ಕೊಳಗಿ ಅನಂತಣ್ಣ
ಒಂದು ವಸ್ತು ಆಗಾಗ ನೆನಪಾಗುವುದು ಅದರ ಬಳಕೆಯಿಂದ. ಅದು ಕೊಟ್ಟಿರುವ ತೃಪ್ತಿಯಿಂದ. ಒಬ್ಬ ವ್ಯಕ್ತಿ ನಮ್ಮ ಸ್ಮೃತಿಪಟಲದಲ್ಲಿ ಮಾಸದಂತೆ ಮುದ್ರಿತನಾಗಿರುವುದು ಅವನ ಒಡನಾಟದಿಂದ. ಒಡನಾಟ ಎಂದರೆ ಸಹವಾಸ; ಸಹವಾಸಕ್ಕಿಂತ ಹೆಚ್ಚು.
ಒಟ್ಟೊಟ್ಟಿಗೇ ಉಂಡಿದ್ದು, ಕುಡಿದಿದ್ದು, ಮಲಗಿದ್ದು, ಎದ್ದಿದ್ದು, ಸುತ್ತಾಡಿದ್ದು, ಹರಟೆ ಹೊಡೆದಿದ್ದು, ಓದಿದ್ದು, ಬರೆದಿದ್ದು… ಹೀಗೆ ಹಲವು ಕ್ರಿಯೆಗಳು ಒಡನಾಟದ ಒಡಲೊಳಗೆ ಸೇರಿಕೊಳ್ಳುತ್ತವೆ. ಒಂದೇ ರೀತಿಯ ರುಚಿ-ಅಭಿರುಚಿಗಳೆ, ಶಕ್ತಿ-ಆಸಕ್ತಿಗಳೆ ಒಡನಾಟದ ಮೂಲಧಾತು ಗಳು. ಅದರ ವಿಶ್ವರೂಪವನ್ನು ಉಳಿದ ಪ್ರಾಣಿಗಳಿಗಿಂತ ಮಾನವ ಅನುಭವಿಸಿದ್ದಾನೆ. ಸಮಾಜ ರಚನೆಯ ಒಳಗಿನ ಬಲೆ ಒಡನಾಟ. ಕರ್ಣ-ದುರ್ಯೋಧನರಾದರೂ ನಮಗೆ ಇಷ್ಟವಾಗುವುದು ವ್ಯಕ್ತಿತ್ವದ ಪುಷ್ಟಿಯಿಂದಲ್ಲ; ಒಡನಾಟದ ತುಷ್ಟಿಯಿಂದ. ಆ ಒಡನಾಟದಲ್ಲಿ ಪಡೆದ ಕಷ್ಟ-ಸುಖಗಳು, ಒಡಮೂಡಿದ ಅಂಟುನಂಟುಗಳು ನಮ್ಮ ಮನದುಂಬಿ, ಹೃದಯದಾಳಕ್ಕೆ ಇಳಿದು ಆಗಾಗ ನೆನಪಿನ ಸುಳಿಯಾಗಿ ಸುಳಿಯುತ್ತಲೇ ಇರುತ್ತವೆ. ಮರೆಯಲಾರದ ಸ್ಥಿತಿ ಏರ್ಪಡುತ್ತದೆ. ಬದುಕಿಗೆ ಹಲವನ್ನು ಕೂಡಿಸಿಕೊಟ್ಟ ನೆನಪು ಕಾಡದೇ ಹೇಗಿದ್ದೀತು! ಹೃದಯದ ಕದವನ್ನು ಎಲ್ಲೆಂದರೆ ಅಲ್ಲಿ, ಯಾವಾಗೆಂದರೆ ಆವಾಗ ತಟ್ಟಿ ಎಬ್ಬಿಸುವ ಕಾಡು-ನೆನಪುಗಳಿಗೆ ಅಕ್ಷರದ ಆಕೃತಿಯನ್ನು ಕೊಟ್ಟರೆ ಅಷ್ಟೋ, ಇಷ್ಟೋ ಸಮಾಧಾನ.
ಇಂಥ ನೆನಪುಗಳಿಗೆ ಕಲ್ಪಿಸಿದ ಅಕ್ಕರೆಯ ಅಕ್ಷರದ ಆಕೃತಿ ಈ ಕೃತಿ- ಕೊಳಗಿ ಅನಂತಣ್ಣ.
ಇದೊಂದು ಬಗೆಯ ಅಚ್ಚುಕಟ್ಟಾದ ವ್ಯಕ್ತಿಚಿತ್ರ. ಸಾಮಾನ್ಯರಂತೆ ಕಂಡರೂ ಅಸಾಮಾನ್ಯನಂತೆ ಬಾಳುಕಟ್ಟಿ ಹೆಸರು ಮಾಡಿದ ಬರಿಗೈ ಸರದಾರನ ವ್ಯಕ್ತಿತ್ವವನ್ನು ಅಮರವಾಗಿಸುವ ಪ್ರಾಮಾಣಿಕ ಪ್ರಯತ್ನ. ಅವರ ಮನೆಯಲ್ಲಿಯೆ ಹುಟ್ಟಿ, ಅವರ ತಮ್ಮನಾಗಿ ಬೆಳೆದು, ಅವರಿಂದಲೇ ಪ್ರೇರಿತನಾಗಿ ಅವರ ಮಾರ್ಗದರ್ಶನದಲ್ಲಿ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಂಡ ಲೇಖಕ ಅವರನ್ನು ಒಳಗೂ ಹೊರಗೂ ಕಂಡಂತೆ ಕಾಣಿಸುವ ಸರಳವಾದ ಭಾವಚಿತ್ರವಿದು. ಕೃತಜ್ಞತೆಯ ಜೇನು ಪದಪದಗಳ ಪದರುಗಳಲ್ಲಿ ಅಮರಿಕೊಂಡಿದೆ. ಈ ಕಥನದಲ್ಲಿ ಸಣ್ಣಕತೆಗಳ ಮಿಂಚಿದೆ; ಕಾದಂಬರಿಗಳ ವಿವೃತ ವರ್ಣನೆಯ ಭಾವಪಟಲಗಳಿವೆ; ಪ್ರಬಂಧಗಳ ಬಿಗಿಯಿದೆ; ಎಲ್ಲಕ್ಕಿಂತ ಮಿಗಿಲಾಗಿ ಲಾಲಿ ಹಾಡುವ ತಾಯ್ತನದ ಲಾಲಿತ್ಯ ತುಂಬಿಕೊಂಡಿದೆ.
