ಬೊಂಬೆಯಾಟದ ರೂವಾರಿ ದೊಣ್ಣೆ ಅಜ್ಜನ ನೆನಪಿನ ಮೆಲುಕು
ದೊಣ್ಣೆ ಅಜ್ಜ ತೀರಿಕೊಂಡುದು ಇಂದಿಗೆ ಸುಮಾರು ೬೦ ವರ್ಷಗಳ ಹಿಂದೆ. ಅಂದರೆ ೧೪.೦೧.೧೯೬೪ರಂದು. ಆಗ ಅವರಿಗೆ ೭೯-೮೦ರ ವಯಸ್ಸಾಗಿರಬಹುದು. ಆಗಿನ್ನು ನಾನು ಆರು ತಿಂಗಳ ಹಸುಗೂಸು. ಅಜ್ಜ ಸಾಯುವಾಗ ನನ್ನನ್ನು ನೋಡಿ ಕಣ್ತುಂಬಿಕೊಂಡೇ ಹೋಗಿರಬಹುದು ಎಂದು ನಾನು ಭಾವಿಸುತ್ತೇನೆ. ಅಮ್ಮನ ಮೊದಲ ಮಗು ಹೆಣ್ಣು. ಎರಡನೆಯ ಮಗು ಗಂಡಾದುದಕ್ಕೆ ತುಂಬಾ ಸಂತೋಷವೇ ಆಗಿತ್ತಂತೆ. ಅಜ್ಜ ಬದುಕಿರುವಾಗ ಕುಟುಂಬದಲ್ಲಿನ ಮಕ್ಕಳ ಹುಟ್ಟಿದ ದಿನಾಂಕವನ್ನು ಆಯಾ ವರ್ಷದ ಪಂಚಾಂಗದಲ್ಲಿಯೇ ಗುರುತು ಹಾಕಿ ರಾಶಿ, ಭವಿಷ್ಯ ಇತ್ಯಾದಿಗಳನ್ನು ಬರೆದಿಟ್ಟಿರುತ್ತಿದ್ದರಂತೆ. ಹಾಗೆ ಅಜ್ಜ ಬರೆದಿಟ್ಟ ರಾಶಿ, ಭವಿಷ್ಯ ವಿವರಗಳನ್ನು ಹಳೆಯ ಪಂಚಾಂಗ ಪುಸ್ತಕಗಳಲ್ಲಿ ನೋಡಿದ ನೆನಪು ನನಗೆ ಇನ್ನೂ ಇದೆ. ಪಂಚಾಂಗ ಪುಸ್ತಕಗಳನ್ನು ತಂದು ಊರವರಿಗೆ ನಾಮಕರಣದಲ್ಲಿ ಶಕುನ, ತಿಥಿ, ವಾರಗಳ ವಿಶೇಷ, ಮದುವೆ, ಗೃಹಪ್ರವೇಶ, ಸೀಮಂತಾದಿ ಮುಹೂರ್ತಗಳನ್ನು ಅಜ್ಜ ಹೇಳುತ್ತಿದ್ದರಂತೆ. ಎಲ್ಲರಿಗೂ ಸುಲಭವಾಗಿ ನಿಲುಕುವ ವ್ಯಕ್ತಿಯೂ ಆಗಿದ್ದರು. ವೃತ್ತಿಯಲ್ಲಿ ಪೊಲೀಸ್ ಹೆಡ್ಕಾನ್ಸ್ಟೇಬಲ್ ಆಗಿದ್ದರೂ ಅವರಿಗೆ ನಾಟಿ ವೈದ್ಯ, ಮಂತ್ರ, ತಂತ್ರ, ತಾಯತ ಇತ್ಯಾದಿಗಳಲ್ಲಿ ವಿಶೇಷ ಪರಿಣತಿ ಇತ್ತಂತೆ. ಅದಕ್ಕಾಗಿ ಅವರ ಬಳಿಗೆ ಅನೇಕರು ಬರುತ್ತಿದ್ದರೆಂದು ಪ್ರತೀತಿ. ಇವುಗಳಿಗೆ ಸಂಬಂಧಿಸಿದ ಅನೇಕ ಗ್ರಂಥಗಳು, ಕೈಬರೆಹಗಳು ಅವರ ಸಂಗ್ರಹದಲ್ಲಿದ್ದುವು.
ಯಕ್ಷಗಾನ ಅವರ ವಿಶೇಷವಾದ ಆಸಕ್ತಿಯ ವಿಷಯ ಎಂಬುದೂ ಇಲ್ಲಿ ಮುಖ್ಯ ವಿಚಾರ. ಯಕ್ಷಗಾನಕ್ಕೆ ಸಂಬಂಧಿಸಿದಂತೆ ಅನೇಕ ಅಪ್ರಕಟಿತ ಕೃತಿಗಳು ಹಸ್ತಪ್ರತಿ ರೂಪದಲ್ಲಿಯೇ ಅವರ ಸಂಗ್ರಹದಲ್ಲಿದ್ದುವು. ಪುರಾಣ ಕತೆಗಳಿಗೆ ಸಂಬಂಧಿಸಿದ ವಿವರಗಳು, ದಾಖಲೆಗಳು, ತಾಳೆಗರಿ ಹಸ್ತಪ್ರತಿಗಳು, ಕೈಬರಹ ಪುಸ್ತಕಗಳು ಅವರ ಸಂಗ್ರಹದಲ್ಲಿದ್ದುವು. ತಾಳೆಗರಿಯಲ್ಲಿ ಜಾತಕ ಬರೆಯಲು ಬೇಕಾದ ಕಂಟ, ಯಕ್ಷಗಾನದ ಜಾಗಟೆ, ಮದ್ದಳೆ ಕುತ್ತಿ ಇತ್ಯಾದಿ ಭೌತಿಕ ವಸ್ತುಗಳು ಸಹ ಮನೆಯಲ್ಲಿದ್ದುದನ್ನು ನಾನು ನೋಡಿದ್ದೇನೆ. ಅವುಗಳಲ್ಲಿ ಪುಸ್ತಕಗಳನ್ನು ಹಿರಿಯರು ಸಂರಕ್ಷಣೆ ಮಾಡದೇ ಇದ್ದುದರಿಂದ ಮಕ್ಕಳಾಗಿದ್ದ ಕಾಲದಲ್ಲಿ ನಾವೇ ಹರಿದು ಚೂರು ಮಾಡಿ ಆಟಕ್ಕೆ ಬಳಸಿ ನಾಶ ಮಾಡಿದ್ದು ನನಗಿನ್ನೂ ನೆನಪಿದೆ. ಅಂದು ಹಿರಿಯರು ಯಾರೂ ತಿಳುವಳಿಕೆ ನೀಡದ ಕಾರಣಕ್ಕೆ ಅಜ್ಜನ ಶ್ರಮದ ಅಮೂಲ್ಯ ಸಂಪತ್ತನ್ನು ನಾವೇ ಮೊಮ್ಮಕ್ಕಳು ಕೈಯ್ಯಾರೆ ನಾಶ ಮಾಡಿದೆವು ಎಂಬುದನ್ನು ಈಗ ನೆನಪಿಸಿಕೊಂಡರೆ ನನ್ನಲ್ಲಿ ವಿಷಾದ ತುಂಬಿಕೊಳ್ಳುತ್ತದೆ. ಆಗಿನ್ನು ಅದರ ಮಹತ್ವವನ್ನು ಅರಿಯದೆಯೇ ಹೋದೆವಲ್ಲ ಎಂಬುದು ಈಗಲೂ ಕಾಡುತ್ತಿದೆ. ನಮ್ಮ ಪೋಷಕರೂ ಅದರ ಮಹತ್ವ ಅರಿತು ನಮ್ಮಂತಹ ಎಳೆಯರಿಗೆ ಹೇಳಲೂ ಇಲ್ಲ ಎಂಬುದೇ ದುರಂತ.
ನಾನು ಸಾಹಿತ್ಯದಲ್ಲಿ ಆಸಕ್ತಿಯಿಂದ ತೊಡಗಿಸಿಕೊಳ್ಳುವ ಹೊತ್ತಿಗೆ ನನ್ನ ಕಾಲೇಜು ದಿನಗಳಲ್ಲಿ ಅಲ್ಲಿ ಉಳಿದ ಕೆಲವೊಂದು ಹಾಳೆಗಳ ನಡುವೆ ಕೆಲವು ಪುಟಗಳು ಸಿಕ್ಕಿದವು. ಅವುಗಳಲ್ಲಿ ಕೆಲವು ಯಕ್ಷಗಾನ ಪ್ರಸಂಗಕ್ಕೆ ಸಂಬಂಧಿಸಿದ ಪುಟಗಳು. ಕೆಲವೊಂದು ನಾಟಿ ವೈದ್ಯಕ್ಕೆ ಸಂಬಂಧಿಸಿದ ವಿವರಗಳು. ಇಡಿಯಾಗಿ ದೊರೆತ ಏಕೈಕ ಕೈಬರಹದ ಪುಸ್ತಕ ಇದು ಮಾತ್ರ. ಇದು ಪುರಾಣದ ಕತೆಗಳ ವಿವರಣೆ ಇರುವ ಪುಸ್ತಕ. ಇದಕ್ಕೆ ನಾನೇ ’ಪುರಾಣ ಕಥಾಕೋಶ’ ಎಂದು ಹೆಸರಿಸಿ ಓದುಗರ ಮುಂದಿಡುವ ಪ್ರಯತ್ನ ಮಾಡಿದ್ದೇನೆ. ಇದನ್ನು ಬರೆದ ವರ್ಷ ಯಾವುದೆಂದು ಗೊತ್ತಿಲ್ಲ. ೧೯೪೦ರ ಆಸುಪಾಸಿನಲ್ಲಿ ನಿವೃತ್ತರಾದ ಮೇಲೆ ಬರೆದಿರಬಹುದೋ ಏನೋ?
