ಮುನ್ನುಡಿ
ಭರತವರ್ಷದಲ್ಲಿ ಜನಿಸಿರುವ ನಮಗೆ ನಮ್ಮ ಸನಾತನ ಪರಂಪರೆಯಲ್ಲಿ ವೈದಿಕಸಾಹಿತ್ಯವು ಪ್ರಧಾನವಾದುದು. ವೇದಗಳ ಅಪೌರುಷೇಯತ್ವ, ವೈಶಾಲ್ಯಗಳು ಒಂದೆಡೆಯಾದರೆ ಸನಾತನ ಧರ್ಮದ ಅತ್ಯಂತ ಪ್ರಾಚೀನ ಸಾಹಿತ್ಯವೂ ವೇದಮೂಲವೇ ಆಗಿರುವುದು ಅವುಗಳ ಹೆಗ್ಗಳಿಕೆಯಾಗಿದೆ. ಶ್ರುತಿ, ಆಮ್ನಾಯ ಮುಂತಾದ ಅನೇಕ ಸಾರ್ಥಕ ಹೆಸರುಗಳಿಂದ ಅವು ಅಲಂಕೃತವಾಗಿವೆ. ಭಾರತೀಯರಾದ ನಮ್ಮ ಜೀವನಮಾರ್ಗಕ್ಕೆ ವೇದಗಳೇ ಶಾಶ್ವತವಾದ ಮತ್ತು ಸರಿಯಾದ ದಾರಿದೀಪಗಳು. ವೈದಿಕ ಜೀವನಮಾರ್ಗಕ್ಕೆ ಸರಿಸಾಟಿಯಾಗುವ ಇನ್ನೊಂದು ಬದುಕಿನ ರೀತಿಯು ಇಲ್ಲವೆಂದರೆ ಅತಿಶಯೋಕ್ತಿಯಲ್ಲ.
ಭಗವಂತನು ಮಾನವಕುಲವು ಕರ್ಮಬಂಧದಿಂದ ಮೋಕ್ಷವನ್ನು ಪಡೆದು ಅನಂತವಾದ ಆನಂದವನ್ನು ಅನುಭವಿಸಲು ಅನುಸರಿಸಬೇಕಾದ ಮಾರ್ಗ ಗಳನ್ನೂ ತಿಳಿಸುವ ಜ್ಞಾನರೂಪವಾದ ಶಬ್ದಮಯವಾದ ವೇದವನ್ನೂ, ಪರಂಪರಾಗತವಾಗಿ ಪ್ರತಿಯೊಬ್ಬ ಜೀವನಿಗೂ ಲಭಿಸುವಂತೆ, ಮೊದಲು ಚತುರ್ಮುಖ ಬ್ರಹ್ಮನಿಗೆ ಉಪದೇಶಿಸಿದನು. ಯೋ ಬ್ರಹ್ಮಾಣಂ ವಿದಧಾತಿ ಪೂವಂ ಯೋ ವೈ ವೇದಾಂಶ್ಚ ಪ್ರಹಿಣೋತಿ ತಸ್ಮೈ | ತಗ್ಂಹ ದೇವಮಾತ್ಮ ಬುದ್ಧಿ ಪ್ರಕಾಶಂ ಮುಮುಕ್ಷುರ್ವೈ ಶರಣಮಹಂ ಪ್ರಪದ್ಯೇ || -(ಶ್ವೇತಾ…. ಉಪನಿಷತ್) ಬಳಿಕ ಮಂತ್ರದ್ರಷ್ಟಾರರಾದ ಋಷಿಗಳಿಗೂ, ಮುಂದೆ ಅವರ ಶಿಷ್ಯಪ್ರಶಿಷ್ಯ ಪರಂಪರೆಯಲ್ಲಿ ಬೆಳೆದು ಬರುವಂತೆಯೂ ಉಪದೇಶಿಸಿದ್ದಾನೆ. ಈ ವೇದಗಳಲ್ಲಿ ಜೀವ, ಪ್ರಕೃತಿ, ಪರಮಾತ್ಮರ ಸ್ವರೂಪ, ಸ್ಥಿತಿ, ಪರಸ್ಪರ ಸಂಬಂಧ, ಜೀವನು ಸಂಸಾರ ಬಂಧನದಲ್ಲಿ ಸಿಲುಕಿಕೊಂಡಿರಲು ಕಾರಣ, ಜೀವನು ಧರ್ಮಾರ್ಥಕಾಮ ಮೋಕ್ಷಗಳನ್ನು ಪಡೆಯುವ ಹಾದಿ, ಅವುಗಳ ಸ್ವರೂಪ ಮೊದಲಾದ ವಿಷಯಗಳೆಲ್ಲವೂ ವಿಸ್ತಾರವಾಗಿ ತಿಳಿಸಲ್ಪಟ್ಟಿವೆ.
ವೇದ’ -ಎಂಬ ಶಬ್ದವು ಜ್ಞಾನಾರ್ಥಕವಾದ ವಿದ್” ಧಾತುವಿನಿಂದ ನಿಷ್ಪನ್ನವಾಗಿದೆ. ಪ್ರತಿಯೊಬ್ಬ ಮನುಷ್ಯನಿಗೂ ಸೌಖ್ಯವನ್ನು ಪಡೆಯಬೇಕೆಂಬ ಇಚ್ಛೆಯೂ, ಹಾಗೆಯೇ ಕಷ್ಟಗಳನ್ನು ಪರಿಹರಿಸಿಕೊಳ್ಳಬೇಕೆಂಬ ಆಸೆಯೂ ಇರುತ್ತದೆ. ಅಂದರೆ ಪ್ರತಿಯೊಬ್ಬ, ಮಾನವನಿಗೂ ಸುಖಾದಿಗಳು ಇಷ್ಟ ವಾಗಿಯೂ, ದುಃಖಾದಿಗಳು ಇಷ್ಟವಲ್ಲದೆ ಅನಿಷ್ಟವಾಗಿಯೂ ಇರುತ್ತದೆ. ಈ ರೀತಿಯಾಗಿ ಇಷ್ಟವಾದ ಸುಖಾದಿಗಳನ್ನು ಪಡೆಯಲು ಮತ್ತು ದುಃಖಾದಿ ಅನಿಷ್ಟಗಳನ್ನು ಪರಿಹರಿಸಿಕೊಳ್ಳಲು (ಪ್ರತ್ಯಕ್ಷ ಅನುಮಾನಗಳಿಗಿಂತಲೂ ಭಿನ್ನವಾದ ಅಲೌಕಿಕವಾದ) ಉಪಾಯವನ್ನು ಯಾವ ಗ್ರಂಥವು ತಿಳಿಸುತ್ತದೆಯೋ ಆ ಜ್ಞಾನರೂಪವಾದ ಮತ್ತು ಜ್ಞಾನ ಗುಣಕವಾದ ಗ್ರಂಥವೇ ವೇದ’ ಎಂದು ಕರೆಯಲ್ಪಡುತ್ತದೆ.