ಕೊಳಗಿ ಅನಂತ ಹೆಗಡೆಯವರು ಒಳ್ಳೆಯ ಯಕ್ಷಗಾನ ವೇಷಧಾರಿ. ಸಮರ್ಥ ಅರ್ಥಧಾರಿ. ಕಲೆಯ ಆಗುಹೋಗುಗಳನ್ನೂ, ಒಳಹೊರಗುಗಳನ್ನೂ ಸೂಕ್ಷ್ಮವಾಗಿ ಬಲ್ಲವರು. ಕಪ್ಪು ಮುಂದಾದ ಗೋಧಿಯ ಮೈ ಬಣ್ಣ. ಸಣಕಲು ದೇಹ. ಕೋಲು ಮುಖ. ನಿಡಿದಾದ ಕೈಕಾಲುಗಳು. ಇಳಿದ ಎದೆ. ಕಷ್ಟವನ್ನು ನುಂಗಿದ ಮೈ. ಸೂಕ್ಷ್ಮದೃಷ್ಟಿಯ ಮಿಂಚುಗಣ್ಣು. ಕಂಬನಿಯಾಡುವ ಆರ್ದ್ರ ದೃಷ್ಟಿ. ಆದರೆ ಶ್ರುತಿಬಂಧುರವಾದ ಸ್ವರಭಾರ; ಆ ಬಡಕಲು ದೇಹದೊಳಗೆ ಎಲ್ಲಿ ಅಡಗಿತ್ತೋ…! ಝೇಂಖರಿಸುವ ತುಂಬು ಕಂಠ. ಆಧಾರಶ್ರುತಿ ಯಾವುದಾದರೂ ಅದನ್ನು ತುಂಬಿ ಚೆಲ್ಲುವ ಮಧುರವಾದ ದನಿ. ಭಾಗವತಿಯ ಜಾಡು ತಿಳಿದವರು ಅವರು. ಮಟ್ಟು ಮಿಡಿದು ಪದ್ಯದ ಎತ್ತುಗಡೆ ಮಾಡಿದರೆ ಯಕ್ಷಗಾನದ ಆವರಣ ತನಗೆ ತಾನೆ ಏರ್ಪಡುತ್ತಿತ್ತು. ಕೆರೆಮನೆ ಮಹಾಬಲ ಹೆಗಡೆಯವರೇ ಸ್ವತ: ಮೆಚ್ಚಿ ಪುರಸ್ಕರಿಸಿದ ಸ್ವರಸಂಸ್ಕಾರ ಅವರದು. ಶುದ್ಧವಾದ ಉಚ್ಚಾರಣೆ. ತೊರವೆ- ಕುಮಾರವ್ಯಾಸರ ಕಾವ್ಯಾನುಶೀಲನದಿಂದ ಹದಗೊಂಡ ವಾಗ್ಧೋರಣೆ. ಭಾವ ಮುಂದೆ; ತರ್ಕ ಹಿಂದೆ. ಪುರುಷ-ಸ್ತ್ರೀ ಭೂಮಿಕೆಗಳಲ್ಲಿ ಸಮತೂಕದ ಪರಿಣತಿ. ವಾಕ್ಯಗಳು ಸರಳ-ನಿರರ್ಗಳ. ಫಟಫಟನೆ ಮಾತುಗಳು ಮೂಡಿಬರುತ್ತಿದ್ದವು. ಆದರೆ ಶೈಲಿಯಲ್ಲಿ ಬಿಗುವಿತ್ತು. ಗತ್ತೂ ಇತ್ತು. ಉತ್ತರ ಕನ್ನಡ ಜಿಲ್ಲೆಯ ಮಾದರಿ ಅರ್ಥಗಾರಿಕೆ ಅವರದ್ದಾಗಿತ್ತು.
ಅವರದು ಅಗಾಧವಾದ ರಂಗಸ್ಥಳದ ಅನುಭವ. ಕ್ರಮವಾಗಿ ಕೊಳಗಿ, ಹಣಜೀಬೈಲು, ಗುಂಡಬಾಳ, ಇಡಗುಂಜಿ, ಅಮೃತೇಶ್ವರಿ, ಪಂಚಲಿಂಗ, ಬಚ್ಚಗಾರು ಮೊದಲಾದ ಬಯಲಾಟ ಮತ್ತು ಡೇರೆ ಮೇಳಗಳಲ್ಲಿ ಅನೇಕ ತಿರುಗಾಟಗಳನ್ನು ಯಶಸ್ವಿಯಾಗಿ ಪೂರೈಸಿದವರು. ಧರ್ಮರಾಯ, ನಾರದ, ವಿರಾಟ ಮೊದಲಾದ ಪೋಷಕಪಾತ್ರಗಳಿಂದ ತೊಡಗಿ ಸಂಧಾನದ ಕೌರವ, ಬಬ್ರುವಾಹನ ಕಾಳಗದ ಅರ್ಜುನ ಮೊದಲಾದ ಕಟ್ಟು ವೇಷಗಳವರೆಗೂ ಸೈಸೈಯೆನ್ನುವಂತೆ ನಿರ್ವಹಿಸಿದವರು. ಕೆರೆಮನೆ ಶಂಭುಹೆಗಡೆಯವರ ಅಂಬೆಗೆ ಕೊಳಗಿಯವರ ಸಮರ್ಥ ಭೀಷ್ಮನ ಜೊತೆಯನ್ನು ಇಂದಿಗೂ ಮರೆತಿಲ್ಲ. ಚಿಟ್ಟಾಣಿಯವರ ಭಸ್ಮಾಸುರನಿಗೆ ಇವರ ಈಶ್ವರ ಸುವರ್ಣದ ಚೌಕಟ್ಟಾಗಿ ಸಲ್ಲುತ್ತಿತ್ತು. ಅನಾರೋಗ್ಯ ಅವರನ್ನು ಅಂಜಿಸಲಿಲ್ಲ. ಅರೆಆಯುಷ್ಯ ಅವರ ಕಲಾಜೀವನವನ್ನು ತುಂಡು ಮಾಡಿತು.
ಮೇಳಕ್ಕೆ ಒಗ್ಗುವ ವ್ಯಕ್ತಿತ್ವ ಅವರದು. ಅವರ ಚೌಕಿಯ ಜವಾಬ್ದಾರಿ ಅಚ್ಚರಿ ಪಡುವಂಥದು. ಅವರ ಪಾತ್ರ ಯಾವ ಸಮಯಕ್ಕೇ ಇರಲಿ, ಅವರು ಗಣಪತಿಪೂಜೆಯಿಂದ ಮಂಗಲದವರೆಗೆ ಕುಳಿತಿರುತ್ತಿದ್ದರು. ಚಿಕ್ಕ ಕಲಾವಿದರಿಗೆ ಬಣ್ಣದಿಂದ ಹಿಡಿದು ಪ್ರವೇಶ, ನಡೆ, ಕುಣಿತ, ಮಾತು, ಅಭಿನಯಗಳ ವರೆಗೆ ಮಾರ್ಗದರ್ಶನ ಮಾಡುತ್ತಿದ್ದರು. ಯಾವ ಸಮಯಕ್ಕೆ ಯಾವ ಕಲಾವಿದನನ್ನು ಎಬ್ಬಿಸಿ ಬಣ್ಣಕ್ಕೆ ಕುಳ್ಳಿರಿಸಬೇಕು ಎಂಬ ಸೂಚನೆಯನ್ನೂ ಕೊಡುತ್ತಿದ್ದರು. ಚೌಕಿಯಲ್ಲಿರುವಾಗಲೂ ರಂಗಸ್ಥಳದ ಬಗ್ಗೆ ನಿಗಾ ಇರಿಸುತ್ತಿದ್ದರು; ರಂಗದಲ್ಲಿ ಪ್ರೇಕ್ಷಕರ ಗಮನ ಸೆಳೆದ ಅಂಶಗಳನ್ನು ಚೌಕಿಯಲ್ಲಿ ಅಭಿನಂದಿಸಿ ಕಲಾಕಾರರನ್ನು ಹುರಿದುಂಬಿಸುತ್ತಿದ್ದರು. ತಪ್ಪಿದರೆ ನಗುತ್ತಾ ಎಚ್ಚರಿಸುತ್ತಿದ್ದರು. ಎಂದೂ ಬೈದವರಲ್ಲ, ನಿಂದಿಸಿದವರಲ್ಲ. ತಿರಸ್ಕಾರದ ಕೊಂಕುನುಡಿಗಳಿಂದ ಚುಚ್ಚಿದವರಲ್ಲ. ಪ್ರೀತಿಯಲ್ಲಿ ಹಿರಿಯರಿಗೂ ಅನಂತಣ್ಣ ಆಗಿಯೇ ಬಳಕೆಗೊಂಡರು. ಆದರೆ ಅವರ ಚೌಕಿಯ ಯಾಜಮಾನ್ಯಕ್ಕಾಗಲಿ, ರಂಗಸ್ಥಳದ ಪರೋಕ್ಷ ನಿರ್ದೇಶನಕ್ಕಾಗಲೀ ಸರಿಯಾದ ಪ್ರಾಪ್ತಿ-ಪ್ರಶಂಸೆಗಳು ಸಿಗಲಿಲ್ಲ ಎಂಬುದೇ ಖೇದದ ಸಂಗತಿ.