ನಾನು ಯಕ್ಷಗಾನದಲ್ಲಿ ಪಾತ್ರ ವಹಿಸಲು ಆರಂಭಿಸಿದ ದಿನಗಳಲ್ಲಿ ಊರಿನ ಅನೇಕ ಹಿರಿಯರು ನಿನ್ನ ಅಜ್ಜನ ಬಳಿ ಪುಸ್ತಕಗಳಿದ್ದುವು ಎಂದು ವಿಚಾರಿಸುತ್ತಾ ಮನೆಗೆ ಬಂದಿದ್ದರು. ಆಗ ಯಾವುದೇ ಪುಸ್ತಕಗಳೂ ಸಿಗಲಿಲ್ಲ. ಊರಿನ ಹಿರಿಯರಾದ ಮಾಟೆಡ್ಕ ಪುರುಷೋತ್ತಮ ರಾಯರು ಮನೆಗೆ ಬಂದು ನಿನ್ನ ಅಜ್ಜನ ಬಳಿ ಇದ್ದಷ್ಟು ಯಕ್ಷಗಾನ ಪ್ರಸಂಗ ಪುಸ್ತಕಗಳು ಯಾರಲ್ಲಿಯೂ ಆ ಕಾಲದಲ್ಲಿ ಇದ್ದಿರಲಿಲ್ಲ ಎಂದು ಹೇಳಿ ಎಲ್ಲ ಕಡೆ ಹುಡುಕುವ ಪ್ರಯತ್ನ ಮಾಡಿದ್ದರು. ಆಗ ನನ್ನ ತಂದೆಯವರು (ಚಂದ್ರಶೇಖರ ರಾವ್ ಜಾದವ್) ಒಂದು ಮಾಹಿತಿಯನ್ನು ಹೇಳಿದರು. ಆಗ ಅಜ್ಜನಲ್ಲಿ ಯಕ್ಷಗಾನದ ಅರ್ಥಗಾರಿಕೆಯನ್ನು ಕಲಿಯಲು ಅನೇಕರು ಮನೆಗೆ ಬರುತ್ತಿದ್ದರಂತೆ. ಅವರಲ್ಲಿ ಶಂಭು ಆಚಾರಿ, ಕುಞ್ಞಿರಾಮ ಮಣಿಯಾಣಿ ಮೊದಲಾದವರು ಮುಖ್ಯರು. ಅಜ್ಜನ ಪ್ರಿಯ ಶಿಷ್ಯನಾದ ಕುಞ್ಞಿರಾಮ ಮಣಿಯಾಣಿಯವರಿಗೆ ಅನೇಕ ಪ್ರಸಂಗ ಪುಸ್ತಕಗಳನ್ನು ಕೊಟ್ಟಿದ್ದನ್ನು ನಾನು ನೋಡಿದ್ದೇನೆ ಎಂದು ಹೇಳಿದರು. ಹಾಗೆಯೇ ಮದ್ದಳೆ, ಜಾಗಟೆ, ತಾಳೆಗರಿಗಳು ಸಹ ಅವರ ಬಳಿಯೇ ಇದೆ ಎಂದು ಹೇಳಿದರು.
ಹಾಗೆ ನೀವೇ ಹೋಗಿ ಕುಞ್ಞಿರಾಮ ಮಣಿಯಾಣಿಯವರಲ್ಲಿ ವಿಚಾರಿಸುವಂತೆ ಅವರು ತಂದೆಯವರಿಗೆ ಹೇಳಿದರು. ಹಾಗೆ ಹೋಗಿ ವಿಚಾರಿಸಿದಾಗ ಅವರು ನನ್ನ ಬಳಿ ಯಾವ ಪುಸ್ತಕಗಳೂ ಇಲ್ಲ ಎಂದು ಬಿಟ್ಟರಂತೆ. ಆದರೆ ಅವರು ತಾಳಮದ್ದಳೆಗಳಿಗೆ ಹೋಗುವಾಗ ಕೊಂಡೊಯ್ಯುತ್ತಿದ್ದ ಜಾಗಟೆಯನ್ನು ಮಾತ್ರ ಇಲ್ಲ ಎಂದು ಹೇಳಲು ಸಾಧ್ಯವಾಗಲಿಲ್ಲ. ಕೊನೆಗೆ ಜಾಗಟೆಯ ಬಗೆಗೆ ಹೇಳಿ ಪಡೆದುಕೊಂಡು ಬಂದರು. ಬಹಳ ಉತ್ತಮ ನಾದ ಹೊರಡಿಸುವ ಆ ಜಾಗಟೆಯನ್ನು ೧೯೮೦ರ ಹೊತ್ತಿಗೆ ಮಾಟೆಡ್ಕ ಪುರುಷೋತ್ತಮ ರಾಯರ ಮೂಲಕ ಕುಂಟಾರಿನ ಯು.ಕೆ.ಕೆ. ಸ್ಮಾರಕ ಕಲಾಸಂಘಕ್ಕೆ ನೀಡಲಾಯಿತು. ಈಗಲೂ ಆ ಜಾಗಟೆ ಕುಂಟಾರಿನ ಯಕ್ಷಗಾನ ಸಂಘದಲ್ಲಿ ಬಳಕೆಯಾಗುತ್ತಿದೆ ಎಂಬುದು ಅಜ್ಜನ ಬಗೆಗೆ ನಮ್ಮ ಮನೆಯವರು ಹೆಮ್ಮೆಪಡಬಹುದಾದ ವಿಷಯ.
ಕುಞ್ಞಿರಾಮ ಮಣಿಯಾಣಿಯವರು ತಾವು ತಾಳಮದ್ದಳೆಯ ಅರ್ಥಗಾರಿಕೆಗೆ ಹೋಗುವಾಗೆಲ್ಲ ಪ್ರಸಂಗ ಪುಸ್ತಕಗಳನ್ನು ಕಂಕುಳಲ್ಲಿ ಇಟ್ಟು ಕೊಂಡೊಯ್ಯುತ್ತಿದ್ದರು. ಇದನ್ನು ನಾನೂ ಪ್ರತ್ಯಕ್ಷ ನೋಡಿದ್ದೇನೆ. ಯಾವುದೇ ಪುರಾಣ ಪ್ರಸಂಗಗಳಾಗಲಿ ಅವರ ಬಳಿ ಪುಸ್ತಕಗಳಿರುತ್ತಿದ್ದವು ಎಂಬುದನ್ನು ಅನೇಕರು ಬಲ್ಲರು. ಕುಞ್ಞಿರಾಮ ಮಣಿಯಾಣಿಯವರು ಇಪ್ಪತ್ತು ವರ್ಷಗಳ ಹಿಂದೆ ತೀರಿಕೊಂಡರು. ಆ ವೇಳೆಗೆ ನಾನು ಮಣಿಯಾಣಿಯವರ ಮಗ ಚಂದ್ರನ ಸ್ನೇಹ ಮಾಡಿ ಅವರ ಮನೆಗೆ ಹೋದೆ. ಆತ ಅಪ್ಪ ಪುಸ್ತಕಗಳನ್ನು ಇರಿಸಿದ್ದ ಕಬ್ಬಿಣದ ಪೆಟ್ಟಿಗೆ ತೋರಿಸಿದ. ಪೆಟ್ಟಿಗೆಯ ಹಳೆಯ ಬೀಗ ತುಕ್ಕು ಹಿಡಿದಿತ್ತು. ಅದನ್ನು ತೆರೆಯಲು ಕೀ ಇರಲಿಲ್ಲ. ಸುತ್ತಿಗೆಯಿಂದ ಬಡಿದಾಗ ಅದು ಬಿಚ್ಚಿಕೊಂಡಿತು. ಒಳಗಡೆ ಕುತೂಹಲದಿಂದ ನೋಡಿದರೆ ಎಲ್ಲವೂ ಮಣ್ಣು. ತಾಳೆಗರಿಗಳು, ಕಾಗದದ ಚೂರುಗಳು ಎಷ್ಟೋ ವರ್ಷಗಳಿಂದ ಅದನ್ನು ತೆರೆಯದ ಕಾರಣ ಕಬ್ಬಿಣದ ಪೆಟ್ಟಿಗೆಯಲ್ಲಿ ಕರಗಿ ಮಣ್ಣಾಗಿತ್ತು. ಕರಗಿ ಪುಡಿಮಣ್ಣಿನಂತಾದ ಕರ್ರಗಿನ ಮಣ್ಣು ಪುಸ್ತಕದ ಪಳೆಯುಳಿಕೆಗಳೆಂದು ಊಹಿಸಲೂ ಸಾಧ್ಯವಾಗಲಿಲ್ಲ. ನಾನು ಆ ಪುಡಿಗಳನ್ನು ಅಂಗೈಯಲ್ಲಿ ಹಾಕಿ ಹಿಡಿದು ನೋಡಿದೆ. ಅಜ್ಜನ ಆತ್ಮ ಅದರಲ್ಲಿ ಇದ್ದಿರಬಹುದು ಏನೋ! ನನಗೆ ದುಃಖವಾಗಿತ್ತು. ತಂದೆ ಇದನ್ನು ತೆರೆಯದೇ ಹತ್ತಾರು ವರ್ಷಗಳೇ ಆಗಿರಬಹುದು ಎಂದು ಹೇಳಿದ. ಯಾರಿಗೂ ಅದನ್ನು ಮುಟ್ಟಲು ಬಿಡದೆ ನಿಧಿಯಂತೆ ಕಾಯ್ದುಕೊಂಡಿದ್ದರು ಎಂದೂ ಹೇಳಿದ. ಅದಕ್ಕೆ ಅವನ ಅಮ್ಮನೂ ದನಿಗೂಡಿಸಿದರು. ತಾಳಮದ್ದಳೆಗೆ ಹೋಗುತ್ತಿದ್ದ ದಿನಗಳಲ್ಲಿ, ಕೆಲವೊಮ್ಮೆ ಬಿಡುವಿನಲ್ಲಿ ಓದಲು ಪುಸ್ತಕಗಳನ್ನು ಹೊರತೆಗೆಯುತ್ತಿದ್ದರು ಎಂದೂ ಹೇಳಿದರು. ಮೇಲೆ ನೋಡಿದರೆ ಮದ್ದಳೆ ಕುತ್ತಿಯೊಂದನ್ನು ನೇತು ಹಾಕಲಾಗಿತ್ತು. ’ನಾನು ಮದುವೆಯಾಗಿ ಬರುವಾಗಲೇ ಅದನ್ನು ಅಲ್ಲಿ ನೇತುಹಾಕಲಾಗಿತ್ತು. ನಮಗದರ ಬಗೆಗೆ ಗೊತ್ತಿಲ್ಲ’ ಎಂದೂ ಹೇಳಿದರು. ಅಲ್ಲಿ ಮದ್ದಳೆಯನ್ನು ಮಣಿಯಾಣಿಯವರಿಗೆ ಕೊಟ್ಟಿದ್ದ ವಿಷಯವನ್ನು ಹೇಳಿದ್ದು ನನಗೆ ನೆನಪಾಯಿತು. ಮನೆಗೆ ಬಂದು ಅಪ್ಪನಿಗೆ ಆ ವಿಷಯವನ್ನು ತಿಳಿಸಿದೆ.