ಇಷ್ಟಪ್ರಾಪ್ತನಿಷ್ಟ ಪರಿಹಾರಯೋ ಅಲೌಕಿಕಮುಪಾಯಂ ಯೋ ಗ್ರಂಥ: ವೇದಯತಿ ಸ ವೇದಃ | ಅಲೌಕಿಕ ಪದೇನ ಪ್ರತ್ಯಕ್ಷಾನುಮಾನೇ ವ್ಯಾವರ್ತ್ಯೇತೇ ||
ಮಾಧವಾಚಾರ್ಯರು ವೇದಾರ್ಥ ಪ್ರಕಾಶಿಕಾದಲ್ಲಿ ವೇದದ ಅರ್ಥವನ್ನು ಹೀಗೆ ತಿಳಿಸಿದ್ದಾರೆ.
ಈ ವೇದವು ಅರ್ಥವನ್ನೊಳಗೊಂಡಿದ್ದರೂ ಶಬ್ದ ಪ್ರಧಾನವಾದುದು. ಲೌಕಿಕ ಸಂಸ್ಕೃತ ಸಾಹಿತ್ಯದಂತೆಯೇ ಇದರಲ್ಲಿ ಪದ್ಯಗದ್ಯಗಳೆರಡೂ ಇವೆ. ವಿಶೇಷವಾಗಿ ಪರಿಮಿತವಾದ ಅಕ್ಷರಗಳಿಂದ ಕೂಡಿ ಛಂದೋಬದ್ಧವಾಗಿ ಪದ್ಯರೂಪದಲ್ಲಿರುವ ವೇದದ ಭಾಗವನ್ನು ಋಕ್’ ಎಂದೂ, ನಿಯತವಾದ ಅಕ್ಷರ ಪರಿಮಿತಿಗೊಳಗಾಗದೆ ಇರುವ ಗದ್ಯಾತ್ಮಕವಾದ ವೇದ ಭಾಗವನ್ನು ಯಜುಸ್’ ಎಂದೂ ಮತ್ತು ಗಾನಪ್ರಧಾನವಾದ ವೇದಭಾಗವನ್ನು ಸಾಮ’ ಎಂದೂ ಮೊತ್ತಮೊದಲು ವಿಭಾಗಿಸಿದರು.
ನಿಯತವಾದ ಕೆಲಸವಿದ್ದರೂ ಹಿಂದೆ ವೇದಗಳು ಯಜ್ಞಾದಿಗಳಲ್ಲಿ ವಿಶೇಷವಾಗಿ ಪ್ರಯೋಗಿಸಲ್ಪಡುತ್ತಿದ್ದಿತು. ಯಜ್ಞದ ಪರಿಚಯ ಎಲ್ಲರಿಗೂ ಇರುತ್ತಿತ್ತು, ಹಾಗಿದ್ದರೂ ಎಲ್ಲರೂ ಎಲ್ಲ ವಿಧವಾದ ವೇದಮಂತ್ರಗಳನ್ನೂ ಅಧ್ಯಯನ ಮಾಡುವುದು ಕಷ್ಟಕರವಾದುದೆಂದರಿತ ವೇದವ್ಯಾಸ ಮಹರ್ಷಿಗಳು ವೇದವನ್ನು ಹೋತೃಕಾಂಡ, ಅಧ್ವರ್ಯವಕಾಂಡ, ಉದ್ಘಾತಕಾಂಡ ಮತ್ತು ಬ್ರಹ್ಮಕಾಂಡವೆಂದು ವಿಭಾಗ ಮಾಡಿದರು. ಈ ವಿಭಾಗಕ್ರಮವು ಅಲ್ಪಸ್ವಲ್ಪ ವ್ಯತ್ಯಾಸದಿಂದ ಕೂಡಿದ್ದರೂ ಮೊದಲಿನ ವಿಭಾಗ ಕ್ರಮದೊಡನೆ ಹೊಂದುತ್ತದೆ. ಆದುದರಿಂದಲೇ ಹೋತೃಕಾಂಡದ ಮಂತ್ರಗಳೆಲ್ಲವೂ ಋಕ್ಕುಗಳ ರೂಪದಲ್ಲಿ ರುವುದರಿಂದ ಅದನ್ನು ಋಗ್ವೇದ’ವೆಂದು ಕರೆದರು. ಅಧ್ವರ್ಯವಕಾಂಡದ ಮಂತ್ರಗಳು ಯಜುಸ್ಸಿನ ರೂಪದಲ್ಲಿಯೇ ವಿಶೇಷವಾಗಿದ್ದುದರಿಂದ ಅದಕ್ಕೆ ಯಜುರ್ವೇದ’ವೆಂದು ಕರೆದರು. ಹಾಗೆಯೇ ಉದ್ಘಾತಕಾಂಡದ ಮಂತ್ರಗಳು ಗೇಯ ಪ್ರಧಾನವಾಗಿದ್ದುದರಿಂದ ಅದಕ್ಕೆ ಸಾಮವೇದ’ವೆಂಬ ಹೆಸರನ್ನಿಟ್ಟರು. ಆದರೆ, ಬ್ರಹ್ಮಕಾಂಡವು ಗದ್ಯಪದ್ಯಗಾನಾತ್ಮಕವಾಗಿ ಎಲ್ಲ ವಿಧವಾದ ಮಂತ್ರಗಳನ್ನೂ ಒಳಗೊಂಡುದುದರಿಂದ ಮೇಲಿನ ರೀತಿಯ ಹೆಸರಾವುದನ್ನೂ ಇಟ್ಟು ಅದನ್ನು ವ್ಯವಹರಿಸಲಾಗದಿದ್ದುದರಿಂದ, ಆ ಕಾಂಡದ ಮಂತ್ರ ಭಾಗಗಳನ್ನು ಅಥರ್ವಣವೇದ’ವೆಂದು ಹೆಸರಿಸಿದರು.