ರಂಗಸ್ಥಳದ ಮುಂದೆ ನೆರೆದ ಸಹೃದಯರ ವೃಂದಕ್ಕೆ ಪಾತ್ರಪ್ರಸಂಗಗಳ ಅಂತರಂಗ ಗೊತ್ತಾಗಬಹುದು. ಆದರೆ ಪಾತ್ರಧಾರಿಯ ಅಂತರಂಗ ತಿಳಿಯಲಾರದು. ಅದು ಅಷ್ಟಾಗಿ ಪ್ರಸ್ತುತವೂ ಅಲ್ಲ. ಅವರು ಬಣ್ಣ ಹಚ್ಚಿದ ಮುಖ ನೋಡುತ್ತಾರೆ; ಬಣ್ಣ ತೆಗೆದ ಮುಖವನ್ನಲ್ಲ. ಬಣ್ಣನೆಯ ಮಾತುಗಳನ್ನೂ ಕೇಳುತ್ತಾರೆ; ಮಾತಿನ ಬಣ್ಣವನ್ನಲ್ಲ. ಕಲಾವಿದ ಘನನಗೆಯ ಕಡಲಿನೊಳಗೆ ಬಿದ್ದೆದ್ದು, ತೊನೆದಂದ… ಎಂಬ ಪದ್ಯವನ್ನು ಮನೋಜ್ಞವಾಗಿ ಅಭಿನಯಿಸುತ್ತಿರುವಾಗಲೆ ಅವನ ಹೃದಯದೊಳಗೆ ಭೋರ್ಗರೆಯುವ ದುಃಖಸಾಗರದ ಮೊರೆತವನ್ನು ಯಾರು ತಾನೆ ಗ್ರಹಿಸಬಲ್ಲರು! ದಾನಶೂರ ಕರ್ಣನ ಅರ್ಥವನ್ನು ಹೇಳುತ್ತ ಕೇಳುಗರ ಕಣ್ಣಾಲಿಗಳನ್ನು ಒದ್ದೆಯಾಗಿಸುವ ಅರ್ಥಧಾರಿಯ ಕಿಸೆಯಲ್ಲಿ ಪುಡಿಗಾಸಿಲ್ಲ ಎಂಬ ಕಟು ವಾಸ್ತವ ಯಾರಿಗೆ ತಿಳಿಯುತ್ತದೆ! ಬಣ್ಣದ ಭ್ರಮೆ ಬದುಕಲ್ಲ. ಆದರೆ ಕೆಲವರ ಬದುಕಿಗೆ ಅದೇ ಎಲ್ಲ!
ಕಲಾವಿದನ ಅಂತರಂಗ ಬೆಳೆಯದೆ ಅವನು ರಂಗದಲ್ಲಿ ಬೆಳಗಲಾರ. ಅವನು ಕುಟುಂಬದಲ್ಲಿ ಹೊಣೆಗಾರನಾಗಿ ನಡೆದುಕೊಳ್ಳದೆ ಕಲಾಕುಟುಂಬದ ಹೊಣೆಯನ್ನು ಹೊರಲಾರ. ರಸಸಂಸಾರದಲ್ಲಿ ಮೆರೆಯಲಾರ. ಕೃಷಿಯನ್ನು ಮಾಡದವ ಋಷಿಯಾಗಲಾರ. ಋಷಿಯಾಗದವ ಕವಿಯಾಗಲಾರ. ಈ ಎಲ್ಲ ನಿಯಮಗಳಿಗೆ ಜೀವಂತ ನಿದರ್ಶನವಾಗಿದ್ದವರು ಕೊಳಗಿ ಅನಂತ ಹೆಗಡೆ. ಅಂತರಂಗದಿಂದ ಬೆಳೆದು ರಂಗದಲ್ಲಿ ಬೆಳಗಿದವರು. ಕುಟುಂಬವನ್ನು ಹೊಣೆಗಾರಿಕೆಯಿಂದ ಪೊರೆದು ಕಲಾಕುಟುಂಬವನ್ನು ಪೊರೆದರು. ಋಷಿಯಂತೆ ಕೃಷಿ ಮಾಡುತ್ತಲೇ ಪ್ರತಿರಾತ್ರಿಯೂ ಆಶುಕಾವ್ಯವನ್ನು ಹರಿಸಿದರು. ಅವರ ಬಡತನ ಸುದ್ದಿ ಯಾಗಲಿಲ್ಲ. ಕೂಲಿಯವರಂತೆ ದಿನಸಂಬಳಕ್ಕೆ ದುಡಿದದ್ದು ಸಮಷ್ಟಿಗೆ ತಿಳಿಯಲೇ ಇಲ್ಲ. ಅದಕ್ಕೆ ಕಾರಣವಿಲ್ಲದಿಲ್ಲ. ಬರಿಗೈಯಲ್ಲೂ ಅವರು ದೀನರಾದವರಲ್ಲ. ಹಲ್ಲುಗಿಂಜಿ ಯಾಚಿಸಿದವರಲ್ಲ. ಆತ್ಮವಿಶ್ವಾಸದಿಂದ ಬಡತನವನ್ನು ಬಗ್ಗಿಸಿದರು. ಪರಿಶ್ರಮದಿಂದ ಹಣವನ್ನು ಗಳಿಸಿದರು. ಪ್ರೀತಿಯಿಂದ ಪರಿವಾರವನ್ನು ಗೆದ್ದರು. ಸಂಯಮದಿಂದ ಹೊಂದಿ ಬದುಕುವ ಸುಂದರ ಸೂತ್ರವನ್ನು ಕಂಡುಕೊಂಡರು. ಕೂಲಿ ಮಾಡುವುದು ಕುಳಿತು ತಿನ್ನುವಷ್ಟು ಕ್ಷುಲ್ಲಕವೆ!
ಅನಂತ ಹೆಗಡೆಯವರ ವ್ಯಕ್ತಿತ್ವ ರೂಪುಗೊಂಡ ಮನೆ, ಮನೆತನ, ಹಿರಿಯರು, ಅಕ್ಕತಂಗಿಯರು, ಮಡದಿಮಕ್ಕಳು, ಊರುಕೇರಿ, ಬಂಧುಬಾಂಧವರು, ಒಡನಾಡಿಗಳು- ಎಲ್ಲ ಸಂಗತಿಗಳನ್ನೂ ಒಪ್ಪ ಓರಣವಾಗಿ ಜೋಡಿಸಿದ್ದಾರೆ ಗಂಗಾಧರ ಕೊಳಗಿ. ವಿಶೇಷವಾದ ಘಟನೆಗಳನ್ನೂ ವಿವರಿಸಿದ್ದಾರೆ. ಬಡತನದ ಹಿನ್ನೆಲೆ, ತೀವ್ರತೆ, ತಂದೆತಾಯಿಗಳನ್ನು ಕಳೆದುಕೊಂಡ ತಬ್ಬಲಿತನ, ಅದನ್ನು ಎದುರಿಸಿದ ಆತ್ಮವಿಶ್ವಾಸ, ಉದ್ಯಮ, ಸಾಹಸ, ಪ್ರಯೋಗಶೀಲತೆ, ಕೃಷಿ, ಯಕ್ಷಶಿಕ್ಷಣ, ಓದು, ಕಾವ್ಯಾನುಶೀಲನ ಮೊದಲಾದ ಅಂಶಗಳನ್ನು ಹಂತಹಂತವಾಗಿ ಉಲ್ಲೇಖಿಸಿದ್ದಾರೆ. ಲೇಖನದಲ್ಲಿ ಗಂಗಾಧರರದು ಪಳಗಿದ ಕೈ. ವರದಿಯಂತೆ ವಿವರಗಳು ಸರಳ ಮತ್ತು ನೇರ. ಆದರೆ ಕತೆಯಂತೆ ಓದು ಸಾಗುತ್ತದೆ. ಇದು ಕತೆಯಲ್ಲ. ಕತೆಯಾಗಬಲ್ಲ ಕಥನ.