ಹೀಗೆ ಅಜ್ಜನ ನೆನಪಾಗಿ ಮನೆಯಲ್ಲಿಯೇ ಉಳಿಸಿದ್ದ ಬರೆಯುವ ಉಕ್ಕಿನ ಲೇಖನಿ, ಮಣಿಯಾಣಿಯವರ ಬಳಿ ಇದ್ದ ಜಾಗಟೆ ಹಾಗೂ ನಾನು ಹುಡುಕಿ ಸಂಗ್ರಹಿಸಿದ ಈ ಒಂದು ಪುರಾಣ ಕತೆಗಳ ’ಹಸ್ತಪ್ರತಿ’ ಮಾತ್ರ ಅಜ್ಜನ ಕುರುಹಾಗಿ ಇವತ್ತು ನಮ್ಮ ಮುಂದಿರುವುದು.
ಅಜ್ಜನ ಬಗೆಗೆ ಊರಿನಲ್ಲಿ ಅನೇಕರಿಗೆ ಆಪ್ತ ಸಂಬಂಧವಿತ್ತು. ಅದು ಅಜ್ಜನ ವಿಭಿನ್ನ ಕೌಶಲ್ಯದ ಕಾರಣಕ್ಕೋ ಅವರ ಪಾರಂಪರಿಕ ಜ್ಞಾನಕ್ಕೋ ಆಗಿರಬಹುದು. ಆದರೆ ನನ್ನ ತಂದೆ ಅಜ್ಜನ ವಿದ್ವತ್ತಿನ ಬಗೆಗೆ ಆಸಕ್ತರಾಗಿದ್ದಂತೆ ತೋರಲಿಲ್ಲ. ನನ್ನ ತಂದೆ ಯಕ್ಷಗಾನ ಆಟವನ್ನೋ, ತಾಳಮದ್ದಳೆಯನ್ನೋ ನೋಡುವ ಅಥವಾ ಭಾಗವಹಿಸುವ ಆಸಕ್ತಿ ತೋರಿರಲಿಲ್ಲ. ಆದರೆ ಅಜ್ಜನ ಅನೇಕ ವಿದ್ಯೆಗಳು ರಕ್ತಗತವಾಗಿಯೇ ಎಂಬಂತೆ ತಂದೆಯವರಿಗೂ ಮುಂದುವರಿದಿತ್ತು. ಅನೇಕ ಕಾಯಿಲೆಗಳಿಗೆ ನಾಟಿ ವೈದ್ಯದ ಗಿಡ ಮೂಲಿಕೆಗಳನ್ನು ನೀಡುತ್ತಿದ್ದರು. ಕಣ್ಣುನೋವು, ಕೆಪ್ಪಟ್ರಾಯ ಮೊದಲಾದ ಕಾಯಿಲೆಗಳಿಗೆ ಸೊಪ್ಪಿನ ರಸ, ಎಣ್ಣೆ ಮಸಾಜು ಮಾಡುವ ನಾಟಿವೈದ್ಯ ಇತ್ಯಾದಿಗಳೆಲ್ಲ ಅಪ್ಪನಲ್ಲೂ ಮುಂದುವರಿದಿತ್ತು. ಅಜ್ಜ ಮಾಡುತ್ತಿದ್ದರು ಎಂದು ಹೇಳಿ ನನ್ನ ತಂದೆಯಲ್ಲಿಯು ಅದು ಮುಂದುವರಿದಿದೆ ಎಂದು ಅನೇಕರು ಹೇಳುತ್ತಿದ್ದರು. ಆದರೆ ಅಪ್ಪ ಮನಸ್ಸಾದಾಗ ಮಾತ್ರ ಮದ್ದು ನೀಡುತ್ತಿದ್ದರು.
ಅಂಗಾರೆ ಎಂಬ ದಲಿತ ಮಹಿಳೆಯೊಬ್ಬಳು ಕಣ್ಣುನೋವೆಂದು ಅಪ್ಪನ ಬಳಿ ಬಂದಿದ್ದಳು. ಕಣ್ಣು ನೋಡಿ ವಿಷಯಗಳನ್ನು ಕೇಳಿ ತಿಳಿದು ಅವಳಿಗೆ ಬೆಳಿಗ್ಗೆ ಸೂರ್ಯ ಮೂಡುವ ಮೊದಲೇ ಬಂದು ಔಷಧಿ ಹಾಕಿಸಿಕೊಳ್ಳುವಂತೆ ಹೇಳಿದ್ದರು. ಗಿಡಮೂಲಿಕೆ ಸಂಗ್ರಹಕ್ಕಾಗಿ ಅಪ್ಪ ಬೆಳಗಿನ ಜಾವ ಎದ್ದು ಇನ್ನೂ ಇಬ್ಬನಿಯಲ್ಲಿ ನೆನೆದ ಮೂಲಿಕೆಗಳ ಚಿಗುರುಗಳನ್ನು ಸಂಗ್ರಹಿಸುತ್ತ ಬಟ್ಟೆಯಲ್ಲಿ ಹಾಕಿ ಜಜ್ಜಿ ರಸವನ್ನು ಅವಳ ಕಣ್ಣಿಗೆ ಹಿಂಡುತ್ತಿದ್ದ ದೃಶ್ಯ ಈಗಲೂ ನನ್ನ ಕಣ್ಣ ಮುಂದಿದೆ. ಆಕೆ ಮೂರುದಿನ ಬಂದು ಔಷಧಿ ಹಾಕಿಸಿಕೊಂಡು ಹೋದಳು. ಕಣ್ಣುನೋವು ವಾಸಿಯಾಗಿತ್ತು. ಹಾಗೆಯೇ ಪದ್ಮನಾಭ ಭಟ್ಟರು, ಚುಕ್ರು ಮೊದಲಾದವರು ಅಪ್ಪನಿಂದ ಕಣ್ಣಿಗೆ ಔಷಧಿ ಹಾಕಿಸಿಕೊಂಡುದನ್ನು ನಾನು ನೋಡಿದ್ದೇನೆ. ಇದಕ್ಕೆ ಪ್ರತಿಫಲವಾಗಿ ಅಪ್ಪ ಏನನ್ನೂ ಪಡೆಯುತ್ತಲೂ ಇರಲಿಲ್ಲ. ಅವರು ಕೊಡುತ್ತಲೂ ಇರಲಿಲ್ಲ. ಇಂತಹ ಔಷಧಿಗಳನ್ನು ಮಾಡಬೇಕಾದರೆ ಬೆಳಿಗ್ಗೆ ಬೇಗನೆ ಏಳಬೇಕು. ನಡುಗುವ ಚಳಿಯಲ್ಲಿ ಕಾಡಿನಲ್ಲಿ ಸುತ್ತಿ ಮೂಲಿಕೆಗಳ ಚಿಗುರು ಚಿವುಟಿ ತರಬೇಕು. ಅದನ್ನು ಇನ್ನೊಬ್ಬರಿಗೆ ಹೆಸರು ಹೇಳಿ ಅವರಿಂದ ತರಿಸಬಾರದು ಎಂಬಿತ್ಯಾದಿ ಕಟ್ಟಳೆಗಳನ್ನು ಪಾಲಿಸುವುದು ಇವೆಲ್ಲ ಸೂರ್ಯೋದಯದ ನಂತರವೇ ಚಾಪೆಯಿಂದ ಎದ್ದೇಳುತ್ತಿದ್ದ ತಂದೆಗೆ ಕಿರಿಕಿರಿಯೆನಿಸಿರಬಹುದು.