ಯಜುರ್ವೇದದಲ್ಲಿ ಶುಕ್ಲಯಜುರ್ವೇದ ಮತ್ತು ಕೃಷ್ಣ ಯಜುರ್ವೇದ ವೆಂದು ಎರಡು ಭಾಗಗಳಿವೆ. ಸಾಮಾನ್ಯವಾಗಿ ವೇದಗಳನ್ನು ಸಂಹಿತಾ, ಬ್ರಾಹ್ಮಣ, ಆರಣ್ಯಕ ಮತ್ತು ಉಪನಿಷತ್ತು ಎಂದು ನಾಲ್ಕು ಭಾಗವಾಗಿ ವಿಂಗಡಿಸಲಾಗುತ್ತದೆ, ವಿಶೇಷವಾಗಿ ಸಂಹಿತೆಗಳು ಯಜ್ಞಗಳಲ್ಲಿ ವಿನಿಯೋಗಿ ಸಲ್ಪಡುವ ಮಂತ್ರಗಳನ್ನೂ, ಬ್ರಾಹ್ಮಣಗಳು, ಯಜ್ಞ ಮಾಡುವ ಮತ್ತು ಮಂತ್ರ ವಿನಿಯೋಗ ಕ್ರಮಗಳನ್ನೂ, ಆರಣ್ಯಕಗಳು -ಮುನಿವೃತ್ತಿಯಿಂದ ವ್ರತದಲ್ಲಿದ್ದು ಭಗವಂತನನ್ನು ಉಪಾಸನ ಮಾಡುವ ಕ್ರಮವನ್ನೂ ಮತ್ತು ಉಪನಿಷತ್ತುಗಳು ಜೀವ, ಪ್ರಕೃತಿ, ಪರಮಾತ್ಮರ ಸ್ವರೂಪ ಸಂಬಂಧ ಮೊದಲಾದುವುಗಳನ್ನು ತಿಳಿಸುತ್ತವೆ. ಇವುಗಳಲ್ಲಿ ವಿಶೇಷವಾಗಿ ಭಗವಂತನನ್ನು ಯಜ್ಞಯಾಗಾದಿಗಳಿಂದ ಆರಾಧಿಸುವ ಕ್ರಮವನ್ನು ತಿಳಿಸುವ ಸಂಹಿತಾ, ಬ್ರಾಹ್ಮಣಗಳನ್ನು ಆರಾಧನ ಕಾಂಡವೆಂದೂ ಮತ್ತು ಆರಾಧ್ಯನಾದ ಭಗವಂತನ ಸ್ವರೂಪವನ್ನು ತಿಳಿಸುವ ಆರಣ್ಯಕ ಉಪನಿಷತ್ತುಗಳನ್ನು ಆರಾಧ್ಯಕಾಂಡವೆಂದೂ ಕರೆಯುತ್ತಾರೆ.
ವೇದವೆಂಬ ಜ್ಞಾನರಾಶಿಯಿಂದ ಅತ್ಯುಪಯುಕ್ತವಾದ ಮಂತ್ರಗಳನ್ನು ಆಯ್ಕೆ ಮಾಡಿ ಸಾಗರ ತಾಲ್ಲೂಕು ಗೋಳಗೋಡಿನ ಪ್ರಸ್ತುತ ಸಾಗರದ ವಿಜಯನಗರದ ನಿವಾಸಿಯಾಗಿರುವ ಶ್ರೀಧರ ಶರ್ಮಾರವರು ಅದರ ಅರ್ಥವನ್ನೂ ಕೂಡ ಸಂಗ್ರಹಿಸಿದ್ದಾರೆ. ಮಂತ್ರಗಳ ಅರ್ಥವನ್ನು ತಿಳಿದು ಕೊಳ್ಳುವುದರಿಂದ ಜೀವನವನ್ನು ಉತ್ತಮಪಡಿಸಿಕೊಳ್ಳಲು ದಾರಿದೀಪವಾಗುತ್ತದೆ. ವೇದಗಳ ಬಗ್ಗೆ ಸನಾತನ ಧರ್ಮದ ಬಗ್ಗೆ ಗೌರವವೂ ಮೂಡುತ್ತದೆ.
ಕೆಲವು ಮಂತ್ರಗಳ ಕುರಿತು ಪಕ್ಷಿನೋಟ
೪ನೆಯ ಮಂತ್ರದಲ್ಲಿ ಮನುಷ್ಯರಿಗಲ್ಲದೆ ನಾಲ್ಕು ಕಾಲಿನ ಪ್ರಾಣಿಗಳಿಗೂ ಪುಷ್ಟಿಯನ್ನು ಬಯಸಿ ಪ್ರಾರ್ಥಿಸಲಾಗಿದೆ.
೧೪ನೆಯ ಮಂತ್ರದಲ್ಲಿ ಒಳ್ಳೆಯದನ್ನೇ ಕೇಳೋಣ, ಒಳ್ಳೆಯದನ್ನೇ ನೋಡೋಣ, ಮಂಗಲಪ್ರದ ಕಾರ್ಯಗಳನ್ನು ಮಾಡೋಣ ಎಂದು ದಿವ್ಯಸಂದೇಶವಿದೆ.
೧೫ನೆಯ ಮಂತ್ರದಲ್ಲಿ ಮೇಧಾ, ಪ್ರಜ್ಞಾ, ಪ್ರತಿಭಾ, ಬುದ್ಧಿ ಮುಂತಾದವುಗಳು ನಮ್ಮಲ್ಲಿ ಪ್ರವಹಿಸಲಿ ಎಂದು ಸರಸ್ವತಿಯಲ್ಲಿ ಪ್ರಾರ್ಥಿಸ ಲಾಗಿದೆ.
ಇಪ್ಪತ್ಮೂರನೆಯ ಮಂತ್ರದಲ್ಲಿ ದೇಹಕ್ಕೆ ಶಕ್ತಿ ಕೊಡುವ, ಖಾಯಿಲೆಗಳನ್ನು ವಾಸಿ ಮಾಡುವ ಓಷಧಿಗಳನ್ನೂ ಸ್ತುತಿಸಲಾಗಿದೆ.
೨೪ನೆಯ ಮಂತ್ರದಲ್ಲಿ ನಮ್ಮ ನಿಶ್ಚಯಗಳು, ಭಾವನೆ, ಯೋಚನೆಗಳು ಒಂದಾಗಿರಲಿ ಎಂದು ಬಯಸಲಾಗಿದೆ. ಇದನ್ನು ಅಳವಡಿಸಿಕೊಂಡರೆ ಪ್ರತಿ ಮನೆಯೂ ನಂದನವನವಾಗುವುದರಲ್ಲಿ ಸಂಶಯವಿಲ್ಲ.
೩೨ನೆಯ ಮಂತ್ರದಲ್ಲಿ ನೀರನ್ನೂ ಕೂಡ ನಮಗೆ ಹಿತಕರವಾಗಿರಲೆಂದು ಪ್ರಾರ್ಥಿಸಲಾಗಿದೆ. ನೀರಿಲ್ಲದೆ ಬದುಕಿಲ್ಲ.
೩೮ನೆಯ ಮಂತ್ರದಲ್ಲಿ ಗುರುವು ಶಿಷ್ಯನಿಗೆ ತನ್ನಿಂದ ಒಳ್ಳೆಯದು ಹೇಳಿದ್ದೇನಿದೆಯೋ ಅದನ್ನು ಮಾತ್ರ ನೀನು ಉಪಾಸಿಸಬೇಕು. ಕೆಟ್ಟದ್ದು ನನ್ನಲ್ಲಿದ್ದರೆ, ಕೆಟ್ಟದ್ದನ್ನು ಹೇಳಿದ್ದರೆ ಅದನ್ನು ಉಪಾಸಿಸಬೇಡ ಎಂದು ದಿಟ್ಟನುಡಿಯಿದೆ.