ಕೊಳಗಿ ಅನಂತಣ್ಣ ಮೇಲುನೋಟಕ್ಕೆ ಒಂದು ವ್ಯಕ್ತಿಚಿತ್ರವಾದರೂ ಪರ್ಯಾಯ ವಾಗಿ ಸ್ವಾತಂತ್ರ್ಯ ಕಾಲದ ಹವ್ಯಕ ಸಮಾಜ-ಮಧ್ಯಮವರ್ಗದ ಚರಿತ್ರೆಯಾಗಿದೆ. ಅಂದಿನ ಮೂಲ ಸೌಕರ್ಯಗಳಿಲ್ಲದ ಗ್ರಾಮೀಣ ಜೀವನದ ಚಿತ್ರವನ್ನು ಬರೆಯುತ್ತಲೆ ಪ್ರೀತಿ, ಸಹಕಾರಗಳಿಂದಲೇ ಸರಳವಾದರೂ ಅಂದವಾದ ಬದುಕನ್ನು ಕಟ್ಟಿಕೊಂಡ ಜನರ ಚಿತ್ರವನ್ನು ಬಿಡಿಸಿಟ್ಟಿದೆ.
ಹತ್ತಿರದವರ ಬಗ್ಗೆ ಬರೆಯುವುದೇ ಕಷ್ಟ. ಒಡನಾಟ ಅನುಭವವಾಗುತ್ತ ಭಾಷೆ ಕರಗಿ ಹೋಗುವ ಅಪಾಯವಿದೆ. ಹತ್ತಿರದ ಬಳಕೆಯಲ್ಲಿರುವವರ ಬಗ್ಗೆ ನಾವು ಭಾಷೆಯಿಂದ ಯೋಚಿಸುವುದಿಲ್ಲ. ಎಲ್ಲವೂ ಅನುಭವದ ಪಾಕವನ್ನು ಪಡೆಯುತ್ತದೆ. ತುಂಡು ನೆನಪುಗಳು ಜಡೆಗಟ್ಟಿ ಮಹಾಸ್ಮೃತಿಯ ಗಂಟು ಏರ್ಪಡುತ್ತದೆ. ಅವುಗಳನ್ನು ಎಳೆಎಳೆಯಾಗಿ ಬಿಡಿಸುವುದು ಎಲ್ಲಿಂದ? ಹೇಗೆ? ಗಂಗಾಧರ ಸಾಹಸಿ. ಹಠದಿಂದ ಕೈಗೆತ್ತಿಕೊಂಡ ಕಾರ್ಯವನ್ನು ಸಂಪನ್ನಗೊಳಿಸಿದ್ದಾರೆ.
ಅವರ ಈ ಕೃತಿಗೆ ನನ್ನ ನಲುಮೆಯ ನತಿ.
ವಿಶ್ವಾವಸು, ಅಕ್ಷಯ ತೃತೀಯಾ -ವಿದ್ವಾನ್ ಉಮಾಕಾಂತ ಭಟ್ಟ, ಕೆರೆಕೈ
೩೦.೦೪.೨೦೨೫
ಅರಿಕೆ
ನಮ್ಮ ಕೊಳಗಿ ಊರು ಘಟ್ಟದ ಮೇಲಿನ ಯಕ್ಷಗಾನದ ಗಟ್ಟಿ ನೆಲ ಎಂದೇ ಪ್ರಖ್ಯಾತಿಯಾದದ್ದು. ಶತಮಾನಗಳ ಹಿಂದೆಯೇ ನಮ್ಮೂರಿನ ಸಮೀಪದ ಹಣಜೀಬೈಲ್ ಎನ್ನುವ ಊರಿನಲ್ಲಿ ಯಕ್ಷಗಾನ ಮೇಳವಿತ್ತು, ಮತ್ತು ಪ್ರತಿಭಾವಂತ ಕಲಾವಿದರು ಆ ಮೇಳದಲ್ಲಿದ್ದರು ಎನ್ನುವುದನ್ನು ನನ್ನ ತಂದೆ ಅನಂತ ಹೆಗಡೆಯವರು ಚಿಕ್ಕಂದಿನಿಂದಲೂ ಹೇಳುತ್ತಿದ್ದರು. ನಮ್ಮೂರಿನ ಮತ್ತು ಸುತ್ತಲಿನ ನೆಲದ ಸತ್ವ ಯಕ್ಷಗಾನ ಸಹಜವಾಗಿ ನಮ್ಮಲ್ಲಿ ರಕ್ತಗತವಾಗಿ ಮೈಗೂಡಿದೆ.
ನಮ್ಮ ಕುಟುಂಬದ ಹಳೆಯ ತಲೆಮಾರಿನಲ್ಲಿ ಯಾರೂ ಯಕ್ಷಗಾನ ಕಲಾವಿದರಿದ್ದ ಮಾಹಿತಿಗಳಿಲ್ಲ. ನನ್ನ ತಂದೆ ಅನಂತ ಹೆಗಡೆಯವರೇ ಪ್ರಥಮವಾಗಿ ಯಕ್ಷಗಾನ ಕಲಾವಿದರಾಗಿರಬಹುದು. ಹಣಜೀಬೈಲ್ ಮೇಳದ ಯಕ್ಷಗಾನ ಆಖ್ಯಾನಗಳಲ್ಲಿ ಅನಂತ ಹೆಗಡೆ ಕೊಳಗಿ, ಗೋಡೆ ನಾರಾಯಣ ಹೆಗಡೆಯವರು ವೇಷ ಮಾಡುತ್ತಿದ್ದರಂತೆ. ಯಾವ ಕಾರಣಕ್ಕೋ, ಆ ಮೇಳದ ಕಲಾವಿದರಿಗೂ, ಅನಂತ ಹೆಗಡೆ, ಗೋಡೆ ನಾರಾಯಣ ಹೆಗಡೆಯವರಿಗೆ ಸರಿ ಬಾರದೇ ಅವರಿಬ್ಬರೂ ಆ ಮೇಳದಲ್ಲಿ ವೇಷ ಮಾಡುವುದನ್ನು ನಿಲ್ಲಿಸಿದರು. ಕಲಾವಿದನಿಗೆ ಸಹಜವಾದ ಒಳ ತುಡಿತವಿದ್ದ ಇವರಿಬ್ಬರೂ ತಮ್ಮ ಆತ್ಮೀಯರ ಜೊತೆ ಒಗ್ಗೂಡಿ ಕೊಳಗಿ ಮೇಳವನ್ನು ಆರಂಭಿಸಿದರು.
ಮೊದಲ ವರ್ಷಗಳಲ್ಲಿ ಸುತ್ತಲಿನ ಹಳ್ಳಿಗಳಲ್ಲಿ ಯಕ್ಷಗಾನದ ಆಖ್ಯಾನ ಗಳನ್ನು ಪ್ರದರ್ಶಿಸಿದರು. ನಮ್ಮ ಪಕ್ಕದ ಊರಾದ ಶಿರಳಗಿಯ (ಇವೆರಡೂ ಅವಳಿ ಊರುಗಳು) ಹಲವು ಕಲಾವಿದರು ಈ ಮೇಳದ ಪಾತ್ರಧಾರಿಗಳಾಗಿ ಭಾಗವಹಿಸುತ್ತಿದ್ದುದರಿಂದ ನಂತರದಲ್ಲಿ ಶ್ರೀ ಸಿದ್ಧಿವಿನಾಯಕ ಯಕ್ಷಗಾನ ಮಂಡಳಿ ಕೊಳಗಿ-ಶಿರಳಗಿ ಎನ್ನುವ ಯಕ್ಷಗಾನ ಮೇಳವಾಯಿತು.