ಹಾಗೆಯೇ ಕೆಪ್ಪಟ್ರಾಯ ಮಕ್ಕಳಲ್ಲಿ ಕೆನ್ನೆ ಊದಿಕೊಳ್ಳುವ ಕಾಯಿಲೆ. ಇದಕ್ಕೆ ಹರಳೆಣ್ಣೆಯನ್ನು ಬೆನ್ನಿನ ಮೇಲೆ ಸವರುತ್ತಾ ಕೆಪ್ಪಟ್ರಾಯವನ್ನು ವಾಸಿ ಮಾಡುವ ವಿಶಿಷ್ಟ ತಜ್ಞತೆ ಅಪ್ಪನಲ್ಲಿತ್ತು. ಸಾವಿತ್ರಿ, ಶಶಿಕಲಾ ಮೊದಲಾದವರು ಅಪ್ಪನಿಂದ ಕೆಪ್ಪಟ್ರಾಯಕ್ಕೆ ಔಷಧಿ ಮಾಡಿಸಿಕೊಂಡುದು ನನಗೆ ನೆನಪಿದೆ. ಬರುವವರು ಲೇಪಿಸಲು ಬೇಕಾದಷ್ಟು ಹರಳೆಣ್ಣೆ ಮಾತ್ರ ತಂದರಾಯಿತು. ಒಂದು ಗಂಟೆಯ ಕೆಲಸ. ಕೆನ್ನೆಯ ಊತದ ಕೆಪ್ಪಟ್ರಾಯದ ಕಾಯಿಲೆಗೆ ಬೆನ್ನಿಗೆ ಹರಳೆಣ್ಣೆ ಸವರಿ ವಾಸಿ ಮಾಡುವುದು ಸಾಧ್ಯವೇ ಎಂದು ಯಾರೋ ಒಬ್ಬರು ಲೇವಡಿ ಮಾಡಿ ಕುಹಕ ಮಾತನಾಡಿದ ವಿಷಯ ತಂದೆಯವರ ಕಿವಿಗೆ ಬಿತ್ತು. ಅಂದಿನಿಂದ ಅವರು ನಾಟಿವೈದ್ಯ ಮಾಡುವುದನ್ನು ಬಿಟ್ಟರು. ಅದನ್ನವರು ಯಾರಲ್ಲೋ ಹೇಳುತ್ತಿದ್ದುದನ್ನು ನಾನು ಕೇಳಿಸಿಕೊಂಡಿದ್ದೇನೆ. ಅಜ್ಜ ಮಾಡುತ್ತಿದ್ದ ವೈದ್ಯ ಪದ್ಧತಿ ಅಪ್ಪನಲ್ಲಿಯೂ ಮುಂದುವರೆದಿತ್ತು. ಆದರೆ ಅಜ್ಜ ಔಷಧಿ ಕೊಡುವ ವಿದ್ಯೆಯನ್ನು ಮುಂದಿನ ಒಬ್ಬರಿಗೆ ಧಾರೆಯೆರೆದು ಕೊಡಬೇಕಾಗಿತ್ತು. ಅದನ್ನು ಕೊಟ್ಟಿರುವುದು ಪಂಡಿತ ರಾಮಕೃಷ್ಣರಾಯರಿಗೆ. ಅಜ್ಜ ಅನೇಕ ಕೈಬರಹದ ಪುಸ್ತಕಗಳನ್ನು ನೀಡಿ ಔಷಧಿ ನೀಡುವ ಅಧಿಕಾರವನ್ನು ಹಸ್ತಾಂತರಿಸಿದ್ದರಂತೆ. ಮುಂದೆ ಅಜ್ಜನೇ ಅವರ ಬಳಿಗೆ ಬಂದವರಿಗೆಲ್ಲ ಹೇಳಿ ರಾಮಕೃಷ್ಣರಾಯರ ಬಳಿಗೆ ಕಳುಹಿಸುತ್ತಿದ್ದರಂತೆ. ಆದರೆ ಅವರು ಒಂದಷ್ಟು ಕಾಲ ಮುಂದುವರಿಸಿ ಏನೋ ವಯೋ ಸಹಜ ಅಶಕ್ತತೆಯಿಂದ ತನಗೆ ಗಂಡುಮಕ್ಕಳಿಲ್ಲದ ಕಾರಣಕ್ಕೆ ಶೃಂಗೇರಿ ಮಠಕ್ಕೆ ಹೋಗಿ ಆ ಔಷಧಿ ಪುಸ್ತಕಗಳನ್ನು ಕಾಣಿಕೆಯಾಗಿ ಸಮರ್ಪಿಸಿ ಇನ್ನು ಮುಂದೆ ನಾಟಿವೈದ್ಯ ಮುಂದುವರಿಸುವುದಿಲ್ಲವೆಂದು ಪ್ರಮಾಣ ಮಾಡಿ ಮರಳಿದರಂತೆ.
ಕೈಯಲ್ಲಿ ಅಜ್ಜನ ಶಿಷ್ಯರಲ್ಲಿ ಮಾಯಿಲಂಕೋಟೆ ತುಕ್ಕೋಜಿರಾವ್, ಕೈಯ್ಯಣ್ಣಿ ಓಬೋಜಿರಾವ್ ಮೊದಲಾದವರು ತಾಳಮದ್ದಳೆಗಳಲ್ಲಿ ಭಾಗವತಿಕೆ ಮಾಡುತ್ತಿದ್ದರು. ತಮ್ಮ ಕಾಲಕ್ಕೆ ಒಳ್ಳೆಯ ಭಾಗವತರು ಎಂಬ ಕೀರ್ತಿ ಅವರಿಗೆ ಇರದೇ ಇದ್ದರೂ ಹಳ್ಳಿಯಲ್ಲಿ ನಡೆಯುವ ತಾಳಮದ್ದಳೆಗಳಿಗೆ ಅವರೇ ಆಪದ್ಬಾಂಧವರಾಗಿ ಒದಗುತ್ತಿದ್ದರು. ತುಕ್ಕೋಜಿರಾಯರು ಅಜ್ಜನಿಂದ ಭಾಗವತಿಕೆ ವಿಷಯವನ್ನು ನನ್ನಲ್ಲಿ ಹೇಳಿಕೊಂಡಿದ್ದರು. ಬೇರೆಯವರಲ್ಲಿ ಅಭ್ಯಾಸ ಮಾಡಿದ ಓಬೋಜಿರಾಯರು ಭಾಗವತಿಕೆ ಕಲಿಕೆ ಮುಂದುವರಿಸಲು ಅಜ್ಜನಲ್ಲಿಗೆ ಬರುತ್ತಿದ್ದರೆಂದು ಅವರೇ ಹೇಳಿದ್ದರು. ಇವರು ಹಳ್ಳಿಯಲ್ಲಿ ತಾಳಮದ್ದಳೆಗಳಿಗೆ ಭಾಗವತಿಕೆ ಮಾಡುವುದನ್ನು ನಾನು ಕಾಲೇಜು ದಿನಗಳಲ್ಲಿ ನೋಡಿದ್ದೇನೆ.
ಅಜ್ಜನ ಇನ್ನೊಂದು ಮುಖ್ಯ ಪ್ರವೃತ್ತಿ ಎಂದರೆ ಯಕ್ಷಗಾನ ಸೂತ್ರದ ಬೊಂಬೆಯಾಟ. ಸೂತ್ರದ ಬೊಂಬೆಗಳನ್ನು ತಯಾರಿಸುವುದು, ಬೊಂಬೆಯಾಟ ಆಡಿಸುವುದು, ಅದಕ್ಕೆ ಬೇಕಾದ ತರಬೇತಿಗಳನ್ನು ಕೊಟ್ಟು ಕಲಾವಿದರನ್ನು ರೂಪಿಸುವುದು ಇವರ ಹವ್ಯಾಸದ ಭಾಗವೇ ಆಗಿತ್ತು. ಇದನ್ನು ಅತ್ತೆಯಂದಿರು ನೆನಪಿಸಿ ನನ್ನಲ್ಲಿ ಹೇಳುತ್ತಿದ್ದರು. ಶಂಭು ಆಚಾರಿ, ಕುಞ್ಞಿರಾಮ ಮಣಿಯಾಣಿ ಬೊಂಬೆಯಾಟ ದಲ್ಲಿಯೂ ಅರ್ಥಗಾರಿಕೆ ಮಾಡುತ್ತಿದ್ದರಂತೆ. ಮೂರು ದಿನಗಳ ಬೊಂಬೆಯಾಟ ಪ್ರದರ್ಶನ ಆ ದಿನಗಳಲ್ಲಿ ಸುಳ್ಯ ಜಾತ್ರೆಯ ದಿನಗಳಲ್ಲಿ ನಿರಂತರವಾಗಿ ಏರ್ಪಡಿಸುತ್ತಿದ್ದರೆಂದು ನನ್ನ ಅತ್ತೆಯವರಲ್ಲಿ ಒಬ್ಬರಾದ ಕಮಲಾಬಾಯಿ ನೀರುಮಾರ್ಗ ಅವರು ಹೇಳುತ್ತಿದ್ದರು. ಅಪ್ಪನ ಜೊತೆ ಬೊಂಬೆ ತಯಾರಿಯಲ್ಲಿ ನೆರವಾದ ದಿನಗಳನ್ನು ಅವರು ನೆನಪಿಸಿಕೊಳ್ಳುತ್ತಿದ್ದರು. ಅವರೊಮ್ಮೆ ಮನೆಗೆ ಬಂದಿದ್ದಾಗ ನಾನು ಯಕ್ಷಗಾನದಲ್ಲಿ ಪಾತ್ರ ನಿರ್ವಹಿಸುವ ವಿಚಾರ ತಿಳಿದು ಅಜ್ಜನ ಪರಂಪರೆಯನ್ನು ನೀನೊಬ್ಬನಾದರೂ ಮುಂದುವರಿಸು ಎಂದು ಹೇಳಿದ್ದರು. ಆಗ ಅಜ್ಜನ ಬೊಂಬೆಯಾಟ, ತಾಳಮದ್ದಳೆ ವಿಚಾರಗಳನ್ನು ಹೇಳುತ್ತಿದ್ದರು. ಅವರಾಗಿ ಹೇಳುವ ಹೊತ್ತಿಗೆ ನನಗೆ ಅಂತಹ ಆಸಕ್ತಿಯೇನು ಇರಲಿಲ್ಲ. ಆದರೆ ಮುಂದೆ ಅವರಿಂದ ನಾನು ಅಜ್ಜನ ಬೊಂಬೆಯಾಟ ತಂಡದ ಬಗೆಗೆ ಇನ್ನಷ್ಟು ಕೇಳಿ ತಿಳಿದು ಕೊಳ್ಳಬಹುದೆಂಬ ದಾಹ ಹುಟ್ಟುವ ಹೊತ್ತಿಗೆ ಅತ್ತೆಯೂ ಕಾಲವಾಗಿದ್ದರು.