೩೯ನೆಯ ಮಂತ್ರದಲ್ಲಿ ಅನ್ನವನ್ನು ಪರಬ್ರಹ್ಮಸ್ವರೂಪವೆಂದು ಸ್ತುತಿಸ ಲಾಗಿದೆ. ಅನ್ನವನ್ನು ಹಾಳುಮಾಡಬಾರದೆಂಬ ಸಂದೇಶವಿದೆ. ಸೇವಿಸುವ ಅನ್ನಕ್ಕೂ ಅಷ್ಟು ಮಹತ್ತ್ವವಿದೆ.
೪೭ನೆಯ ಮಂತ್ರದಲ್ಲಿ ಶ್ರದ್ಧೆಯ ಮಹತ್ತ್ವವನ್ನು, ಉಪಯುಕ್ತತೆಯನ್ನು ಸಾರಲಾಗಿದೆ.
೬೬ನೆಯ ಮಂತ್ರದಲ್ಲಿ ಪಾಪಗಳನ್ನು ಪರಿಹರಿಸಿ, ಭದ್ರವಾದದ್ದನ್ನು ನೆಲೆಗೊಳಿಸೆಂದು ಸೂರ್ಯನಲ್ಲಿ ಪ್ರಾರ್ಥನೆಯಿದೆ.
೮೩ನೆಯ ಮಂತ್ರದಲ್ಲಿ ದಂಪತಿಗಳು ಹೇಗೆ ಬಾಳಬೇಕೆಂಬುದರ ಕುರಿತು ಮಾರ್ಗದರ್ಶನವಿದೆ.
೯೨ನೆಯ ಮಂತ್ರದಲ್ಲಿ ಶುದ್ಧಿಯ ಕುರಿತು ಪ್ರಾರ್ಥನೆ ಇದೆ. ದೇಹಶುದ್ಧಿ, ಮನಃಶುದ್ಧಿ, ಆತ್ಮಶುದ್ಧಿ ಮಾನವನಿಗೆ ಆವಶ್ಯಕ.
೧೦೦ನೆಯ ಮಂತ್ರದಲ್ಲಿ ನಮ್ಮನ್ನು ಒಳ್ಳೆಯ ದಾರಿಯಲ್ಲಿ ನಡೆಸೆಂದು ಅಗ್ನಿದೇವನನ್ನು ಪ್ರಾರ್ಥಿಸಲಾಗಿದೆ.
೧೦೨ನೆಯ ಮಂತ್ರದಲ್ಲಿ ದಾನದ ಮಹತ್ತ್ವ ಕುರಿತು ಮಹತ್ತಾದ ಸಂದೇಶವಿದೆ.
ಶ್ರೀಧರ ಶರ್ಮಾರವರು ಸಂಗ್ರಹಿಸಿದ ಪ್ರತಿಯೊಂದು ಮಂತ್ರಗಳೂ ಇಂದಿನ ಜೀವನಕ್ಕೆ ಮಾರ್ಗದರ್ಶಕಗಳಾಗಿವೆ. ೧೦೮ ಸಂಖ್ಯೆಯಲ್ಲಿ ಇದನ್ನು ಸಂಗ್ರಹಿಸಿದ್ದಾರೆ. ಜಪಮಾಲೆಯಲ್ಲಿ ೧೦೮ ಮಣಿಗಳಿರುವಂತೆ ೧೦೮ ಮಂತ್ರಗಳನ್ನು ಕ್ರಮಬದ್ಧವಾಗಿ ಪೋಣಿಸಿದ್ದಾರೆ. ಜಪ ಮಾಡಿದಂತೆಯೇ ಈ ಮಂತ್ರಗಳ ಅರ್ಥವನ್ನೂ ಜಪದ ತರಹ ಮನನ ಮಾಡಿಕೊಳ್ಳುತ್ತಲಿರಬೇಕು ಎಂಬ ಸಂದೇಶವನ್ನೂ ಕೊಟ್ಟಿದ್ದಾರೆ. ಹೀಗೆಯೇ ಉಪಯುಕ್ತವಾದ ೧೦೮ರ ಸಂಖ್ಯೆಯಲ್ಲಿ ಮಂತ್ರಗಳನ್ನು ಆಯ್ಕೆ ಮಾಡಿ ಅವುಗಳ ಅರ್ಥವನ್ನು ಸಂಪಾದಿಸಿ ೨ನೇ ಮಾಲಿಕೆ, ೩ನೇ ಮಾಲಿಕೆ ಹೀಗೆ ಪ್ರಕಟಿಸುವ ಹಂಬಲವು ಅವರದು. ವರದಹಳ್ಳಿಯ ಶ್ರೀಧರ ಸ್ವಾಮಿಗಳ ಪರಮಭಕ್ತರಾಗಿರುವ ಶ್ರೀಧರ ಶರ್ಮಾರವರು ಶ್ರೀಧರ ಸ್ವಾಮಿಗಳ ಜೀವನ, ಭಕ್ತರ ಕಷ್ಟಗಳನ್ನು ಪರಿಹರಿಸಿದ್ದು, ಸದಾ ಭಕ್ತರ ಶ್ರೇಯಸ್ಸನ್ನೇ ಬಯಸಿದ್ದು ಈ ಮಂತಾದ ಅವರ ಮಹಿಮೆಗಳ ಕುರಿತು ಹಲವಾರು ಊರು, ಪಟ್ಟಣಗಳಲ್ಲಿ ಓಡಾಡಿ ವಿಷಯ ಕ್ರೋಢೀಕರಿಸಿ ನಾಲ್ಕು ಪುಸ್ತಕಗಳ ಕೊಡುಗೆಯನ್ನಿತ್ತಿದ್ದಾರೆ. ಪ್ರೌಢಶಾಲಾ ಅಧ್ಯಾಪಕರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ಕಲಿಸಿದ ಇವರು ಈಗ ತಮ್ಮ ನಿವೃತ್ತ ಜೀವನವನ್ನು ಸಮಾಜಕ್ಕೆ ಸತ್ಸಂದೇಶ ನೀಡುವ ಪುಸ್ತಕಗಳನ್ನು ಬರೆಯಲು ವಿನಿಯೋಗಿಸುತ್ತಿರುವುದು ಸ್ತುತ್ಯರ್ಹ. ಶ್ರೀಧರ ಸಂದೇಶ ಪತ್ರಿಕೆಯಲ್ಲಿ ಸಹಸಂಪಾದಕರಾಗಿ ಅಂಕಣಗಳನ್ನೂ ಬರೆಯುತ್ತಿದ್ದಾರೆ. ಈ ಶಾಶ್ವತ ಮೌಲ್ಯಗಳು ಪುಸ್ತಕವು ಹೆಚ್ಚು ಹೆಚ್ಚು ಜನರನ್ನು ತಲುಪಲಿ, ತನ್ಮೂಲಕ ಅವರ ಆಶಯವು ಸಾರ್ಥಕಗೊಳ್ಳಲಿ ಎಂದು ಆಶಿಸುತ್ತೇನೆ.
–ರವೀಂದ್ರ ಶರ್ಮಾ, ಕೋಣನಕಟ್ಟೆ
ಸಂಗ್ರಾಹಕರ ಸವಿನುಡಿಗಳು
ಅನಂತ ನಮಸ್ಕಾರಗಳು; ಅನುಕ್ಷಣವು ಕೃತಜ್ಞತೆಗಳು. ಅಪ್ಪನ (ಶಿವಮೊಗ್ಗ ಜಿಲ್ಲೆ, ಸಾಗರ ತಾಲೂಕು, ತಾಳಗುಪ್ಪಾ ಹೋಬಳಿ ಸಿರಿವಂತೆ ಸೀಮೆಯ ಗೋಳಗೋಡು ಹೂವಿನಕುಳಿ ತಿಮ್ಮಯ್ಯ) ಅನುದಿನ ವೇದ-ಉಪನಿಷತ್ತು-ಭಾಗವತಗಳ ಪಠಣ-ಪಾರಾಯಣಕ್ಕೆ, ಅಪ್ಪನ ಸಾತ್ವಿಕ ವೈದಿಕ ಸನಾತನ ಸಂಸ್ಕೃತಿಯ ಬದ್ಧತೆಗೆ ಜೀವನೋತ್ಸಾಹದ ಸಹಕಾರ ನೀಡುತ್ತಿದ್ದ ಅಮ್ಮ ಅಪ್ಪೇಮನೆ ಕಮಲಾಕ್ಷಿಯ ಅದಮ್ಯ ಚೇತನಕ್ಕೆ, ತುಮಕೂರು ಜಿಲ್ಲೆ, ಗುಬ್ಬಿಯ ಶ್ರೀ ಚಿದಂಬರಾಶ್ರಮದ ಸಂಸ್ಥಾಪಕ ಶ್ರೀ ಚಿದಂಬರ ಸ್ವಾಮಿಗಳು, ವೇದ-ಉಪನಿಷತ್ತುಗಳನ್ನು ತಪ್ಪಿಲ್ಲದಂತೆ ಕಲಿಸಿದ ಶ್ರೀ ರಾಮಾ ಶಾಸ್ತ್ರಿಗಳು ಮತ್ತು ಅಣ್ಣೈಶಾಸ್ತ್ರಿಗಳ ಶಿಷ್ಯವಾತ್ಸಲ್ಯಕ್ಕೆ, ವರದಪುರದ ವಿಶ್ವಸಂತ ಶ್ರೀ ಶ್ರೀಧರ ಸ್ವಾಮಿಗಳ ವೇದಪರ-ಸನಾತನ ಧರ್ಮದ ಪರ ಗಟ್ಟಿ ನಿಲುವಿಗೆ, ಸದಾ ನನ್ನ ಹಿಂದೆ-ಮುಂದೆ: ಅಕ್ಕ-ಪಕ್ಕ ನಿಂತು ಓದಿಸಿ-ಬರೆಸುವ ನಿರಂತರ ನೀಡುವ ಕೃಪಾಶೀರ್ವಾದಗಳಿಗೆ, ವರದಪುರದ ಶ್ರೀ ಶ್ರೀಧರಾಶ್ರಮದಿಂದ ಆಶೀರ್ವಾದ ಕಳುಹಿಸಿದ ಶ್ರೀ ಶ್ರೀಧರ ಸೇವಾ ಮಹಾಮಂಡಲ (ರಿ) ವರದಪುರದ ಕಾರ್ಯದರ್ಶಿ ಕೆ.ವಿ.ಶ್ರೀಧರ ರಾವ್ ಇವರ ಸಮಯೋಚಿತ ಸಹಕಾರಕ್ಕೆ, ಇಂಥ ಅಪೂರ್ವ ಪುಸ್ತಕ ಶಾಶ್ವತ ಮೌಲ್ಯಗಳು ಕೃತಿಗೆ ವಿದ್ವತ್ಪೂರ್ಣ ಮುನ್ನುಡಿ ಬರೆದ ಸಾಗರದ-ಕೋಣನಕಟ್ಟೆಯ ಜ್ಯೋತಿಷಿ ಗಳೂ-ಪುರೋಹಿತರೂ ಆಗಿರುವ ರವೀಂದ್ರ ಶರ್ಮಾ ಅವರಿಗೆ, ಆಯ್ದ ಮಂತ್ರಗಳ ಪದವಿಂಗಡಣೆ ಮತ್ತು ಅಕ್ಷರಗಳ ಸರಿತಪ್ಪುಗಳನ್ನು ಪರಿಶೋಧಿಸಿ ಕೊಟ್ಟ ಋಗ್ವೇದ ಘನಪಾಠಿಗಳಾದ ಭಟ್ಟ ಗಿರಿ ಭಾಸ್ಕರರಾವ್ ತೆಲಂಗಾಣ ಅವರಿಗೆ, ಇವರ ಪರಿಚಯ ಮಾಡಿಕೊಟ್ಟ ವೇದವಿದ್ವಾಂಸರಾದ ಚಿದಂಬರ ಭಟ್ಟರು, ಸಾಗರ ಇವರಿಗೆ, ಸಾಗರದ ನನ್ನ ಈ ವೇದದ ಪುಸ್ತಕವನ್ನು ತಮ್ಮ ಕೃತಿಯೆಂದೇ ಸ್ವೀಕರಿಸಿ ಪ್ರಕಟಿಸಿದ ಹೊಸಪೇಟೆಯ ಭೂಮಿ ಪುಸ್ತಕದ ಶ್ರೀಮತಿ ಸವಿತಾ ಯಾಜಿ ಮತ್ತು ಶ್ರೀ ಗಣೇಶ ಯಾಜಿಯವರಿಗೆ, ಇವರನ್ನು ಪರಿಚಯಿಸಿದ ಮಣ್ಣಿಗೆ-ಹೊನ್ನಾವರದ ನಾಟಕಕಾರ ಎಂ.ಜಿ.ವಿಷ್ಣು ಅವರಿಗೆ, ಈ ಪುಸ್ತಕ ಸಂಗ್ರಹಿಸುವ ಕೆಲವೇ ದಿನಗಳ ಹಿಂದೆ ನಾನೊಮ್ಮೆ ನಡು ರಸ್ತೆಯಲ್ಲಿ ಬೀಳುವ ಸ್ಥಿತಿಯಲ್ಲಿದ್ದಾಗ ಅಪಾಯದ ಅಂಚಿನಲ್ಲಿದ್ದ ನನ್ನನ್ನು ಹಿಡಿದೆತ್ತಿ ಮರುಜನ್ಮ ನೀಡಿ ಕಾಪಾಡಿದ ನನ್ನ ವಾತ್ಸಲ್ಯದ ಮಗಳಂತಿರುವ ಶ್ರೀಮತಿ ಪೂಜಾ ಧನಂಜಯ ಗೌಡ ಅವರಿಗೆ ಆತ್ಮೀಯ ಧನ್ಯವಾದಗಳು; ಮತ್ತೆ ಮತ್ತೆ ನಿಜ ನೆನಪುಗಳು.