ನಂತರದಲ್ಲಿ ಎರಡು ದಶಕಗಳ ಕಾಲ ಸ್ಥಳೀಯವಾಗಿ ಮಾತ್ರವಲ್ಲದೇ ನಮ್ಮ ಊರು ಶಿವಮೊಗ್ಗ ಜಿಲ್ಲೆ ಗಡಿಯಲ್ಲಿರುವುದರಿಂದ ಆ ಊರುಗಳಲ್ಲೂ, ಉತ್ತರಕನ್ನಡ ತಾಲೂಕು, ಜಿಲ್ಲೆಯಾದ್ಯಂತ ಅನೇಕ ಪ್ರದರ್ಶನಗಳನ್ನು ಕೊಳಗಿ-ಶಿರಳಗಿ ಮೇಳ ನಡೆಸಿತು. ಬಯಲಾಟದ ನಂತರ ಈ ಮೇಳದ ಕಲಾವಿದರ ಹೊಸ ಪ್ರಯೋಗವಾಗಿ ಅಡಿಕೆ ಸೋಗೆಯ ಟೆಂಟ್ನ ಟಿಕೇಟ್ ಪ್ರದರ್ಶನಗಳು ಶಿವಮೊಗ್ಗ ಜಿಲ್ಲೆಯ ಅಂದವಳ್ಳಿ, ನಿಸರಾಣಿ ಸೇರಿದಂತೆ ಹಲವಾರು ಕಡೆ ಜರುಗಿದವು. ಶ್ರೀ ಸಿದ್ಧಿವಿನಾಯಕ ಯಕ್ಷಗಾನ ಮಂಡಳಿ ಕೊಳಗಿ-ಶಿರಳಗಿ ಮೇಳದ ಆರಂಭದಿಂದಲೂ ರೂಢಿಸಿಕೊಂಡು ಬಂದ ಹಾಗೇ ಎಲ್ಲ ಕಲಾವಿದರೂ ಒಂದು ರೂಪಾಯಿ ತೆಗೆದುಕೊಳ್ಳದೇ ಸೇವೆ ಸಲ್ಲಿಸಿರುವುದು ಈವರೆಗೂ ಮುಂದುವರೆದುಕೊಂಡು ಬಂದಿದೆ. ಪ್ರದರ್ಶನಗಳಿಂದ ದೊರೆತ ಹಣದಲ್ಲಿ ಮೇಳಕ್ಕೆ ಅವಶ್ಯವಿರುವ ಕಶೆಸೀರೆ, ವೇಷಭೂಷಣ, ಮದ್ದಳೆ, ಚಂಡೆ ಮೊದಲಾದ ಪರಿಕರಗಳನ್ನು ಜೋಡಿಸಿಕೊಂಡರು (ಆ ಪರಿಕರಗಳು ಇನ್ನೂ ಗತ ವೈಭವವನ್ನು ಸಾರುತ್ತ ಧೂಳು ಹಿಡಿಯುತ್ತಿವೆ). ಯಾಕೆಂದರೆ ಯುವ ಸಮೂಹ ಈಗಿನ ಸಾಫ್ಟ್ವೇರ್, ಹಾರ್ಡವೇರ್ ಯುಗದಲ್ಲಿ ಯಕ್ಷಗಾನದತ್ತ ಆಸಕ್ತಿ ತೋರಿಸುತ್ತಿಲ್ಲ. ಮೊದಲೆಲ್ಲ ನಮ್ಮ ಸಂಸ್ಕೃತಿಯ ಕಲೆ, ಆರಾಧನಾ ಕಲೆ ಎನ್ನುವ ಪೂಜ್ಯ ಭಾವನೆ ಇತ್ತು. ಈಗ ಅದೆಲ್ಲವೂ ಹಣದ ಹಿಂದೆ ಹೋಗಿದೆ.
ಕೊಳಗಿ-ಶಿರಳಗಿ ಹವ್ಯಾಸಿ ಮೇಳದಲ್ಲಿ ಪಾತ್ರ ನಿರ್ವಹಿಸುತ್ತಿದ್ದ ಗೋಡೆ ನಾರಾಯಣ ಹೆಗಡೆಯವರು ನಂತರ ವ್ಯವಸಾಯಿ (ಟೆಂಟ್) ಮೇಳದ ಕಲಾವಿದರಾಗಿ ಹೋದ ನಂತರವೂ ಈ ಮೇಳದಿಂದ ಹಲವು ಪ್ರದರ್ಶನಗಳು ನಡೆದವು. ಆ ಸಂದರ್ಭದಲ್ಲಿನ ಆರ್ಥಿಕ ಸಮಸ್ಯೆಯಿಂದ ನನ್ನ ತಂದೆಯವರೂ ಕೆರೆಮನೆ ಶಂಭು ಹೆಗಡೆಯವರ ಇಡಗುಂಜಿ ಮೇಳಕ್ಕೆ ಹೋದರು. ಕೊಳಗಿ-ಶಿರಳಗಿ ಮೇಳವನ್ನು ತಿಮ್ಮಪ್ಪ ಭಟ್ಟ ಶಿರಳಗಿ, ಗಜಾನನ ಭಟ್ಟ ಶಿರಳಗಿ, ಗಣಪತಿ ಹೆಗಡೆ ಕೊಳಗಿ, ಗೋಪಾಲ ಭಟ್ಟ ಶಿರಳಗಿ, ನನ್ನ ದೊಡ್ಡಪ್ಪ ಲಕ್ಷ್ಮಣ ಹೆಗಡೆ ಕೊಳಗಿ, ರಾಮಕೃಷ್ಣ ಭಟ್ಟ ಕೊಳಗಿ, ಹೆಗ್ಗಾರಳ್ಳಿ ನರಸಿಂಹ ಭಟ್ಟರು, ಗೋಡೆ ಸುಬ್ರಾಯ ಹೆಗಡೆ ಮುಂತಾದವರು ಮೇಳವನ್ನು ಮುನ್ನಡೆಸಿದರು.
ಇಡಗುಂಜಿ ಮೇಳದಲ್ಲಿ ತಂದೆಯವರ ಶಲ್ಯ, ಧರ್ಮರಾಯ, ನಾರದ, ದಶರಥ, ಮುಂತಾಗಿ ಕೆಲವು ಪಾತ್ರಗಳು ಅವರಿಗೆ ಹೆಸರನ್ನು ತಂದವು. ಕೆಲವು ವರ್ಷಗಳ ನಂತರ ಶಂಭು ಹೆಗಡೆಯವರು ಇಡಗುಂಜಿ ವ್ಯವಸಾಯಿ ಮೇಳವನ್ನು ಸ್ಥಗಿತಗೊಳಿಸಿದರು. ಅಷ್ಟರಲ್ಲೇ ಶಿರಸಿಯ ಪುರ್ಲೆ ರಾಮಚಂದ್ರ ಹೆಗಡೆಯವರು ಪಂಚಲಿಂಗೇಶ್ವರ ಟೆಂಟ್ ಮೇಳವನ್ನು ಆರಂಭಿಸಿದ್ದು ಅದರಲ್ಲಿ ಕಲಾವಿದರಾಗಿ ಕಾರ್ಯನಿರ್ವಹಿಸಿದರು. ನಂತರ ಬಚ್ಚಗಾರು ಮೇಳದಲ್ಲಿ ಪಾಲ್ಗೊಂಡ ತಂದೆಯವರು ಯಕ್ಷಗಾನದ ವ್ಯವಸಾಯಿ ವೃತ್ತಿಗೆ ನಿವೃತ್ತಿ ಸಾರಿ ಹವ್ಯಾಸಿಯಾಗಿ ಪಾತ್ರ ನಿರ್ವಹಣೆ ಮಾಡತೊಡಗಿದರು. ತೀರಿಕೊಳ್ಳುವ ಎರಡು ದಿನದ ಮೊದಲು ಶಿರಸಿಯಲ್ಲಿನ ಯಕ್ಷಗಾನದಲ್ಲಿ ಪಾತ್ರ ನಿರ್ವಹಿಸಿದ್ದರು.
