆ. ಇದು ನನ್ನ ಕರ್ತವ್ಯವೆಂದು ಭಾವಿಸುತ್ತೇನೆ. ಅನೇಕ ಸಂದರ್ಭದಲ್ಲಿ ದೂರವಾಣಿಯ ಮೂಲಕವೇ ಮಹತ್ವದ ಮಾಹಿತಿ ನೀಡಿದ ಪ್ರೊ. ಬಿ.ರಾಜಶೇಖರಪ್ಪ, ಓಬವ್ವೆಯ ವಂಶಸ್ಥರಾದ ಶ್ರೀ ನಿರಂಜನ್, ಪ್ರಾಧ್ಯಾಪಕರಾದ ಗೆಳೆಯ ಡಾ. ನೆಲ್ಲಿಕಟ್ಟಿ ಎಸ್. ಸಿದ್ದೇಶ್, ಡಾ. ಗುಡ್ಡದೇಶ್ವರಪ್ಪ ದುರ್ಗದ ಉಪವಿಭಾಗಾಧಿಕಾರಿಗಳೂ ನನ್ನ ಗೆಳೆಯರಾದ ಎನ್.ತಿಪ್ಪೇಸ್ವಾಮಿ ಹಾಗೂ ಸಮಸ್ತ ವೀರವನಿತೆ ಒನಕೆ ಒಬವ್ವೆಯ ವಂಶಸ್ಥರಿಗೆ, ಆತ್ಮೀಯ ಸಹೋದ್ಯೋಗಿ ಮಿತ್ರರಾದ ಡಾ. ಮೋಹನ್ ಕೃಷ್ಣ ರೈ, ಡಾ. ಟಿ.ಪಿ.ವಿಜಯ್, ಡಾ.ವಿರೂಪಾಕ್ಷಿ ಪೂಜಾರಹಳ್ಳಿ ಅವರಿಗೆ ವಂದನೆಗಳು. ವಿದ್ಯಾರ್ಥಿ ಮಿತ್ರರಾದ ಎನ್.ಮುನಿರಾಜು, ಕೆ.ಆರ್.ಬಸವರಾಜು, ಮಣಿಕಂಠ ಹಂಗಳ, ನರಸಿಂಹಮೂರ್ತಿ ಎಚ್., ಜಿ.ವಿಜಯಲಕ್ಷ್ಮೀ, ಅವರಿಗೆ ನನ್ನ ಪ್ರೀತಿಯ ಶುಭಾಶಯಗಳು.
ಅಕ್ಷರ ಜೋಡಿಸಿ ಪುಟವಿನ್ಯಾಸಗೊಳಿಸಿರುವ ಗೆಳೆಯರಾದ ಶ್ರೀ ಗಣೇಶ ಯಾಜಿ ಅವರಿಗೆ, ಮುಖಪುಟ ಸಿದ್ಧಪಡಿಸಿದ ರಾಘವೇಂದ್ರ ಕುಪ್ಪೇಲೂರ ಅವರಿಗೆ, ರೇಖಾಚಿತ್ರ ಒದಗಿಸಿದ ಡಾ. ಬಸವರಾಜ ಕಲೆಗಾರ ಅವರಿಗೆ, ’ಯಾಜಿ ಪ್ರಕಾಶನ’ದ ಮೂಲಕ ಪ್ರಕಟಿಸುತ್ತಿರುವ ಶ್ರೀಮತಿ ಸವಿತಾ ಯಾಜಿ ಅವರಿಗೆ, ಮುದ್ರಣದ ಹೊಣೆಹೊತ್ತ ರಾಷ್ಟ್ರೋತ್ಥಾನ ಮುದ್ರಣಾಲಯದವರಿಗೆ ಪ್ರೀತಿಯ ವಂದನೆಗಳು.
ಪ್ರೊ. ಎನ್. ಚಿನ್ನಸ್ವಾಮಿ ಸೋಸಲೆ
ಪರಿವಿಡಿ
ಸವಿನುಡಿ / ೫
ಮುನ್ನುಡಿ / ೭
ನನ್ನುಡಿ / ೯
೧. ಒನಕೆ ಓಬವ್ವೆಯ ಕುರಿತ ಚರಿತ್ರೆ ರಚನೆ ಏಕೆ? ಹೇಗೆ: ದಲಿತ ಸಂವೇದನೆ ಯೊಂದಿಗೆ ಮುಖಾಮುಖಿ / ೧೩
೨. ಒನಕೆ ಓಬವ್ವೆ ಎಂಬ ದಲಿತ ಮಹಿಳೆ ಮತ್ತು ರಾಷ್ಟ್ರೀಯತೆ ಎಂಬ ಅಸ್ಮಿತೆಯ ಹುಡುಕಾಟದ ಪರಿ / ೨೬
೩. ಚಿತ್ರದುರ್ಗದ ನಾಯಕರ ಚರಿತ್ರೆಯಲ್ಲಿ ಒನಕೆ ಓಬವ್ವೆಯ ಪ್ರವೇಶದ ಗೊಂದಲ / ೩೫
೪. ಒನಕೆ ಓಬವ್ವೆ ದಲಿತ ಸಂವೇದನೆಯೊಂದಿಗೆ ಮುಖಾಮುಖಿ / ೪೭
೫ ಅಂತಿಮವಾಗಿ / ೭೬
ಓಬವ್ವೆ ಕುರಿತ ಕೆಲವು ಪುಸ್ತಕಗಳು / ೮೧
Reviews
There are no reviews yet.