೧೯೭೨-೨೦೦೬ರ ಆ ದಿನಗಳಲ್ಲಿ ನಾನು ಚಿಕ್ಕಮಗಳೂರು ಜಿಲ್ಲೆ, ತರೀಕೆರೆ ತಾಲ್ಲೂಕು, ಅಜ್ಜಂಪುರದ ಕಲಾಸೇವಾ ಸಂಘ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕನಾಗಿದ್ದೆ. ಆವಾಗ ಪ್ರತಿ ಅವಧಿಯ ಕೊನೆಯ ಐದು ನಿಮಿಷಗಳಲ್ಲಿ ರಾಮಾಯಣ-ಮಹಾಭಾರತಗಳಿಂದ ಆಯ್ದ ಕಿರುಕತೆ-ಘಟನೆಗಳನ್ನು ಹೇಳುತ್ತಿದ್ದೆ. ಎಂಟನೇ ತರಗತಿಗೆ ಸೇರುವಾಗಲೇ ನನ್ನಿಂದ ದೇರಾಜೆ ಅವರ ಮಹಾಭಾರತ ಪುಸ್ತಕವನ್ನು ಪಡೆದು, ಓದಿ, ಪ್ರಬುದ್ಧತೆ ಗಳಿಸಿದ ನನ್ನ ವಿದ್ಯಾರ್ಥಿನಿ ಜಿ.ಬಿ.ಸುಮಾ ಪದೇ ಪದೇ ವೇದಗಳ ಬಗ್ಗೆಯೂ ಹೀಗೆ ಹೇಳಿ ಸರ್ ಎಂದು ಒತ್ತಾಯಿಸುತ್ತಿದ್ದ ಉತ್ಸಾಹಿ ಮನಸ್ಸಿನ ಕಲಿಕಾಸಕ್ತಿಗೆ. ಆ ದಿನಗಳಲ್ಲಿಯೇ ಅಜ್ಜಂಪುರದ ಹೆಮ್ಮೆಯ ವಾಸವೀ ದೇವಸ್ಥಾನದಲ್ಲಿ ಹಿರಿಯ ವಿದ್ವಾಂಸ ಕೆ.ಕೃಷ್ಣಭಟ್ಟರೊಂದಿಗೆ ಸಂಜೆ ಸಮಯ ಸಂಸ್ಕೃತವನ್ನು ಕಲಿಸುತ್ತಿದ್ದೆ. ಅಲ್ಲಿಗೆ ಬರುತ್ತಿದ್ದ ಸುಸಂಸ್ಕೃತ ಭರತಲಕ್ಷ್ಮಿ ಕೂಡ ವೇದಗಳ ಬಗ್ಗೆಯೂ ಹೀಗೆ ಹೇಳಿ ಸರ್ ಎಂದು ಮತ್ತೆ ಮತ್ತೆ ತೀವ್ರಾಸಕ್ತಿ ತೋರಿಸುತ್ತಿದ್ದ ನಿಲುಮೆಗೆ.
ವೇದಗಳು ಶಾಶ್ವತ ಎಂದು ಹೇಳುತ್ತಿದ್ದ ಸುಮಾಳ ಮತ್ತು ವೇದಗಳಲ್ಲಿ ಮೌಲ್ಯಗಳಿವೆ ಎಂದು ಹೇಳುತ್ತಿದ್ದ ಭರತಲಕ್ಷ್ಮಿಯ ಈ ಎರಡು ಶಬ್ದಗಳನ್ನೇ ಈ ಪುಸ್ತಕದ ಶೀರ್ಷಿಕೆಯನ್ನಾಗಿ ಆಯ್ದು ಶಾಶ್ವತ ಮೌಲ್ಯಗಳು ಎಂದೇ ಸಂಗ್ರಹಿಸಿ ವೇದಾಸಕ್ತರ ಮುಂದಿಡುತ್ತಿದ್ದೇನೆ. (ಗುರುಗಳ ಸಂಗ್ರಹ ಪುಸ್ತಕಕ್ಕೇ ಶೀರ್ಷಿಕೆ ನೀಡಿದ ವಿದ್ಯಾರ್ಥಿನಿಯರು!) ಅಂದು ನನ್ನ ವಿದ್ಯಾರ್ಥಿನಿಯಾಗಿದ್ದ ಕೆ.ಕಾತ್ಯಾಯನಿ ನ್ಯಾಯವಾದಿಯಾಗಿದ್ದಾಗಲೇ, ನನ್ನ ಮನೆಗೇ ಬಂದು ಗಣಪತಿ ಅಥರ್ವಶೀರ್ಷ ಉಪನಿಷತ್, ನಮಕ-ಚಮಕವೇ ಮುಂತಾಗಿ ಹಲವು ಮಂತ್ರಾಭ್ಯಾಸ ಮಾಡಿದ ವೇದೋತ್ಸಾಹಕ್ಕೆ. ಅಂತೆಯೇ ದೂರದ ಲಂಡನ್ನಿನ ಮಗಳ ಮನೆಯಲ್ಲಿದ್ದರೂ ಆನ್ಲೈನ್ ಮೂಲಕವೇ ಶ್ರದ್ಧಾಸೂಕ್ತ ಕಲಿತ ಪ್ರಭಾಳ ಗೌರವಾದರಗಳಿಗೆ. ವೇದೋಪನಿಷತ್ತುಗಳಿಗೆ ಈ ಪುಸ್ತಕವನ್ನು ಸಂಗ್ರಹಿಸಲು ಪ್ರೇರಣೆ ನೀಡಿದ ನನ್ನ ವಿದ್ಯಾರ್ಥಿನಿಯರಾದ ಕೆ.ಸಾವಿತ್ರಿ, ಎ.ಶ್ಯಮಂತಕಮಣಿ, ಜಿ.ಬಿ.ವಿಜಯಕುಮಾರಿ, ಕೆ.ಎಂ.ಅನಿತಾ, ಎಂ.ಗೌರಮ್ಮ, ಮಂಜುಳಾ ಮೊದಲಾದ ನೂರಾರು ವಿದ್ಯಾರ್ಥಿನಿಯರ ವೇದಪರಾಸಕ್ತಿಗೆ. ಅಜ್ಜಂಪುರದವರೇ ಆಗಿ ಸದ್ಯ ಶಿವಮೊಗ್ಗಾದಲ್ಲಿ ನೆಲಸಿರುವ, ವೇದಾಭ್ಯಾಸ ಮಾಡಿ ನಿತ್ಯ ವೇದಪಠಣೆ ಮಾಡುತ್ತಿರುವ ಕೆ.