ಅಪ್ಪ, ದೊಡ್ಡಪ್ಪ ಇವರೆಲ್ಲ ಉದ್ಯೋಗ ನಿಮಿತ್ತ ಹುಟ್ಟೂರಿನ ಹೊರಗೆ ಕಳೆದುದರಿಂದ ಅವರಿಗೆ ಅಜ್ಜನ ಯಕ್ಷಗಾನ ಚಟುವಟಿಕೆಗಳ ಬಗೆಗೆ ಹೆಚ್ಚಿನ ಮಾಹಿತಿಯೇನೂ ಇರಲಿಲ್ಲ. ಅಜ್ಜ ನಿವೃತ್ತರಾದ ಮೇಲೆ ಕರ್ನಾಟಕ ಪೊಲೀಸರಿಗೆ ಟೋಪಿ ತಯಾರಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರಂತೆ. ಅದನ್ನು ದೊಡ್ಡಪ್ಪ, ಅಣ್ಣ ಇವರೆಲ್ಲ ಆಗಾಗ ಹೇಳುತ್ತಿದ್ದರು.
ಅಜ್ಜ ನಿವೃತ್ತರಾದ ಮೇಲೆ ಪಕ್ಷವಾತದಿಂದ ಅವರು ಒಂದಷ್ಟು ಬಳಲಿದ್ದರಂತೆ. ಬಳಿಕ ವಾಸಿಯಾದ ಮೇಲೆ ಅವರ ಒಂದು ಕಾಲು ಮಡಚಲು ಆಗುತ್ತಿರಲಿಲ್ಲವಂತೆ. ಹಾಗಾಗಿ ದೊಡ್ಡದೊಂದು ದೊಣ್ಣೆಯ (ಊರು ಗೋಲು) ಸಹಾಯದಿಂದ ನಡೆಯುತ್ತಿದ್ದರು. ಈ ಕಾರಣಕ್ಕೆ ಸಮುದಾಯದ ಬಂಧುಗಳು ದೊಣ್ಣೆ ಅಜ್ಜ ಎಂದೇ ಕರೆಯುತ್ತಿದ್ದರು ಅವರನ್ನು ಊರಿನ ಇತರ ಎಲ್ಲರೂ ’ದೊಣ್ಣೆ ಮಾಮ’ ಎಂದೇ ಕರೆಯುತ್ತಿದ್ದರು. ನಾನು ಚಿಕ್ಕಂದಿನಲ್ಲಿ ಹಿರಿಯರಿಗೆ ಪರಿಚಯ ಹೇಳಿಕೊಳ್ಳಲು ಹೆಣಗಾಡುತ್ತಿದ್ದಾಗ ಅವರೇ ’ದೊಣ್ಣೆ ಅಜ್ಜನ ಪುಳ್ಳಿ ಅಲ್ಲವೇ’ ಎನ್ನುತ್ತಿದ್ದರು. ಇತರರು ’ಹಾಂ ಗೊತ್ತಾಯ್ತು, ಗೊತ್ತಾಯ್ತು. ನೀನು ದೊಣ್ಣೆ ಮಾಮಂಡೆ ಪುಳ್ಳಿ’ (ನೀನು ದೊಣ್ಣೆ ಮಾಮನ ಮೊಮ್ಮಗ) ಎಂದೇ ಹೇಳುತ್ತಿದ್ದರು. ಊರಿನ ಅಂದಿನ ಹಿರಿಯರಿಗೆ ದೊಣ್ಣೆ ಮಾಮ ಸುಪರಿಚಿತ ವ್ಯಕ್ತಿ. ಇವತ್ತು ಅಜ್ಜನ ಹತ್ತಿರದಿಂದ ಬಲ್ಲ ಹಾಗೂ ಬಾಲ್ಯದಲ್ಲಿ ಒಡನಾಡಿದ ಊರಲ್ಲಿ ಕೆಲವರಿದ್ದರೂ ಅವರಲ್ಲಿ ಅಜ್ಜನ ಕಲಾಸಕ್ತಿಯ ಕುರಿತ ಹೆಚ್ಚಿನ ಮಾಹಿತಿ ಏನೂ ಇಲ್ಲ.
ನನ್ನ ತಂದೆಗೆ ಅಜ್ಜನ ಯಕ್ಷಗಾನ ಆಸಕ್ತಿ ಹೊರತುಪಡಿಸಿ ಇತರೆಲ್ಲ ಕೌಶಲ್ಯಗಳೂ ಕರಗತವಾಗಿದ್ದವು. ನಾಟಿ ವೈದ್ಯರಿಂದ ಹಿಡಿದು ಮೆಕಾನಿಕ್ ಕೆಲಸದವರೆಗೂ ತಂದೆಯವರು ಪಳಗಿದ್ದರು.
ಕಟ್ಟಡಗಳಿಗೆ ಸುಣ್ಣಬಣ್ಣ ಬಳಿಯುವುದು, ಹೆಂಚಿನ ಮಾಡುಗಳಿಗೆ ಮೂಲೆ ಹಂಚು ಕೂರಿಸುವುದು, ಮಾಡುಗಳಿಗೆ ಮುಳಿಹುಲ್ಲು ಹೊದೆಸುವುದು, ಗಾರೆ ಕೆಲಸ, ಸಿಮೆಂಟ್ ಕೆಲಸ, ನೊಗ, ನೇಗಿಲು, ತಯಾರಿಯ ಬಡಗಿ ಕೆಲಸಗಳು, ಮನೆಯ ಅಡುಗೆ ಕೆಲಸಕ್ಕೆ ಉಪಯೋಗವಾಗುವ ಗೆರಟೆಯ ಸಟ್ಟುಗ ತಯಾರಿ, ಬಳ್ಳಿಗಳಿಂದ, ತಾಳೆಗರಿಗಳಿಂದ ಬುಟ್ಟಿ ಹೆಣೆಯುವುದು, ಗ್ಯಾಸ್ ಲೈಟ್ ರಿಪೇರಿ, ಸಿಗರ್ಲೈಟ್ ರಿಪೇರಿ, ಟಾರ್ಚ್ಲೈಟ್ ರಿಪೇರಿ, ಕೊಡೆ ರಿಪೇರಿ, ನೀರೆತ್ತುವ ವಿಲ್ಲಿಯರ್ಸ್ ಪಂಪು ರಿಪೇರಿ, ಟ್ರ್ಯಾಕ್ಟರ್ನಲ್ಲಿ ಉಳುವುದು ಹೀಗೆ ಗೊತ್ತಿಲ್ಲದ ಕೆಲಸಗಳೇ ಇಲ್ಲ. ಎಲ್ಲಾ ಕೆಲಸಗಳನ್ನು ಅಷ್ಟೇ ಕಲಾತ್ಮಕವಾಗಿ, ಸಮರ್ಪಕವಾಗಿ ಮಾಡುತ್ತಿದ್ದರು. ಕೃಷಿ ಕೆಲಸಗಳಲ್ಲಿ ಪರಿಣತಿ ಇತ್ತು. ಉಳುವಾಗ ಎತ್ತುಗಳಿಗೆ ಹೊಡೆಯುವ ಕೋಲುಗಳಿಗೆ (ಹೂಟೆ ಕೋಲು) ಬಾಳೆನಾರಿನಿಂದ ಗೊಂಡೆ ಹಾಕಿ ಮಾಡಿ ಸಿಂಗರಿಸುತ್ತಿದ್ದರು. ಮಳೆಯಿಂದ ರಕ್ಷಣೆ ಪಡೆಯುವ ತೆಂಗಿನಗರಿಯ ಗೊರಬು ತಯಾರಿ ಹೀಗೆ ಒಂದೇ ಎರಡೇ. ಯಾವುದನ್ನೂ ಆರ್ಥಿಕ ಲಾಭಕ್ಕಾಗಿ ಮಾಡಿರಲಿಲ್ಲ. ಹಾಗಾಗಿ ಪ್ರವೃತ್ತಿಯೊಂದನ್ನು ವೃತ್ತಿಯಾಗಿ ಒಂದನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲೂ ಇಲ್ಲ. ಊರಿನ ಯಾವುದೇ ವ್ಯಕ್ತಿಗಳ ಕರೆ ಬಂದರೂ ಹೋಗಿ ಆ ಕೆಲಸಗಳನ್ನು ಮಾಡಿಕೊಟ್ಟು ಬರುತ್ತಿದ್ದರು. ಅವರು ಕೆಲಸಕ್ಕೆ ಹೋಗುವುದು ಎಂದರೆ ಮಣ್ಣಿನ ಕೆಲಸಕ್ಕೆ ಹೋಗುವಾಗ ಹಾರೆ ಪಿಕಾಸಿಗಳ ಹಿಡಿಕೆ ಹಾಕಿ ತಯಾರಿ ಮಾಡುವುದು, ಸುಣ್ಣ ಬಳಿಯಲು ಹೋಗುವಾಗ ಮುಂಡಗೆ ಕಾಂಡದಿಂದ ಬ್ರಶ್ ಸಿದ್ಧಪಡಿಸುವುದು ಹಾಗೆ ವೃತ್ತಿಗೆ ಬೇಕಾದ ಸಲಕರಣೆಗಳನ್ನು ಸ್ವತಹ ಸಿದ್ಧ ಮಾಡಿಕೊಳ್ಳುತ್ತಿದ್ದರು. ಉಳುಮೆಗೆ ಬೇಕಾದ ನೇಗಿಲು, ನೊಗ, ಹಲಗೆ, ಹೂಟೆಕೋಲು ಎಲ್ಲವೂ ಅಪ್ಪ ಸ್ವತಹ ತಯಾರು ಮಾಡಿಕೊಳ್ಳುತ್ತಿದ್ದರು. ಮನೆಯಲ್ಲಿ ಉಳಿ, ಬಾಚಿ, ಗರಗಸ, ಸ್ಪಾನರ್, ಸ್ಕ್ರೂಡ್ರೈವರ್ ಹೀಗೆ ಒಂದು ದೊಡ್ಡ ಗ್ಯಾರೇಜಿನ ಸಾಮಾನು ಅವರ ಸುಪರ್ದಿಯಲ್ಲಿತ್ತು. ಗ್ಯಾಸ್ಲೈಟ್ ರಿಪೇರಿಗೊಂದು ಸಂಚಿ, ಸಿಗಾರ್ ಲೈಟ್ ರಿಪೇರಿಗೆ ಇನ್ನೊಂದು ಸಂಚಿ, ಕೊಡೆ ರಿಪೇರಿಗೆ ಮಗದೊಂದು ಹೀಗೆ ಎಲ್ಲ ಸಲಕರಣೆಗಳಿಗೆ ಬೇರೆ ಬೇರೆ ಸಂಚಿಗಳೇ ಇದ್ದುವು. ಹೀಗೆ ತಾಂತ್ರಿಕ ಕೆಲಸಗಳಲ್ಲೂ ಒಂದು ಕಲಾತ್ಮಕ ಶಿಸ್ತು. ತಂದೆಯವರಿಗೆ ಇದು ಅಜ್ಜನಿಂದ ಬಳುವಳಿಯಾಗಿ ಬಂದಿರಬೇಕು. ಅಜ್ಜ ತನ್ನ ಕಲಾಕೌಶಲ್ಯವನ್ನು ಬೊಂಬೆ, ಪೊಲೀಸು ಟೋಪಿಯಂತಹ ರಚನೆಗಳಲ್ಲಿ ತೋರುತ್ತಿದ್ದರು. ಅದು ಅವರ ಹವ್ಯಾಸದ ಮುಖ್ಯ ಧಾರೆಯೇ ಆಗಿತ್ತು. ತಂದೆಯವರು ಜನಬಳಕೆಯ ಕರಕುಶಲ ವಸ್ತುಗಳ ತಯಾರಿಯಲ್ಲಿ ತೋರುತ್ತಿದ್ದರು.
ಹೀಗೆ ಗ್ರಾಮೀಣ ಭಾಗಗಳಲ್ಲಿ ಅನೇಕ ಹಿರಿಯರು ಕಲಾಸಕ್ತಿಯಿಂದ, ಸಾಮಾಜಿಕ ಕಾಳಜಿಯಿಂದ ಬದುಕಿದವರಿದ್ದಾರೆ. ಅವರ್ಯಾರೂ ಇಂದಿನ ತಲೆಮಾರಿನವರಿಗೆ ಗುರುತು ಸಿಗುವಂತಹ ಚಹರೆಗಳನ್ನು ಉಳಿಸಿಕೊಂಡು ಹೋಗಿಲ್ಲದಿರಬಹುದು. ಆದರೆ ಅಂಥವರನ್ನು ಹುಡುಕಿ ಅವರ ಸಾಧನೆಗಳ ಅನಾವರಣ ಮಾಡುವ ಅಗತ್ಯ ಇವತ್ತಿನ ಸಮಾಜಕ್ಕೆ ಇದೆ. ಇಲ್ಲಿನ ಸುಳಿವುಗಳಿಂದ ಅಜ್ಜ ಅಪ್ಪೋಜಿರಾಯರ ಬಗೆಗೆ ಇತರರು ನೀಡುವ ಬೇರೆ ಮಾಹಿತಿಗಳನ್ನು ನೀಡಬಹುದು. ಹಾಗೆಯೇ ಇತರೆ ವ್ಯಕ್ತಿಗಳ ಬಗೆಗೆ ಈ ಬಗೆಯ ಮಾಹಿತಿಗಳ ಸಂಗ್ರಹಕ್ಕೆ ಇಂತಹ ಪ್ರಯತ್ನ ಕಾರಣವಾಗಬಹುದೆಂಬ ಆಶಯ ಇಲ್ಲಿಯದು.
ಇದರಲ್ಲಿನ ಕಥೆಗಳ ವಿವರಗಳನ್ನು ಅಜ್ಜನ ಸಂಗ್ರಹದಿಂದ ಯಥಾವತ್ತಾಗಿ ಹೊಸಗನ್ನಡಕ್ಕೆ ವರ್ಗಾಯಿಸಲಾಗಿದೆ. ಮೋಡಿಲಿಪಿಯ ಹಸ್ತಪ್ರತಿಯಲ್ಲಿ ಹಳೆಯ ಕಾಲದ ಬರವಣಿಗೆಯಿದೆ. (ಮಾದರಿ ಹಸ್ತಪ್ರತಿಯ ಚಿತ್ರವನ್ನು ಪುಸ್ತಕದ ಕೊನೆಯಲ್ಲಿ ಗಮನಿಸಬಹುದು).
ವ್ಯಾಪಕ ಓದಿನ ಪರಿಣಾಮದಿಂದ ಮಾತ್ರ ಇಂತಹದೊಂದು ಸಂಗ್ರಾಹ್ಯ ಬರವಣಿಗೆ ಯನ್ನು ಮಾಡುವುದು ಸಾಧ್ಯ ಎಂಬುದು ಮನವರಿಕೆಯಾದೀತು. ಕತೆಗಳ ಸಂಕ್ಷಿಪ್ತ ನಿರೂಪಣೆಯಲ್ಲಿ ಭಾಷೆಯ ಕೌಶಲ್ಯವನ್ನು ಕಾಣಬಹುದು. ಹೊಸಗನ್ನಡದ ಓದಿಗೆ ನಿಲುಕುವಂತೆ ಸ್ವಲ್ಪಮಟ್ಟಿಗೆ ಭಾಷೆಯನ್ನು ಪರಿಷ್ಕರಿಸಲಾಗಿದೆ. ಓದಿಗೆ ಅನುಕೂಲವಾಗ ಲೆಂದು ಅಕಾರಾದಿಯಾಗಿ ಕತೆಗಳನ್ನು ಜೋಡಿಸಲಾಗಿದೆ.
ಇಲ್ಲಿರುವ ವಿವರಗಳಿಗೆ ಆಕರಗಳು ಯಾವುದೆಂದು ತಿಳಿದಿಲ್ಲ. ಅವುಗಳನ್ನು ಶೋಧಿಸುವ ಕೆಲಸವನ್ನೂ ಮಾಡಲಿಲ್ಲ. ಅವುಗಳಲ್ಲಿ ಕೆಲವೊಂದು ಜಾಗದಲ್ಲಿ ಹುಳು ತಿಂದು ನಾಶವಾಗಿದ್ದರಿಂದ ಅಕ್ಷರಗಳು ಇರಲಿಲ್ಲ. ಅವುಗಳನ್ನು ಜೋಡಿಸುವುದಕ್ಕೆ ಕೆಲವೊಂದು ಪುರಾಣ ಕೋಶಗಳ ನೆರವು ಪಡೆದಿದ್ದೇನೆ. ಉಳಿದಂತೆ ಹೆಚ್ಚಿನ ಸೇರ್ಪಡೆಯನ್ನು ಮಾಡಲಿಲ್ಲ. ಇದು ಆ ಕಾಲದಲ್ಲಿ ಯಕ್ಷಗಾನ ತಾಳಮದ್ದಳೆಗಳಲ್ಲಿ ಅರ್ಥ ಹೇಳಲು ಆಸಕ್ತರಿಗೆ ಉಪಯುಕ್ತವಾದ ವಿವರಗಳು. ಈಗಲೂ ಈ ಬಗೆಯ ಮಾಹಿತಿಗಳು ಯಕ್ಷಗಾನ ಪ್ರಿಯರಿಗೆ ಉಪಯೋಗಕ್ಕೆ ಬರಬಹುದು ಎಂದು ಭಾವಿಸಲಾಗಿದೆ.