ಗಂಗಾಧರ ಕೊಳಗಿ ನನ್ನ ತಂದೆಯವರ ಚಿಕ್ಕಪ್ಪನ ಮಗ. ಉತ್ತಮ ಬರಹಗಾರರು. ಅವರ ಕಥಾ ಸಂಕಲನ, ಕಾದಂಬರಿಗಳಿಗೆ ಪ್ರಶಸ್ತಿಗಳು ಬಂದಿವೆ. ಅವನು ನನ್ನ ಬಾಲ್ಯದ ಒಡನಾಡಿ. ತಂದೆಯವರ ಬಗ್ಗೆ ಪುಸ್ತಕ ಬರೆಯುತ್ತೇನೆ ಎಂದಾಗ ತುಂಬಾ ಸಂತೋಷ ವಾಯಿತು. ನನ್ನಲ್ಲಿರುವ ದಾಖಲೆಗಳನ್ನು, ಫೋಟೋಗಳನ್ನು ಒದಗಿಸಿದ್ದೇನೆ. ಅವನು ಬರೆದಿರುವ ಕರಡು ಪ್ರತಿಯನ್ನು ಓದಿದ್ದೇನೆ. ಯಾವುದೇ ವಿಜೃಂಭಣೆಯಿಲ್ಲದೇ, ಜರುಗಿ ಹೋದ ಸಂದರ್ಭಗಳನ್ನು ತನ್ನ ಸ್ಮರಣೆಯಲ್ಲಿ ಅದು ಇರುವ ಹಾಗೇ ನಿರೂಪಿಸಿದ್ದಾನೆ.
ಆತ ಕಲಾವಿದನಾಗಿರಬಹುದು ಅಥವಾ ಸಮಾಜಕ್ಕೆ ಕೊಡುಗೆ ನೀಡಿದ ಯಾವುದೇ ವ್ಯಕ್ತಿಯಾಗಿರಬಹುದು, ಅವರ ಬದುಕಿನ ಮತ್ತು ವೃತ್ತಿಜೀವನದ ಕುರಿತಾದ ಇಂಥ ಬರಹಗಳು ಮುಂದಿನ ತಲೆಮಾರಿನವರಿಗೆ ಸ್ಮರಣೆಯಾಗಿ ಉಳಿಯುತ್ತವೆ. ನಮ್ಮ ಹಿಂದಿನ ತಲೆಮಾರಿನ ಅದೆಷ್ಟೋ ಸಾಧಕ ಮಹನೀಯರ ಕುರಿತಾಗಿ ದಾಖಲೆಗಳು ಲಭ್ಯವಿಲ್ಲದ, ಲಭ್ಯವಿದ್ದದ್ದೂ ಅರೆಬರೆಯಾಗಿರುವ ಅದೆಷ್ಟೋ ನಿದರ್ಶನಗಳಿವೆ. ಯಕ್ಷಗಾನ ಕ್ಷೇತ್ರದಲ್ಲೂ ಅನೇಕ ಹಿರಿಯ ವೃತ್ತಿಕಲಾವಿದರ, ಹವ್ಯಾಸಿ ಕಲಾವಿದರ ಕುರಿತು ಸಮರ್ಪಕವಾದ ಮಾಹಿತಿಗಳ ಕೊರತೆ ಇದೆ. ಜಿಲ್ಲಾ ಮಟ್ಟದಲ್ಲಿ, ಕೊನೆಯ ಪಕ್ಷ ತಾಲೂಕು ಮಟ್ಟದಲ್ಲಾದರೂ ಅಂಥ ಹಿರಿಯರ ಕುರಿತು ಮಾಹಿತಿ ಸಂಗ್ರಹಿಸಿ, ದಾಖಲಿಸುವ ಕಾರ್ಯವಾಗಬೇಕು. ಬರಹಗಾರರು ತಮ್ಮ ಸುತ್ತಲಿನ ಇಂಥ ಸಾಧಕರ ಕುರಿತು ಮಾಹಿತಿಗಳನ್ನು ಸಂಗ್ರಹಿಸಿದರೂ ಅದನ್ನು ಕೃತಿರೂಪದಲ್ಲಿ ಪ್ರಕಟಿಸುವುದು ಆರ್ಥಿಕವಾಗಿ ಅವರಿಗೆ ಕಷ್ಟವಾಗುತ್ತದೆ. ಈ ಹಿಂದಿನ ಅವಧಿಯ ಕರ್ನಾಟಕ ಸಾಹಿತ್ಯ ಅಕಾಡೆಮಿ ಆಯ್ದ ಬರಹಗಾರರಿಗೆ ಕೃಷಿ ಕ್ಷೇತ್ರದ (ವಿವಿಧ ಅಂಗಗಳಾದ ಜೇನು ಕೃಷಿ, ಹೈನುಗಾರಿಕೆ, ಪುಷ್ಪಕೃಷಿ ಮುಂತಾಗಿ) ಸಾಧಕರುಗಳ ಕುರಿತು ಮಾಹಿತಿ ಸಂಗ್ರಹಿಸಿ, ಲೇಖನ ರಚಿಸುವ ಜವಾಬ್ದಾರಿ ವಹಿಸಿ, ಅವರು ಬರೆದ ಲೇಖನಗಳನ್ನು ಕೃಷಿ ಸಾಧಕರು’ ಎನ್ನುವ ಸಮಗ್ರ ಕೃತಿಯನ್ನು ಪ್ರಕಟಿಸಿದ ನಿದರ್ಶನವಿದೆ. ಯಕ್ಷಗಾನ ಅಕಾಡೆಮಿ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಬೇಕೆನ್ನುವುದು ನನ್ನ ಆಶಯ. ಹಾಗೆಯೇ ಅಭಿಮಾನಿಗಳ, ಆಸಕ್ತರ ಸಹಕಾರವೂ ಅತ್ಯಗತ್ಯ. ಕೃತಿರೂಪದಲ್ಲಿರುವ ವಿವರಗಳು ಮುಂದಿನ ತಲೆಮಾರಿಗೆ, ಆಸಕ್ತರಿಗೆ, ಅಧ್ಯಯನಕಾರರಿಗೆ ಉಪಯುಕ್ತ ವಾಗುವುದರ ಜೊತೆಗೆ ಸಾರ್ವಕಾಲಿಕವಾಗಿರುತ್ತದೆ ಎನ್ನುವುದು ನನ್ನ ಭಾವನೆ.
ನನ್ನ ತಂದೆಯವರ ನೆನಪು ಸದಾ ಕಾಲ ಉಳಿಯುವಂತ ಇಂಥದ್ದೊಂದು ಪರಿಶ್ರಮದ ಕಾರ್ಯಕ್ಕೆ ಮುಂದಾದ ಗಂಗಾಧರ ಕೊಳಗಿಯವರಿಗೆ ಅಭಿನಂದಿಸುತ್ತೇನೆ. ವಿದ್ವಾನ್ ಉಮಾಕಾಂತ ಭಟ್ಟ ಕೆರೆಕೈ, ಸತೀಶ ಯಲ್ಲಾಪುರ ಮುಂತಾದ ಮಹನೀಯರ ಸಹಕಾರ ಸ್ಮರಣೀಯವಾದದ್ದು. ಈ ಕಾರ್ಯದಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು.