ಸುಬ್ರಹ್ಮಣ್ಯ, ಪೂರ್ಣಾವಧಿಯ ಪುರೋಹಿತರಾಗಿಯೂ ವೇದಾನುಸಂಧಾನಿಯಾಗಿ ವೇದಪರವಾಗಿಯೇ ಜೀವನ ನಡೆಸುತ್ತಿರುವ ನನ್ನ ವಿದ್ಯಾರ್ಥಿನಿ ಸಾವಿತ್ರಿಯ ಪತಿದೈವ ಚಂದ್ರಶೇಖರ ಉಡುಪರಿಗೆ. ಬೆಂಗಳೂರಿನ (ಅಮೃತಹಳ್ಳಿ) ಲೌಕಿಕರಾಗಿಯೂ ಸನಾತನಿಯಂತೆ ವೇದಪರ ಜೀವನ ನಡೆಸುತ್ತಿರುವ ಗುರುಪ್ರವೀಣ್ ಅವರ ವೇದಪರ ನಿಲುವಿಗೆ. ನಂಜನಗೂಡಿನಲ್ಲಿ ನಿವೃತ್ತ ಜೀವನ ನಡೆಸುತ್ತ ರಾಮಕೃಷ್ಣ-ಶಾರದಾಮಾತೆ-ವಿವೇಕಾನಂದರ ಪರಮ ಅನುಯಾಯಿಯಾಗಿ ವೇದೋಕ್ತ ಜೀವನ ನಡೆಸುತ್ತಿರುವ ಆನಂದ ರಾಜ್, ಗೋವಾದ ವಿಜಯಾ ಹೆಗಡೆ, ಅಜ್ಜಂಪುರ, ಸಾಗರ, ತರೀಕೆರೆ, ಮೈಸೂರು, ಗುಬ್ಬಿಯೇ ಮುಂತಾಗಿ ಹಲವು ಕಡೆ ನೆಲಸಿದ್ದರೂ ಅವರೆಲ್ಲರ ವೇದಪರ ಆಸಕ್ತಿಗೆ-ಉತ್ತೇಜನ-ಪ್ರೋತ್ಸಾಹಗಳಿಗೆ ನಾನು ಋಣಿ, ಋಣಿ ಮತ್ತೂ ಋಣಿ.
ಸದಾ ಹೀಗೆ ಬರೆಯುತ್ತಿರಲು ಸಹಕಾರ-ಪ್ರೋತ್ಸಾಹ ನೀಡುತ್ತಾ ಈ ಪುಸ್ತಕಕ್ಕೆ ಬೆನ್ನುಡಿ ಬರೆದ ನನ್ನ ಸಹಧರ್ಮಿಣಿ-ಲೇಖಕಿ ಎಸ್.ರೋಹಿಣೀ ಶರ್ಮಾ ಅವರಿಗೂ ಅನಂತ ಧನ್ಯವಾದಗಳು. ನನಗೆ ಬರೆಯಲು ಸಹಕರಿಸು ತ್ತಿರುವ ಮಗ- ಲೇಖಕ ಜಿ.ಎಸ್.ಆರ್ಯಮಿತ್ರ-ಸೊಸೆ ಶ್ವೇತಾ ಹೆಗಡೆ, ಮೊಮ್ಮಕ್ಕಳಾದ ಆದ್ಯಾ ಜಿ.ಎ., ಅಚಲಾ ಜಿ.ಎ. ಇವರನ್ನು ಸ್ಮರಿಸುತ್ತೇನೆ. ಹಾಗೂ ದೂರದ ಬೆಂಗಳೂರಿನಲ್ಲಿದ್ದರೂ ನನ್ನ ಆರೋಗ್ಯ-ಓದು-ಬರಹಗಳ ಬಗ್ಗೆ ತೀವ್ರ ಕಾಳಜಿ-ಕುತೂಹಲ ವ್ಯಕ್ತಪಡಿಸುತ್ತಿರುವ ಮಗಳು ಆತ್ಮ, ಮೊಮ್ಮಕ್ಕಳಾದ ಅವನಿ ಭಟ್, ಅಥರ್ವ ಭಟ್ ಇವರನ್ನೂ ನೆನೆಯುತ್ತೇನೆ. ಹೀಗೆ ನಿರಂತರ ಓದಿ-ಬರೆಯಲು ಪೂರಕವಾದ ಪರಿಸರ ನಿರ್ಮಿಸಿ ನನ್ನ ಪಾಡಿಗೆ ನನ್ನನ್ನು ಬಿಟ್ಟ ಸಾಗರ ಮತ್ತು ಸುತ್ತಮುತ್ತಲಿನ ಎಲ್ಲ ಸಹೃದಯರಿಗೂ ಧನ್ಯವಾದಗಳು. ನಾನು ಈ ಹಿಂದಿನ ಪುಸ್ತಕಗಳನ್ನು ನುಡಿಯಿಂದ ಬರೆಯುತ್ತಿದ್ದೆ. ಆದರೆ ಎಲ್ಲ ಕಡೆಯೂ ತೆರೆಯುವ ಅಕ್ಷರ ವಿನ್ಯಾಸ ಯುನಿಕೋಡ್ ಅಥವಾ ತುಂಗ ಎಂದು ವಿವರಿಸಿ, ಬರೆಯುವಂತೆ ಕಲಿಸಿದ ನನ್ನ ವಿದ್ಯಾರ್ಥಿನಿ ಸೌಭಾಗ್ಯಳನ್ನೂ ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ. ನನ್ನ ವಿದ್ಯಾರ್ಥಿಗಳಿಂದಲೂ ತುಂಬಾ ಮಾಹಿತಿ-ವಿಚಾರಗಳನ್ನು ತಿಳಿದು ಅಳವಡಿಸುವ ಭಾಗ್ಯವಂತ ನಾನೆಂದು ತಿಳಿಸಲು ಹೆಮ್ಮೆಯಾಗುತ್ತದೆ. ಹಾಗೆಯೇ ಸುಂದರವಾಗಿ ಮುಖಪುಟ ರಚಿಸಿಕೊಟ್ಟ ಶ್ರೀ ಮೋನಪ್ಪ ಎಚ್.ಎಸ್. ಅವರಿಗೆ, ಅಂದವಾಗಿ ಮುದ್ರಿಸಿ ಕೊಟ್ಟ ರಾಷ್ಟ್ರೋತ್ಥಾನ ಮುದ್ರಣಾಲಯದ ಸಿಬ್ಬಂದಿ ವರ್ಗಕ್ಕೆ ಕೃತಜ್ಞತೆಗಳು.
ನನ್ನ ಹಿಂದಿನ ಪುಸ್ತಕಗಳಂತೆ ಈ ಪುಸ್ತಕವನ್ನೂ ಕೊಂಡು-ಓದಿ ಸಹಕರಿಸುವ ಎಲ್ಲ ವೇದಾಸಕ್ತ ಸಹೃದಯರಿಗೆ ಋಣಿ.