–ಮೋಹನ ಕುಂಟಾರ್
ಪುಟ ತೆರೆದಂತೆ…
ಸವಿನುಡಿ / ೩
ಬೊಂಬೆಯಾಟದ ರೂವಾರಿ ದೊಣ್ಣೆ ಅಜ್ಜನ ನೆನಪಿನ ಮೆಲುಕು / ೫
ಕೃತಜ್ಞತೆಗಳು / ೧೩
ಅಂಬರೀಶನು ದೂರ್ವಾಸರನ್ನು ರಕ್ಷಿಸಿದ ಕಥೆ / ೨೧
ಅರ್ಜುನನು ನೆಗಳುಗಳಾಗಿ ಬಿದ್ದಿರುವವರನ್ನು ಉದ್ಧರಿಸಿದ ಕಥೆ / ೨೧
ಅರ್ಜುನನು ಪಾಶುಪತ ಅಸ್ತ್ರ ಪಡೆದ ಕಥೆ / ೨೨
ಅರ್ಜುನನು ಖಾಂಡವ ವನವನ್ನು ದಹಿಸಿದ ಕಥೆ / ೨೨
ಅರುಣ ಗರುಡರ ಜನನ ಕಥೆ / ೨೩
ಅರುವತ್ತನಾಲ್ಕು ವಿದ್ಯೆಗಳು / ೨೩
ಅಷ್ಟಾಂಗ ಯೋಗಗಳ ವಿವರ / ೨೪
ಆಶ್ರಮ ಮತ್ತು ಆಶ್ರಮ ಧರ್ಮ ವಿಚಾರ / ೨೪
ಇಂದ್ರನಿಗೆ ಮಕ್ಕಳಾದ ಕಥೆ / ೨೫
ಏಕಾದಶೀ ಮಹಿಮೆಯ ಕಥೆ / ೨೫
ಐವತ್ತಾರು ದೇಶಗಳು / ೨೬
ಕಬಂಧನ ಕಥೆ / ೨೬
ಕರ್ಣನ ಪೂರ್ವಾಪರ ಚರಿತ್ರೆ / ೨೭
ಕಲುಷ ಕಾಂತಾರದ ಕಥೆ / ೨೮
ಕಾಮ ಚಕ್ರೇಶ್ವರನ ಹೆಸರುಗಳು / ೨೮
ಕುಬೇರನ ಜನ್ಮ ಕಥೆ / ೨೮
ಕೌರವರು ನೂರು ಮಂದಿ / ೨೯
ಕೌರವಾದಿಗಳ ಘೋಷ ಯಾತ್ರೆಯ ಕಥೆ / ೩೦
ಕೌರವಾದಿಗಳ ಮಕ್ಕಳ ವಿವರ / ೩೦
ಕೌರವರ ಯುದ್ಧ ಸೈನ್ಯದ ವಿವರ / ೩೧
ಖರ, ದೂಷಣ, ತ್ರಿಶಿರರ ಪೂರ್ವಜನ್ಮ ಕಥೆ / ೩೧
ಗಂಗಾದೇವಿಯ ಪೂರ್ವ ಚರಿತ್ರೆ / ೩೨
ಗಜಾಸುರನ ಹನನ/ಗಣಪತಿ ಉದ್ಭವ ಕಥೆ / ೩೨
ಗಜೇಂದ್ರ ಮೋಕ್ಷದ ಕಥೆ / ೩೩
ಗಣಪತಿಯು ಚಂದ್ರನಿಗೆ ಶಾಪ ಕೊಟ್ಟ ಕಥೆ / ೩೪
ಗರುಡನಿಗೆ ಶಾಪ ಬಂದ ಕಥೆ / ೩೫
ಗರುಡನು ಅಮೃತ ಕಲಶ ತಂದ ಕಥೆ / ೩೫
ಗೌತಮ ಋಷಿಯು ಇಂದ್ರನಿಗೂ ಅಹಲ್ಯೆಗೂ ಕೊಟ್ಟ ಶಾಪ / ೩೬
ಚಿತ್ರೆ ನಂಗೆಯರೆಂಬ ದೇವಕಿಯ ಮಕ್ಕಳ ಚರಿತ್ರೆ / ೩೭
ಚಂದ್ರನಿಂದುಂಟಾದ ಚಂದ್ರವಂಶದ ವರ್ಣನೆ / ೩೭
ಚಂದ್ರಹಾಸನ ಕಥೆ / ೩೮
ಚಂಡಿಯ ಶಾಪ ಕಾರಣದ ಕಥೆ / ೩೯
ಜಟಾಯು ಸಂಪಾತಿಯರ ಕಥೆ / ೩೯
ಜಯಂತನಿಗೆ ಶಾಪ ಬಂದಿರುವ ಕಥೆ / ೪೦
ತಮಾಸುರನ ನಾಶ ಮತ್ತು ಮತ್ಸ್ಯ ಅವತಾರದ ಕಥೆ / ೪೦
ತಾಟಕಾ, ಮಾರೀಚ, ಸುಬಾಹುಗಳ ಜನ್ಮಕಥೆ / ೪೧
ತ್ರಿಶಂಕು ಸ್ವರ್ಗ ವಿಧಾನದ ಕಥೆ / ೪೧
ದಂಡಕನ ಚರಿತ್ರೆ ದಂಡಕಾರಣ್ಯದ ಕಥೆ / ೪೧
ದಕ್ಷನು ನಾರದನಿಗೆ ಕೊಟ್ಟ ಶಾಪದ ಕಥೆ / ೪೨
ದಶರಥ ಪುತ್ರ ಕಾಮ್ಯಾಧ್ವರ ಮಾಡಿದ ಕಥೆ / ೪೩
ದ್ರುಪದರಾಯನ ಜನನ ಮತ್ತು ದ್ರೌಪದಿಯ ಉದ್ಭವ / ೪೩
ದೇವತೆಗಳು ಮರಗಳಾಗಿ ಜನಿಸಿದ ಕತೆ / ೪೪
ದೇವೆಂದ್ರನಿಗಿರುವ ಹೆಸರುಗಳು / ೪೫
ದ್ರೌಪದಿಯ ಪೂರ್ವ ಜನ್ಮದ ಕಥೆ / ೪೫
ದ್ರೋಣನ ಜನ್ಮಕಥೆ, ಅಶ್ವತ್ಥಾಮನ ಉದ್ಭವ ಚರಿತ್ರೆ / ೪೫
ಧರ್ಮರಾಯನ ರಾಜ್ಯವಾಳುವಿಕೆ / ೪೭
ಧರ್ಮರಾಯನ ಅಶ್ವಮೇಧ ಯಾಗದ ಕಥೆ / ೪೮
ನದಿಗಳ ಹೆಸರುಗಳು / ೪೯
ನರಕಗಳ ವಿವರ / ೪೯
ನರಸಿಂಹ ಅವತಾರ ಮತ್ತು ಹಿರಣ್ಯಕಶ್ಯಪುವಿನ ಸಂಹಾರದ ಕಥೆ / ೫೦
ನವಖಂಡಗಳ ವಿಸ್ತಾರದ ಕಥೆ / ೫೦
ನಾರದನ ಜನ್ಮಕಥೆ / ೫೧
ನಾರದನು ಶಾಪದಿಂದ ವಿರಾಧನಾದ ಕಥೆ / ೫೧
ನಾರಾಯಣನ ನಾಮಾವಳಿಗಳು / ೫೨
ನಿಮಿ ಕುಲದ ವಿಸ್ತಾರದ ಕಥೆ / ೫೨
ನಿಷಾದನೆಂಬ ಕಿರಾತ ವಂಶದ ಕಥೆ / ೫೩
ಪಂಚವಟಿಯೆಂಬ ನಾಮ ಬಂದ ಕಥೆ / ೫೪
ಪಕ್ಷಿಗಳ ವರ್ಣನೆಗಳು / ೫೪
ಪದ್ಮಾಸುರ, ಅಜಮುಖಿಯರ ಜನ್ಮಕಥೆ / ೫೪
ಪರ್ವತಗಳ ಹೆಸರುಗಳು / ೫೫
ಪರಶುರಾಮವತಾರದ ಕಥೆ / ೫೫
ಪ್ರಳಯ ವಿಚಾರದ ಕಥೆ / ೫೬
ಪಾಂಡವರ ಪೂರ್ವಜನ್ಮ ಕಥೆ / ೫೬
ಪಾಂಡವರ ಮಕ್ಕಳು ಮತ್ತು ಸಾರಥಿಗಳ ವಿವರ / ೫೮
ಪಾಂಡವರ ರಾಜಸೂಯಾಧ್ವರದ ವಿವರ / ೫೮
ಪಾಂಡವರು ವಿರಾಟನಲ್ಲಿರುವಾಗ ನಡೆದ ಕಥೆ / ೫೮
ಪಾಂಡವರು ವಿಷ ಸರೋವರದ ನೀರು ಕುಡಿದು ಬದುಕಿದ ಕಥೆ / ೫೯
ಪಾಂಡವರು ಸ್ವರ್ಗಕ್ಕೆ ತೆರಳಿದ ಕಥೆ / ೫೯
ಪುಷ್ಪಗಳ ವರ್ಣನೆಗಳು / ೬೧
ಬ್ರಹ್ಮನ ನಾಮಾವಳಿಗಳು / ೬೧
ಭಗವದ್ಗೀತೆಯ ಬೋಧನೆಯ ವಿವರ / ೬೧
ಭಗೀರಥನು ಗಂಗೆಯನ್ನು ಧರಿತ್ರಿಗೆ ತಂದ ಕಥೆ / ೬೨
ಭಸ್ಮಾಸುರನ ಜನ್ಮಕಥೆ/ಸ್ತ್ರೀಕಾರವನದ ಕಥೆ / ೬೪