-ಕೇಶವ ಅನಂತ ಹೆಗಡೆ, ಕೊಳಗಿ
ನೆನೆಕೆಗಳು
ಕಲಗದ್ದೆಯ ಶ್ರೀ ನಾಟ್ಯ ವಿನಾಯಕ ದೇವರಿಗೆ ಪ್ರಥಮದಲ್ಲಿ ಸಾಷ್ಟಾಂಗ ನಮಸ್ಕಾರಗಳನ್ನು ಸಲ್ಲಿಸುತ್ತ.. ಆ ದೇವರ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೊರಕಿದ ಆಶೀರ್ವಾದ ಈ ಕೃತಿ ರೂಪುಗೊಳ್ಳಲು ಪ್ರೇರೇಪಣೆ ನೀಡಿದೆ ಎನ್ನುವುದು ನನ್ನ ಅಚಲ ನಂಬಿಕೆ.
ಮನಸ್ಸಿನಲ್ಲಿ ಸ್ಮೃತಿಯಾಗಿ ಉಳಿದ ಸಣ್ಣಣ್ಣಯ್ಯನ ಕುರಿತಾದ ಒಡನಾಟಕ್ಕೆ ಬರಹರೂಪ ಬರಲು ಮುಖ್ಯ ಕಾರಣರಾದವರು ಹಿರಿಯ ವಿದ್ವಾಂಸರು, ಸಹೃದಯರಾದ ವಿದ್ವಾನ್ ಉಮಾಕಾಂತ ಭಟ್ಟ ಕೆರೆಕೈ.
ಅನಂತ ಯಕ್ಷಕಲಾ ಪ್ರತಿಷ್ಠಾನದವರು ಪ್ರತೀ ವರ್ಷ ಜಿಲ್ಲೆಯ ಯಕ್ಷಗಾನದ ಮುಮ್ಮೇಳ ಅಥವಾ ಹಿಮ್ಮೇಳದ ಓರ್ವ ಸಾಧಕರಿಗೆ ನೀಡುವ ಅನಂತಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ೨೦೨೩ರಲ್ಲಿ ಸಿದ್ದಾಪುರ ತಾಲೂಕಿನ ಕಲಗದ್ದೆಯ ಶ್ರೀ ನಾಟ್ಯ ಗಣಪತಿ ದೇವಾಲಯದ ಸಭಾಂಗಣದಲ್ಲಿ ಆಯೋಜಿತವಾಗಿತ್ತು. ಆ ವರ್ಷ ಯಕ್ಷಗಾನದ ಪ್ರಸಿದ್ಧ ಸ್ತ್ರೀ ವೇಷಧಾರಿ ಭಾಸ್ಕರ ಜೋಶಿ ಶಿರಳಗಿ ಅವರಿಗೆ ಪ್ರಶಸ್ತಿ ಪ್ರದಾನವಿತ್ತು. ಆ ಕಾರ್ಯಕ್ರಮದಲ್ಲಿ ನಾನೂ ಓರ್ವ ಅತಿಥಿಯಾಗಿ ವೇದಿಕೆಯಲ್ಲಿದ್ದೆ. ವಾಗ್ಮಿಗಳು, ಸಾಮಾಜಿಕ ಧುರೀಣರುಗಳು ಉಪಸ್ಥಿತರಿದ್ದ ಆ ವೇದಿಕೆಯಲ್ಲಿ ನಾನೇನು ಮಾತನಾಡಲಿ? ಎನ್ನುವ ನನಗೆ ಯಾವತ್ತೂ ಅನ್ನಿಸುವ ಹಿಂಜರಿಕೆಯಲ್ಲಿದ್ದೆ. ಮಾತನಾಡುವ ಸರದಿ ಬಂದಾಗ ಮಾತುಗಳ ವಿಷಯ ಪುನರಾವರ್ತನೆಯಾಗಬಹುದು ಎನ್ನುವ ಸಂದೇಹದಿಂದ ನಿರಾಕರಿಸಿದರೂ ಒತ್ತಾಯಿಸಿದಾಗ ನನ್ನೊಳಗಿನ ನೆನಪುಗಳನ್ನು ಕ್ವಚಿತ್ತಾಗಿ ಹಂಚಿಕೊಂಡಿದ್ದೆ.
ವೇದಿಕೆಯಿಂದ ಕೆಳಕ್ಕೆ ಬರುತ್ತಿದ್ದಂತೆ ಶ್ರೀ ಉಮಾಕಾಂತ ಭಟ್ಟರು ಹತ್ತಿರ ಬಂದು ನನ್ನ ಮಾತುಗಳಿಗೆ ಅಭಿನಂದಿಸಿದರು. ಆವರೆಗೆ ಅವರ ಕುರಿತಾಗಿ ತಿಳಿದು, ಅರ್ಥಗಾರಿಕೆ ಯನ್ನು ಕೇಳಿ ಅವರ ಕುರಿತು ಗೌರವಾಭಿಮಾನವನ್ನು ಹೊಂದಿದ್ದೆ ಮಾತ್ರ. ಪರಿಚಯ ವಾಗಿದ್ದು, ಮುಖತಃ ಮಾತನಾಡಿದ್ದು ಆ ದಿನವಷ್ಟೇ. ನನ್ನ ಮಾತುಗಳನ್ನು ಪ್ರಶಂಸಿಸಿದ ಅವರು ನಿಮ್ಮ ನೆನಪುಗಳು ಕೇವಲ ಮಾತಿಗೆ ಸೀಮಿತವಾಗಬಾರದು, ಕೃತಿಯಾಗಿ ರೂಪುಗೊಳ್ಳಬೇಕು ಎಂದು ಆಗ್ರಹಿಸಿದರು. ಮುಂದಿನ ದಿನಗಳಲ್ಲೂ ಮತ್ತೆ, ಮತ್ತೆ ನೆನಪಿಸುತ್ತ ಬಂದರು. ಅವರ ಆಗ್ರಹವಿಲ್ಲದಿದ್ದರೆ ಈ ನೆನಪುಗಳೆಲ್ಲ ನನ್ನೊಳಗೇ ಹೂತುಕೊಂಡಿರುತ್ತಿದ್ದವೇನೋ? ಬರವಣಿಗೆ ಒಂದು ಹಂತಕ್ಕೆ ಬಂದಾಗ, ಆ ಕರಡು ಪ್ರತಿಯನ್ನು ಓದಿ, ಅರ್ಥಪೂರ್ಣವಾದ ಮೊದಲ ಮಾತುಗಳನ್ನು ಬರೆದುಕೊಟ್ಟು, ಈ ಕೃತಿಗೆ ಕೊಳಗಿ ಅನಂತಣ್ಣ’ ಎನ್ನುವ ಅಷ್ಟೇ ಅರ್ಥವತ್ತಾದ ಹೆಸರನ್ನು ಸೂಚಿಸಿದ ಹಿರಿಯರು ಉಮಾಕಾಂತ ಭಟ್ಟರು. ಕಿರಿಯರನ್ನು ಬೆಳೆಸುವ ಅವರ ವಿಶಾಲ ಹೃದಯಕ್ಕೆ ನಾನು ಸದಾಋಣಿ.
ಅನಂತ ಹೆಗಡೆಯವರ ಕುರಿತು ನನ್ನ ನೆನಪುಗಳನ್ನು ಬರೆಯುವ ಕುರಿತು ತಿಳಿದ ಕೇಶವ ಹೆಗಡೆ ಕೊಳಗಿ ಅತ್ಯಂತ ಹರ್ಷದಿಂದ ಒಪ್ಪಿಗೆ ನೀಡಿ, ಅಗತ್ಯವಿರುವ ಕೆಲವೊಂದು ಮಾಹಿತಿ, ಛಾಯಾಚಿತ್ರಗಳನ್ನು ಒದಗಿಸಿದರು. ಪದೇ, ಪದೇ ಕೃತಿ ಮುದ್ರಣದ ಕುರಿತು ವಿಚಾರಿಸುತ್ತ, ಆದಷ್ಟು ಶೀಘ್ರವಾಗಿ ಹೊರತರಬೇಕು ಎಂದು ಆಗ್ರಹಿಸುತ್ತಿದ್ದರು. ಬಾಲ್ಯ ಸ್ನೇಹಿತನ ಈ ಎಲ್ಲ ಸಹಕಾರಕ್ಕೆ ಆಭಾರಿಯಾಗಿದ್ದೇನೆ.