ಕೊನೆಯದಾಗಿ -ಬಲು ಮುಖ್ಯವಾಗಿ- ಆಕಾಶದಲ್ಲಿರುವ ಅಸಂಖ್ಯಾತ ನಕ್ಷತ್ರಗಳಂತಿರುವ ವೇದ-ಉಪನಿಷತ್ತುಗಳಿಂದ ಕೇವಲ ೧೦೮ ನಕ್ಷತ್ರಗಳನ್ನು -ವಾಕ್ಯಗಳನ್ನು ಆಯ್ದು- ಅರ್ಥದೊಂದಿಗೆ ಸಂಗ್ರಹಿಸಿದ್ದೇನೆ. ಉಳಿದ ನಕ್ಷತ್ರಗಳ-ವಾಕ್ಯಗಳ ಅನುಸಂಧಾನಕ್ಕೆ ನೀವು ಮುಂದಾಗುತ್ತೀರೆಂಬ ಭರವಸೆಯಿದೆ. ನನ್ನ ಈ ಪುಸ್ತಕದ ಓದಿನಿಂದ ವೇದ-ಉಪನಿಷತ್ತುಗಳಲ್ಲಿ ನಿಮಗೆ ಆಸಕ್ತಿ-ಕುತೂಹಲ ಮೂಡಿದರೆ ನಾನು ಕೃತಾರ್ಥ. ನಾನು ಸದಾ ನಂಬುವ ವರದಪುರದ ವಿಶ್ವಸಂತ ಭಗವಾನ್ ಸದ್ಗುರು ಶ್ರೀ ಶ್ರೀಧರ ಸ್ವಾಮಿಗಳ ಕೃಪಾಶೀರ್ವಾದಗಳು ನಿಮ್ಮೆಲ್ಲರ ಮೇಲಿರುತ್ತವೆ ಎಂದು ನಂಬಿ ಪ್ರಾರ್ಥಿಸುವ,
ವೇದಾನುಸಂಧಾನಿ ಗುರುಭಕ್ತ
ಜಿ.ಟಿ.ಶ್ರೀಧರ ಶರ್ಮಾ
Roopa –
ಶಾಶ್ವತ ಮೌಲ್ಯಗಳು ಇದೊಂದು ವಿಶಿಷ್ಟ ಕೃತಿ. ನಮ್ಮ ಭಾರತೀಯ ಸಂಸ್ಕೃತಿಯ ಮೂಲಾಧಾರಗಳಾದ ವೇದ ಉಪನಿಷತ್ತುಗಳಿಂದ ಆಯ್ದ 108 ಶ್ಲೋಕಗಳನ್ನು ಲೇಖಕರಾದ ಶ್ರೀಧರ ಶರ್ಮ ಅವರು ಅತ್ಯಂತ ಸರಳವಾಗಿ ಭಾವಾನುವಾದ ಮಾಡಿದ್ದಾರೆ. ಈ ಕೃತಿ ಜನಸಾಮಾನ್ಯರನ್ನು ಗಮನದಲ್ಲಿಟ್ಟುಕೊಂಡು ರಚಿಸಲಾಗಿದೆ. ಮೂಲತಃ ವೃತ್ತಿಯಿಂದ ಶಿಕ್ಷಕರಾಗಿರುವ ಲೇಖಕರಿಗೆ ಅತ್ಯಂತ ಸರಳವಾಗಿ ತನ್ನ ಎದುರಿಗಿರುವವರಿಗೆ ವಿವರಿಸುವ ಕಲೆ ಸಿದ್ದಿಸಿರುವುದು ಇಲ್ಲಿನ ಭಾವಾನುವಾದಗಳನ್ನು ಗಮನಿಸಿದರೆ ತಿಳಿಯುತ್ತದೆ. ವೇದ ಉಪನಿಷತ್ತುಗಳ ಕುರಿತು ಯಾವುದೇ ಜ್ಞಾನವಿಲ್ಲದೆ ಸುಮ್ಮನೆ ಅದನ್ನು ಟೀಕಿಸುವವರಿಗೆ ಈ ಕೃತಿ ಉತ್ತರವಾಗಬಲ್ಲದು. ವೇದ ಉಪನಿಷತ್ತುಗಳೆಂದರೆ ಇಂದಿಗೆ ಉಪಯೋಗವಿಲ್ಲದ ಒಣ ಪಾಂಡಿತ್ಯದ ಕೃತಿ ಎಂದು ಭಾವಿಸುವವರಿಗೆ ಇಲ್ಲಿರುವ ಮಾಹಿತಿಗಳನ್ನು ತಿಳಿದರೆ ಅಚ್ಚರಿಯಾಗುತ್ತದೆ. ದೃಷ್ಟಾರರಾದ ನಮ್ಮ ಪ್ರಾಚೀನ ಮುನಿಗಳು ಜಪ ತಪಗಳ ಜೊತೆಗೆ ಲೌಕಿಕ ಜೀವನದ ಕುರಿತು ತಿಳಿಸುತ್ತಾರೆ. ಇಂದಿಗೂ ಪ್ರಸ್ತುತವಿರುವ ವಿಷಯಗಳು ವೇದ ಉಪನಿಷತ್ತುಗಳಲ್ಲಿವೆ. ಕೃಷಿ, ಗೋವಿನ ಮಹತ್ವ, ಮಳೆ, ಅಗ್ನಿ, ಅಣೆಕಟ್ಟುಗಳ ಮಹತ್ವ, ಮುಂತಾದವನು ಇಲ್ಲಿ ಹಾಗೆಯೇ ಮನುಷ್ಯ ತನ್ನ ಜೀವನದಲ್ಲಿ ಹೇಗೆ ಬದುಕಬೇಕು, ಅವನ ಕರ್ತವ್ಯಗಳು, ಉತ್ತಮ ವ್ಯಕ್ತಿತ್ವದ ಲಕ್ಷಣಗಳು ಇವೆಲ್ಲವನ್ನು ಈ ಅನುವಾದಗಳಲ್ಲಿ ಗಮನಿಸಬಹುದು. ಲೇಖಕರು ಈ ಅನುವಾದದ ಮುಂದುವರಿದ ಭಾಗಗಳನ್ನು ಪುಟ್ಟ ಪುಟ್ಟ ಕೃತಿಗಳ ಮೂಲಕ ಮತ್ತಷ್ಟು ವೇದ ಉಪನಿಷತ್ತಿನ ಪರಿಚಯವನ್ನು ಮಾಡಿಕೊಡುವುದು ಅತ್ಯಂತ ಅವಶ್ಯಕ.
ಈ ಕೃತಿಯ ಕುರಿತು ಆಸಕ್ತಿ ಇರುವವರು ಪುಸ್ತಕಕ್ಕಾಗಿ ಲೇಖಕರನ್ನು ನೇರವಾಗಿ ಸಂಪರ್ಕಿಸಬಹುದು
ಲೇಖಕರ ದೂರವಾಣಿ ಸಂಖ್ಯೆ 9480473568