ಭೃಗುಋಷಿಯು ವಿಷ್ಣುವಿಗೆ ಮತ್ತು ಅಗ್ನಿಗೆ ಶಾಪ ಕೊಟ್ಟ ಕಥೆ / ೬೫
ಭಾರತ ಯುದ್ಧದ ಪಾಂಡವರ ಸೇನೆಯ ವಿವರ / ೬೫
ಭೀಷ್ಮನ ಪೂರ್ವಜನ್ಮ ಚರಿತ್ರೆ / ೬೬
ಮಯೂರಧ್ವಜನ ಯಾಗದ ಕಥೆ / ೬೬
ಮಹಮ್ಮೇರು ಪರ್ವತದ ವಿವರ / ೬೭
ಮೃಗಗಳು / ೬೭
ಮಾಗಧನ ಜನ್ಮ ಕಥೆ / ೬೭
ಮಾಗಧನ ಭೇರಿಯಂತ್ರದ ಕಥೆ / ೬೮
ಮಾಗಧನು ಕೃಷ್ಣ ಬಲರಾಮರಲ್ಲಿ ಯುದ್ಧ ಮಾಡಿದ ಕಥೆ / ೬೯
ಮಾಲಿ ಸುಮಾಲಿ ಮಾಲ್ಯವಂತರ ಜನನ ಮತ್ತು ಅವರ ಮಕ್ಕಳ ಉದ್ಭವ ಕಥೆ / ೬೯
ಮುಖ್ಯಪ್ರಾಣನ ಜನ್ಮ ಚರಿತ್ರೆ / ೭೦
ಮುಖ್ಯಪ್ರಾಣನ ಬಾಲ್ಯ ಚರಿತ್ರೆ / ೭೧
ಮುಚುಕುಂದನೆಂಬ ರಾಜನಿಗೆ ಮುಕ್ತಿಯನ್ನು ಕೊಟ್ಟ ಕಥೆ / ೭೨
ಮುನಿಗಳ ನಾಮಾವಳಿಗಳು / ೭೩
ಮ್ಲೇಚ್ಛ ವಂಶದ ಜನ್ಮ ಕಥೆ / ೭೩
ಯಾದವನು ನಾಶ ಹೊಂದಿದ ಕಥೆ / ೭೩
ರಾವಣನ ಜನ್ಮ ಕಥೆ / ೭೫
ರಾವಣನು ದಶರಥ ಕೌಸಲ್ಯೆಯರನ್ನು ಶರಧಿಗೆ ಬಿಸುಟ ಕಥೆ / ೭೬
ರಾವಣನು ಮರುತ್ತರಾಯನ ಯಾಗ ಶಾಲೆಗೆ ಪ್ರವೇಶ ಮಾಡಿದ ಕಥೆ / ೭೭
ರಾವಣನು ಮಾಯೆಯಿಂದ ಸೀತಾದೇವಿಯನ್ನು ಒಯ್ದ ಕಥೆ / ೭೮
ರಾವಣನ ದಿಗ್ವಿಜಯದ ಕಥೆ / ೭೯
ರಾವಣನಿಗೆ ವೇದವತಿಯು ಶಾಪ ಕೊಟ್ಟಿದ್ದು ಮತ್ತು ಸೀತೆಯ ಜನ್ಮ ಕಥೆ / ೭೯
ವಟವೃಕ್ಷಗಳ ವರ್ಣನೆಗಳು / ೮೦
ವಸುದೇವನ ವಂಶ ಚರಿತ್ರೆ / ೮೧
ವೃತ್ತ್ರಾಸುರನ ಜನ್ಮಕಥೆ ಮತ್ತು ಪೂರ್ವ ಚರಿತ್ರೆ/ ೮೧
ವೃತ್ತ್ರಾಸುರನನ್ನು ಇಂದ್ರನು ಜಯಿಸಿದ ಕಥೆ / ೮೩
ವೃಷಭಾಸುರನ ಜನನ/ಅಂಜನಾದ್ರಿಯ ಮಹಿಮೆ / ೮೩
ವಾತಾಪಿ ಇಲ್ವಲರ ಕಥೆ / ೮೪
ವಾಮನಾವತಾರದ ಕಥೆ / ೮೫
ವಾಲಿ ಸುಗ್ರೀವರ ಜನ್ಮಕಥೆ ಮತ್ತು ಋಕ್ಷರಾಜ ಚರಿತ್ರೆ / ೮೬
ವಾಲಿಯು ರಾವಣನನ್ನು ಹಿಡಿದು ತಂದ ಕಥೆ / ೮೬
ವಾಲಿ ಸುಗ್ರೀವರಿಗೆ ವೈರತ್ವವು ಸಂಭವಿಸಿದ ಕಥೆ / ೮೭
ವಾಲಿಗೆ ಇಂದ್ರನು ಸ್ವರ್ಣಮಾಲಿಕೆಯನ್ನು ಕರುಣಿಸಿದ ಕಥೆ / ೮೮
ವಿಶ್ವಾಮಿತ್ರ ಮುನಿಯ ಜನ್ಮಕಥೆ / ೮೮
ವಿಶ್ವಾಮಿತ್ರನು ರಾಮಲಕ್ಷ್ಮಣರಿಗೆ ಕೊಟ್ಟ ಆಯುಧಗಳ ಜನ್ಮಕಥೆ / ೮೯
ವಿಷ್ಣುವಿಗೆ ಪುಂಡರೀಕಾಕ್ಷನೆಂಬ ಬಿರುದು ಬಂದ ಕಥೆ / ೯೦
ವಿರಾಟರಾಯನ ಜನ್ಮಕಥೆ / ೯೦
ವೇದಗಳು, ಪುರಾಣಗಳು, ಶಾಸ್ತ್ರಗಳು / ೯೧
ಶಂಖ ಲಿಖಿತರ ಕಥೆ / ೯೧
ಶಕುಂತಲೆಯ ಜನ್ಮಕಥೆ / ೯೨
ಶೃಂಗ ಋಷಿಯ ಜನ್ಮಕಥೆ / ೯೨
ಶ್ರೀಕೃಷ್ಣ ಬಲರಾಮರ ಬಾಲಕೇಳಿಗಳು / ೯೩
ಶ್ರೀಕೃಷ್ಣನು ರುಕ್ಮಿಣಿಯನ್ನು ಒಲಿಸಿದ ಕಥೆ / ೯೪
ಶ್ರೀಕೃಷ್ಣನ ಮಕ್ಕಳ ಮತ್ತು ಪತ್ನಿಯರ ವಿವರ / ೯೫
ಶ್ರೀರಾಮನು ರಾಜ್ಯವಾಳಿ ವೈಕುಂಠಕ್ಕೆ ತೆರಳಿದ ಕಥೆ / ೯೬
ಶ್ರೋಣಾ ನದಿಯ ಜನ್ಮಕಥೆ / ೯೯
ಷಣ್ಮುಖನ ಜನ್ಮಕಥೆ ಮತ್ತು ಕಾಮನ ದಹನ / ೧೦೦
ಸಂಜೀವದೌಷಧಿಯ ವಿವರ / ೧೦೧
ಸದಾಶಿವನು ತ್ರಿಪುರ ದಾನವರನ್ನು ನಾಶ ಮಾಡಿದ ಕಥೆ / ೧೦೧
ಸಮುದ್ರ ಮಥನ ಮತ್ತು ಕೂರ್ಮಾವತಾರದ ಕಥೆ / ೧೦೨
ಸರಯೂ ನದಿಯ ಜನ್ಮಕಥೆ / ೧೦೩
ಸಪ್ತ ದಿಕ್ಪಾಲಕರ ಜನನ ಮತ್ತು ವಾಸಸ್ಥಾನದ ಕಥೆಗಳು / ೧೦೩
ಸಪ್ತ ದ್ವೀಪಗಳ ವಿವರ ಕಥೆ / ೧೦೫
ಸಪ್ತ ಮರುತ್ತುಗಳ ಜನ್ಮಕಥೆ / ೧೦೫
ಸಪ್ತ ಲೋಕಗಳು ಮತ್ತು ಸಪ್ತ ತಳಗಳು / ೧೦೬
ಸಪ್ತ ಸಾಗರಗಳ ವಿವರಗಳು / ೧೦೬
ಸೃಷ್ಟಿಯ ವಿಧಾನ / ೧೦೭
ಸ್ವರ್ಗದ ವಿವರಗಳು / ೧೦೮
ಸಿದ್ಧಾಶ್ರಮದ ವಿಸ್ತಾರ ಕಥೆ / ೧೦೮
ಸುವರ್ಚಲಾ ಎಂಬ ಸ್ತ್ರೀಯು ದಶರಥನ ಯಾಗದಿಂದ ಶಾಪ ವಿಮುಕ್ತಳಾದದ್ದು / ೧೦೮
ಸೂರ್ಯ ವಂಶದ ವಿಸ್ತಾರ ಕಥೆ / ೧೦೯
ಹನುಮಂತನಿಗೆ ಮಗನು ಜನಿಸಿದ ಕಥೆ / ೧೦೯
ಹರಿಶ್ಚಂದ್ರನ ಸತ್ಯವ್ರತದ ಕಥೆ / ೧೧೦
ಹಸ್ತಿನಾವತಿಯ ವಿವರ ಪಾಂಡವರ ಕೌರವರ ಜನ್ಮಕಥೆ / ೧೧೧
ಹಿರಣ್ಯಾಕ್ಷ, ಹಿರಣ್ಯಕಶ್ಯಪು ಇವರ ಜನನ ಮತ್ತು ವರಾಹ ಅವತಾರದ ಕಥೆ / ೧೧೩
ಅಪ್ಪೋಜಿರಾವ್ ಜಾದವ್ ಅವರ ಹಸ್ತಾಕ್ಷರ / ೧೧೫
ಆದೂರು ಕೆಳಗಿನಮನೆ ಅಪ್ಪೋಜಿರಾವ್ ಜಾದವ್ ಇವರ ವಂಶಾವಳಿ / ೧೧೬
Reviews
There are no reviews yet.