ತನ್ನ ಬಾಲ್ಯ ಮತ್ತು ವೃತ್ತಿಜೀವನದ ಒಡನಾಡಿ ಅನಂತ ಹೆಗಡೆಯವರ ಜೊತೆಗಿನ ಅನುಭವಗಳನ್ನು ತಿಳಿದುಕೊಳ್ಳಲು ಅವರ ಮನೆಗೆ ಹೋದಾಗ ತುಂಬ ಆದರದಿಂದ ಕಂಡವರು ನಮ್ಮೆಲ್ಲರ ಪ್ರೀತಿಯ ಶ್ರೀ ಗೋಡೆ ನಾರಾಯಣ ಹೆಗಡೆಯವರು. ಚಿಕ್ಕಂದಿನಿಂದ ನಮಗೆಲ್ಲ ನಾರಾಯಣಣ್ಣ’ನಾಗಿರುವ ಅವರು ಇಳಿವಯಸ್ಸಿನ ಕಾರಣದಿಂದ ಜ್ಞಾಪಕ ಶಕ್ತಿ ಸ್ವಲ್ಪಮಟ್ಟಿಗೆ ಮಂದವಾಗಿದ್ದರೂ ನೆನಪಿಸಿಕೊಳ್ಳುತ್ತ ಹಲವು ಮಹತ್ವದ ಸಂಗತಿಗಳನ್ನು ತಿಳಿಸಿದರು. ಹಲವು ಸಂಗತಿಗಳು ನನಗೆ ಗೊತ್ತಿದ್ದರೂ ಅವರ ಸ್ವಾನುಭವದ ನೆನಪುಗಳು ರತ್ನ ಸಮಾನವಾದವು. ಗೋಡೆ ನಾರಾಯಣ ಹೆಗಡೆಯವರಿಗೆ ನನ್ನ ಹಾಗೂ ಕೇಶವ ಹೆಗಡೆಯವರ ಗೌರವ, ಪ್ರೀತಿ, ಅಭಿಮಾನ ಸಹಿತವಾದ ಕೃತಜ್ಞತೆಗಳು.
ಅನಂತ ಹೆಗಡೆಯವರ ಬಣ್ಣದ ಹಾಗೂ ಕಪ್ಪು, ಬಿಳುಪಿನ ಹಲವು ವಿಶಿಷ್ಟ ರೇಖಾಚಿತ್ರಗಳನ್ನು ರಚಿಸಿಕೊಟ್ಟವರು ಪ್ರಸಿದ್ಧ ಕಲಾವಿದ ಶ್ರೀ ಸತೀಶ ಯಲ್ಲಾಪುರ. ತಮ್ಮ ಕೆಲಸ, ಕಾರ್ಯಗಳ ನಡುವೆಯೂ ಅವರು ನೀಡಿದ ಸಹಕಾರಕ್ಕೆ ನನ್ನ ಹಾಗೂ ಕೇಶವ ಹೆಗಡೆಯವರ ಹೃದಯಪೂರ್ವಕ ಧನ್ಯವಾದಗಳು.
ಈ ಕೃತಿಯಲ್ಲಿ ಕೆಲವು ಲೇಖನಗಳನ್ನು ಜೋಡಿಸುವ ಕಾರಣದಿಂದ ಶ್ರೀ ಶಿವಾನಂದ ಹೆಗಡೆ ಕೆರೆಮನೆ, ನನ್ನ ಅಕ್ಕ ವನಜಾ ಶರತ್, ಗೆಳೆಯ ಗಣಪತಿ ಹೆಗಡೆ ಹಿತ್ಲಕೈ ಇವರುಗಳ ಬಳಿ ಲೇಖನಗಳನ್ನು ಅಪೇಕ್ಷಿಸಿದಾಗ ಒದಗಿಸಿಕೊಟ್ಟಿದ್ದರು. ಅನಿವಾರ್ಯ ಕಾರಣದಿಂದ ಅವನ್ನು ಬಳಸಿಕೊಳ್ಳಲಾಗದ್ದಕ್ಕೆ ಅವರಲ್ಲಿ ಕ್ಷಮೆಕೋರುತ್ತ, ನಾವಿಬ್ಬರೂ ಮನಃಪೂರ್ವಕ ಕೃತಜ್ಞತೆ ಸಲ್ಲಿಸುತ್ತೇವೆ. ಶಿವಾನಂದ ಹೆಗಡೆಯವರು ಅನಂತ ಹೆಗಡೆಯವರ ಅತಿ ಅಪರೂಪದ ಛಾಯಾಚಿತ್ರಗಳನ್ನು ಒದಗಿಸಿದ್ದಾರೆ. ಅವರಿಗೆ ನಾವು ಋಣಿಯಾಗಿದ್ದೇವೆ.
ನಮ್ಮ ಒತ್ತಡಗಳನ್ನು ಸಹಿಸಿಕೊಂಡು, ವೈಶಿಷ್ಟ್ಯಪೂರ್ಣವಾಗಿ ಮುದ್ರಿಸಿ, ಪ್ರಕಾಶನ ಗೊಳಿಸಿದ ನಾಡಿನ ಪ್ರಸಿದ್ಧ ಯಾಜಿ ಪ್ರಕಾಶನದ ಶ್ರೀಮತಿ ಸವಿತಾ ಯಾಜಿ ಮತ್ತು ಗಣೇಶ ಯಾಜಿ ದಂಪತಿಗಳಿಗೆ ಗೌರವಪೂರ್ವಕ ಕೃತಜ್ಞತೆಗಳು.
ಅನಂತ ಯಕ್ಷಕಲಾ ಪ್ರತಿಷ್ಠಾನದ ಎಲ್ಲ ಪದಾಧಿಕಾರಿಗಳಿಗೂ, ಈ ಬರಹ ಕೃತಿಯಾಗುವಲ್ಲಿ ವಿವಿಧ ರೀತಿಯಲ್ಲಿ ಸಹಕರಿಸಿದ ಎಲ್ಲ ಮಹನೀಯರಿಗೂ, ಯಕ್ಷಾಭಿಮಾನಿಗಳಿಗೂ ಹೃತ್ಪೂರ್ವಕ ಕೃತಜ್ಞತೆಗಳು.
–ಗಂಗಾಧರ ಕೊಳಗಿ
ಪುಟ ತೆರೆದಂತೆ…
ಪ್ರಕಾಶಕರ ನುಡಿ / ೩
ಅರಿಕೆ -ಕೇಶವ ಹೆಗಡೆ / ೫
ನೆನೆಕೆಗಳು -ಗಂಗಾಧರ ಕೊಳಗಿ / ೯
ಕೊಳಗಿ ಅನಂತಣ್ಣ -ವಿದ್ವಾನ್ ಉಮಾಕಾಂತ ಭಟ್ಟ ಕೆರೆಕೈ / ೧೨
ಅನಂತಣ್ಣ -ಗಂಗಾಧರ ಕೊಳಗಿ / ೧೭
ಸ್ವಾನುಭವದ ಮೂಲಕ ನಾ ಕಂಡ ಅನಂತ ಹೆಗಡೆ / ೨೮
ಬಾಲ್ಯ ಸ್ನೇಹಿತ ಅನಂತ ಹೆಗಡೆ ಕೊಳಗಿ ಅವರ ಕುರಿತಾದ
ಗೋಡೆ ನಾರಾಯಣ ಹೆಗಡೆಯವರ ನೆನಪುಗಳ ನಿರೂಪಣೆ / ೪೯
ಛಾಯಾಚಿತ್ರಗಳು / ೫೯
Reviews
There are no reviews yet.